ನೈಸ್ ಪುರಾಣ - 2

ನೈಸ್ ವಿರುದ್ಧ ಗೌಡರ ಗುಡುಗು ಅವ್ಯಾಹತವಾಗಿ ಮುಂದುವರಿಯುತ್ತಲೇ ಇತ್ತಾದರೂ ಎದುರು ಕೋಟೆಯಿಂದ ಒಂದೇ ಒಂದು ಸೊಲ್ಲಿರಲಿಲ್ಲ! ಖೇಣಿ ಸಾಹೇಬರು ಎದೆಲ್ಲೋ ನಾಪತ್ತೆಯಾಗಿಬಿಟ್ಟಿದ್ದರು. ನಮ್ಮ ಪತ್ರಕರ್ತರಿಗೆಲ್ಲರಿಗೂ ಅವರ ಮಾತುಗಳ ಮನರಂಜನೆಯಿಲ್ಲದೆ ಬೋರೋ ಬೋರು...ಇದನ್ನರಿತೋ ಏನೋ ಮೊನ್ನೆ ಖೇಣಿ ಸಾಹೇಬರು ಧುತ್ತನೆ ಅಶೋಕ ಹೋಟೆಲ್ನಲ್ಲಿ ಪ್ರತ್ಯಕ್ಷರಾದರು. ಎಲ್ಲ ಪತ್ರಕರ್ತರನ್ನೂ ಕಲೆ ಹಾಕಿ ದೇವೇಗೌಡರ ಎಲ್ಲ ಆಪಾದನೆಗಳಿಗೂ ಅವರಿಗೆ ತೋಚಿದಂತೆ ಉತ್ತರ ಕೊಟ್ಟರು. ಇವರೂ ಕೆಲವು ಆಪಾದನೆಗಳನ್ನು ಮಾಡಿದರಾದರೂ ಪೂರಕ ದಾಖಲೆಗಳಿಲ್ಲದೆ ತಬ್ಬಿಬ್ಬಾದರು. ಅತ್ತ ಗೌಡರು ನೈಸ್ ಬಾಧಿತ 1500 ರೈತರ ಗುಂಪು ಕಟ್ಟಿಕೊಂಡು ದೆಹಲೀ ಛಲೋ ಅಂದಿದ್ದಾರೆ. ಪಾರ್ಲಿಮೆಂಟ್ ಮುಂದೆ ಈ ರೈತರು ಧರಣಿ ಕೂತರು. ಸರ್ಕಾರದ ಮಾನ ದೆಹಲೀಲಿ ಹರಾಜ್! ಇರಲಿ ಬಿಡಿ.

ಖೇಣಿ ಸಾಹೇಬರು ಬೇರೆ ಏನೇ ಹೇಳಲಿ ಒಂದನ್ನಂತೂ ಸರಿಯಾಗಿ ಹೇಳಿದರು. ಈ ನೈಸ್ ಪ್ರಾಜೆಕ್ಟ್ ಒಂದು ಆನೆ. ಅದನ್ನು ಒಬ್ಬೊಬ್ಬ ಕುರುಡ ಒಂದೊಂದು ಬದಿಯಿಂದ ಮುಟ್ಟುತ್ತಾ ತಡವುತ್ತಾ ಇದು ಹೀಗೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾನೆ. ಹೌದು ನಿಜ. ನೈಸ್ ಕಾಮಗಾರಿಯೆಂಬ ಆನೆಯನ್ನು ಸವಾ ಲಕ್ಷ ಮಂದಿ ಕುರುಡರು ಸವಾ ಲಕ್ಷ ರೀತಿ ವರ್ಣಿಸುತ್ತಿದ್ದಾರೆ. ಒಬ್ಬೊಬ್ಬರದೂ ಒಂದೊಂದು ಇಂಟರ್ಪ್ರೆಟೇಷನ್ಗಳು, ರಾಜಕೀಯ ವಾದಗಳು. ಅದಕ್ಕೇ ಜನರಲ್ಲಿ ಈ ಕುರಿತು ಎಲ್ಲವೂ ಗೊಂದಲಪುರ. ಯಾರದು ಸತ್ಯವೋ? ಯಾರದು ಮಿಥ್ಯವೋ? ಅಸಲಿಗೆ ಈ ಪ್ರಾಜೆಕ್ಟ್ ಗೌಡರು ಅಡ್ಡಗಾಲಾಕಿ ಕೂತಿರೋ ಬೆಂಗಳೂರು ಅಭಿವೃದ್ಧಿಯ ಹೆಬ್ಬಾಗಿಲೋ ಇಲ್ಲ, ಅಗಣಿತ ಪ್ರಮಾಣದ ಹಗರಣವೋ? ಇವೇ ಪ್ರಶ್ನೆಗಳು ಜನರ ಮನಸ್ಸಿನಲ್ಲಿ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕೆಂದರೆ ನಾವು ಇಡಿಯ ನೈಸ್ ಪುರಾಣವನ್ನು ಒಮ್ಮೆ ಪೂರ್ಣ ವಾಚಿಸಬೇಕಾಗುತ್ತದೆ.

ನೈಸ್ ಹಗರಣದ ಬಗ್ಗೆ ದೇವೇಗೌಡರು ದನಿಯೆತ್ತಿದಾಗಲೆಲ್ಲಾ, ಅವರ ವಿರೋಧಿಗಳದು ಒಕ್ಕರಲ ಕೂಗು - ನೈಸ್ ಮೂಲತಃ ಗೌಡರ ಪಾಪದ ಕೂಸು! ಹೌದು ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಅನ್ನು ಶುರು ಮಾಡಿದ್ದೇ ಅಂದು ಮುಖ್ಯಮಂತ್ರಿಯಾಗಿದ್ದ ದೇವೇಗೌಡರು. ಆದರೆ ನಂತರ ಈ ಪ್ರಾಜೆಕ್ಟ್ ಅನೇಕ ರೂಪಾಂತರಗಳನ್ನು ಪಡೆದುಕೊಂಡಿದೆ. ಈ ರೂಪಾಂತರಗಳೇ ನೈಸ್ ಹಗರಣದ ರೂಪುರೇಖೆಗಳು ಎನ್ನುವುದು ಗೌಡರ ವಾದ. ಸ್ವಾಮಿ ಇದು ನಿಮ್ಮದೆ ಪಾಪದ ಕೂಸು ಅಂದ ಕೂಡಲೇ ಗೌಡರು ಮಾತಿಗೊಮ್ಮೆ ಈ ನೈಸ್ ಪ್ರಾಜೆಕ್ಟ್ ಮೂಲ ಒಪ್ಪಂದದ ಪ್ರಕಾರ - as originally concieved - ನಡೆಯಬೇಕು. ಅದೊಂದೆ ಇದಕ್ಕೆ ಪರಿಹಾರ ಎಂದು ಬೊಬ್ಬಿಡುತ್ತಾರೆ. ಹಾಗಾದರೆ ಈ ಮೂಲ ಒಪ್ಪಂದದಲ್ಲೇನಿದೆ? How was it arrived at?

ಅದೇ ಒಂದು ದೊಡ್ಡ ಕಥೆ. ದೇವೇಗೌಡರು ರಾಮಕೃಷ್ಣ ಹೆಗಡೆ ಕ್ಯಾಬಿನೆಟ್ಟಿನಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗಲೇ ಇಂಥದೊಮದು ಎಕ್ಸ್ಪ್ರೆಸ್ ವೇ ಪರಿಕಲ್ಪನೆ ನಡೆದಿತ್ತು. ಅದಕ್ಕಾಗಿ ಟೆಂಡರ್ ಕೂಡ ಕರೆಯಲಾಗಿತ್ತಾದರೂ ಅಷ್ಟರಲ್ಲಿ ಹೆಗಡೆ ಮತ್ತು ಗೌಡರ ನಡುವೆ ಮನಸ್ತಾಪವುಂಠಾಗಿ ಗೌಡರು ಕ್ಯಾಬಿನೆಟ್ನೀಂದ ಹೊರನಡೆದರು. ಆ ಯೋಜನೆ ಅಲ್ಲಿಗೇ ಮುರಿದುಬಿತ್ತು. ಮುಂದೆ ಗೌಡರು ಮುಖ್ಯಮಂತ್ರಿಯಾದಾಗ ಈ ಪ್ರಾಜೆಕ್ಟ್ ಅನ್ನು ಮತ್ತೆ ಕೈಗೆತ್ತಿಕೊಂಡರು. ಆಗ ದೇಶ ಆರ್ಥಿಕ ಸಂಕಷ್ಟದಲ್ಲಿತ್ತು. ಉದಾರೀಕರಣದ ಬಿಸ ಬಿಸಿ ಚರ್ಚೆ ನಡೆದಿತ್ತಾದರೂ ಅದನ್ನು ಎಲ್ಲರೂ ಇನ್ನೂ ಒಪ್ಪಿಕೊಂಡಿರಲಿಲ್ಲ. ಅಂಥ ಕಾಲಘಟ್ಟದಲ್ಲಿ ಗೌಡರು ಒಂದು ಕ್ರಾಂತಿಕಾರಕ ಎನ್ನಬಹುದಾದ ಹೆಜ್ಜೆಯನ್ನಿಡುತ್ತಾರೆ. ಪ್ರೈವೇಟು ಕಂಪೆನಿಗೆ ಈ ರಸ್ತೆ ನಿರ್ಮಾಣದ ಕಾಮಗಾರಿಯನ್ನೊಪ್ಪಿಸುವುದು, ಸರ್ಕಾರ ಯಾವುದೇ ರೀತಿ ಹಣ ತೊಡಗಿಸುವುದಿಲ್ಲ. ಬದಲಿಗೆ ಆ ಕಂಪೆನಿಯೇ ಹಣ ತೊಡಗಿಸಿ ರಸ್ತೆ ಕಟ್ಟಬೇಕು. ನಂತರ 30 ವರ್ಷಗಳ ಕಾಲ ಆ ಕಂಪೆನಿ ಆ ರಸ್ತೆಯನ್ನು ನಿರ್ವಹಿಸಬಹುದು. ಈ ಅವಧಿಯಲ್ಲಿ ಆ ರಸ್ತೆ ಮೇಲೆ ಸಂಚರಿಸುವವರಿಗೆಲ್ಲರಿಗೂ ಇಂತಿಷ್ಟು ಅಂತ ಟೋಲ್ ವಿಧಿಸಿ ತನ್ನ ಬಂಡವಾಳವನ್ನು ಹಿಂತೆಗೆದುಕೊಳ್ಳಬೇಕು. 30 ವರ್ಷಗಳ ನಂತರ ಈ ರಸ್ತೆಯನ್ನು ಸರ್ಕಾರಕ್ಕೆ ಮರು ಹಸ್ತಾಂತರಿಸಬೇಕು. ಇದನ್ನು BOOT - Build, Own, Operate and Transferನ ಪರಿಕಲ್ಪನೆಯಲ್ಲಿ ಸಿದ್ಧಪಡಿಸಲಾಗಿತ್ತು.

ಇದೇ ಪರಿಕಲ್ಪನೆಯಡಿಯಲ್ಲಿ ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲು ಅಮೆರಿಕಾದ ಒಂದು ಕಂಪೆನಿ ಮತ್ತು ಭಾರತದ ಪ್ರತಿಷ್ಠಿತ ಬಾಬಾ ಕಲ್ಯಾಣಿ ಗ್ರೂಪ್ ಅವರನ್ನೊಳಗೊಂಡ ಒಂದು ಕನ್ಸಾರ್ಶಿಯಂ ಮುಂದೆ ಬರುತ್ತದೆ. ಅದೇ ಕಾಲಕ್ಕೆ ಮುಖ್ಯಮಂತ್ರಿ ದೇವೇಗೌಡರು ದಾವೋಸ್ನಲ್ಲಿ ನಡೆದ ಜಾಗತಿಕ ಸಮ್ಮೇಳನಕ್ಕೆಂದು ಅಮೆರಿಕಕ್ಕೆ ಹೋಗುತ್ತಾರೆ. ಅಲ್ಲಿ ಮೆಸ್ಸಾಚುಟಸ್ ಗವರ್ನರ್ ವಿಲಿಯಮ್ .ಎಫ್. ವೆಲ್ಡ್ ನ `ದಿವ್ಯ ಸಾನ್ನಿಧ್ಯದಲ್ಲಿ' ಮಸ್ಸಾಚುಟಸ್ನ ಕಂಪೆನಿಗಳಾದ ವಿಎಚ್ಬಿ ಇಂಕ್., ಸಬ್ ಇಂಜಿನಿಯರಿಂಗ್ ಅಂಡ್ ಕನ್ಸ್ಟ್ರಕ್ಷನ್ಸ್ ಮತ್ತು ಭಾರತದ ಕಲ್ಯಾಣಿ ಗ್ರೂಪ್ ಅವರನ್ನೊಳಗೊಂಡ ಕನ್ಸಾರ್ಶಿಯಂನೊಂದಿಗೆ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಕಾಮಗಾರಿಗಾಗಿ ಒಪ್ಪಂದ ಮಾಡಿಕೊಳ್ಳಲಾಯಿತು. ಎಂಒಯುಗೆ ಸಹಿ ಹಾಕಲಾಯಿತು. ಅಂದು ತಾರೀಖು - ಫೆಬ್ರವರಿ 20 1995. ಈ ಒಪ್ಪಂದದಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಅನ್ನು ಈ ಕಂಪೆನಿಗಳ ಕನ್ಸಾರ್ಶಿಯಂ BOOT ಆಧಾರವಾಗಿ ವಹಿಸಿಕೊಳ್ಳುತ್ತದೆ. ಇನ್ನು ಮಿಕ್ಕ ವಿಚಾರಗಳನ್ನು, ವಿವರಗಳನ್ನು ಸರ್ಕಾರ ಕಂಪೆನಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸುತ್ತದೆ ಎಂದಷ್ಟೇ ಇದೆ. ಕಂಪೆನಿಗಳು ಈ ಕೂಡಲೇ ಪ್ರಾಜೆಕ್ಟಿನ ಕಮರ್ಷಿಯಲ್ ಮತ್ತು ಫೀಸಿಬಿಲಿಟಿ ಸರ್ವೇಯನ್ನು ನಡೆಸಿ, ಪ್ರಾಜೆಕ್ಟಿನ ಪ್ರಿಲಿಮಿನರಿ ಟೆಕ್ನಿಕಲ್ ರಿಪೋರ್ಟ್ ಅನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದಿದೆ. ಮಿಕ್ಕ ಯಾವುದೇ ವಿವರಗಳಿಲ್ಲ. ಈ ಒಪ್ಪಂದವಿರುವುದೇ ಎರಡು ಪುಟ! ಈ ಒಪ್ಪಂದದಲ್ಲಿ ಸಬ್ ಇಂಜಿನಿಯರಿಂಗ್ ಎನ್ನುವ ಕಂಪೆನಿಯ ಪರವಾಗಿ ಅಶೋಕ ಖೇಣಿ ಸಹಿ ಹಾಕಿದ್ದಾರೆ. ಗಮನಿಸಿ ಈ ಒಪ್ಪಂದದಲ್ಲಿ ನೈಸ್ ಎನ್ನುವ ಪದವೇ ಇಲ್ಲ. ಏಕೆಂದರೆ ಆಗಿನ್ನೂ ಆ ಕಂಪೆನಿಯ ಜನನವೇ ಆಗಿರಲಿಲ್ಲ!

ಇಲ್ಲೇ ಒಂದು ಸೂಕ್ಷ್ಮವೂ ಇದೆ. ಈ ಪ್ರಾಜೆಕ್ಟ್ನ ಮುಂದುವರಿಕೆಗಾಗಿ ಅನೇಕ ಕಾನೂನು ತೊಡಕುಗಳಿದ್ದವು. ಅರಸು ಕಾಲದಲ್ಲಿ ಜಾರಿಗೊಂಡಿದ್ದ ಭೂ ಸುಧಾರಣಾ ಕಾಯ್ದೆಗೆ ಕಠಿಣ ತಿದ್ದುಪಡಿ ತರಲಾಗಿತ್ತಲ್ಲದೆ ಅದನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಿ, ನ್ಯಾಯಾಲಯದಲ್ಲೂ ಪ್ರಶ್ನಿಸದ ಹಾಗೆ ಮಾಡಲಾಗಿತ್ತು. ಹೀಗಾಗಿ ಕೃಷಿಯೇತರ ಚಟುವಟಿಕೆಗಳಿಗೆ ಒಂದು ಗುಂಟೆ ಕೃಷಿ ಭೂಮಿಯನ್ನೂ ನೀಡುವ ಹಾಗಿರಲಿಲ್ಲ. ಇದಲ್ಲದೆ ಬೆಂಗಳೂರಿನ ಸುತ್ತ ಮುತ್ತ ಹಸಿರು ವಲಯವನ್ನು ನಿಗದಿಗೊಳಿಸಲಾಗಿತ್ತಾದ್ದರಿಂದ ಅಲ್ಲಿ ಈ ಪ್ರಾಜೆಕ್ಟ್ ನಡೆಯುವುದು ಕಷ್ಟ ಸಾಧ್ಯವಾಗಿತ್ತು. ಖಾಸಗಿ ಟೋಲ್ ರಸ್ತೆಗೆ ಕಾನೂನಿನಲ್ಲಿ ಅವಕಾಶವೇ ಇರಲಿಲ್ಲ! ಇದಲ್ಲದೆ ಕೆಐಎಡಿಬಿ ಮತ್ತು ಬಿಎಂಆರ್ರ್ಡಿಎ ಕಾನೂನುಗಳಿಗೂ ಕೂಡ ತಿದ್ದುಪಡಿ ತರಬೇಕಿತ್ತು. ಗೌಡರು ಈ ಪ್ರಾಜೆಕ್ಟ್ ಗಾಗಿ ಇದೆಲ್ಲವನ್ನೂ ಒಪ್ಪಿಕೊಂಡರು. ರೈತ ನಾಯಕ ದೇವೇಗೌಡರು ಈ ಪ್ರಾಜೆಕ್ಟ್ಗಾಗಿ ರೈತರ ಹಿತ ಕಾಯುತ್ತಿದ್ದ ಭೂ ಸುಧಾರಣಾ ಕಾಯ್ದೆಯನ್ನು ಸಡಿಲಗೊಳಿಸಿದರು. ಇಂದಿನ ಎಲ್ಲಾ ಕೃಷಿ ಭೂಮಿ ಒತ್ತುವರಿಗಲಿಗೆ ಇದೇ ಲೈಸೆನ್ಸ್! ಬೆಂಗಳೂರಿನ ಸುತ್ತ ಮುತ್ತ ಹಸಿರು ವಲಯವನ್ನು 10 ವರ್ಷಗಳಿಗೊಮ್ಮೆ ನಿಗದಿಗೊಳಿಸಬೇಕಾಗಿ ಮಾಡಿದರು. ಹೊಸ ಕಾನೂನಿ ಮೂಲಕ ಖಾಸಗೀ ಟೋಲ್ ರಸ್ತೆಗೆ ಅವಕಾಶ ಮಾಡಿಕೊಟ್ಟರು. ಕೆಐಎಡಿಬಿ ಮತ್ತು ಬಿಎಂಆರ್ಡಿಎ ಕಾನೂನುಗಲನ್ನು ತಿದ್ದಿ ತೀಡಿಬಿಟ್ಟರು! ಹೀಗೆ ಖೇಣಿಗೆ ಗೌಡರೇ ಕೆಂಪು ಹಾಸು ಹಾಸಿ ಸ್ವಾಗತಿಸಿದ್ದರು. ಆತನಿಗೆ ಬೇಕಾದಂತೆ ನಮ್ಮ ಕಾನೂನುಗಳನ್ನು ಗೌಡರೂ ಸೇರಿದಂತೆ ಮುಂದಿನ ಎಲ್ಲ ಸರ್ಕಾರಗಳೂ ತಿದ್ದಿ ತೀಡಿಬಿಟ್ಟು, ಅಗ್ರೀಮೆಂಟಿಗೆ ಸಹಿ ಹಾಕಿಕೊಟ್ಟು, ನ್ಯಾಯಾಲಯದಲ್ಲಿ ನಾವು ಕೇಸು ಗೆಲ್ಲಲಿಕ್ಕಾಗುವುದಿಲ್ಲವೋ ಅಂತ ಬೊಂಬಡಾ ಬಜಾಯಿಸಿದರೇನು ಪ್ರಯೋಜನ? ಖೇಣಿ ಸದ್ಯ 400 ಕೇಸುಗಳನ್ನು ಎದುರಿಸಿದ್ದಾರೆ, 400 ಕೇಸುಗಳನ್ನು ಗೆದ್ದಿದ್ದಾರೆ! ಯಾಕೆ ಗೆಲ್ಲೋದಿಲ್ಲಾ ಹೇಳಿ ಹೀಗೆ ಹರಿವಾಣದಲ್ಲಿಟ್ಟುಕೊಟ್ಟರೆ ?

21-4-1995ರಂದು ಮುಖ್ಯಮಂತ್ರಿ ದೇವೇಗೌಡರ ನೇತೃತ್ವದಲ್ಲಿ ಸರ್ಕಾರದ ಒಂದು ಸಭೆ ನಡೆಯುತ್ತದೆ. ಅದರಲ್ಲಿ ಈ ಹೆದ್ದಾರಿ ಯೋಜನೆಯನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸಬೇಕಾಗಿಯೂ ಅದಕ್ಕಾಗಿ ಒಂದು ಸಿಂಗಲ್ ವಿಂಡೋ ಕ್ಲಿಯರೆನ್ಸ್ ಸೆಲ್ ಆಗಿ ಒಂದು ಹೈ ಲೆವೆಲ್ ಕಮಿಟಿಯನ್ನು ರಚಿಸಲು ತೀರ್ಮಾನಿಸಿ , ಅಂತೆಯೇ ರಚಿಸಲಾಯಿತು. ಲೋಕೋಪಯೋಗಿ ಸಚಿವರ ನೇತೃತ್ವದ ಈ ಕಮಿಟಿಯಲ್ಲಿ ಲೋಕೋಪಯೋಗಿ, ನಗರಾಭಿವೃದ್ಧಿ, ಇಂಡಸ್ಟ್ರೀಸ್ ಸಚಿವಾಲಯಗಳ ಕಾರ್ಯದರ್ಶಿಗಳು, ಕೆಎಸ್ಐಐಡಿಸಿಯ ಅಧ್ಯಕ್ಷರು, ಮತ್ತು ನೀರಾವರಿಯ ಟೆಕ್ನಿಕಲ್ ಅಡ್ವೈಸರಿ ಕಮಿಟಿಯ ಅಧ್ಯಕ್ಷರಾದ ಶ್ರೀ ಕೆ.ಸಿ.ರೆಡ್ಡಿಯವರನ್ನೊಳಗೊಂಡಂತೆ ಈ ಕಮಿಟಿಯನ್ನು ರಚಿಸಲಾಯಿತು.
(ಮುಂದುವರಿಯುವುದು)

One thoughts on “ನೈಸ್ ಪುರಾಣ - 2

Unknown said...

ನೈಸ್ ಪುರಾಣ ಿನ್ನೊಂದು ಮಜಲು ಮುಟ್ಟಿದೆ. ಮುಂದಿನ ಸಂಚಿಕೆಗೆ ಕಾಯುತ್ತಿದ್ದೇವೆ.

Proudly powered by Blogger
Theme: Esquire by Matthew Buchanan.
Converted by LiteThemes.com.