ಸಮ್ಮೇಳನ ಒಂದು ವೈಯಕ್ತಿಕ ಟಿಪ್ಪಣಿ

ಹೋದ ಬಾರಿಯ ಗದುಗಿನ ಸಾಹಿತ್ಯ ಸಮ್ಮೇಳನ ನಾನು ಭಾಗವಹಿಸಿದ ಮೊದಲ ಸಮ್ಮೇಳನ. ಎಲ್ಲಿಲದ ಉತ್ಸಾಹ. ಬ್ಲಾಗಲೋಕದ ಮೂಲಕ ಸಮ್ಮೇಳನದ ಕ್ಷಣಕ್ಷಣದ ಚಿತ್ರಣವನ್ನು ಕಟ್ಟಿ ಕೊಡಲು ೩ ಸ್ನೇಹಿತರೊಡಗೂಡಿ ನುಡಿನಮನ ಎಂಬ ಬ್ಲಾಗನ್ನು ಹುಟ್ಟು ಹಾಕಿದ್ದೆ. ಗದುಗಿಗೆ ಹೋಗಿ ೫ ದಿನಗಳ ಕಾಲ ಸಮ್ಮೇಳನವನ್ನು ವರದಿ ಮಾಡಿದೆ. ಇದು ನನ್ನ ಪತ್ರಿಕೋದ್ಯಮ ನಡೆಯಲ್ಲಿನ ಮೊದಲ ದೊಡ್ಡ ಹೆಜ್ಜೆಯೂ ಹೌದು. ಅದರಿಂದ ನನಗೆ ಪರಿಚಯವಾದ ನಾಡಿನ ಉದ್ಧಾಮ ಸಾಹಿತಿಗಳು, ಅವರ ಒಡನಾಟ, ನನಗೆ ಸಿಕ್ಕ ಹೆಸರು ಎಲ್ಲಕ್ಕೂ ನಾನು ನುಡಿನಮನಕ್ಕೆ ಚಿರಋಣಿ.

ಆದರೆ ಅದೇಕೋ ಈ ಬಾರಿಯ ಸಮ್ಮೇಳನ ಬೆಂಗಳೂರಿನಲ್ಲೇ ನಡೆಯುತ್ತಿದ್ದರೂ ಅದು ನನ್ನಲ್ಲಿ ಆ ಮಟ್ಟದ ಉತ್ಸಾಹವನ್ನು ಮೂಡಿಸಲಿಲ್ಲ. ಇದಕ್ಕೆ ಹಲವಾರು ಕಾರಣಗಳು. ಸಮ್ಮೇಳನದ ತೋರುಗನ್ನಡದ ತಾರಾಸ್ಥಾಯಿಯ ದನಿಗಳ ನಿರರ್ಥಕತೆ, ರಚನಾತ್ಮಕತೆಯ ಕೊರತೆ ಇವೆ ಮುಂತಾದವುಗಳು ನನ್ನನ್ನು ಸಮ್ಮೇಳನಗಳ ಕುರಿತು ಕೊಂಚ ಭ್ರಮನಿರಸನಗೊಳಿಸಿದ್ದು ಸುಳ್ಳಲ್ಲ. ಇನ್ನು ನನ್ನನ್ನು ಬಹಳ ಕಾಡಿದ ವಿಚಾರ ಬ್ಲಾಗಿನ ನಮ್ಮ ವರದಿಗಾರಿಕೆಯ ಮಿತಿಗಳು. ಅಲ್ಲಿನ ಸಂದರ್ಭ, ಬ್ಲಾಗ ಮಾಧ್ಯಮದ ಅತಿ ವರ್ತಮಾನಗಳು ನಮ್ಮ ಸಮ್ಮೇಳನದ ವರದಿಯನ್ನು ಚಿತ್ರಪಟವಾಗಿಸಿಬಿಟ್ಟವು. ಇದು ನಮ್ಮ, ಇಲ್ಲ ಮಾಧ್ಯಮದ ಮಿತಿಯೋ ನಾನರಿಯೆ, ಆದರೆ ವರದಿಗಾರಿಕೆಯ ಮಿತಿಯಾದದ್ದಂತೂ ಹೌದು. ಇದು ನನಗೆ ತೀರಾ ಇರುಸುಮುರುಸನ್ನುಂಟು ಮಾಡಿತು. ಒಂದು ಸಮ್ಮೇಳನದ ವರದಿಯೆಂದರೆ ಅದೊಂದು ಸಾಂಸ್ಕೃತಿಕ ವರದಿಗಾರಿಕೆ. ಆದರೆ ನಮಗಿರುವ ಇತಿಮಿತಿಗಳಲ್ಲಿ ಈ ಬ್ಲಾಗಿನ ಮೂಲಕ ಅದು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆ. ಇನ್ನು ಈ ಬ್ಲಾಗಿನ ಮೂಲಕ ನಾವು ಯಾರಿಗೆ ಸಮ್ಮೇಳನವನ್ನು ಕಟ್ಟಿ ಕೊಡುತ್ತಿದ್ದೇವೆ ಎಂಬ ಮೂಲ ಪ್ರಶ್ನೆಯೂ ನನ್ನ ಮುಂದೆ ಬೃಹದಾಕಾರವಾಗಿ ನಿಂತಿತ್ತು. ಒಟ್ಟಿನಲ್ಲಿ ಕಾರಣಗಳೇನೆ ಇರಲಿ, ಈ ಬಾರಿ ಆ ಉತ್ಸಾಹ ಇರಲಿಲ್ಲ. ಹಾಗಾಗಿ ಈ ಬಾರಿ ನುಡಿನಮನವನ್ನು ಕೈ ಬಿಡಲು ನಿರ್ಧರಿಸಿದ್ದೆ.


ಆದರೆ ಹಿಂದಿನ ಬಾರಿ ನನ್ನ ಜೊತೆಗೂಡಿದ್ದ ಸ್ನೇಹಿತರಿಗೆ ಇನ್ನೂ ಉತ್ಸಾಹ ಬತ್ತಿರಲಿಲ್ಲ. ಕನ್ನಡದ ಕೆಲಸದ ಬಗೆಗಿನ ಅವರ ಉತ್ಸಾಹವನ್ನು ಭಂಗಗೊಳಿಸುವುದು ಉಚಿತವಲ್ಲ. ಹಾಗಾಗಿ ಈ ಬಾರಿ ನಾನು ನೇಪಥ್ಯಕ್ಕೆ ಸರಿದು ಕೇವಲ ಮಾರ್ಗದರ್ಷಕನಾಗುಳಿದು ನುಡಿನಮನವನ್ನು ಹೊಸ ತಂಡಕ್ಕೆ ಬಿಟ್ಟುಕೊಟ್ಟೆ. ಹೇಮಂತನ ನೇತೃತ್ವದಲ್ಲಿ ಹೊಸ ಹುಡುಗರು ಈ ಬಾರಿ ಸಮ್ಮೇಳನವನ್ನು ನುಡಿನಮನದ ಮೂಲಕ ಕಟ್ಟಿಕೊಟ್ಟರು. ಸಮರ್ಥ ತಂಡ ಉತ್ತಮ ವರದಿ. ಅವರಿಗೆ ನನ್ನ ಅಭಿನಂದನೆಗಳು. ಇನ್ನು ಈ ಬಾರಿಯ ವರದಿಯನ್ನು ವಿಮರ್ಶೆಗೊಳಪಡಿಸುವುದಾದರೂ ಮತ್ತೆ ಚಿತ್ರಪಟವೆ ನನ್ನ ಕಣ್ಣ ಮುಂದೆ ಬರುತ್ತದೆ. ಅದು ನಮ್ಮ ಮಿತಿಯೋ ಇಲ್ಲ ಮಾಧ್ಯಮದ ಮಿತಿಯೋ ಇನ್ನೂ ನನಗೆ ಗೊಂದಲವಿದೆ. ಮುಂದಿನ ಸಮ್ಮೇಳನದಲ್ಲಿ ಇಂಥದೊಂದು ಸಾಂಸ್ಕೃತಿಕ ವರದಿಗಾರಿಕೆಯ ಪ್ರಯತ್ನ ಮಾಡುವ ಆಸೆಯಿದೆ. ನೋಡುವ.

ಇನ್ನು ಈ ಬಾರಿ ಮೂರೂ ದಿನ ಸಮ್ಮೇಳನಕ್ಕೆ ಹಾಜರಾಗಿ ಹಲವಾರು ಘೋಷ್ಟಿಗಳನ್ನು enjoy ಮಾಡಿದೆ. ಹಲವಾರು ಉತ್ತಮ ಘೋಷ್ಟಿಗಳು ಏಕ ಕಾಲದಲ್ಲಿ ಮುಖ್ಯ ಸಮಾನಾಂತರ ವೇದಿಕೆಗಳಲ್ಲಿ ನಡೆಯುತ್ತಿದ್ದರಿಂದ ಕೆಲವು ತಪ್ಪಿ ಹೋಗಿ ಭಾರಿ ನಷ್ಟ ಪ್ರಾಪ್ತಿಯಾಯಿತು. ಇನ್ನು ಸಮ್ಮೇಳನಾಧ್ಯಕ್ಷರಾದ ೯೭ರ ಹರೆಯದ ವೆಂಕಟಸುಬ್ಬಯ್ಯನವರ clarity-of-thoughts ಮತ್ತು ಸ್ಥೈರ್ಯವನ್ನು ಕಂಡು ಬೆರಗಾದೆ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಯಡಿಯೂರಪ್ಪನವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಹೇಳಿದ ಬುದ್ದಿಮಾತು! ವ್ಹಾ ವ್ಹಾ..ಇದು ಅವರ ಸಾತ್ವಿಕ ಪ್ರತಿಭಟನೆಯಾದರೂ ಸೈ. ಇಡಿಯ ಸಮ್ಮೇಳನದ ಅತ್ಯಂತ ಅರ್ಥಪೂರ್ಣ ತಾರಾಸ್ಥಾಯಿಯಾಗಿತ್ತಿದು. ನಾಡಿನ ರಾಜಕಾರಣಿಗಳನ್ನು ಕಿವಿ ಹಿಂಡಿ ಸರಿ ದಾರಿಗೆ ತರುವ ಮನೆ ಹಿರಿಯನ ಕೆಲಸವನ್ನು ಅತ್ಯಂತ ಸಮರ್ಥವಾಗಿ ಮಾಡಿದರು ಜಿವಿ.

ಇನ್ನು ಈ ಸಮ್ಮೇಳನದಲ್ಲಿ ನನಗೆ ಖುಷಿ ಕೊಟ್ಟ ಮತ್ತೊಂದು ವಿಚಾರ ಚಿಮೂ ಅವರದು. ಚಿಮೂ ಅವರ ನಿಲುವುಗಳನ್ನು ಅತ್ಯುಗ್ರವಾಗಿ ವಿರೋಧಿಸುವವನು ನಾನು. ಆದರೂ ಅವರಂಥ ಹಿರಿಯ ವಿದ್ವಾಂಸರಿಗೆ ರಾಜ್ಯಪಾಲರು ಗೌರವ doctorate ಅನ್ನು ನಿರಾಕರಿಸಿದಾಗ ನೋವಾಗಿತ್ತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಒಬ್ಬ ಹಿರಿಯ ವಿದ್ವಾಂಸ ನಿಜಕನ್ನಡದ ಕೆಲಸ ಮಾಡಿದ ಹಿರಿಯ ಚೇತನಕ್ಕೆ ಅವಮಾನವಾದಾಗ ಯಾವತ್ತೂ ಒಡೆದ ಮನೆಯೆಂಬ ಬಿರುದಾಂಕಿತ ಸಾರಸ್ವತ ಲೋಕ ಒಕ್ಕರಲಿನಲ್ಲಿ ಪ್ರತಿಭಟಿಸಿದ್ದು ಭಾವನಾತ್ಮಕವಾಗಿ ಒಂದೇ ವೇದಿಕೆಗೆ ಬಂದದ್ದು ಈ ಸಮ್ಮೇಳನದ ನಿಜವಾದ ಯಶಸ್ಸು ಎಂದು ಭಾವಿಸಬಹುದೇನೋ. ಈ ಎರಡು ಕ್ಷಣಗಳು ಈ ಸಮ್ಮೇಳನದಲ್ಲಿ ನನಗೆ ಖುಷಿ ಕೊಟ್ಟವು.

ಇನ್ನು ಈ ಬಾರಿ ಸಮ್ಮೇಳನದ ಅಡುಗೆ ವ್ಯವಸ್ಥೆಯ ಮೇಲೆ ಅವಲಂಬಿಸದೆ ಬಸವನಗುಡಿಯ ಹಳೆಯ ಹೋಟೆಲ್ಗಳ ರುಚಿಯನ್ನು ಮತ್ತೆ ಸವಿದೆ. ಒಂದಷ್ಟು ಉತ್ತಮ ಪುಸ್ತಕಗಳನ್ನು ಹೊತ್ತು ತಂದೆ. ಒಟ್ಟಿನಲ್ಲಿ ಮೂರೂ ದಿನ ನಾನೂ ಅಕ್ಕ ಸಮ್ಮೇಳನವನ್ನು full enjoy ಮಾಡಿದೆವು. ೩ ದಿನ ಕನ್ನಡದ ಸಂಭ್ರಮ ಮತ್ತೆ ಯಾಂತ್ರಿಕತೆಗೆ ಹೊರಳು. ಇನ್ನೊಂದು ಸಂಭ್ರಮವನ್ನು ಎದುರು ನೋಡುತ್ತಾ..

One thoughts on “ಸಮ್ಮೇಳನ ಒಂದು ವೈಯಕ್ತಿಕ ಟಿಪ್ಪಣಿ

MATHI MAATU said...

yaako... ishtondu kaagunita tappoo... software prblm?
baraha ok . jai kannada taay...

Proudly powered by Blogger
Theme: Esquire by Matthew Buchanan.
Converted by LiteThemes.com.