ಭಾರತದ ಹಾಕಿ - ತಿಪ್ಪೆಗೆ ಹಾಕಿ!!!!!?

ಈ ಬಾರಿಯ ಹಾಕಿ ವಿಶ್ವಕಪ್ ದೆಹಲಿಯಲ್ಲಿ ನಡೆಯುತ್ತೆ ಅಂದಾಗಲೇ ಏನೋ ರೋಮಾಂಚನ. ಭಾರತದ ಹಾಕಿ ಚರಿತ್ರೆಯ ಸುವರ್ಣ ಘಟ್ಟಗಳು ನೆನಪಿಗೆ ಬಂದು ಏನೋ ಒಂದು ರೀತಿಯ ಖುಷಿ, ಬೆಟದಷ್ಟು ನಿರೀಕ್ಷೆ. ಆದರೆ ಎಲ್ಲವೂ ಮಣ್ಣುಪಾಲಾಗಿದೆ. ಕಳೆದ 30 ವರ್ಷಗಳಂತೆ ಭಾರತ ಈ ಬಾರಿಯ ವಿಶ್ವಕಪ್ನಲ್ಲಿ ತಾನು ಟಾಪ್ 8ನಲ್ಲಿ ಉಳಿಯುತ್ತೇನಾ ಇಲ್ಲ, ಅದಕ್ಕೂ ಮೇಲ್ಪಟ್ಟ ರಾನ್ಕಿಂಗಾ ನಮ್ಮದು? ಅಂತ ಕಾದು ಕುಳಿತಿರುವ ಕರುಣಾಜನಕ ಸ್ಥಿತಿ. ಈ ಬಾರಿ ದೆಹಲಿಯಲ್ಲಿ ವಿಶ್ವಕಪ್ ನಡೆಯುವುದರಿಂದ ದೇಶದಲ್ಲಿ ಹಾಕಿಗೆ ಹೆಚ್ಚು ಪ್ರಚಾರ, ಪ್ರೋತ್ಸಾಹ ಸಿಗಲಿದೆ. ನಮ್ಮವರು ಹೋಂಗ್ರೌಂಡ್ನಲ್ಲಿ ಆಡುತ್ತಾರಾದ್ದರಿಂದ ಎಲ್ಲೋ ಮನಸ್ಸಿನ ಮೂಲೆಯಲ್ಲೊಂದು ಗೆಲುವಿನ ಆಶಾದೀಪ ಸಣ್ಣಗೆ ಬೆಳಗುತ್ತಿತ್ತು. ಭಾರತ ಪಾಕಿಸ್ತಾನವನ್ನು 4-1 ಗೋಲ್ಗಳ ಅಂತರದಿಂದ ಬಗ್ಗು ಬಡಿದಾಗ ಈ ಸಣ್ಣ ಆಶಾದೀಪ ಜ್ಯೋತಿಯಾಗಿ ಬೆಳಗಿತು. ಓಹ್!..ಇಂಡಿಯನ್ ಹಾಕಿ ಈಸ್ ಬ್ಯಾಕ್ ಇನ್ ಫಾರ್ಮ್ ಅಂತ ಉದ್ಗರಿಸಿದವರೆಷ್ಟೋ? ಆದರೆ ಮುಂದಿನ ಎಲ್ಲಾ ಪಂದ್ಯಗಳಲ್ಲೂ ನಾವು ಕಂಡದ್ದು ಭಾರತ ಹಾಕಿ ತಂಡದ ಎಡೆಬಿಡದ ಅವನತಿ. ಇಂಗ್ಲೆಂಡ್, ದಕ್ಷಿಣಾಫ್ರಿಕಾ...ವಿರುದ್ಧ ಆಡಿದ ನಂತರದ ಎಲ್ಲ ಪಂದ್ಯಗಳನ್ನೂ ಭಾರತ ಯಾವುದೇ ಪ್ರಬಲ ಪ್ರತಿರೋಧ ಒಡ್ಡದೆ ಹೀನಾಯವಾಗಿ ಸೋತಿತು. ಎಲ್ಲರ ನಿರೀಕ್ಷೆಗಳು ಮಣ್ಣುಪಾಲಾಯಿತು.

ಭಾರತ ಹಾಕಿಯ ಚರಿತ್ರೆ ಎಂತಹುದಿದೆ. ಅದು ಸುವರ್ಣಾಕ್ಷರಗಳಲ್ಲಿ ಬರೆದಿಡತಕ್ಕಂಥದ್ದು! ಬಹುಶಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ, ಹಿಂದೊಮ್ಮೆ ಭಾರತ ಹಾಕಿಯ ತವರುಮನೆಯಂತಿತ್ತು. ಇತರೆ ಎಲ್ಲ ದೇಶಗಳಿಗೂ ಇದು ಮಾದರಿಯಾಗಿತ್ತು. ಆರಂಭದ ದಿನಗಳಲ್ಲಿ ವಿಶ್ವ ಹಾಕಿಯಲ್ಲಿ ಭಾರತದ್ದು ಆಲ್ಮೋಸ್ಟ್ ಮನೋಪಲಿ - ಏಕಚಕ್ರಾಧಿಪತ್ಯ! 1928ರಿಂದ ಆರಂಭವಾಗಿ ಭಾರತ ಸತತ 6 ಒಲಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಚಿನ್ನದ ಪದಕ ಪಡೆದಿತ್ತು. 1928, 1932, 1936, 1948, 1952, 1956! ಆದರೆ 1960ರ ರೋಮ್ ಒಲಂಪಿಕ್ಸ್ನಲ್ಲಿ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಭಾರತದ ಮನೋಪಲಿ ಮೊದಲ ಬಾರಿಗೆ ಸಡಿಲವಾಗಿತ್ತು. ಮತ್ತೆ 1964ರಲ್ಲಿ ಚಿನ್ನ, ನಂತರದ ಎರಡು ಒಲಂಪಿಕ್ಸ್ನಲ್ಲಿ ಕಂಚು, ಮತ್ತೆ 1980ರಲ್ಲಿ ಚಿನ್ನ! ಅಷ್ಟೆ ಅದೇ ಕೊನೆ, ನಂತರ ಭಾರತ ಹಾಕಿಗೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಒಂದೇ ಒಂದು ಪದಕವೂ ಬಂದಿಲ್ಲ. ಅತ್ಯಂತ ಅವಮಾನಕರ ಸಂಗತಿಯೆಂದರೆ, ಹೀಗೆ ಒಂದು ಕಾಲಕ್ಕೆ ವಿಶ್ವ ಹಾಕಿಯನ್ನು ಮೇಲಾಗಿ ಒಲಂಪಿಕ್ಸ್ ಅನ್ನು ಒಂದೇ ಕೈಯಲ್ಲಿ ಆಳಿದ್ದ ಭಾರತ 2008ರ ಬೀಜಿಂಗ್ ಒಲಂಪಿಕ್ಸ್ನಲ್ಲಿ ಆಡಲು ಅರ್ಹತೆಯನ್ನೇ ಪಡೆಯಲಿಲ್ಲ! ಅರ್ಹತಾ ಸುತ್ತಿನಲ್ಲೇ ಭಾರತ ಸೋತು ಮನೆಗೆ ಮರಳಿತು! ಏತನ್ಮಧ್ಯೆ ಹಾಕಿ ವಿಶ್ವಕಪ್ ಅನ್ನು ಭಾರತ ಒಮ್ಮೆ ಮಾತ್ರ ಅದೂ 1975ರಲ್ಲಿ ತನ್ನದಾಗಿಸಿಕೊಂಡಿತ್ತು. ಮತ್ತೆ ಈಗ ಹಾಕಿ ವಿಶ್ವಕಪ್ನ ಆತಿಥ್ಯ ನಮಗೆ ಬಂದಿದ್ದರಿಂದ ಸಣ್ಣ ನಿರೀಕ್ಷೆಯೊಂದು ಜನ್ಮ ತಾಳಿತ್ತು. ಆದರೆ ಅದೆಲ್ಲವೂ ನದಿಯಲ್ಲಿ ಹುಣಿಸೆಹಣ್ಣು ತೊಳೆದಂತಾಯಿತು!

ಒಂದರ್ಥದಲ್ಲಿ ಇದೂ ಕೂಡ ನಿರೀಕ್ಷಿತವೇ! ಹೌದು ಭಾರತ ಹಾಕಿಯ ಅಧಃಪತನ ಇಂದು ನಿನ್ನೆಯದಲ್ಲ, ನಿನ್ನೆ ಮೊನ್ನೆಯ ತಪ್ಪುಗಳಿಂದಲ್ಲ, ಈ ಅಧಃಪತನಕ್ಕೇ ಸುಮಾರು ದಶಕಗಳ ಇತಿಹಾಸವಿದೆ. ಹಾಕಿ ಭಾರತದ ರಾಷ್ಟ್ರ ಕ್ರೀಡೆ. ಇಂದು ಹಲವರಿಗೆ ಇದು ತಿಳಿದಿರುವಂತಿಲ್ಲ. ಎಲ್ಲರೂ ಕ್ರಿಕೆಟ್ಟೇ ನಮ್ಮ ರಾಷ್ಟ್ರ ಕ್ರೀಡೆ ಎಂದು ಭಾವಿಸಿರುವಂತಿದೆ. ಅದೇ ಹಾಕಿಯ ಸಮಸ್ಯೆ ಕೂಡ. ಮೊದಲಿಗೆ ನಮ್ಮಲ್ಲಿ ಕ್ರಿಕೆಟ್ ಅಷ್ಟು ಗ್ಲಾಮರಸ್ ಆಗಿಯೂ ಇರಲಿಲ್ಲ, ಅದಕ್ಕೆ ಇಷ್ಟು ಮನ್ನಣೆಯೂ ಇರಲಿಲ್ಲ. ಆಗ ಹಾಕಿಯದ್ದೇ ಮೇಲುಗೈ. ಆದರೆ ಅದೂ ಸಹ ಒಂದು ಕಾಲಘಟ್ಟ ಅಷ್ಟೆ. 70ರ ದಶಕದ ಕೊನೆಯ ದಿನಗಳು ಮತ್ತು 80ರ ದಶಕದಲ್ಲಿ ವಿಶ್ವದಾದ್ಯಂತ ಕ್ರಿಕೆಟ್ ಮನೆಮಾತಾಯಿತು. ಅಷ್ಟರಲ್ಲಿ ಭಾರತದ ಹಾಕಿಯ ಸುವರ್ಣ ಅಧ್ಯಾಯವೂ ಮುಗಿದಿತ್ತು. 1980 ಅದು ಭಾರತ ಹಾಕಿಯ ಕಡೆಯ ದಿಗ್ವಿಜಯ. ಜನಕ್ಕೆ ಥ್ರಿಲ್ ಕೊಡಬಹುದಾದ ಒಂದು ಆಟ ಬೇಕಿತ್ತು. ಅದೇ ಸಂಧಿಗ್ಧ ಸಮಯದಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಅನ್ನು ತನ್ನ ಮುಡಿಗೇರಸಿಕೊಂಡಿತು. ಭಾರತದಲ್ಲಿ ಕ್ರಿಕೆಟ್ ಇನ್ನಿಲ್ಲದಂತೆ ಮನೆಮಾತಾಯಿತು. ಹಾಕಿ ತೆರೆ ಮರೆಗೆ ಸರಿಯಿತು. ಇಂದಿಗೂ ಅದು ತೆರೆಯ ಮರೆಯಲ್ಲೇ ಇದೆ. ನಮ್ಮ ಮೀಡಿಯಾಗಳು ಕೂಡ ಕ್ರಿಕೆಟ್ನ ಹುಚ್ಚು ಅಮಲಿನಲ್ಲಿ ಮಿಂದೇಳುತ್ತಿವೆಯೇ ಹೊರತು ಹಾಕಿಯೆಡೆಗೆ ಒಮದು ಪರೀಕ್ಷಣಾರ್ಥ ಚಿಕಿತ್ಸಕ ದೃಷ್ಟಿಯನ್ನು ಬೀರಲೇ ಇಲ್ಲ. ಭಾರತದ ಹಾಕಿಯನ್ನು ಒಂದು ಪಾಸಿಟಿವ್ ಕ್ರಿಟಿಸಿಸಂನಿಂದ ಕೂಡ ವಂಚಿಸಲಾಯಿತು.

ಮೊದಲೇ ಬಳಲುತ್ತಿದ್ದ ಭಾರತೀಯ ಹಾಕಿಗೆ ಗೆದ್ದಲು ಹಿಡಿಸಿದ್ದು, ನಮ್ಮ ಕ್ರೀಡಾ ವ್ಯವಸ್ಥೆ. ಹೌದು ಇದರಲ್ಲಿ ಅನುಮಾನವೇ ಇಲ್ಲ. ಹಾಕಿ ಫೆಡರೇಶನ್ ಆಫ್ ಇಂಡಿಯಾಗೆ ಹಲವು ದಶಕಗಳಿಂದ ಸೂಪರ್ ಕಾಪ್ ಎನಿಸಿದ್ದ ಕೆಪಿಎಸ್ ಗಿಲ್ ಅಧ್ಯಕ್ಷ. ಯಾವುದೇ ರೀತಿಯಲ್ಲಿ ಎಣಿಸಿ ನೋಡಿದರೂ ಹಾಕಿ ಆಟಕ್ಕೆ ಸಂಬಂಧವೇ ಇಲ್ಲದ ಈ ಮನುಷ್ಯನನ್ನು ಈತನ ಎಲ್ಲಾ ತುಘಲಕ್ ದರ್ಬಾರುಗಳೊಂದಿಗೆ ಬಾರತೀಯ ಹಾಕಿ ಇನ್ನೂ ಸಾಕುತ್ತಿದೆ. ಈತನಿಗೆ ಇದೊಂದು ಪ್ರೆಸ್ಟೀಜ್ ಇಲ್ಲವೇ ವೈಯಕ್ತಿಕ ತೆವಲು ಅಷ್ಟೆ. ಆದರೆ ಇದರಲ್ಲಿ ಬಲಿಯಾದದ್ದು ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ! ಯಾವ ಮಟ್ಟಿಗೆ ಭಾರತೀಯ ಹಾಕಿಗೆ ಗೆದ್ದಲು ಹಿಡಿಸಲಾಗಿದೆಯೆಂದರೆ, ಮೊನ್ನೆ ದೆಹಲಿಯ ಹಾಕಿ ವಿಶ್ವಕಪ್ಗೂ ಮುನ್ನಾ ದಿನಗಳಲ್ಲಿ ಭಾರತೀಯ ಹಾಕಿ ಟೀಂನ ಎಲ್ಲಾ ಆಟಗಾರರೂ ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಆ ತರಬೇತಿ ಶಿಬಿರದಲ್ಲಿ ಆಟಗಾರರು ಬಂಡೆದ್ದರು. ತಮಗೆ ಮ್ಯಾಚ್ ಫೀಸ್ ಅನ್ನು ಕೂಡ ಕೊಡುತ್ತಿಲ್ಲ, ನಮ್ಮ ಬಾಕಿಗಳನ್ನು ಹಾಗೆ ಉಳಿಸಿ ಕೊಳ್ಳಲಾಗಿದೆ, ನಮಗೂ ಸಂಸಾರಗಳಿವೆ, ಅದೆಲ್ಲವನ್ನೂ ಬಿಟ್ಟು ಸೋಷಿಯಲ್ ಸರ್ವೀಸ್ಗಾಗಿ ನಾವಿಲ್ಲಿ ಅಡುತ್ತಿಲ್ಲ. ನಮ್ಮ ಮ್ಯಾಚ್ ಫೀಸ್ ಕೊಡುವವರೆಗೆ ನಾವು ಯಾವುದೇ ಪಂದ್ಯದಲ್ಲಿ ಆಡುವುದಿಲ್ಲ. ವಿಶ್ವಕಪ್ ಅನ್ನು ಕೂಡ ಬಹಿಷ್ಕರಿಸುತ್ತೇವೆ ಎಂದು ಭೀಷ್ಮಿಸಿ ಕೂತು ಬಿಟ್ಟರು! ಆಗಲೇ ಭಾರತ ಹಾಕಿಯ ಎಲ್ಲಾ ಹುಳುಕುಗಳೂ ಹೊರಜಗತ್ತಿಗೆ ಅರಿವಾಗಲಾರಂಭಿಸಿದ್ದು. ನಂತರ ನಡೆದದ್ದು ಆಟಗಾರರು ಮತ್ತು ಹಾಕಿ ಫೆಡರೇಷನ್ ನಡುವಿನ ಹದಿನೈದು ದಿನಗಳ ಜಟಾಪಟಿ. ನ್ಯಾಯವಾಗಿ ಅವರಿಗೆ ಬರಬೇಕಾದ್ದನ್ನು ಕೇಳಿದ್ದಕ್ಕೆ, ಆಟಗಾರರನ್ನು ಇವರು ಬೆದರಿಸಿದ್ದೇನು? ಅದಾಗದಿದ್ದಾಗ ಮುದ್ದಿಸಲು ಪ್ರಯತ್ನಿಸಿದ್ದೇನು? ಕಡೆಗೆ ಇಂಡಿಯನ್ ಒಲಂಪಿಕ್ ಫೆಡೆರೆಶನ್ನ ಸುರೇಶ ಕಲ್ಮಾಡಿ ಇಳಿದು ಬಂದು ರಾಜಿ ಮಾಡಿಸಿ, ಆಟಗಾರರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣ ಸಂದಾಯವಾಗುವಂತೆ ನೋಡಿಕೊಂಡರು. ಇಲ್ಲದಿರೆ ದೆಹಲಿಯಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್ಗೆ ಬಾರತದ ಹಾಕಿ ತಂಡ ಬಹಿಷ್ಕಾರ ಹಾಕುತ್ತಿತ್ತು!

ಯಾಕೆ ಹೀಗೆ? ಹಾಕಿ ಫೆಡರೇಶನ್ ಆಫ್ ಇಂಡಿಯಾವನ್ನು ಕೇಳಿ ನೋಡಿ, ಅವರು ಬರಿಗೈಯನ್ನು ತೊರಿಸುತ್ತಾರೆ. ಇಂದು ಹಾಕಿಯ ಬಗ್ಗೆ ನಮ್ಮ ಜನರಲ್ಲಿ ಹೆಚ್ಚು ಆಸಕ್ತಿಯಿಲ್ಲ, ಎಲ್ಲರೂ ಕ್ರಿಕೆಟ್ನ ಅಂಗಳದಲ್ಲಿ ಮುಳುಗಿ ಹೋಗಿದ್ದಾರೆ. ಆದ್ದರಿಂದ ರೆವಿನ್ಯೂ ಜೆನರೇಷನ್ ಎನ್ನುವುದು ಕನಸಿನ ಮಾತು. ಮತ್ತೊಂದೆಡೆ ಸರ್ಕಾರ ಕೂಡ ಇದೇ ಬುದ್ದಿಗೇಡಿ ಕೆಲಸವನ್ನು ಮಾಡುತ್ತಿದೆ. ಅದೂ ಕೂಡ ಕ್ರಿಕೆಟ್ನಲ್ಲೇ ಮುಳುಗಿಹೋಗಿದೆ. ಇನ್ನು ಮೀಡಿಯಾಗಳ ವಿಷಯ ಹೇಳುವುದೇ ಬೇಡ. ಹಾಕಿಯಲ್ಲಿ ಭಾರತ ಚಿನ್ನದ ಪದಕ ತಮದರೂ, ಅಸಲಿಗೆ ಅದು ಒಲಂಪಿಕ್ಸ್ಗೆ ಅದು ಅರ್ಹತೆಯೇ ಪಡೆಯದಿದ್ದರೂ ಅದರದು ಒಂದೇ ಪ್ರತಿಕ್ರಿಯೆ - ಕಡೆಯ ಪೇಜಿನಲ್ಲೊಂದು ಬಾಕ್ಸ್ ಐಟಂ! ಇದೇ ಭಾರತದ ಹಾಕಿಯನ್ನು ಕೊಂದಿರುವುದು.

ಇನ್ನು ಈ ವಿಶ್ವಕಪ್ನ ನಂತರ ಶುರುವಾಗಲಿದೆ ನೋಡಿ ಫೈರಿಂಗ್! ಆಗಲೇ ಭಾರತ ಹಾಕಿ ತಂಡದ ಕೋಚ್ ಬಾಸ್ರಾ ತನ್ನ ಬ್ಯಾಗುಗಳು ಯಾವಾಗಲೂ ಪ್ಯಾಕ್ ಆಗೇ ಇರುತ್ತವೆ ಎನ್ನುವ ಮೂಲಕ ತಾನು ಮಾನಸಿಕವಾಗಿ ಫ್ಯರಿಂಗ್ ಆರ್ಡರ್ಸ್ಗೆ ಸಿದ್ಧ ಎನ್ನುವುದನ್ನು ತಿಳಿಸಿದ್ದಾನೆ. ಆದರೆ ಸಮಸ್ಯೆ ಇದಲ್ಲ. ವಿಶ್ವ ಹಾಕಿ ಮುಂದೆ ಮುಂದೆ ಹೋಗುತ್ತಿದ್ದರೂ ಭಾರತದ ಹಾಕಿ ಮಾತ್ರ ಅದಕ್ಕೆ ಒಗ್ಗಿಕೊಳ್ಳದೆ ಇನ್ನೂ ತನ್ನ ಪಾಸ್ಟ್ ಗ್ಲೋರಿಯಲ್ಲೇ ಬದುಕುತ್ತಿದೆ. ಇನ್ನೂ ಭಾರತದ ಹಾಕಿ ಸಿಂಥಟಿಕ್ ಪಿಚ್ ಅನ್ನು ಒಪ್ಪಿಲ್ಲವೆಂದರೆ ಲೆಕ್ಕ ಹಾಕಿ. ಹಾಕಿಯಂಗಳಲದಲಿ ಹುಲ್ಲುಗಾವಲು ಮಾಯವಾಗಿ 30 ವರ್ಷಗಳಾಗುತ್ತಾ ಬಂದವು!

ಸಮಸ್ಯೆಯೆಂದರೆ ಪ್ರತಿ ಬಾರಿ ನಾವು ಆಮೂಲಾಗ್ರ ಬದಲಾವಣೆ ಅಂತ ಮಾತು ಶುರು ಮಾಡಿದರೂ, ಅದೇ ಗೆದ್ದಲು ಹತ್ತಿದ ವ್ಯವಸ್ಥೆ ಕೋಚ್ ಮತ್ತು ಆಟಗಾರರ ಮೇಲೆ ಕ್ರಮಕ್ಕೆ ಮುಂದಾಗುತ್ತದೆ. ಸಮಸ್ಯೆ ಕೋಚೂ ಅಲ್ಲ ಅಟಗಾರರೂ ಅಲ್ಲ, ಸಮಸ್ಯೆ ಅದೇ ವ್ಯವಸ್ಥೆ! ಯಾವುದೇ ಬದಲಾವಣೆ ಟಾಪ್ ಟು ಬಾಟಂ ಆಗಬೇಕು, ಅಭಿವೃದ್ಧಿ ಗ್ರಾಸ್ ರೂಟ್ ಲೆವಲ್ನಲ್ಲಿ ಆಗಬೇಕು. ನಮ್ಮಲ್ಲಿ ಬದಲಾಗಬೇಕಿರುವುದು ಈ ಗೆದ್ದುಲು ಹಿಡಿದ ವ್ಯವಸ್ಥೆ! ಅದಾದರೆ ಮಾತ್ರ ಭಾರತದ ಹಾಕಿಗೆ ಭವಿಷ್ಯವುಂಟು, ಇಲ್ಲದಿರೆ.......?!!

Proudly powered by Blogger
Theme: Esquire by Matthew Buchanan.
Converted by LiteThemes.com.