ಯಾಕೋ ರಾಮನೆಂದರೆ ಭಯವಾಗ್ತದೆ........?!!

ಇವತ್ತು ರಾಮನವಮಿ. ಅದೇನು ರಾಮನಿಗಿಷ್ಟ ಅಂತಲೋ ಮತ್ತೊಂದೋ ತಿಳಿದಿಲ್ಲ. ಆದರೆ ನಮ್ಮ ಪೂರ್ವಜರಂತೂ ಭಲೇ ಬುದ್ಧಿವಂತರು. ರಾಮನ ಹೆಸರಿನಲ್ಲಿ ಬಿಸಿಲ ಬೇಗೆಯಿಂದ ದಣಿವಾರಿಸಿಕೊಳ್ಳಲು ಕರಬೂಜ ಹಣ್ಣಿನ ಬೆಲ್ಲದ ಪಾನಕ, ನೀರು ಮಜ್ಜಿಗೆ, ಕೋಸಂಬರಿ ಎಲ್ಲವನ್ನೂ ವ್ಯವಸ್ಥೆ ಮಾಡಿಕೊಟ್ಟುಬಿಟ್ಟಿದ್ದಾರೆ. ಅದಕ್ಕೆ ಅವರಿಗೆ ಅನಂತ ವಂದನೆಗಳು. ಇರಲಿ ಈಗ ವಿಷಯಕ್ಕೆ ಬರೋಣ. ರಾಮ ನವಮಿ ಅಂದರೆ ಏನು? ಹೇ...ಅಷ್ಟು ಗೊತ್ತಿಲ್ಲವಾ ಚಿಕ್ಕ ಮಗುವನ್ನು ಕೇಳಿದರೂ ಹೇಳುತ್ತದೆ..ರಾಮ ನವಮಿ - ರಾಮ ಹುಟ್ಟಿದ ದಿನ ಕಣಯ್ಯ. ಹೌದು ಅದು ನನಗೂ ಗೊತ್ತು ಆದರೆ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮ ಇದೇ ದಿನ, ಇಂಥದೇ ಜಾಗದಲ್ಲಿ ಹುಟ್ಟಿದನೆಂದು ನಿಮಗೆ ತಿಳಿಸಿದವರಾದರೂ ಯಾರು? ತಲೆ ಕೆರೆದುಕೊಳ್ಳಬೇಡಿ....


ರಾಮನೆಂದರೆ ಯಾಕೋ ಭಯ ಅಂದಾಗ ನನ್ನ ಮನಸ್ಸಿನಲ್ಲಿದದ್ದು ಇದೇ! ನಮ್ಮ ಇಂದಿನ ಅನೇಕ ದುರಂತಗಳಿಗೂ ಕಾರಣ ಇದೇ. ಪುರಾಣದ ಶ್ರೀರಾಮಚಂದ್ರನನ್ನು ಇತಿಹಾಸ ಪುರುಷನನ್ನಾಗಿಸಿಬಿಡುವ ಹುನ್ನಾರ. ಹೌದು ಭಾರತದಲ್ಲಿ ಇಂದು ಅತ್ಯಂತ ಶಕ್ತ ಪೊಲಿಟಿಕಲ್ ಫೋರ್ಸ್  ಯಾರು ಗೊತ್ತಾ? ಅನುಮಾನವೇ ಬೇಡ - ಆತ ಶ್ರೀರಾಮ! ಹೌದು ಇಂದು ಶ್ರೀರಾಮನನ್ನು ಹಿಂದುತ್ವವಾದಿಗಳು ಗುತ್ತಿಗೆ ಪಡೆದುಕೊಂಡುಬಿಟ್ಟದ್ದಾರೆ. ಶ್ರೀರಾಮನನ್ನು ಇತಿಹಾಸ ಪುರುಷನನ್ನಾಗಿ ಮಾಡಿ, ಆತನನ್ನು ತಮ್ಮ ಧರ್ಮದ ಅಫೀಮಿನೊಳಕ್ಕೆ ಬೆರೆಸಿ ಇವರು ಮಾಡಿದ ದುರಂತ ಒಂದೇ, ಎರಡೇ? 

ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಎರಡು ಮಹಾ ದುರಂತಗಳು. ಒಂದು ಇಂದಿರಾ ಗಾಂಧಿ ಪ್ರಜಾಪ್ರಭುತ್ವವನ್ನು ಕಾಲಡಿಯಲ್ಲಿ ತುಳಿದು ಎಮರ್ಜೆನ್ಸಿ ಹೇರಿದ್ದು. ಮತ್ತೊಂದು ಬಾಬ್ರಿ ಮಸೀದಿ ಧ್ವಂಸ. ಇವೆರಡೂ ಮಹಾದುರಂತಗಳೇ ಆಧಾರವಾಗಿ ಅನೇಕ ನಾಯಕರು ಹುಟ್ಟಿಕೊಂಡರು, ಇಡೀ ದೇಶದ ರಾಜಕೀಯ ಧೃವೀಕರಣಕ್ಕೊಳಗಾಯಿತು. ಎಮರ್ಜೆನ್ಸಿ ದೇಶದಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣಕ್ಕೆ ನಾಂದಿ ಹಾಡಿ, ಜನತಾ ಉದಯಕ್ಕೆ ಕಾರಣವಾಯಿತು. ಬಾಬ್ರಿ ಮಸೀದಿಯ ಧ್ವಂಸ ಕೂಡ ಅಷ್ಟೆ. ಭಾರತದ ರಾಜಕೀಯದಲ್ಲಿ ಅಪಾರ ಪ್ರಮಾಣದ ಧೃವೀಕರಣಕ್ಕೆ ಕಾರಣವಾಯಿತು. ಕಾಂಗ್ರೆಸ್ ವಿರೋಧಿ ರಾಜಕೀಯ ವೇದಿಕೆಗಳು ಹೋಗಿ, ಬಿಜೆಪಿಯನ್ನು ಕೋಮುವಾದಿಯನ್ನಾಗಿ ಜರಿದು ಅದರ ವಿರುದ್ಧ ಜಾತ್ಯಾತೀತ ಶಕ್ತಿಗಳೆಲ್ಲಾ ಒಂದಾಗತೊಡಗಿದವು. ಜನತಾ ಪಕ್ಷದ ಅನೇಕ ಹೋಳುಗಳು ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳತೊಡಗಿದವು. ಇಂದಿಗೂ ನಮ್ಮ ದೇಶದ ರಾಜಕಾರಣದಲ್ಲಿ ಇದು ತಥ್ಯ. ಎಮರ್ಜೆನ್ಸಿ ಇಂದು ಒಂದು ಕರಾಳ ನೆನಪು ಮಾತ್ರ. ಅದರ ಆಫ್ಟರ್ effects ಅನ್ನು ನಾವಿಂದು ಅನುಭವಿಸುತ್ತಿಲ್ಲ. ಶಾರದಾ ಪ್ರಸಾದರು ಹೇಳಿದಂತೆ ಇಂದಿರಾ ಹೇರಿದ ಎಮರ್ಜೆನ್ಸಿ, ಮತ್ಯಾರೂ ಅತ್ತ ಯೋಚಿಸದಂತೆ ಮಾಡಿಟ್ಟಿದೆ. ಆದರೆ ಬಾಬ್ರಿ ಮಸೀದಿ ಧ್ವಂಸ ಹಾಗಲ್ಲ. ಅದು ಭಾರತದ ಜಾತ್ಯಾತೀತ ಮನಸ್ಸಿನ ಮೇಲಾಗಿರುವ ಗಾಯ. ಅದು ಇನ್ನೂ ಮಾಗಿಲ್ಲ. ಭಾರತದ ಮನಸ್ಸು ಮೊದಲಿಂದಲೂ ಜಾತ್ಯಾತೀತ ಮತ್ತು ಪರಧರ್ಮ ಸಹಿಷ್ಣು. ದೇವರು ಒಬ್ಬನೆ, ಆತನ ನಾಮ ಹಲವು, ಆತನನ್ನು ತಲುಪುವ ಮಾರ್ಗಗಳೂ ಹಲವು ಎಂಬ ನಂಬಿಕೆಯ ಮೇಲೆ ನಿಂತಿರುವ ಸಮಾಜ ನಮ್ಮದು. ಬಾಬ್ರಿ ಮಸೀದಿ ಧ್ವಂಸ ನಮ್ಮ ಸಮಾಜದ ಈ ತಳಹದಿಯನ್ನೇ ಸಾರಾಸಗಟಾಗಿ ತಿರಸ್ಕರಿಸುತ್ತದೆ. ಇದು ಮಹಾ ದುರಂತ ಅನ್ನಿಸಿಕೊಳ್ಳುವುದೇ ಈ ಕಾರಣಕ್ಕೆ. ಭಾರತದ ಮನಸ್ಸಿಗೆ ಆಗಿರುವ ಈ ಹುಣ್ಣು ಇನ್ನೂ ಮಾಗಿಲ್ಲ ಅಷ್ಟೇ ಅಲ್ಲ, ಈ ಹುಣ್ಣಿನಿಂದ ಇನ್ನೂ ಕೀವು ಸೊರುತ್ತಲೇ ಇದೆ. ಭಾರತದಲ್ಲಿ ಇಸ್ಲಾಮಿಕ್ ಜಿಹಾದ್ನ ಭಯೋತ್ಪಾದನೆ ಕಾಶ್ಮೀರದ ಗಡಿ ದಾಟಿದ್ದೇ ಬಾಬ್ರಿ ಮಸೀದಿ ಧ್ವಂಸಕ್ಕೆ ಉತ್ತರವಾಗಿ. ಅವತ್ತು ದಾವೂದ್ ಇಬ್ರಾಹಿಂ ಪಾಕಿಸ್ತಾನದ ಐಎಸ್ಐನ ಸಹಾಯದೊಂದಿಗೆ 1993ರ ಮಾರ್ಚ್ನಲ್ಲಿ ಬಾಂಬೆಯಲ್ಲಿ ಸರಣಿ ಸ್ಫೋಟ ನಡೆಸುತ್ತಾನೆ. 257 ಮಂದಿ ಬಲಿಯಾಗುತ್ತಾರೆ. ಎಲ್ಲೋ ಕಾಶ್ಮೀರದ ಕೊಳ್ಳಗಳಲ್ಲಿ ನಡೆಯುತ್ತಿದ್ದ ಭಯೋತ್ಪಾದನೆ ನಮ್ಮ ಮನೆಬಾಗಿಲಿಗೆ ಬಂದು ನಿಂತಿದೆ. ಅಂದಿನಿಂದ ಇಂದಿನವರೆಗೂ ಭಾರತದಲ್ಲಿ ನಡೆದ ದಾಳಿಗಳದೆಷ್ಟೋ? ಸತ್ತವರೆಷ್ಟೋ? ಲೆಕ್ಕವಿಟ್ಟವರಿಲ್ಲ.
6 ಡಿಸೆಂಬರ್, 1992. ಅದು ಸ್ವತಂತ್ರ್ಯ ಭಾರತದ ಇತಿಹಾಸದಲ್ಲೇ ಒಂದು ಕರಾಳ ದಿನ. ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿಯತ್ತ ಧಾವಿಸಿ ಬಂದ ಸಾವಿರಾರು ಕಾರಸೇವಕರು, ನೋಡನೋಡುತ್ತಲೇ ಇಡಿಯ ಬಾಬ್ರಿ ಮಸೀದಿಯನ್ನು ನೆಲಕ್ಕೆ ಕೆಡವಿ ಬಿಟ್ಟರು. ಅದ್ವಾನಿಯವರ ರಾಮರಥಯಾತ್ರೆ ಹಾಗೆ ಪರ್ಯಾವಸಾನಗೊಂಡಿತ್ತು. ರಾಮಜನ್ಮಭೂಮಿ ಚಳುವಳಿಯ ನಾಯಕರು, ಪೋಲೀಸರು, ಉತ್ತರ ಪ್ರದೇಶದ ಸರ್ಕಾರ, ಕೇಂದ್ರ ಸರ್ಕಾರ ಎಲ್ಲರೂ ಬೆಪ್ಪರಂತೆ(?) ನೋಡುತ್ತಾ ನಿಂತು ಬಿಟ್ಟಿದ್ದರು.


ಎಲ್ಲವೂ ಶ್ರೀರಾಮನ ಹೆಸರಿನಲ್ಲಿ! ಇವತ್ತಿಗೂ ರಾಮಜನ್ಮಭೂಮಿ ಅಯೋಧ್ಯೆ ಭಾರತದ ರಾಜಕಾರಣದಲ್ಲಿ ಅಗ್ಗಿಷ್ಟಿಕೆಯಿದ್ದಂತೆ. ಇನ್ನು ರಾಮನ ಹೆಸರಿನಲ್ಲಿ ತಮಿಳುನಾಡಿನಲ್ಲಿ ಸೇತು ಸಮುದ್ರಂಗೆ ಅಡ್ಡಗಾಲು. ಒಂದೇ ಎರಡೇ ಎಷ್ಟು ಸಮಸ್ಯೆಗಳು. ಈ ದೇಶದಲ್ಲಿ ರಾಮನಾಮಕ್ಕೆ ಮೆತ್ತಿಕೊಂಡಿರುವಷ್ಟು ರಕ್ತ ಇನ್ನಾವುದೇ ಹೆಸರಿಗಿಲ್ಲ. `ಜೈ ಶ್ರೀರಾಮ್' ಎನ್ನುವುದು ಇಂದು ವಾರ್ ಕ್ರೈ ಆಗಿ ಕೇಳುತ್ತದೆ. ಶ್ರೀರಾಮ ಸೇನೆಯನ್ನು ನೆನೆಸಿಕೊಂಡೂ ಭಯವಾಗದೇ ಇರುವುದುಂಟೇ? ಶ್ರೀರಾಮ ಇಂದು ಒಂದು ಸಂಕುಚಿತ ಸಿದ್ಧಾಂತ, ಅಸಹಿಷ್ಣುತೆಗೆ ಪ್ರತೀಕನಾಗಿದ್ದಾನೆ.  ರಾಮನೆಂದರೆ ಈತನೇನಾ? ಈತನಷ್ಟೆ ಅಲ್ಲ. ಅನಂತಮೂರ್ತಿಗಳು ಹೇಳಿದ ಹಾಗೆ ನೆನಪು. ಹಿಂದುತ್ವವಾದಿಗಳ ಈ ಶ್ರೀರಾಮನಿಗೂ, ನಮ್ಮ ಮನೆಗಳ ಹಿರಿಯರು ಮಾತಿಗೊಮ್ಮೆ ನೆನಪಿಸಿಕೊಳ್ಳುವ ರಾಮಪ್ಪನಿಗೂ ಯಾವುದೇ ಸಂಬಂಧವಿಲ್ಲ, ಇವರಿಬ್ಬರೂ ಬೇರೆ ಬೇರೆ ಎಂದು. ನಿಜ ನಮ್ಮಲ್ಲಿ ಇಬ್ಬರು ರಾಮರಿದ್ದಾರೆ. ಒಬ್ಬ ರಾಮ ಅಯೋಧ್ಯೆಯಲ್ಲಿ ಇಂತಿಂತಹ ತಾರೀಖಿನಂದು ಹುಟ್ಟಿದ ಇತಿಹಾಸ ಪುರುಷ. ಜೈ ಶ್ರೀರಾಮ್ ಎಂಬ ವಾರ್ ಕ್ರೈಗೆ ಸ್ಫೂರ್ತಿಧಾತ. ಈತನ ಹೆಸರಿಗೇ ರಕ್ತ ಮೆತ್ತಿಕೊಂಡಿರುವುದು. 


ನಮ್ಮಲ್ಲೇ ಇನ್ನೊಬ್ಬ ರಾಮನಿದ್ದಾನೆ. ನಮ್ಮ ಅಜ್ಜಿಯರು ಒಂದು ಮೂಲೆಯಲ್ಲಿ ಕೂತು ಜಪಿಸುವ, ರಾಮಕೋಟಿ ಬರೆಸಿಕೊಳ್ಳುವ ರಾಮ. ಈ ರಾಮಪ್ಪನನ್ನು ನಾವು ಮನುಷ್ಯನಾಗಿದ್ದು ತನ್ನ ಕತೃತ್ವ ಶಕ್ತಿಯಿಂದ ದೈವತ್ವಕ್ಕೇರಿದವನಾಗಿ ನೋಡುತ್ತೇವೆ. ಈತನೊಂದಿಗೆ ನಮ್ಮದೊಂದು ನಿರಂತರ ಸಂವಾದ ಜಾರಿಯಲ್ಲಿರುತ್ತದೆ. ಅಲ್ಲ ಸೀತೆಯನ್ನು ಅಷ್ಟು ಬಾಧಿಸಿದ ರಾಮ ಸ್ತ್ರೀದ್ವೇಷಿಯಾ? ವಾಲಿಯನ್ನು ಮರದ ಮರೆಯಲ್ಲಿ ಹೊಡೆದದ್ದು ಸರಿಯಾ? ಹೀಗೆ ಆತನೊಂದಿಗೆ ನಮಗೊಂದು ಸಾಮೀಪ್ಯವಿದೆ. ಆದರೆ ಆಯೋಧ್ಯೆಯ ಆ ರಾಮನೊಂದಿಗೆ ಇಂತಹುದೊಂದು ಸಾಮೀಪ್ಯವಾಗಲೀ, ಭಕ್ತಿಯಾಗಲೀ ಹುಟ್ಟುವುದೇ ಇಲ್ಲ. ಆತನೇನಿದ್ದರೂ ಬೀದಿ ದೊಂಬಿಯ ವಾರ್ ಕ್ರೈ ಅಷ್ಟೆ! ಈತನೇ ಬೇರೆ ಆತನೇ ಬೇರೆ. ರಾಮಜನ್ಮಭೂಮಿಯ ಗದ್ದಲ ತಾರಕಕ್ಕೇರಿದಾಗ, ಯಾರೋ ಅಂದಿನ ಕೇರಳದ ಮುಖ್ಯಮಂತ್ರಿ ನಯನಾರ್ ಅವರನ್ನು ಈ ಕುರಿತು ಪ್ರಶ್ನಿಸಿದಾಗ 'ಅರೆರೆ ರಾಮ ಹುಟ್ಟಿದ್ದು ಕೇರಳದಲ್ಲಿ ಅಂತ ತಿಳಿದಿದ್ದೆ......' ಎಂದು ಮಾರುತ್ತರ ಕೊಟ್ಟಿದ್ದರು. ಯಾರ್ಯಾರು ರಾಮ ಹುಟ್ಟಿದ್ದು ತಮ್ಮೂರಿನಲ್ಲಿ ಎಂದು ಭಾವಿಸುತ್ತಾರೋ ಅವರು ರಾಮನನ್ನು ನಿಜವಾಗಿಯೂ ಪಡೆದವರು ಎಂದು ಅನಂತಮೂರ್ತಿಗಳು ಈ ಮೇಲಿನ ಹೇಳಿಕೆಯನ್ನು ವ್ಯಾಖ್ಯಾನಿಸುತ್ತಾರೆ. 


ಈ ನಮ್ಮ ರಾಮದ್ವಯರ ಕುರಿತಾಗಿ ಇನ್ನೊಂದು ಅದ್ಭುತ ಉಪಮೆ ಇದೆ. ಅದು ಗಾಂಧೀಜಿಯ ಹತ್ಯೆಯ ಸನ್ನಿವೇಶ. ಇಂಥದೇ ಅಫೀಮನ್ನು ನೆತ್ತಿಗೇರಿಸಕೊಂಡಿದ್ದ ಘೋಡ್ಸೆ ಗಾಂಧೀಜಿ ಪ್ರಾರ್ಥನಾ ಸಭೆಗೆ ಬರುತ್ತಿದ್ದಾಗ ಗುಂಡಿಟ್ಟು ಕೊಲ್ಲುತ್ತಾನೆ. ಗಾಂಧಿಯ ಬಾಯಿಂದ ಹೊರಬಿದ್ದ ಒಂದೇ ಮಾತು `ಹೇ ರಾಮ್'. ಅದು ಗಾಂಧಿಯ ರಾಮನ ನೆನಹೇ, ಇಲ್ಲ ಇವರನ್ನು ಕ್ಷಮಿಸು ಎಂಬ ಮೊರೆಯೇ? ಇಲ್ಲಿದ್ದಾರೆ ನೋಡಿ ರಾಮದ್ವಯರು. (ಗೊತ್ತು ಗೊತ್ತು ಗಾಂಧಿ ಹೇ ರಾಮ್ ಅಂದಿಲ್ಲ, ಅಂತೀರಿ ಅದು ಡಿಬೆಟಬಲ್, ಅದಕ್ಕೇ ನಾನದನ್ನು ಒಂದು ಉಪಮೆ ಅಂದದ್ದು.) ನಮ್ಮ ಇಂದಿನ ಅನೇಕ ಸಮಸ್ಯೆಗಳಿಂದ ಹೊರಬರಲು ಯಾವುದೇ ಅಂಜಿಕೆಗಳನ್ನು ತೋರ್ಪಡಿಸದೇ ಗಾಂಧಿಯ, ರಾಮಕೋಟಿ ಬರೆಸಿಕೊಳ್ಳುವ ಆ ರಾಮನನ್ನು ನಾವು reclaim ಮಾಡಿಕೊಳ್ಳಬೇಕಿದೆ. ಶ್ರೀರಾಮಚಂದ್ರ ಈ ಬೀದಿಯ ಕೋಲೆ ಬಸವರ ಸ್ವತ್ತಲ್ಲ, ನಾವು ರಾಮನನ್ನು ಇವರಿಗೆ ಗುತ್ತಿಗೆ ನೀಡಿಲ್ಲ. ನೀಡ ಕೂಡದು ಕೂಡ. 


ಯಾಕೋ ರಾಮನವಮಿ ಅಂದಾಗ ಇದೆಲ್ಲಾ ಆಲೋಚನೆಗಳು ನನ್ನ ಮಸ್ತಿಷ್ಕದಲ್ಲಿ.....

One thoughts on “ಯಾಕೋ ರಾಮನೆಂದರೆ ಭಯವಾಗ್ತದೆ........?!!

Mrityunjay said...

Article delivering wrong message.
All hindu's should have paradharma sahishnuthe, but not adharma sahishnuthe.
Blaming Babri incident for cruel terror attacks is meaning less.

This is just my opinion.

Proudly powered by Blogger
Theme: Esquire by Matthew Buchanan.
Converted by LiteThemes.com.