ನೈಸ್ ಪುರಾಣ - 4 - ಫ್ರೇಮ್ ವರ್ಕ್ ಅಗ್ರೀಮೆಂಟ್ ಎಂಬ ನೇಣುಗಂಬ!


ನೈಸ್ ಕುರಿತ ಚರ್ಚೆಯದೇ ದೊಡ್ಡ ಚರ್ಚೆ ನಮ್ಮಲ್ಲಿ. ಶ್ರೀಮಾನ್ ಯಡಿಯೂರಪ್ಪನವರು, ಸದನದ ಕಲಾಪದ ಕಡೆಯ ದಿನ ನೈಸ್ ಕುರಿತು ಚರ್ಚೆಗೆ ಸಮಯ ನಿಗದಿಗೊಳಿಸಿ, ವಿರೋಧ ಪಕ್ಷಗಳನ್ನು ಅಲ್ಲೀತನಕ ತಣಿಸಿದ್ದರು. ಅವತ್ತು ಆಡಳಿತ ಪಕ್ಷ ವಿರೋಧ ಪಕ್ಷಗೆಳೆರಡೂ ಕೂಡ ಕಾವೇರಿದ ಚರ್ಚೆಗೆ ಸಿದ್ಧವಾಗೇ ಬಂದಿದ್ದವು. ಸರ್ಕಾರಕ್ಕೆ ನೈಸ್ ಮಂಜುನಾಥ್ ನೇರವಾಗಿ ವಿಧಾನಸೌಧದ ಆಡಳಿತಪಕ್ಷದ ಲಾಬಿಗೆ ಬಂದು ಏನೇನು ದಾಖಲಾತಿಗಳು ಬೇಕೋ ಅದೆಲ್ಲವನ್ನೂ ಸರ್ಕಾರಕ್ಕೆ ಕೊಟ್ಟು ಹೋಗಿದ್ದರು. ಸರ್ಕಾರ ಕೂಡ ಅದನ್ನು ಹಿಡಿದು, ಝಾಡಿಸಲು ರೆಡಿ ಇದ್ದಂತಿತ್ತು. ಆದರೆ ಅಷ್ಟರಲ್ಲಿ ಏನೋ ಆಯಿತು. ಸರ್ಕಾರ ಗೋ ಹತ್ಯಾ ನಿಷೇಧ ಕಾನೂನನ್ನು ಮಂಡಿಸಿತು. ವಿರೋಧ ಪಕ್ಷಗಳು ಧರಣಿಗೆ ನಿಂತರು. ಅಷ್ಟೆ ಇದನ್ನೇ ಬಳಸಿಕೊಂಡು, ಸದನ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಸಿಬಿಟ್ಟಿತು ಸರ್ಕಾರ! ನೈಸ್ ಚರ್ಚೆಗೆ ಬೆನ್ನು ತೋರಿದ್ದರು ಯಡಿಯೂರಪ್ಪ. ಈಗ ಎಲ್ಲಾ ಆದಮೇಲೆ ಮತ್ತೆ ಯಡಿಯೂರಪ್ಪನವರು ಗೆಜ್ಜೆ ಕಟ್ಟಿ ತಾಂಡವ ಆಡುತ್ತಿದ್ದಾರೆ. ನಾನು ಮುಖಂಡರ ಸಭೆ ಕರೆಯುತ್ತೀನಿ, ನೈಸ್ ಕಾಲದಲ್ಲಿದ್ದ ಎಲ್ಲಾ ಮಾಜಿ ಮುಖ್ಯಮಂತ್ರಿಗಳನ್ನೂ ಆ ಸಭೆಗೆ ಕರೆತರುತ್ತೀನಿ, ಇಲ್ಲ ನೈಸ್ಗಾಗಿಯೇ ಒಂದು ವಿಶೇಷ ಅಧಿವೇಶನ ನಡೆಸೋಣಂತೆ, ಅಂತ ಈಗ ಬಣ್ಣದ ವೇಷ ಕಟ್ಟುತ್ತಿದ್ದಾರೆ. ನೈಸ್ ಚರ್ಚೆ ಆಗಬೇಕಿರುವುದು ವಿಧಾನಸಭೆಯಲ್ಲಿ, ಯಡಿಯೂರಪ್ಪನವರ ಮನೆಯಲ್ಲಲ್ಲ. ಇರುವ ಕಲಾಪದಲ್ಲೇ ಚರ್ಚೆಗೆ ಹಿಂದಡಿಯಿಟ್ಟ ಇವರು ಅದಕ್ಕೆಂದೇ ವಿಶೇಷ ಕಲಾಪ ಕರೆಯುವರೇ? ಇರಲಿ. 

ಈ ಮಧ್ಯೆ ನೈಸ್ ವಿಚಾರವಾಗಿ ಮತ್ತೆರಡು ಬೆಳವಣಿಗೆಗಳಾಗಿವೆ. ಒಂದು ಸದನದಲ್ಲಿ ಟಿ.ಬಿ.ಜಯಚಂದ್ರ ಅವರ ಪ್ರಶ್ನೆಗಳಿಗುತ್ತರಿಸುತ್ತಾ ಯಡಿಯೂರಪ್ಪನವರು ನೈಸ್ಗಾಗಿ 25 ಸಾವಿರ ಎಕೆರೆಗಳನ್ನು ಕೆಐಎಡಿಬಿಯಿಂದ ನೋಟಿಫೈ ಮಾಡಿಸಲಾಗಿದೆಯೆಂದು ಸದನದಲ್ಲಿ ಹೇಳಿಕೆ ನೀಡಿದ್ದಾರೆ. ಫ್ರೇಮ್ ವರ್ಕ್ ಅಗ್ರೀಮೆಂಟಿನ ಪ್ರಕಾರ ನೈಸ್ಗೆ ಅಗತ್ಯ ನೀಡಬೇಕಿರುವ ಭೂಮಿ ಬರಿಯ 20,193 ಎಕೆರೆಗಳು. ಅಲ್ಲಿಗೆ ಸುಮಾರು 3800 ಎಕರೆ ನೈಸ್ಗೆ ಬೋನಸ್! ಹೆಚ್ಚುವರಿ ಭೂಮಿಯನ್ನು ರೈತರಿಗೆ ವಾಪಸ್ ಕೊಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಇನ್ನು ಮತ್ತೊಂದು ಬೆಳವಣಿಗೆಯೆಂದರೆ ಯಡಿಯೂರಪ್ಪನವರ ನೈಸ್ ಪರ ಧೋರಣೆಯನ್ನು ಟೀಕಿಸುತ್ತಾ ಅವರನ್ನು ಛಾಲೆಂಜ್ ಮಾಡುತ್ತಾ ದೇವೇಗೌಡರು ಒಂದು ಬಹಿರಂಗ ಪತ್ರ ಬರೆದಿದ್ದಾರೆ. ಇದು ಅವರ ಎಷ್ಟನೆಯ ಪತ್ರವೋ? ಇರಲಿ.

ಫೆಬ್ರವರಿ 20, 1995 ರಂದು ರಾಜ್ಯ ಸರ್ಕಾರ ಮತ್ತು ಈ ಕಂಪೆನಿಗಳ ಕನ್ಸಾರ್ಶಿಯಂನ ನಡುವೆ ಎಂಒಯು ಆಗಿತ್ತು. ನಂತರ ಸರ್ಕಾರ ಇದಕ್ಕಾಗಿಯೇ ಒಂದು ಹೈ ಲೆವೆಲ್ ಕಮಿಟಿಯನ್ನು ರಚಿಸಿತ್ತು. ಈ ಕನ್ಸಾರ್ಶಿಯಂ ಆಗಸ್ಟ್ 26 1995ರಂದು ಸರ್ಕಾರಕ್ಕೆ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಸಲ್ಲಿಸುತ್ತದೆ. ಇದನ್ನು ಪರಿಶೀಲಿಸಿದ ಹೈ ಲೆವೆಲ್ ಕಮಿಟಿ ಅದರ ಯಥಾವತ್ ಜಾರಿಗೆ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಆದರೆ ಸರ್ಕಾರ ಟೌನ್ಷಿಪ್ಗಳ ಸಂಖ್ಯೆಯನ್ನು 7 ರಿಂದ 5ಕ್ಕೆ ಇಳಿಸಿ, ಮಿಕ್ಕಿದ್ದನ್ನು ಒಪ್ಪಿ ನವೆಂಬರ್ 20 1995ರಂದು ಒಂದು ಜಿಒ ಪಾಸು ಮಾಡುತ್ತದೆ. ಅದರಂತೆ ಪಿಡಬ್ಲ್ಯೂಡಿ ಇಲಾಖೆ ಸರ್ಕಾರದ ಪರವಾಗಿ ಈ ಕನ್ಸಾರ್ಶಿಯಂನೊಂದಿಗೆ ಮೆಮೊರಾಂಡಂ ಆಫ್ ಅಗ್ರೀಮೆಂಟ್ - ಫೈನಲ್ ಒಪ್ಪಂದವನ್ನು ಮಾಡಿಕೊಳ್ಳಬೇಕು. ಆದರೆ ಇದಾಗುವಷ್ಟರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಪ್ರಧಾನ ಮಂತ್ರಿಯಾಗಿಬಿಟ್ಟಿದ್ದರು. ಇಲ್ಲಿ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾದರು. ನೈಸ್ ಖೇಣಿಯ ಪರಮಾಪ್ತರಾದ ಬಿ.ಎಸ್.ಪಾಟೀಲರು ಪಟೇಲರ ಹಯಾಮಿನಲ್ಲಿ ಸರ್ವಶಕ್ತ ಪ್ರಿನ್ಸಿಪಲ್ ಸೆಕ್ರೆಟರಿ ಹುದ್ದೆಯನ್ನಲಂಕರಿಸಿದರು. ಕ್ಯಾಪ್ಟನ್ ರಮೇಶ್ ಲೋಕೋಪಯೋಗಿ ಕಾರ್ಯದರ್ಶಿಗಳಾದರು. ಪಟೇಲರು ಬಿ.ಎಸ್ ಪಾಟೀಲರನ್ನು ಎಷ್ಟು ನಂಬಿದ್ದರು ಎಂದರೆ ಅವರು ಇಡುತ್ತಿದ್ದ ಫೈಲುಗಳನ್ನು ಕಣ್ಣು ಮುಚ್ಚಿ ಸಹಿ ಹಾಕುತ್ತಿದ್ದರು ಎಂಬ ಮಾತಿದೆ. ಕಬ್ಬಿಣ ಕಾದ ಸರಿಯಾದ ಸಮಯಕ್ಕೆ ಆಡಳಿತ ವ್ಯವಸ್ಥೆಯ ಆಯಾಕಟ್ಟಿನ ಸ್ಥಳಗಳಲ್ಲಿ ನೈಸ್ ಸುತ್ತಿಗೆಗಳು ಕಾಣಿಸಿಕೊಳ್ಳತೊಡಗಿದವು! ಖೇಣಿ ಸಾಹೇಬರ ಮುಖದಲ್ಲಿ ಮಂದಹಾಸ ಮಿನುಗಿತ್ತು. 

ನೀವು ಸರ್ಕಾರವನ್ನಾಗಲೀ ನೈಸ್ ಕಂಪೆನಿಯನ್ನಾಗಲೀ ಯಾರನ್ನೇ ಈ ಪ್ರಾಜೆಕ್ಟಿನ ಬಗ್ಗೆ ಕೇಳಿ ನೋಡಿ, ಅವರು ಫ್ರೇಮ್ ವರ್ಕ್  ಅಗ್ರೀಮೆಂಟಿಗೆ ರೆಫರ್ ಮಾಡುತ್ತಾರೆ. ದೇವೇಗೌಡರು ಮತ್ತು ಸುಪ್ರೀಂ ಕೋರ್ಟ್  As originally conceived ಎಂಬ ಪದ ಬಳಸುತ್ತಾರಲ್ಲ, ಅದು ಇದಕ್ಕೇ. ಇವತ್ತು ಈ ನೈಸ್ ವಿಚಾರ ಲೀಗಲೀ ಕೂಡ ಏಕೆ ಇಷ್ಟು ಕಗ್ಗಂಟಾಗಿ ಕೂತಿದೆ, ಎಂದರೆ ಅದಕ್ಕೆ ಮತ್ತೆ ಇದೇ ಫ್ರೇಮ್ ವರ್ಕ್ ಅಗ್ರೀಮೆಂಟ್ ಕಾರಣ. ನೈಸ್ ಸಂಸ್ಥೆಯವರನ್ನ ನೀವು ಯಾವುದೇ ವಿಚಾರವಾಗಿ ಕೇಳಿ ನೊಡಿ - ಅವರು ಫ್ರೇಮ್ ವರ್ಕ್ ಅಗ್ರೀಮೆಂಟನ್ನು ನಿಮ್ಮ ಮುಖಕ್ಕೆ ಹಿಡಿಯುತ್ತಾರೆ. ಫ್ರೇಮ್ ವರ್ಕ್ ಅಗ್ರೀಮೆಂಟಿನ ಹಿಂದಿನ ಯಾವುದೇ ವಿದ್ಯಮಾನಗಳ ಬಗ್ಗೆ ಅವರು ತುಟಿ ಎರಡು ಮಾಡುವುದಿಲ್ಲ. ಸರ್ಕಾರ  ಅವರೊಂದಿಗೆ ಒಂದು ಒಪ್ಪಂದ ಅಂತ ಮಾಡಿಕೊಂಡ ಮೇಲೆ ಅವರಿಗದೇ ಬೈಬಲ್ ಬಿಡಿ. ಇದರ ಹೊರತಾಗಿ ನಾವೇನಾದರೂ ಮಾಡಿದ್ದರೆ ತೋರಿಸಿ ಅದು ತಪ್ಪು ಎನ್ನುತ್ತಾರೆ. ಅದೂ ಬಹಳಷ್ಟಿದೆ ಬಿಡಿ, ಅದರ ಮಾತು ಆಮೇಲೆ. ಇಲ್ಲಿ ತಪ್ಪಿರುವುದು ನೈಸ್ ಕಂಪೆನಿಯದಲ್ಲ, ಅದು ಒಂದು ಬಿಸಿನೆಸ್ ಫರ್ಮ್, ಅದು ಅದರ ಹಿತಾಸಕ್ತಿಗಳನ್ನಷ್ಟೇ ಗಮನಿಸುತ್ತದೆ. ತಪ್ಪು ಜನರ ಹಿತ ಕಾಯಬೇಕಿದ್ದ ನಮ್ಮ ಸರ್ಕಾರ ಮತ್ತು ರಾಜಕಾರಣಿಗಳು ಈ ಒಪ್ಪಂದಕ್ಕೆ ಸಹಿ ಹಾಕಿ ಕೊಟ್ಟಿರುವುದು. ನೈಸ್ನಂದೇನು ಪ್ರಯೋಜನ? ಏಪ್ರಿಲ್ 3, 1997ರಂದು ಸರ್ಕಾರ ಮತ್ತು ನೈಸ್ ಕಂಪೆನಿಯ ನಡುವೆ ಒಪ್ಪಂದವಾಯಿತು. ಅದೇ ಫ್ರೇಮ್ ವರ್ಕ್ ಅಗ್ರೀಮೆಂಟ್. ಇದರಲ್ಲಿ ಸರ್ಕಾರದ ಪರ ಅಂದಿನ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ರಮೇಶ್ ಮತ್ತು ನೈಸ್ ಕಂಪೆನಿಯ ಪರವಾಗಿ ಅಶೋಕ್ ಖೇಣಿಯ ಅಣ್ಣ ಶಿವಕುಮಾರ್ ಖೇಣಿ ಸಹಿ ಹಾಕಿರುತ್ತಾರೆ. ಇರಲಿ ಅಸಲಿಗೆ ಈ ಫ್ರೇಮ್ ವರ್ಕ್ ಅಗ್ರೀಮೆಂಟ್ ಏನು ಹೇಳುತ್ತದೆ? ಇಡೀ ಪ್ರಾಜೆಕ್ಟಿನ ರೂಪುರೇಷೆಗಳನ್ನು ಈ ಅಗ್ರೀಮೆಂಟ್ ತಿಳಿಸುತ್ತದೆ. ನಾವು ಈಗ ಇದರ ಎಲ್ಲ ವಿವರಗಳಿಗೆ ಹೋಗುವುದು ಬೇಡ. ಕೆಲವು ಪ್ರಮುಖಾಂಶಗಳನ್ನು ಮಾತ್ರ ತೆಗೆದುಕೊಳ್ಳೋಣ. 

ಭೂಮಿ - ದೇವೇಗೌಡರ ಕಾಲದಲ್ಲಿ ಆಗಿದ್ದ ಕರಾರಿನ ಪ್ರಕಾರ ರೈತರಿಂದ ಕಂಪೆನಿಯೇ ಭೂಮಿಯನ್ನು ಪಡೆಯಬೇಕು. ಅದರಲ್ಲಿ ಸರ್ಕಾರದ ಪಾತ್ರವೇನೂ ಇರಲಿಲ್ಲ. ಮಾರುಕಟ್ಟೆ ಬೆಲೆ ಮತ್ತು ಒಂದು ಉದ್ಯೋಗ, ಮಾರುಕಟ್ಟೆ ಬೆಲೆ ಮತ್ತು ರಿಯಾಯಿತಿ ದರದಲ್ಲಿ ಮನೆ, ಇಲ್ಲ ಪರ್ಯಾಯ ಭೂಮಿ ಮತ್ತು ಕೊಂಚ ಪರಿಹಾರ ಹೀಗೆ ಮೂರರಲ್ಲೊಂದು ವಿಧಾನದಂತೆ ಖಾಸಗಿಯವರಿಂದ ಅವರ ಸಮ್ಮತಿಯ ಮೇರೆಗೆ ಭೂಮಿಯನ್ನು ಪಡೆದುಕೊಳ್ಳಬೇಕಿತ್ತು. ಅದರಲ್ಲೂ ಕೂಡ ರೈತರ ಫಲವತ್ತಾದ ಭೂಮಿ ಹೆಚ್ಚು ಹೋಗದಂತೆ, ಜಾಗ್ರತೆ ವಹಿಸಬೇಕೆನ್ನುವ ಕರಾರಿತ್ತು. ಆದರೆ ನೀವು ಫ್ರೇಮ್ ವರ್ಕ್ ಅಗ್ರೀಮೆಂಟನ್ನು ಒಮ್ಮೆ ಓದಿ ನೊಡಿ - ಎಲ್ಲವೂ ತಲೆಕೆಳಗು. ಒಪ್ಪಂದದ ಆರ್ಟಿಕಲ್ 3ರ ಪ್ಯಾರಾ ನಂ. 3.2 ಮತ್ತು ಆರ್ಟಿಕಲ್ 5ಅನ್ನು ಗಮನಿಸಬೇಕು. ಇವೆರಡೂ ಪ್ರಾಜೆಕ್ಟಿಗೆ ಬೇಕಾದ ಭೂಮಿ ಮತ್ತು ಅದರ ಅಕ್ವಿಸಿಷನ್ನ ಬಗ್ಗೆ ಮಾತನಾಡುತ್ತದೆ. ಆರ್ಟಿಕಲ್ 5ರ ಮೊದಲಿಗೇ ಇದೆ - ಕಂಪೆನಿಗೆ ಸರ್ಕಾರ ತನ್ನ ಸಂಬಂಧಪಟ್ಟ ಇಲಾಖೆಗಳ ಮೂಲಕ ಬೇಕಾದ ಅಗತ್ಯ ಭೂಮಿಯನ್ನು ವಶಪಡಿಸಿಕೊಂಡು ಕಂಪೆನಿಗೆ ಹಸ್ತಾಂತರಿಸಬೇಕು. ಕಂಪೆನಿ ಈ ಮೊದಲೇ ಒಪ್ಪಿಗೆಯಾದಂತಹ ಪರಿಹಾರದ ಪ್ಯಾಕೇಜನ್ನು ಸರ್ಕಾರಕ್ಕೆ ಕಟ್ಟುತ್ತದೆ. ಇದನ್ನು ಸರ್ಕಾರ ಭೂಮಿ ಕಳೆದುಕೊಂಡ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಬೇಕು. ಅಲ್ಲಿಗೆ ಖೇಣಿ ಸಾಹೇಬರು ಏಕದಂ ಒಂದೇ ಏಟಿಗೆ ಭೂಮಿಯನ್ನು ಖಾಸಗಿಯವರಿಂದ ಪಡೆದುಕೊಳ್ಳುವ ಎಲ್ಲ ತಲೆನೋವನ್ನೂ ಕಳೆದುಕೊಳ್ಳುತ್ತಾರೆ. ಅವರ ಬದಲಿಗೆ ಸರ್ಕಾರ ಬ್ರೋಕರ್ ರೀತಿಯಲ್ಲಿ ಆ ಕೆಲಸ ಮಾಡಿಕೊಡಬೇಕು, ಮಾಡಿಕೊಡುತ್ತಿದೆ. ಅಷ್ಟೇ ಅಲ್ಲ ಈ ಪ್ರಾಜೆಕ್ಟಿಗೆಂದು ವಶಪಡಿಸಿಕೊಂಡ ಭೂಮಿಯನ್ನು ಯಾರಾದರೂ ಅತಿಕ್ರಮಿಸಿದರೆ ಅದನ್ನು ತೆರವುಗೊಳಿಸಿ ಭೂಮಿಯನ್ನು ಸೇಫ್ ಆಗಿ ನೋಡಿಕೊಳ್ಳುವುದು ಕೂಡ ಸರ್ಕಾರದ ಕೆಲಸವೇ. ಇಷ್ಟೇ ಆಗಿದ್ದರೆ ಚೆನ್ನಿತ್ತು, ಆದರೆ ಮತ್ತೊಂದು ಮಹಾ ಹಗರಣ ಇಲ್ಲಿ ಮೊಳಕೆಯೊಡೆಯುತ್ತದೆ. ರಸ್ತೆಗೆ ಅಗತ್ಯ ಬೇಕಾದ ಭೂಮಿಯನ್ನು 30 ವರ್ಷಗಳ ಕಾಲ ಕಂಪೆನಿಗೆ ಲೀಸ್ ಮೇಲೆ ಕೊಡುವುದೆಂದು ಮಾತಾಗಿತ್ತು. ಆದರೆ ಆರ್ಟಿಕಲ್  5ರ ಪ್ಯಾರಾ ನಂ. 5.1.1.2 ಮತ್ತು ಆರ್ಟಿಕಲ್ 3ರ ಪ್ಯಾರಾ ನಂ. 3.2.4ರಲ್ಲಿ ಸ್ಪಷ್ಟವಾಗಿ Sale of acquired land to the company ಎಂದು ದಾಖಲಾಗಿದೆ. ಎಂದರೆ ಭೂಮಿಯ ವಿಕ್ರಯಕ್ಕೆ ಸರ್ಕಾರ ಸಹಿ ಹಾಕಿ ಕೂತಿದೆ! ಇದಲ್ಲದೆ ಆರ್ಟಿಕಲ್ 3ರ ಪ್ಯಾರಾ ನಂ.3.2.3ರಲ್ಲಿ ಈ ರೀತಿ ಇದೆ - GOK covenants that it will not restrict the use of land in any way and that the company shall have full freedom and descrtion to industrially and commercially develop and use the land ಅಂದರೆ ಕಂಪೆನಿ ಭೂಮಿಯನ್ನು ರಿಯಲ್ ಎಸ್ಟೇಟ್ಗೆ ಬಳಸಿಕೊಳ್ಳುವುದನ್ನು ಸರ್ಕಾರ  ಒಪ್ಪಿ ಸಹಿ ಹಾಕಿಕೊಟ್ಟಿದೆ! 

ಭೂಮಿಯ ಬಗ್ಗೆ ಮಾತಾಡುವಾಗಲೇ ಮತ್ತೊಂದು ವಿಚಾರವನ್ನೂ ಇಲ್ಲಿ ಪ್ರಸ್ತಾಪಿಸಿ ಬಿಡಬೇಕು. ಇದು ಇಡಿಯ ಫ್ರೇಮ್ ವರ್ಕ್  ಅಗ್ರೀಮೆಂಟಿನಲ್ಲೇ ಅತಿ ದೊಡ್ಡ ಹಗರಣ. ನಿಮಗೆ ನೆನಪಿರುವುದೇ ಆದರೆ ಕಂಪೆನಿ ತನ್ನ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನ ಟೇಬಲ್ 6.7ರಲ್ಲಿ ಸ್ಪಷ್ಟವಾಗಿ ದಾಖಲಿಸಿತ್ತು, ರಸ್ತೆಗೆ 5119.37 ಎಕರೆಗಳು ಅಗತ್ಯ ಎಂದು. ಇದಲ್ಲದೆ 7 ಟೌನ್ಷಿಪ್ಗಳಿಗೆ 20,092 ಎಕರೆಗಳು ಅಗತ್ಯವೆಂದು ತಿಳಿಸಿತ್ತು. ಆದರೆ ಸರ್ಕಾರ  ಟೌನ್ಷಿಪ್ಗಳನ್ನು 7ರಿಂದ 5ಕ್ಕೆ ಇಳಿಸಿದ್ದರಿಂದ ಇದಕ್ಕಾಗಿ 13,194 ಎಕರೆಗಳು ಸಾಕೆಂದು ಹೈಲೆವೆಲ್ ಕಮಿಟಿ ಶಿಫಾರಸಿನ ಹಿನ್ನಲೆಯಲ್ಲಿ ಹೊರಡಿಸಿದ ಆದೇಶದಲ್ಲಿ ಸರ್ಕಾರ ಹೇಳಿಕೊಂಡಿದೆ. ಅಲ್ಲಿಗೆ ರಸ್ತೆ ಮತ್ತು ಟೌನ್ಷಿಪ್ಗಳೆರಡಕ್ಕೂ ಸೇರಿ ಮೂಲದಲ್ಲಿ ಅಗತ್ಯವಿದ್ದದ್ದು ಬರಿಯ 18,313 ಎಕರೆಗಳು. 

ಆದರೆ ಫ್ರೇಮ್ ವರ್ಕ್ ಅಗ್ರೀಮೆಂಟಿನಲ್ಲಿ ಆಶ್ಚರ್ಯ ಕಾದಿತ್ತು. ಫ್ರೇಮ್ ವರ್ಕ್ ಅಗ್ರೀಮೆಂಟಿನ ಷೆಡ್ಯೂಲ್ 1ರಲ್ಲಿ ಪ್ರಾಜೆಕ್ಟಿಗೆ ಅಗತ್ಯ ಬೇಕಾದ ಭೂಮಿಯ ಪ್ರಮಾಣವನ್ನು ನಮೂದಿಸಲಾಗಿದೆ. ಅಲ್ಲಿ ಮಿಕ್ಕೆಲ್ಲವೂ ಮೊದಲಿನಂತೆಯೇ ಇದ್ದರೂ ರಸ್ತೆಗೆ 5119.37 ಎಕರೆಗಳ ಬದಲಿಗೆ 6999 ಎಕರೆಗಳು ಎಂದು ನಮೂದಾಗಿದೆ! ಅಂದರೆ ಕೇವಲ(!) 1880 ಎಕರೆಗಳಷ್ಟು ಹೆಚ್ಚುವರಿ ಭೂಮಿಯನ್ನು ಸರ್ಕಾರ ಕಂಪೆನಿಗೆ ಬಿಟ್ಟುಕೊಟ್ಟಿದೆ. ಆದರೆ ಯಾಕೆ? ಅದು ಉತ್ತರವೇ ಇಲ್ಲದ ಪ್ರಶ್ನೆ. ಹೀಗೆ ಹೆಚ್ಚುವರಿ ಭೂಮಿ ನೀಡುವುದರ ಪ್ರಸ್ತಾಪ ಇಡಿಯ ಫ್ರೇಮ್ ವರ್ಕ್  ಅಗ್ರೀಮೆಂಟಿನಲ್ಲಿ ಬೇರೆಲ್ಲೂ ಬರುವುದಿಲ್ಲ. ಷೆಡ್ಯೂಲ್ನಲ್ಲಿ ಕೂಡ ಈ ಹೆಚ್ಚುವರಿ ಭೂಮಿಗೆ ಯಾವುದೇ ವಿವರಣೆಗಳಿಲ್ಲ. ಅದಕ್ಕೊಂದು ಕಾರಣ, ಸವರ್ೆ, ಅನುಮೋದನೆಗಳು....ಊಹುಂ ಅದ್ಯಾವುದೂ ಇಲ್ಲ, ಸುಮ್ಮನೆ ಗಿಫ್ಟ್ ಏನೋ ಅನ್ನುವಂತೆ 1880 ಎಕರೆ ಹೆಚ್ಚುವರಿ ಭೂಮಿಯನ್ನು ಕಂಪೆನಿಗೆ ಕೊಡುವಂತಿರುವ ಒಪ್ಪಂದಕ್ಕೆ ಸರ್ಕಾರ ಸಹಿ ಹಾಕಿದೆ. ಖೇಣಿಯವರನ್ನೇ ಕೇಳಿ ನೋಡಿ, ಅವರ ಬಳಿಯೂ ಇದರ ಕುರಿತು ಸ್ಪಷ್ಟವಾದ ಒಂದು ವಿವರಣೆ ಇಲ್ಲ. ಈ ಪ್ರಶ್ನೆಗೆ ಅವರದು ಮರುಪ್ರಶ್ನೆಯ ವಿತಂಡವಾದ. ನೀವು ಇದನ್ನು ಪ್ರಶ್ನಿಸುವುದೇ ಆದರೆ, ಸರಿ ಹಾಗಾದರೆ ನನಗೆ ನನ್ನ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನ ಪ್ರಕಾರ 7 ಟೌನ್ಷಿಪ್ ಮತ್ತು ರಸ್ತೆಗೆ ಸೇರಿದಂತೆ 25,211.37 ಎಕರೆಗಳನ್ನು ಕೊಡಬೇಕಿತ್ತಲ್ಲ, ನೀವದನ್ನು ಯಾಕೆ ಕೇಳುವುದಿಲ್ಲ? ಅಂತ ತಲೇಲಿ ಹುಳ ಬಿಡಕ್ಕೆ ನೋಡುತ್ತಾರೆ. ಆದರೆ ಜನ ಅಷ್ಟು ದಡ್ಡರಲ್ಲ. ಸರ್ಕಾರ 7 ಟೌನ್ಷಿಪ್ಗಳನ್ನು 5ಕ್ಕೆ ಮಿತಿಗೊಳಿಸಿ ಆದೇಶ ಹೊರಡಿಸಿದೆ. ರಸ್ತೆಗೆ ನೀವು ಕೇಳಿರುವುದೇ 5119.37 ಎಕರೆಗಳು. 2 ಟೌನ್ಷಿಪ್ಗಳಿಗೆ ಸರ್ಕಾರ ಅನುಮತಿ ನಿರಾಕರಿಸಿದ್ದಕ್ಕೆ 1880 ಎಕರೆ ಹೆಚ್ಚುವರಿ ಭೂಮಿ ನಷ್ಟ ಪರಿಹಾರ ಎಂಬಂತೆ ಮಾತಾಡುತ್ತಾರೆ ಖೇಣಿ ಸಾಹೇಬರು. ತಪ್ಪು ಅವರದಲ್ಲ ಬಿಡಿ. ನಮ್ಮ ಸರ್ಕಾರದ ರಾಜಕಾರಣಿಗಳು ಮತ್ತು ಕಡುಭ್ರಷ್ಟ ನೈಸ್ ಊಳಿಗಮಾನ್ಯ ಅಧಿಕಾರಿಗಳ ಬೆಂಬಲವಿಲ್ಲದೆ ಖೇಣಿ ಅವರೇನು ಮಾಡಲಿಕ್ಕಾಗುತ್ತಿತ್ತು ಹೇಳಿ. ನಾವು ದೂಷಿಸಬೇಕಿರುವುದು ನಮ್ಮವರನ್ನ, ಅಂದು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳಾಗಿದ್ದು, ಈ ಫ್ರೇಮ್ ವರ್ಕ್ ಅಗ್ರೀಮೆಂಟಿಗೆ ಸರ್ಕಾರದ ಪರ ಸಹಿ ಹಾಕಿದ ಕ್ಯಾಪ್ಟನ್ ರಮೇಶ್, ಪ್ರಿನ್ಸಿಪಲ್ ಸೆಕ್ರೆಟರಿಯಾಗಿದ್ದ ಬಿ.ಎಸ್.ಪಟೀಲ್ ಮತ್ತು ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ ಅವರನ್ನು. 

ಹಾಗಾದರೆ ಸರಿ ಫ್ರೇಮ್ ವರ್ಕ್ ಅಗ್ರೀಮೆಂಟಿನ ಪ್ರಕಾರ ಬಿಎಂಐಸಿಪಿಗೆ ಅಗತ್ಯವಾದ ಭೂಮಿ ಎಷ್ಟು? ರಸ್ತೆಗೆ 6,999 ಎಕರೆಗಳು, ಟೌನ್ಷಿಪ್ 1ಕ್ಕೆ 2,775 ಎಕರೆಗಳು, 2ಕ್ಕೆ 1,836 ಎಕರೆಗಳು, 4ಕ್ಕೆ 1,615 ಎಕರೆಗಳು 5ಕ್ಕೆ 2,682 ಎಕರೆಗಳು ಮತ್ತು ಆರ್ಥಿಕ ಇಲಾಖೆಯ ಅನುಮೋದನೆಯೇ ಇಲ್ಲದ 7ನೇ ಟೌನ್ಷಿಪ್ಗೆಂದು  4286 ಎಕರೆಗಳು! ಒಟ್ಟು ಅಗತ್ಯ ಭೂಮಿ 20,193 ಎಕರೆಗಳು. ಇದರಲ್ಲಿ 6,956 ಎಕರೆಗಳು ಸರ್ಕಾರಕ್ಕೆ ಸೇರಿದ್ದಾಗಿದ್ದು, ಇನ್ನುಳಿದ 13,237 ಎಕರೆಗಳು ಖಸಗೀ ಭೂಮಿಯಾಗಿದೆ. ಇದರಲ್ಲೇ 1880 ಎಕರೆಗಳು ಹೆಚ್ಚುವರಿ ಅಂತ ಜನ ಬಾಯಿ ಬಡಕೊಳ್ಳುತ್ತಿದ್ದರೆ ಯಡಿಯೂರಪ್ಪ ಸದನದಲ್ಲಿ 25 ಸಾವಿರ ಎಕರೆಗಲನ್ನು ನ್ಯಸ್ಗಾಗಿ ನೋಟಿಫೈ ಮಾಡಲಾಗಿದೆ ಎಂದು ಘಂಟಾಘೋಷವಾಗಿ ಹೇಳುತ್ತಾರೆ! ನ್ಯಸ್ ಎಂದರೆ ಅದು. 

2 thoughts on “ನೈಸ್ ಪುರಾಣ - 4 - ಫ್ರೇಮ್ ವರ್ಕ್ ಅಗ್ರೀಮೆಂಟ್ ಎಂಬ ನೇಣುಗಂಬ!

b.suresha said...

ಒಳ್ಳೆಯ ಮಾಹಿತಿ.
ನಮ್ಮ ರಾಜಕಾರಣಿಗಳು ವ್ಯಾಪರಿಗಳ ದುಡ್ಡು ತಿಂದು ಕಾನೂನನ್ನು ಹೇಗೆ ತಿರುಚಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ನಿಜ ಹೇಳಬೇಕೆಂದರೆ, ಈ ‘ನೈಸ್ ಪುರಾಣ’ ವನ್ನು ಒಂದು ಪುಟ್ಟ ಹೊತ್ತಿಗೆ ಮಾಡಿ ಎಲ್ಲರಿಗೂ ಹಂಚಬೇಕು.
ನಮ್ಮ ಜನಕ್ಕೆ ನಮ್ಮ ಅಧಿಕಾರದ ಕುರ್ಚಿಯ ಮೇಲೆ ಕೂತವರ ಢೋಂಗಿ ಸಲಾಮುಗಳು ಅರ್ಥವಾಗಬೇಕು.
ಥ್ಯಾಂಕ್ಸ್ ಆದಿತ್ಯ ಅವರೇ, ಇಷ್ಟೆಲ್ಲಾ ಸಂಶೋಧನೆಗೆ ನೀವು ತೆಗೆದುಕೊಂಡಿರುವ ಶ್ರಮ ಸಾರ್ಥಕವಾಗಲಿ ಎಂದು ಹಾರೈಸುತ್ತೇನೆ.

Unknown said...

ಹೌದು ಒಂದು ಸಂಶೋಧನಾ ಗ್ರಂಥವನ್ನು ಬರೆಯುವಷ್ಟು ದೊಡ್ಡದಾಗಿದೆ ಈ ನೈಸ್ ಪುರಾಣ. ಿದನ್ನು ಇಷ್ಟೊಂದು ಬೆಳೆಯಲು ಬಿಟ್ಟವರಿಗೆ ದಿಕ್ಕಾರವಿರಲಿ. ನಿಮ್ಮ ಶ್ರಮಕ್ಕೆ ಅಭಿನಂಧನೆಗಳು

Proudly powered by Blogger
Theme: Esquire by Matthew Buchanan.
Converted by LiteThemes.com.