ಬೆಂಗಳೂರು ಇಸ್ಕಾನ್ ಎಂಬ ದಂಧೆಯ ಅಡ್ಡೆ!


ಇಂದಲ್ಲ. ಬೆಂಗಳೂರಿನಲ್ಲಿ ಇಸ್ಕಾನ್ ಶುರುವಾದ ದಿನದಿಂದಲೂ ಅದರ ಮೇಲೆ ಅನೇಕ ಆರೋಪಗಳಿವೆ. ಅದು ಅತ್ಯುತ್ತಮ ವಿದ್ಯಾರ್ಥಿಗಳ ಬ್ರೇನ್ ವಾಶ್ ಮಾಡಿ ಜುಟ್ಟು ಬಿಡಿಸಿ ಜೀತಕ್ಕೆ ಹಚ್ಚುತ್ತದೆ ಎಂಬಲ್ಲಿಂದ ಹಿಡಿದು ಈ ಇಸ್ಕಾನ್ ಒಳಗೆ ಅಂಗಾಂಗ ಕಳವಿನಂತಹ ಕಾಳದಂದೇ ನಡೆಯುತ್ತಿದೆ ಎಂಬಲ್ಲಿಯವರೆಗೂ ಹರಡಿತ್ತು. ಇವ್ಯಾವೂ ಅಂಟಿಕೊಳ್ಳಲಿಲ್ಲ. ಆದರೆ ಇಸ್ಕಾನ್ನಂತಹ ಆಧ್ಯಾತ್ಮಿಕ ಕೇಂದ್ರದಲ್ಲಿನ ಹಣಕಾಸು ವ್ಯವಹಾರಗಳು, ಅಕ್ರಮಗಳ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು. ಇದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಅಕ್ಷಯ ಪಾತ್ರಾ ಯೋಜನೆಯಡಿಯಲ್ಲಿ ಅತ್ತ ವಿದೇಶಗಳಿಂದ ದೇಣಿಗೆ ಸಂಗ್ರಿಹಿಸುತ್ತಾ, ಇತ್ತ ಸರ್ಕಾರದಿಂದ  ಅದಕ್ಕೆ ಹಣ ಪಡೆಯುತ್ತಾ, ಈ ಯೋಜನೆಯಲ್ಲಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿ, ಅದನ್ನು ಮಾರಿಕೊಳ್ಳುತ್ತಿದ್ದಾರೆ ಎಂಬುದು ಡಿಕೆಶಿ ಆರೋಪ. ಇನ್ನು ಇಸ್ಕಾನ್ ಶುದ್ಧಾನುಶುದ್ಧ ರಿಯಲ್ ಎಸ್ಟೇಟ್ ಏಜೆನ್ಸಿಯಂತೆ ಕಾರ್ಯನಿರ್ವಹಿಸುತ್ತಿತ್ತು. ಡಿಕೆಶಿ ಅವರ ಈ ಆರೋಪ ಮತ್ತು ಹೋರಾಟದ ಫಲವಾಗಿ ಒಂದು ಸದನ ಸಮಿತಿಯನ್ನೂ ರಚಿಸಲಾಯಿತಾದರೂ ಅದರ ವರದಿಯಲ್ಲಿರುವುದು ಇಸ್ಕಾನ್ನ ಬೋಪರಾಕು ಅಷ್ಟೆ. 

ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ಹರಡಿಕೊಂಡಿರುವ ಇಸ್ಕಾನ್ನ ಹಿಡಿತದಿಂದ ಬಿಡಿಸಿಕೊಳ್ಳಲೆತ್ನಿಸಿದ್ದ ಬೆಂಗಳೂರು ಇಸ್ಕಾನ್ ಸಂಸ್ಥೆಯ ಮಧುಪಂಡಿತ ದಾಸರ ಕೊಡುಗೆ ಅಪಾರ. ಈಗ ಕರ್ನಾಟಕ ಹೈಕೋರ್ಟ್ ಮಧುಪಂಡಿತ ದಾಸರ ಮೋಸದ ವಾದಗಳನ್ನು ತಿರಸ್ಕರಿಸಿ ಬೆಂಗಳೂರು ಇಸ್ಕಾನ್ ಅನ್ನು ಅಧಿಕೃತ ಇಸ್ಕಾನ್ ವಲಯಕ್ಕೆ ಮರು ಸೇರಿಸಿದೆ. 

ಅಸಲಿಗೆ ಏನಿದು ವಿವಾದ? 1966ರಲ್ಲಿ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಭಕ್ತಿವೇದಾಂತ ಪ್ರಭುಪಾದ ಬಂಗಾಲದ ಗೌಡಿಯ ಪ್ರಾಂತ್ಯದ ವೈಷ್ಣವ ಭಕ್ತಿ ಸಂಪ್ರದಾಯವನ್ನು ಪ್ರತಿಪಾದಿಸಿದರು. ಅಮೆರಿಕೆಯಲ್ಲಿ ಇದೊಂದು ಭಕ್ತಿ ಪಂಥವಾಗಿ ಬೆಳೆಯುತ್ತಾ ಹೋಯಿತು. ಮುಂದೆ ಇದೇ ಪಂಥ ಸಾಂಸ್ಥೀಕರಣಗೊಂಡು ಇಸ್ಕಾನ್ ದೇವಾಲಯಗಳು ಸಂಸ್ಥೆಗಳೂ ಹುಟ್ಟಿಕೊಂಡವು. ಮೊದಲಿಗೆ ಅಮೆರಿಕೆಯಲ್ಲಷ್ಟೆ ಇದ್ದ ಇದು ನಂತರ ವಿಶ್ವದಾದ್ಯಂತ ಹರಡತೊಡಗಿತು, ಮುಖ್ಯವಾಗಿ ಭಾರತದಲ್ಲಿ. 1971ರಲ್ಲಿ ಭಾರತದಲ್ಲಿ ಮೊದಲ ಇಸ್ಕಾನ್ ಪ್ರಾರಂಭವಾಯಿತು. ಇವತ್ತಿನ ಮುಂಬೈನಲ್ಲಿ. ಇದರ ನೇತೃತ್ವ ವಹಿಸಿದ್ದವರು ಪ್ರಭುಪಾದರೇ. ಈ ಸಂದರ್ಭದಲ್ಲಿ ಸಾರ್ವಜನಿಕ ದತ್ತಿ ನಿಯಮದಂತೆ ಒಂದು ಟ್ರಸ್ಟ್ ಅನ್ನು ಕೂಡ ನೋಂದಣಿ ಮಾಡಿದ್ದಾರೆ. ನಂತರ ಭಾರತದಲ್ಲಿ ಸ್ಥಾಪಿಸಲಾಗಿರುವ ಎಲ್ಲ ಇಸ್ಕಾನ್ ಸಂಸ್ಥೆಗಳೂ ಈ ಟ್ರಸ್ಟ್ನ ಶಾಖೆಗಳಾಗಿಯೇ ಕಾರ್ಯ ನಿರ್ವಹಸಿವೆ. ಭಾರತದ ಮಟ್ಟಿಗೆ ಮುಂಬೈ ಇಸ್ಕಾನ್ನ ಮುಖ್ಯ ಕಛೇರಿ. ನಂತರದ ದಿನಮಾನಸದಲ್ಲಿ ಇಸ್ಕಾನ್ ಭಾರತದಾದ್ಯಂತ ಹರಡಿಕೊಂಡಿದೆ. ಇಂದು ಒಟ್ಟು ಸುಮಾರು 30 ನಗರಗಳಲ್ಲಿ ಇಸ್ಕಾನ್ ಸಂಸ್ಥೆಗಳಿವೆ. ಅಂತೆಯೇ ಬೆಂಗಳೂರಿನಲ್ಲಿ ಇಸ್ಕಾನ್ನ ಕಾರ್ಯಚಟುವಟಿಕೆಗಳು ಶುರುವಾದದ್ದು 1975-76ರ ಆಜುಬಾಜಿನಲ್ಲಿ. ಆಗ ಇನ್ಫಾಂಟ್ರಿ ರಸ್ತೆಯ ಒಂದು ಅನಾಮಿಕ ಅಪಾರ್ಟ್ಮೆಂಟಿನಲ್ಲಿ ಇದು ಕಾರ್ಯನಿರ್ವಹಿಸುತ್ತಿತ್ತು. 

ಮೊದಲ ದಿನಗಳಲ್ಲಿಯೇ ಕೊಂಚ ಅಪಸ್ವರಗಳನ್ನು ಎದುರಿಸಿದ ಬೆಂಗಳೂರು ಇಸ್ಕಾನ್ ನಂತರದ ದಿನಗಳಲ್ಲಿ ಸಾಕಷ್ಟು ಬೆಳೆಯಿತು. ಅಷ್ಟರ ನಡುವೆ 1984ರಲ್ಲಿ ಮಧು ಪಂಡಿತ ದಾಸರನ್ನು ಬೆಂಗಳೂರಿನ ಇಸ್ಕಾನ್ನ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಇವರ ನಾಯಕತ್ವದಲ್ಲಿಯೇ ಬೆಂಗಳೂರಿನಲ್ಲಿ ಇಸ್ಕಾನ್ ರೆಕ್ಕೆಯಗಲಿಸಿ ಹಾರಾಡಿತು. ಅಂದಿನ ಅದೇ ಅಪಸ್ವರವನ್ನು ಇದೇ ಮಧುಪಂಡಿತ ದಾಸ ಬಳಸಿಕೊಂಡು ಇಂದು ಬೆಂಗಳೂರು ಇಸ್ಕಾನ್ ಅನ್ನೇ ನುಂಗಿ ಹಾಕುವ ಹಂತಕ್ಕೆ ಬೆಳೆದು ನಿಂತರುವುದು ವಿಪರ್ಯಾಸ . ಇರಲಿ. 1988ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭ. ಇಸ್ಕಾನ್ ಸಂಸ್ಥೆಗೆ ರಾಜಾಜಿನಗರದ ಕಾರ್ಡ್ ರಸ್ತೆಯಲ್ಲಿದ್ದ 6.5 ಎಕರೆ ವಿಸ್ತೀರ್ಣದ ಒಂದು ಸಣ್ಣ ಗುಟ್ಟವನ್ನು ಕೊಡುತ್ತಾರೆ. ಅದಕ್ಕೆ ರಾಮಕೃಷ್ಣ ಹಿಲ್ ಎಂದು ನಾಮಕರಣವಾಗುತ್ತದೆ. 

ಅಲ್ಲಿಂದ ಶುರು, ಬೆಂಗಳೂರು ಇಸ್ಕಾನ್ನ ಜೈತ್ರಯಾತ್ರೆ. ಆದರೆ ಅದು ಅಷ್ಟು ಮಾತ್ರ ಆಗಿರಲಿಲ್ಲ. ಅದು ಮಧು ಪಂಡಿತ ದಾಸರ ಜೈತ್ರಯಾತ್ರೆಯೂ ಹೌದು. ಈ ರಾಮಕೃಷ್ಣ ಹಿಲ್ನ ಮೇಲೆ ತಲೆಯೆತ್ತಿತು ಭವ್ಯ ದೇವಾಲಯ. ವಿಶ್ವದ ಅತಿ ದೊಡ್ಡ ಇಸ್ಕಾನ್ ದೇವಾಲಯ. ಸ್ವತಃ ಸಿವಿಲ್ ಇಂಜಿನಿಯರ್ ಆಗಿರುವ ಮಧು ಪಂಡಿತ ದಾಸರೇ ಈ ದೇವಾಲಯವನ್ನು ವಿನ್ಯಾಸಗೊಳಿಸಿದರು. ಇದನ್ನು ನಿರ್ಮಿಸಲು ಒಂದು ದಶಕವೇ ಹಿಡಿಯಿತು. 1997ರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ಇದನ್ನು ಉದ್ಘಾಟಿಸಿದರು. ಬೆಂಗಳೂರು ಇಸ್ಕಾನ್ ಎಂದ ಕೂಡಲೇ ಭವ್ಯ, ಬೃಹತ್, ವೈಭವ ಇವೇ ವಿಶೇಷಣಗಳು ಕೇಳಿಬರತೊಡಗಿದವು. ಇವೆಲ್ಲವುಗಳೊಂದಿಗೆ ಮಧುಪಂಡಿತ ದಾಸರೂ ಗುರುತಿಸಿಕೊಳ್ಳತೊಡಗಿದರು. ಬೆಂಗಳೂರು ಇಸ್ಕಾನ್ ಇದರಲ್ಲೇ ಕಳೆದು ಹೋಯಿತೇ ಹೊರತು, ಆಧ್ಯಾತ್ಮ ಕೈತಪ್ಪಿ ಹೋಯಿತು. ಇಲ್ಲಿ ಶುರುವಾದದ್ದು ಹಣದ ವೈಭವ. ಅದೆಲ್ಲವೂ ತನ್ನದೇ ಎಂಬುದು ಮಧುಪಂಡಿತ ದಾಸರ ಅಂಬೋಣ. ಭಾರತದಲ್ಲಿ ಇಸ್ಕಾನ್ ಎಂದರೆ ತಾನು ಮಾತ್ರ ಎಂಬ ಭ್ರೆಮೆಗೆ ಬಿದ್ದರು ಮಧು ಪಂಡಿತ ದಾಸ್! ಇಷ್ಟೆಲ್ಲಾ ಸಾಧಿಸಿದ ನಂತರ ಮುಂಬೈ ಇಸ್ಕಾನ್ನ ಅಡಿಯಾಳಾಗಿ ಪ್ರತಿಯೊಂದಕ್ಕೂ ಅವರ ಅನುಮತಿ ಪಡೆಯುವುದು ಅವರಿಗೆ ಲೆಕ್ಕ ಒಪ್ಪಿಸುವುದನ್ನು ಸಹಿಸದಾದರು ಮಧೂಪಂಡಿತ ದಾಸ್. ಆಗಲೇ ಶುರುವಾಯಿತು ಇವರ ಮಸಲತ್ತು. 1998-99 ರ ಸುಮಾರಿಗೆ ಇಸ್ಕಾನ್ ಚಳುವಳಿಯಲ್ಲಿ ಒಂದು ತಾತ್ವಿಕ ಭಿನ್ನಾಭಿಪ್ರಾಯ ಮೊಳೆಯಿತು. ಪ್ರಭುಪಾದರ ನಂತರ ಯಾರಿಗೂ ಆ ಪೀಠವೇರುವ ಅರ್ಹತೆಯಿಲ್ಲವೆಂದು ವಾದಿಸುತ್ತಾ ಇಂದಿನ ಹಿರಿಯರನ್ನು ಕೆಲವರು ಧಿಕ್ಕರಿಸಿದರು. ಭಾರತದಲ್ಲಿ ಕಲಕತ್ತೆಯ ಅಭಿರೀಂದ್ರನ್ ದಾಸ್ ಇದನ್ನೇ ವಾದಿಸಿದರು. ಈ ಸುವರ್ಣಾವಕಾಶವನ್ನು ಬಳಸಿಕೊಂಡ ಮಧುಪಂಡಿತ ದಾಸ ಅಭಿರೀಂದ್ರನ್ ದಾಸ್ ಅವರಿಗೆ ದನಿಗೂಡಿಸಿದರು. ಆದರೆ ಇಸ್ಕಾನ್ ಇವರಿಬ್ಬರನ್ನೂ ಈ ಸ್ಥಾನಗಳಿಂದ ಕೆಳಗಿಳಿಸ ಹೋರಟಾಗ ಮಧುಪಂಡಿತ ದಾಸ ರಾಜಿ ಮಾಡಿಕೊಂಡುಬಿಟ್ಟರು. ಅಭಿರೀಂದ್ರನ್ ದಾಸ್ ಹೋರಾಡುತ್ತಲೇ ನಿರ್ಗಮಿಸಿದರು. ಇದೂ ಕೈಗೂಡದಾದಾಗ ಮಧು ಪಂಡಿತ ದಾಸರು ಕೈಹಾಕಿದ್ದು ಶುದ್ಧಾನುಶುದ್ಧ 420 ಕೆಲಸಕ್ಕೆ!

ಬೆಂಗಳೂರು ಇಸ್ಕಾನ್ ಮೊದಲ ದಿನಗಳಲ್ಲಿಯೇ ಕೆಲವು ಅಪಸ್ವರಗಳನ್ನು ಎದುರಿಸಿತೆಂದು ಹೇಳಿದ್ದೆನಷ್ಟೆ. 1976ರಲ್ಲಿ ಬೆಂಗಳೂರಿನಲ್ಲಿ ಇಸ್ಕಾನ್ ಪ್ರಾಂರಂಭದ ದಿನಗಳಲ್ಲಿ ಅದರ ಮುಖ್ಯಸ್ಥರಾಗಿದ್ದವರು, ಶಂಖಬ್ರಿಥ್ ದಾಸರು. ಅವರು 1978ರಲ್ಲಿ ಇಸ್ಕಾನ್ ಬೆಂಗಳೂರು ಹೆಸರಿನಲ್ಲೊಂದು ಟ್ರಸ್ಟ್ ಅನ್ನು ನೋಂದಾಯಿಸುತ್ತಾರಾದರೂ, ಮುಂಬೈ ಇಸ್ಕಾನ್ ಈ ಕುರಿತು ಆಕ್ಷೇಪಣೆ ಎತ್ತಿದ ಕಾರಣ ಅದನ್ನು ಅಲ್ಲಿಗೇ ಬಿಡಲಾಯಿತು. ಈ ಟ್ರಸ್ಟ್ ಅನ್ನು ಕಾನೂನು ರೀತ್ಯಾ ಬರಖಾಸ್ತುಗೊಳಿಸಲಿಲ್ಲ. ಅದೇ ಮುಂದೆ ಬೆಳೆದು ಹೆಮ್ಮರವಾಯಿತು. ಯಾವಾಗ ಅಭಿರೀಂದ್ರನ್ ದಾಸರೆತ್ತಿದ ತಾತ್ವಿಕ ಪ್ರಶ್ನೆಯೂ ಬೆಂಗಳೂರು ಇಸ್ಕಾನ್ ಅನ್ನು ಇತರೆ ಇಸ್ಕಾನ್ಗಳಿಂದ ಬೇರ್ಪಡಿಸದಾಯಿತೋ, ಆಗ ತನ್ನ ಸಾಮ್ರಾಜ್ಯ ಸ್ತಾಪನೆಯ ಕನಸನ್ನು ನನಸು ಮಾಡಿಕೊಳ್ಳಲು ಮಾರ್ಗ ಹುಡುಕುತ್ತಿದ್ದ ಮಧು ಪಂಡಿತ ದಾಸರಿಗೆ ಹುಲ್ಲುಕಡ್ಡಿಯಾಗಿ ಸಿಕ್ಕಿದ್ದು ಇದೇ ಖೊಟ್ಟಿ ಇಸ್ಕಾನ್ ಟ್ರಸ್ಟ್. ಅಸಲಿಗೆ ಒಂದೇ ಒಂದು ಜೆನೆರಲ್ ಬಾಡಿ ಮೀಟಿಂಗ್ ಕೂಡಾ ನಡೆಯದಿದ್ದ ಈ ಟ್ರಸ್ಟ್ ಅನ್ನು ಮಧುಪಂಡಿತ ದಾಸ್ ಪುನರುತ್ಥಾನಗೊಳಿಸಿದರು. ಅಲ್ಲಿಂದ ಶುರು ಮಧು ಪಂಡಿತ ದಾಸರ ಫೋರ್ಜರಿ ಪುರಾಣ. ಮೊದಲಿಗೆ 1978ರ ಟ್ರಸ್ಟ್ ಪತ್ರಗಳನ್ನು ತಿದ್ದಿ ಅದರಲ್ಲಿ ತನ್ನ, ತನ್ನ ಹೆಮಡತಿ, ಬಾಮೈದ ಮತ್ತು ನಾದಿನಿಯರ ಹೆಸರುಗಳನ್ನು ಸೇರಿಸುತ್ತಾರೆ. ಶಂಕರಬ್ರಿಥ್ ದಾಸ್ ಮತ್ತಿತರ ಸದ್ಸಯರ ಸಹಿಗಳನ್ನು ಫೋರ್ಜರಿ ಮಾಡಿರುತ್ತಾರೆ. 1988ರಲ್ಲಿ ಈ ಟ್ರಸ್ಟ್ಗೆ ಮಧುಪಂಡಿತ ದಾಸರನ್ನು ಅದ್ಯಕ್ಷರನ್ನಾಗಿ ನೇಮಿಸಿರುವಂತೆ ಪತ್ರಗಳು ಸಿದ್ಧವಾಗುತ್ತವೆ. ಇನ್ನೂ ಹಾಸ್ಯಸ್ಪದವೆಂದರೆ 1989ರಲ್ಲಿ ಮುಂಬೈ ಇಸ್ಕಾನ್ ತನ್ನ ಒಡೆತನದಲ್ಲಿದ್ದ ಬೆಂಗಳೂರಿನ ಇಸ್ಕಾನ್ ಅಸ್ತಿಯನ್ನೆಲ್ಲವನ್ನೂ ಈ ಟ್ರಸ್ಟ್ಗೆ ದಾನ ಮಾಡಿತಂತೆ! ಹಾಗಿದೆ ಪತ್ರಗಳು! ಇಷ್ಟಕ್ಕೇ ನಿಲ್ಲುವುದಿಲ್ಲ ಮಧುಪಂಡಿತದಾಸರ ಅತಿ ಬುದ್ದಿವಂತಿಕೆಗಳು. 2001ರಲ್ಲಿ ಒಂದೇ ದಿನ 12 ವರ್ಷಗಳ ಆದಾಯ ತೆರಿಗೆಯನ್ನು ಈ ಹಳೆಯ ಟ್ರಸ್ಟ್ನ ಹೆಸರಿನಲ್ಲಿ ದಾಖಲಿಸಿದ್ದಾರೆ. ಆ ಕೂಡಲೇ ಮುಂಬೈ ಇಸ್ಕಾನ್ಗೂ ತಮಗೂ ಸಂಬಂಧವೇ ಇಲ್ಲ. ಇದು ಬೆಂಗಳೂರು ಇಸ್ಕಾನ್ ಟ್ರಸ್ಟ್ನ ಒಡೆತನದಲ್ಲಿರುವ ಸಂಸ್ಥೆ ಎಂದು ಕೋರ್ಟ್ ನಲ್ಲಿ ದಾವೆ ಹೂಡಿಬಿಟ್ಟರು! 

ಆದರೆ 1988 ರಿಂದ 1999ರವರೆಗೂ ಇದೇ ಮಧುಪಂಡಿತ ದಾಸ್, ಎಲ್ಲ ದಾಖಲೆಗಳಲ್ಲೂ ತನ್ನನ್ನು ಮುಂಬ್ಯ ಇಸ್ಕಾನ್ನ ಬೆಂಗಳೂರು ಶಾಖೆಯ ಮ್ಯಾನೇಜರ್ ಎಂದೇ ಬಣ್ಣಿಸಿಕೊಂಡಿದ್ದಾನೆ. 1989ರಿಂದ 1999ರವರೆಗೂ ಬೆಂಗಳೂರು ಇಸ್ಕಾನ್ ಪ್ರತಿ ವರ್ಷವೂ ತನ್ನ ಹಣಕಾಸು ಲೆಕ್ಕಪತ್ರಗಳನ್ನು ಮುಂಬೈಗೆ ಸಲ್ಲಿಸಿದ್ದು, ಅವರು ತಮ್ಮ ಹೆಸರಿನಲ್ಲಿ ಆದಾಯ ತೆರಿಗೆ ಪಾವತಿಸಿದ್ದಾರೆ! ಇದೆಲ್ಲ ದಾಖಲೆಗಳ ಹೊರತಾಗಿಯೂ ಇಲ್ಲಿನ ಕೆಳ ಹಮತದ ನ್ಯಾಯಾಲಯ ಮಧು ಪಂಡಿತದಾಸರ ಪರವಾಗಿಯೇ ತೀರ್ಪು ನೀಡಿತು. ಇದರ ವಿರುದ್ಧ ಮುಂಬೈ ಇಸ್ಕಾನ್ ಹೈಕೋರ್ಟ್  ಮೊರೆ ಹೋಗಿತ್ತು. ಈಗ ಹೈಕೋರ್ಟ್ ಮಧುಪಂಡಿತ ದಾಸರ ಕಪಟವನ್ನು ಮನಗಂಡು, ಬೆಂಗಳೂರು ಇಸ್ಕಾನ್ ಮುಂಬೈ ಇಸ್ಕಾನ್ಗೇ ಸೇರತಕ್ಕದ್ದೆಂದು ತೀರ್ಪು  ನೀಡಿದೆ. 

2001ರಲ್ಲಿ ಕೇಸ್ ದಾಖಲಿಸಿದ ನಂತರ ಬೆಂಗಳೂರು ಇಸ್ಕಾನ್ ಅಕ್ಷರಶಃ ಮಧು ಪಂಡಿತದಾಸ್ ಮತ್ತಾತನ ಕುಟುಂಬಸ್ಥರ ಸಾಮ್ರಾಜ್ಯವಾಗಿ ಹೋಗಿತ್ತು. ಮಧು ಪಂಡಿತ ದಾಸ ಅದ್ಯಕ್ಷನಾದರೆ, ಈತನ ಬಾವಮೈದುನ ಚಂಚಲಪತಿ ದಾಸ ಉಪಾಧ್ಯಕ್ಷ, ಇವರಿಬ್ಬರ ಹೆಂಡತಿಯರು ಸಮಿತಿಯ ಸದಸ್ಯರು! ಅದೊಂದು ಸಮೃದ್ಧ ಹುಲ್ಲುಗಾವಲು. ಇಸ್ಕಾನ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಾಂತರ ರೂ.ಗಳ ದೇಣಿಗೆ ಎತ್ತಿರುವ ಮಧು ಪಂಡಿತದಾಸ ಅದೆಲ್ಲವನ್ನೂ ಹೂಡಿಸಿರುವುದು ರಿಯಲ್ ಎಸ್ಟೆಟ್ ಉದ್ಯಮದಲ್ಲಿ! ಹಿಂಡಿನಿಂದ ತಪ್ಪಿಸಿಕೊಂಡಿದ್ದ ಕುರಿಯೊಂದನ್ನು ಇಂದು ನ್ಯಾಯಾಲಯ ಮತ್ತೆ ಮಂದೆಗೆ ಸೇರಿಸಿದೆ. ಇಸ್ಕಾನ್ ಗವರ್ನೆನಿಂಗ್ ಕೌನ್ಸಿಲ್ ಮಧುಪಂಡಿತ ದಾಸನ ವಿರುದ್ಧ ಯಾವ ಶಿಸ್ತು ಕ್ರಮವನ್ನು ತೆಗೆದುಕೊಳ್ಳುತ್ತದೆ? ಬೆಂಗಳೂರು ಇಸ್ಕಾನ್ ಅನ್ನು ಈತ ಮತ್ತೀತನ ಕುಟುಂಬದಿಂದ ಮುಕ್ತಗೊಳಿಸುತ್ತದೆಯೇ? ಮಧು ಪಂಡಿತ ದಾಸನ ಕಪಿಮುಷ್ಠಿಯಲ್ಲಿ, ಆಧ್ಯಾತ್ಮಿಕತೆಯ ಹಾದಿ ಬಿಟ್ಟಿದ್ದ, ಬೆಂಗಳೂರಿನ ಇಸ್ಕಾನ್ನ ಮರು ಕಟ್ಟುವಿಕೆಗೆ ಇದು ಹಾದಿಯಾದೀತಾ? 

ಅಕ್ಷಯ ಪಾತ್ರಾ ಯೋಜನೆಯ ಅಕ್ಕಿ ತಿಂದ ದಾಸ! 
ಈ ಎಲ್ಲ ಬೆಳವಣಿಗೆಗಳ ನಡುವೆ, ಅಪಾರ ಪ್ರಮಾಣದ ದೇಣಿಗೆ ಎತ್ತಲು ಮಧು ಪಂಡಿತದಾಸನಿಗೊಂದು ಫ್ರಂಟ್ ಬೇಕಿತ್ತು. ಅದಕ್ಕಾಗಿ ಆತ ಶುರು ಮಾಡಿದ್ದೇ ಅಕ್ಷಯಪಾತ್ರಾ ಯೋಜನೆ. ಬಡ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡುವ ಈ ಯೋಜನೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ಆದರೆ ಇದರ ಆಂತರ್ಯವೇ ಬೇರೆಯಿದೆ. 

ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯನ್ನು ಖಾಸಗಿಯವರಿಗೂ ವಹಿಸಿರುವ ಸರ್ಕಾರ, ಇದಕ್ಕಾಗಿ ಅವರಿಗೆ ತಗಲುವ ವೆಚ್ಚದ ಶೇ.90ರಷ್ಟನ್ನು ಸರ್ಕಾರವೇ ತುಂಬಿಸಿಕೊಡುತ್ತದೆ. ಸಂಸದ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿಯವರು ನಡೆಸುತ್ತಿರುವ ಅದಮ್ಯ ಚೇತನ ಟ್ರಸ್ಟ್ ಹಾಗೂ ಮತ್ತಿತರ ಟ್ರಸ್ಟ್ಗಳಿಗೂ ಸರ್ಕಾರ ಹೀಗೆಯೇ ವೆಚ್ಚ ಒದಗಿಸುತ್ತದೆ. ಆದರೆ ಅಕ್ಷಯಪಾತ್ರಾ ಯೋಜನೆಯ ಹೆಸರಿನಲ್ಲಿ ಭಾರತದ ಮಕ್ಕಳು ನಿರ್ಗತಿಕರು ಎಂಬಂತೆ ಚಿತ್ರಿಸಿ ವಿದೇಶದಲ್ಲಿ ಕೋಟ್ಯಂತರ ರೂ.ಗಳ ದೇಣಿಗೆ ಸಂಗ್ರಹಿಸಲಾಗಿದೆ. ಒಂದು ಜಾಹೀರಾತಿನಲ್ಲಂತೂ ಅಳುತ್ತಿರುವ ಒಂದು ಹೆಣ್ಣು ಮಗುವಿನ ಚಿತ್ರದ ಕೆಳಗೆ  i have a wish to die soon ಎಂದಿದೆ. ಇಂತದೊಂದು ಜಾಹೀರಾತಿನ ಪರಿಣಾಮಗಳನ್ನು ನೀವೇ ಊಹಿಸಿ. ಈ ರೀತಿ ದೇಣಿಗೆ ಸಂಗ್ರಹಿಸುವುದಕ್ಕೆ ಇಸ್ಕಾನ್ ಸರಕಾರದ ಅನುಮತಿ ಪಡೆಯಬೇಕು. ಆದರೆ ಅವರು ಇದರ ಗೋಜಿಗೇ ಹೋಗಿಲ್ಲ. 

ಸಂಗ್ರಹವಾದ ಅಪಾರ ಹಣಕ್ಕೆ ಲೆಕ್ಕವೇ ಇಲ್ಲ. ಉದಾಹರಣೆಗೆ 2006-07, 07-08, 08-09ರಲ್ಲಿ ಅಕ್ಷಯಪಾತ್ರಾ ಯೋಜನೆಗೆ ಒಟ್ಟು 21,45,297 ಡಾಲರ್ಗಳಷ್ಟು ಸಂಗ್ರಹವಾಗಿರುವುದಾಗಿ ಅವರವೇ ಲೆಕ್ಕ ಪತ್ರಗಳು ಹೇಳುತ್ತವೆ. ಇದರಲ್ಲಿ 5,49,097 ಡಾಲರ್ಗಳನ್ನು ಮಕ್ಕಳ ಊಟಕ್ಕೆ ಬಳಸಿಕೊಳ್ಳಲಾಗಿದ್ದು, ಮಿಕ್ಕ 15, 96,200 ಡಾಲರ್ಗಳದು ಇತರೆ ಖರ್ಚುಗಳು! ಇದೂ ಕೂಡ ಅದೇ ಲೆಕ್ಕಪತ್ರಗಳಲ್ಲಿದೆ! 

ಇನ್ನು ಈ ಯೋಜನೆಗೆ ಸರ್ಕಾರ ನೀಡುತ್ತಿರುವ ಅಕ್ಕಿಯಲ್ಲಿ ಶೇ.30ರಷ್ಟು ಉಳಿತಾಯವಾಗುತ್ತಿದೆಯೆಂದು ಮಧುಪಂಡಿತ ದಾಸರೇ ಅವಲತ್ತುಕೊಂಡಿದ್ದಾರೆ. ಹಾಗಾದರೆ ಈ 30% ಅಕ್ಕಿ ಎಲ್ಲಿಗೆ ಹೋಯಿತು. ಅದನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದು, ಅದನ್ನು ಪುನಃ ಪಾಲಿಷ್ ಮಾಡಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರುತ್ತಿದ್ದುದನ್ನು ಹಿಡಿದು ಈ ಗೋದಾಮುಗಳನ್ನು ಸೀಜ್ ಮಾಡಲಾಗಿದೆ! ಇದು ಮಧು ಪಂಡಿತದಾಸರ ಸಾಧನೆ. ಈ ಅಕ್ಷಯಪಾತ್ರಾ ಫೌಂಡೇಷನ್ನಿನಲ್ಲಿ ಇನ್ಫೋಸಿಸ್ಸಿನ ಮೋಹನದಾಸ ಪೈ, ರಾಮದಾಸಕಾಮತ್ರಂಥವರನ್ನು ಸೇರಿಸಿಕೊಳ್ಳಲಾಗಿದೆಯಾದ್ದರಿಂದ ಯಾರೂ ಈ ಕುರಿತು ಅನುಮಾನವನ್ನೂ ವ್ಯಕ್ತಪಡಿಸುವುದಿಲ್ಲ, ಹೇಳಿದರೆ ನಂಬುವುದೂ ಇಲ್ಲ. ಅತ್ತ ಇಸ್ಕಾನ್ನ ಹೆಸರು ಮತ್ತು ಇತ್ತ ಇಂತ ಉನ್ನತ ವ್ಯಕ್ತಿಗಳ ಚಾರಿತ್ರ್ಯವನ್ನೇ ಗುರಾಣಿಯಾಗಿ ಬಳಸಿಕೊಂಡ  ಮಧುಪಂಡಿತ ದಾಸರು ತಿಂದು ದುಂಡಗಾದರು. 

ಇನ್ನು ತನ್ಮೂಲಕ ಬಂದ ಹಣವನ್ನವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿದ್ದಾರೆ. ಇಂಡಿಯಾ ಹೆರಿಟೇಜ್ ಸೆಂಟರ್  ಎಂಬ ಹೆಸರಿನ ಒಂದು ಟ್ರಸ್ಟನ್ನು ಮಾಡಿಕೊಂಡಿರುವ ಇವರು ಹೆರಿಟೇಜ್ ಸಿಟಿ ಮಾಡ್ತೀವಿ ಎಂದು ಇದರ ಮೂಲಕ ಶುದ್ಧಾನುಶುದ್ಧ ರಿಯಲ್ ಎಸ್ಟೇಟ್ ದಂಧೆಗಿಳಿದಿದ್ದಾರೆ. ಶ್ರೀರಂಗಪಟ್ಟಣದ ಮಹದೇವಪುರದಲ್ಲಿ ಇದಕ್ಕಾಗೆಂದು 61 ಎಕರೆ, 21 ಗುಂಟೆಗಳ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದಾರೆ. 

ಇವೆಲ್ಲದರ ಕುರಿತು ಮೊದಲಿಗೆ ದನಿಯೆತ್ತಿದವರು ಡಿ.ಕೆ.ಶಿವಕುಮಾರ್. ಸದನದಲ್ಲಿ ಈ ಕುರಿತು ಗದ್ದಲವೆಬ್ಬಸಿದ ಪರಿಣಾಮ ಯೋಗೀಶ್ ಭಟ್ ಅವರ ನೇತೃತ್ವದಲ್ಲಿ ಒಂದು ಸದನ ಸಮಿತಯನ್ನೇನೋ ರಚಿಸಲಾಯಿತು. ಆದರೆ ಈ ಸದನ ಸಮಿತಿಯ ವರದಿಯಲ್ಲಿರುವುದು ಇಸ್ಕಾನ್ ಮತ್ತು ಮಧು ಪಂಡಿತ ದಾಸರ ಬೋಪರಾಕು ಅಷ್ಟೆ! ಸಮಿತಿಯ ಸದ್ಸಯರಾಗಿದ್ದ ಡಿ.ಕೆ.ಶಿವಕುಮಾರ್ ಮತ್ತು ಡಾ. ಎಚ್.ಸಿ.ಮಹದೇವಪ್ಪ ಅವರು ಒಂದು ಮೈನಾರಿಟಿ ವರದಿಯನ್ನು ಸಲ್ಲಿಸಿರುತ್ತಾರೆ. 

ಮಧು ಪಂಡಿತ ದಾಸರ ಅಕ್ರಮಗಲೆಲ್ಲವೂ ಒಂದೊಂದಾಗಿ ಹೊರಬರುತ್ತಿರುವ ಈ ಸಂದರ್ಭದಲ್ಲಿ, ಬೆಂಗಳೂರು ಇಸ್ಕಾನ್ ಅನ್ನು ಪುನಃ ತನ್ನ ಆಡಳಿತದ ವಶಕ್ಕೆ ತೆಗೆದುಕೊಳ್ಳಲಿರುವ ಮುಂಬೈ ಇಸ್ಕಾನ್, ಬೆಂಗಳೂರಿನಲ್ಲಿ ಇಸ್ಕಾನ್ಗೆ ಅಂಟಿರುವ ಕಳಂಕವನ್ನು ತೊಡೆಯಬೇಕೆಂದರೆ ಈ ಎಲ್ಲದರ ಕುರಿತು ಕೂಲಂಕುಷ ತನಿಖೆ ನಡೆಸಿ, ಮಧುಪಂಡಿತ ದಾಸ ಮತ್ತಾತನ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಮೊಕ್ಕದ್ದೊಮ್ಮೆಯನ್ನು ಹೂಡಬೇಕಿದೆ.



3 thoughts on “ಬೆಂಗಳೂರು ಇಸ್ಕಾನ್ ಎಂಬ ದಂಧೆಯ ಅಡ್ಡೆ!

Vijay said...

Tabloid Yellow journalism report iddangide.

ಕೈ. ವೆ. ಆದಿತ್ಯ ಭಾರದ್ವಾಜ said...

vijay,
this article is based on 2 legal documents.

1. the judgement given by the karnataka high court in the mentioned case and

2. the house committee report taken along with the minority report filed by D.K.Shivakumar and H.C. Mahadevappa, the members of the same committee.

if calling a spade a spade, with ample proof and legal documents to back the comment, is yellow journalism, i humbly take that.

Bhaskar Narasimhaiah said...

Mr.Bhardwaj, there are guilty eyes around unable to digest the harsh truth.Good you have justified yourself.

Proudly powered by Blogger
Theme: Esquire by Matthew Buchanan.
Converted by LiteThemes.com.