ಕನ್ನಡಾಸಕ್ತಿಯ ತೆರೆದ ಹೃದಯ ಶಸ್ತ್ರ ಚಿಕಿತ್ಸೆ!


ರಾಜಶೇಖರ ಮೂರ್ತಿಗಳ ಸಾವಿನೊಂದಿಗೆ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯುತ್ತಲಿದ್ದು, ರಾಜ್ಯಸಭಾ ರಾಜಕಾರಣ ಮತ್ತೆ ಸುದ್ದಿಯಲ್ಲಿದೆ. ಸದ್ಯ ಸದನದಲ್ಲಿ ಬಿಜೆಪಿಗೆ 105ರ ಸಂಖ್ಯಾಬಲವಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿರುವ ಬಲ ಬರಿಯ 98. ಹಾಗಾಗಿ ಈಗಿರುವ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಹೇಳುವುದಾದರೆ ಇರುವ ಒಂದು ಸ್ಥಾನವನ್ನು ಸ್ವಾಭಾವಿಕವಾಗಿ ಬಿಜೆಪಿ ಸುಲಭವಾಗಿ ತನ್ನ ಕೈವಶ ಮಾಡಿಕೊಳ್ಳಲಿದೆ. ಹಾಗಾಗಿ ಬಿಜೆಪಿಯಲ್ಲಿ ರಾಜಕೀಯ ಗರಿಗೆದರಿತ್ತು. ರಾಜ್ಯಸಭಾ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ವಾಮನಾಚಾರ್ಯರಿಂದ ಹಿಡಿದು ಧನಂಜಯ ಕುಮಾರ್ ಅವರವರೆಗೆ. ಇದರಲ್ಲಿ ತಮ್ಮ ಬೋಪರಾಕುದಾರ ಧನಂಜಯ್ ಕುಮಾರ್ ಅವರನ್ನು ಹಿಂದೊಮ್ಮೆಯೂ ಕೂಡ ರಾಜ್ಯಸಭೆಗೆ ಕಳಿಸಲು ಶತಪ್ರಯತ್ನ ನಡೆಸಿ ವಿಫಲವಾಗಿದ್ದ ಮುಖ್ಯಮಂತ್ರಿಗಳು ಈ ಬಾರಿ ಶತಾಯಗತಾಯ ಅವರನ್ನೇ ಚುನಾಯಿಸಬೇಕೆಂದು ದೆಹಲೀ ಯಾತ್ರೆಗಳನ್ನೇನೋ ಕೈಗೊಂಡರು. ಆದರೆ ಹೈಕಮಾಂಡ್ನ ಮಟ್ಟದಲ್ಲಿ ಇವತ್ತು ಯಡಿಯೂರಪ್ಪ ಬಿಜೆಪಿಗೆ ದೊಡ್ಡ ಎಂಬರಾಸ್ಮೆಂಟು  ಎಂದು ನೋಡುವವರೇ ಹೆಚ್ಚಾಗಿದ್ದಾರೆ. ಅವರ ಮಾತಿಗೆ ಬೆಲೆ ಇಲ್ಲ.

ಅದಕ್ಕೆ ಸರಿಯಾಗಿ ಇವರು ಹಿಡಿದು ಹೋಗಿರುವುದು ಧನಂಜಯ ಕುಮಾರ್ ಅವರ ಹೆಸರನ್ನು. ಅವರಿಗೊಂದು ಇತಿಹಾಸವೇ ಇದೆ. ಸದರಿ ಧನಂಜಯ ಕುಮಾರ್ ವಾಜಪೇಯಿ ಅವರ ಸರ್ಕಾರದಲ್ಲಿ ವಿತ್ತ ಸಚಿವಾಲಯದ ರಾಜ್ಯ ಸಚಿವರಾಗಿದ್ದರು. ಆಗ ಪ್ರಮುಖ ನಟಿಯೊಬ್ಬಳ ಮನೆಯ ಮೇಲೆ ನಡೆದ ಐಟಿ ದಾಳಿಯಿಂದ ರಕ್ಷಿಸಲು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದರೆಂಬ ಆರೋಪದ ಮೇಲೆ ಅವರನ್ನು ಆ ಕೂಡಲೆ ಸಂಪುಟದಿಂದ ವಜಾ ಮಾಡಲಾಗಿತ್ತು. ನಂತರ ಧನಂಜಯ ಕುಮಾರ್ ಮೇಲೇಳಲಾಗಲೇ ಇಲ್ಲ. ಇಂತಿಪ್ಪ ಧನಂಜಯ ಕುಮಾರ್ ಯಡಿಯೂರಪ್ಪನವರ ಅತ್ಯಾಪ್ತ. ಇವರ ಹೆಸರು ಹಿಡಿದು ಹೋದ ಯಡಿಯೂರಪ್ಪನವರ ಮಾನಹಾನಿಯಾಯಿತು ಅಷ್ಟೆ. ಇದೇ ಸಂದರ್ಭವನ್ನು ಕಾಯುತ್ತಿದ್ದ ಅನಂತ್ ಕುಮಾರ್ ಶರವೇಗದಲ್ಲಿ ತಮ್ಮ ಅಸ್ತ್ರ ಪ್ರಯೋಗಿಸಿದ್ದಾರೆ. ರಾಜ್ಯದಿಂದ ಖಾಲಿಯಿರುವ ಒಂದು ರಾಜ್ಯಸಭಾ ಸ್ಥಾನಕ್ಕೆ ಭಾರತದ ಪ್ರಸಿದ್ಧ ನಟಿ dream girl ಎಂದೇ ಖ್ಯಾತರಾದ ಹೇಮಾಮಾಲಿನಿಯವರ ಹೆಸರನ್ನು ಸೂಚಿಸಿ ವರಿಷ್ಠರ ಆದೇಶ ಹೊರಡಿಸಿಯೇ ಬಿಟ್ಟಿದ್ದಾರೆ. ಮೊನ್ನೆ ಹೇಮಾಮಾಲಿನಿಯವರ ನಾಮಪತ್ರಕ್ಕೆ ಯಡಿಯೂರಪ್ಪನವರೇ ಸಾಕ್ಷಿ ಸಹಿ ಹಾಕಿದರು. ಅಲ್ಲಿಗೆ ಯಡಿಯೂರಪ್ಪನವರಿಗೆ ಮತ್ತೊಂದು ಹಿನ್ನೆಡೆಯಾಗಿರುವುದಂತೂ ದಿಟ.

ಯಡಿಯೂರಪ್ಪ ಅನಂತರ ಈ ಮೇಲಾಟಗಳಲ್ಲಿ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಮತ್ತೊಬ್ಬರು ಕನ್ನಡೇತರರು ಪರರಾಜ್ಯದವರು ಕಾಲಿಡುವಂತಾಗಿರುವುದು ದುರ್ದೈವ. ಇದಕ್ಕೆ ನಾಡಿನ ಎಲ್ಲಾ ವಲಯಗಳಿಂದಲೂ ವ್ಯಾಪಕ ಟೀಕೆ ವಿರೋಧಗಳೂ ವ್ಯಕ್ತವಾಗಿವೆ. ಇದನ್ನು ಈಶ್ವರಪ್ಪನವರಂಥವರು ಹೇಮಾಮಾಲಿನಿಯೇನೂ ಭಾರತೀಯರಲ್ವೇನ್ರಿ? ಅವರು ಯಾಕ್ರೀ ರಾಜ್ಯಸಭೆಗೆ ಹೋಗಬಾರದು? ಎಂಬ ಪರಮ ಅಪ್ರಬುದ್ಧ ಅಸಂಬದ್ಧ ಸಮರ್ಥನೆಗಳನ್ನು ಕೊಡುತ್ತಿದ್ದಾರೆ. ಸ್ವಾಮಿ ಈಶ್ವರಪ್ಪನವರೇ ಯಾರು ಹೇಳಿದವರು ಹೇಮಾಮಾಲಿನಿಯವರು ರಾಜ್ಯಸಭೆಗೆ ಹೋಗಬಾರದು ಅಂತ, ನಾವು ಹೇಳುತ್ತಿರುವುದು ಅವರು ನಮ್ಮ ರಾಜ್ಯದವರಲ್ಲ ಹಾಗಾಗಿ ನಮ್ಮ ರಾಜ್ಯವನ್ನು ಅವರು ಪ್ರತಿನಿಧಿಸುವುದು ಬೇಡ ಬದಲಿಗೆ ನಿಮ್ಮ ಪಕ್ಷದವರೆ ಆದ ನಾಡಿನ ಒಬ್ಬ ಉತ್ತಮ ಚಿಂತಕನನ್ನೋ ಇಲ್ಲ ರಾಜಕಾರಣಿಯನ್ನಾದರೂ ಸೈ ಆರಿಸಿ ಕಳಿಸಿ ಎಂದಷ್ಟೇ. ಇರಲಿ. ಈಗಾಗಲೇ ಕಳೆದ 3 ಅವಧಿಗಳಿಂದಲೂ ವೆಂಕಯ್ಯ ನಾಯ್ಡು ನಮ್ಮ ರಾಜ್ಯದಿಂದಲೇ ಆರಿಸಿ ಹೋಗುತ್ತಿದ್ದಾರೆ. ಅವರ ರಾಜ್ಯಪರ ಕಾಳಜಿಯನ್ನು ಎಲ್ಲರೂ ಬಲ್ಲರು. ಈಗ ಮತ್ತೊಬ್ಬರು ಅದೂ ಒಬ್ಬ ನಟಿ. ವೆಂಕಯ್ಯರಿಗೆ ಆಂಧ್ರದ ಬಗ್ಗೆಯಾದರೂ ಕಾಳಜಿಯಿದೆ. ಈ ಕುರಿತು ಮಾತನಾಡಿದರೆ ಸಂಕುಚಿತ ಮನೋಭಾವದವರಾಗಬೇಡಿ, ಕನ್ನಡಿಗರು ವಿಶಾಲ ಹೃದಯಿಗಳು, ನಾವು ಫೆನಟಿಕ್ ಆಗುವುದು ಬೇಡ, ಎಲ್ಲವನ್ನೂ ಕನ್ನಡ ಒಳಗೊಳ್ಳಬೇಕು ಎಂಬ ಉಪದೇಶ ಬೇರೆ. ಹೌದು ಕನ್ನಡ ಎಲ್ಲವನ್ನೂ ತೆರೆದ ಹೃದಯದಿಂದಲೇ ಸ್ವೀಕರಿಸಬೇಕು. ಆದರೆ ಅದು ಅತಿಯಾದಾಗ ಆಗುವುದು ಕನ್ನಡದ ಆಸಕ್ತಿಗಳ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ. ಈಗ ಆಗುತ್ತಿರುವುದೂ ಅದೇ. 

ಅಸಲಿಗೆ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಹೊರರಾಜ್ಯದವರೊಬ್ಬರು ಹೋದರೆ ಅದರಲ್ಲಿ ಅಂಥ ಅನಾಹುತವೇನಿದೆ? ಅದು ಇಡೀ ರಾಜ್ಯಸಭೆಯ ಮೂಲ ಕಲ್ಪನೆಗೇ ಅಭಾಸವಾಗುತ್ತದೆ. ಅಲ್ಲಿಗೆ ರಾಜ್ಯಸಭೆ ಅರ್ಥ ಕಳೆದುಕೊಳ್ಳುತ್ತದೆ. ಈ ಪ್ರಕ್ರಿಯೆಯು ಈಗಾಗಲೇ ಸಾಕಷ್ಟು ಚಾಲ್ತಿಯಲ್ಲಿದ್ದು ಇದು ಮತ್ತೊಂದು ಮೆಟ್ಟಿಲು ಅಷ್ಟೇ. ರಾಜ್ಯಸಭೆಯ ಕಲ್ಪನೆಯ ಜಾಡನ್ನು ನಾವು ಬ್ರಿಟಿಷರ ಕಾಲಕ್ಕೊಯ್ಯಬಹುದು. 1919ರ Government of India Act ಅನುಸಾರ 1921ರಲ್ಲಿ ಇರುವ ಸದನದ ಜೊತೆ ಒಂದು Council of States ಅನ್ನು ರಚಿಸಲಾಯಿತು. ಇದಕ್ಕೆ ಒಂದು ನಿಗದಿತ ಫ್ರಾಂಚೈಸಿಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಸ್ವಾತಂತ್ರ್ಯ ಬಂದಾಗಿದ್ದ ಕಾಂಸ್ಟಿಟುಯೆಂಟ್ ಅಸೆಂಬ್ಲಿ ಇದೆ. ಮೊದಲ ಐದು ವರ್ಷಗಳ ಅವಧಿಯವರೆಗೆ ನಮ್ಮ ಸಂಸತ್ತು Unicameral  (ಸದನದಲ್ಲಿ ಒಂದೇ ಮನೆ) ಆಗಿತ್ತು. ಆದರೆ 1952ರಲ್ಲಿ ಬಹುಚರ್ಚೆಯ ನಂತರ ಸ್ವತಂತ್ರ್ಯ ಭಾರತದ ಎಲ್ಲ ಸವಾಲುಗಳನ್ನೆದುರಿಸಲು Popular Mandate ಅನ್ನು ಪಡೆದ ಜನನಾಯಕರಷ್ಟೇ ಅಲ್ಲದೆ ಚಿಂತಕರ ಅಗತ್ಯವನ್ನೂ ಪರಿಗಣಿಸಿ ಸಂಸತ್ತಿನಲ್ಲಿ ಮತ್ತೊಂದು ಮನೆಗೆ ಅನುವು ಮಾಡಿಕೊಡಲಾಯಿತು. ನಮ್ಮ ಭಾರತ ದೇಶ ಸಶಕ್ತ ಕೇಂದ್ರ ಸರ್ಕಾರ ಹೊಂದಿರುವ ರಾಜ್ಯಗಳ ಒಂದು ಒಕ್ಕೂಟ. ನಮ್ಮದು ಭಾಗಶಃ ಒಂದು ಒಕ್ಕೂಟ ವ್ಯವಸ್ಥೆ. ಈ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲೂ ಕೂಡ ಒಂದು ವ್ಯವಸ್ಥೆ ಬೇಕಿತ್ತು. ಅದಕ್ಕಾಗಿಯೇ ಸಂಸತ್ತಿನ ಈ ಎರಡನೇ ಮನೆಯನ್ನು ಈ ಒಕ್ಕೂಟದ ರಾಜ್ಯಗಳ ಪ್ರಾತಿನಿಧಿಕ ಸಂಸ್ಥೆಯನ್ನಾಗಿಸಲಾಯಿತು. ಇದನ್ನು Council of States ಎಂದು ಕರೆಯಲಾಯಿತು. ಅದಕ್ಕೆ ಅನ್ವರ್ಥವಾಗುವಂತೆ ರಾಜ್ಯಸಭೆ ಎಮದು ಚೆಂದನೆಯ ಹೆಸರನ್ನಿಡಲಾಯಿತು. 

ಇಂತಿಪ್ಪ ರಾಜ್ಯಸಭೆಯಲ್ಲಿ ಒಟ್ಟು 245 ಸದಸ್ಯರಿದ್ದು ಅದರಲ್ಲಿ 233 ಸದಸ್ಯರು ರಾಜ್ಯಗಳಿಂದ ಪರೋಕ್ಷವಾಗಿ ಆಯ್ಕೆಯಾದ ಸದಸ್ಯರಾದರೆ ಇನ್ನಿತರೆ 12 ಮಂದಿ ನಾಮಾಂಕಿತ ಸದಸ್ಯರು. ರಾಜ್ಯಸಭೆಯಲ್ಲಿ ಎಲ್ಲ ರಾಜ್ಯಗಳಿಗೂ ಸಮಾನ ಪ್ರಾತಿನಿಧ್ಯವಿಲ್ಲ. ಬದಲಿಗೆ ಆಯಾ ರಾಜ್ಯದ ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಸಭೆಯ ಪ್ರಾತಿನಿಧ್ಯವನ್ನು ನಿಗದಿಪಡಿಸಲಾಗಿದೆ. ಈಗ ತಮಿಳು ನಾಡು ಆಂದ್ರಕ್ಕೆ ತಲಾ 18, ಉತ್ತರಪ್ರದೇಶಕ್ಕೆ ಅತಿ ಹೆಚ್ಚು 31, ನಾಗಾಲ್ಯಾಂಡ್ಗೆ ಅತಿ ಕಡಿಮೆ 1 ಸದಸ್ಯರ ಬಲವಿದೆ. ಕನರ್ಾಟಕಕ್ಕೆ ಒಟ್ಟು 12 ಸದಸ್ಯರ ಪ್ರಾತಿನಿಧ್ಯವಿದೆ. ಈ ವಿವರಗಳು ನಮ್ಮ ಸಂವಿಧಾನದ 4ನೇ ಶೆಡ್ಯೂಲ್ನಲ್ಲಿ ಅತ್ಯಂತ ಸ್ಪಷ್ಟವಾಗಿ ಸೂಚಿಸಲಾಗಿದೆ. ಇನ್ನು ಸಂವಿಧಾನದ ಆರ್ಟಿಕಲ್ 80 ರಾಜ್ಯಸಭೆಯ ಕುರಿತು ಮಾತನಾಡುತ್ತದೆ. ಇದರಲ್ಲಿ ರಾಜ್ಯಸಭೆಯೆಂಬ ಪದಬಳಕೆಯಿಲ್ಲ. ಇಲ್ಲಿ ಇದನ್ನು Council of States ಎಂದೇ ಕರೆಯಲಾಗಿದೆ. ಇದರಲ್ಲೂ ಸ್ಪಷ್ಟವಾಗಿ ಆಯಾ ರಾಜ್ಯದ ಪ್ರತಿನಿಧಿಗಳು ಎಂದೇ ಹೇಳಲಾಗಿದೆ. ಆದರೆ ಹೊರರಾಜ್ಯದವರು ಆ ರಾಜ್ಯದ ಪ್ರತಿನಿಧಿಗಳೆನಿಸಿಕೊಳ್ಳುವರೆ? ಅಂಬೇಡ್ಕರ್ ಅವರಿಗೆ ನಮ್ಮ ರಾಜಕೀಯ ವ್ಯವಸ್ಥೆ ತಲುಪಬಹುದಾದ ಶಿಥಿಲಾವಸ್ಥೆಯ ಊಹೆಯಿರಲಿಲ್ಲ ಎಂದು ಕಾಣುತ್ತದೆ. ಹಾಗಾಗಿ ಇದರ ಪ್ರಸ್ತಾಪವಿಲ್ಲ. 

ರಾಜ್ಯಗಳು ತಮ್ಮ ಉತ್ತಮ ಚಿಂತಕರನ್ನು ಕಳಿಸಿ ರಾಜ್ಯದ ಸಮಸ್ಯೆಗಳನ್ನು ಚರ್ಚಿಸಲು, ಅದರ ಆಸಕ್ತಿಗಳನ್ನು ಕಾಪಾಡಿಕೊಳ್ಳಲು ಲೋಕಸಭೆಗೆ ಇರುವ ಒಂದು ಕುಟಿಲ ರಾಜಕೀಯೇತರ ಪರ್ಯಾಯ ವೇದಿಕೆ ರಾಜ್ಯಸಭೆ. ಇದು ರಾಜ್ಯಸಭೆಯ ಕಲ್ಪನೆಯ ಹಿಂದಿನ ನಿಜ ಭಾವ. ಆದರೆ ಇಂದು ಇದು ಆಗಿರುವುದಾದರೂ ಏನು? ಪಕ್ಷಾತೀತವಾಗಿ ಎಲ್ಲರೂ ಈ ಮೂಲ ಕಲ್ಪನೆಗೆ ಕೊಡಲಿ ಪೆಟ್ಟು ನೀಡಿದ್ದಾರೆ. ರಾಜ್ಯಸಭೆಯೆಂಬುದು ಇಂದು ಚುನಾವಣೆಯಲ್ಲಿ ಸೋತ, ನಿಂತು ಸೆಣಸಲಾರದ ರಾಜಕೀಯ ನಿರಾಶ್ರಿತರ ಗಂಜಿ ಕೇಂದ್ರವಾಗಿದೆ ಅಷ್ಟೆ. ಅಲ್ಲೂ ಇಂದು ಇರುವುದು ಕುಟಿಲ ಪಕ್ಷ ರಾಜಕಾರಣದ ವಿಜೃಂಭಣೆ ಅಷ್ಟೆ. ಅದರ ಜೊತೆಗೆ ಹೊರರಾಜ್ಯದವರು ನಮ್ಮನ್ನು ಪ್ರತಿನಿಧಿಸುವಂತೆಯೂ ಆಗಿಬಿಟ್ಟರೆ? ಈಗ ಹೇಮಾಮಾಲಿನಿ ಬೇರೆ ನೂರು ವಿಷಯಗಳಲ್ಲಿ ಸಮರ್ಥೆಯಿರಬಹುದು, ಆದರೆ ಕರ್ನಾಟಕದ ಸಮಸ್ಯೆಗಳ ಬಗ್ಗೆ ಆಕೆಗೆಷ್ಟು ತಿಳುವಳಿಕೆಯಿದೆ? ಕನ್ನಡ-ಕನ್ನಡಿಗ-ಕರ್ನಾಟಕದ  ಸಮಸ್ಯೆಗಳ ಕುರಿತು ಆಕೆ ಎಷ್ಟರ ಮಟ್ಟಿಗೆ ಚರ್ಚಿಸಬಲ್ಲಳು? ಅಸಲಿಗೆ ನಮ್ಮ ಭಾಷೆಯೇ ಬರದ ಆಕೆಗೆ ಕರ್ನಾಟಕ ಅಂದರೆ ಶೋಲೆ ಶೂಟಿಂಗ್ ನಡೆದ ರಾಜ್ಯ ಎಂದಾದಾಗ ನಮ್ಮ ನಾಡು-ನುಡಿಯ ಮೇಲಿನ ಅಭಿಮಾನವೂ ಪ್ರಶ್ನಾರ್ಹವೇ ಅಲ್ಲವೆ? ರಾಜ್ಯಸಭೆಯಲ್ಲಿ ನಮಗಿರುವ ಪ್ರಾತಿನಿಧ್ಯ 12. ಅದರಲ್ಲಿ ಈಗಾಗಲೇ ವೆಂಕಯ್ಯ ನಾಯ್ಡು ಪ್ರತಿಷ್ಠಾಪಿತರಾಗಿದ್ದಾರೆ. ಇನ್ನು ಹೇಮಾಮಾಲಿನಿಯೂ ಸೇರಿದರೆ ರಾಜ್ಯಸಭೆಯಲ್ಲಿ ಕನ್ನಡಿಗರ ನ್ಯಾಯಯುತ ಹಕ್ಕಾದ ಕನ್ನಡದ ಧ್ವಿನಿಗಳಲ್ಲಿ ಮತ್ತೊಂದು ಉಡುಗಿದಂತಾಯಿತಲ್ಲವೇ? ಇದು ನಿಜಕ್ಕೂ ಕನ್ನಡಾಸಕ್ತಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯೇ ಸರಿ. 

ಇದೇನೂ ಹೊಸ ಬೆಳವಣಿಗೆಯಲ್ಲ. ಈ ಹಿಂದೆ ಕೂಡ ಹೊರರಾಜ್ಯದವರು ರಾಜ್ಯವನ್ನು ಪ್ರತಿನಿಧಿಸಿರುವ ಉದಾಹರಣೆಗಳಿವೆ. ಕೇಂದ್ರ ರಾಜ್ಯ ಸಂಬಂಧದ ಅದರಲ್ಲಿ ರಾಜ್ಯಗಳ ಸ್ವಾಯತ್ತತೆಯನ್ನು ಎತ್ತಿ ಹಿಡಿಯುತ್ತಿದ್ದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದಾಗ ಅವರು ರಾಮಜೇಠ್ಮಲಾನಿಯವರನ್ನು ರಾಜ್ಯದಿಂದ ರಾಜ್ಯಸಭೆಗೆ ಕಳಿಸಿದ್ದರು. ಇನ್ನು ನಮ್ಮ ದೇವೇಗೌಡರು ಮದ್ರಾಸಿನ ಶಾರಾಯಿ ವ್ಯಾಪಾರಿ ರಾಮಸ್ವಾಮಿಯವರನ್ನು ರಾಜ್ಯಸಭೆಗೆ ಕಳಿಸಿ ಕೃತಾರ್ಥರಾಗಿದ್ದರು. ಇನ್ನು ವೆಂಕಯ್ಯ ನಾಯ್ಡು, ಈಗ ಹೇಮಾ ಮಾಲಿನಿ. ಹಾಗೆ ನೋಡಿದರೆ ಹೈಕಮಾಂಡ್ ಹೇರುವಿಕೆಗಳಿಗೇ ಹೆಸರಾದ ಕಾಂಗ್ರೆಸ್ ಪಕ್ಷ ಇದುವರೆಗೂ ಹೊರರಾಜ್ಯದವರನ್ನು ನಮ್ಮ ಮೇಲೆ ಹೇರಿಲ್ಲ. 1989ರಲ್ಲಿ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ, ಗುಲಾಂ ನಭಿ ಆಜಾದ್ ಇಲ್ಲ ಮೊಹಸೀನಾ ಕಿದ್ವಾಯಿ ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ಚುನಾಯಿಸುವ ಸಿದ್ದತೆಗಳು ನಡೆದವಾದರೂ ಹೊರರಾಜ್ಯದವರು ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುವುದನ್ನು ನಮ್ಮ ಜನ ಹಾಗೂ ಶಾಸಕರು ಒಪ್ಪುವುದಿಲ್ಲ ಎಂಬ ಧೃಢ ನಿಲುವು ತಾಳಿದ ಪಾಟೀಲರಿಂದ ಇದು ತಪ್ಪಿತು. ಆ ನಂತರ ಅಂತಹ ಪ್ರಯತ್ನಗಳೂ ನಡೆದಿಲ್ಲ. ಆದರೆ ಆ ನಂತರ ಕಾಂಗ್ರೆಸ್ ವತಿಯಿಂದ ರಾಜ್ಯಸಭೆಗಾಯ್ಕೆಯಾದವರು ಆಸ್ಕರ್, ರೆಹಮಾನ್ ಖಾನ್, ಎಂ.ವಿ.ರಾಜಶೇಖರನ್ ಅವರಂತಹ ರಾಜಕೀಯ ನಿರಾಶ್ರಿತರೆ. ಈಗ ಹೇಮಾಮಾಲಿನಿ.

ಕಾಂಗ್ರೆಸ್ ಮತ್ತು ಜೆಡಿಎಸ್ ಈ ನಿಲುವನ್ನು ವಿರೋಧಿಸಿ ಒಂದು ಸಿಂಬಾಲಿಕ್ ಆದ ಸೈದ್ಧಾಂತಿಕ ಹೋರಾಟಕ್ಕೆ ಅಣಿಯಾಗಿದ್ದಾರೆ. ಕನ್ನಡದ ಪ್ರಖ್ಯಾತ ಸಾಹಿತಿಗಳು ಪ್ರಗತಿಪರರಾದ ಡಾ. ಕೆ. ಮರಳುಸಿದ್ಧಪ್ಪನವರನ್ನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ತಮ್ಮ ಬೆಂಬಲವನ್ನು ಪ್ರಕಟಿಸಿವೆ. ಇದು ಒಂದು ಸಿಂಬಾಲಿಕ್ ಆದ ಗೆಸ್ಚರ್ ಅಷ್ಟೆ ಆಗಬಾರದು. ಆಗಿಲ್ಲ ಕೂಡ. ಇದರ ಹಿಂದೆ ಒಂದು ರಾಜಕೀಯ ಲೆಕ್ಕಾಚಾರವೂ ಇದೆ. 11 ಬಿಜೆಪಿ ಶಾಸಕರ ಅನರ್ಹತೆಯ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದ್ದು ವಿಚಾರಣೆ ಅಂತಿಮ ಹಂತದಲ್ಲಿದೆ. ರಾಜ್ಯಸಭಾ ಚುನಾವಣೆ ನಿಗದಿಯಾಗಿರುವುದು ಮಾರ್ಚಿ 3ಕ್ಕೆ. ಅಷ್ಟರೊಳಗೆ ಸುಪ್ರೀಂ ತೀರ್ಪು ಬರುವ ಸಾಧ್ಯತೆಯಿದ್ದು ಅದು ಒಂದೊಮ್ಮೆ ಅನರ್ಹಗೊಂಡ ಶಾಸಕರ ಪರ ಬಂದರೆ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಲಿದ್ದು, ಆಗ ಕಾಂಗ್ರೆಸ್ ಜೆಡಿಎಸ್ ಮತ್ತು ಅನರ್ಹರೂ ಸೇರಿ 109 ಶಾಸಕರಾಗುತ್ತಾರೆ. ಮರಳುಸಿದ್ಧಪ್ಪನವರು ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಅಕಸ್ಮಾತ್ ಚುನಾವಣೆಯೊಳಗೆ ತೀರ್ಪು  ಹೊರಬಿದ್ದು ಅದು ಶಾಸಕರ ಪರವಾಗಿದ್ದರೆ ಸಂಖ್ಯಾಬಲ ಹೊಂದಿದ್ದರೂ ಅಭ್ಯರ್ಥಿಯಿಲ್ಲದ ಕಾರಣ ಹೇಮಾಮಾಲಿನಿ ಅವಿರೋಧವಾಗಿ ಆಯ್ಕೆಯಾಗಿಬಿಡುತ್ತಿದ್ದರು. ಹಾಗಾಗಿ ಇದೊಂದು ಮುಂಜಾಗ್ರತಾ ಕ್ರಮವೂ ಹೌದು.

ಜೊತೆಗೆ ಇದೊಂದು ಸೈದ್ಧಾಂತಿಕ ಹೋರಾಟವೂ ಹೌದು. ಈ ಹಿಂದೆಯೂ ಅನಂತಮೂರ್ತಿಗಳು ಇಂಥದೇ ಒಂದು ಹೋರಾಟಕ್ಕೆ ನಿಂತು ಸೋಲುಂಡರು. ಇಂಥದೊಂದು ಹೋರಾಟದ ಪ್ರಾಮುಖ್ಯತೆಯನ್ನರಿಯದವರು ಅವರನ್ನು ನಗೆಪಾಟಲುಗೊಳಿಸಿದರು. ಈಗ ಮರಳುಸಿದ್ಧಪ್ಪನವರ ಸರದಿಯಾಗಬಾರದು. ಮರಳುಸಿದ್ಧಪ್ಪನವರು ಈ ನಾಡಿನ ಒಬ್ಬ ಉತ್ತಮ ಚಿಂತಕರು, ಪ್ರಗತಿಪರರು. ಅಸಲು ರಾಜ್ಯಸಭೆಯಲ್ಲಿರಬೇಕಾದವರೆ ನಮ್ಮ ಅನಂತಮೂರ್ತಿ ಮರಳುಸಿದ್ಧಪ್ಪನಂಥ ಚಿಂತಕರಲ್ಲವೇ? ಮರಳುಸಿದ್ಧಪ್ಪನವರು ಇದು ಬರಿಯ symbolic ಆದ ಹೋರಾಟವಲ್ಲ, ಗೆಲ್ಲುವ ಲೆಕ್ಕಾಚಾರದೊಂದಿಗೇ ತಾವು ನಿಂತಿರುವುದಾಗಿ, ಎಲ್ಲ ಶಾಸಕರೂ ಪಕ್ಷಬೇಧ ಮರೆತು ತಮ್ಮ ಮನಸ್ಸಾಕ್ಷಿಯ ಮತ ನೀಡಿ ರಾಜ್ಯಸಭೆಗೆ ಕನ್ನಡೇತರರನ್ನು ಕಳಿಸುವುದನ್ನು ವಿರೋಧಿಸಿ ಕನ್ನಡದ ದನಿಯೊಂದನ್ನು ರಾಜ್ಯಸಭೆಗೆ ಕಳಿಸಬೇಕು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದು ಗುಡುಗಿದ್ದಾರೆ. ನಿಜ ಬಿಜೆಪಿಯ ಉದ್ಧಟತನವನ್ನು ಇಂದು ಕನ್ನಡಿಗರು ಪ್ರತಿಭಟಿಸಬೇಕಿದೆ. ನಮ್ಮ ಪ್ರತಿಭಟನೆ ದಾಖಲಾಗಬೇಕಿದೆ. ಮರಳುಸಿದ್ಧಪ್ಪನವರ ನಾಮಪತ್ರ ಚುನಾವಣೆಯನ್ನು ಅನಿವಾರ್ಯವಾಗಿಸುವ ಮೂಲಕ ಕನ್ನಡಿಗರ ಸೈದ್ಧಾಂತಿಕ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಇದು ಕನ್ನಡತನದ ಮೂಲಭೂತವಾದಿ ದನಿಯಲ್ಲ, ಬದಲಿಗೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಹಿತ ಕಾಪಾಡುವ ತನ್ಮೂಲಕ ರಾಜ್ಯಸಭೆಯ ಅರ್ಥವನ್ನು ಉಳಿಸುವ ಹೋರಾಟವಿದು. ಆದರೆ ಈ ಹೋರಾಟದಲ್ಲಿ ಜಯ ನಮ್ಮದಾಗಬೇಕಾದರೆ ರಾಜ್ಯದ ಮೇಲೆ ಹೇರಲ್ಪಟ್ಟಿರುವ ಹೇಮಾಮಾಲಿನಿಯನ್ನು ನಮ್ಮ ಮರಳುಸಿದ್ಧಪ್ಪನವರು ಸೋಲಿಸಿ ಗೆಲುವಿನ ನಗೆಯೊಂದಿಗೆ ರಾಜ್ಯಸಭೆ ಪ್ರವೇಶಿಸಬೇಕಿದೆ. ಆದರೆ ಇಂದಿನ ಪಕ್ಷ ರಾಜಕಾರಣದ ಸ್ವಹಿತದ ಗುಲಾಮಗಿರಿಯಲ್ಲಿ ಇದು ಸಾಧ್ಯವೇ? ಎಲ್ಲರ ಕಣ್ಣು ಈಗ ಸುಪ್ರೀಂ ಕೋರ್ಟ್ಕೋನತ್ತ. 

2ಜಿ - ಮನಮೋಹನರ ಬೌದ್ಧಿಕ ಭ್ರಷ್ಟಾಚಾರ?


ಯುಪಿಎ -2 ಅನೇಕ ಗೊಂದಲಗಳಿಂದ ಕೂಡಿದ, ಹಗರಣಗಳ ಗುಚ್ಛವಾಗಿದ್ದು ಅದು ನಿಜಕ್ಕೂ ಪ್ರಾಮಾಣಿಕರಾದ ಪ್ರಧಾನಿ ಮನಮೋಹನ ಸಿಂಗರ ಪ್ರಾಮಾಣಿಕತೆಯ ಬಗ್ಗೆಯೂ ಟೀಕೆ ಟಿಪ್ಪಣಿಗಳು ವ್ಯಕ್ತವಾಗುವವರೆಗೆ ಬಂದು ನಿಂತಿದೆ. ಮನಮೋಹನರ ಕಾಷ್ಠ ಮೌನ ಮತ್ತು ಜಂಟಿ ಸದನ ಸಮಿತಿಯೆದುರು ಹಾಜರಾಗಲೊಲ್ಲರು ಎಂಬ ಸುದ್ದಿಗಳು ಅವರು ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆಂಬ ಭಾವನೆ ಮೂಡಿಸುವಲ್ಲಿಗೆ ಮುಟ್ಟಿದೆ. ಇದನ್ನು ಸರಿಪಡಿಸಲೆಂಬಂತೆ ಮೊನ್ನೆ ದೇಶದ ಎಲ್ಲ ಪ್ರಮುಖ ವಿದ್ಯುನ್ಮಾನ ಸುದ್ದಿ ವಾಹಿನಿಗಳ ಸಂಪಾದಕರೊಂದಿಗೆ ಅವರು ಸಂವಾದಿಸಿದರು. ಈ ಸಂವಾದದಲ್ಲಿ ಬಹು ವಿಚಾರಗಳ ಕುರಿತು ಚಚರ್ಿಸಲಾಯಿತಾದರೂ ಇಡೀ ಘೋಷ್ಠಿಯ ಮೂಲ ಬಿಂದುವಾಗಿದ್ದದ್ದು ಭ್ರಷ್ಟಾಚಾರ, ಅದರಲ್ಲೂ ಮುಖ್ಯವಾಗಿ ಮನಮೋಹನರ ಮನೆ ಬಾಗಿಲಿಗೆ ಬಂದು ನಿಂತಿರುವ 2ಜಿ ತರಂಗ ಗುಚ್ಛ ಹಗರಣ. ಈ ವಿಷಯವಾಗಿ ಮನಮೋಹನರ ಪ್ರತಿ ಮಾತನ್ನೂ ಇಡೀ ದೇಶ ಉಸಿರು ಬಿಗಿ ಹಿಡಿದು ಕೇಳುತ್ತಿತ್ತು.

ಅಂದಿಮುತ್ತು ರಾಜಾ ಅವರೇ ಕಂಪೆನಿಗಳ ಪರವಾನಗಿ ಮತ್ತು ತರಂಗಾಂತರ ಗುಚ್ಚಗಳ ಬೇಡಿಕೆಗಳನ್ನು ಇತ್ಯರ್ಥಗೊಳಿಸಿದ್ದಾರೆಯೇ ಹೊರತು ಅದು ತನ್ನ ಅಥವಾ ಸಂಪುಟದ ಮುಂದೆ ತರಲಾಗಿಲ್ಲ. ಇನ್ನು ಸಚಿವ ಸ್ಥಾನಕ್ಕೆ ರಾಜಾ ಅವರ ಆಯ್ಕೆ ಡಿಎಂಕೆ ಪಕ್ಷದ್ದು, ಸಮ್ಮಿಶ್ರ ಸರ್ಕಾರವಾದ್ದರಿಂದ ಈ ಹೊಂದಾಣಿಕೆ ಅನಿವಾರ್ಯವಾಗಿತ್ತು ಎಂದು ತಮ್ಮ ಮೂಗಿನಡಿ ನಡೆದಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲಾಗದೇ ಹೋದ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ಸಮ್ಮಿಶ್ರ ಸರ್ಕಾರಗಳು ಇಂದು ಅನಿವಾರ್ಯವಾಗಿ ಮಾರ್ಪಡುತ್ತಿರುವುದು ನಿಜವೇ. ಸಮ್ಮಿಶ್ರ ಸರ್ಕಾರವೆಂದ ಮೇಲೆ ಕೊಡು ಕೊಳ್ಳುವಿಕೆಗಳೂ ಕೂಡ ಸಹಜವೇ, ಹೊಂದಾಣಿಕೆ ಅಗತ್ಯವೂ ಹೌದು. ಆದರೆ ಈ ನೆಪದಲ್ಲಿ ಮನಮೋಹನರಂತಹವರು ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಳ್ಳಬೇಕೆ? ಮಾಡಿಕೊಂಡ ರಾಜಿಯನ್ನು ನಮ್ಮ ಯಡಿಯೂರಪ್ಪನವರಂತೆ ಭಂಡತನದಿಂದ ಸಮರ್ಥಿಸಿಕೊಳ್ಳಬೇಕೆ? ಇದು ಹೊಲಸೆದ್ದು ಹೋದ ವ್ಯವಸ್ಥೆಯಲ್ಲಿ ಪಳಗಿದ ನಂತರ ಮನಮೋಹನರೂ  ಸೂಕ್ಷ್ಮತೆಯನ್ನು ಕಳೆದುಕೊಂಡುದರ ಸಂಕೇತವೇ?

ಇಷ್ಟೇ ಆಗಿದ್ದರೆ ಅಂತಹ ತಕರಾರೇನಿರುತ್ತಿರಲಿಲ್ಲ. ಆದರೆ ಸುದ್ದಿಗೋಷ್ಠಿಯ ಕಡೆಯ ಭಾಗದಲ್ಲಿ 2ಜಿ ಹಗರಣದಿಂದ ಸರ್ಕಾರದ ಬೊಕ್ಕಸಕ್ಕಾದ ನಷ್ಟದ ಬಗ್ಗೆ ಹಲವಾರು ಅಂಕಿ ಸಂಖ್ಯೆಗಳಿದ್ದು, ರಾಷ್ಟ್ರದ ಮಹಾಲೇಖಪಾಲರು ಅದನ್ನು 1 ಲಕ್ಷ 76 ಸಾವಿರ ಕೋಟಿಗಳು ಎಂದು ಅಂದಾಜಿಸಿದರೆ, ರಾಜಾ ನಿರ್ಗಮನದ ನಂತರ ದೂರ ಸಂಪರ್ಕ ಸಚಿವರ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ನಿರ್ವಹಸುತ್ತಿರುವ ಕಪಿಲ್ ಸಿಬಲ್ ಅವರು 2ಜಿ ತರಂಗಾಂತರ ಗುಚ್ಛ ವಿತರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ನಯಾ ಪೈಸೆಯ ನಷ್ಟವೂ ಆಗಿಲ್ಲವೆಂದು ಹೇಳಿದ್ದಾರೆ, ಈ ಕುರಿತು ಅವರ ನಿಲುವು ಕೇಳಲಾಗಿ ಅವರು ಕೊಟ್ಟ ಉತ್ತರ -

"ನೋಡಿ ಮಹಾ ಲೇಖಪಾಲರೇ ಅವರ ನಷ್ಟದ ಅಂದಾಜನ್ನು ಊಹಾತ್ಮಕ ಅಂದಾಜು ಎಂದು ಕರೆದಿದ್ದಾರೆ. ಈ ನಷ್ಟದ ಲೆಕ್ಕಾಚಾರ ನಾವು ಯಾವುದನ್ನು ನಮ್ಮ ಲೆಕ್ಕದ ಅಡಿಪಾಯವಾಗಿಟ್ಟುಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿರುತ್ತದೆ. ಈಗ ಪ್ರತಿ ವರ್ಷ ನಾವು 80 ಸಾವಿರ ಕೋಟಿಗಳಷ್ಟು ಹಣವನ್ನು ಆಹಾರ ಧನ್ಯಗಳ ಸಬ್ಸಿಡಿಗೆ ವ್ಯಯಿಸುತ್ತಿದ್ದೇವೆ, ಮತ್ತೊಂದು 60 ಸಾವಿರ ಕೋಟಿಗಳನ್ನು ರಸಗೊಬ್ಬರ ಸಬ್ಸಿಡಿಗಳಿಗೆ ವ್ಯಯಿಸುತ್ತಿದ್ದೇವೆ. ಅನೇಕರ ಅಭಿಪ್ರಾಯ ಆಹಾರ ಧಾನ್ಯಗಳು ಮತ್ತು ರಸಗೊಬ್ಬರದ ವಹಿವಾಟು ಮಾರುಕಟ್ಟೆ ಧರದಲ್ಲಿಯೇ ಆಗಬೇಕು. ಹಾಗಂತ ಈ ಸಬ್ಸಿಡಿಯನ್ನು ಸರ್ಕಾರದ ಬೊಕ್ಕಸಕ್ಕಾದ ನಷ್ಟ ಎಂದು ಪರಿಗಣಿಸಲಾದೀತೆ?"!!

ಇಲ್ಲಿ ಮನಮೋಹನರು ಹೇಳಿರುವುದಕ್ಕಿಂತಲೂ ಹೇಳದೇ ಉಳಿದ ವಿಚಾರವೇ ಹೆಚ್ಚು ಮುಖ್ಯವೆನಿಸುತ್ತದೆ. 2ಜಿ ತರಂಗಗುಚ್ಛವನ್ನು ಹರಾಜು ಹಾಕದೆ ಮೊದಲು ಬಂದವರಿಗೆ ಆದ್ಯತೆಯಂತೆ 2001ರ ಬೆಲೆಗೆ ವಿತರಿಸದ್ದನ್ನು ಇಲ್ಲಿ ಮನಮೋಹನರು ರೈತನಿಗೆ ಕೊಡಮಾಡುತ್ತಿರುವ ರಸಗೊಬ್ಬರ ಮತ್ತು ಬಡತನ ರೇಖೆಗಿಂತಲೂ ಕೆಳಗಿರುವ ಬಡಬಗ್ಗರಿಗೆ ಕೊಡುತ್ತಿರುವ ಆಹಾರಧಾನ್ಯದ ಸಬ್ಸಿಡಿಗೆ ಹೋಲಿಸಿದ್ದಾರೆ. ಅಲ್ಲಿಗೆ ಒಂದಂತೂ ಸ್ಪಷ್ಟ. ಸರ್ಕಾರದ ಮಟ್ಟಿಗೆ 2ಜಿ ತರಂಗಗುಚ್ಛ ವಿತರಣೆಯೂ ಸಬ್ಸಿಡಿಯೇ. ಅದು ಸರ್ಕಾರದ ನೀತಿ ನಿರ್ಣಯ. ಅಲ್ಲಿಗೆ ಅದು ಹಗರಣವಾದರೂ ಹೇಗಾದೀತು? ಇದು ಮನಮೋಹನರ ಹೇಳದೆ ಉಳಿದ ಮಾತು.

ಸಬ್ಸಿಡಿ ಯಾರಿಗೆ? ಈ ದೇಶದ ಶ್ರೀಮಂತ ಕಾರ್ಪೋರೆಟ್ ಸಂಸ್ಥೆಗಳಿಗೆ. ಸುಖಾಸುಮ್ಮನೆ ಸಬ್ಸಿಡಿಯನ್ನು ಯಾಕೆ ನೀಡುತ್ತಾರೆ? ಅದಕ್ಕೂ ಒಂದು ಸಮರ್ಥನೆ - ಈ ಹಿಂದೆ ಮೊದಲು ಬಂದವರಿಗೆ ಆದ್ಯತೆಯಂತೆ ತರಂಗಗುಚ್ಛವನ್ನು ವಿತರಿಸಿದ್ದನ್ನು ಪ್ರಶ್ನಿಸಿ ಅರವಿಂದ ಗುಪ್ತ ಎನ್ನುವವರು ದೆಹಲಿ ಉಚ್ಛನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರ  ಸಲ್ಲಿಸಿರುವ ಅಫಿಡವಿಟ್ನಲ್ಲಿ ಈ ರೀತಿ ಹೇಳಿಕೊಂಡಿದೆ -

 "2ಜಿ ತರಂಗಗುಚ್ಛವನ್ನು  ಹರಾಜಿನಲ್ಲಿ ಅತಿ ಹೆಚ್ಚು ಹಣ ಪಾವತಿಸಿದವರಿಗೆ ನೀಡಿದ್ದೇ ಆದಲ್ಲಿ, ಆ ಬೃಹತ್ ಮೊತ್ತವನ್ನು ಕಂಪೆನಿಯು ಗ್ರಾಹಕರಿಂದ ವಸೂಲು ಮಾಡುತ್ತದೆ. ಆಗ ಗ್ರಾಹಕರ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಇಲ್ಲ ಕಂಪೆನಿಗಳು ತಮ್ಮ ದರಗಳನ್ನು ಏರಿಸದೇ ಇದ್ದರೆ, ಕಂಪೆನಿಗಳು ದಿವಾಳಿಯಾಗುತ್ತವೆ. ಹೀಗೆ ಕಂಪೆನಿಗಳ ಖರ್ಚುಗಳು ಹೆಚ್ಚಾಗಿ ಪರವಾನಗಿಯನ್ನು ಅಪೇಕ್ಷಿಸುವವರ ಸಂಖ್ಯೆಯೇ ಕಡಿಮೆಯಾಗುತ್ತದೆ. ಮೇಲಾಗಿ ಈ ಕ್ರಮವು ಟೆಲಿಕಾಂ ರಂಗದಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಕಾಪಾಡಲು ಮತ್ತು ಹೊಸ ಕಂಪೆನಿಗಳಿಗೆ ಒಂದು ಸಮತಟ್ಟನ್ನೊದಗಿಸಲು ತೆಗೆದುಕೊಂಡ ನಿಲುವು." 

ಇದೇನೂ ಹೊಸ ವಾದವಲ್ಲ. 2ಜಿ ತರಂಗಾಂತರ ಗುಚ್ಛ ವಿತರಣೆಯ ಹಗರಣ ಬಯಲುಗೊಂಡ ಮೊದಲ ದಿನದಿಂದಲೂ ಅಂದಿಮುತ್ತು ರಾಜಾ ಮತ್ತು ಅವರ ಡಿಎಂಕೆ ಪಕ್ಷದ್ದು ಇದೇ ವಾದ. ಅವರು ಈ ವಾದವನ್ನು ಮತ್ತೂ ಮುಂದುವರೆಸಿ ಅಂದಿಮುತ್ತು ರಾಜಾ ಅವರನ್ನು ಶ್ರೀಸಾಮಾನ್ಯನ ಪರವಾಗಿ ಹೋರಾಡಿದ ಧೀಮಂತ ನಾಯಕನೆಂದೂ, ಅದಕ್ಕಾಗಿ ಕಾರ್ಪೋರೆಟ್ ಸಂಸ್ಥೆಗಳ ಕುತಂತ್ರಕ್ಕೆ ಬಲಿಯಾಗಿ ಜನರ ಪರ ಜೈಲು ಸೇರಿರುವುದಾಗಿಯೂ ಬಿಂಬಿಸುತ್ತವೆ. ಅದರಂತೆ ದೂರ ಸಂಪರ್ಕ ಕ್ಷೇತ್ರವು ಕೆಲವೇ ಕೆಲವು ಸಂಸ್ಥೆಗಳಿಂದ ಆಳಲ್ಪಟ್ಟಿದ್ದು ಅವು ಒಂದು ಕಾರ್ಟೆಲ್  ಆಗಿ ರೂಪುಗೊಂಡು ಲಾಭಾಂಶವನ್ನು ಜನರಿಗೆ ತಲುಪಲು ಬಿಡದೆ ಅಡ್ಡ ಹಾಕಿದ್ದವು. ರಾಜಾ ಹೊಸ ಕಂಪೆನಿಗಳಿಗೆ ಕಡಿಮೆ ದರದಲ್ಲಿ ತರಂಗಗುಚ್ಛವನ್ನು ವಿತರಿಸಿದ್ದರಿಂದ ಈ ಕಂಪೆನಿಗಳು ಅತಿ ಕಡಿಮೆ ದರಗಳಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿವೆ. ಈಗ ಮೊಬೈಲ್ ನಂಬರ್ ಪೋರ್ಟಬಿಲಿಟಿಯ ಸೌಲಭ್ಯವೂ ಬಂದಿರುವುದರಿಂದ ಈ ಮೊಬೈಲ್ ಕಂಪೆನಿಗಳು ಅನಿವಾರ್ಯವಾಗಿ ಸ್ಪರ್ಧೆ ಬೀಳಬೇಕಿದೆ. ಸಹಜವಾಗಿಯೇ ಮೊಬೈಲ್ ಸೇವೆಯ ದರಗಳು ಕುಸಿಯಲಾರಂಭಿಸುತ್ತವೆ. ಹಾಗಾಗಿ ಈ ನೀತಿ ನಿರ್ಣಯದ ಅಂತಿಮ ಲಾಭ ಶ್ರೀಶಾಮಾನ್ಯನಿಗೇ ಆಗುತ್ತದೆ. ಅವರು ಅತಿ ಸುಲಭವಾಗಿ ಕೊಡುವ ನಿದರ್ಶನ ಯೂನಿನಾರ್ ಮತ್ತು ಟಾಟಾ ಡೊಕೋಮೋಗಳದು.

ಯೂನಿನಾರ್ ಅನ್ನೇ ತೆಗೆದುಕೊಳ್ಳೋಣ. ಯೂನಿಟೆಕ್ ಎಂಬುದು ಪ್ರಸಿದ್ಧ ರಿಯಲ್ ಎಸ್ಟೇಟ್ ಕಂಪೆನಿ. ಈ ಕಂಪೆನಿಗೆ ದೂರ ಸಂಪರ್ಕ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲ. ಆದರೂ ಈ ಕಂಪೆನಿಯು ಯೂನಿಟೆಕ್ ವೈರ್ಲೆಸ್ ಎಂಬ ಕಂಪೆನಿಯೊಂದನ್ನು ತೇಲಿಬಿಟ್ಟು ತನ್ಮೂಲಕ ನಿಗದಿತ 1651 ಕೋಟಿಗಳಿಗೆ ಪ್ಯಾನ್ ಇಂಡಿಯಾ ಪರವಾನಗಿಯನ್ನು ಪಡೆಯುತ್ತದೆ. ಇದಾದ ಕೇವಲ 6 ತಿಂಗಳಿಗೆ ಈ ಕಂಪೆನಿಯು ನಾರ್ವೆಯ ಟೆಲಿಕಾಂ ಕಂಪೆನಿ ಟೆಲಿನಾರ್ಗೆ ಶೇ.60 ರಷ್ಟು ಹಿಡಿತವನ್ನು ಮಾರಿದ್ದು 6120 ಕೋಟಿಗಳಿಗೆ. (ಈ ಲೆಕ್ಕದಂತೆ ಇದರ ಒಟ್ಟು ಬೆಲೆಯು 10200 ಕೋಟಿಗಳಿಗೇರುತ್ತದೆ. ಅಂದರೆ ಈ ಕಂಪೆನಿಯ ನಿವ್ವಳ ಲಾಭ 8549 ಕೊಟಿಗಳು. ಅಷ್ಟೂ ಸರ್ಕಾರದ ಬೊಕ್ಕಸಕ್ಕಾದ ನಷ್ಟವೇ ಅಲ್ಲವೆ? ಈ ಲೆಕ್ಕದ ಆಧಾರದ ಮೇಲೆಯೇ ಒಟ್ಟು 120 ಪರವಾನಗಿಗಳಿಂದ ಮಹಾಲೇಖಪಾಲರು ಬೊಕ್ಕಸಕ್ಕೆ 1 ಲಕ್ಷ 76 ಸಾವಿರ ಕೋಟಿಗಳಷ್ಟು ನಷ್ಟವಾಗಿದೆಯೆಂದು ಹೇಳಿರುವುದು. ಇದನ್ನು ಮನಮೋಹನರು ಮತ್ತು ಅವರ ಸರ್ಕಾರ ಊಹಾತ್ಮಕ ಎಂದು ತಳ್ಳಿ ಹಾಕಿದೆ.) ಹೀಗೆ ಯೂನಿಟೆಕ್ ಮತ್ತು ಟೆಲಿನಾರ್ ಸೇರಿ ಆದದ್ದು ಯೂನಿನಾರ್. ಈ ಕಂಪೆನಿಯು ಆಕರ್ಷಕ ರೀತಿಯ ಪ್ಯಾಕೇಜನ್ನು ನೀಡುತ್ತಿದೆಯಾದರೂ ನಿಜವಾಗಿ ಕರೆ ದರಗಳೇನೂ ಕಡಿಮೆಯಿಲ್ಲ. ಅದಕ್ಕೆ ಈ ಮಾರ್ಕೆಟಿಂಗ್ ತಂತ್ರಕ್ಕೆ ಬಲಿಯಾಗಿ ಯೂನಿನಾರ್ ಸಿಮ್ ಅನ್ನು ಕೊಂಡ ನಾನೇ ಉದಾಹರಣೆ. ಇನ್ನು ಟಾಟಾ ಡೊಕೋಮೋ. ಇದೂ ಕೂಡ ಟಾಟಾ ಮತ್ತು ಡೋಕೋಮೋ ಎಂಬ ಜಪಾನಿ ಕಂಪೆನಿಯ ಒಡಂಬಡಿಕೆಯ ಮಗು. ಸೆಕೆಂಡಿಗೆ 1 ಪೈಸೆ ಎಂಬ ಘೋಷವಾಕ್ಯದೊಂದಿಗೆ ಬಂದ ಇದರ ಆಂತರ್ಯ ತಡಕಿದರೆ ನಿಮಿಷಕ್ಕೆ 60 ಪೈಸೆ. ನಮ್ಮ ಬಿಎಸ್ಎನ್ಎಲ್ ನಿಮಿಷಕ್ಕೆ 49 ಪೈಸೆ!

ಹೀಗೆ ಸರ್ಕಾರ ಈ ಕಂಪೆನಿಗಳಿಗೆ ನೀಡಿದ `ರಿಯಾಯಿತಿ'ಗಳೆಲ್ಲವೂ ಈ ಖಾಸಗಿ ಕಂಪೆನಿಗಳ ಆಯವ್ಯಯ ಪತ್ರಗಳಲ್ಲಿ ರಾರಾಜಿಸುತ್ತಿವೆ. ಹೋಗಲಿ ಗ್ರಾಹಕರಿಗೆ ಹೊರೆ ತಗ್ಗಿಸಲು (?!) ಸರ್ಕಾರವು ಖಾಸಗಿ ಕಂಪೆನಿಗಳಿಗೆ `ರಿಯಾಯಿತಿ' ದರಗಳಲ್ಲಿ ತರಂಗಗುಚ್ಛವನ್ನೇನೋ ನೀಡಿತು, ಕನಿಷ್ಠ ಕಂಪೆನಿಗಳು ಅವುಗಳನ್ನು ಮಾರಿಕೊಳ್ಳದಂತೆ, ನಿರ್ಭಂಧ ವಿಧಿಸಬಹುದಿತ್ತಲ್ಲ? ಹಾಗಾಗಿ ಇವು ಅತ್ಯಂತ ಟೊಳ್ಳು ಸಮರ್ಥನೆಗಳಾಗುತ್ತವೆ. ಇದು ನಮ್ಮನ್ನು ದಾರಿ ತಪ್ಪಿಸಲುದ್ದೇಶಿಸಿರುವ ಒಂದು ಪ್ರಜ್ಞಾವಾದ. ಇಂಥದೊಂದು ವಾದ ಸರಣಿಯನ್ನು ಮಾಡುತ್ತಿರುವುದು ಈ ದೇಶ ಕಂಡ ಅತ್ಯಂತ ಸಜ್ಜನ ಪ್ರಾಮಾಣಿಕ ಪ್ರಧಾನಿಗಳೆಂದೇ ಖ್ಯಾತರಾದ ಮನಮೋಹನ ಸಿಂಗರು. ಇದು ಆದ ತಪ್ಪನ್ನು ಸಮರ್ಥಿಸಿಕೊಳ್ಳುವ ರಾಜಕೀಯದ ಭಂಡತನವೋ ಇಲ್ಲ ಪ್ರಜ್ಞಾಪೂರ್ವಕವಾಗಿ ತರಂಗಗುಚ್ಛ ವಿತರಣೆಯಲ್ಲೂ ಟ್ರಿಕಲ್ ಡೌನ್ ಥಿಯರಿಯಂಥದನ್ನು ಅನುಸರಿಸಿರುವ ದ್ಯೋತಕವೋ?

ಇದರಲ್ಲಿನ ಸೂಕ್ಷ್ಮ ರಾಜಕಾರಣವನ್ನು ಗಮನಿಸಿ. ಅತ್ತ ದೂರ ಸಂಪರ್ಕ ಸಚಿವನಾಗಿ ಅಂದಿಮುತ್ತು ರಾಜಾ ಕೆಲವು ಖಾಸಗಿ ಕಂಪೆನಿಗಳಿಗೆ ಒತ್ತಾಸೆಯಾಗಿ ನಿಂತು ತನ್ನ ಅಧಿಕಾರ ದುರ್ಬಳಕೆ ನಡೆಸಿ ತರಂಗಗುಚ್ಛ ಕೊಡಿಸಿರುವುದು ಮತ್ತು ಅದಕ್ಕಾಗಿ ಅನೇಕ ಬೇನಾಮಿ ಕಂಪೆನಿಗಳ ಮೂಲಕ ಆತನಿಗೆ ಅಪಾರ ಪ್ರಮಾಣದ ಹಣ ಸಂದಾಯವಾಗಿರುವುದು ಸಿಬಿಐ ತನಿಖೆಯಿಂದ ಹೊರಬರುತ್ತಿದೆ. 2ಜಿ ತರಂಗಗುಚ್ಛವನ್ನು ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸಿರುವುದೇ ಮೂಲ ಹಗರಣ. ನ್ಯಾಯವಾಗಿ ತರಂಗಗುಚ್ಛವನ್ನು ಹರಾಜು ಹಾಕಬೇಕಿತ್ತು. ಮನಮೋಹನರು ಇದನ್ನು ತಿಳಿದದ್ದೂ ಅದನ್ನು ತಡೆಯದೇ ಹೋಗಿರುವುದು ತೀವ್ರ ಟೀಕೆಗೆ ಒಳಗಾಗಿದೆ. ಹಗರಣ ಮನಮೋಹನರು ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಆರೋಪಗಳಿಂದ ಸೋನಿಯಾ ಗಾಂಧಿಯವರ ಮನೆ ಬಾಗಿಲನ್ನೂ ತಟ್ಟಿದೆ. ಇದರಿಂದ ನುಣುಚಿಕೊಳ್ಳಲೆಂಬಂತೆ ಮನಮೋಹನರು ಪ್ರಜ್ಞಾವಾದವನ್ನು ಹೂಡಿದ್ದಾರೆ.

ಮೊದಲು ಬಂದವರಿಗೆ ಆದ್ಯತೆಯಂತೆ 2ಜಿ ತರಂಗಗುಚ್ಛವನ್ನು ಸಬ್ಸಿಡಿ ದರಗಳಲ್ಲಿ ವಿತರಿಸಿರುವುದು ಟ್ರಿಕಲ್ ಡೌನ್ ಥಿಯರಿಯನ್ವಯ ಶ್ರೀಶಾಮಾನ್ಯನಿಗೆ ಅದರ ಲಾಭವನ್ನೊದಗಿಸಲು. ಅದು ಸರ್ಕಾರದ ನೀತಿ ನಿರ್ಣಯ. ಆಹಾರಧಾನ್ಯ ರಸಗೊಬ್ಬರದ ಸಬ್ಸಿಡಿಯಂತೆ. ಅದೂ ನಮ್ಮ ಸರ್ಕಾರದ ನೂತನ ನಿರ್ಣಯವೇನಲ್ಲ, NDA ಕಾಲದಿಂದಲೂ ಇದನ್ನೇ ಪಾಲಿಸಿಕೊಂಡು ಬರಲಾಗಿದೆ ಎನ್ನುತ್ತಾರೆ. ಅದೇ ಉಸಿರಿನಲ್ಲಿ, ಆದರೆ ಇದನ್ನು ಅಮಲು ಮಾಡುವಾಗ ಅಂದಿಮುತ್ತು ರಾಜಾ ಕೆಲವು ಖಾಸಗಿ ಕಂಪೆನಿಗಳಿಗೆ ಪಕ್ಷಪಾತಿಯಾಗಿ ತರಂಗಗುಚ್ಛವನ್ನು ವಿತರಿಸಿ ಭ್ರಷ್ಟಾಚಾರ ಎಸಗಿದ್ದಾರೆ. ಅದು ಹಗರಣ. ಇದು ಮತ್ತೆ ತಮ್ಮನ್ನು ತಡಕದಿರಲೆಂದು, ಅದೇ ಉಸಿರಿನಲ್ಲಿ, ಕಂಪೆನಿಗಳ ಪರವಾನಗಿ ಮತ್ತು ತರಂಗಗುಚ್ಛಗಳ ಬೇಡಿಕೆಗಳನ್ನು ರಾಜಾ ಅವರೇ ಇತ್ಯರ್ಥಗೊಳಿಸಿದ್ದಾರೆಯೇ ಹೊರತು ಅದು ತನ್ನ ಅಥವಾ ಸಂಪುಟದ ಮುಂದೆ ತರಲಾಗಿಲ್ಲ ಎನ್ನುತ್ತಾರೆ. 2ಜಿ ಹಗರಣವನ್ನು ರಾಜಾ ಅವರಿಗೇ ಸೀಮಿತಗೊಳಿಸಿ ಸರ್ಕಾರದ ನೈತಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅದಕ್ಕಾಗಿ ಹಗರಣದ ವ್ಯಾಪ್ತಿ ವಿಸ್ತಾರಗಳನ್ನೇ ಸಂಕುಚಿತಗೊಳಿಸಿಬಿಡುವ ಹುನ್ನಾರವಿದು. 

90ರ ದಶಕದ ಆದಿಯಲ್ಲಿ ದೇಶ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಮುಕ್ತ ಆರ್ಥಿಕ ನೀತಿಯನ್ನು ಜಾರಿಗೆ ತಂದು ಕಳೆದ ಕೆಲವು ದಶಕಗಳಲ್ಲಿ ಭಾರತದ ಜನಜೀವನದ ಮೇಲೆ ಇನ್ನಿಲ್ಲದ ಸಕಾರಾತ್ಮಕ ಪ್ರಭಾವ ಬೀರಿದವರು ಮನಮೋಹನ ಸಿಂಗ್. ಆದರೆ ಅವರ ಆರ್ಥಿಕ  ನೀತಿಯು ಬಡಜನಪರವಲ್ಲದೆ ಬೃಹತ್ ಕೈಗಾರಿಕೆಗಳ ಪರ ಎಂಬ ಟೀಕೆಗಳೂ ಇಲ್ಲದಿಲ್ಲ. ಈ ದೇಶದ ಸಂಪತ್ತು ಇಲ್ಲಿನ ಜನರದು. ಪ್ರಧಾನಿಗಳು ಅದರ ಧರ್ಮದರ್ಶಿಗಳು. ಹೀಗಿರುವಾಗ ಈ ವಿಷಯದಲ್ಲಿ ಅವರು ಜನಪರ ನಿಲುವುಗಳನ್ನು ತಾಳ ಬೇಕಿರುವುದು ಅವಶ್ಯ. ಆದರೆ ಅವರು ಹೀಗೆ ಕಾರ್ಪೋರೆಟ್ ಸಂಸ್ಥೆಗಳಿಗೆ ಸಬ್ಸಿಡಿ ನೀಡುತ್ತಾ ಹೋದರೆ? ಇಲ್ಲ ಆ ಹೆಸರಿನಲ್ಲಿ ತಮ್ಮವರ ಭ್ರಷ್ಟಾಚಾರವನ್ನು ಮುಚ್ಚಲು ಪ್ರಯತ್ನಿಸಿದರೆ? ನಿಜ ಮನಮೋಹನರು ಯಾವತ್ತೂ ಆರ್ಥಿಕ ಭ್ರಷ್ಟತೆಯಲ್ಲಿ ತೊಡಗಿದವರಲ್ಲ. ಆದರೆ ಇದು ಅದನ್ನು ಮೀರಿಸಿದ ಬೌದ್ಧಿಕ ಭ್ರಷ್ಟತೆಯಲ್ಲವೇ?





ಚಾಪೆ ರಂಗೋಲಿಗಳ ಕೆಳಗೆ.. ನೈತಿಕತೆ ಹಾಳು ಹಂಪೆಯ ಶಿಥಿಲ.

ಹೈಕೋರ್ಟ್ ಐತಿಹಾಸಿಕವೆನ್ನಬಹುದಾದ ತೀರ್ಪು ನೀಡಿದೆ. ಯಡಿಯೂರಪ್ಪನವರ ಸರ್ಕಾರಕ್ಕೆ ತಮ್ಮ ಬೆಂಬಲ ಹಿಂತೆಗೆದುಕೊಂಡ ಐವರು ಇಂಡಿಪೆಂಡೆಂಟ್ ಶಾಸಕರನ್ನು ಪಕ್ಷಂತರ ನಿಷೇಧ ಕಾಯ್ದೆಯನ್ವಯ ವಜಾ ಮಾಡಿರುವ ಸ್ಪೀಕರ್ ಕ್ರಮವನ್ನು ಎತ್ತಿ ಹಿಡಿದಿದೆ! ಇವರೊಂದಿಗೆ ಬಂಡಾಯವೆದ್ದ 11 ಮಂದಿ ಬಿಜೆಪಿ ಶಾಸಕರ ಅನರ್ಹತೆ ಕಟ್ಟಿಟ್ಟ ಬುತ್ತಿಯೆಂಬುದು ಅವರಿಗೂ ತಿಳಿದಿರುವ ವಿಚಾರವೇ, ಆದರೆ ಇಂಡಿಪೆಂಡೆಂಟುಗಳನ್ನು ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಬಹುದೆಂದೇ ಅನೇಕರು ಭಾವಿಸಿದ್ದರು, ಆದರೆ ಈ ಐವರು ಶಾಸಕರು ಬಿಜೆಪಿಯ 11 ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗಿ ಸಹಿ ಮಾಡಿರುವುದು ಮತ್ತು 2 ಬಾರಿ ಪಕ್ಷದ ವಿಪ್ ಅನ್ನು ಸ್ವೀಕರಿಸಿರುವುದನ್ನು ನ್ಯಾಯಾಲಯವು ಇವರ ಪಕ್ಷ ಸೇರ್ಪಡೆ ಎಂದು ಪರಿಗಣಿಸಿದೆ. ಇದರಂತೆ ಇವರಿಗೂ ಕೂಡ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅನ್ವಿಯಿಸಿದೆ. ಇದು ಪಕ್ಷಾಂತರ ನಿಷೇಧ ಕಾಯ್ದೆಯ ಮರುವ್ಯಾಖ್ಯಾನವಾಗಿದ್ದು ಈ ತೀರ್ಪು ಮುಂಬರುವ ದಿನಗಳಲ್ಲಿ ಸರ್ಕಾರ ರಚನೆಯ ಕಸರತ್ತಿನಲ್ಲಿ ಪ್ರಮುಖ ಪಾತ್ರ ವಹಿಸಿ bench mark ಎನ್ನಿಸಿಕೊಳ್ಳಲಿರುವುದು ದಿಟ. ಈ ಕೂಡಲೇ ಈ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಛಾಲೆಂಜ್ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ನ ತೀರ್ಮಾನ ಮತ್ತು ವ್ಯಾಖ್ಯಾನಗಳನ್ನು ಎದುರು ನೋಡಲಾಗುತ್ತಿದೆ.

ಇದು ನ್ಯಾಯಾಲಯಗಳ ವಿಚಾರವಾಯಿತು. ಇನ್ನು ಈ ತೀರ್ಪು ರಾಜ್ಯ ರಾಜಕೀಯದಂಗಳಲದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ತಕ್ಷಣದ ಅವಧಿಯಲ್ಲಿ ಹೇಳುವುದಾದರೆ ಇದು ಯಡಿಯೂರಪ್ಪನವರ ಸರ್ಕಾರಕ್ಕೆ ಪರೋಕ್ಷವಾಗಿ ಸಂದ ಜಯ. ಜಯಕ್ಕಿಂತಲೂ ನೆಮ್ಮದಿ ಕೊಟ್ಟ ಘಳಿಗೆ. ಮೊನ್ನೆಯ ರಾಜಕೀಯ ವಿಪ್ಲವದ ಸಂದರ್ಭದಲ್ಲಿ ಬಂಡಾಯವೆದ್ದ 11 ಬಿಜೆಪಿ ಶಾಸಕರು ಮತ್ತು ಐವರು ಇಂಡಿಪೆಂಡೆಂಟುಗಳನ್ನು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಹೊರಹಾಕಿ, ಸಭೆಯ ಉಳಿದ ಬಲಾಬಲದಲ್ಲಿ ವಿರೋಧ ಪಕ್ಷಗಳೊಂದಿಗೆ ಸಮಬಲವಾದ ಬಿಜೆಪಿ ಮತ್ತೊಬ್ಬ ಇಂಡಿಪೆಂಡೆಂಟ್ ಎಂಎಲ್ಲೆ ಕೋಲಾರದ ವರ್ತೂರು ಪ್ರಕಾಶ್ ಅವರ ದುಬಾರಿ ಬೆಂಬಲದೊಂದಿಗೆ ತನ್ನ ಬಲವನ್ನು 106ಕ್ಕೇರಿಸಿಕೊಂಡು ತನ್ನ ಅಸ್ತಿತ್ವ ಉಳಿಸಿಕೊಂಡಿತ್ತು. ಈಗ ಈ 16 ಮಂದಿ ಶಾಸಕರಲ್ಲಿ ಯಾರೇ ಒಳಗೆ ಬಂದರೂ ಸರ್ಕಾರದ ಈ ತಾಂತ್ರಿಕ ಬಹುಮತ ಏರುಪೇರಾಗಿ ಅಸ್ತಿತ್ವದ ಪ್ರಹಸನ ಮತ್ತೆ ಮೊದಲುಗೊಳ್ಳುತ್ತಿತ್ತು. ಆದರೆ ಈ ತೀರ್ಪು ಆ ಪ್ರಹಸನದ ಅಂಕದ ಪರದೆಯನ್ನಿಳಿಸಿಬಿಟ್ಟಿದೆ. ತಾಂತ್ರಿಕವಾಗಿ ಸರ್ಕಾರ ಸದ್ಯಕ್ಕೆ SAFE!

ಇನ್ನು ಮೊನ್ನೆ ಈ ಐವರೂ ಪಕ್ಷೇತರರನ್ನು ನೋಡಿದವರಿಗೆ ಅನ್ನಿಸಿದ್ದು ಒಂದೇ - ದಾರಿ ತಪ್ಪಿದ ಮಕ್ಕಳು ಇಲ್ಲ ಕುರಿಗಳು! ಈ ಕುರಿ ಮಂದೆಯಲ್ಲಿ ಕೆಲವು ಕುರಿಗಳು ಹಿಂದೆ ಉಳಿದುಬಿಡುತ್ತವೆ, ಮಿಕ್ಕವೆಲ್ಲಾ ಮುಂದೆ ಹೋಗಿಬಿಟ್ಟರೆ ಇವಕ್ಕೆ ದಾರಿ ತಪ್ಪಿ ಬಿಡುತ್ತೆ. ಅಂಥ ಕುರಿಗಳಂತೆ ಕಂಡರು ಈ ಐವರು. ಈ ಕ್ಷಣದಲ್ಲಿ ಅವರ ಐವರದೂ ಇನ್ನಿಲ್ಲದ ಒಗ್ಗಟ್ಟು. ಎಲ್ಲರೂ ದಿಕ್ಕೆಟ್ಟಿದ್ದಾರೆ. ನರೇಂದ್ರಸ್ವಾಮಿಯವರಂತೂ ಛಾನೆಲ್ ಒಂದರಲ್ಲಿ ಕೂತು ನಾಡಿನ ಸಮಸ್ತ ಜನರೆದುರು ಗಳಗಳನೆ ಅತ್ತುಬಿಟ್ಟರು. ಮೂರು ಪಕ್ಷಗಳ ವಿರುದ್ಧ ಸ್ವತಂತ್ರವಾಗಿ ಗೆಲ್ಲಬೇಕೆಂದರೆ ನಮ್ಮದು ಎಂಥಾ ಹೋರಾಟ, ಎಲ್ಲವನ್ನೂ ಮಣ್ಣುಗೂಡಿಸಿಬಿಟ್ಟರಲ್ಲ ಸಾರ್, ಅದೂ ನಾವೆಲ್ಲರೂ ದಲಿತರು..ಊ..ಊ..ಊ..ಇನ್ನು 11 ಬಿಜೆಪಿ ಶಾಸಕರ ಸ್ಥತಿಯೂ ಇದಕ್ಕಿಂತಲೂ ಏನೂ ಭಿನ್ನವಲ್ಲ.

ಕುಮಾರಸ್ವಾಮಿ ಯಡಿಯೂರಪ್ಪ ನಡುವಿನ ದ್ವೇಷ ರೋಷಗಳ ರಾಜಕೀಯ ಮೇಲಾಟಗಳಲ್ಲಿ, ಅಧಿಕಾರದ ಗದ್ದುಗೆಗಾಗಿ ನಡೆಯುತ್ತಿರುವ ಹೋಮ 16 ಶಾಸಕರ ಪೂರ್ಣಾಹುತಿ ತೆಗೆದುಕೊಂಡುಬಿಟ್ಟಿದೆ. ಹೌದು ಸುಮ್ಮನೆ ಈ ಎಲ್ಲ ಬೆಳವಣಿಗೆಗಳ ಮೂಲ ಅರಸಿ ನೋಡಿ ನಿಮಗೆ ಕಾಣಿಸುವುದು ಗೌಡರ ಮನೆಯ ಅಧಿಕಾರ ದಾಹ, ಯಡಿಯೂರಪ್ಪನವರ ಗದ್ದುಗೆಯ ಪ್ರೀತಿ ಮತ್ತು ಭಂಢತನ. ವರ್ತಮಾನದ ಎಲ್ಲ ಮುಖವಾಡಗಳನ್ನು ಕಳಚುತ್ತಾ ಹೋದರೆ ನಮಗೆ ಕಾಣಿಸುವುದು ಇದೇ ವಿಕಾರ ವಿಕೃತ ಮುಖ.

2004ರಲ್ಲಿ ಎಸ್ಸೆಂ ಕೃಷ್ಣರ ಸರ್ಕಾರ ಸೋತಾಗಿನಿಂದ ಶುರುವಾಯಿತು ನೋಡಿ ಸ್ವಾಮಿ ನಮ್ಮ ರಾಜ್ಯಕ್ಕೆ ಈ ಶನಿಕಾಟ. ಅಷ್ಟರವರೆಗೂ ಹೋರಾಟ ಅಂತ ಇದ್ದದ್ದೇ ಕಾಂಗ್ರೆಸ್ ಮತ್ತು ದಳದ ನಡುವೆ. ಎಸ್ಸೆಂ ಕೃಷ್ಣರ ಸರ್ಕಾರದಲ್ಲಿ ನಡೆದ ಹಗರಣಗಳನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಜೈಲಿಗಟ್ಟುತ್ತೇನೆ, ಅದಕ್ಕಾಗೇ ಹೊಸದೊಂದು ಜೈಲು ಕಟ್ಟಬೇಕಿದೆ ಎಂದು ಅಬ್ಬರಿಸುತ್ತಿದ್ದ ಸಿದ್ಧರಾಮಯ್ಯ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾದರು. ಅವರು ಈಗ ಕಾಂಗ್ರೆಸ್ ನಾಯಕರು! ನಂತರ ನಡೆದದ್ದು ಗೌಡರ ಮನೆಯ ವ್ಯವಸ್ಥಿತ ಮೇಲಾಟ. ಕುಮಾರಣ್ಣ costume ತೊಟ್ಟು stage ನ ಮೇಲೆ ಬರಲು sidewing ನಲ್ಲಿ ಕಾಯುತ್ತಲೇ ಇದ್ದರು. ಸಿದ್ಧರಾಮಯ್ಯ ಮೂಲೆಗುಂಪಾದರು. ಅವರು ಅಹಿಂದದ ದಾರಿ ಹಿಡಿದು ಅದು ಕಾಂಗ್ರೆಸ್ ಎಂಬ ಸಾಗರದಲ್ಲಿ ಸೇರಿ ಕೃತಾರ್ಥವಾಯಿತು. ಗೌಡರ ಮನೆಗೆ ಬೇಕಿದ್ದದ್ದು ಗದ್ದುಗೆ. ಧರ್ಮಸಿಂಗರ ಸರ್ಕಾರ ಉರುಳಿ ಬಿತ್ತು. ಬಿಜೆಪಿಯ ಸಖ್ಯ ಬೆಳೆಯಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು, ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು. ಅದು 20-20 ಮ್ಯಾಚು. ಮೊದಲು ಬ್ಯಾಟಿಂಗ್ ಮಾಡಿದ ಗೌಡರ ಮನೆ ಇಷ್ಟೊತ್ತೂ ಫೀಲ್ಡಿಂಗ್ ಮಾಡುತ್ತಿದ್ದ ಯಡಿಯೂರಪ್ಪನವರಿಗೆ ಇನ್ನಿಂಗ್ಸೇ ಕೊಡಲಿಲ್ಲ. ಇದು ಶುದ್ಧ ಅನೈತಿಕ ಹೆಜ್ಜೆಯೇ ಸರಿ. ಗೌಡರ ಮನೆಯ ಅಧಿಕಾರ ದಾಹ, ಅದಕ್ಕವರು ತುಳಿಯುತ್ತಿದ್ದ ಅನೈತಿಕ ಮಾರ್ಗಗಳು ಎಲ್ಲದರ ಬಗ್ಗೆ ಜನ ಬಂಡೆದ್ದಿದ್ದರು. ಯಡಿಯೂರಪ್ಪನವರು ಇದನ್ನು ಚೆನ್ನಾಗಿಯೇ ಬಳಸಿಕೊಂಡರು. ಬಿಜೆಪಿ ಸರ್ಕಾರ ಮೊದಲ ಬಾರಿಗೆ ಅಧಿಕಾರ ಹಿಡಿಯಿತು.

ಅಲ್ಲಿಂದ ಶುರುವಾದದ್ದು ಯಡಿಯೂರಪ್ಪನವರ ಅಧಿಕಾರ ದಾಹ, ಭಂಡತನ, ಇದಕ್ಕಾಗಿ ಹಿಡಿದ ಅನೈತಿಕ ಮಾರ್ಗಗಳು. ಕುಮಾರಣ್ಣನೇ ಕಲಿಸಿಕೊಟ್ಟ ಪಾಠ. ಗುರುವಿಗೇ ತಿರುಮಂತ್ರ. ಅವರು ಸುಮ್ಮನಿದ್ದಾರೆಯೇ? ಅವರೂ ಮತ್ತಷ್ಟು ಕುಟಿಲತೆಗಳಿಗಿಳಿದರು. ಕುಟಿಲತೆ ಅನೈತಿಕತೆಗಳಲ್ಲಿ ಇವರಿಬ್ಬರದೂ ಒಂದು ರೀತಿಯ ಸ್ಪರ್ಧೆ. ಒಬ್ಬರನ್ನು ಮೀರಿಸಿ ರಾಜಕೀಯವಾಗಿ ಸದೆ ಬಡಿಯಲು ಮತ್ತೊಬ್ಬರು ಮತ್ತಷ್ಟು ಕೆಳಮಟ್ಟಕ್ಕಿಳಿಯುತ್ತಲೇ ಇಡಿಯ ರಾಜ್ಯ ರಾಜಕೀಯವನ್ನು ಪ್ರಪಾತಕ್ಕಿಳಿಸಿಬಿಟ್ಟಿದ್ದಾರೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದದ್ದು ಯಾವತ್ತಿಗೂ ಗೌಡರ ಮನೆಗೆ ಸಹ್ಯವಾಗಲೇ ಇಲ್ಲ. ಆದ್ದರಿಂದ ಮೊದಲ ದಿನದಿಂದಲೇ ಅವರ ದಾಳಿ ಶುರುವಾಯಿತು. ಇದು ವೈಯಕ್ತಿಕ ದಾಳಿಯೇ ಆಗಿದ್ದರೂ ಅದು ವಿರೋಧ ಪಕ್ಷದ ಕರ್ತವ್ಯವೂ ಆಗಿರುವುದರಿಂದ ಒಪ್ಪಿತವೇ ಆಗಿದೆ. ಅತ್ತ ಇದರಿಂದ ಅಧೀರರಾದ ಯಡಿಯೂರಪ್ಪನವರು ಆಪರೇಷನ್ ಕಮಲ ಎಂಬ ಪ್ರಜಾಪ್ರಭುತ್ವದ ಅಣಕಕ್ಕೆ ಕೈಹಾಕಿ ನೈತಿಕತೆಯ ಕುರಿತು ಮಾತನಾಡುವ ಎಲ್ಲ ನೈತಿಕತೆಯನ್ನೂ ಕಳೆದುಕೊಂಡುಬಿಟ್ಟರು. ನಂತರ ನಾಯಕತ್ವಕ್ಕೆ ಪ್ರತಿದಿನವೂ ಸವಾಲು, ಬಂಡಾಯ. ಅದು ಈ ದಿನಕ್ಕೂ ಮುಂದುವರೆದಿದೆ. ಅದೆಲ್ಲವೂ ಗೌಡರ ಮನೆಯ ಕುತಂತ್ರದ ಫಲ ಎಂಬುದು ಯಡಿಯೂರಪ್ಪನವರ ಬಲವಾದ ನಂಬಿಕೆ. ಹಾಗಾಗಿ ಗೌಡರ ಮನೆಯನ್ನು, ಜೆಡಿಎಸ್ ಅನ್ನೂ ಬೇರು ಸಮೇತ ಸರ್ವನಾಶ ಮಾಡಿಬಿಡುವ  ಚಾಣಕ್ಯ ಶಪಥ ನಮ್ಮ ಮುಖ್ಯಮಂತ್ರಿಗಳದ್ದು. ಯಡಿಯೂರಪ್ಪನವರನ್ನು ಕೆಳಗಿಳಿಸಿ ಮತ್ತೆ ಆ ಗದ್ದುಗೆಯನ್ನು ಕಬ್ಜಾ ಮಾಡಿಬಿಡುವ one-point-agenda ಗೌಡರದು. ಇದು ಸ್ಪರ್ಧೆ. ಇದರ ಭಾಗವಾಗಿಯೇ ಕುಮಾರಸ್ವಾಮಿ ಕಳೆದೊಂದೆರಡು ತಿಂಗಳುಗಳಿಂದ ಯಡಿಯೂರಪ್ಪನವರು ಮತ್ತು ಅವರ ಕುಟುಂಬಸ್ಥರ ಹಗರಣಗಳನ್ನು ದಾಖಲೆ ಸಮೇತ ರಾಜ್ಯದ ಜನತೆಯ ಮುಂದೆ ಬಿಚ್ಚಿಟ್ಟು ನಡೆಸುತ್ತಿರುವ ಹೋರಾಟ ಅತ್ಯಂತ ಶ್ಲಾಘನೀಯ. ಒಂದು ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡುವ ನೈತಿಕ ರೀತಿಯೇ ಇದು. ಈ ವಿಷಯದಲ್ಲಿ ಕುಮಾರಸ್ವಾಮಿ ಅಭಿನಂದನಾರ್ಹರು. ಆದರೆ ಈ ಹಿಂದಿನ ಎರಡು ವರ್ಷಗಳಲ್ಲಿ ಈ ಸರ್ಕಾರದ ವಿರುದ್ಧ ಅವರು ನಡೆಸಿರುವ ಹೋರಾಟಗಳಿವೆಯಲ್ಲ, ಅದನ್ನು ಹೋರಾಟವೆನ್ನುವುದು ಸೂಕ್ತವಲ್ಲವೇನೋ. ಅವು ಕುಟಿಲತೆಯಿಂದ ಅಧಿಕಾರವನ್ನು ಕಬಳಿಸುವ ಹುನ್ನಾರಗಳು ಅಷ್ಟೆ.

ಅಂಥದೊಂದು ಹುನ್ನಾರದ ಫಲವೇ ಇಂದು ಈ 16 ಶಾಸಕರು ಕೇರಾಫ್ ಫುಟ್ಪಾತ್ ಆಗಿರುವುದು. ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಬಂಡೆದ್ದ ಈ ಶಾಸಕರು ಕೇಳಿದ್ದು ನಾಯಕತ್ವ ಬದಲಾವಣೆ. ಅದರಲ್ಲೂ ಇದ್ದದ್ದು ಯಡಿಯೂರಪ್ಪನವರ ಅನೈತಿಕತೆಯೇ. ಅಂದು ಸರ್ಕಾರದ  ಜನ್ಮದಾತರಾದ ಐವರು ಪಕ್ಷೇತರರನ್ನು ಸಂಪೂರ್ಣ ಅವಧಿಗೆ ತಮ್ಮವರೆಂದು ಆಶ್ವಾಸನೆ ಕೊಟ್ಟು ಯಡ್ಡಿ, ಆಪರೇಷನ್ ಕಮಲ ನಡೆಸಿ ಪಕ್ಷೇತರರ ಅನಿವಾರ್ಯತೆಯನ್ನು ತೊಲಗಿಸಿಕೊಂಡರು. ನಿಧಾನವಾಗಿ ಒಬ್ಬೊಬ್ಬರನ್ನಾಗಿ ಮೂಲೆಗುಂಪು ಮಾಡಿ ಹೊರಗಿಟ್ಟರು. ಇದರ ಜೊತೆಗೆ ಸೇರಿದ್ದು ಇತರೆ 11 ಅತೃಪ್ತ ಬಿಜೆಪಿ ಶಾಸಕರ ಪಡೆ. ಈ ಪಕ್ಷೇತರರನ್ನು ಕೈಬಿಟ್ಟದ್ದು ಕುಮಾರಣ್ಣ ತಮಗೆ ಅಧಿಕಾರ ಹಸ್ತಾಂತರ ಮಾಡದುದಷ್ಟೆ ಅನೈತಿಕವೆಂಬುದು ಅದೇಕೋ ಯಡ್ಡಿಗೆ ಹೊಳೆಯಲೇ ಇಲ್ಲ. ಬಂಡಾಯ ಭುಗಿಲೆದ್ದಿತು. ತನ್ನ ವೈರಿಯನ್ನು ಹಣಿಯಲು ಇಲ್ಲೊಂದು ಮಿಂಚು ಹುಳವನ್ನು ಕಂಡ ಕುಮಾರಸ್ವಾಮಿ ಕೂಡಲೇ ಗೋವೆಗೆ ಹೋಗಿ ಕಾಂಗ್ರೆಸ್ ಜೆಡಿಎಸ್ ಪರ್ಯಾಯ ಸರ್ಕಾರ ರಚನೆ, ಅದರಲ್ಲಿ ಸ್ಥಾನಮಾನ, ಮರುಚುನಾವಣೆಗೆ ಟಿಕೆಟ್ ಹೀಗೆ ಇನ್ನಿಲ್ಲದ ಆಸೆಗಳನ್ನು ತೋರಿಸಿ ಈ 16 ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಹೋದದ್ದು ಸೀದಾ ರಾಜಭವನಕ್ಕೆ. ಅಲ್ಲಿ ಇವರೆಲ್ಲಾ ಯಡಿಯೂರಪ್ಪನವರ ನಾಯಕತ್ವಕ್ಕೆ ತಮ್ಮ ಬೆಂಬಲ ಹಿಂತೆಗೆದುಕೊಂಡರು. ಅಲ್ಲಿಗೆ their fate was sealed!

ಆಮೇಲೆ ಶುರುವಾದದ್ದು ಸರ್ಕಾರವನ್ನು ಖೆಡ್ಡಾಕ್ಕೆ ಕೆಡವುವ ಕಾರ್ಯಾಚರಣೆ ಮತ್ತು ಯಡಿಯೂರಪ್ಪನವರಿಂದ ಶತಾಯ ಗಥಾಯ ಸರ್ಕಾರವನ್ನು ಉಳಿಸಿಕೊಳ್ಳುವ ಕಾರ್ಯಾಚರಣೆ. ಈ ರಾಜಕೀಯ ಮೇಲಾಟದ ಕಾರ್ಯಾಚರಣೆಗಳಲ್ಲಿ ಮಡಿ ಮೈಲಿಗೆಯೆಂಬುದೇ ಇರಲಿಲ್ಲ. ವಿರೋಧ ಪಕ್ಷಗಳ ಪರವಾಗಿ ಅತ್ತ ರಾಜ್ಯಪಾಲರು ತಮ್ಮ ಶಕ್ತಿ ಮೀರಿ ದುಡಿದರೆ ಇತ್ತ ಅಧಿಕಾರಸ್ಥರ ಪರ ಸ್ಪೀಕರ್ ದುಡಿದರು. ಈ 16 ಜನ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ವಜಾ ಮಾಡಿಬಿಟ್ಟರು ಸ್ಪೀಕರ್. 11 ಬಿಜೆಪಿ ಶಾಸಕರನ್ನು ವಜಾ ಮಾಡಿದುದರ ಬಗ್ಗೆ ಯಾರೂ ಇವತ್ತಿಗೂ ಚಕಾರವೆತ್ತುವುದಿಲ್ಲ, ನ್ಯಾಯವಾಗಿ ಅದು ಸರಿ. ಆದರೆ ವಿಧಾನಸಭೆಯಂಗಳಲದಲ್ಲಿ ಸಮಸ್ಯೆ ಶುರುವಾದದ್ದೇ ಈ ಐವರು ಸ್ವತಂತ್ರರದು. ಅವರು ವಿರೋಧ ಪಕ್ಷಗಳ ಕಡೆ ನಿಂತರೆ ಸರ್ಕಾರ ಉರುಳುತ್ತಿತ್ತು. ಆಗ ಸ್ಪೀಕರ್ ಪಕ್ಷೇತರರನ್ನೇ ಪಕ್ಷಾಂತರ ನಿಷೇಧ ಕಾಯ್ದೆಯಡಿ ವಜಾ ಮಾಡಿಬಿಟ್ಟರು! ಈ ಗದ್ದಲದಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪನವರ ಪರ 106 ಧ್ವನಿಗಳು ಬೆಂಬಲಿಸಿದವೆಂದು ಶಬ್ಧವೇಧಿ ವಿದ್ಯೆಯನ್ನು ಬಲ್ಲಂತೆ ಸ್ಪೀಕರ್ ಹೇಳಿ ಒಳಹೊರಟದ್ದೇ ತಡ, ಇದು ಅನೈತಿಕ, ಪ್ರಜಾಪ್ರಭುತ್ವ ವಿರೋಧಿ ಎಂದು ಬೊಬ್ಬಿರಿಯತೊಡಗಿದರು ಎಲ್ಲ. ನಂತರ ನಡೆದ ವ್ಯವಸ್ಥಿತ ವಿಶ್ವಾಸಮತ ಅಧಿವೇಶನದಲ್ಲಿ ಯಡಿಯೂರಪ್ಪ 1 ಮತದ ಆಧಿಕ್ಯದಿಂದ ತಮ್ಮ ಸಕಾರವನ್ನು ಉಳಿಸಿಕೊಂಡರೆನ್ನಿ.

ಈ ಸ್ಪೀಕರ್ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈಗ ಸ್ಪೀಕರ್ ತೀರ್ಮಾನವೇ ಸರಿ ಎಂಬ ತೀರ್ಪನ್ನು ನ್ಯಾಯಾಲಯ ನೀಡುರುವುದರೊಂದಿಗೆ ಅಂದಿನ ಅನೈತಿಕತೆಗೆ ಇಂದು ಕಾನೂನಿನ ಠಸ್ಸೆ ದೊರೆತಿದೆ. ಆದರೆ ಇನ್ನೂ ಇದು ಅಂತಿಮವೇನಲ್ಲ. ಮೇಲೊಂದು ಸುಪ್ರೀಂ ಕೋರ್ಟ್ ಇದೆ. ಆದರೆ ಯಡಿಯೂರಪ್ಪ ಬೀಗುತ್ತಿದ್ದಾರೆ. ಕುಮಾರಸ್ವಾಮಿ ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಹೋರಾಟದ ವೀರಗಾಸೆ ಕುಣಿತ ಮುಂದುವರೆಸಿದ್ದಾರೆ. ಅಧಿಕಾರ ಹಣದ ಆಮಿಶಗಳಿಗೊಳಗಾದ ಈ 16 ಶಸಕರು ಇವತ್ತು C/O footpath ಆಗಿದ್ದಾರೆ. ಈ ಪಕ್ಷೇತರರನ್ನು ಹೊರಗಿಟ್ಟಿರುವ ಕುರಿತು ಕೇಳಿದಾಗ ಯಡ್ಡಿ ಒಂದು ಕಥೆ ಹೇಳಿದರಂತೆ. ನೋಡ್ರೀ ಮನೆ ಕಟ್ಟೋವಾಗ ಮೌಲ್ಡಿಂಗ್ ಹಾಕ್ತಾರಲ್ಲ ಆವಾಗ ಅದು ನಿಲ್ಲಲೆಂದು ದಿಮ್ಮಿಗಳನ್ನಿಟ್ಟು ನಿಲ್ಲಿಸಿರ್ತಾರೆ, ಪಿಲ್ಲರ್ಗಳಂತೆ. ಮನೆ ನಿಲ್ಲಲು ಅದು ತುಂಬಾ ಮುಖ್ಯ. ಆದರೆ ಒಮ್ಮೆ ಮೌಲ್ಡಿಂಗ್ ಗಟ್ಟಿಯಾದ ಕೂಡಲೇ ತೆಗೆಯುವುದು ಯಾವುದನ್ನಾ?...ಇದು ಯಡ್ಡಿಯ ರಾಜಕೀಯ ಮಾತ್ರವಲ್ಲ ನಮ್ಮ ಇಂದಿನ ರಾಜಕೀಯದ ವಾಸ್ತವ ಚಿತ್ರಣ.

ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯ ಈ ರಾಜಕೀಯ ವೈಯಕ್ತಿಕ ಹೋರಾಟದ ಕಡೆಯ ಅಂಕ ಇನ್ನೂ ಮುಗಿದಿಲ್ಲ. ಈ ಹೋರಾಟದಲ್ಲಿ ಯಾವುದೇ ನೈತಿಕತೆಗಳಿಲ್ಲ. ಯಡಿಯೂರಪ್ಪನವರ ಹಗರಣಗಳ ಕಟ್ಟನ್ನು ಹಿಡಿದು ಹೋರಾಟ ಮುಂದುವರೆಸಿರುವ ಗೌಡರ ಮನೆಯ ಹಗರಣಗಳು, ಅವರ ಆಸ್ತಿಯ ತನಿಖೆಗೆ ಮುಂದಾಗಿದ್ದಾರೆ ಯಡಿಯೂರಪ್ಪ. ಇದನ್ನು ತಕ್ಕಮಟ್ಟಿಗೆ ಒಪ್ಪಬಹುದು. ಪ್ರಜಾಪ್ರಭುತ್ವದಲ್ಲಿ ಇಂತಹ ಹೋರಾಟಗಳು ಒಪ್ಪಿತವೂ ಸ್ವಾಗತಾರ್ಹವೂ ಆಗಿದೆ. ಈ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಿ ಈ ಸರ್ಕಾರವನ್ನು ಕಿತ್ತೊಗೆದು ಚುನಾವಣೆಗಳನ್ನು ಎದುರಿಸಿ ಜನರ ಆಶೀರ್ವಾದ ಪಡೆದಲ್ಲಿ ಮತ್ತೆ ಗೌಡರ ಆಳ್ವಿಕೆಯೇ ಆಗಲಿ. ಆದರೆ ಹಿಂಬಾಗಿಲ ಕುಟಿಲತೆಗಳ ಮುಖಾಂತರ ಒಂದು ಚುನಾಯಿತ ಸರ್ಕಾರವನ್ನು ಕೆಡವಿ ವಿಧಾನಸೌಧದ ಮೂರನೇ ಮಹಡಿಯನ್ನು ತಲುಪುವುದು ಕಬ್ಜಾ ಆಗುತ್ತದೆಯೇ ಹೊರತು ನೈತಿಕವೆನ್ನಿಸಿಕೊಳ್ಳುವುದಿಲ್ಲ. ಒಂದೊಮ್ಮೆ ಅಂಥ ಸರ್ಕಾರ ಬಂದರೂ ಅದು ಈ ಸರಕಾರಕ್ಕಿಂತಲೂ ಉತ್ತಮ ಸರ್ಕಾರವೇನೂ  ಆಗಿರುವುದಿಲ್ಲ. ಸರ್ಕಾರಗಳು ನಿಲ್ಲುವುದು ಉಳಿಯುವುದು ಬಾಳುವುದು ತಾಂತ್ರಿಕ ಬಲಾಬಲಗಳ ಮೇಲಲ್ಲ, ಬದಲಿಗೆ ನಂಬಿಕೆ ನೈತಿಕತೆಯ ತಳಪಾಯದ ಮೇಲೆ. ಇದು ಸರ್ಕಾರ ನಡೆಸುವವರೂ ಬೀಳಿಸಲು ಹೊರಟಿರುವವರಿಬ್ಬರೂ ನೆನಪಿಟ್ಟುಕೊಂಡರೆ ಉತ್ತಮ. ಏಕೆಂದರೆ ಈಗ ಇಬ್ಬರೂ ಹೊರಟಿರುವುದು ತಾಂತ್ರಿಕ ಆಧಾರಗಳ ಮೇಲೆ. ಮತ್ತೆ ಎಲ್ಲಿ ತಾಂತ್ರಿಕ ಬಲಾಬಲದ ಪ್ರಶ್ನೆ ಎದುರಾಗುತ್ತದೋ ಎಂದು ಯಡಿಯೂರಪ್ಪನವರ ಸರ್ಕಾರ ಮತ್ತೊಂದು check dam ಅನ್ನು ನಿರ್ಮಿಸಿಕೊಂಡಿದೆ. ಸದನದಲ್ಲಿ ಗದ್ದಲವೆಬ್ಬಸಿದರು ಎಂಬ ನೆಪದಲ್ಲಿ 15 ಮಂದಿ ವಿರೋಧ ಪಕ್ಷದ ಶಾಸಕರನ್ನು ವರ್ಷದ ಮಟ್ಟಿಗೆ ಅಮಾನತು ಮಾಡಿದ್ದಾರೆ ಸ್ಪೀಕರ್. ಇದು ನಮ್ಮ ಇಂದಿನ ರಾಜಕೀಯ. ನೈತಿಕತೆಯ ಭ್ರಮೆಗಳೂ ಕೂಡ ಇಲ್ಲ. ಇಷ್ಟೇ ಅಲ್ಲ, ಇದು ಮಾಟ ಮಂತ್ರ ಜೀವ ಭಯದವರೆಗೂ ಹೋಗಿ ಕರ್ನಾಟಕದ ಜನ ನಗಬೇಕೋ ಅಳಬೇಕೋ ತಿಳಿಯದ ಸ್ಥಿತಿಯನ್ನು ತಲುಪಿದೆ.

ಒಬ್ಬರು ಚಾಪೆ ಕೆಳಗೆ ಮತ್ತೊಬ್ಬರು ರಂಗೋಲಿಯ ಕೆಳಗೆ..ಈ ಎರಡರ ಕೆಳಗೆ ಹೂತು ಹೋಗಿರುವುದು ರಾಜಕೀಯದ ನೈತಿಕತೆ. ಈಗ ಅದು ಹಾಳು ಹಂಪೆಯ ಶಿಥಿಲ.

ಒಂದು `ಲೋಕಪ್ರಿಯ' ಸಮ್ಮೇಳನ



ಈಗ ಕರ್ನಾಟಕವು ಭಾರತದಲ್ಲಿಯೇ ಅತ್ಯಂತ ಭ್ರಷ್ಟ ರಾಜ್ಯ ಎಂಬ ಹೆಸರು ಸಂಪಾದಿಸಿಬಿಟ್ಟಿದೆ. ರಾಜಕೀಯ ಪಕ್ಷಗಳು ಅಧಿಕಾರ ದಾಹದಿಂದ ಕಚ್ಚಾಡುತ್ತಿವೆ. ಬಯ್ಗಳು ಅಸಮರ್ಥರ ಆಯುಧ. ಅದು ದುರ್ಬಲರು ಉಪಯೋಗಿಸುವ ಚುಚ್ಚುಗತ್ತಿ. ಅದನ್ನು ಉಪಯೋಗಿಸಬಾರದು. ಹಲವು ಶಾಸಕರ ಮಾತಿನಲ್ಲಿ ನಡೆಯಲ್ಲಿ ವ್ಯವಹಾರದಲ್ಲಿ ಯಾವುದರಲ್ಲಿಯೂ ಗಾಂಭೀರ್ಯವಾಗಲೀ ಸುಸಂಸ್ಕೃತಿಯಾಗಲೀ ಕಾಣಬರುತ್ತಿಲ್ಲ. ಪ್ರಜಾವರ್ಗದ ನೆಮ್ಮದಿ ಕೆಟ್ಟಿದೆ. ಗೊಂದಲದಿಂದ ಸಾಮಾಧಾನ ನಾಶವಾಗಿದೆ. ಪ್ರಜೆಗಳಲ್ಲಿ ನಾವೇಕೆ ಇಂತಹ ಅಸಮರ್ಥರನ್ನು ಆಯ್ಕೆ ಮಾಡಿದೆವು ಎಂದು ತಮ್ಮನ್ನೂ ಪಕ್ಷಗಳನ್ನೂ ನಿಂದಿಸುತ್ತಾ ಇದ್ದಾರೆ. ಪ್ರಜೆಗಳನ್ನು ಕಾಪಾಡುವವರೇ ಕಾದಾಡಿದರೆ ಎಂಥ ವಿಪರ್ಯಾಸ. ಈ ಕಾದಾಟ ಪಕ್ಷದ್ವೇಷ ಅಥವಾ ಅಧಿಕಾರ ದಾಹ ಎಂಬ ದುರಂತ ನಾಟಕವಾಗಿಬಿಟ್ಟಿದೆ. ದಿನಕ್ಕೊಂದು ದ್ರಷ್ಯ ವಾರಕ್ಕೊಂದು ಅಂಕ ಎಂಬಂತೆ ಇದು ಮುಂದುವರೆದಿದೆ. ನಮಗಿದು ದುರಂತ ನಾಟಕ, ಇತರರಿಗೆ ಪ್ರಹಸನ. ಹೀಗೆ ಇಮ್ಮುಖವಾದ ಈ ನಾಟಕವು ಕ್ಲೈಮಾಕ್ಸ್ ಎಂಬ ಶಿಖರ ತಲುಪಿಲ್ಲ. ಇಷ್ಟರಲ್ಲೇ ತಲುಪಬಹುದು. ಇನ್ನು ಡಿನೊಮೆಂಟ್ ಎಂಬ ಪರಿಣಾಮ ಏನಾಗುತ್ತದೋ ಬಲ್ಲವರಾರು. ಕಾದು ನೋಡೋಣ. ಕನ್ನಡ ತಾಯಿ ಭುವನೇಶ್ವರಿ ನಮ್ಮ ನಾಯಕಮಣಿಗಳಾದ ಈ ರಾಜಕೀಯ ವ್ಯಕ್ತಿಗಳಿಗೆ ಸನ್ಮತಿಯನ್ನು ನೀಡಲಿ ಎಂದು ಪ್ರಾರ್ಥಿಸಬೇಕಿದೆ. ರಾಜಕೀಯ ಪಕ್ಷಗಳಿಗೆ ಅಧಿಕಾರದ ಹುಚ್ಚು ದಾಹವನ್ನು ಬಿಟ್ಟು ನಾಡಿನ ಸೌಖ್ಯಕ್ಕೆ ದುಡಿಯುವ ಬುದ್ಧಿಯು ಬರಲಿ ಎಂದು ಹಾರೈಸೋಣ.

ಇದು ಬೆಂಗಳೂರಿನಲ್ಲಿ ನಡೆದ 77 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶತಕದ ಹೊಸ್ತಿಲಲ್ಲಿರುವ ಕನ್ನಡ ನಾಡಿನ ಮನೆ ಹಿರಿಯಜ್ಜ ಪ್ರೊ.ಜಿ.ವೆಂಕಟಸುಬ್ಬಯ್ಯನವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಯಡಿಯೂರಪ್ಪನವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಹೇಳಿದ ಬುದ್ದಿಮಾತು! ಇದು ಅವರ ಸಾತ್ವಿಕ ಪ್ರತಿಭಟನೆಯಾದರೂ ಸೈ. ಇಡಿಯ ಸಮ್ಮೇಳನದ ಅತ್ಯಂತ ಅರ್ಥಪೂರ್ಣ ತಾರಾಸ್ಥಾಯಿಯಾಗಿತ್ತಿದು. ನಾಡಿನ ರಾಜಕಾರಣಿಗಳನ್ನು ಕಿವಿ ಹಿಂಡಿ ಸರಿ ದಾರಿಗೆ ತರುವ ಮನೆ ಹಿರಿಯನ ಕೆಲಸವನ್ನು ಅತ್ಯಂತ ಸಮರ್ಥವಾಗಿ ಮಾಡಿದರು ಜಿವಿ. ಆದರೆ  ಯಡಿಯೂರಪ್ಪನವರು ಗರಂ ಆಗಿದಾರೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಮಾರನೆಯ ದಿನ - ಈ ಭ್ರಷ್ಟಾಚಾರ ಸ್ಥತಿ 20 ವರ್ಷಗಳ ಪಾಪದ ಫಲ - ಎಂದು ತಿಪ್ಪೆ ಸಾರಿಸಿದರು ಜಿವಿ. ಆದರೂ ಅವರ ಸಾತ್ವಿಕ ನೈತಿಕ ಸಿಟ್ಟು ಮತ್ತು ಪ್ರತಿಭಟನೆಗೆ ನಮ್ಮ ಕೃತಜ್ಞತೆಗಳು ಸಲ್ಲಲೇಬೇಕು.

ಇನ್ನು ಮಿಕ್ಕಂತೆ ಸಮ್ಮೇಳನ ಹೇಗೆ ನಡೆಯಿತು? ಎಲ್ಲವೂ `ಲೋಕಪ್ರಿಯ'. 40 ವರ್ಷಗಳ ನಂತರ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಒಂದು ಸಾಹಿತ್ಯ ಸಮ್ಮೇಳನ ನಡೆದದ್ದು. ಇವತ್ತಿನ ಬೆಂಗಳೂರಿಗೆ ನಮ್ಮ ತಲೆಮಾರಿಗೆ ಅಸಲಿಗೆ ಸಾಹಿತ್ಯ ಸಮ್ಮೇಳನ ಎನ್ನುವದೇನು ಎಂಬುದೇ ಗೊತ್ತಿರಲಿಲ್ಲ. ವೀಕೆಂಡಿನಲ್ಲಿ ಆಯೋಜಿಸಿದ್ದ ನುಡಿಜಾತ್ರೆ ಅಕ್ಷರಶಃ ಜಾತ್ರೆಯೇ ಆಯಿತೆನ್ನಿ. ಏನು ಜನ ಸ್ವಾಮಿ? ನಿರೀಕ್ಷೆಗೂ ಮೀರಿ ಬಂದ ಲಕ್ಷಾಂತರ ಜನ - ನುಡಿ ಜಾತ್ರೆಯಲ್ಲಿ ಜನಜಾತ್ರೆ. ಅದೊಂದು ವಿಶಿಷ್ಟ ಅನುಭವ. ಆ ಅನುಭವವನ್ನು ನಮ್ಮ ಬೆಂಗಳೂರಿಗರು ತಮ್ಮದಾಗಿಸಿಕೊಂಡರು. ಎಂದಿನಂತೆ ನಾಡಿನ ನಾನಾ ಮೂಲೆಯಿಂದ ಕೂಡ ಜನ ಸೇರಿದ್ದರು. ಮೂರು ದಿನಗಳ ಕಾಲ ಕನ್ನಡವೇ ಧ್ಯಾನ. ನಂತರ ಎಲ್ಲರೂ ತಮ್ಮ ತಮ್ಮ ಯಾತ್ರಿಕ ಬದುಕುಗಳಿಗೆ ಮರುಳಿದರು.

ಸಮ್ಮೇಳನ ಘನ ಯಶಸ್ಸು ಸಾಧಿಸಿತು ಎಂಬುದು ಪರಿಷತ್ತಿನಿಂದ ಹಿಡಿದು ನಾಡಿನ ಪತ್ರಿಕೆಗಳವರೆಗೂ ಎಲ್ಲರ ವಾದ. ಸಮ್ಮೇಳನದ ಯಶಸ್ಸು ಎಂದರೆ ಏನು? ಜಾತ್ರೆಯ ಏರ್ಪಾಟುಗಳೇ? ಇಲ್ಲ ಸಮ್ಮೇಳನದಲ್ಲಿ ಮೂಡಿಬಂದ ರಚನಾತ್ಮಕ ಯೋಚನಾಕ್ರಮಗಳೇ? ಕನ್ನಡತ್ವದ ಸಂಭ್ರಮವೋ? ಯಾವ ದೃಷ್ಟಿಯಲ್ಲಿ ಸಮ್ಮೇಳನ ಯಶಸ್ವಿ? ಜನಜಾತ್ರೆ, ತೋರುಗನ್ನಡದ ವಿಜೃಂಭಣೆ ಮತ್ತು ತಾರಾಸ್ಥಾಯಿಯ ಸಂಭ್ರಮಾಚರಣೆಗೇನು ಕಡಿಮೆಯಿರಲಿಲ್ಲ. ಇನ್ನು ಅರ್ಥವತ್ತಾಗಿ ನಡೆದಂಥವೇನು? ಈ ಬಾರಿಯ ಘೋಷ್ಠಿಗಳಲ್ಲೂ ಅಂಥದೇನೂ ಹೊಸತಿರಲಿಲ್ಲ. ಎಲ್ಲ ಹಳೆಯ ಸವಕಲು ವಿಷಯಗಳೇ. ಭಾಷಣಕಾರರೂ ಹಳಬರೇ, ಅವರು ಭಾಷಣಗಳೂ ಹಳೆಯವೆ. ದರಲ್ಲಿ ರಚನಾತ್ಮಕವಾಗಿ ಮೂಡಿ ಬಂದದ್ದೇನು ಎಂಬುದು ನನಗಂತೂ ಮಿಲಿಯನ್ ಡಾಲರ್ ಪ್ರಶ್ನೆ. ಇರಲಿ ಈ ಬಾರಿಯ ಸಮ್ಮೇಳನ ಇನ್ನೂ ಅನೇಕ ವಿಶಿಷ್ಟತೆಗಳಿಂದ ಕೂಡಿತ್ತು. ಅವುಗಳಲ್ಲಿ ಕೆಲವು ಸ್ವಾಗತಾರ್ಹವೂ ಕೆಲವು ಖಂಡನಾರ್ಹವೂ ಆಗಿವೆ.

ಈ ಬಾರಿ ಸಮ್ಮೇಳನದ ವಿಶಿಷ್ಟತೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಿಂದಲೇ ಶುರು. ಈ ಬಾರಿಯ ಮೆರವಣಿಗೆಯನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಕಾರ್ಪೋರೇಶನ್ನಿಂದ ಸಮ್ಮೇಳನದ ಸಭಾಂಗಣದವರೆಗೂ ಸಮ್ಮೇಳನಾಧ್ಯಕ್ಷರನ್ನು ರಥದಲ್ಲಿ ಕೂರಿಸಿ ಆನೆ, ಒಂಟೆ, ಜಾನಪದ ಕಲಾತಂಡಗಳ ಮುಂದುಸ್ತುವಾರಿಯಲ್ಲಿ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯು ನ ಭೂತೋ ನ ಭವಿಷತ್ ಎಂದೂ ಮೈಸೂರಿನ ಜಂಬೂ ಸವಾರಿಯನ್ನು ನೆನಪಿಸುವಂತಿತ್ತೆಂದೂ ಹೊಗಳಿಸಿಕೊಂಡಿತು. ಈ ಮೆರವಣಿಗೆಯನ್ನು ಆಯೋಜಿಸಿದ್ದವರು ಕರ್ನಾಟಕ ರಕ್ಷಣಾ ವೇದಿಕೆ! ನಾಡಿನ ಹಿರಿಯ ಜೀವವನ್ನು ಗುರು ಸಮಾನರಾದ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆ ಮಾಡುವುದು ನಮ್ಮ ಸಂಭ್ರಮವೇ. ಆದರೆ ಈ ಬಾರಿಯ ರಥವನ್ನು ಗೀತೋಪದೇಶದ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದದು ಅನೇಕರ ಕಣ್ಣು ಕೆಂಪಾಗಿಸಿದವು. ಇದು ಪರಿಷತ್ತಿನ ಕೇಸರೀಕರಣ ಎಂದು ಅನೇಕರು ಹುಯಿಲಿಟ್ಟರಾದರೂ ಮೆರವಣಿಗೆ ಸಾಂಗೋಪಾಂಗವಾಗಿ ನೆರವೇರಿತು. ಇಲ್ಲಿ ಒಂದು ಮಾತು. ಒಬ್ಬ ವ್ಯಕ್ತಿಯನ್ನು ಹೀಗೆ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡುವುದು ಅತ್ತ ಆಳ್ವಾಸ್ ನುಡಿಸಿರಿಯಲ್ಲಿ ಪಲ್ಲಕ್ಕಿಯಲ್ಲಿ ಕೂರಿಸಿ ಅವರನ್ನು ಹೊರುವುದು ಇವೆಲ್ಲವೂ ಮಧ್ಯಯುಗೀನ ಫ್ಯೂಡಲ್ ಸಂಸ್ಕೃತಿಯ ಪಳೆಯುಳಿಕೆಗಳೇ ಆಗಿವೆ. ಈ ರಥ ಪಲ್ಲಕ್ಕಿಗಳಲ್ಲಿ ಕೂರುವವರ ಮುಜುಗರ ಹೇಳತೀರದು. ಈ ಹಿಂದೆ ಜಿ.ಎಸ್.ಎಸ್. ಅವರು ಇದೇ ಕಾರಣಕ್ಕೆ ಮೆರವಣಿಗೆಯನ್ನು ನಿರಾಕರಿಸಿದ್ದರು. ಈ ರಥದಲ್ಲಿ ದಸರಾದ ಜಂಬೂ ಸವಾರಿಯಲ್ಲಿ ಮಾಡಿದಂತೆ ಕನ್ನಡ ತಾಯಿ ಭುವನೇಶ್ವರಿಯ ಪ್ರತಿಮೆಯನ್ನಿತ್ತು  ಸಮ್ಮೇಳನಾಧ್ಯಕ್ಷರ ಕೈಲಿ ಈ ತೇರನ್ನೆಳೆಸಬಹುದು ಇಲ್ಲ ಭುವನೇಶ್ವರಿಯ ಮೂರ್ತಿಯೂ ಬೇಡ ಕನ್ನಡದ ಶ್ರೇಷ್ಠ ಪುಸ್ತಕಗಳನ್ನಿಡಿ ಸಾಕು ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿಗಳು  ಸಲಹೆಯನ್ನಿತ್ತರು. ಅದನ್ನು ಜಿವಿಯವರು ಈ ಬಾರಿಯಿಂದಲೇ ಅಮಲುಗೊಳಿಸಲು ಬಯಸಿದ್ದರಾದರೂ ತೋರುಗನ್ನಡದ ತಾರಾಸ್ಥಾಯಿಯ ದನಿಗಳು ಅದನ್ನು ಆಗಗೊಡಿಸದೇ ಹೋದದ್ದು ವಿಪರ್ಯಾಸ.

ಈ ಬಾರಿಯ ಸಮ್ಮೇಳನದಲ್ಲಿ ಮತ್ತೊಂದು ಮುಖ್ಯ ಅಂಶವನ್ನು ನಾವು ಗಮನಿಸಬೇಕು. ಸಭಾಂಗಣದಲ್ಲೆಲ್ಲಿ ನೋಡದರೂ ಕನ್ನಡದ ನೆಕ್ ಪೀಸ್ ಧರಿಸಿದ ಸ್ವಯಂ ಸೇವಕರು. ಇವರ ನಾಯಕರಾದ ನಾರಾಯಣಗೌಡರು ವೇದಿಕೆಯ ಮೇಲೆ. ಹೌದು ಪ್ರಪ್ರಥಮ ಬಾರಿಗೆ ಕರ್ನಾಟಕ ರಕ್ಷಣಾ ವೇದಿಕೆ ಈ ನಾಡಿನ ಸಾಂಸಕೃತಿಕ ಸಂವಾದದಲ್ಲಿ ಇತರೆ ಸಾರಸ್ವತ ಲೋಕದೊಂದಿಗೆ ಸಮನಾಗಿ ಕುಂತು ಎದ್ದು ಬಂದಿದೆ. ತೋರುಗನ್ನಡದ ಫೆನೆಟಿಕ್ ಧ್ವನಿಯಾದ ಕರವೇ ವೇದಿಕೆಯೇರಿರುವುದು ಕನ್ನಡ ಚಳುವಳಿಯ ದಿಕ್ಸೂಚಿಯೋ, ಇಲ್ಲ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಸಂಘಟನಾ ಊರುಗೋಲಾಗಿ ಬೆಳೆಯುತ್ತಿರುವ ಸಂಕೇತವೋ? ಕನ್ನಡಕ್ಕೆ ಮತ್ತು ಕನ್ನಡದ ಸಾಂಸ್ಕೃತಿಕ ಸಂವಾದಕ್ಕೆ ಇದರ ಪರಿಣಾಮಗಳೇನು? ಕಾದು ನೋಡಬೇಕಿದೆ.

ಇನ್ನು ಮತ್ತೊಂದು ಸೂಕ್ಷ್ಮ ಅಂಶವನ್ನು ಇಲ್ಲಿ ನಾವು ಗಮನಿಸಬಹುದಿತ್ತು. ಸಮ್ಮೇಳನವು ಕನ್ನಡದ ಸಮ್ಮೇಳನವೇ ಆಗಿರಬೇಕು. ಕನ್ನಡದ ಎಲ್ಲ ಸಮುದಾಯಗಳ ಸಮ್ಮೇಳನವಾಗಿರಬೇಕು. ಆದರೆ ಈ ಬಾರಿ ಎಲ್ಲೋ ಕೆಲ ಬಾರಿ ಇದು ಹೌದೋ ಅಲ್ಲವೋ ಎಂಬ ಅನುಮಾನಗಳು ಮೂಡವಂತಾದವು. ಇದನ್ನು ಯಾರೂ ಹೊರಹಾಕಲಿಲ್ಲವಾದರೂ ಒಂದು ವರ್ಗದ ವಿಜೃಂಭಣೆ ಅನೇಕರಿಗೆ ಇರುಸುಮುರುಸಾಗಿದ್ದು ದಿಟ. ಎಲ್ಲಿ ನೋಡದರೂ ಕೆಂಪೇಗೌಡನೇ ರಾರಾಜಿಸಿದ್ದು - ಆತನಿಗೇ ಒಂದು ಪ್ರತ್ಯೇಕ ಘೋಷ್ಠಿ, ಆತನ ಜೊತೆ ಅಶೋಕ, ಬಾಲಗಂಗಾಧರ, ನಲ್ಲೂರು, ದೊಡ್ಡ ಗೌಡ್ರು, ನಾರಾಯಣ ಗೌಡ್ರು..ಇದು ಒಂದು ವರ್ಗದ ದಬ್ಬಾಳಿಕೆಯೋ ಅಲ್ಲವೋ ಒಳಗಿನ ಮರ್ಮಗಳು ನಮಗೆ ತಿಳಿಯದು. ಆದರೆ ಇದು ಅನೇಕರ ಕಣ್ಣು ಕುಕ್ಕುತಿದ್ದದ್ದಂತೂ ಸುಳ್ಳಲ್ಲ. ಕಡೆಯ ದಿನ ಸನ್ಮಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದವರು ಸನ್ಮಾನ್ಯ ದೇವೇಗೌಡರು. ನಾಡಿನ ಹಿರಿಯ ರಾಜಕಾರಣಿಯಾಗಿ ಅವರದು ಅರ್ಹ ಆಯ್ಕೆಯೇ. ತಕರಾರಿಲ್ಲ. ಆದರೆ ಆ ಸಂದರ್ಭದಲ್ಲಿ ಗೌಡರು ನಲ್ಲೂರರನ್ನು ಎತ್ತಿ ಹಾಡಿದ ರೀತಿ, ಒಂದು ವಾಕ್ಯದಲ್ಲಿ ಮೂರು ಬಾರಿ ನಲ್ಲೂರರ ಜಪ, ಕೂಪದಲ್ಲಿ ಇಳಿದು ಹೋಗಿದ್ದ ಕಸಾಪವನ್ನು ಮೇಲೆತ್ತಿದ ಧೀರ, ಗೌಡರ ಬಾಯಲ್ಲಿ ಇಂತಹ ವಿಶೇಷಣಗಳು, ನಂತರ ಮಾತಿಗೆ ನಿಂತ ನಲ್ಲೂರರದು ಒಂದೇ ಮಾತು ದೇವೇಗೌಡರು ಸರ್ವಕಾಲಕ್ಕೂ ಕನ್ನಡದ ಏಕಮೇವಾದ್ವಿತೀಯ ನಾಯಕ! ನಲ್ಲೂರರು ಗೌಡರ ಆಸ್ಥಾನ ಕವಿಗಳೆಂಬುದು ಅವರ ಮೇಲಿದ್ದ ಒಂದಾನೊಂದು ಆರೋಪ. ಅವರ ಅವಧಿಯ ಕಡೆಯ ಸಮ್ಮೇಳನದಲ್ಲಿ ಅವರು ಆ ವೇದಿಕೆಯನ್ನು ಗುರುಕಾಣಿಕೆಯಾಗಿ ಬಳಸಿಕೊಂಡು ಅದನ್ನು ಜಗಜ್ಜಾಹೀರುಗೊಳಿಸಿಬಿಟ್ಟರು.

ಇನ್ನು ಉದ್ಘಾಟನಾ ಭಾಷಣ ಮಾಡಿದ ಯಡಿಯೂರಪ್ಪ ಕನ್ನಡದ ಮುಖ್ಯಮಂತ್ರಿಯೆಂದು ಪರಾಕು ಹೇಳಿಸಿಕೊಂಡದ್ದಷ್ಟೇ ಬಂತು, ಅವರ ಭಾಷಣದಲ್ಲಿ ಸತ್ವವೂ ಇರಲಿಲ್ಲ, ಹಾಳಾಗಿ ಹೋಗಲಿ ಎಂದರೆ ಉಲ್ಲಾಸವೂ ಇರಲಿಲ್ಲ. ಸನ್ಮಾನ್ಯ ಕನ್ನಡದ ಮುಖ್ಯಮಂತ್ರಿಗಳು ಯಾರೋ ಬರೆದುಕೊಟ್ಟ ಭಾಷಣವನ್ನು ತಂದು ಜನರ ಮುಂದೆ ಹಿಡಿದು ಓದಿದರು. ಯಾರನ್ನಾ ಉತ್ತಮ ಲೇಖಕರ ಕೈಲನ್ನ ಬರೆಸಬಾರದೇ? ಅದೂ ಅವರ ಮಾತಿನಂತೆಯೇ ನಿಸ್ತೇಜ. ಒಂದು ಭಾಷಣ ಮಾಡಬೇಕಲ್ಲಾ ಎಂಬ ಕರ್ತವ್ಯದ ಭಾರದಲ್ಲಿ ಮಾಡಿದ ಭಾಷಣವಾಗಿತ್ತದು, ಮನಸ್ಸಿನೊಳಗಿಂದ ಬಂದದ್ದಲ್ಲ. ಇನ್ನು ಒಂದೆರಡು ಯೋಜನೆಗಳನ್ನು ಘೋಷಿಸುವುದೂ ಕೂಡ ಕರ್ತವ್ಯವೇ ಅಲ್ಲವೇ? ಸರಿ ಲಿಬರ್ಟಿ  ಪ್ರತಿಮೆಯಂತಹ ಕನ್ನಡಮ್ಮನ ಪ್ರತಿಮೆ ಸ್ಥಾಪನೆಗೆ 25 ಕೋಟಿ! ಸ್ವಾಮಿ ಇಂತಹ ತೋರುಗನ್ನಡದ ತೊರಿಕೆಯ ಅಪ್ರಬುದ್ಧ ಯೋಜನೆಗಳಿಂದ ಪ್ರಯೋಜನವಾದರೂ ಏನು? ಇದು ಕನ್ನಡದ ತಲ್ಲಣಗಳನ್ನು ಅರ್ಥಮಾಡಿಕೊಳ್ಳಲಾಗದ ಸರ್ಕಾರದ ಅಪ್ರಬುದ್ಧತೆಯೆಂದು ತಿಳಿಯಬೇಕೋ? ನನ್ನ ಪ್ರಕಾರ ಹೌದು. ಇದು ನಮ್ಮ ದುರ್ದೈವ.

ಇನ್ನು ಈ ಸಮ್ಮೇಳನದ ಮತ್ತೊಂದು ವಿಶೇಷತೆ ಚಿದಾನಂದ ಮೂರ್ತಿಗಳದು. ಬೆಂಗಳೂರು ವಿಶ್ವವಿದ್ಯಾಲಯ ಚಿ.ಮೂ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿದಾಗ ರಾಜ್ಯಪಾಲರು ಅವರ ಹೆಸರನ್ನು ತಡೆಹಿಡಿದು ಅತ್ಯಂತ ಉಗ್ರ ಟೀಕೆಗೆ ಗುರಿಯಾದರು. ಹಿರಿಯ ಸಂಶೋಧಕರಾದ ಚಿಮೂ ಅವರ ಇತ್ತೀಚಿನ ನಿಲುವುಗಳು ಹಿಂದುತ್ವವಾದಿಯಾಗಿರುವುದೂ ಅವರ ಹೇಳಿಕೆ ಯೋಚನೆಗಳಲ್ಲಿ ಜಾತಿಯ ಘಮಲು ಢಾಳಾಗಿ ಹೊಡೆಯುತ್ತಿರುವುದರಿಂದ ಅವರು ಕನ್ನಡ ಸಾರಸ್ವತ ಲೋಕದ ಅನೇಕರ ವಿರೋಧವನ್ನು ಕಟ್ಟಿಕೊಂಡಿದ್ದರು. ಆದರೆ ಅವರ ವಿದ್ವತ್ತು ಪ್ರಶ್ನಾತೀತ, ಅವರು ಕನ್ನಡಕ್ಕೆ ಮಾಡಿರುವ ಕೆಲಸ ತುಂಬ ಹಿರಿದಾದುದು. ಇತ್ತೀಚಿನ ಜಗಳಗಳ ನಡುವೆಯೂ ಅವರ ವಿದ್ವತ್ತು ಮತ್ತು ಕನ್ನಡ ನಾಡು ನುಡಿಯ ಸೇವೆಯ ಹಿನ್ನೆಲೆಯಲ್ಲಿ ಇಡಿಯ ಕನ್ನಡ ಸಾರಸ್ವತ ಲೋಕ ಭಾವನಾತ್ಮಕವಾಗಿ ಒಂದಾಯಿತು. ಇದಕ್ಕೆ ಮುನ್ನುಡಿ ಬರೆದವರು ಅನಂತಮೂರ್ತಿಯವರು. ಇದು ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳುವವರೆಗೂ ಹೋಯಿತು. ಸಾರಸ್ವತ ಲೋಕದೊಳಗೆ ಕೈಯಾಡಿಸಿದರೆ ಜೋಕೆ ಎಂಬ ಧಮಿಕಿಯಂತಹ ಸಂದೇಶವೊಂದು ರಾಜ್ಯಪಾಲರಿಗೆ ತಲುಪಿತು. ಪರಿಸ್ಥತಿಯನ್ನರಿತ ರಾಜ್ಯಪಾಲರು ಮರುದಿನವೇ ಚಿಮೂ ಅವರಲ್ಲಿ ಕ್ಷಮೆ ಕೋರಿ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಒಬ್ಬ ಹಿರಿಯ ವಿದ್ವಾಂಸ ನಿಜಕನ್ನಡದ ಕೆಲಸ ಮಾಡಿದ ಹಿರಿಯ ಚೇತನಕ್ಕೆ ಅವಮಾನವಾದಾಗ ಯಾವತ್ತೂ ಒಡೆದ ಮನೆಯೆಂಬ ಬಿರುದಾಂಕಿತ ಸಾರಸ್ವತ ಲೋಕ ಒಕ್ಕರಲಿನಲ್ಲಿ ಪ್ರತಿಭಟಿಸಿದ್ದು ಭಾವನಾತ್ಮಕವಾಗಿ ಒಂದೇ ವೇದಿಕೆಗೆ ಬಂದದ್ದು ಈ ಸಮ್ಮೇಳನದ ನಿಜವಾದ ಯಶಸ್ಸು ಎಂದು ಭಾವಿಸಬಹುದೇನೋ.

ಇನ್ನು ಸಮ್ಮೇಳನದ ವ್ಯವಸ್ಥೆಗೆ ಬರುವುದಾದರೆ ಎಂದಿನಂತೆ ಕೆಲವು ಲೋಪದೋಷಗಳಿದ್ದವು. ಇಲ್ಲ ಅಂತ ಅಲ್ಲ. ನಿರೀಕ್ಷೆಗೂ ಮೀರಿ ನೆರೆದಿತ್ತು ಜನಜಾತ್ರೆ. ಹಾಗಾಗಿ ಕಸಾಪದ ಅಂದಾಜಿಗಿಂತಲೂ ಕೈಮೀರಿ ಖರ್ಚಾಗಿ ಹೋಗಿದೆ. ಆದರೆ ಮತ್ತೊಂದೆಡೆ ನಿರೀಕ್ಷಿಸಿದಷ್ಟು ಹಣ ಸಂಗ್ರಹವಾಗಿಲ್ಲ. ಈಗಿನ ಅಂದಾಜಿನಂತೆ ಸುಮಾರು 6.5-7 ಕೋಟಿಗಳಷ್ಟು ಕೈಬಿಟ್ಟಿದೆ. ಆದರೆ ಸಂಗ್ರಹವಾಗಿರುವ ಮೊತ್ತ ಬರಿಯ 2 ಕೋಟಿ 70 ಲಕ್ಷ! ಇನ್ನು ಮಿಕ್ಕವರಿಗೆ ಸೋಡಾಚೀಟಿಯೇ? ಸರ್ಕಾರವೇ ಕೈಹಿಡಿಯಬೇಕು, ಇಲ್ಲದಿದ್ದರೆ ಅದೇ ಗತಿ. ಇತರೆ ಊರುಗಳಲ್ಲಾದರೆ ಅಲ್ಲಿನ ಉದ್ಯಮಿಗಳು, ಶ್ರೀಮಂತರು ಇದು ತಮ್ಮೂರ ಹಬ್ಬ ಎಂದೇ ಪರಿಗಣಿಸಿ ಕೈಹಿಡಿಯದೆ ದಾನ ಮಾಡುತ್ತಿದ್ದರು. ಆದರೆ ಸಮ್ಮೇಳನದ ಸಿದ್ಧತೆಗಳ ಕುರಿತು ಕರೆದಿದ್ದ ಉದ್ಯಮಪತಿಗಳ ಸಭೆಗೆ ನಮ್ಮ ಘನತೆವೆತ್ತ ಐಟಿ-ಬಿಟಿ ಉದ್ಯಮದ ಒಬ್ಬೇಒಬ್ಬ ಪ್ರತಿನಿಧಿ ಹಾಜರಾಗಲಿಲ್ಲ. ಈಗ ಆಯ-ವ್ಯಯದ ಲೆಕ್ಕ ತಪ್ಪಿದೆ. ಈ ಮಧ್ಯೆ 50 ಲಕ್ಷದಷ್ಟು ಮಟ್ಟಿಗೆ ಕಸಾಪದಲ್ಲಿ ಗೋಲ್ಮಾಲ್ ನಡೆದಿದೆಯೆಂದೂ ನಲ್ಲೂರರು ಲೆಕ್ಕ ಕೊಡುತ್ತಿಲ್ಲವೆಂದೂ ಇದೇ ಗಲಾಟೆಯಲ್ಲಿ ಅವರು ದಕ್ಷಣಾಮೂರ್ತಿಗಳನ್ನು ಹೊರಹಾಕಿದರೆಂದೂ ಸುದ್ದಿ. ಈ ಕುರಿತು ನಲ್ಲೂರರೇ ಸ್ಪಷ್ಟನೆ ನೀಡಿದರೆ ಒಳ್ಳೆಯದು, ಸ್ಪಷ್ಟನೆಯ ಜೊತೆಗೆ ಲೆಕ್ಕವನ್ನೂ ನೀಡಿದರೆ ಮತ್ತೂ ಒಳ್ಳೆಯದು.

ಒಟ್ಟಾರೆ ಅತ್ಯಂತ ಲೋಕಪ್ರಿಯವಾಗಿ ನಡೆದ ಸಮ್ಮೇಳನ ಅದೇ ಕಾರಣಕ್ಕೆ ಯಶಸ್ವಿಯೂ ಆಯಿತು. ಈ ಮೇಲೆ ನಡೆಸಿರುವ ಒಂದು ವಿಮರ್ಶೆ  ಕಾಮಾಲೆ ಕಣ್ಣಿನದಲ್ಲ. ಮುಂಬರುವ ಸಮ್ಮೇಳನಗಳನ್ನು ಲೋಕಪ್ರಿಯವಾಗಿಯಷ್ಟೇ ಅಲ್ಲದೆ ಅರ್ಥಪೂರ್ಣವೂ ರಚನಾತ್ಮಕವಾಗಿಯೂ ರೂಪಿಸಬೇಕದಲ್ಲಿ ಇಂದಿನ ಸಮ್ಮೇಳನದ ಗುನದೋಷಗಳ ಬಗೆಗೆ ಒಂದು ನಿಷ್ಠುರ ನಿಷ್ಕರ್ಷೆ ನಡೆಸಬೇಕಿರುವುದು ದಿಟ. ಆ ನಿಟ್ಟಿನಲ್ಲಿ ಇದು ಒಂದು ಸಣ್ಣ ಪ್ರಯತ್ನ.

ಇನ್ನು 97ರ ಹರೆಯದಲ್ಲೂ ಪ್ರೊ.ಜಿ.ವೆಂಕಟಸುಬ್ಬಯ್ಯನವರು ನೀಡಿದ ಮುಂದಾಳತ್ವ, ನಾಡು ನುಡಿಯ ಬಗೆಗೆ ಅವರ ಸ್ಪಷ್ಟ ಚಿಂತನೆ, ಭಾಷೆಯ ಬಗೆಗೆ ಅವರ ನೈಜ ಕಾಳಜಿ, ಮಾರ್ಗದರ್ಶನ ಎಲ್ಲವೂ ಮನೆಯ ಹಿರಿಯಜ್ಜ ಮನೆಯ ಮಕ್ಕಳನ್ನು ಕೂರಿಸಿಕೊಂಡು ತನ್ನ ಅನುಭವಾಮೃತದಿಂದ ಜನ್ಯವಾದ ವಿವೇಕವನ್ನು ದಾಟಿಸುತ್ತಿರುವಂತಿತ್ತು. ಅದಕ್ಕೆ ನಮ್ಮೆಲ್ಲರ ಪ್ರೀತಿಯ ಅಜ್ಜನಿಗೆ ನಮನಗಳು.

ಸಮ್ಮೇಳನ ಒಂದು ವೈಯಕ್ತಿಕ ಟಿಪ್ಪಣಿ

ಹೋದ ಬಾರಿಯ ಗದುಗಿನ ಸಾಹಿತ್ಯ ಸಮ್ಮೇಳನ ನಾನು ಭಾಗವಹಿಸಿದ ಮೊದಲ ಸಮ್ಮೇಳನ. ಎಲ್ಲಿಲದ ಉತ್ಸಾಹ. ಬ್ಲಾಗಲೋಕದ ಮೂಲಕ ಸಮ್ಮೇಳನದ ಕ್ಷಣಕ್ಷಣದ ಚಿತ್ರಣವನ್ನು ಕಟ್ಟಿ ಕೊಡಲು ೩ ಸ್ನೇಹಿತರೊಡಗೂಡಿ ನುಡಿನಮನ ಎಂಬ ಬ್ಲಾಗನ್ನು ಹುಟ್ಟು ಹಾಕಿದ್ದೆ. ಗದುಗಿಗೆ ಹೋಗಿ ೫ ದಿನಗಳ ಕಾಲ ಸಮ್ಮೇಳನವನ್ನು ವರದಿ ಮಾಡಿದೆ. ಇದು ನನ್ನ ಪತ್ರಿಕೋದ್ಯಮ ನಡೆಯಲ್ಲಿನ ಮೊದಲ ದೊಡ್ಡ ಹೆಜ್ಜೆಯೂ ಹೌದು. ಅದರಿಂದ ನನಗೆ ಪರಿಚಯವಾದ ನಾಡಿನ ಉದ್ಧಾಮ ಸಾಹಿತಿಗಳು, ಅವರ ಒಡನಾಟ, ನನಗೆ ಸಿಕ್ಕ ಹೆಸರು ಎಲ್ಲಕ್ಕೂ ನಾನು ನುಡಿನಮನಕ್ಕೆ ಚಿರಋಣಿ.

ಆದರೆ ಅದೇಕೋ ಈ ಬಾರಿಯ ಸಮ್ಮೇಳನ ಬೆಂಗಳೂರಿನಲ್ಲೇ ನಡೆಯುತ್ತಿದ್ದರೂ ಅದು ನನ್ನಲ್ಲಿ ಆ ಮಟ್ಟದ ಉತ್ಸಾಹವನ್ನು ಮೂಡಿಸಲಿಲ್ಲ. ಇದಕ್ಕೆ ಹಲವಾರು ಕಾರಣಗಳು. ಸಮ್ಮೇಳನದ ತೋರುಗನ್ನಡದ ತಾರಾಸ್ಥಾಯಿಯ ದನಿಗಳ ನಿರರ್ಥಕತೆ, ರಚನಾತ್ಮಕತೆಯ ಕೊರತೆ ಇವೆ ಮುಂತಾದವುಗಳು ನನ್ನನ್ನು ಸಮ್ಮೇಳನಗಳ ಕುರಿತು ಕೊಂಚ ಭ್ರಮನಿರಸನಗೊಳಿಸಿದ್ದು ಸುಳ್ಳಲ್ಲ. ಇನ್ನು ನನ್ನನ್ನು ಬಹಳ ಕಾಡಿದ ವಿಚಾರ ಬ್ಲಾಗಿನ ನಮ್ಮ ವರದಿಗಾರಿಕೆಯ ಮಿತಿಗಳು. ಅಲ್ಲಿನ ಸಂದರ್ಭ, ಬ್ಲಾಗ ಮಾಧ್ಯಮದ ಅತಿ ವರ್ತಮಾನಗಳು ನಮ್ಮ ಸಮ್ಮೇಳನದ ವರದಿಯನ್ನು ಚಿತ್ರಪಟವಾಗಿಸಿಬಿಟ್ಟವು. ಇದು ನಮ್ಮ, ಇಲ್ಲ ಮಾಧ್ಯಮದ ಮಿತಿಯೋ ನಾನರಿಯೆ, ಆದರೆ ವರದಿಗಾರಿಕೆಯ ಮಿತಿಯಾದದ್ದಂತೂ ಹೌದು. ಇದು ನನಗೆ ತೀರಾ ಇರುಸುಮುರುಸನ್ನುಂಟು ಮಾಡಿತು. ಒಂದು ಸಮ್ಮೇಳನದ ವರದಿಯೆಂದರೆ ಅದೊಂದು ಸಾಂಸ್ಕೃತಿಕ ವರದಿಗಾರಿಕೆ. ಆದರೆ ನಮಗಿರುವ ಇತಿಮಿತಿಗಳಲ್ಲಿ ಈ ಬ್ಲಾಗಿನ ಮೂಲಕ ಅದು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆ. ಇನ್ನು ಈ ಬ್ಲಾಗಿನ ಮೂಲಕ ನಾವು ಯಾರಿಗೆ ಸಮ್ಮೇಳನವನ್ನು ಕಟ್ಟಿ ಕೊಡುತ್ತಿದ್ದೇವೆ ಎಂಬ ಮೂಲ ಪ್ರಶ್ನೆಯೂ ನನ್ನ ಮುಂದೆ ಬೃಹದಾಕಾರವಾಗಿ ನಿಂತಿತ್ತು. ಒಟ್ಟಿನಲ್ಲಿ ಕಾರಣಗಳೇನೆ ಇರಲಿ, ಈ ಬಾರಿ ಆ ಉತ್ಸಾಹ ಇರಲಿಲ್ಲ. ಹಾಗಾಗಿ ಈ ಬಾರಿ ನುಡಿನಮನವನ್ನು ಕೈ ಬಿಡಲು ನಿರ್ಧರಿಸಿದ್ದೆ.


ಆದರೆ ಹಿಂದಿನ ಬಾರಿ ನನ್ನ ಜೊತೆಗೂಡಿದ್ದ ಸ್ನೇಹಿತರಿಗೆ ಇನ್ನೂ ಉತ್ಸಾಹ ಬತ್ತಿರಲಿಲ್ಲ. ಕನ್ನಡದ ಕೆಲಸದ ಬಗೆಗಿನ ಅವರ ಉತ್ಸಾಹವನ್ನು ಭಂಗಗೊಳಿಸುವುದು ಉಚಿತವಲ್ಲ. ಹಾಗಾಗಿ ಈ ಬಾರಿ ನಾನು ನೇಪಥ್ಯಕ್ಕೆ ಸರಿದು ಕೇವಲ ಮಾರ್ಗದರ್ಷಕನಾಗುಳಿದು ನುಡಿನಮನವನ್ನು ಹೊಸ ತಂಡಕ್ಕೆ ಬಿಟ್ಟುಕೊಟ್ಟೆ. ಹೇಮಂತನ ನೇತೃತ್ವದಲ್ಲಿ ಹೊಸ ಹುಡುಗರು ಈ ಬಾರಿ ಸಮ್ಮೇಳನವನ್ನು ನುಡಿನಮನದ ಮೂಲಕ ಕಟ್ಟಿಕೊಟ್ಟರು. ಸಮರ್ಥ ತಂಡ ಉತ್ತಮ ವರದಿ. ಅವರಿಗೆ ನನ್ನ ಅಭಿನಂದನೆಗಳು. ಇನ್ನು ಈ ಬಾರಿಯ ವರದಿಯನ್ನು ವಿಮರ್ಶೆಗೊಳಪಡಿಸುವುದಾದರೂ ಮತ್ತೆ ಚಿತ್ರಪಟವೆ ನನ್ನ ಕಣ್ಣ ಮುಂದೆ ಬರುತ್ತದೆ. ಅದು ನಮ್ಮ ಮಿತಿಯೋ ಇಲ್ಲ ಮಾಧ್ಯಮದ ಮಿತಿಯೋ ಇನ್ನೂ ನನಗೆ ಗೊಂದಲವಿದೆ. ಮುಂದಿನ ಸಮ್ಮೇಳನದಲ್ಲಿ ಇಂಥದೊಂದು ಸಾಂಸ್ಕೃತಿಕ ವರದಿಗಾರಿಕೆಯ ಪ್ರಯತ್ನ ಮಾಡುವ ಆಸೆಯಿದೆ. ನೋಡುವ.

ಇನ್ನು ಈ ಬಾರಿ ಮೂರೂ ದಿನ ಸಮ್ಮೇಳನಕ್ಕೆ ಹಾಜರಾಗಿ ಹಲವಾರು ಘೋಷ್ಟಿಗಳನ್ನು enjoy ಮಾಡಿದೆ. ಹಲವಾರು ಉತ್ತಮ ಘೋಷ್ಟಿಗಳು ಏಕ ಕಾಲದಲ್ಲಿ ಮುಖ್ಯ ಸಮಾನಾಂತರ ವೇದಿಕೆಗಳಲ್ಲಿ ನಡೆಯುತ್ತಿದ್ದರಿಂದ ಕೆಲವು ತಪ್ಪಿ ಹೋಗಿ ಭಾರಿ ನಷ್ಟ ಪ್ರಾಪ್ತಿಯಾಯಿತು. ಇನ್ನು ಸಮ್ಮೇಳನಾಧ್ಯಕ್ಷರಾದ ೯೭ರ ಹರೆಯದ ವೆಂಕಟಸುಬ್ಬಯ್ಯನವರ clarity-of-thoughts ಮತ್ತು ಸ್ಥೈರ್ಯವನ್ನು ಕಂಡು ಬೆರಗಾದೆ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಯಡಿಯೂರಪ್ಪನವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಹೇಳಿದ ಬುದ್ದಿಮಾತು! ವ್ಹಾ ವ್ಹಾ..ಇದು ಅವರ ಸಾತ್ವಿಕ ಪ್ರತಿಭಟನೆಯಾದರೂ ಸೈ. ಇಡಿಯ ಸಮ್ಮೇಳನದ ಅತ್ಯಂತ ಅರ್ಥಪೂರ್ಣ ತಾರಾಸ್ಥಾಯಿಯಾಗಿತ್ತಿದು. ನಾಡಿನ ರಾಜಕಾರಣಿಗಳನ್ನು ಕಿವಿ ಹಿಂಡಿ ಸರಿ ದಾರಿಗೆ ತರುವ ಮನೆ ಹಿರಿಯನ ಕೆಲಸವನ್ನು ಅತ್ಯಂತ ಸಮರ್ಥವಾಗಿ ಮಾಡಿದರು ಜಿವಿ.

ಇನ್ನು ಈ ಸಮ್ಮೇಳನದಲ್ಲಿ ನನಗೆ ಖುಷಿ ಕೊಟ್ಟ ಮತ್ತೊಂದು ವಿಚಾರ ಚಿಮೂ ಅವರದು. ಚಿಮೂ ಅವರ ನಿಲುವುಗಳನ್ನು ಅತ್ಯುಗ್ರವಾಗಿ ವಿರೋಧಿಸುವವನು ನಾನು. ಆದರೂ ಅವರಂಥ ಹಿರಿಯ ವಿದ್ವಾಂಸರಿಗೆ ರಾಜ್ಯಪಾಲರು ಗೌರವ doctorate ಅನ್ನು ನಿರಾಕರಿಸಿದಾಗ ನೋವಾಗಿತ್ತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಒಬ್ಬ ಹಿರಿಯ ವಿದ್ವಾಂಸ ನಿಜಕನ್ನಡದ ಕೆಲಸ ಮಾಡಿದ ಹಿರಿಯ ಚೇತನಕ್ಕೆ ಅವಮಾನವಾದಾಗ ಯಾವತ್ತೂ ಒಡೆದ ಮನೆಯೆಂಬ ಬಿರುದಾಂಕಿತ ಸಾರಸ್ವತ ಲೋಕ ಒಕ್ಕರಲಿನಲ್ಲಿ ಪ್ರತಿಭಟಿಸಿದ್ದು ಭಾವನಾತ್ಮಕವಾಗಿ ಒಂದೇ ವೇದಿಕೆಗೆ ಬಂದದ್ದು ಈ ಸಮ್ಮೇಳನದ ನಿಜವಾದ ಯಶಸ್ಸು ಎಂದು ಭಾವಿಸಬಹುದೇನೋ. ಈ ಎರಡು ಕ್ಷಣಗಳು ಈ ಸಮ್ಮೇಳನದಲ್ಲಿ ನನಗೆ ಖುಷಿ ಕೊಟ್ಟವು.

ಇನ್ನು ಈ ಬಾರಿ ಸಮ್ಮೇಳನದ ಅಡುಗೆ ವ್ಯವಸ್ಥೆಯ ಮೇಲೆ ಅವಲಂಬಿಸದೆ ಬಸವನಗುಡಿಯ ಹಳೆಯ ಹೋಟೆಲ್ಗಳ ರುಚಿಯನ್ನು ಮತ್ತೆ ಸವಿದೆ. ಒಂದಷ್ಟು ಉತ್ತಮ ಪುಸ್ತಕಗಳನ್ನು ಹೊತ್ತು ತಂದೆ. ಒಟ್ಟಿನಲ್ಲಿ ಮೂರೂ ದಿನ ನಾನೂ ಅಕ್ಕ ಸಮ್ಮೇಳನವನ್ನು full enjoy ಮಾಡಿದೆವು. ೩ ದಿನ ಕನ್ನಡದ ಸಂಭ್ರಮ ಮತ್ತೆ ಯಾಂತ್ರಿಕತೆಗೆ ಹೊರಳು. ಇನ್ನೊಂದು ಸಂಭ್ರಮವನ್ನು ಎದುರು ನೋಡುತ್ತಾ..

Proudly powered by Blogger
Theme: Esquire by Matthew Buchanan.
Converted by LiteThemes.com.