ನೈಸ್ ಪುರಾಣ - 1

ದೇವೇಗೌಡರು ಮತ್ತೆ ಪಂಚೆ ಎತ್ತಿ ಕಟ್ಟಿ ಬೀದಿಗಿಳಿದಿದ್ದಾರೆ. ಯಡ್ಯೂರಪ್ಪನವರ ಸರ್ಕಾರವನ್ನು ಉರುಳಿಸಿಯೇ ಸಿದ್ಧ ಎಂದು ತೊಡೆ ತಟ್ಟಿ ನಿಂತಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡಿರುವ ಅಖಾಡ ಖೇಣಿಯ ನೈಸ್ ಹಗರಣ! ಪ್ರತಿ ಬಾರಿ ಗೌಡರು ಹೀಗೆ ಪಂಚೆ ಎತ್ತಿ ಕಟ್ಟಿದಾಗಲೂ ಆಜುಬಾಜಿನಲ್ಲೊಂದು ಚುನಾವಣೆಯಿರುತ್ತದೆ, ಅದರಲ್ಲಿ ಜೆಡಿಎಸ್ ಗೆಲ್ಲುತ್ತದೆ, ಹಾಗಾಗಿ ಗೌಡರು ಸಾಂಧರ್ಭಿಕ ಸಮರ ವೀರರು ಎನ್ನುತ್ತಾರೆ ನಮ್ಮ ಮೈಸೂರಿನ ಸಂಸದ ಎಚ್. ವಿಶ್ವನಾಥರು. ಆದರೆ ಈ ಬಾರಿ ಗೌಡರು ಸುಮ್ಮನೆ ಚುನಾವಣೆಗೆ ಪಂಚೆ ಎತ್ತಿ ಕಟ್ಟಿದ ಹಾಗಿಲ್ಲ. ಸುಮಾರು ವರ್ಷಗಳಿಂದ ಅವರು ಎದುರು ಹಾಕಿಕೊಂಡು ಬಂದಿರುವ ನೈಸ್ ಖೇಣಿಯ ಎಲ್ಲ ಅಕ್ರಮಗಳನ್ನು ಜನತಾ ನ್ಯಾಯಾಲಯದ ಮುಂದಿರಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಹಾಕ್ಯಾಟದ ಭರದಲ್ಲೇ ತಾನೊಬ್ಬ ಮಾಜಿ ಪ್ರಧಾನಿ, ನಾಡಿನ ಹಿರಿಯ ರಾಜಕಾರಣಿ ಎಂಬುದನ್ನೂ ಮರೆತು ಯಡ್ಯೂರಪ್ಪನವರನ್ನು ಆಡಬಾರದ ಮಾತುಗಳನ್ನೆಲ್ಲಾ ಆಡಿ, ರಾಡಿ ಮಾಡಿಕೊಂಡು ಬಿಟ್ಟರು. ನಂತರ ಯಡ್ಯೂರಪ್ಪನವರೊಡನೆ ಸಂವಾದವೂ ಆಯಿತು, ಹೋರಾಟವೂ ಮುಂದುವರೆದಿದೆ.

ನೈಸ್ ಎಂಬುದು ಅಂದಾಜು 30 ಸಾವಿರ ಕೋಟಿಗಳ ಸ್ಕ್ಯಾಮೆಂದೂ, ಇದು ಸತ್ಯಂ ಹಗರಣಕ್ಕಿಂತಲೂ ದೊಡ್ಡ ಹಗರಣವೆಂದೂ, ಅಶೋಕ್ ಖೇಣಿ ದಾವೂದ್ಗಿಂತಲೂ ದೊಡ್ಡ ಡಾಕು ಎಂದೂ ದೇವೇಗೌಡರು ಹೇಳುತ್ತಿದ್ದಾರೆ. ಯಡ್ಯೂರಪ್ಪನವರನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ನೈಸ್ ಹೋರಾಟವನ್ನು ದೇವೇಗೌಡರು ರಾಜ್ಯಾದ್ಯಂತ ವಿಸ್ತರಿಸಿ ಎಲ್ಲ ಭೂ ಒತ್ತುವರಿಗಳ ವಿರುದ್ಧ ರೈತರಿಗೆ ದನಿಯಾಗುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸದ್ಯಕ್ಕಂತೂ ರಾಜ್ಯದಲ್ಲಿ ಪ್ರಚಲಿತದಲ್ಲಿರುವ ಇಶ್ಯೂ ಎಂದರೆ ಅದು ಈ ಬಿಎಂಐಸಿಪಿ ವಿವಾದವೇ. ಬೆಂಗಳೂರಿನ ಪುರಭವನದಲ್ಲಿ ರಾಜಕಾರಣಿಗಳು ಕೂಡೋ ದಿನಾನೂ ಹತ್ತಿರಾದಂತಿದೆ. ಬರುವ ದಿನಗಳಲ್ಲಿ ನೈಸ್ ವಿವಾದವೂ ಮತ್ತಷ್ಟು ಗರಿಗೆದರುವುದು ಗ್ಯಾರೆಂಟಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ ಸೇರಿಸಲ್ಪಟ್ಟಿರುವ ನಗರದ ಹೊರವಲಯದ ಪ್ರದೇಶಗಳಲ್ಲಿ ಇದೇ ಬರ್ನಿಂಗ್ ಇಶ್ಯೂ.

ನೀವು ಸಾಮಾನ್ಯರನ್ನ ಯಾರನ್ನೇ ನೈಸ್ ಬಗ್ಗೆ ಕೇಳಿ ನೋಡಿ, ಇಲ್ಲ ಅದು ದೇವೇಗೌಡರು ಅಡ್ಡ ಹಾಕಿ ಕೂತಿರೋ ಬೆಂಗಳುರಿನ ಅಭಿವೃದ್ಧಿಯ ಹೆಬ್ಬಾಗಿಲಿನಂತಲೋ, ಇಲ್ಲ ಯಡ್ಯೂರಪ್ಪನವರ ಲೇಟೆಸ್ಟ್ ಹಗರಣವೆಂತಲೋ, ಸ್ವಲ್ಪ ಬಲ್ಲವರಾದರೆ ಹೈಟೆಕ್ ಕೃಷ್ಣರ ಹೈಟೆಕ್ ದರೋಡೆಯೆಂತಲೋ ಇಲ್ಲ ರೈತರ ಭೂಮಿಗೆ ಕೈ ಹಾಕಿ ಕೂತಿರುವ ರಿಯಲ್ ಎಸ್ಟೇಟ್ ಹೆಬ್ಬಾವು ಅಂತಲೋ ಇನ್ನೂ ಏನೇನೋ....ಅಂತ ವಿವರಿಸುತ್ತಾರೆ. ನೈಸ್ ವಾದ-ವಿವಾದಗಳು ಎಷ್ಟು ಜಟಿಲ ಕಾನನವಾಗಿದೆಯೆಂದರೆ ನಮ್ಮಲ್ಲಿ ಬಹುತೇಕರಿಗೆ ಅದರ ಪೂರ್ಣ ವಿವರಗಳು ಗೊತ್ತೇ ಇಲ್ಲ. ಅದಕ್ಕೆ ಕಾರಣಗಳು ಇಲ್ಲದಿಲ್ಲ. ಒಂದು - ಹಗರಣದ ಸಂಕೀರ್ಣತೆ ಮತ್ತು ಕಾಲದಿಂದ ಕಾಲಕ್ಕೆ ಊಸರವಳ್ಳಿಯಂತೆ ಅದು ಬಣ್ಣ ಬದಲಾಯಿಸುತ್ತಿರುವುದು, ಎರಡು - ಯೋಜನೆ ಪೂರಾ ರಾಜಕೀರಣಗೊಂಡು ಅದರ ಎಲ್ಲ ಇಂಟರ್ಪ್ರೆಟೇಷನ್ಗಳೂ ರಾಜಕೀಯದ ಸಮಯಸಾಧಕ ಲೆನ್ಸ್ನ ಮೂಲಕವೇ ನಡೆಯುತ್ತಿರುವುದು. ಜನ ಯಾರನ್ನೂ ನಂಬದಾಗಿದ್ದಾರೆ. ದೇವೇಗೌಡರ ಹೋರಾಟಕ್ಕೆ ರಾಜಕೀಯ ಸ್ವಾರ್ಥವನ್ನು ಆರೋಪಿಸುವ ಜನ, ಅದೇ ಕಾಲಕ್ಕೆ ಯಡ್ಯೂರಪ್ಪನವರ ಕ್ರಮಕ್ಕೆ 'ದುರದ್ದೇಶ'ಗಳನ್ನು ಆರೋಪಿಸುತ್ತಾರೆ. ಕಳೆದ ಹದಿನೈದು ವರ್ಷಗಳಿಂದ ಚಚರ್ಿತವಾಗುತ್ತಿದ್ದರೂ ಈ ಇಶ್ಯೂನ ಆಳ ಅಗಲ ಇನ್ನೂ ಬಹುಜನರ ಅರಿವಿಗೆ ಬಂದಿಲ್ಲ. ಎಲ್ಲವೂ ಗೊಂದಲಪುರ.

ಹೌದು ಬಿಎಂಐಸಿಪಿ ಅಂದರೆ ಏನು? ಇದರ ಮೂಲ ಇರುವುದೆಲ್ಲಿ? ಇದು ಎಷ್ಟರ ಮಟ್ಟಿಗೆ ಬೆಂಗಳೂರಿನ ಅಭಿವೃದ್ಧಿಗೆ ಪೂರಕ ಮತ್ತು ಅನಿವಾರ್ಯ? ಇಡಿಯ ಯೋಜನೆ ಮೂಲದಿಂದಲೇ ಗೋಲಮಾಲಾ? ಹಾಗಾದರೆ ಇಷ್ಟು ವರ್ಷಗಳ ಕಾಲ ಬಂದ ಎಲ್ಲಾ ಸರ್ಕಾರಗಳೂ ಆತನೊಂದಿಗೆ ಕೈಜೋಡಿಸದ್ದವಾ? ಈಗಿನ ಸರ್ಕಾರ?....ಹತ್ತಾರು ಪ್ರಶ್ನೆಗಳು. ದೇವೇಗೌಡ ಮತ್ತು ಯಡ್ಯೂರಪ್ಪನವರ ಗುದ್ದಾಟವನ್ನೇ ತೆಗೆದುಕೊಳ್ಳಿ. ಇಲ್ಲೇ ವಿರೋಧಾಭಾಸಗಳಿವೆ. ಅಸಲಿಗೆ ಬಿಎಂಐಸಿ ಯೋಜನೆಯನ್ನು ಪ್ರಾರಂಭಿಸಿದವರೆ ಅಂದು ಮುಖ್ಯಮಂತ್ರಿಯಾಗಿದ್ದ ದೇವೇಗೌಡರು. ಅಂದಿನಿಂದಲೂ ಯಡ್ಯೂರಪ್ಪನವರು ವಿರೋಧ ಪಕ್ಷದ ಸಾಲಿನಲ್ಲಿ ಕೂತು ಈ ಯೋಜನೆಯ ವಿರುದ್ಧ ದೊಡ್ಡ ದನಿಯಲ್ಲಿ ಹೋರಾಟ ಮಾಡಿಕೊಂಡು ಬಂದವರು. ಇದನ್ನು 1997ರಲ್ಲೇ ಸುಮಾರು 10 ಸಾವಿರ ಕೋಟಿಗಳ ಸ್ಕ್ಯಾಮು ಅಂತ ಜರಿದವರು ಯಡ್ಯೂರಪ್ಪ! ಇಂದು ಅದೇ ದೇವೇಗೌಡರು ಯಡ್ಯೂರಪ್ಪನವರು ಖೇಣಿ ಪರ ಎಂದು ಅವರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ! ಆದರೆ ಗೌಡರ ಹೋರಾಟ ಸಮರ್ಥನೀಯವೆಂಬುದು ಈ ಇಶ್ಯೂವನ್ನು ಮತ್ತಷ್ಟು ಜಟಿಲವಾಗಿಸುತ್ತದೆ. ಗೌಡರ ನಂತರ ಬಂದ ಸರ್ಕಾರಗಳು ಮಾಡಿದ್ದೇನು? ಈ ವಿಷಯದಲ್ಲಿ ಯಡ್ಯೂರಪ್ಪನವರ ತಪ್ಪಾದರೂ ಏನು? ಉತ್ತರಗಳು ಅಷ್ಟು ಸರಳವಲ್ಲ.

ಈ ಯೋಜನೆಗೆ ಶ್ರೀಕಾರ ಹಚ್ಚಿದ ದೇವೇಗೌಡರ ಬಾಯಲ್ಲೇ ಆ ಸಂದರ್ಭವನ್ನು ಕೇಳುವುದಾದರೆ - "ಸಿಎಂ ಆಗೋದಿಕ್ಕೆ ಮೊದಲು ನಾನು ಪಿಡಬ್ಲೂಡಿ ಮಿನಿಸ್ಟ್ರಾಗಿದ್ದೆ. ಆಗಿನ್ನೂ ಬೆಂಗಳೂರು - ಮೈಸೂರು ಹೆದ್ದಾರಿ ಯೋಜನೆಯ ಚಿಂತನೆ ನಡೆದಿರಲಿಲ್ಲ. ಆಗೊಂದು ದಿನ ಬಿಡದಿ ಬಳಿ ಆಕಸಿಡೆಂಟ್ ಆಗಿ ಹನ್ನೆರಡು ಜನ ಶಾಲಾ ಮಕ್ಕಳು ಮೃತಪಟ್ಟರು. ಆ ಜಾಗಕ್ಕೆ ಕೆ.ಸಿ.ರೆಡ್ಡಿ ಅವರನ್ನು ಕರೆದುಕೊಂಡು ಹೋಗಿದ್ದೆ. ಅಂಕು ಡೊಂಕಾಗಿದ್ದ ರಸ್ತೆಯನ್ನು ನೇರ ಮಡಿ, ಎರಡು ಪಥಗಳಾಗಿ ಮೇಲ್ದಜರ್ೆಗೇರಿಸಲು ಚಿಂತನೆ ನಡೆಸಿದವಿ. ಆ ಕಾಲಕ್ಕೆ ವಾಹನ ದಟ್ಟಣೆ 12 ಸಾವಿರದಷ್ಟಿತ್ತು. 2020ನೇ ವರ್ಷಕ್ಕೆ ಅದು 50 ಸಾವಿರದಷ್ಟಾಗಬಹುದು. ಹೀಗಾಗಿ ನಾಲ್ಕು ಪಥಗಳ ರಸ್ತೆ ನಿರ್ಮಿಸಬೇಕು ಎಂದು ನಿರ್ಧರಿಸಿ ಟೆಂಡರ್ ಕರೆಯಲಾಗಿತ್ತು. ಐದು ಕಂಪೆನಿಗಳು ಟೆಂಡರ್ ಪಡೆಯಲು ಮುಂದೆ ಬಂದವು. ಆದರೆ ಅಷ್ಟರಲ್ಲಿ ನಾನು ಯಾವುದೋ ಕಾರಣಕ್ಕೆ ಹೆಗಡೆಯವರ ಕ್ಯಾಬಿನೆಟ್ಟಿನಿಂದ ಹೊರಬಂದೆ. ಯೋಜನೆ ಅಲ್ಲಿಗೇ ನೆನೆಗುದಿಗೆ ಬಿತ್ತು. ಮುಂದೆ ನಾನು ಮುಖ್ಯಮಂತ್ರಿಯಾದಾಗ ಹಲವು ಹೂಡಿಕೆದಾರರು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದರು. ಆಗಲೇ ಈ ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಗೆ ಚಾಲನೆ ಸಿಕ್ತು. ಅಮೆರಿಕಾದ ವಿಎಚ್ಬಿ, ಸ್ಯಾಬ್ ಇಂಜಿನಿಯರಿಂಗ್ ಮತ್ತು ಭಾರತದ ಕಲ್ಯಾಣಿ ಗ್ರೂಪ್ಗಳನೊಳಗೊಂಡ ಕಂಪೆನಿಗಳ ಒಕ್ಕೂಟದೊಂದಿಗೆ ಒಪ್ಪಂದ ಆಯಿತು." ಎನ್ನುತ್ತಾರೆ.

ಹೀಗೆ ಬೆಂಗಳೂರಿನ ದಟ್ಟಣೆಯನ್ನು ಕಡಿತಗೊಳಿಸುವ ಸದಾಶಯದೊಂದಿಗೆ ಪ್ರಾರಂಭವಾದ ಒಂದು ಉತ್ತಮ ಅಭಿವೃದ್ಧಿ ಪೂರಕ ಯೋಜನೆ ಈ ಬಿಎಂಐಸಿಪಿ - ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಕ್ಸ್ಪ್ರೆಸ್ವೇ ಪ್ರಾಜೆಕ್ಟ್! ಇದು 1995ರ ಕಾಲಕ್ಕಂತೂ ಅತ್ಯಂತ ಮಹತ್ವಾಕಾಂಕ್ಷಿಯೂ ರೆವಲ್ಯೂಷನರಿಯೂ ಆದ ಯೋಜನೆಯಾಗಿತ್ತು. ದೇಶ ಆಗ ತಾನೆ ಆರ್ಥಿಕ ಸಂಕಷ್ಟದಿಂದ ಹೊರಬರಲಾರಂಭಿಸಿತ್ತು. ಆರ್ಥಿಕ ಉದಾರೀಕರಣವನ್ನು ಜನ ಇನ್ನೂ ಸಂಪೂರ್ಣ ಒಪ್ಪದಿದ್ದರೂ ಕೊಂಚ ಕೊಂಚವಾಗಿ ಎಣ್ಣೆ ತಲೆಗಿಳಿಯುತ್ತಿತ್ತು. ಇಂತಹ ಕಾಲ ಘಟ್ಟದಲ್ಲಿ ಒಂದು ಪ್ರೈವೇಟು ಕಂಪೆನಿಗೆ ರಸ್ತೆ ಪ್ರಾಜೆಕ್ಟನ್ನೂ ನೀಡುವುದು, ಅದೂ 30 ವರ್ಷಗಳ ಕಾಲ ಅವರು ಅದನ್ನು ನಿಯಂತ್ರಿಸಿ, ಅದರ ಮೇಲೆ ಓಡಾಡಬೇಕೆಂದರೆ ಅದಕ್ಕೆ ಶುಲ್ಕ ಕಟ್ಟಬೇಕೆನ್ನುವ ಕಾನ್ಸೆಪ್ಟೇ ಆಗ ಹೊಸತು. ಇರಲಿ.

ಬಿಎಂಐಸಿಪಿ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇಡೀ ರಸ್ತೆ ಬೆಂಗಳೂರು ನಗರವನ್ನು ಹೆಬ್ಬಾವಿನಂತೆ ಸುತ್ತುವರೆದಿದೆ. ನಾಲ್ಕು ಚತುಷ್ಪಥಗಳ 6ಕ್ಕೇರಸಿಬಹುದಾದ ಎಕ್ಸ್ಪ್ರೆಸ್ ವೇ, ಲಿಂಕ್ ರೋಡ್ಗಳು, ಪೆರಿಫೆರಲ್ ರಸ್ತೆ, ಅಪಘಾತ ಸಂಭವಿಸಿದರೆ ಚಿಕಿತ್ಸೆಗೆ ಆಸ್ಪತ್ರೆಗಳು, ಜಾನುವಾರು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಂಡರ್ಪಾಸ್ಗಳು, ಓವರ್ ಬ್ರಿಡ್ಜ್ಗಳು, 6 ಪಥದ ರಸ್ತೆಯಲ್ಲಿ ಮುಖ್ಯ ನಾಲ್ಕು ಪಥಗಲನ್ನು ಕಾಂಕ್ರೀಟಿನಲ್ಲಿಯೂ ಮಿಕ್ಕ ಎರಡು ಸವರ್ೀಸ್ ರೊಡ್ಗಳನ್ನು ಢಾಂಬರಿನಲ್ಲಿಯೂ ನಿರ್ಮಿಸುವುದು, ಬೆಂಗಳೂರು ಮೈಸೂರಿನ ನಡುವೆ 5 ಸುಜ್ಜಿತ ಟೌನ್ಷಿಪ್ಗಳು..ಅಬ್ಬಬ್ಬಾ....ಈ ಬಿಎಂಐಸಿಪಿಯ ಒಟ್ಟು ಉದ್ದ 111 ಕಿಲೋಮಿ.ಗಳು. ಇದು ಬೆಂಗಳುರು - ಮೈಸೂರು ನಡುವಿನ ಎಕ್ಸ್ಪ್ರೆಸ್ವೇನ ಉದ್ದ. ಇನ್ನು 41 ಕಿಲೋಮೀ.ಗಳ ಬೆಂಗಳೂರನ್ನು ಸುತ್ತುವರಿಯುವ ಪೆರಿಫೆರಲ್ ರೋಡ್, 9.1ಕಿಲೋಮೀ.ಗಳ ಲಿಂಕ್ ರೋಡ್, 12 ಕಿಲೋಮೀ.ಗಳ ಬಿಡದಿ ಎಕ್ಸ್ಪ್ರೆಸ್ ವೇ, ಲಿಂಕ್ ರೋಡ್, ಹೊಸೂರು ರೋಡ್ ಮತ್ತು ತುಮಕೂರು ರೋಡ್ ಬಳಿ ಕ್ಲೋವರ್ ಎಲೆಯಾಕಾರದಲ್ಲಿ ಒಂದು ಎಕ್ಸಛೇಂಜ್ ರೋಡ್. ಇವಿಷ್ಟೂ ರಸ್ತೆಯ ವಿಷಯವಾದರೆ, ಬೆಂಗಳೂರು ಮೈಸೂರಿನ ನಡುವೆ 5 ಆಧುನಿಕ ಸುಸಜ್ಜಿತ ಟೌನ್ಷಿಪ್ಗಳನ್ನು ನಿರ್ಮಿಸುವ ಕೆಲಸವೂ ಇದೇ ಪ್ರಾಜೆಕ್ಟಿನಲ್ಲಿ ಅಡಕವಾಗಿದೆ. ಟೋಲ್ ರಸ್ತೆಗಾಗಿ 5119 ಎಕೆರೆ ಭೂಮಿಯನ್ನೂ ಮತ್ತು 5 ಟೌನ್ಷಿಪ್ಗಳಿಗಾಗಿ 13,194 ಎಕೆರೆಗಳನ್ನು ಈ ಕಂಪೆನಿಗೆ ನೀಡಬೇಕೆಂದೂ, ಈ ಕಂಪೆನಿಯು ರೈತರಿಂದ ನೇರವಾಗಿ ಮಾರುಕಟ್ಟೆ ಬೆಲೆಗೆ ಈ ಭೂಮಿಯನ್ನು ಕೊಳ್ಳಬೇಕೆಂದೂ, ರಸ್ತೆ ನಿಮಿಸಿದ ನಂತರ 30 ವರ್ಷಗಳವರೆಗೆ ಕಂಪೆನಿ ಈ ರಸ್ತೆಯ ನಿರ್ವಹಣೆಯನ್ನು ಮಾಡಬಹುದು, ಟೋಲ್ ಮೂಲಕ ತಾನು ಹಾಕಿದ್ದ ಬಂಡವಾಳವನ್ನು ಹಿಂಪಡೆದು ನಂತರ ಸರ್ಕಾರಕ್ಕೆ ಹಸ್ತಾಂತರಿಸಬೇಕೆಂಬುದು ಕರಾರು. ಈ ಇಡೀ ಯೋಜನೆಯನ್ನು ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಸಿಟಿ ಆಫ್ ಕೊಲಂಬಿಯಾದ ಮಾದರಿಯಲ್ಲಿ ಮಾಡಲಾಗಿದೆ. ಈ ಒಪ್ಪಂದ ಆಗಿರುವುದೂ ಅಮೆರಿಕದ ಮೆಸ್ಸಾಚುಟಸ್ ಪ್ರಾಂತ್ಯದ ಗವರ್ನರ್ನ `ದಿವ್ಯ ಸಾನ್ನಿಧ್ಯ'ದಲ್ಲಿ!

ಈ ಪ್ರಾಜೆಕ್ಟಿನಿಂದ ಬೆಂಗಳೂರು - ಮೈಸೂರುಗಳಿಗಾಗುವ ಲಾಭವಾದರೂ ಏನು? ಈ ಎಕ್ಸಪ್ರೆಸ್ ವೇ ಬೆಂಗಳೂರು ಹಾಗೂ ಕರ್ನಾಟಕದ ಮೂರು ಪ್ರಮುಖ ಔದ್ಯಮಿಕ ಪ್ರದೇಶಗಳನ್ನು ಇಂಟರ್ಲಿಂಕ್ ಮಾಡುತ್ತದೆ. ಒಂದು ಕಡೆ ಸಾಫ್ಟವೇರ್ನ ಕಾಶಿ ಎಲೆಕ್ಟ್ರಾನಿಕ್ ಸಿಟಿ, ಇನ್ನೊಂದೆಡೆ ನಮ್ಮ ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಬಿಡದಿ ಮತ್ತು ದಕ್ಷಿಣ ಬೆಂಗಳೂರು! ಒಂದೊಂದರ ನಡುವಿನ ಪ್ರಯಾಣ ಸಮಯ ಕೇವಲ 10-15 ನಿಮಿಷಗಳಿಗೆ ಇಳಿದುಬಿಡುತ್ತದೆ. ಇನ್ನು ಎಕ್ಸ್ಪ್ರೆಸ್ ವೇ ಪೂರ್ಣಗೊಂಡ ನಂತರ ಹಳೇ ಮೈಸೂರು ಪ್ರಾಂತ್ಯದ ಎರಡು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಬೆಂಗಳೂರು ಮತ್ತು ಮೈಸೂರಿನ ನಡುವಿನ ಪ್ರಯಾಣ ಸಮಯ ಕೇವಲ ಒಂದು ಘಂಟೆ! ಸದ್ಯ 3 ಘಂಟೆ. ಎಲ್ಲೇ ಆಗಲೀ ಉದ್ಯಮಗಳು ಬೆಳೆಯಬೇಕೆಂದರೆ ರಸ್ತೆ ಸಂಪರ್ಕ ಅದಕ್ಕೆ ಪೂರಕವಾಗಿರಬೇಕು. ಆ ದೃಷ್ಟಿಯಿಂದ ಈ ಯೋಜನೆ ಬೆಂಗಳೂರು - ಮೈಸೂರು ಎರಡೂ ನಗರಗಳ ಅಭಿವೃದ್ಧಿಗೆ ಅವಶ್ಯವೂ ಹೌದು.

ಆದರೆ ಇಂದೇನಾಗಿದೆ? 1995ರ ನಂತರ ಈ ಯೋಜನೆಯ ಪ್ರತಿ ಹೆಜ್ಜೆಯೂ ಸಾರ್ವಜನಿಕ ಹಿತದ ವಿರುದ್ಧದ ನಡೆಯೇ! ಬೆಂಗಳೂರು ಸುತ್ತಮುತ್ತಲಿನ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಆದರೆ ರೈತ ನಿಗೆ ನೆಮ್ಮದಿಯೆಂಬುದು ಮರೀಚಿಕೆಯಾಗಿದೆ. ಆತನ ಭೂಮಿ ನೈಸ್ ಹೆಸರಿನಲ್ಲಿ `ಕಬ್ಜಾ' ಆಗಿಬಿಟ್ಟಿದೆ. ರೈತ ಅಕ್ಷರಶಃ ಬೀದಿಗೆ ಬಿದ್ದಿದ್ದಾನೆ, ಕೈಲಿ ಚಿಕ್ಕಾಸೂ ಇಲ್ಲದೆ! ರಸ್ತೆಗೆ, ಟೌನ್ಷಿಪ್ಗೆ ಎಲ್ಲ ಸೇರಿ ಬೇಕಿರುವುದು ಒಟ್ಟು 18313 ಎಕೆರೆ ಭೂಮಿ. ಆದರೆ ಇಂದು ಖೇಣಿ ಕೈಲಿ ಸುಮಾರು 29 ಸಾವಿರ ಎಕರೆ ಭೂಮಿಯಿದೆ! ಆತ ಈ ಪ್ರಾಜೆಕ್ಟ್ಗಾಗಿ ತನ್ನ ಪಾಕೆಟ್ನಿಂದ ಒಂದು ಬಿಡಿಗಾಸನ್ನೂ ಹಾಕಿಲ್ಲ, ಆತ ಬರಿಗೈಯ ಫಕೀರ! ಆದರೆ ಇಂದು ಸಾವಿರಾರು ಎಕರೆಗಳ ಚಿನ್ನದ ಬೆಲೆಯ ಬಂಗಾರದ ಭೂಮಿಯ ಚಕ್ರಾಧಿಪತ್ಯ! ಎಲ್ಲವೂ ನೈಸ್ನ ಹೆಸರಿನಲ್ಲಿ. ಹೇಗೆ ಸಾರ್ವಜನಿಕ ಹಿತದ ಸದಾಶಯದೊಂದಿಗೆ ಪ್ರಾರಂಭವಾದ ಒಂದು ಅಭಿವೃದ್ಧಿ ಪರ ಯೋಜನೆ ನಮ್ಮನ್ನಾಳುವವರ ಕೈಗೊಂಬೆಯಾಗಿ ಇಂದು ಒಂದು ರಿಯಲ್ ಎಸ್ಟೇಟ್ ಸ್ಕ್ಯಾಮಿನ ಮಟ್ಟಕ್ಕೆ ಬಂದು ನಿಂತಿದೆ ಎನ್ನುವ ಸುದೀರ್ಘ ಕಥೆಯು ನಮ್ಮ ಇಂದಿನ ಅನೇಕ ದುರಂತಗಳ ಪ್ರತಿಫಲನವೇ ಆಗಿದೆ.

ನೈಸ್ ಹುತ್ತವನ್ನೊಮ್ಮೆ ತಡುಕಿದರೆ ಸಾಕು ಹತ್ತಾರು ಸಂಧೀಗ್ಧ ಪ್ರಶ್ನೆಗಳು ನಮ್ಮ ಮುಂದೆ ಬೃಹದಾಕಾರವಾಗಿ ಬಂದು ನಿಲ್ಲುತ್ತವೆ. ಉತ್ತರಗಳಿಗಾಗಿ ಇಡಿಯ ನೈಸ್ ಪುರಾಣವನ್ನೊಮ್ಮೆ ವಾಚಿಸಬೇಕಾಗುತ್ತದೆ! ಈ ನೈಸ್ ಪುರಾಣದಲ್ಲಿ ಅನೇಕ ವಿಲನ್ಗಳು, ಸಂತ್ರಸ್ತರ ಕರುಣಾಜನಕ ಕಥೆಗಳು, ಖೇಣಿ ಎಂಬ ದರೋಡೆಕೋರನೂ ಬರುತ್ತಾನೆ. ಈ ಪುರಾಣದಲ್ಲಿ ಹೀರೋ ಪಾತ್ರದ ಪ್ರವೇಶ ಇನ್ನೂ ನಡೆದಿಲ್ಲದಿರುವುದು ಜನರ ದುರ್ದೈವ! ಈಗ ದೇವೇಗೌಡರು ನೈಸ್ ವಿರುದ್ಧ ಹೋರಾಟಕ್ಕೆ ಪಂಚೆ ಎತ್ತಿ ಕಟ್ಟಿದ್ದಾರೆ. ಅದರ ಹಿಂದೆ ಒಂದು ರಾಜಕೀಯ ಸ್ವಾರ್ಥವಿದೆ, ಇಲ್ಲವೆಂದಲ್ಲ. ನಮಗೆ ಅವರ ರಾಜಕೀಯ ಸ್ವಾರ್ಥದ ಲೆಕ್ಕಾಚಾರಗಳು ಬೇಕಿಲ್ಲ. ಅವರು ಒಂದು ಜ್ವಲಂತ ಸಮಸ್ಯೆಯನ್ನು ಜನರ ಮುಂದಿಡುತ್ತಿದ್ದಾರೆ. ರೈತರ ಶೋಷಣೆಯನ್ನು, ಸಾವಿರಾರು ಕೋಟಿ ರೂ.ಗಳ ಹಗರಣವನ್ನು ಎಳೆಎಳೆಯಾಗಿ ಬಯಲು ಮಾಡುತ್ತಿದ್ದಾರೆ. ನಮ್ಮ ಗಮನ ಆ ಇಶ್ಯುವಿನ ಮೇಲೆ. ಅವರ ರಾಜಕೀಯ ಸ್ವಾರ್ಥದ ಲೆಕ್ಕಾಚಾರಗಳಲ್ಲಿ ಇಶ್ಯೂ ಗೌಣವಾಗಬಾರದು.

ಈ ನಿಟ್ಟಿನಲ್ಲಿ ನಿಮ್ಮ `ಭಾನುವಾರ' ದಿಟ್ಟ ಹೆಜ್ಜೆ ಇಟ್ಟಿದೆ. ಈ ವಾರದಿಂದ ಪ್ರಾರಂಭವಾಗಿ ಇಡಿಯ ನೈಸ್ ಪುರಾಣವನ್ನು ನಿಮ್ಮ ಮುಂದಿಡಲಿದೆ. ನಾವು ಅತ್ತ ಗೌಡರ ಬಾಲಂಗೋಚಿಗಳೂ ಅಲ್ಲ, ಇತ್ತ ಯಡ್ಯೂರಪ್ಪನವರ ಆಸ್ಥಾನದವರೂ ಅಲ್ಲ, ಮಧ್ಯೆ ಬಂದ ಕೃಷ್ಣರ ವಾಲಗದವರೂ ಅಲ್ಲ. ಇದರಲ್ಲಿ ನಮ್ಮ ಆಸಕ್ತಿ ಒಂದೇ - ಒಂದು ಸಾರ್ವಜನಿಕ ಹಿತದ ಯೋಜನೆಯೊಂದು ಖೇಣಿ ಎಂಬ ಡಕಾಯಿತ ಮತ್ತು ದಗಾಕೋರ ರಾಜಕಾರಣಿಗಳ ಸಹಯೋಗದಲ್ಲಿ ಹೇಗೆ ಡಿಜೆನರೇಟ್ ಆಗುತ್ತಾ ಇಂದು ಬೆಂಗಳೂರಿನ ಸುತ್ತ ಮುತ್ತಲಿನ ಪ್ರದೇಶಗಳ ರೈತರ ಬದುಕನ್ನು ಗುಳುಂ ಮಡುತ್ತಿರುವ ಹೆಬ್ಬಾವಾಗಿದೆ, ಸಾವಿರಾರು ಕೋಟಿ ರೂ.ಗಳ `ಅಗಣಿತ' ಹಗರಣವಾಗಿದೆ ಎಂಬುದನ್ನು ನಮ್ಮ ಓದುಗರಿಗೆ ಎಳೆಎಳೆಯಾಗಿ ಬಿಡಿಸಿಡುವುದು. ಇದರಲ್ಲಿ ನಾವು ದಾಖಲೆ ಸಮೇತ ಫ್ಯಾಕ್ಟ್ಸ್ ಅನ್ನು ಮಾತ್ರ ಪ್ರಸ್ತಾಪಿಸುತ್ತೇವೆಯೇ ಹೊರತು ಯಾವುದೋ ಶಂಖದ ತೀರ್ಥವನ್ನಲ್ಲ. ಬಿಬಿಎಂಪಿ ಚುನಾವಣೆಗಳು ಕಣ್ಣಳತೆಯಲ್ಲಿರುವ ಈ ಅವಧಿಯಲ್ಲಿ `ಭಾನುವಾರ'ದ ಸಂದರ್ಭೋಚಿತ ಪ್ರಯತ್ನ - ನೈಸ್ ಪುರಾಣಂ!

One thoughts on “ನೈಸ್ ಪುರಾಣ - 1

Unknown said...

ಒಳ್ಳೆಯ ಪ್ರಯತ್ನ. ಸಾಕಷ್ಟು ವಿವರವಾಗಿ ಆದರೆ ಸರಳವಾಗಿ ನೈಸ್ ಪುರಾಣದ ಪ್ರಾರಂಭ ಮಾಡಿದ್ದೀರಿ. ನಿಮಗೆ ನಮ್ಮ ಬೆಂಬಲವಿದೆ. ಮುಂದಿನ ಸಂಚಿಕೆಗೆ ಎದುರು ನೋಡುತ್ತಿದ್ದೇನೆ.

Proudly powered by Blogger
Theme: Esquire by Matthew Buchanan.
Converted by LiteThemes.com.