ಹಿಡನ್ ಅಜೆಂಡಾ - ಖುಲ್ಲಂಖುಲ್ಲಾ!


ಬಿಜೆಪಿಯದು ಹಿಡನ್ ಅಜೆಂಡಾ ಹಿಡನ್ ಅಜೆಂಡಾ ಅಂತ ಬಾಯಿ ಬಡಕೊಂಡಿದ್ದೇ ಬಂತು, ಬಿಜೆಪಿ ಯಾವುದನ್ನೂ ಹಿಡನ್ ಆಗಿರಸದೇ ಎಲ್ಲವನ್ನೂ ಖುಲ್ಲಂಖುಲ್ಲಾ ಆಗಿ ಮಾಡಿ ಮುಗಿಸಿದೆ. ಮೊನ್ನೆ ಶುಕ್ರವಾರ ಒಂದೇ ದಿನ ತೀವ್ರ ವಿರೋಧದ ನಡುವೆಯೂ ಅತ್ಯಂತ ವಿವಾದಾತ್ಮಕವಾದ ಗೋ ಹತ್ಯಾ ನಿಷೇಧ ಕಾನೂನನ್ನೂ ಮತ್ತು ಸಂಸ್ಕೃತ ವಿವಿ ಬಿಲ್ಲನ್ನೂ ಅಂಜದೆ ವಿಧಾನಸಭೆಯಲ್ಲಿ ಪಾಸು ಮಾಡಿಬಿಟ್ಟಿದೆ.

ಗೋ ಹತ್ಯೆ ಅನ್ನುವಂತಹುದ್ದು ನಮ್ಮ ದೇಶದಲ್ಲಿ ಬಾಬರ್, ಅಕ್ಬರ್, ಔರಂಗಜೇಬ್ ಕಾಲದಿಂದಲೂ ಮೊದಲಾಗಿ ಇವತ್ತಿನವರೆಗೂ ಪ್ರಚಲಿತದಲ್ಲಿರುವ ಅತ್ಯಂತ ಸೂಕ್ಷ್ಮ ವಿವಾದಾತ್ಮಕ ವಿಷಯ. ಗೋ ಹತ್ಯೆ ಅಂದ ಕೂಡಲೇ ಹಿಂದೂ ಮುಸ್ಲಿಮರ ಬಣಗಳು ಕಣ್ಣ ಮುಂದೆ ಸುಳಿದಾಡುತ್ತವೆ. ಗೋವನ್ನು ಹಿಂದೂಗಳು ದೈವವೆಂದು ಪೂಜಿಸುತ್ತಾರೆ. ಮುಸ್ಲಿಮರು ಅದರ ಭಕ್ಷಕರು. ಬಿಜೆಪಿಗೆ ಇದಕ್ಕಿಂತಲೂ ಸುವರ್ಣಾವಕಾಶ ಇನ್ನೊಂದುಂಟೆ? ಆರ್ಎಸ್ಎಸ್ ಮೊದಲಿನಿಂದಲೂ ಸಂಪೂರ್ಣ ಗೋ ಹತ್ಯಾ ನಿಷೇಧಕ್ಕೆ ಆಗ್ರಹಿಸುತ್ತಲೇ ಇದೆ. ಹಿಂದೂ ಸಮಾಜದ ಅನೇಕ ಸ್ವಾಮಿಗಳು ಕೂಡ ಧ್ವನಿಗೂಡಿಸುತ್ತಲೇ ಬಂದಿದ್ದಾರೆ. ಬಿಜೆಪಿ ದೇಶದ ಹಿಂದೂ ಜನಮಾನಸಕ್ಕೆ ಇದೊಂದು ಎಮೋಟಿವ್ ಇಶ್ಯೂ ಆಗುವಂತೆ ಇದನ್ನು ಸದಾ ಜೀವಂತವಾಗಿಟ್ಟಿದೆ. ಸದ್ಯ ಕರ್ನಾಟಕ ಸರ್ಕಾರ ಗೋ ಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತಂದಿದೆ. ಇದರ ಪ್ರಕಾರ, `ಗೋವನ್ನು' ಕೊಲ್ಲುವುದು, ಆ ಉದ್ದೇಶದಿಂದ ಸಾಗಿಸುವುದು, ಗೋ ಮಾಂಸವನ್ನು ಇಟ್ಟುಕೊಳ್ಳುವುದು, ಇದರಲ್ಲಿ ಯಾವುದೇ ಅಪರಾಧಕ್ಕೆ(?) 7 ವರ್ಷಗಳ ತನಕ ಶಿಕ್ಷೆಯಾಗಬಹುದು!

ಇದರಲ್ಲಿ ಹಲವಾರು ಅಪಾಯಗಳಿವೆ. ಮೊದಲನೆಯದು ಗೋ ಹತ್ಯಾ ನಿಷೇಧದಿಂದ ತೊಂದರೆಗೀಡಾಗುವವರು ಬರಿಯ ಮುಸ್ಲಿಮರಲ್ಲ! ಅದು ಶುದ್ಧಾನುಶುದ್ಧ ತಪ್ಪು ಕಲ್ಪನೆ. ಈ ಕಾನೂನು ಗುರಿಯಾಗಿಸಿಕೊಳ್ಳುವುದು ದಲಿತರನ್ನ ಕೂಡ! ನಮ್ಮ ಹಿಂದೂಗಳಲ್ಲೇ ಅನೇಕ ಜಾತಿಗಳವರು ದನ, ಎಮ್ಮೆ, ಮಾಂಸವನ್ನು ತಿನ್ನುವುದುಂಟು. ಗೋ ಹತ್ಯಾ ನಿಷೇಧ ಅವರನ್ನು ಟಾರ್ಗೆಟ್ ಮಾಡುತ್ತದೆ. ಇದರ ಬಗ್ಗೆ ಸ್ವಲ್ಪ ರಿಸರ್ಚ್  ಮಾಡಿದಾಗ ನನಗೆ ತಿಳಿದ ವಿಷಯವೆಂದರೆ ಕೋಳಿ, ಮೇಕೆ, ಕುರಿ ಮತ್ತಿತರ ಮಾಂಸಗಳು ಅತ್ಯಂತ ದುಬಾರಿಯಾಗಿದ್ದು, ದನದ ಮಾಂಸ ಅಗ್ಗ! ನಮ್ಮ ಬಡವರ ಕೈಗೆಟುಕುವುದು ಅದೇ! ಈ ಕಾನೂನಿನಲ್ಲಿ ಮತ್ತೊಂದು ಆಘಾತಕಾರಿಯಾದ ಕ್ಲಾಸ್ ಇದೆ. ಇದು ನಮ್ಮ ಕರಾವಳಿಯನ್ನು ಹೊತ್ತಿ ಉರಿಸುವುದರಲ್ಲಿ ಅನುಮಾನವಿಲ್ಲ. ಹೀಗೆ ಈ ಕಾನೂನನ್ನು ಉಲ್ಲಂಘಿಸಿದವರನ್ನು ಪೋಲೀಸರೇ ಬಂದು ಹಿಡಿಯಬೇಕೆಂದೇನೂ ಇಲ್ಲ! ಯಾವುದೇ ಸ್ವಯಂ ಸೇವಾ ಸಂಘ ಸಂಸ್ಥೆಗಳು ಇದನ್ನು ಕೈಗೆತ್ತಿಕೊಳ್ಳಬಹುದು! ಇನ್ನು ಭಜರಂಗ ದಳ, ಶ್ರೀ ರಾಮ ಶೇನೆಗೆಲ್ಲಾ ಲೈಸೆನ್ಸ್ ಸಿಕ್ಕ ಹಾಗೇ. ಕರಾವಳಿಯ ಪರಿಸ್ಥಿತಿಯನ್ನು ನೆನೆಸಿಕೊಂಡರೆ ದಿಗಿಲಾಗುತ್ತದೆ.

ಈ ಕಾನೂನು impractical ಕೂಡ. ಹರಿ ಹರಿ ಗೋವು ನಾನು, ಕಾಮಧೇನು...ನೀನಾರಿಗಾದೆಯೋ ಎಲೆ ಮಾನವ? ಅನ್ನುವ ಗೋವನ್ನು ಕೊಲ್ಲುವುದೇ? ಶಾಂತಂ ಪಾಪಂ ಎನ್ನುವ ಸರ್ಕಾರ ಪ್ರಾಕ್ಟಿಕಲ್ ಆಗಿ ಕೂಡ ಯೋಚಿಸಬೇಕು. ರೈತ ಆಗಲೇ ಬಸವಳಿದಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಮುದಿ ಗೊಡ್ಡು ದನಗಳು ಮತ್ತು ಗಂಡು ಕರುಗಳನ್ನು ಸಾಕುವ ಸ್ಥೈರ್ಯ ಆತನಿಗಿದಿಯೇ? ನಾವು ಆತನಿಂದ ಅದನ್ನು ನಿರೀಕ್ಷಿಸುವುದು ಸಹ ತಪ್ಪಲ್ಲವೇ? ಅದಕ್ಕೆ ಸರ್ಕಾರ ಪರಿಹಾರ ಸೂಚಿಸಿದೆ, ಗೋಶಾಲೆಗೆ ತಂದು ಬಿಟ್ಟರೆ ಸರ್ಕಾರವೇ ಅವುಗಳನ್ನು ನೋಡಿಕೊಳ್ಳುತ್ತದಂತೆ. ಹಾಗಾದರೆ ಇನ್ನೇನು ಸಮಸ್ಯೆಯಿಲ್ಲ ಅಂತೀರಾ? ಒಂದೇ ಸಮಸ್ಯೆ - ಅದರ ಆಲನೆ-ಪಾಲನೆಗೆ ರೈತ ಸರ್ಕಾರಕ್ಕೆ  ದುಡ್ಡು ಕಟ್ಟಬೇಕಂತೆ! ಇದು ನಮ್ಮ ಸರ್ಕಾರದ ಪರಿಹಾರ ಸೂತ್ರ. ಇನ್ನು ಭಾರತದಲ್ಲಿ ಗೋ ಹತ್ಯೆಯೇ ನಡೆದಿಲ್ಲವೇನೋ ಎಂದು ಅನೇಕರು ಸೋಗು ಹಾಕುತ್ತಿದ್ದಾರೆ. ಆದರೆ ಅವರಿಗೆ ತಿಳಿದಿರಲಿ, ಆರ್ಯರು ಗೋ ಭಕ್ಷಕರಾಗಿದ್ದರು, ಈಗಲೂ ಕೆಲವು ಯಜ್ಞ ಯಾಗಾದಿಗಳಲ್ಲಿ ಗೋ ಪ್ರಸಾದವುಂಟು ಅದೂ ಬ್ರಾಹ್ಮಣರಲ್ಲಿ! ಮತ್ತೊಂದು ಮಾತು ಭಾರತ ಇಡಿಯ ವಿಶ್ವಕ್ಕೇ ಎರಡನೇ ಅತಿ ದೊಡ್ಡ ಬೀಫ್ ಪ್ರಡ್ಯೂಸರ್! ಅದೊಂದು ದೊಡ್ಡ ಇಂಡಸ್ಟ್ರಿ.

ಮೊನ್ನೆ ಲಂಕೇಶ್ 75' ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ ಮಾತನಾಡುತ್ತಿದ್ದರು. ಒಬ್ಬ ದಲಿತ ತಾನು ಬ್ರಾಹ್ಮಣನಾಗಬೇಕೆಂದು ಸರ್ಕಾರಕ್ಕೆ ಅರ್ಜಿ ಹಾಕಿಕೊಂಡರೆ, ಅದು ಏನೆಂದು ಉತ್ತರಿಸುತ್ತದೆ ಅಂತ ಒಂದು ಪ್ರಶ್ನೆ ಎಸೆದರು. ಇದ್ದವರೆಲ್ಲಾ ತಲೆ ಕೆರೆದುಕೊಳ್ಳುವಷ್ಟರಲ್ಲಿ ಅವರೇ ಉತ್ತರ ಕೂಡ ಕೊಟ್ಟರು. ಇದು ತನ್ನ ವ್ಯಾಪ್ತಿಗೆ ಬರದ ವಿಷಯ ಅಂತ ಸರ್ಕಾರ ಜಾರಿಕೊಳ್ಳುತ್ತದೆ. ಹಾಗಾದರೆ ದೇವನೂರರದು ಮತ್ತೊಂದು ಪ್ರಶ್ನೆ - ತನ್ನ ವ್ಯಾಪ್ತಿಗೆ ಬರದ ಇಂತಹ ವಿಷಯಗಳ ಕುರಿತು ಸರ್ಕಾರಗಳು ಯಾಕೆ ಕಾನೂನುಗಳನ್ನು ಮಾಡುತ್ತವೆ? ಜಾತಿಯಾಯಿತು ಈಗ ಊಟದ ತಟ್ಟೆಗೂ ಕೈ ಹಾಕಿ ಕೂತಿದೆ ಸರ್ಕಾರ! ಬಹುಶಃ ಗೋ ಹತ್ಯಾ ನಿಷೇಧಕ್ಕೆ ಇದು ತಕ್ಕ ಉತ್ತರವಾದೀತು. the best government is that which governs the least. ಯಡಿಯೂರಪ್ಪನವರೂ ಸೇರಿದಂತೆ ನಮ್ಮ ದೇಶವನ್ನಾಳುತ್ತಿರುವವರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

ಇನ್ನು ಸಂಸ್ಕೃತ ವೇದ ವಿವಿ ಕಥೆ. ವಿವಿಗಳ ಬಗ್ಗೆ ನಮ್ಮ ರಾಜಕೀಯ ನಾಯಕರು ಮತ್ತು ಸರ್ಕಾರಗಳ ಧೋರಣೆಯಿದೆಯಲ್ಲ, ಅದೂ ಸರ್ವಥಾ ಖಂಡನೀಯವಾದುದು. ನಮ್ಮ ರಾಜಕೀಯ ನೇತಾರರಿಗೆ ದೇವಸ್ಥಾನ ದರ್ಗಾಗಳನ್ನೂ ಅವುಗಳ ಪಾಡಿಗೆ ಅವುಗಳನ್ನು ಬಿಡುವ ಮನಸ್ಸಿಲ್ಲ, ಅವುಗಳನ್ನೂ ತಮ್ಮ ಪ್ಲೇಗ್ರೌಂಡುಗಳಾಗಿ ಮಾಡಿಕೊಂಡಿರುವಾಗ ಇನ್ನು ವಿವಿಗಳಂತಹ ಬೃಹತ್ ಪ್ರತಿಷ್ಠಿತ ಸಂಸ್ಥೆಗಳನ್ನು ಬಿಡುವ ಮಾತೆಲ್ಲಿಯದು? ಇಂದು ನಮ್ಮ ವಿವಿಗಳು ಈ ಹೊಲಸು ರಾಜಕೀಯದ ಅಡ್ಡೆಗಳಾಗಿ ಬಿಟ್ಟಿವೆ. ಇನ್ನು ಸತತ ಸರ್ಕಾರಗಳಿಗೆ ವಿವಿಗಳೆಂದರೆ ಬೆಲೆಯೇ ಇಲ್ಲ. ಒಂದು ವರ್ಷದ ಹಿಂದೆ ಯಡ್ಯೂರಪ್ಪನವರು ಆಪರೇಷನ್ ಕಮಲಿಗರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕಾಗಿ ಬಂದಾಗ ಅಂದಿನ ತೋಟಗಾರಿಕಾ ಸಚಿವರಾಗಿದ್ದ ಗುಲ್ಬರ್ಗಾದ ಎಸ್.ಕೆ.ಬೆಳ್ಳುಬ್ಬಿಯವರ ರಾಜೀನಾಮೆ ಪಡೆದುಕೊಂಡರು. ಆಗ ಅಲ್ಲಿನ ಜನ ಕೊಂಚ ಬೇಸರದಲ್ಲೇ ಉದ್ವಿಗ್ನರಾಗಿದ್ದರು. ಅವರನ್ನು ತಣಿಸಲು ಆ ಊರಿಗೆ ಏನೋ ಒಂದು ಭಕ್ಷೀಸು ಕೊಡುವುದು ಅನಿವಾರ್ಯವಿತ್ತು. ಕೂಡಲೇ ಯಡ್ಯೂರಪ್ಪನವರು ಘೋಷಿಸಿಬಿಟ್ಟರು, ಅವರು ತೋಟಗಾರಿಕಾ ಸಚಿವರಲ್ಲವೇ ಆಗಿದ್ದಿದ್ದು, ಸರಿ ನಿಮ್ಮೂರಿಗೆ ಒಂದು ತೋಟಗಾರಿಕಾ ವಿವಿಯನ್ನು ಮಂಜೂರು ಮಾಡಲಾಗಿದೆ! ಇದು ವಿವಿಗಳಿಗೆ ನಮ್ಮ ಸರ್ಕಾರಗಳು ನೀಡುವ ಬೆಲೆ ಮತ್ತು ಗಾಂಭೀರ್ಯ! ಸಂಸ್ಕೃತ ವಿವಿಯದೂ ಇದೇ ಗೋಳು. ಅಸಲಿಗೆ ಇರುವ ವಿವಿಗಳ ಸಂಸ್ಕೃತ ವಿಭಾಗಗಳಲ್ಲಿ ಹುಡುಗರಿಲ್ಲದೆ ನೊಣ ಹೊಡೆಯುತ್ತಿರಬೇಕಾದರೆ ಸಂಸ್ಕೃತಕ್ಕೆಂದೇ ಹೊಸದೊಂದು ವಿವಿ! ಇದರಲ್ಲೂ ಕೂಡ ಬ್ರಾಹ್ಮಣಶಾಹಿಯನ್ನು ಮೆಚ್ಚಿಸುವ ಚೀಪ್ ರಾಜಕೀಯವೇ ಇಣುಕುತ್ತಿದೆ. ಕನ್ನಡ ನಾಡಿನ ದುರ್ದೈವ..ಎಡಬಿಡಂಗಿ ಸರ್ಕಾರ, ಕಿಮ್ಮತ್ತಿಲ್ಲದ ವಿರೋಧ ಪಕ್ಷಗಳು ಎರಡನ್ನೂ ನೋಡಬೇಕಿದೆ.

One thoughts on “ಹಿಡನ್ ಅಜೆಂಡಾ - ಖುಲ್ಲಂಖುಲ್ಲಾ!

Unknown said...

ಅರ್ಥಪೂರ್ಣ ಹಾಗೂ ಸಮಯೋಚಿತ ಲೇಖನ. ಗೋಹತ್ಯೆ ಸರ್ಕಾರ ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಯಶಸ್ವಿಯಾದರೆ ಮಥಗಾಲಯದಲ್ಲಿರುವ ಪ್ರಾಣಿಗಳೆಲ್ಲಾ ಇನ್ನು ಕೆಲವೇ ವರ್ಷಗಳಲ್ಲೇ ಸತ್ತುಹೋಗುವುದರಲ್ಲಿ ಸಂದೇಹವಿಲ್ಲ. 75 ರೂಪಾಯಿ ಗೋಮಾಂಸದ ಬದಲಿಗೆ ಈಗಲೇ 250ರ ಗಡಿ ದಾಟಿರುವ ಕುರಿ ಮೇಕೆಗಳ ಮಾಂಸ ಪರ್ಯಾಯವಾಗಬಲ್ಲದೆ? ದೇವನೂರರ ಪ್ರಶ್ನೆ ಕಣ್ಣು ತೆರೆಸುವಂತಿದೆ. ಹಸಿರು ಟವೆಲ್ ಹಾಕಿದವರೆಲ್ಲಾ ರೈತರಲ್ಲ, ರೈತರ ಪರವಲ್ಲ ಎನ್ನುವುದಕ್ಕೆ ಯಡಿಯೂರಪ್ಪನವರೂಹೊರತಲ್ಲ.

Proudly powered by Blogger
Theme: Esquire by Matthew Buchanan.
Converted by LiteThemes.com.