ವಿದ್ಯಾ ದೇಗುಲಗಳು ಹೊಲಸೆದ್ದು ಹೋದಾಗ.........

ಮೊದಲಿಗೆ ಈ ಕಾರು ಕಂಪೆನಿಗಳವರು, ಕೈ ಸಾಲ ಮನೆ ಸಾಲ ಕೊಡುವವರು ಈ ಸಾಫ್ಟ್ವೇರ್ ಇಂಜಿನಿಯರ್ಗಳ ಹಿಂದೆ ಬೀಳುತ್ತಿದ್ದರು. ಆದರೆ 2008ರ ಜಾಗತಿಕ ಆರ್ಥಿಕ ಹಿಂಜರಿತದ ಏಟು ಯಾವ ಪಾಟಿ ಬಿದ್ದಿದೆಯೆಂದರೆ ಅವೇ ಬ್ಯಾಂಕುಗಳು ಈಗ ಸಾಲ ವಸೂಲಾತಿಗಾಗಿ ಅವರ ಬೆನ್ನು ಬಿದ್ದಿದ್ದು, ಅವರು ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದಾರೆ. ಈಗ ಟ್ರೆಂಡ್ ಬದಲಾಗಿದೆ. ಈಗ ಈ ಕಾರ್ ಕಂಪೆನಿಗಳು, ಸಾಲ ನೀಡುವವರು ಯುಜಿಸಿ ಪ್ರೊಫೆಸರ್ಗಳ ಮನೆ ಅರಸಿ ಹೋಗಿ ದುಂಬಾಲು ಬೀಳತೊಡಗಿದ್ದಾರೆ! ಹಣವೆಲ್ಲಿ ಕೂಡುತ್ತಿದೆಯೋ ಅಲ್ಲೇ ಇವರು. ಹೌದು ಈಗಿನ ಪರಿಸ್ಥಿತಿಯಲ್ಲಿ ಅತಿಹೆಚ್ಚು ಸಂಬಳ ಪಡೆಯುತ್ತಿರುವವರು, ಅತ್ಯಂತ ಸುಖಿಗಳು ಅಂದರೆ ನಮ್ಮ ಯುಜಿಸಿ ಪ್ರೊಫೆಸರ್ಗಳೇ! ಮೊನ್ನೆ ಯುಜಿಸಿ ಶಿಫಾರಸನ್ನು ಶಿರಸಾ ವಹಿಸಿದ ರಾಜ್ಯ ಸರ್ಕಾರ ಯುಜಿಸಿ ಪ್ರೊಫೆಸರ್ಗಳಿಗೆ ಶೇ.37ರಷ್ಟು ತುಟ್ಟಿಭತ್ಯೆ ನೀಡಿದ್ದು, ಈಗ ಇವರ ಲೈಫ್ಸ್ಟೈಲ್ ನಿಜಕ್ಕೂ ಅಂಬರಕ್ಕಮಟಿ ಕೂತಿದೆ. ಈಗಿನ ಸ್ಕೇಲ್ನಂತೆ ಒಬ್ಬ ಹೊಸಬ ಯುಜಿಸಿ ಶಿಕ್ಷಕನಾದಾಗ ಆತನ ಓಪನಿಂಗ್ ಸಾಲರಿ ಎಷ್ಟು ಗೊತ್ತೆ? ಕೇವಲ 32,000 ರೂ.ಗಳು! ಇನ್ನು ಈಗಿರುವ ಹಿರಿ ತಲೆಗಳಿಗಂತೂ ಸುಮಾರು 75 ಸಾವಿರಗಳವರೆಗೂ ಇದೆ ಸಂಬಳ, ತಿಂಗಳಿಗೆ! ಇದಲ್ಲದೆ ಇವರಿಗೆ ಇದರೊಡನೆಯೇ ಮತ್ತೆರಡು ಸಿಹಿ ಸುದ್ದಿಗಳಿವೆ, ಒಂದು ಈ ತುಟ್ಟಿಭತ್ಯೆಯನ್ನು 2006 ಜನವರಿ 1ರಿಂದಲೇ ಪೂರ್ವಾನ್ವಯ ವಾಗುವಂತೆ ಜಾರಿಗೆ ತರಲಾಗುತ್ತಿದ್ದು, 51 ತಿಂಗಳ ಅರಿಯರ್ಸ್ ಇವರ ಕೈ ಸೇರಲಿದೆ. ಹಲವಾರು ಮಂದಿಗೆ ಇದು ಲಕ್ಷಗಳ ಮಾತೇ ಸರಿ. ಇನ್ನು ಈ ಶಿಕ್ಷಕರ ನಿವೃತ್ತಿ ವಯಸ್ಸನ್ನು 60ರಿಂದ ಏಕದಂ 62ಕ್ಕೆ ಹೆಚ್ಚಿಸಲಾಗಿದೆ. ಯುಜಿಸಿ ಶಿಕ್ಷಕರು, ಪ್ರೊಫೆಸರ್ಗಳಂತೂ ಫುಲ್ ಖುಷ್! ಸಾಧಾರಣವಾಗಿ ಖಾಸಗೀ ಕ್ಷೆತ್ರದಲ್ಲಿ ಸಂಬಳ ಹೆಚ್ಚುತ್ತಾ ಹೋದಂತೆ, ಅದಕ್ಕೆ ತಕ್ಕಂತೆ ಕೆಲಸವೂ ಮತ್ತು ಮುಖ್ಯವಾಗಿ ಜವಾಬ್ದಾರಿಯೂ ಹೆಚ್ಚುತ್ತಾ ಹೋಗುತ್ತದೆ. ಆದರೆ ಸರ್ಕಾರೀ ಕೆಲಸಗಳಲ್ಲಿ ಅದನ್ನು ನಿರೀಕ್ಷಿಸುವುದು ನಮ್ಮ ತಪ್ಪಾದೀತೇನೋ.


ಇಲ್ಲಿ ಪ್ರತಿ ಹಂತದಲ್ಲೂ ಹಲವಾರು ಸಮಸ್ಯೆಗಳಿವೆ, ತಳಮಟ್ಟದಿಂದ ಉಛ್ರಾಯದವರೆಗೆ. ಎಲ್ಲಿಂದ ಶುರುವಿಟ್ಟುಕೊಳ್ಳುವುದೆಂಬುದೇ ಗೊಂದಲ ಅಷ್ಟು ಸಮಸ್ಯೆಗಳು! ನಮ್ಮ ಪರೀಕ್ಷಕ ದೃಷ್ಟಿಯನ್ನು ಕರ್ನಾಟಕಕೆ ಸೀಮಿತಗೊಳಿಸಿಕೊಳ್ಳೋಣ. ಇಲ್ಲಿನ ವಿವಿಗಳಲ್ಲಿರುವ ಸಮಸ್ಯೆಗಳೇ ಸಾಕು ಬೇಕಾಗಿರುವಾಗ ಇತರೆ ರಾಜ್ಯಗಳ ವಿವಿಗಳಲ್ಲಿ ಸ್ಟೂಡೆಂಟ್ ಯೂನಿಯನ್ಗಳು, ರಾಜಕಾರಣ ಕೂಡ ಇಲ್ಲಿನ ಎಲ್ಲಾ ನೂರೆಂಟು ಸಮಸ್ಯೆಗಳೊಂದಿಗೆ ಸೇರಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ಕಗ್ಗಂಟಾಗಿಸಿಬಿಟ್ಟಿದೆ. ವಿವಿಗಳಲ್ಲಿ ಮೊದಲ ಸಮಸ್ಯೆಯೇ ಶಿಕ್ಷಕರು ಮತ್ತು ಪ್ರೊಫೆಸರ್ಗಳದ್ದು, ಇಲ್ಲೂ ಅತ್ಯುತ್ತಮ ಎನ್ನುವಂತಹ ಕಮಿಟೆಡ್ ಪ್ರೊಫೆಸರ್ಗಳಿದ್ದಾರೆ ನಿಜ, ಆದರೆ ಅವರು ಇಂದು ಅಪುರೂಪದ ಅಪವಾದ ಅಷ್ಟೆ! ಇಂದು ಯೂನಿವಸರ್ಿಟಿ ಶಿಕ್ಷಣವೆಂದರೆ ಅತ್ಯಂತ ಯಾಂತ್ರಿಕವಾಗಿಬಿಟ್ಟಿದೆ. ಇರೋದು ಕಮ್ಮಿ ಹುಡುಗರಾದರೂ ಅವರಿಗೂ ಪ್ರೊಫೆಸರ್ಗಳಿಗೂ ನಡುವೆ ಒಂದು ಸೌಹಾರ್ದಯುತ ಸಂಬಂಧವೇ ಇಲ್ಲ. ಈ ವಿಷಯದಲ್ಲಿ ಪ್ರೈಮರಿ ಸ್ಕೂಲ್ ಮೇಷ್ಟ್ರುಗಳೇ ಎಷ್ಟೋ ವಾಸಿ! ಅಂಥದೊಂದು ಸಂಬಂಧವನ್ನು ಈಗ ಹುಡುಗರೂ ಬೆಳೆಸಿಕೊಳ್ಳುವುದಿಲ್ಲ, ಪ್ರೊಫೆಸರ್ಗಳೂ ಬಯಸುವುದಿಲ್ಲ. ನಮ್ಮಲ್ಲಿ ಲೋವರ್ ಎಜುಕೇಷನ್ ಮಟ್ಟದಿಂದಲೂ marksu, ಪರೀಕ್ಷೆ ಈ ದೃಷ್ಟಿಕೋನದಲ್ಲೇ ಹುಡುಗರನ್ನು ರೂಪಿಸುತ್ತಾ ಬಂದು ಬಿಟ್ಟದ್ದೇವಾದ್ದರಿಂದ ಉನ್ನತ ಶಿಕ್ಷಣದಲ್ಲೂ ಇಂದು ಈ ಪಿಡುಗು ಮುಂದುವರೆದಿದೆ. ಹಾಗಾಗಿ ವಿದ್ಯೆ ಎನ್ನುವುದು ಒಂದು ಸರಕಾಗಿ ಬಿಡುತ್ತದೆ. ವಿವಿಗಳು ಅಂಗಡಿಯಂತಾಗಿಬಿಡುತ್ತದೆ. ಇದರಿಂದಾಗಿ ನಮ್ಮಲ್ಲಿ ಒಂದು ಜ್ಞಾನದಾಹ ಕೇಂದ್ರಿತವಾದ ಶಿಕ್ಷಣ ವ್ಯವಸ್ಥೆಯಿಲ್ಲ. ಹಾಗಾಗಿ ಸಂಶೋಧನೆ, ಪೇಟೆಂಟು ಎನ್ನುವ ಪದಗಳೆಲ್ಲ ನಾವರಿಯದ ಭಾಷೆಯ ಫಾರಿನ್ ಪದಗಳಾಗಿವೆ.

ನಮ್ಮಲ್ಲಿ ಮತ್ತೊಂದು ಮುಖ್ಯ ಕೊರತೆಯೆಂದರೆ ಅಕಾಡಮಿಕ್ ಡಿಸಿಪ್ಲೀನ್ ಇಲ್ಲದಿರುವುದು. ನಮ್ಮಲ್ಲಿ ಬಹುಪಾಲು ಪ್ರೊಫೆಸರ್ಗಳು ತಿಂಗಳ ಕೊನೆಗೆ ಭರ್ಜರಿ ಸಂಬಳ ಎಣಿಸಿ ಕೊಳ್ಳುತ್ತಾರೆಯೇ ವಿನಃ ಪಾಠ ಮಾಡುವುದಿಲ್ಲ. ಮುಕ್ಕಾಲು ಭಾಗದ ಮಂದಿ ಬೆಳಗ್ಗೆಯೇ ಬಂದು ರಿಜಿಸ್ಟ್ರ್ನಲ್ಲಿ ಒಂದು ಸೈನ್ ಹಾಕಿ, ಒಂದೋ ಎರಡೋ ಕ್ಲಾಸ್ ತೆಗೆದುಕೊಂಡು ನೆಟ್ಟಗೆ ಹೊರನಡೆದು ಬಿಡುತ್ತಾರೆ. ನಂತರ ಅವರು ಯಾರ ಕೈಗೂ ಸಿಗುವುದಿಲ್ಲ. ಈಗ ಈ ತುಟ್ಟಿಭತ್ಯೆಯ ನಂತರ ಯುಜಿಸಿ ಏನೇನೋ ಹೊಸ ಹೊಸ ನಿಯಮಗಳನ್ನು ತಮದಿದೆ ಎನ್ನುವವರಿದ್ದಾರಾದರೂ ಜಡಗೊಮಡ ಈ ವ್ಯವಸ್ಥೆಯನ್ನು ಎಬ್ಬಿಸಬಲ್ಲದು ಎಂಬುದು ಅವರಿಗೇ ಅನುಮಾನ. ಈ ಪ್ರೊಫೆಸರ್ಗಳನ್ನು ಖಾಯಂ ಸರ್ಕಾರೀ ಉದ್ಯೋಗಿಗಳು ಅಂತ ಮಾಡಿರುವುದೇ ಈ ಸಮಸ್ಯೆಗೆ ಕಾರಣ. ಇದನ್ನು ತಪ್ಪಿಸಲು ಒಂದು ಉಪಾಯವಂತೂ ಇದೆ. ಈ ಪ್ರೊಫೆಸರ್ಗಳನ್ನು ಖಾಯಂ ಆಗಿರಸದೆ ಅವರ performance ಆಧಾರಿತವಾಗಿ 3-5 ವರ್ಷಗಳಿಗೆ ಅವರ ಸೇವೆಯನ್ನು ಗುತ್ತಿಗೆ ಪಡೆದಲ್ಲಿ, ಅದರ ನವೀಕರಣದ ಆಸೆಗೋ ಆಗುವುದಿಲ್ಲವೆಂಬ ಭಯಕ್ಕಾದರೂ ಇವರು ಮೈಬಗ್ಗಿಸಿ, ಕೆಲಸ ಮಾಡುವರೋ ನೋಡಬೇಕು. ಇನ್ನು ಮತ್ತೊಂದು ಸಮಸ್ಯೆಯೆಂದರೆ ವಿಭಾಗಗಳ ಮುಖ್ಯಸ್ಥರನ್ನು ರೊಟೇಷನ್ ಆಧಾರವಾಗಿ ಬದಲಾಯಿಸುತ್ತಿರುವುದು. ಇದರಿಂದ departmentಗಳಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಗೌರವವಿಲ್ಲ, ಅದೂ ಒಬ್ಬರ ಅವಧಿ 2 ವರ್ಷ ಮಾತ್ರವಾಗಿರುವುದರಿಂದ ಇವರು ಅದೇನು ವಿಭಾಗವನ್ನು ಉದ್ಧಾರ ಮಾಡಿಯಾರು? ಈ ವ್ಯವಸ್ಥೆ ಹೋಗುವವರೆಗೂ ವಿಭಾಗಗಳು ನೆಟ್ಟಗೆ ನಡೆಯುವುದು ಅನುಮಾನವೇ ಸರಿ!

ಇಂದಿನ ವಿವಿಗಳಲ್ಲಿ ಅಧಿಕೃತವಾಗಿ ರಾಜಕೀಯ ಪಕ್ಷಗಳಿಲ್ಲ ಅಷ್ಟೆ, ಆದರೆ ಭಾರತದ ಪ್ರತಿಯೊಂದು ವಿವಿಯಲ್ಲೂ ರಾಜಕೀಯ ಪಕ್ಷಗಳ ಹಸ್ತಕ್ಷೇಪವಿದೆ. ಅಲ್ಲಿನವರು ಪಕ್ಷನಿಷ್ಠೆಯಂತೆ ಹರಿದು ಹಂಚಿ ಹೋಗಿದ್ದಾರೆ. ಇಂದಿನ ನಮ್ಮ ವಿವಿಗಳನ್ನು ಪಕ್ಷ ರಾಜಕೀಯಕ್ಕಿಂತಲೂ ಕಾಡುತ್ತಿರುವುದು ಅತ್ಯಂತ ಕೆಟ್ಟ ಜಾತಿ ರಾಜಕಾರಣ. ಭವ್ಯ ಭಾರತದ ಎಲ್ಲಾ ವಿವಿಗಳಲ್ಲೂ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ ಹೀಗೆ ಮೂರು ಹಂತಗಳಲ್ಲಿ ಜಾತೀವಾರು ಗುಂಪುಗಳಿವೆ, ಮತ್ತು ಸಾಧಾರಣವಾಗಿ ಘರ್ಷಣೆಗಳಿವೆ. ಇನ್ನು ವಿವಿಗಳ ಆಡಳಿತ ವರ್ಗ, ಯಾರು ತಮ್ಮ ಜೀವಮಾನದಲ್ಲೇ ನೆಟ್ಟಗೆ ಪಾಠ ಮಾಡಿಲ್ಲವೋ ಅವರೆಲ್ಲರೂ ಕಡೆಗೆ ವಿವಿ ಆಡಳಿತಗಾರರಾಗುತ್ತಿದ್ದಾರೆ! ಅವರಿಗೆ ರಾಜಕೀಯ ಮತ್ತು ಜಾತಿ ಬೆಂಬಲವಿರುತ್ತದೆಯೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನು ನಮ್ಮ ಯೂನಿವರ್ಸಿಟಿಗಳದ್ದು ಸರ್ಕಾರಿ ಸಂಸ್ಥೆಯೂ ಅಲ್ಲದ ಹಾಗಂತ ಸ್ವಾಯತ್ತತೆಯೂ ಇಲ್ಲದ ಪರಮ ಇಕ್ಕಟ್ಟು ಪರಿಸ್ಥಿತಿ. ಯೂನಿವರ್ಸಿಟಿಯ ಆಡಳಿತ ವ್ಯವಸ್ಥೆಯಲ್ಲಿನ ಪ್ರತಿಯೊಂದು ನೇಮಕವೂ ರಾಜಕೀಯ ನೇಮಕಾತಿಯೇ ಸರಿ. ಅದು ರಿಜಿಸ್ಟ್ರಾರ್ಗಳಿರಬಹುದು, ಉಪಕುಲಪತಿಗಳೇ ಇರಬಹುದು, ಎಲ್ಲರದೂ ರಾಜಕೀಯ ನೇಮಕಾತಿಯೇ, ಎಲ್ಲರೂ ಒಂದಿಲ್ಲೊಂದು ಜಾತಿ ಲಾಬಿಯನ್ನು ಬೆನ್ನಿಗಿಟ್ಟುಕೊಂಡಿರುವವರೇ. ಅತ್ಯುತ್ತಮ ಉದಾಹರಣೆಯೆಂದರೆ ಬೆಂಗಳೂರು ವಿವಿ. ಬೆಂ.ವಿವಿಯ ಕರ್ಮಕಾಂಡಗಳನ್ನು ಬಿಡಿಸಿ ಹೇಳುವ ಅಗತ್ಯವಿಲ್ಲವೆನಿಸುತ್ತದೆ. ಇನ್ನು ಸಿಂಡಿಕೇಟ್ ಎನ್ನುವುದು ಕಳ್ಳರ ಸಂತೆಯೇ ಆಗಿದೆ. ಪರಿಸ್ಥಿತಿ ಇಷ್ಟು ಹೊಲಸೆದ್ದು ಹೋಗಿರುವಾಗ ಬರುವ ಎಲ್ಲ ಸಮಸ್ಯೆಗಳೂ ನಮ್ಮಲ್ಲಿವೆ. ಮೊದಲಿಗೆ ಹೊಣೆಗೇಡಿತನ. ಮೊನ್ನೆ ಕುವೆಂಪು ವಿವಿಯಲ್ಲಿ ವರ್ಷವೆಲ್ಲಾ ಹುಡುಗರು ಕಷ್ಟ ಪಟ್ಟು ಓದಿ, ಪರೀಕ್ಷೆ ಬರೆದರೆ, ಆ ಉತ್ತರ ಪತ್ರಿಕೆಗಳು ಇವ್ಯಾಲ್ಯುಯೇಷನ್ಗೆ ಮುಂಚಿತವಾಗಿಯೇ `ಆಕಸ್ಮಿಕ'ವೊಂದರಲ್ಲಿ ಅಗ್ನಿಗೆ ಆಹುತಿಯಾಗಿದೆ! ಮತ್ತೂ ಆಶ್ಚರ್ಯವೆಂದರೆ ಇದರ ಜವಾಬ್ದಾರಿಯನ್ನು ಇದುವರೆಗೂ ಯಾರೂ ತೆಗೆದುಕೊಂಡಿಲ್ಲ ಮಾತ್ರವಲ್ಲ, ಕೆಳಮಟ್ಟದ ಅಧಿಕಾರಿಗಳ ವಿರುದ್ಧ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ! ಅದು ಸಾಧ್ಯವಿಲ್ಲ ಬಿಡಿ, ಕ್ರಮ ಕೈಗೊಂಡರೆ ಅವರೇ ಅಲ್ಲಿರುವುದಿಲ್ಲ, ಹಾಗಿರುತ್ತದೆ ಅಲ್ಲಿನ ಪರಿಸ್ಥಿತಿ!
ಇನ್ನು ವಿವಿಗಳ ಬಗ್ಗೆ ನಮ್ಮ ರಾಜಕೀಯ ನಾಯಕರು ಮತ್ತು ಸರ್ಕಾರಗಳ ಧೋರಣೆಯಿದೆಯಲ್ಲ, ಅದೂ ಸರ್ವಥಾ ಖಂಡನೀಯವಾದುದು. ನಮ್ಮ ರಾಜಕೀಯ ನೇತಾರರಿಗೆ ದೇವಸ್ಥಾನ ದರ್ಗಾಗಳನ್ನೂ ಅವುಗಳ ಪಾಡಿಗೆ ಅವುಗಳನ್ನು ಬಿಡುವ ಮನಸ್ಸಿಲ್ಲ, ಅವುಗಳನ್ನೂ ತಮ್ಮ ಪ್ಲೇಗ್ರೌಂಡುಗಳಾಗಿ ಮಾಡಿಕೊಂಡಿರುವಾಗ ಇನ್ನು ವಿವಿಗಳಂತಹ ಬೃಹತ್ ಪ್ರತಿಷ್ಠಿತ ಸಂಸ್ಥೆಗಳನ್ನು ಬಿಡುವ ಮಾತೆಲ್ಲಿಯದು? ಇಂದು ನಮ್ಮ ವಿವಿಗಳು ಈ ಹೊಲಸು ರಾಜಕೀಯದ ಅಡ್ಡೆಗಳಾಗಿ ಬಿಟ್ಟಿವೆ. ಇನ್ನು ಸತತ ಸರ್ಕಾರಗಳಿಗೆ ವಿವಿಗಳೆಂದರೆ ಬೆಲೆಯೇ ಇಲ್ಲ. ಒಂದು ವರ್ಷದ ಹಿಂದೆ ಯಡ್ಯೂರಪ್ಪನವರು ಆಪರೇಷನ್ ಕಮಲಿಗರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕಾಗಿ ಬಂದಾಗ ಅಂದಿನ ತೋಟಗಾರಿಕಾ ಸಚಿವರಾಗಿದ್ದ ಗುಲ್ಬರ್ಗಾದ ಎಸ್.ಕೆ.ಬೆಳ್ಳುಬ್ಬಿಯವರ ರಾಜೀನಾಮೆ ಪಡೆದುಕೊಂಡರು. ಆಗ ಅಲ್ಲಿನ ಜನ ಕೊಂಚ ಬೇಸರದಲ್ಲೇ ಉದ್ವಿಗ್ನರಾಗಿದ್ದರು. ಅವರನ್ನು ತಣಿಸಲು ಆ ಊರಿಗೆ ಏನೋ ಒಮದು ಭಕ್ಷೀಸು ಕೊಡುವುದು ಅನಿವಾರ್ಯವಿತ್ತು. ಕೂಡಲೇ ಯಡ್ಯೂರಪ್ಪನವರು ಘೋಷಿಸಿಬಿಟ್ಟರು, ಅವರು ತೋಟಗಾರಿಕಾ ಸಚುವರಲ್ಲವೇ ಆಗಿದ್ದಿದ್ದು, ಸರಿ ನಿಮ್ಮೂರಿಗೆ ಒಂದು ತೋಟಗಾರಿಕಾ ವಿವಿಯನ್ನು ಮಂಜೂರು ಮಾಡಲಾಗಿದೆ! ಇದು ವಿವಿಗಳಿಗೆ ನಮ್ಮ ಸರ್ಕಾರಗಳು ನೀಡುವ ಬೆಲೆ ಮತ್ತು ಗಾಂಭೀರ್ಯ! ಇನ್ನೂ ತುಮಕೂರು ವಿವಿಗೆ ಕಟ್ಟಡವೇ ಇಲ್ಲ, ಮಹಿಳಾ ವಿವಿ ಅಧೋಗತಿಯಾಗುವುದರಲ್ಲಿ ಇನ್ನು ಏನೂ ಅನುಮಾನ ಉಳಿದಿಲ್ಲ. ಹೀಗಿರುವಾಗ ಸಂಸ್ಕೃತ ವೇದ ವಿವಿ ಬೇರೆ ಕೇಡು! ವಿವಿ ಸ್ಥಾಪನೆ, ಲಾಲನೆ, ಪಾಲನೆ ಎಲ್ಲವೂ ಇಂದು ರಾಜಕೀಯವೇ ಆಗಿಬಿಟ್ಟಿರುವುದರಿಂದ ಈ ವಿಷಯವಾಗಿ ಒಂದು ಗಾಂಭೀರ್ಯವನ್ನು ನಿರೀಕ್ಷಿಸುವುದು ನಮ್ಮದೇ ತಪ್ಪೋ ಏನೋ?

ಒಂದು ದೇಶ ಕಟ್ಟುವ ಕೆಲಸಕ್ಕೆ ಅಡಿಪಾಯ ಬೀಳುವುದು ಅಲ್ಲಿನ ಹೈಯರ್ ಎಜುಕೇಶನ್ ಸೆಕ್ಟರ್ನಲ್ಲಿ, ಅಂದರೆ ಅದರ ಯೂನಿವರ್ಸಿಟಿಗಳಲ್ಲಿ. ಭಾರತ 2020ರೊಳಗೆ ಸೂಪರ್ ಪವರ್ ಆಗಬೇಕೆಂದು, ಆಗೇ ಬಿಡುತ್ತದೆಂದೂ ಬಡಾಯಿ ಕೊಚ್ಚಿಕೊಳ್ಳುವವರು ಮೊದಲು ಇಂದು ನಮ್ಮ ಯೂನಿವರ್ಸಿಟಿ ಶಿಕ್ಷಣದೆಡೆಗೆ ಒಮ್ಮೆಯಾದರೂ ಕಣ್ಣಾಡಿಸಲಿ. ವಿದ್ಯಾ ದೇಗುಲಗಳಾಗಬೇಕಾದವು ಹೇಗೆ ಹೊಲಸೆದ್ದು ನಾರುತ್ತಿವೆ ಎಂಬುದು ಅರ್ಥವಾದೀತು.
(ಈ ಭಾನುವಾರದದಲ್ಲಿ ಪ್ರಕಟಿತ)

2 thoughts on “ವಿದ್ಯಾ ದೇಗುಲಗಳು ಹೊಲಸೆದ್ದು ಹೋದಾಗ.........

umesh desai said...

ಆದಿತ್ಯ ಮಹತ್ವದ ಲೇಖನ ನಾವು ಯಾರನ್ನೂ ಯಾವುದನ್ನೂ ದೂರುವಂತಿಲ್ಲ ನಮಗೆ ಅರಿವಿಲ್ಲದೆಯೇ ಈ ಹೊಲಸು ವ್ಯವಸ್ಥೆಗೆ ಪಾಲುದಾರರಾಗುತ್ತಿದ್ದೇವೆ. ಇನ್ನು ನಾಳೆ ನಮ್ಮ ಮಕ್ಕಳ
ವೇಳೆ ಹೇಗಿದ್ದೀತು ಕಲ್ಪಿಸಲೂ ಭಯವಾಗ್ತಿದೆ.

Anonymous said...

ಇಂಗ್ಲೀಷ್ ಪದಗಳ ಅತಿಯಾದ ಬಳಕೆ ಇದೆ. ಕಡಿಮೆ ಮಾಡಿಕೊಂಡರೆ ಚೆನ್ನಾಗಿರುತ್ತದೆ.

- ಶಿವಾನಂದ

Proudly powered by Blogger
Theme: Esquire by Matthew Buchanan.
Converted by LiteThemes.com.