ಸಾರ್ವಜನಿಕರ ಸಾಕ್ಷಿ ಪ್ರಜ್ಞೆ ಮತ್ತು ಸರ್ಕಾರದ ಬೂಟು!


ಸಾಮಾಜಿಕ ನ್ಯಾಯದ ಕನಸಿನ ನನಸಿಗೆ ಬೆನ್ನೆಲುಬಾಗಿ ನಿಂತಿದ್ದ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ನಾವೆ ನಾಯಕನಿಲ್ಲದೆ ದಿಕ್ಕು ತಪ್ಪಿದೆ. ಕಳೆದ ಜುಲೈಗೆ ಆಯೋಗದ ಅಧ್ಯಕ್ಷರಾಗಿದ್ದ ಸಿ.ಎಸ್.ದ್ವಾರಕಾನಾಥ್ ಅವರ ಅಧಿಕಾರಾವಧಿ ಮುಗಿದಿದೆ. ಅದಾದ ಒಂದೆರಡು ತಿಂಗಳಲ್ಲೇ ಆಯೋಗದ ಎಲ್ಲ ಸದಸ್ಯರ ಅವಧಿಯೂ ಮುಗಿದಿದ್ದು, ಇದುವರೆಗೂ ಆಯೋಗದ ಅಧ್ಯಕ್ಷರನ್ನಾಗಲೀ ಸದಸ್ಯರನ್ನಾಗಲೀ ನೇಮಿಸಿಯೇ ಇಲ್ಲ ಸರ್ಕಾರ. ಅಂದರೆ ಕಳೆದ 9 ತಿಂಗಳುಗಳಿಂದ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ for all practical purposes ಅಸ್ತಿತ್ವದಲ್ಲೇ ಇಲ್ಲ! ಇದುವರೆಗೂ ಯಡಿಯೂರಪ್ಪನವರ ಸರ್ಕಾರ  ಹಿಂದುಳಿದ ವರ್ಗಗಳ ಕುರಿತು ಹುಸಿ ಕಾಳಜಿ ವ್ಯಕ್ತಪಡಿಸುತ್ತಿದೆಯೇ ಹೊರತು, ನಿಜ ಕೆಲಸವನ್ನು ಕೈಗೆತ್ತಿಕೊಂಡೆಯೇ ಇಲ್ಲ. ಆಯೋಗಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸುವುದು ಕನಿಷ್ಠ ನಿರೀಕ್ಷಿತ. ಆದರೆ ಅದನ್ನೂ ಈ ಸರ್ಕಾರ ಮಾಡಿಲ್ಲ. ಕಳೆದ 9 ತಿಂಗಳುಗಳಿಂದ ಕೆಲಸವೇ ಇಲ್ಲದೆ 38 ಜನ ಸರಕಾರೀ ಅಧಿಕಾರಿಗಳು, 2 ಕೆಎಎಸ್ ಅಧಿಕಾರಿಗಳು ಮತ್ತು ಒಬ್ಬ ಐಎಎಸ್ ಅಧಿಕಾರಿ ಕುಂತು ತಿನ್ನುತ್ತಿದ್ದಾರೆ. ಕೆಲಸವೇ ಇಲ್ಲದೆ ಇವರು ತೆಗೆದುಕೊಳ್ಳುತ್ತಿರುವ ಸಂಬಳಗಳ ಲೆಕ್ಕ ತೆಗೆದರೂ ಅದು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಕನ್ನವನ್ನೇ ಕೊರೆದಿದೆ. ಅಷ್ಟು ಯಾಕೆ ಕ್ವೀನ್ಸ್ ರಸ್ತೆಯಲ್ಲಿರುವ ಆಯೋಗದ ಕಛೇರಿಯ ಕಟ್ಟಡದ ಬಾಡಿಗೆಯೇ ತಿಂಗಳಿಗೆ 2 ಲಕ್ಷ! ಕಳೆದ 9 ತಿಂಗಳಿಂದ ಇದು ವ್ಯರ್ಥವೇ ಸರಿ. ನೀವೊಮ್ಮೆ ಆಯೋಗದ ಕಛೇರಿಯ ಕಡೆಗೆ ಪಾದ ಬೆಳಸಿ ಬರಬೇಕು. ಅಲ್ಲಿರುವ ಅಷ್ಟೂ ಅಧಿಕಾರಿಗಳು ಕಛೇರಿಗೆ ಬಂದು ಹರಟೆ ಹೊಡೆಯುತ್ತಾ, ನಿದ್ದೆ ಹೊಡೆಯುತ್ತಾ, ವಿಧಾನಸೌಧದ ಬಳಿ ಅಂಡಲೆಯುತ್ತಾ, ಬಡ್ಡಿ-ಚೀಟಿ ವ್ಯವಹಾರ ನಡೆಸುತ್ತಾ ದಿನ ದೂಡುತ್ತಿದ್ದಾರೆ. ಇವರಿಗೆ ಯಾರ ಅಂಕೆಯೂ ಇಲ್ಲ. ಇನ್ನು ಹಿಂದುಳಿದ ವರ್ಗಗಳ ಕುರಿತು ಕೇಳುವ ಯಾಂವ ಇದಾನಿಲ್ಲಿ? ಅವ ಭಿಕಾರಿ. ಇದರ ಹಿಂದಿರುವ ಕಾರಣಗಳನ್ನು ಕೆದಕುತ್ತಾ ಹೋದರೆ, ಕಾಣಿಸುವುದು ಹಿಂದುಳಿದ ವರ್ಗಗಳ ಬಗೆಗೆ 'ಸರ್ಕಾರದ' ಮೇಲ್ಜಾತಿಗಳ ದ್ವೇಷಪೂರಿತ ಅವಜ್ಞೆ ಮತ್ತು ತತ್ಪ್ರೇರಿತ ಆಯೋಗವನ್ನು ಒಳಗಿನಿಂದಲೇ ಗೆದ್ದಲು ಹಿಡಿಸಿ ನಿವೀರ್ಯನನ್ನಾಗಿ ಮಾಡಿ ತನಗನುಗುಣವಾಗಿ ಪಳಗಿಸಿಕೊಳ್ಳುವ ಕುತಂತ್ರ, ರಾಜಕಾರಣದ ದುಷ್ಟ ಹುನ್ನಾರ. 

ಈ ಹಿಂದಿನ ಅವಧಿಗೆ ಆಯೋಗದ ಅಧ್ಯಕ್ಷರಾಗಿದ್ದ ಸಿ.ಎಸ್. ದ್ವಾರಕಾನಾಥ್ ಮತ್ತು ಸರ್ಕಾರದ ನಡುವಿನ ಸಂಘರ್ಷ ಎಲ್ಲರೂ ಬಲ್ಲ ವಿಷಯವೇ. ದ್ವಾರಕಾನಾಥ್ ಅವರ ನೇಮಕವಾದದ್ದು ಕುಮಾರಸ್ವಾಮಿ ಮೂಖ್ಯಮಂತ್ರಿಗಿರಿಯಲ್ಲಿ. ನಂತರ ಈ ಸರ್ಕಾರ  ಪತನಗೊಂಡು ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ದ್ವಾರಕಾನಾಥ್ ಅವರು ಸೈದ್ಧಾಂತಿಕವಾಗಿ ಬಿಜೆಪಿಗೆ ತದ್ವಿರುದ್ಧರು. ಬಂದವರೇ ಯಡಿಯೂರಪ್ಪನವರು ದ್ವಾರಕಾನಾಥ್ ಅವರಿಗೆ ತಾವು ಈ ಹಿಂದಿನ ಸರ್ಕಾರದಿಂದ ನೇಮಿಸಲ್ಪಟ್ಟವರು, ಹಾಗಾಗಿ ಈಗ ಸರ್ಕಾರ ಬದಲಾಗಿರುವುದರಿಂದ ತಾವು ರಾಜೀನಾಮೆ ನೀಡಬೇಕಾಗಿಯೂ ಒತ್ತಡ ಹೇರತೊಡಗಿದರು. ಇದನ್ನು ವಿರೋಧಿಸಿದ ದ್ವಾರಕಾನಾಥ್ ಅವರು ರಾಜೀನಾಮೆ ನೀಡಲಿಲ್ಲ. ಸುಪ್ರೀಂ ಕೋರ್ಟ್  ಆದೇಶದಂತೆ ರಚಿತವಾಗಿರುವ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ತನ್ನದೇ ಆದ ನ್ಯಾಯಾಂಗಿಕ ಅಧಿಕಾರಗಳುಂಟು. ಅದು ಮತ್ತೊಂದು ನಿಗಮ ಮಂಡಳಿಯಲ್ಲ, ತಮ್ಮ ನೇಮಕಾತಿ ರಾಜಕೀಯ ನೇಮಕಾತಿಯಲ್ಲವಾದ್ದರಿಂದ ರಾಜೀನಾಮೆಯ ಪ್ರಶ್ನೆ ಬರುವುದಿಲ್ಲವೆಂದು ಹಠ ತೊಟ್ಟು ಕೂತರು. ಅಲ್ಲಿಂದ ಶುರುವಾಯಿತು ಆಯೋಗದ ಮೇಲೆ ಸರ್ಕಾರದ ಗುಪ್ತ ಗಧಾಪ್ರಹಾರ. ನೀವು ಸಿ.ಎಸ್.ದ್ವಾರಕಾನಾಥ್ ಅವರು ಸರ್ಕಾರಕ್ಕೆ ನೀಡಿರುವ ವರದಿಯ ಮುನ್ನುಡಿಯನ್ನೊಮ್ಮೆ ಓದಬೇಕು. ಸರ್ಕಾರ ತನಗೆ ಮತ್ತು ಆಯೋಗಕ್ಕೆ ನೀಡಿದ ಕಿರುಕುಳವನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಒಬ್ಬ ಸದಸ್ಯ ಕಾರ್ಯದರ್ಶಿಯನ್ನು ಸರ್ಕಾರ ವರ್ಷದೊಪ್ಪತ್ತಿನಲ್ಲಿ 8 ಬಾರಿ ಬದಲಿಸಿದೆ! ಬಂದವರು ಒಂದು ದಿನವೂ ನೆಟ್ಟಗೆ ಕೆಲಸ ಮಾಡಿದವರಲ್ಲ. ಒಬ್ಬ ಚಂದ್ರಶೇಖರ ಎಂಬ ಅಧಿಕಾರಿಯನ್ನು ಕೆಲಸದ ವಿಷಯದಲ್ಲಿ ಗದರಿಸಿಕೊಂಡರೆ ಜಾತಿ ನಿಂದನೆಯ ಕೇಸು ಹಾಕುವೆನೆಂದು ಧಮಕಿ ಕೊಟ್ಟನಂತೆ! ಈ ಅವಜ್ಞೆ ಎಷ್ಟರ ಮಟ್ಟಿಗೆ ಹೋಯಿತೆಂದರೆ ಅತಿ ಮಹತ್ವದ ಆಯೋಗದ ವರದಿಯನ್ನು ಸರ್ಕಾರ 20 ಪ್ರತಿ ಮಾತ್ರ ಮುದ್ರಿಸಿ  ಕೈತೊಳೆದುಕೊಂಡಿದೆ! ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಸ್ಥಿತಿಗತಿ ಮತ್ತು ಅದನ್ನು ಪರಿಹರಿಸಲು ಆಯೋಗ ನೀಡಿರುವ ಸಲಹೆ ಸೂಚನೆಗಳನ್ನೊಳಗೊಂಡ ಮಹತ್ವದ ವರದಿಯನ್ನು ಕನಿಷ್ಠ ರಾಜ್ಯದ ಶಾಸಕ-ಸಂಸದರಿಗಾದರೂ ನೀಡಬೇಡವೇ? ಒಟ್ಟಾರೆ ಆಯೋಗವನ್ನು ನಿಷ್ಕ್ರಿಯ ಮಾಡಿಟ್ಟರು.

ಆಯೋಗ ರಾಷ್ಟ್ರದಲ್ಲೇ ಮೊಟ್ಟಮೊದಲಬಾರಿಗೆ ರಾಜ್ಯದ ಸಮಸ್ತ ಜನತೆಯ ಜಾತಿವಾರು ಸಾಮಾಜಿಕ-ಆರ್ಥಿಕ ಗಣತಿಯನ್ನು ನಡೆಸಲು ಮುಂದಾಗಿತ್ತು. ಇದಕ್ಕಾಗಿಯೇ ಕೇಂದ್ರ ಸರ್ಕಾರ 20.05 ಕೋಟಿ ರೂ.ಗಳನ್ನು ಮಂಜೂರು ಮಾಡಿತ್ತು. ಸಿದ್ಧರಾಮಯ್ಯನವರು ಉಪಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರದ ಪರವಾಗಿ 1 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದರು. ಈ ಜಾತಿವಾರು ಜನಗಣತಿ ಮಾಡಿದ್ದರೆ, ರಾಜ್ಯದ ನೈಜ ಸ್ಥಿತಿಗತಿಗಳ ಸ್ಪಷ್ಟ ಪರಿಚಯವಾಗುತ್ತಿತ್ತು. ಹಿಂದುಳಿದ ವರ್ಗಗಳ ಪಟ್ಟಿಯ ಪರಿಷ್ಕರಣೆಯೂ ಆಗುತ್ತಿತ್ತು. 1931ರ ಜನಗಣತಿಯ ಆಧಾರದ ಮೇಲೆಯೇ ನಾವಿನ್ನೂ ನಮ್ಮ ಮೀಸಲಾತಿಯನ್ನು ನಿಗದಿಗೊಳಿಸುತ್ತಿದ್ದೇವೆ. ಇದನ್ನು ಪರಿಷ್ಕರಿಸಲೇ ಈಗ ಕೇಂದ್ರ ಸರ್ಕಾರ ಜಾತಿ ಗಣತಿಯನ್ನು ನಡೆಸಲು ಹೊರಟದ್ದು. ಆದರೆ ಪಟ್ಟಭಧ್ರ ಹಿತಾಸಕ್ತಿಗಳು ಇದನ್ನು ಒಳಗಿನಿಂದಲೇ ಬೆನ್ನಿಗೆ ಚೂರಿ ಹಾಕಿಬಿಟ್ಟವು. ಈಗ ಅಲ್ಲಿ ನಡೆಯುತ್ತಿರುವುದು ಜಾತಿ ಗಣತಿಯೇ ಹೊರತು ಜಾತಿವಾರು ಸಾಮಾಜಿಕಾರ್ಥಿಕ  ಗಣತಿಯಲ್ಲ. ಅದನ್ನು ಮೊಟ್ಟಮೊದಲಬಾರಿಗೆ ಮಾಡಲು ಹೊರಟದ್ದು ಕರ್ನಾಟಕ. ಅದರ ನೇತೃತ್ವ ವಹಿಸಿದ್ದು ಆಯೋಗ. ಆದರೆ ಯಡಿಯೂರಪ್ಪನವರ ಸರ್ಕಾರ ಇದನ್ನು ಆಗಗೊಡಿಸಲೇ ಇಲ್ಲ. ಒಮ್ಮೆ ಈ ಗಣತಿಯನ್ನು ಖಾಸಗೀ ಕಂಪೆನಿಗೆ ವಹಿಸುವುದೆಂದರು. ಮತ್ತೊಮ್ಮೆ ಮಗದೊಂದು. ಒಟ್ಟಾರೆ ಆಗಗೊಡಿಸಲಿಲ್ಲ. ಕಳೆದ 9 ತಿಂಗಳುಗಳಿಂದ ಆಯೋಗವೇ ಇಲ್ಲ, ಇನ್ನು ಇದೆಲ್ಲಿ ಮುಂದುವರೆಯುತ್ತದೆ? ವಾಸ್ತವದ ಬೆಳಕಿಗಂಜುವ ಪಟ್ಟಭಧ್ರ ಹಿತಾಸಕ್ತಿಯಾಗಿ ಹೋಯಿತು ಸರ್ಕಾರ.

ಯಡಿಯೂರಪ್ಪನವರು ಅಧಿಕಾರಕ್ಕೆ ಬರುತ್ತಿದ್ದ ಹಾಗೆ, ತಮ್ಮ ಬೆನ್ನೆಲುಬಾಗಿದ್ದ ಲಿಂಗಾಯತರಿಗೆ ಕೃತಜ್ಞತೆ ಸಲ್ಲಿಸುವ ಹುಕಿ ಹುಟ್ಟಿಕೊಂಡಿತು. ವೃತ್ತಿಯಾಧಾರಿತ ಕೆಳವರ್ಗದ ಜಾತಿಗಳಿಗೆ ಮೀಸಲಾದ 2ಎ ವರ್ಗಕ್ಕೆ ಮತ್ತಷ್ಟು ಜಾತಿಗಳನ್ನು ಸೇರಿಸಿದರು. ಹಿಂದೂ ಸಾದರ, ಸಾದುಗೌಡರ್, ಸಾದುಕುಲ..ಮತ್ತಿತರರ ಜೊತೆ ಸಾದರ ಲಿಂಗಾಯತರನ್ನೂ ಹಿಂದೂ ಸಾದರರ ಕೆಳಗೆ ಸೇರಿಸಿಬಿಟ್ಟರು. ಸಾದರ ಲಿಂಗಾಯತರೇನೂ ವೃತ್ತಿಯಾಧಾರಿತ ಜಾತಿಯಲ್ಲ. ಮೇಲ್ಜಾತಿಯವರನ್ನು ಈ ರೀತಿ ಹಿಂಬಾಗಿಲಿನಿಂದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮೀಸಲಾತಿ ದೊರಕಿಸಿಕೊಡುವ ರಾಜಕೀಯ ಹುನ್ನಾರಕ್ಕೆ  ವ್ಯಾಪಕ ಟೀಕೆಗಳು ವ್ಯಕ್ತವಾದವು. ಈ ವಿಷಯವಾಗಿ ಆಯೋಗವನ್ನು ಮಾತಿಗಾದರೂ ಕೇಳದೆ ಏಕಮುಖಿ ನಿರ್ಧಾರ ಕೈಗೊಂಡ ಯಡಿಯೂರಪ್ಪನವರನ್ನು ದ್ವಾರಕಾನಾಥ್ ಬಹಿರಂಗವಾಗಿ ವಿರೋಧಿಸಿದರು. ಇದರೊಂದಿಗೆ ಯಡಿಯೂರಪ್ಪನವರ ಪಿತ್ಥ ನೆತ್ತಿಗೇರಿತು. ದ್ವಾರಕಾನಾಥ್ ಅವರನ್ನು ಕಿತ್ತೊಗೆಯುವ ಪ್ರಯತ್ನಗಳು ಉಧೃತಗೊಂಡವು.

ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವೇನೂ ಇತರೆ ಆಯೋಗಗಳಂತಲ್ಲ. 1994ರಲ್ಲಿ ಮಂಡಲ್ ಕೇಸ್ ಎಂದೇ ಪ್ರಖ್ಯಾತವಾದ ಇಂದಿರಾ ಸಹಾನಿ ಮತ್ತು ಕೇಂದ್ರ ಸಕರ್ಾರದ ನಡುವಿನ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಎತ್ತಿಹಿಡಿಯುತ್ತಾ ಕೇಂದ್ರದಲ್ಲಿ ಮತ್ತು ಪ್ರತಿ ರಾಜ್ಯದಲ್ಲೂ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸುವಂತೆ ಆದೇಶಿಸಿತು. ಈ ಆದೇಶದಂತೆ 1995ರಲ್ಲಿ ರಾಜ್ಯದಲ್ಲೂ ಈ ಆಯೊಗ ರಚಿತವಾಯಿತು. ಸುಪ್ರೀಂ ಕೋರ್ಟ್ ತೀರ್ಪು ನೀಡುವ ವೇಳೆಗಾಗಲೇ ನಮ್ಮ ರಾಜ್ಯಕ್ಕೆ ಹಿಂದುಳಿದ ವರ್ಗಗಳ ಆಯೋಗ ಹಳೆಯದು. 1977ರಲ್ಲಿ ದೇವರಾಜ ಅರಸು ಸಾಮಾಜಿಕ ನ್ಯಾಯಕ್ಕಾಗಿ ಈ ಆಯೋಗವನ್ನು ರಚಿಸಿ ಹಾವನೂರ್ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಹಾವನೂರು ವರದಿ ಇವತ್ತಿಗೂ ಪ್ರಸ್ತುತ. ಸುಪ್ರೀಂ ತೀರ್ಪಿನೊಂದಿಗೆ ಈ ಆಯೋಗವನ್ನೇ ಮತ್ತಷ್ಟು ಶಕ್ತಿಯುತಗೊಳಿಸಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನಾಗಿ ಪುನಾರಚಿಸಲಾಯಿತು. ಸುಪ್ರೀಂ ತೀರ್ಪಿನನ್ವಯ ರಚಿತವಾದ ಈ ಆಯೋಗಕ್ಕೆ ನ್ಯಾಯಾಂಗಿಕ ಕೋನವೂ ಉಂಟು. ಆಯೋಗದ ಅಧ್ಯಕ್ಷರಾಗುವವರು ಅಂದಿನ, ಇಲ್ಲ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಇಲ್ಲವೇ ಹೈಕೋರ್ಟ್ ನ್ಯಾಯಮೂರ್ತಿಯಾಗುವ ಅರ್ಹತೆಯುಳ್ಳವರಾಗಿರಬೇಕು. ಅಧ್ಯಕ್ಷರಿಗೆ ಹೈ ಕೋರ್ಟ್ ನ್ಯಾಯಮೂರ್ತಿಯ ಸ್ಥಾನವಿರುತ್ತದೆ. ಅವರಿಗೆ ಸಿವಿಲ್ ಕೋರ್ಟ್ನ ನ್ಯಾಯಮೂರ್ತಿಯೊಬ್ಬನ ಅಧಿಕಾರವಿರುತ್ತದೆ. ಅವರು ಮುಖ್ಯಕಾರ್ಯದರ್ಶಿ, ಮಂತ್ರಿ, ಮುಖ್ಯಮಂತ್ರಿಯನ್ನೂ ಕೂಡ ಸಮನ್ಸ್ ಜಾರಿ ಮಾಡಿ ಕರೆಸಿಕೊಳ್ಳಬಹುದು. ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯ custodian ಆಗಿ ರಚಿತವಾಗಿರುವ ಈ ಆಯೋಗ, ಅದೇ ಕಾರಣಕ್ಕಾಗಿ ಸರ್ಕಾರದ ಅಡಿಯಾಳಾಗದೇ ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಿಸಲಾಗಿದೆ. ನಮ್ಮ ನಾಡಿನ ಲೋಕಾಯುಕ್ತ ಮತ್ತು ಮಾನವ ಹಕ್ಕುಗಳ ಆಯೋಗದಂತೆಯೇ ಇದು. ಇತರೆ ಆಯೋಗಗಳು ಹೀಗಿಲ್ಲ. ಅವುಗಳನ್ನು ರಚಿಸಿರುವುದು ರಾಜ್ಯ ಸರ್ಕಾರದ ಕಾನೂನಿನನ್ವಯ. ಉದಾಹರಣೆಗೆ ಪರಿಶಿಷ್ಟ ಜಾತಿ-ಪಂಗಡಗಳ ಆಯೋಗ. ಈ ಆಯೋಗ ತನಗೆ ಬರುವ ಬಿಡಿ ಬಿಡಿ ಪ್ರಕರಣಗಳನ್ನು ಪರಾಂಬರಿಸಿ ಶಿಫ್ಫಾರಸ್ಸು ನೀಡುತ್ತದೆ. ಅದರ ಮುಂದಿನದು ಅದರ ವ್ಯಾಪ್ತಿಯಲ್ಲಿಲ್ಲ. ಅದು ಸರ್ಕಾರದ ಅಡಿಯಾಳು. ಆದರೆ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಡೊಗ್ಗು ಸಲಾಂ ಹೊಡೆಯುವ ಅವಶ್ಯಕತೆಯಿಲ್ಲ. ಯಡಿಯೂರಪ್ಪನವರ ದುರಹಂಕಾರಿ ಸರ್ವಾಧಿಕಾರೀ ಧೋರಣೆಗೆ ಇದು ಸಹಿಸಲಸಾಧ್ಯ. ಈ ಆತ್ಮರತಿಗಾಗಿ ಅವರು ಸಾಮಾಜಿಕ ನ್ಯಾಯದ ಹರಿಕಾರನಾಗಿ ದುಡಿಯುತ್ತಿದ್ದ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಒಳಗಿನಿಂದಲೇ ಗೆದ್ದಲು ಹಿಡಿಸಲು ಹೊರಡುತ್ತಾರೆ. 

1995ರ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆಗೆ ತಿದ್ದುಪಡಿ ತರುತ್ತಾರೆ. ಈ ತಿದ್ದುಪಡಿಯಲ್ಲಿ ಆಯೋಗದ ಅಧ್ಯಕ್ಷರ ಸ್ಥಾನವನ್ನು ಹೈಕೋರ್ಟ್ ನ್ಯಾಯಮೂರ್ತಿಯಿಂದ ಸಚಿವನ ಸ್ಥಾನಕ್ಕಿಳಿಸಲಾಗಿದೆ. ಜೊತೆಗೆ ಈ ಹಿಂದೆ ಅಧ್ಯಕ್ಷರ ಕೈಲಿದ್ದ ಆಯೋಗದ ಹಣಕಾಸು ಮತ್ತು ಆಡಳಿತವನ್ನು ಸದಸ್ಯ ಕಾರ್ಯದರ್ಶಿಗೊಪ್ಪಿಸಲಾಗಿದೆ. ಅಲ್ಲಿಗೆ ಆಯೋಗದ ಅಧ್ಯಕ್ಷರು ಕೂಡ ಒಬ್ಬ ಐಎಎಸ್ ಅಧಿಕಾರಿಯ ಕೈಕೆಳಗೆ ಕಾರ್ಯನಿರ್ವಹಿಸಬೇಕು. ಇದರೊಂದಿಗೆ ಒಂದೇ ಏಟಿಗೆ ಆಯೋಗದ ಎಲ್ಲ ನ್ಯಾಯಾಂಗಿಕ ಕೋನಗಳನ್ನೂ ಒಡೆದು ಹಾಕಲಾಗಿದೆ. ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗಗಳಂತೆ ಸಾರ್ವಜನಿಕರ ಸಾಕ್ಷಿಪ್ರಜ್ಞೆಯಂತಿದ್ದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ಹಲ್ಲು ಕಿತ್ತ ಹಾವಾಗಿಸಿ ಸರ್ಕಾರವೆಂಬ ಹಾವಾಡಿಗ ತನ್ನ ಬುಟ್ಟಿಯೊಳಗಿಟ್ಟುಕೊಳ್ಳಲು ಹೊರಟಿದೆ. ಕಡೆಗೆ ಇದು ಮತ್ತೊಂದು ನಿಗಮ ಮಂಡಳಿಯಾಗಿಬಿಡುತ್ತದೆ. ಅದಕ್ಕೊಬ್ಬ ರಾಜಕೀಯ ಪುಢಾರಿ ಅಧ್ಯಕ್ಷನಾಗುತ್ತಾನೆ. ಮುಖ್ಯಮಂತ್ರಿಗಳ ಈ ಪ್ರಸಾದಕ್ಕೆ ಕೃತಾರ್ಥನಾಗಿ ಸರ್ಕಾರದ ಬೂಟು ನೆಕ್ಕುತ್ತಾ ಕಾಲ ದೂಡುತ್ತಾನೆ. ಅಲ್ಲಿಗೆ ಹಾವನೂರರಿಂದ ದ್ವಾರಕಾನಾಥ್ ಅವರವರೆಗಿನ ಒಂದು ಪ್ರಜ್ವಲ ಜನಪರ ಪರಂಪರೆ ಸರ್ಕಾರದ `ಬೂಟಿಗೆ' ಆಹುತಿಯಾಗುತ್ತದೆ. ನಾಡಿನ ಎಲ್ಲ ಪ್ರಜ್ಞಾವಂತರೂ ಇದನ್ನು ವಿರೋಧಿಸಬೇಕಿದೆ.

ಈ ತಿದ್ದುಪಡಿಯನ್ನು ತಂದಾಗ ಇನ್ನೂ ದ್ವಾರಕಾನಾಥ್ ಆಯೋಗದ ಅಧ್ಯಕ್ಷರಾಗಿದ್ದರು. ಅವರು ಈ ತಿದ್ದುಪಡಿಯನ್ನು ಹೈ ಕೋರ್ಟ್ನಲ್ಲಿ ಪ್ರಶ್ನಿಸಿ ತಡೆಯಾಜ್ಞೆ ತಂದಿದ್ದರು. ಈ ತಡೆಯಾಜ್ಞೆ ಇನ್ನೂ ಜಾರಿಯಲ್ಲಿದೆ. ಆದರೆ ಕಳೆದ ಜುಲೈನಲ್ಲಿ ದ್ವಾರಕಾನಾಥ್ ಅವರ ಅಧಿಕಾರಾವಧಿ ಮುಗಿಯುತ್ತಿದ್ದಂತೆಯೇ ಸರ್ಕಾರ ತನ್ನ ತಿದ್ದುಪಡಿಯನ್ನು ಒಂದು ನೋಟಿಫಿಕೇಷನ್ ಮೂಲಕ ಜಾರಿಗೊಳಿಸಿದೆ. ಇದರನ್ವಯ ನೂತನ ಅಧ್ಯಕ್ಷರನ್ನು ಅರಸಲು ಹೊರಟಿದೆ. ಆದರೆ ಈ ಹಲ್ಲು ಕಿತ್ತ ಹಾವಿನ ನಿರುಪಯುಕ್ತ ಹೆಡೆಯಾಗಿ ಕಂಗೊಳಿಸಲು ಯಾವ ಯೋಗ್ಯರೂ ತಯಾರಿಲ್ಲ. ಅವರನ್ನು ಹುಡುಕುವ ತೀವ್ರ ಪ್ರಯತ್ನವನ್ನೇನೂ ಸರ್ಕಾರ  ಮಾಡಿಲ್ಲ. ಅಧ್ಯಕ್ಷರೇ ಇಲ್ಲದ ಆಯೋಗ ಸರ್ಕಾರಕ್ಕೆ ಇನ್ನೂ ಹಿತ. ಸರ್ಕಾರದ್ದು ಒಂದು ದಿವ್ಯ ಅವಜ್ಞೆ. ಹೈ ಕೋರ್ಟ್ನ ತಡೆಯಾಜ್ಞೆ ಇನ್ನೂ ತೆರವಾಗಿಲ್ಲ. ಆಗಲೇ ಸರ್ಕಾರ ತನ್ನ ತಿದ್ದುಪಡಿಯನ್ನು ಜಾರಿಗೆ ತಂದಿದೆ. ಇದು ನ್ಯಾಯಾಂಗ ನಿಂದನೆಯಲ್ಲವೇ? ಹೌದು. ಆದರೆ ಸರ್ಕಾರದ ವಾದವೇ ವಿಚಿತ್ರ. ದ್ವಾರಕಾನಾಥ್ ಅವರು ಅರ್ಜಿ ಹಾಕಿ ಇದನ್ನು ಅಮಲುಗೊಳಿಸದಿರಲು ತಡೆಯಾಜ್ಞೆ ತಂದರು. ಇಂದು ಅವರ ಅಧಿಕಾರಾವಧಿಯೇ ಮುಗಿದಿದೆ. ಹಾಗಾಗಿ ತಂತಾನೇ ಈ ತಡೆಯಾಜ್ಞೆ ತೆರವಾಗಿದೆಯಂತೆ! ಆದರೆ ಈ ತಿದ್ದುಪಡಿಯನ್ನು ಪ್ರಶ್ನಿಸಿದ್ದ ದ್ವಾರಕಾನಾಥ್ ಅವರ ಮುಖ್ಯ ಅರ್ಜಿಗಿನ್ನೂ ಜೀವವಿದೆ. ವಾದ ಪ್ರತಿ ವಾದಗಳು ನಡೆಯುತ್ತಿವೆ. ಕಳೆದ ವಾರ ಕೂಡ ಆಯೋಗದ ಹಿಂದಿನ ಅಧ್ಯಕ್ಷ ಪ್ರೊ. ರವಿವರ್ಮಕುಮಾರ್ ಸರ್ಕಾರದ ವಿರುದ್ಧ ತಮ್ಮ ವಾದ ಮಂಡಿಸಿದರು. ಇಷ್ಟರಲ್ಲೇ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಕೇಸನ್ನು ಹಾಕುವುದಾಗಿ ಸಿ.ಎಸ್. ದ್ವಾರಕಾನಾಥ್ ಹೇಳುತ್ತಾರೆ. ಅದರ ತಯಾರಿ ನಡೆದಿದೆ.

ನಿಜ ಒಂಬತ್ತು ತಿಂಗಳುಗಳಿಂದ ಆಯೋಗ ನಿಷ್ಕ್ರಿಯವಾಗಿದೆ. For all practical purposes, ಅದು ಅಸ್ತಿತ್ವದಲ್ಲೇ ಇಲ್ಲ. ಆದರೆ ಸರ್ಕಾರ ತಂದಿರುವ ನೂತನ ತಿದ್ದುಪಡಿ ಸಾಂಸ್ಥೀಕರಣಗೊಂಡುಬಿಟ್ಟರೆ ಆಯೋಗ ಶಾಶ್ವತವಾಗಿ ನಿಷ್ಕ್ರಿಯವಾಗಿಬಿಡುತ್ತದೆ. ಒಂದು ನ್ಯಾಯಾಂಗಿಕ ಸ್ವಾಯತ್ತ ಸಂಸ್ಥೆ ರಾಜಕೀಯ ಪುಢಾರಿಗಳ ಗಂಜಿ ಕೇಂದ್ರವಾಗಿಬಿಡುತ್ತದೆ. ಸರ್ಕಾರದ `ಬೂಟಿನ' ಕೆಳಗಿನ ಚೇಳಾಗಿಬಿಡುತ್ತದೆ. ನಾಡಿನ ಪ್ರಜ್ಞಾವಂತರೆಲ್ಲರೂ ಇದನ್ನು ವಿರೋಧಿಸಬೇಕಿದೆ. ದ್ವಾರಕಾನಾಥ್ ಅವರ ಹೋರಾಟಕ್ಕೆ ತಮ್ಮ ನೈತಿಕ ಬೆಂಬಲ ಸೂಚಿಸುವ ಅಗತ್ಯವಿದೆ. ನಮ್ಮ ಹೈ ಕೋರ್ಟ್ ಈ ಎಲ್ಲವನ್ನೂ ಪರಿಗಣಿಸಿ ಜನಪರ ನಿಲುವು ತಾಳಬೇಕಾದ ಅಗತ್ಯವಿದೆ. ಕಂಡದ್ದೆಲ್ಲವನ್ನೂ ತನ್ನ ಅಧಿಕಾರದ ವ್ಯಾಪ್ತಿಗೊಳಪಡಿಸುವ ಈ ಸರ್ಕಾರದ ಮದವನ್ನು ಹುಟ್ಟಡಗಿಸಬೇಕಿದೆ. ನಾಡಿನ ಸಾರ್ವಜನಿಕ ಸ್ವಾಯತ್ತ ಸಂಸ್ಥೆಗಳೊಂದಿಗಿನ ಸರ್ಕಾರದ ಸಂಬಂಧಗಳ ಆರೋಗ್ಯದ ಆಧಾರದ ಮೇಲೆ ಆ ಸರ್ಕಾರ ಮತ್ತದರ ನಾಯಕನ `ಅಧಿಕಾರ'ವನ್ನು ಅಳೆಯಬಹುದಾದರೆ, ಈ ಸರ್ಕಾರ ಮತ್ತು ಯಡಿಯೂರಪ್ಪನವರು ಸದಾ ಜನಾದೇಶ ಜಪಿಸುವ ಪ್ರಜಾಪ್ರಭುತ್ವವಾದಿಯ ಛಧ್ಮವೇಷದಲ್ಲಿರುವ ಒಬ್ಬ ಸರ್ವಾಧಿಕಾರಿಯಂತೆ ಕಂಗೊಳಿಸುತ್ತಾರೆ. ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗ ಮತ್ತು ಈಗ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಗಳ ಕಥಾನಕಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. 

ದಿನದ ಓದು - ಇದು ಅಂಕಣ ಕಾಣಾ.....


ಅಂಕಣಗಳಿಂದಲೇ ಪತ್ರಿಕೆ ಎಂಬ ಸವಕಲು ನಾಣ್ಯವನ್ನೇ ಮರುಚಲಾವಣೆಗೆ ತರಲು ಹರಸಾಹಸಗಳು ನಡೆಯುತ್ತಿರುವ ಇವತ್ತಿನ ಈ ಸಂಧರ್ಭದಲ್ಲಿ ಅಂಕಣಗಳ ಕುರಿತು ಒಂದು ವಿಮರ್ಶೆ ಅಗತ್ಯ. ಅಂಥದೊಂದು ಚರ್ಚೆಯನ್ನು ಹುಟ್ಟು ಹಾಕುವ ದಿಸೆಯಲ್ಲಿ ಒಂದು ಸಣ್ಣ ಪ್ರಯತ್ನ ಈ ಲೇಖನ. ಅಕ್ಕ ಬರೆದದ್ದು..! ಸುಮಾರು ಐದು ತಿಂಗಳ ನಂತರ ಅಕ್ಕ ಮತ್ತೆ ಲೇಖನಿ ಹಿಡಿದಿದಾಳೆ..!!! ಅಕ್ಕನ ಬ್ಲಾಗಿಗೂ ಮತಿ ಮಾತು ಒಮ್ಮೆ ಹೋಗಿ ಬನ್ನಿ..

ಈ ಲೇಖನ ಇಂದು ಸಂಪಾದಕೀಯ ಬ್ಲಾಗಿನಲ್ಲೂ ಬಂದಿದೆ. ಈ ಕುರಿತು ಚರ್ಚೆ ನಡೆಯಲಿ..

ಇದು ಅಂಕಣ ಕಾಣಾ.....


ಕಣ' ಎಂದರೆ ಅತ್ಯಂತ ಸೂಕ್ಷ್ಮ ಪದಾರ್ಥ ಅಥವಾ ಅಣು ಅಂತೆ, 'ಅಂಕಣ' ಎಂದರೆ ಮನೆಯಲ್ಲಿನ ಎರಡು ಕಂಬಗಳ ನಡುವಣ ಪ್ರದೇಶ ಅಂತೆ, ಹೀಗಂತ ಕನ್ನಡ ನಿಘಂಟು ಹೇಳುತ್ತದೆ. ಇದನ್ನು ಪತ್ರಿಕೆಗಳಿಗೆ ಅನ್ವಯಿಸಿ ನೋಡುವುದಾದರೆ ಇತ್ತೀಚೆಗೆ ಪತ್ರಿಕೆಗಳ 'ಕಣವು' 'ಅಂಕಣಗಳಿಂದ' ತುಂಬಬೇಕು ಎಂಬ ಭಾವ ಎಲ್ಲೆಡೆ ಕಾಣುತ್ತಿದೆ. ಅಂಕಣಗಳಿಂದಲೇ ದಿನಪತ್ರಿಕೆಗಳ ಪ್ರಸಾರ ಸಂಖ್ಯೆ ನಿರ್ಧಾರವಾಗುತ್ತದೆ ಎಂಬ ಭಾವನೆ ಕೂಡ ಹುಟ್ಟುಹಾಕಲಾಗುತ್ತಿದೆ. ನಿತ್ಯ ಅದೇ ಚಡ್ಡಿ, ಯಡ್ಡಿ, ಹೊಡಿ, ಬಡಿ, ರಾಡಿ, ಚಾಡಿ ಸುದ್ದಿಗಳನ್ನು ಓದಿ ಓದಿ ಅಥವಾ ಓದಲಾರದೆ ಓದುಗ ಅಂಕಣಗಳಿಗೆ ಶರಣಾಗುತ್ತಾನೆ ಎಂಬ ಅನಿಸಿಕೆ ಕೂಡ ಇದೆ.

ಇಂದೇಕೆ ಅಂಕಣಗಳಿಗೆ ಇಷ್ಟು ಮಹತ್ವ? ಹಿಂದೆ ಅಂಕಣಗಳೇ ಇರಲಿಲ್ಲವೇ? ಅಥವಾ ಅಂಕಣಗಳನ್ನು ಜನ ಗುರುತಿಸಿರಲಿಲ್ಲವೇ? 'ಅಂಕಣ ಸಾಹಿತ್ಯ' ಸಾಧಾರಣ ಪತ್ರಿಕಾ ಸಾಹಿತ್ಯಕ್ಕಿಂತ ಭಿನ್ನವಾಗಿ ಮೂಡಿ ಬರುತ್ತಿದೆಯೇ? ಪ್ರಚಲಿತ ಅಂಕಣಗಳು ಏನನ್ನು ಹೇಳುತ್ತವೆ? ಅನ್ನುವಂತಹ ಪ್ರಶ್ನೆಗಳನ್ನು ಹಾಗೆ ಸುಮ್ಮನೆ ಅವಲೋಕನಕ್ಕೆ ಎಂದು ಕೇಳಿಕೊಂಡರೆ ಅಷ್ಟೇನೂ ಸಮಾಧಾನಕರ ಉತ್ತರ ದೊರೆಯುವುದಿಲ್ಲ. ಅಂತೆಯೇ... ಹಾಗೇ... ಕೆದಕಿ ಬೆದಕಿ ನೋಡಿದರೆ...

ದಶಕಗಳ ಹಿಂದೆ ಸಹ ಅಂಕಣಗಳು ಇದ್ದವು. ಹಾ.ಮಾ.ನಾಯಕರು ಪ್ರಜಾಮತಕ್ಕೆ ಬರೆಯುತ್ತಿದ್ದ ಅಂಕಣ, ಲಂಕೇಶರು ಪ್ರಜಾ ವಾಣಿ ಗೆ ಬರೆಯುತ್ತಿದ್ದ ಅಂಕಣ, ವೈ ಏನ್ ಕೆ, ಕಾರಂತರು, ವೈಕುಂಠರಾಜು, ಎಂ ವಿ ಕಾಮತ್, ರಾಮಚಂದ್ರ ರಾಯರು, ಸ ಕ್ರ ಪ್ರಕಾಶ್ ಇವರೆಲ್ಲರ ಅಂಕಣಗಳು ಮನಸ್ಸಿನಲ್ಲಿ ಸುಳಿದು ಹೋಗುತ್ತವೆ. 'ಸುಧಾ' ವಾರಪತ್ರಿಕೆಯಲ್ಲಿ ಬರುತ್ತಿದ್ದ 'ಕಾಮಧೇನು', 'ನೀವು ಕೇಳಿದಿರಿ' ಅಂಕಣಗಳು ಲಂಕೇಶ್ ಪತ್ರಿಕೆಗೆ ತೇಜಸ್ವಿ ಬರೆಯುತ್ತಿದ್ದ ಅಂಕಣ ಮರೆಯುವ ಹಾಗೆಯೇ ಇಲ್ಲ.

ಅಂಕಣಗಳು ನಿರ್ದಿಷ್ಟತೆ, ಸ್ವರೂಪ, ವಿಸ್ತಾರ, ಗುರಿ ಮತ್ತು ಬದ್ಧತೆಯನ್ನು ಹೊಂದಿರುತ್ತಿದ್ದವು. ಕೆಲವು 'ರಾಜಕೀಯ'ಕ್ಕಾಗಿಯೇ ಮೀಸಲಾದವು. ಇನ್ನು ಕೆಲವು ಪಕ್ಕಾ ವಿಡಂಬನೆಗಳು. ಇನ್ನು ಕೆಲವು ಪ್ರಶ್ನೋತ್ತರ ರೂಪದವು. ಮತ್ತೂ ಕೆಲವು ಸಾಂಸ್ಕೃತಿಕ ಲೋಕ, ಚಿತ್ರ ಲೋಕಕ್ಕೆ ಸಂಬಂಧ ಪಟ್ಟ ಅಂಥವು. ಅಂದರೆ ಅಂಕಣಗಳಿಗೆ ಹೆಸರು, ರೂಪ, ವಿಷಯ, ಇರುತ್ತಿತ್ತು. 'ಬರೆದವರು ಯಾರು' ಎನ್ನುವುದಕ್ಕಿಂತ ವಸ್ತು ವಿಷಯಕ್ಕೆ ಹೆಚ್ಚು ಸೆಳೆತ ಇರುತ್ತಿತ್ತು. 'ವಿಷಯ ಕೇಂದ್ರಿತ' ಅಂಕಣಗಳು ಕೆಲವಾದರೆ, 'ವ್ಯಕ್ತಿ ಕೇಂದ್ರಿತ' ಅಂಕಣಗಳೂ ಕೆಲವು. ವ್ಯಕ್ತಿ ಕೇಂದ್ರಿತ ಅಂಕಣಗಳಲ್ಲಿ ಈ ಬಾರಿ ಈತ ಏನೆನ್ನುತ್ತಾನೆ ಎಂಬ ಕುತೂಹಲ ಇರುತ್ತಿತ್ತು. ವ್ಯಕ್ತಿ ಕೇಂದ್ರಿತ ಅಂಕಣಗಳೂ ಸಹ, ಯಾವುದಾದರೂ ಸಾಮಾನ್ಯ ಪ್ರಚಲಿತ ವಿಚಾರಗಳ ಬಗ್ಗೆ ಬೆಳಕು ಬೀರುವ, ಪ್ರಜ್ಞಾದೀಪ ಹೊತ್ತಿಸುವ, ಮಂಥನ ನಡೆಸುವ ಪ್ರಣಾಳಿಕೆ ಹೊತ್ತಿರುತ್ತಿದ್ದವು.

ಕೆಲವು ಅಂಕಣಗಳು ಪತ್ರಕರ್ತರು ಖುದ್ದು ಬರೆಯುವುದು, ಮತ್ತೆ ಕೆಲವು ಇತರರಿಂದ ಬರೆಸುವುದು. ಪತ್ರಕರ್ತರು ಸದಾ ಅಖಾಡದಲ್ಲಿ ಇರುತ್ತಾರಾದ್ದರಿಂದ, ನಿರಂತರ ಸುದ್ದಿಮನೆಯ ಆಗು ಹೋಗುಗಳು ಅವರ ಗಮನಕ್ಕೆ ಬರುತ್ತದೆ ಆದ್ದರಿಂದ ಆಯಾ ವಾರದ ಸುದ್ದಿ ಹರಿವು ಆಸಕ್ತಿ, ಅರ್ಥ ಮಾಡಿಕೊಂಡು ಬರೆಯಬಲ್ಲರು. ಜನರ ನಾಡಿಯನ್ನು ಮಿಡಿಯಬಲ್ಲರು ಎನ್ನುವಂಥದ್ದು ಇತ್ತು. ಇತರರು ಅಂಕಣದ ಜವಾಬ್ದಾರಿ ಹೊತ್ತಾಗ ಅವರು ವಿಚಾರದ ಆಯ್ಕೆ ಮಾಡಿಕೊಂಡು, ಸಂಶೋಧನೆ ನಡೆಸಿ, ತಮ್ಮ ಅಭಿಪ್ರಾಯಗಳನ್ನು ಸೇರಿಸಿ, ಕ್ರೋಡೀಕರಿಸಿ ಬರೆಯುವಂಥದ್ದಾಗಿರುತ್ತಿತ್ತು. ಕೆಲವೊಮ್ಮೆ ಆ ವಿಚಾರ ಮಂಡನೆಯ ಶೈಲಿಗೆ ಅಥವಾ ಪ್ರಚಲಿತದ ವಿಮರ್ಶೆಗೆ, ಪ್ರಸಕ್ತದ ಅರ್ಥ ಮಾಡಿಕೊಳ್ಳುವಿಕೆಗೆ, ಅಂಕಣಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡವರಿದ್ದರು.

ಪಂಚೆ ಧರಿಸುವವರು ಪ್ಯಾಂಟ್, ಜೀನ್ಸ್ ಪ್ಯಾಂಟ್ ತೊಡಲು ಆರಂಭಿಸಿದರು. ಸೀರೆ ಸಲ್ವಾರ್ ಕಮೀಜ್ ಆಯಿತು. ಸಲ್ವಾರ್ ಹೋಗಿ ಮಿನಿ skirt ಬಂತು...

ಕಾಲ ಬದಲಾದ ಹಾಗೆಲ್ಲ ಪತ್ರಿಕೆಗಳೂ ಬದಲಾದವು. ನಾವಿನ್ಯತೆ ಪಡೆದವು. ಮಾಧ್ಯಮ ಉದ್ಯಮ ಆಯಿತು. ಪತ್ರಿಕೆ ಸರಕಾಯಿತು. ಅಂಕಣ ಅಂಕೆ ಮೀರಿತು. ಸಿನಿಮಾ ನಲ್ಲಿನ item song ನ ರೀತಿ ಪತ್ರಿಕೆಗೊಂದು ಅಂಕಣ! ಅದು ವಿಷಯ, ವಾದ, ಪ್ರತಿವಾದ, ಪೂರ್ವ ನಿರ್ಧಾರಿತ ಅಂಶಗಳು, ಸೆಳೆತಗಳು, ಸುಳಿವುಗಳು, ಎಲ್ಲವನ್ನು ಒಳಗೊಂಡಿರುತ್ತದೆ!! ವಾರದ ಅಂಕಣಗಳು, ನಿತ್ಯದ ಅಂಕಣಗಳು, ಸಿನಿಮಾ, ಉದ್ಯೋಗಪುಟಗಳಲ್ಲೂ ಅಂಕಣಗಳು, ವ್ಯಕ್ತಿತ್ವ ವಿಕಾಸನಕ್ಕಾಗಿಯೇ ಅಂಕಣಗಳು... ಅಂಕಣಗಳು ಹೊಸ ರೂಪ ಪಡೆದದ್ದು ನಿಜ. ಬಣ್ಣದ ಸೀರೆ ಉಟ್ಟು ತಂತ್ರಜ್ಞಾನದ ರವಿಕೆ ತೊಟ್ಟು ಅಂದ ಚಂದದ ಮೇಕ್-ಅಪ್ ಧರಿಸಿ ಅನುಭವದ ರಸ ಸಾರ ಕೊಡಲು ಬಂದ ಈ ಅಂಕಣಾoಗನೆಯನ್ನು ಕಂಡು ಓದುಗರು thrill ಆದದ್ದು ನಿಜ. ಆದರೆ...

ಆದರೆ, ಯವ್ವನ ಕಳೆದು ಮುಪ್ಪು ಅಡರುವಂತೆ ಅಂಕಣಗಳು ಹೊಳಪು ಕಳೆದುಕೊಳ್ಳುತ್ತಿವೆಯೇ? ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೇ ಅಂಕಣಗಳು ಈಗೀಗ ಯಾರನ್ನು ಮುಟ್ಟುತ್ತಿವೆ? ಅಂಕಣಗಳು ನಿಜವಾಗಿ ಅಂಕಣಗಳಾಗಿವೆಯೇ? ತಾಜಾತನವನ್ನು ಉಳಿಸಿಕೊಳ್ಳುತ್ತಿವೆಯೇ? ನಿಜವಾಗಿ ಓದುಗ ಅಂಕಣಕ್ಕಾಗಿ ಕಾಯುತ್ತಾನೆಯೇ? ತಾವು ಯಾರಿಗಾಗಿ ಬರೆಯುತ್ತಿದ್ದೇವೆ, ಏನು ಬರೆಯುತ್ತಿದ್ದೇವೆ, ಯಾಕಾಗಿ ಬರೆಯುತ್ತಿದ್ದೇವೆ ಎಂಬುದನ್ನು ಅಂಕಣಕಾರರು ಯೋಚಿಸುತ್ತಿದ್ದಾರೆಯೇ?

ಒಬ್ಬ ಕ್ರಿಕೆಟ್ ಆಟಗಾರ ಸತತ ಐದಾರು ಮ್ಯಾಚ್ ನಲ್ಲಿ ರನ್ ಹೊಡೆಯದಿದ್ದರೆ ಪಾಪ! ಅವನನ್ನು ಮನಬಂದಂತೆ ಬೈಯುತ್ತೇವೆ. ಟೀಂ ನಿಂದ ಕಿತ್ತುಹಾಕಬೇಕು ಎನ್ನುತ್ತೇವೆ. ಹಾಡುಗಾರ ತನ್ನ ವಯೋಧರ್ಮಕ್ಕೆ ತಲೆಬಾಗುತ್ತಿದ್ದಾಗ ಶಕ್ತಿ ಕುಂದಿ ಶ್ರುತಿ ತಪ್ಪಿದರೆ, ಆತ ಸ್ವಯಂ ನಿವೃತ್ತಿ ಪಡೆಯಬೇಕು 'ಕೇಳನೋ ಹರಿ, ತಾಳನೋ' ಎಂದು ಸಂಗೀತ ವಿಮರ್ಶಕರು ಬರೆದುಬಿಡುತ್ತಾರೆ. ಲೋಕಾರ್ಪಣೆಗೊಳ್ಳುವ ಪುಸ್ತಕಗಳ ಬಗ್ಗೆ ಪುಟಗಟ್ಟಲೆ ವಿಮರ್ಶೆಗಳು ಬರುತ್ತವೆ. ಮಾಧ್ಯಮ ಸಾಗುತ್ತಿರುವ ಬಗೆ ವಿವರಿಸಲು ನೂರಾರು ಬ್ಲಾಗ್ ಗಳು, ಚರ್ಚೆಗಳು, ಲೇಖನಗಳು, ಮಂಥನಗಳು ನಡೆದಿವೆ. ಆದರೆ ಈ ಅಂಕಣ ಸಾಹಿತ್ಯ ಯಾರ ಕೈಗೂ ಸಿಗದೇ ನುಸುಳಿ ಹೋಗುತ್ತಿದೆ.

ಸಾರವೇ ಇಲ್ಲದ ಅಂಕಣಗಳು ಹೆಚ್ಚಾಗುತ್ತಿವೆ. 'ನಾನು' ಕೇಂದ್ರಿತ ಅಂಕಣಗಳೇ ಹೆಚ್ಚಾಗುತ್ತಿವೆ. ಸಾಮಾಜಿಕ ವಿಷಯಗಳನ್ನು ಹೊತ್ತ ಅಂಕಣಗಳು ಮಾಯವಾಗುತ್ತಿವೆ. ತಾನು ಓದಿದ ಪುಸ್ತಕ. ತಾನು ಹೋದ ಸಭೆ-ಸಮಾರಂಭ, ತನ್ನ ಸ್ನೇಹಿತರ ಮನೆಗೆ ಪಾರ್ಟಿಗೆ ಹೋಗಿದ್ದು, ಇಂತಹ ಸ್ವ-ಪುರಾಣಗಳು ಅಂಕಣಗಳಲ್ಲಿ ಕಾಣುತ್ತಿವೆ. ಇವು ಆತ್ಮಕಥನಗಳೂ ಅಲ್ಲ, ಗಟ್ಟಿತನವಿರುವ 'ನಾನೂ' ಅಲ್ಲ. ಸುದ್ದಿಯಲ್ಲಿರಬೇಕೆಂದು ಬಯಸಿ ವಿವಾದ ಮಾಡುವ ರಾಜಕಾರಣಿಯಂತೆ, ಪ್ರಚಾರದ ಆಸೆಗೆ gossip ಮಾಡುವ ನಟ ನಟಿಯರಂತೆ ವಾರಕ್ಕೊಮ್ಮೆ ತನ್ನ ಹೆಸರು ಪತ್ರಿಕೆಯಲ್ಲಿ ಬರಬೇಕು ಎನ್ನುವ ಮೋಹಕ್ಕೆ ಅಂಕಣಕಾರ ಬೀಳುತ್ತಿದ್ದಾನೆ. ಅಂಕಣ, ವಿಷಯವನ್ನು ಬಿಟ್ಟು ಅಡ್ಡದಾರಿ ಹಿಡಿಯುತ್ತದೆ. ಅಂಕಣ ಒಂದು ಮೋಹಕ್ಕೆ ತಿರುಗಿದಾಗ ಸಂಪಾದಕರೂ ಏನೂ ಮಾಡಲಾರರು.

ಮೊದಮೊದಲು ಪ್ರತಿ ಪದವನ್ನೂ ಓದುತಿದ್ದ ಓದುಗ, ನಂತರ, ವಾಕ್ಯಗಳ ಮೇಲೆ ಕಣ್ಣಾಡಿಸುತ್ತಾನೆ. ನಂತರ ಪ್ಯಾರ ಎಗರಿಸಿ ಓದುತ್ತಾನೆ. ಬರುಬರುತ್ತಾ ಶೀರ್ಷಿಕೆ ಓದಿಯೇ ಅಂಕಣಕಾರನನ್ನು ಗ್ರಹಿಸಿ ಬಿಡುತ್ತಾನೆ. ಓದುಗ ಶೀರ್ಷಿಕೆ ಕೂಡ ಓದಲಾರದ ಮಟ್ಟಕ್ಕೆ ಬರುವ ಮೊದಲು ಅಂಕಣಕಾರ ಎಚ್ಚೆತ್ತುಕೊಂಡರೆ ಒಳಿತು.
ಸಂಪಾದಕರು ಅವರನ್ನು ತಮ್ಮ ಪತ್ರಿಕೆಗೆ ಬರೆಸಲು ಎಷ್ಟು ಶ್ರಮ ಪಡುತ್ತಾರೋ ಅವರನ್ನು ಪತ್ರಿಕೆಯಿಂದ ಬಿಡಿಸಲೂ ಕೂಡ ಅಷ್ಟೇ ಶ್ರಮ ಪಡಬೇಕಾಗುತ್ತದೆ. ಸರಸ ಸಲ್ಲಾಪ, ಪ್ರಲಾಪಕ್ಕೆ ತಿರುಗಿ ಬಿಡುತ್ತದೆ. ಅಂಕಣಕಾರ ಇನ್ನು ಹದಿನಾರು ಅಂಕಣ ಬರೆದರೆ 'ಐದನೇ ಪುಸ್ತಕ' ಸಿದ್ಧ ಎಂದು ಪ್ರಕಾಶಕರ ಮನೆ ಅಲೆಯುತ್ತಿರುತ್ತಾನೆ, ಸಂಪಾದಕ ಸುಸ್ತಾಗಿರುತ್ತಾನೆ, ಓದುಗ ಉಕ್ಕಿ ಬರುವ ನಗು ತಡೆಯುತ್ತಿರುತ್ತಾನೆ.

ಕೆಲವೊಮ್ಮೆ ಸಂಪಾದಕರೂ ತಮ್ಮ ಸ್ವಹಿತಕ್ಕೆ, ಅಪೇಕ್ಷಿತ ಲಾಭಗಳಿಗೆ, ಸ್ನೇಹಿತರಿಗೆ ಪ್ರಚಾರ ಕೊಡುವುದಕ್ಕೆ, ಅಂಕಣಕಾರರಿಗೆ ಪ್ರೋತ್ಸಾಹಿಸುವುದು ಉಂಟು. ಅಂಕಣಗಳು ವಿಷಯ ಪ್ರಧಾನವಾದಾಗ ಮೂಡಿ ಬರುವ ರೀತಿಯೇ ಬೇರೆ. ಬೆಂಗಳೂರಿನ ಬಗ್ಗೆ ಪತ್ರಿಕೆಯೊಂದರಲ್ಲಿ ಅಂಕಣ ಮೂಡಿ ಬಂತು. ಸಂಗೀತದ ರಾಗಗಳ ಬಗ್ಗೆ, ಸುದ್ದಿ ಮನೆಯ ವಿಚಾರಗಳನ್ನು ತಿಳಿಸುವ ಬಗ್ಗೆ, ವಿಜ್ಞಾನಿಗಳ ಜೀವನ ಚರಿತ್ರೆ, ಮರೆಯಾದ ಲೇಖಕಿಯರು, ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀ ವಿಚಾರಧಾರೆ, ಸಾಹಿತ್ಯ ನಡೆದು ಬಂದ ದಾರಿ, ಇಂತಹ ಅಂಕಣಗಳು ನಿರಂತರ ಕುತೂಹಲ ಉಳಿಸಿಕೊಳ್ಳುತ್ತವೆ. ಬರೆಯುವವ ಯಾರೇ ಇದ್ದರೂ ವಿಷಯದ ಸೆಳೆತ ಅಲ್ಲಿರುತ್ತದೆ. ರಾಜಕೀಯ ಅಂಕಣಗಳು ಪ್ರಸ್ತುತತೆ ಇಂದ ಜೀವಂತಿಕೆ, ಕಾಪಾಡಿಕೊಳ್ಳುತ್ತವೆ. ಆದರೆ ಕೆಲವು ಅಂಕಣಗಳು ಸ್ಟಾರ್-ಗಿರಿ ಇಂದಲೇ ಓಡಬೇಕು. ಕನ್ನಡ ಬಾರದ ನಟ-ನಟಿಯರನ್ನು ಆರಿಸಿ, ಕರೆಸಿ, dubbing ಕೊಟ್ಟು ಪಾತ್ರ ಮಾಡಿಸಿದ ಹಾಗೇ. ಅವರಿಗೆ ಅಕ್ಷರ ಗೊತ್ತೋ, ಬರೆಯಲು ಬರುತ್ತದೋ, ಇಲ್ಲವೋ, ಕೇಳುವ ಹಾಗೆಯೇ ಇಲ್ಲ. ಮತ್ತೆ ಕೆಲವರು ಬರೆಯುವ/ ಓದುವ ಗೋಜು ಬೇಡ ಎಂದು ನಿರೂಪಣೆಗೆ ಒಗ್ಗಿಕೊಳ್ಳುತ್ತಾರೆ. ಅವರು ಹೇಳುತ್ತಾರೆ, ಮತ್ತೊಬ್ಬರು ಬರೆಯುತ್ತಾರೆ.

ಆದರೆ, ವಿಷಾದವೆಂದರೆ ಅಂಕಣಕಾರರು 'ಖಾಲಿ' ಆಗುವುದು. ಅದಕ್ಕಿಂತ ಇನ್ನೂ ದುಃಖದ ಸಂಗತಿ ಎಂದರೆ ತುಂಬಿಕೊಳ್ಳದಿರುವುದು. ಅಂಕಣಗಳು ಚನ್ನಾಗಿ ಮೂಡಿ ಬರಬೇಕಾದರೆ ಪತ್ರಿಕಾ ಸಂಪಾದಕರು ಒಬ್ಬ ಅಂಕಣಕಾರನಿಗೆ 'ನಿರ್ದಿಷ್ಟ ಅವಧಿಗೆ' ಮಾತ್ರ ಬರೆಯಲು ಹೇಳಬೇಕು. ವಿಷಯವನ್ನು ಸೂಚಿಸಬೇಕು. ಬಿಡುಗಡೆಯಾಗುವ ಪುಸ್ತಕಗಳ ವಿಮರ್ಶೆ, ಟಾಪ್ ಟೆನ್ ಬರುವ ಹಾಗೆ, TV ಗಳಲ್ಲಿ serial ಗಳಿಗೆ TRP ಇದ್ದಹಾಗೆ, ಚಿತ್ರಗೀತೆಗಳಲ್ಲಿ ಸೂಪರ್ ಹಿಟ್ ಇದ್ದ ಹಾಗೆ, ಎಲ್ಲ ಪತ್ರಿಕೆಗಳ ಎಲ್ಲ ಅಂಕಣಗಳ ಮೌಲ್ಯ ಮಾಪನ ನಡೆಯಬೇಕು. ಟಾಪ್ ಟೆನ್ ಅಂಕಣಗಳು ಯಾವುವು ಎನ್ನುವಂಥ ಚರ್ಚೆಗಳು ನಡೆಯಬೇಕು. ಆಗ ಅಂಕಣಕಾರರು ಮತ್ತು ಸಂಪಾದಕರು ಎಚ್ಚೆತ್ತುಕೊಳ್ಳುತ್ತಾರೆ. ಓದುಗ ನಿರಾಳವಾಗಿ ಉಸಿರಾಡುತ್ತಾನೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು?

ಈಗ ಹೇಳಿ, ಪತ್ರಿಕೆಗಳ ಪ್ರಸಾರ, ಅಂಕಣಗಳಿಂದ ಹೆಚ್ಚಾಗುತ್ತವೆಯೇ?

ಸರ್ಕಾರ ಮತ್ತು ಮಠಗಳು

ಇದು ಈ ವಾರದ ತಮ್ಮ ಅಂಕಣದಲ್ಲಿ ಸುಗತ ಶ್ರೀನಿವಾಸರಾಜು ಬರೆದ ಲೇಖನ. ಈ ಭಾನುವಾರ ಪತ್ರಿಕೆಗೆ ನಾನು ಅನುವಾದಿಸಿದ್ದೀನಿ. ಸರ್ಕಾರ ಮತ್ತು ಮಠಗಳ ಕುರಿತ ಈ ಲೇಖನ ಅತ್ಯಂತ ವಸ್ತುನಿಷ್ಠವಾಗಿದ್ದು ನನಗೆ ಬಹು ಮೆಚ್ಚುಗೆಯಾಯಿತು. 
ಸರ್ಕಾರ ಮತ್ತು ಮಠಗಳು 


ಯಡಿಯೂರಪ್ಪನವರ ಸಕಾರ ಇದನ್ನು ಯಾವುದೇ ಎಗ್ಗು ವಿನಾಯಿತಿಗಳಿಲ್ಲದೆ ಮಾಡುತ್ತಿದೆ. ಇದಕ್ಕೆ ಯಾವ ಶಾಸಕ ಸಂಸದರ ಅಥವಾ ಬುದ್ದಿಜೀವಿಗಳ ಅಡೆತಡೆಗಳೂ ಇದ್ದಂತಿಲ್ಲ. 2011-12ರ ರಾಜ್ಯ ಬಡ್ಜೆಟ್ನಲ್ಲಿ ಜಾತಿಯಾಧಾರಿತ ಮಠ ಮಾನ್ಯಗಳಿಗೆ, ದೇವಾಲಯಗಳಿಗೆ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಯತ್ಥೇಚ್ಛವಾದ ಅನುದಾನಗಳನ್ನು ಘೋಷಿಸಲಾಗಿದೆ. ಆದಿಚುಂಚನಗಿರಿಯ ಸಂಸ್ಕೃತ ವೇದ ಕೇಂದ್ರ, ರೇಣುಕಾ ಯಲ್ಲಮ್ಮ ದೇವಸ್ಥಾಣ ಮತ್ತು ದತ್ತಪೀಠಗಳಿಗೆ ತಲಾ 5 ಕೋಟಿ. ಉಡುಪಿ ಮಧ್ವಾಚಾರ್ಯ ಪದಕ ಕೇಂದ್ರ ಮತ್ತು ದಿಗಂಬರ ಜೈನ ಕೇಂದ್ರಗಳಿಗೆ ತಲಾ 2 ಕೋಟಿ. 

ಯಡಿಯೂರಪ್ಪ ಕುಮಾರಸ್ವಾಮಿ ಸರ್ಕಾರದಲ್ಲಿ ಉಪಮುಖ್ಯಮಮತ್ರಿ ಮತ್ತು ಹಣಕಾಸು ಸಚಿವರಾದಾಗಿನಿಂದಲೂ ಜಾತಿ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಹೀಗೆ ಅನುದಾನ ನೀಡುತ್ತಲೇ ಬಂದಿದ್ದಾರೆ. ಮೊದಲಿಗೆ ತಮ್ಮ ಸ್ವಜಾತಿ ಮಠ ಮಾನ್ಯಗಳನ್ನು ಸಂಪ್ರೀತಗೊಳಿಸಿದ ಅವರು ಬರಬರುತ್ತಾ ಸ್ವಜನಪಕ್ಷಪಾತದ ಆರೋಪ ಮಾಡದ ಹಾಗೆ ಬಾಯಿ ಮುಚ್ಚಿಸಲು ಇತರೆ ಜಾತಿಗಳ ಮಠ ಮಾನ್ಯಗಳಿಗೂ ಈ ಅನುದಾನವನ್ನು ವಿಸ್ತರಿಸಿದರು. ಬಡ್ಜೆಟರಿ ಅನುದಾನ ಕೇವಲ ಒಂದು ಭಾಗ. ಇನ್ನು ಭೂದಾನಗಳು ಮತ್ತು ಇವರ ಶೈಕ್ಷಣಿಕ ಸಂಸ್ಥೆಗಳಿಗೆ ಪಡೆದುಕೊಂಡಿರುವ ಸವಲತ್ತುಗಳು ಎಲ್ಲವನ್ನೂ ಲೆಕ್ಕಿಸಿದರೆ ಅದೊಂದು ಬೃಹತ್ ಮೊತ್ತವಾಗುವುದರಲ್ಲಿ ಅನುಮಾನವೇ ಇಲ್ಲ. ಬಹುಶಃ ಮಾಹಿತಿ ಹಕ್ಕು ಕಾಯ್ದೆಯಡಿ ಈ ಎಲ್ಲ ಮಾಹಿತಿಯನ್ನೂ ಪಡೆದರೆ ಸರ್ಕಾರ ಮತ್ತು ಧರ್ಮದ ನಡುವೆ ಕಿರಿದುಗೊಳ್ಳುತ್ತಿರುವ ಅಂತರ ಸ್ಪಷ್ಟವಾಗಿ ಗೋಚರಿಸುತ್ತದೆ. 

ಇದಲ್ಲದೆ ರಾಜ್ಯದ ಎರಡು ಪ್ರಮುಖ ಶ್ರೀಮಂತ ದೇವಾಲಯಗಳಾದ ಗೋಕರ್ಣ ಮತ್ತು ಉಡುಪಿ ಶ್ರೀಕೃಷ್ಣ ದೇವಸ್ಥಾನಗಳನ್ನು ಎರಡು ಮೇಲ್ಜಾತಿ ಮಠಗಳಿಗೆ ಒಪ್ಪಿಸಿರುವುದನ್ನೂ ಲೆಕ್ಕಿಸಬೇಕಿದೆ. ಇದು ಸಾಲದೆಂಬಂತೆ ಕಳೆದ ವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಸರಕಾರೀ ಆಸ್ಪತ್ರೆಗಳನ್ನೇಕೆ ಮಠಗಳಿಗೊಪ್ಪಿಸಬಾರದು, ಆಗ ಅವು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವುದಲ್ಲದೆ ಜನರ ಕಷ್ಟಗಳಿಗೆ ತಕ್ಷಣವೇ ಸ್ಪಂದಿಸುತ್ತದೆ ಎಂದುಲಿದರು. ಬಹುಶಃ ಮುಂದಿನ ಯೋಜನೆ ಇದೇ ಇದ್ದು, ರೂಪುರೇಖೆಗಳು ರೂಪುಗೊಳ್ಳುತ್ತಿರಬಹುದು. ಮುಖಖ್ಯಮಂತ್ರಿಗಳು ಕೊಳದಲ್ಲಿ ಕಲ್ಲೆಸೆದು ಆಳ ನೋಡುತ್ತಿರಬಹುದು. 

ಇದಲ್ಲದೆ ಬಿಜೆಪಿಯ ಗುಪ್ತ ಹಿತಾಸಕ್ತಿಗಳು ಸಂಪುಟ ಧಾರ್ಮಿಕ ಅಲ್ಪಸಂಖ್ಯಾತರಾದ ಜೈನ, ಬೌರ್ದಧ ಮತ್ತು ಸಿಖ್ ಧಾರ್ಮಿಕ  ಸಂಸ್ಥೆಗಳನ್ನು ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆಯಡಿ ತರುವ ನಿರ್ಧಾರ ಮಾಡಿದಾಗ ಬಹಿರಂಗಗೊಂಡವು. ಈ ನಿರ್ಣಯದಿಂದ ಈ ಧಾರ್ಮಿಕ ಸಂಸ್ಥೆಗಳ ವ್ಯವಹಾರಿಕ ವಿವರಗಳು ಸರ್ಕಾರದ ಮುಜರಾಯಿ ಇಲಾಖೆಯ ಮೇಲುಸ್ತುವಾರಿಗೊಳಪಡುತ್ತದೆ. ರಾಜ್ಯದ ಎಲ್ಲ ಧಾರ್ಮಿಕ ಸಂಸ್ಥೆಗಳಿಗೂ ಇದು ಅನ್ವಯವಾಗುವುದೇ ಆದರೆ ಅದರಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ, ಆದರೆ ಸೋಜಿಗವೆಂದರೆ ಜಾತಿ ಮಠಗಳು ಮತ್ತು ದೇವಾಲಯಗಳನ್ನು ಇದರಿಂದ ಹೊರಗಿಡಲಾಗಿದೆ. ಇದು ಹಣಕಾಸು ವ್ಯವಹಾರವನ್ನು ಮೀರಿದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಡೆಸಿದ ಕಾರ್ಯಾಚರಣೆ. ಜೈನ, ಬೌದ್ಧ ಮತ್ತು ಸಿಖ್ಖರು ಪ್ರತ್ಯೇಕತೆಯನ್ನು ಉಳಿಸಿಕೊಳ್ಳುತ್ತಾರಾದರೂ ಅವರೆಲ್ಲರೂ ವಿಸ್ತೃತ ಹಿಂದೂ ಪರಿವಾರದ ಸದಸ್ಯರೇ ಎಂಬ ಸಂದೇಶ ಅಲ್ಲಿತ್ತು. ಆದರೆ ಈ ಕ್ರಮಕ್ಕೆ ಕೇಳಿಬಂದ ವಿರೋಧದ ಹಿನ್ನೆಲೆಯಲ್ಲಿ ಇದನ್ನು ಹಿಂತೆಗೆದುಕೊಳ್ಳಲಾಯಿತು. ಕರ್ನಾಟಕದಲ್ಲಿ ಬಹು ದಲಿತರು ಬೌದ್ಧ ಮತಕ್ಕೆ ಮತಾಂತರ ಆಗಿರುವುದರಿಂದ ಚುನಾವಣೆಯ ಲೆಕ್ಕಾಚಾರಗಳು ಏರುಪೇರಾಗುವ ಭಯವಿದ್ದಿತು ಅಲ್ಲಿ. 

ಜಾತ್ಯಾತೀತ ಪಕ್ಷಗಳೆನಿಸಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೇಕೆ ಏಕೆ ಇದನ್ನು ಪ್ರತಿಭಟಿಸುತ್ತಿಲ್ಲ? ಸಂಕುಚಿತ ಜಾತಿ ಆಸಕ್ತಿಗಳನ್ನು ಮುಖ್ಯವಾಹಿನಿಗೆ ತರುತ್ತಿರುವುದನ್ನು ಏಕೆ ತಡೆಯುತ್ತಿಲ್ಲ? ಸರ್ಕಾರ ಮತ್ತು ಮಠಮಾನ್ಯಗಳ ನಡುವಿನ ಆರೋಗ್ಯಕರ ಅಂತರವನ್ನು ಇಲ್ಲವಾಗಿಸುವ ಹುನ್ನಾರವನ್ನು ಅವರು ಏಕೆ ಸಹಿಸಿದ್ದಾರೆ? ಲಿಂಗಾಯತ ಮಠಾಧೀಶರ ಯಡಿಯೂರಪ್ಪನವರ ಪರಾಕನ್ನು ಅವರೇಕೆ ತಕ್ಕಷ್ಟು ವಿರೋಧಿಸಿಯೇ ಇಲ್ಲ? ಯಡಿಯೂರಪ್ಪನವರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಾಗ ಅವರ ಕುರ್ಚಿ ಉಳಿಸಲು ಇದೇ ಲಿಂಗಾಯತ ಮಠಾಧೀಶರು ತಮ್ಮ ಕಾವಿ ನಿಲುವಂಗಿಗಳೊಂದಿಗೆ ರಸ್ತೆಗಿಳಿದಿರಲಿಲ್ಲವೆ? ಮಠಮಾನ್ಯಗಳು ಸರ್ಕಾರದ ಅಂತಃಸಾಕ್ಷಿಯನ್ನು ಹಿಡಿದಿಡಬೇಕೋ ಇಲ್ಲ ಸರ್ಕಾರವನ್ನು ನಿಯಂತ್ರಿಸಬೇಕೋ? ಇಷ್ಟರಮಟ್ಟಿಗೆ ಕೃಪಾಪೋಷಿತರಾಗಿರುವ ಈ ಮಠಮಾನ್ಯಗಳು ಎಂದಿಗಾದರೂ ಸತ್ಯ ನುಡಿಯುತ್ತವಾ? 

ಸ್ವಯಂಘೋಷಿತ ಜಾತ್ಯಾತೀತ ಶಕ್ತಿಗಳು ಇದರ ವಿರುದ್ಧ ತಕ್ಕಮಟ್ಟಿನ ವಿರೋಧ ವ್ಯಕ್ತಪಡಿಸದುದಕ್ಕೆ ಕಾರಣ ಯಡಿಯೂರಪ್ಪನ ಬಗ್ಗೆ ಹುಟ್ಟೆಯುರಿ, ಆತನಿಗಿರುವಷ್ಟು ಮಠಮಾನ್ಯಗಳ ಬೆಂಬಲ ಆತನ ಬದಲಿಗೆ ತಮಗಿದ್ದರೆ? ಪ್ರಜಾಪ್ರಭುತ್ವ, ಸಂವಿಧಾನವೇ ಮೂಲ ತತ್ವವಾದ ಸರ್ಕಾರದಲ್ಲಿ ಈ ಪಕ್ಷಗಳ ನಂಬಿಕೆ ಮತ್ತು ಬದ್ಧತೆ ಪ್ರಶ್ನಾರ್ಹವೇ. ಅವರ ವಿವೇಕ ಮತ್ತು ಅನುಭವದಿಂದ ಅವರು ತಿಳಿದುಕೊಂಡಿರುವುದಿಷ್ಟು, ಈ ಮಠಮಾನ್ಯಗಳಿಗೆ ನಡೆದುಕೊಳ್ಳುವ ಸಹಸ್ರಾರು ಬೆಂಬಲಿಗರಿದ್ದಾರೆ, ಇವರ ವೋಟುಗಳು ಈ ಮಠಮಾನ್ಯಗಳನ್ನು ಸಂಪ್ರೀತಗೊಳಿಸಿದ ಪಕ್ಷಕ್ಕೆ ಸಂದಾಯವಾಗುತ್ತದೆ. ಇಂದಿನಿಂದ ಅವರ ಗುರಿ ಯಡಿಯೂರಪ್ಪನಿಗಿಂತಲೂ ವಿನೂತನ ಬಗೆಯಲ್ಲಿ ಈ ವೋಟ್ಬ್ಯಾಂಕ್ ಅನ್ನು ತಮ್ಮದಾಗಿಸಿಕೊಳ್ಳುವುದು. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿನೂತನ ಬಗೆಗಳನ್ನು ಯಡಿಯೂರಪ್ಪ ಅನಾವರಣ ಮಾಡಿದ್ದಾರೆ. ಮಿಕ್ಕ ಪಕ್ಷಗಳು ತಮ್ಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ, ಯಡಿಯೂರಪ್ಪನವರನ್ನು ಮೀರಿಸಲು. ಇನ್ನು ಮುಂದೆ ಯಾವ ಪಕ್ಷ ಅಧಿಕಾರ ಹಿಡಿದರೂ ಇದೊಂದು ವಿಷಚಕ್ರವಾಗಿ ಮುಂದುವರೆಯಬಹುದೆಂಬ ಯೋಚನೆಯೇ ಭಯಾನಕ. ಜಾತಿಯಾಧಾರಿತ ರಾಜಕೀಯ ಬೆಂಬಲದ ಈ ರಾಜಕಾರಣದ ಮೂಲಧಾತುವನ್ನೇ ಬದಲಿಸುವುದಾದರೂ ಹೇಗೆ? ಜಾತ್ಯಾತೀತ ಶಕ್ತಿಗಳು ಯೋಚಿಸುತ್ತಿಲ್ಲ. 

70ರ ದಶಕದಲ್ಲಿ ದೇವರಾಜ ಅರಸರ ಉಗಮದಿಂದ ಇಂದಿನವರೆಗೂ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತ ಕೋಮುಗಳ ವೀರಪ್ಪ ಮೊಯಿಲಿ, ಬಂಗಾರಪ್ಪ ಇಲ್ಲ ಧರ್ಮಸಿಂಗರಂಥವರು ಮುಖ್ಯಮಂತ್ರಿಗಳಾಗುವ ಅವಕಾಶವಿತ್ತು. ಆದರೆ ಈಗ ರಾಜಕೀಯ ಚರ್ಚೆ ದಮನಿತ ಕೋಮುಗಳ ಸಶಕ್ತೀಕರಣದ ಬಗೆಗಲ್ಲದೆ ಮೇಲ್ಜಾತಿಗಳಾದ ಲಿಂಗಾಯತ ಮತ್ತು ಒಕ್ಕಲಿಗರ ನಡುವಿನ ಅಧಿಕಾರ ಕಚ್ಚಾಟವೇ ಆಗಿದೆ. ಸಹಜವಾಗಿಯೇ ಇದಕ್ಕೆ ವೇದಿಕೆಯೊದಗಿಸುವುದು ಇವರ ಜಾತಿ ಮಠ ಸಂಸ್ಥೆಗಳು. ಇವರೀರ್ವರಲೊಬ್ಬರು ಅಧಿಕಾರ ಹಿಡಿಯುತ್ತಾರೆ. ಇದೊಂದು ಬೈನರಿ ಆಟ. ನಮ್ಮ ರಾಜಕೀಯಕ್ಕೆ ಮೂರನೇ ಆಯಾಮವೇ ಇಲ್ಲ, ಒಂದೊಮ್ಮೆ ಸಾಧ್ಯವಾದರೂ ಅದು ಇವರೀರ್ವರಲೊಬ್ಬರ ಕೀಲಿಗೊಂಬೆಯೇ. ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದ ಕೆ.ಎಸ್.ಈಶ್ವರಪ್ಪ, ಯಡಿಯೂರಪ್ಪ ಬರೀ ಲಿಂಗಾಯತ ಸಮುದಾಯವನ್ನು ಓಲೈಸುತ್ತಿದ್ದಾರೆ ಎಂದು ಪಕ್ಷದ ಹೈಕಮಾಂಡ್ಗೆ ದೂರಿದ್ದಾರೆನ್ನಲಾಗಿದೆ. ಒಂದು ವಿಹ್ವಲತೆ ಇರುವುದು ದಿಟವೇ ಆದರೂ, ಅದು ಸರಿ ಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್ನ ಎಐಸಿಸಿ ಪುನಾರಚನೆಯನ್ನೇ ತೆಗೆದುಕೊಳ್ಳಿ, ರಾಜ್ಯದಿಂದ ಎಐಸಿಸಿಗೆ ಶಾಶ್ವತ ಆಹ್ವಾನಿತ 82 ವರ್ಷದ ಎಂ.ವಿ.ರಾಜಶೇಖರನ್. ಕಾರಣ: ಅವರು ಲಿಂಗಾಯತರು ಮತ್ತು ಕಾಂಗ್ರೆಸ್ ಈ ಸಮುದಾಯಕ್ಕೆ ವಿರೋಧಿಯಲ್ಲ ಎಂಬ ಸಂದೇಶ ರವಾನೆಯಾಗಬೇಕು. 

ಕಳೆದ ಮೂರು ದಶಕಗಳಲ್ಲಿ ಕರ್ನಾಟಕದಲ್ಲಿ ವಿಶಿಷ್ಟವಾದುದೊಂದು ಸಾಮಾಜಿಕ ಬದಲಾವಣೆ ನಡೆಯುತ್ತಿದೆ. ಅನಾದಿಕಾಲದಿಂದಲೂ ತಮ್ಮ ಮಠಗಳ ಮೂಲಕವೇ ಕಾರ್ಯನಿರ್ವಹಿಸುತ್ತಿದ್ದ ಬ್ರಾಹ್ಮಣ ಲಿಂಗಾಯತರಲ್ಲದೆ, 80ರ ದಶಕದಿಂದೀಚೆಗೆ ಹಿಂದುಳಿದ ವರ್ಗಗಳೂ ಕೂಡ ತಮ್ಮ ಜಾತಿ ಮಠಗಳನ್ನು ಸ್ಥಾಪಿಸುತ್ತಿವೆ. ವ್ಯವಸ್ಥಿತ ಸಾಂಸ್ಥಿಕ ಧರ್ಮದ ಪ್ರಯೋಜನಗಳನ್ನು ಅವರು ಬಿಡಲೊಲ್ಲರು. ಈ ಪ್ರಯೋಗ ಅನೂಹ್ಯ ಹಂತಗಳವರೆಗೆ ಎಳೆಯಲ್ಪಟ್ಟು ದಲಿತರೂ ಕೂಡ ತಮ್ಮದೇ ಮಠಗಳನ್ನು ಸ್ಥಾಪಿಸಿ ಮಠಾಧೀಶರನ್ನು ನೇಮಿಸಿದ್ದಾರೆ. ಆದರೆ ವ್ಯಂಗ್ಯವೆಂದರೆ ಈ ಮಠಗಳ ಮೂಲಕ ದಲಿತ ಜ್ಞಾನ ಆಯೋಗಗಳು ಮತ್ತು ಲೋಕದೃಷ್ಟಿಗಳೇನೂ ಮುಖ್ಯವಾಹಿನಿಗೆ ಬರುತ್ತಿಲ್ಲ, ಬದಲಿಗೆ ಈ ಮಠ ಮತ್ತು ಮಠಾಧೀಶರು ವೈದಿಕ ಇಲ್ಲ ಶರಣ ಸಂಪ್ರದಾಯಗಳ ತದ್ರೂಪುಗಳಾಗಿ ತಯಾರಾಗುತ್ತಿದ್ದಾರೆ. ನಿಧಾನವಾಗಿ ಇವರು ತಮ್ಮ ಪ್ರತ್ಯೇಕ ವ್ಯಕ್ತಿತ್ವವನ್ನು ಬಲಿಕೊಡುತ್ತಿದ್ದಾರೆ, ಯಾವುದೋ ಪುರುಷಾರ್ಥಕ್ಕಲ್ಲ, ಬದಲಿಗೆ ಹೊನ್ನು, ಮಣ್ಣು ಮತ್ತು ರಾಜಕೀಯ ಸಾಮೀಪ್ಯಕ್ಕಾಗಿ. ಈ ಏಕರೂಪೀಕರಣವೇ ತಕ್ಕಡಿಯನ್ನು ವಾಲಿಸಿರುವುದು. 

ಸರ್ಕಾರ ಮತ್ತು ಧರ್ಮದ ಕುರಿತು ವಿಸ್ತಾರವಾಗಿ ಬರೆದಿರುವ ನನ್ನ ನೆಚ್ಚಿನ ಥಾಮಸ್ ಪೇಯ್ನ್ನ ನುಡಿಗಳು ಅತಿ ಕಠಿಣ. ಹಾಗಾಗಿ ರಾಲ್ಫ್ ಎಮರ್ಸನ್ನ ಸೌಮ್ಯ ಮಾತುಗಳಿಂದ ಈ ಲೇಖನವನ್ನು ಮುಗಿಸುತ್ತೇನೆ - 'ಸುಧಾರಣೆ ಧರ್ಮಗಳೊಳಗಿಂದ ಬರದಿದ್ದರೆ ಅವು ಗೊಡ್ಡಾಗುತ್ತವೆ.'

ಅರುಣಾ ಶಾನುಭಾಗ ಎಂಬ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರವಾಗಿ ನಮ್ಮ ಸಮಾಜ ಇಟ್ಟ ದಾಪುಗಾಲು



ಅರುಣಾ ಶಾನುಭಾಗ ಒಂದು ಪ್ರಶ್ನಾರ್ಥಕ ಚಿಹ್ನೆ. ನಮ್ಮ ಸಮಾಜಕ್ಕೆ, ಅದರಲ್ಲಿನ ಕ್ರೌರ್ಯಕ್ಕೆ, ಸೋಹನಲಾಲಲನ ವಿಕೃತಿಗೆ, ಆತನಿಗೆ ಸರಿಯಾದ ಶಿಕ್ಷೆಯನ್ನೂ ವಿಧಿಸಲಾಗದ ನಮ್ಮ ವ್ಯವಸ್ಥೆಗೆ, ಆಕೆಯನ್ನು ಗುಣಪಡಿಸಲಾಗದ ಅತ್ಯಾಧುನಿಕ ವೈದ್ಯಕೀಯ ಶಾಸ್ತ್ರಕ್ಕೆ, ಆ ದೇವರ ಅಸ್ತಿತ್ವಕ್ಕೆ, ಇದ್ದರೆ ಆತನ ನ್ಯಾಯಾನ್ಯಾಯ ವಿವೇಚನೆಗೆ, ಕರ್ಮ ಸಿದ್ಧಾಂತಕ್ಕೆ, ಜೀವನದ ಉದ್ದೇಶ ಮತ್ತು ಅರ್ಥಕ್ಕೆ, ಬದುಕು ಸಾವುಗಳ ನಮ್ಮ ಪರಿಕಲ್ಪನೆಗಳಿಗೆ, ನಮ್ಮ ಆತ್ಮಸಾಕ್ಷಿಗೆ..ಎಲ್ಲದಕ್ಕೂ ಆಕೆ ಪ್ರಶ್ನಾರ್ಥಕ ಚಿಹ್ನೆ. 38 ವರ್ಷಗಳ ಹಿಂದೆ ಮಾನಭಂಗಕ್ಕೊಳಗಾಗಿ ಜೀವಚ್ಛವವಾದ ಅರುಣಾ ಶಾನುಭಾಗಳಿಗೆ ದಯಾಮರಣ ನೀಡಬೇಕೆಂದು ಲೋಕಕ್ಕೆ ಅರುಣಳ ಕಥೆ ಹೇಳಿದ ಲೇಖಕಿ ಪಿಂಕಿ ವಿರಾನಿ ಉಚ್ಛನ್ಯಾಯಾಲಯದ ಮೆಟ್ಟಿಲು ಹತ್ತುವುದರೊಂದಿಗೆ ದಯಾಮರಣದ ಚರ್ಚೆ ಮತ್ತೆ ಶುರುವಾಗಿದೆ. 

ಸಾವು ಕಾಲದ ನಿಯಮ. ಅದು ಸದಾ ದಿಗ್ವಿಜಯಿ. ಅದರ ಮುಂದೆ ಎಲ್ಲರೂ ಸೋಲೊಪ್ಪುವವರೇ. ಸಹಜವಾಗಿ ಸಾವು ಬಂದು ಬದುಕನ್ನು ಸೋಲಿಸಿದರೆ, ಕೆಲವೊಮ್ಮೆ ಸಾವಿನ ಸೋಲಿನಲ್ಲಿ ಬದುಕಿನ ಸೋಲೂ ಅಡಗಿರುತ್ತದೆ.
ಮರತೇ ಹೇಂ ಆರ್ಜೂ ಮೈನ್ ಕೀ, 
ಮೌತ್ ಆತೀ ಹೈ ಪರ್ ನಹೀಂ ಆತೀ 
(i die everyday with a desire to die, but it takes its own time!). 
ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅರುಣಾ ಶಾನುಭಾಗ್ ಕುರಿತ ತಮ್ಮ ತೀರ್ಪನ್ನು ಮಿರ್ಜಾ ಘಾಲಿಬ್ನ ಈ ದ್ವಿಪದಿಯಿಂದ ಪ್ರಾರಂಭಿಸುತ್ತಾರೆ. ದಯಾಮರಣ ಎನ್ನುವುದನ್ನು ನಮ್ಮ ಸಮಾಜ ಒಪ್ಪುವುದು ಕಷ್ಟ. ಸಾಯುವವನಿಗೂ ನೀರುಣಿಸುವ ಸಂಸ್ಕೃತಿಯ ನಾಗರೀಕತೆಗೆ ದಯಾಮರಣ ಬೆಚ್ಚಿಬೀಳಿಸಬಹುದು. ಆದರೆ ದಯಾಮರಣ ನಾಗರೀಕತೆಯ ನಿಸ್ಸಾಹಯಕ ಹತಾಶೆಯ ಅಭಿವ್ಯಕ್ತಿ. ವಾಸ್ತವತೆಗಳ ನೆಲೆಗಟ್ಟಿನಲ್ಲಿ ನಾವು ಇಂದು ಇಚ್ಛಾಮರಣ ಮತ್ತು ದಯಾಮರಣಗಳನ್ನು ವಿಶ್ಲೇಶಿಸುವ ಅಗತ್ಯ ಎಷ್ಟಾದರೂ ಇದೆ. ಅದಕ್ಕೆ ಅರುಣಳ ತೀರ್ಪು ಸಮರ್ಥ ವೇದಿಕೆಯನ್ನೊದಗಿಸುತ್ತದೆ. 

ಈಗ ಬಿಂಬಿತವಾಗಿರುವಂತೆ ಉಚ್ಛನ್ಯಾಯಾಲಯ ದಯಾಮರಣವನ್ನು ಸಂಪೂರ್ಣ ತಳ್ಳಿಹಾಕಿಲ್ಲ. ಬದಲಿಗೆ ಮೊಟ್ಟಮೊದಲ ಬಾರಿಗೆ ವಾಸ್ತವತೆಯ ನೆಲೆಗಟ್ಟಿನಲ್ಲಿ ನಮ್ಮ ನ್ಯಾಯಾಲಯ ಪರೋಕ್ಷ ದಯಾಮರಣಕ್ಕೆ ತನ್ನ ತಾತ್ವಿಕ ಒಪ್ಪಿಗೆ ಸೂಚಿಸಿದೆಯಷ್ಟೇ ಅಲ್ಲದೆ ಅದರ ಅಮಲಿಗೆ ಒಂದು ವ್ಯವಸ್ಥೆಯನ್ನೂ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಅರುಣಾ ಶಾನುಭಾಗ ಎಂಬ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರವಾಗಿ ನಮ್ಮ ಸಮಾಜ ಇಟ್ಟ ದಾಪುಗಾಲಿದು. ಈ ತೀರ್ಪು ಪ್ರತ್ಯಕ್ಷ ಮತ್ತು ಪರೋಕ್ಷ ದಯಾಮರಣಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಗುರುತಿಸುತ್ತದೆ. ಪ್ರತ್ಯಕ್ಷ ದಯಾಮರಣ ಅಂದರೆ ರೋಗಿಯನ್ನು ಸಾಯಿಸುವ ಉದ್ದೇಶದಿಂದ ವೈದ್ಯರೇ ವಿಷಯುಕ್ತ ಚುಚ್ಚುಮದ್ದನ್ನು ನೀಡುವುದು. ಇದು ನೆಥೆರ್ಲ್ಯಾಂಡ್ಸ್, ಸ್ವಿಟ್ಜರ್ಲ್ಯಾಂಡ್ ಮತ್ತಿತರ ಅನೇಕ ದೇಶಗಳಲ್ಲಿ ಕಾನೂನಿನ ಪ್ರಕಾರ ಸಮ್ಮತ. ಆದರೆ ವಿಶ್ವದ ಬಹುತೇಕ ದೇಶಗಳಲ್ಲಿ ಇದು ಕೊಲೆ, ಭಾರತದಲ್ಲೂ ಕೂಡ. ಇದನ್ನು ಯಾರೂ ಒಪ್ಪಲಾರರು. ಉಚ್ಛನ್ಯಾಯಾಲಯ ಕೂಡ ಇದನ್ನು ಎತ್ತಿಹಿಡಿದಿದೆ. ಈ ರೀತಿಯ ಪ್ರತ್ಯಕ್ಷ ಕ್ರಮವೇ ದಯಾಮರಣದ ಏಕೈಕ ವಿಧಾನ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಮನೆ ಮಾಡಿದೆ. ಆದರೆ ನ್ಯಾಯಾಲಯ ಮತ್ತೊಂದು ವಿಧಾನದ ದಯಾಮರಣವನ್ನು ಗುರುತಿಸುತ್ತದೆ. ಇದು ಪರೋಕ್ಷ. ರೋಗಿಯ ಸ್ಥಿತಿ ಉಲ್ಬಣಾವಸ್ಥೆಗೆ ಹೋದಾಗ ಚೇತರಿಸಿಕೊಳ್ಳುವ ಸಂಭವದ ನಂಬಿಕೆಯೇ ಇಲ್ಲದಾದಾಗ, ಜೀವ ಶವಗಳ ನಡುವಿನ ಆ ಹೋಯ್ದಾಟದ ನಡುವಿನ ಕ್ಷಣದಲ್ಲಿ life support systemಗಳ ಮುಖೇನ ಹೃದಯ, ಶ್ವಾಸಕೋಶ ಎಲ್ಲವನ್ನೂ ಯಂತ್ರಪ್ರತ್ಯಯಗೊಳಿಸಿ ಜೀವದ ಭ್ರಮೆಯನ್ನು ಮುಂದುವರೆಸುವ ನಮ್ಮ ಅತ್ಯಾಧುನಿಕ ವೈದ್ಯಕೀಯ ಶಾಸ್ತ್ರದ ಉಮೇದನ್ನು ತುಂಡರಿಸುವುದು. ಇದೂ ದಯಾಮರಣವೇ ಅಲ್ಲವೆ? ಪ್ರತ್ಯಕ್ಷವಲ್ಲ ಪರೋಕ್ಷ. ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಇದು ಮಾನ್ಯ ಎಂದು ತೀರ್ಪಿತ್ತಿದೆ ನಮ್ಮ ಉಚ್ಛ ನ್ಯಾಯಾಲಯ. 

ಇದೇ ಕೋವಿನಲ್ಲಿ ಅರುಣಾ ಶಾನುಭಾಗರ ಪರೋಕ್ಷ ದಯಾಮರಣಕ್ಕೂ ಉಚ್ಛ ನ್ಯಾಯಾಲಯ ತಾತ್ವಿಕವಾಗಿ ಒಪ್ಪಿದೆ. ಆದರೆ ಈ ಕುರಿತು ಅರ್ಜಿ ಸಲ್ಲಿಸಿರುವ ಪಿಂಕಿ ವಿರಾನಿ ಅರುಣರ ಪರ ನಿರ್ಧಾರ ಕೈಗೊಳ್ಳಲು ಅನರ್ಹಳೆಂದೂ ಕುಟುಂಬದ ಅನುಪಸ್ಥಿತಿಯಲ್ಲಿ ಆಕೆಯನ್ನು ತಮ್ಮ ಮನೆಯೊಳಗೊಬ್ಬಳೆಂಬಂತೆ ಸತತ 38 ವರ್ಷಗಳಿಂದ ಆರೈಕೆ ಮಾಡಿಕೊಂಡು ಬಂದಿರುವ ಕೆಇಎಂ ಆಸ್ಪತ್ರೆಗೆ ಮಾತ್ರ ಆ ಅಧಿಕಾರವಿದೆಯೆಂದು ಹೇಳಿದೆ. ಸದ್ಯ ಕೆಇಎಂ ಆಸ್ಪತ್ರೆ ಅರುಣಾ ಶಾನುಭಾಗರಿಗೆ ದಯಾಮರಣ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ವಜಾಗೊಳಿಸಿದೆ. ಮುಂದೆಂದಾದರೂ ಕೆಇಎಂ ಆಸ್ಪತ್ರೆಯವರು ಅರುಣಾ ಶಾನುಭಾಗರಿಗೆ ದಯಾಮರಣ ನೀಡುವ ಬಗ್ಗೆ ತಮ್ಮ ಮನಸ್ಸು ಬದಲಿಸಿಕೊಂಡರೆ ಅವರು ಮಹಾರಾಷ್ಟ್ರದ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಮುಂದುವರೆಯಬಹುದೆಂದೂ ಹೇಳಿದೆ.

ಇದೇನೂ ನಮಗೆ ನೂತನ ಕಲ್ಪನೆಯಲ್ಲ. ನೀವೇ ಯೋಚಿಸಿ. ಇಂದು ಸರ್ಕಾರಿಯೂ ಸೇರಿದಂತೆ ಮುಖ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗದ ಉಲ್ಬಣಾವಸ್ಥೆ ಒಂದು ಹಂತ ಮೀರಿದಂತೆ, ಜೀವದ ಆಸೆ ಹೋಗುತ್ತಿದ್ದಂತೆಯೇ ವೈದ್ಯರೇ ಕೈಯೆತ್ತಿಬಿಡುತ್ತಾರೆ. ಇನ್ನು ಇಲ್ಲಿ ಮಾಡುವುದೇನೂ ಇಲ್ಲ. ಎಷ್ಟು ದಿನ ಇದ್ದರೆ ಅಷ್ಟು ದಿನ ಇರಲಿ. ಮನೆಯಲ್ಲಿಯೇ ಪ್ರಾಣ ಹೋಗಲಿ. ಕರೆದುಕೊಂಡು ಹೋಗಿ ಎಂದು ಸಾಗ ಹಾಕುವುದಿಲ್ಲವೆ? ಇದನ್ನು ಎಷ್ಟು ಜನ ಒಪ್ಪಿ ನಡೆದಿಲ್ಲ? ಇನ್ನು ಜೀವ ಶವದ ನಡುವಿನ ಹೊಯ್ದಾಟದ ಕ್ಷಣವನ್ನು ಸ್ಥಂಬೀಭೂತಗೊಳಿಸಿ ದೇಹವನ್ನು ಯಂತ್ರಪ್ರತ್ಯಯಗೊಳಿಸಿ ಸಾವನ್ನು ಮುಂದೂಡುವುದೂ, ಒಂದು ಹಂತದ ನಂತರ ಸೋಲೊಪ್ಪಿಕೊಂಡು ಸದ್ದಿಲ್ಲದೆ ಈ ಯಂತ್ರಗಳನ್ನು ಸ್ವಿಚ್ ಆಫ್ ಮಾಡಿಬಿಡುವುದೂ ನಡೆದಿಲ್ಲವೆ? ಯತ್ಥೇಚ್ಛವಾಗಿ ನಡೆದಿದೆ. ಇದೇ ಪರೋಕ್ಷ ದಯಾಮರಣ. ಕೆಲವೊಂದು ವಿಶಿಷ್ಟ ಸಂದರ್ಭಗಳಲ್ಲಿ ಇದನ್ನು ನ್ಯಾಯಾಲಯ ಮಾನ್ಯಗೊಳಿಸಿದೆ. ಇದರ ಅಮಲಿಗೆ ಒಂದು ವ್ಯವಸ್ಥೆಯನ್ನೂ ಸ್ಥಾಪಿಸಿದೆ. ಇನ್ನು ಮುಂದೆ ಈ ರೀತಿಯ ದಯಾಮರಣವೂ ಅನಿರ್ಭಂಧಿತವಲ್ಲ. ಹೀಗೆ ವೈದ್ಯಕೀಯವನ್ನು ಹಿಂಪಡೆಯುವ ಮೊದಲು ರೋಗಿ ಅಥವಾ ರೋಗಿಯ ಸಂಬಂಧಿಗಳು ಹೈಕೋರ್ಟ್ರ್ನಲ್ಲಿ ಅರ್ಜಿ ಸಲ್ಲಿಸಬೇಕು. ಒಬ್ಬ ತಜ್ಞ ವೈದ್ಯ, ಮನೋರೋಗತಜ್ಞ ಮತ್ತೊಬ್ಬ ನರರೋಗತಜ್ಞರನ್ನೊಳಗೊಂಡ ವೈದ್ಯಕೀಯ ತಂಡ ರೋಗಿಯನ್ನು ಕೂಲಂಕುಷವಾಗಿ ಪರೀಕ್ಷಿಸಿ ರೋಗಿ ಚೇತರಿಸಿಕೊಳ್ಳುವ ಯಾವುದೇ ಆಸೆಯಿಲ್ಲದೆ ಪರೋಕ್ಷ ದಯಾಮರಣಕ್ಕೆ ಶಿಫಾರಸ್ಸು ಮಾಡಿದರೆ, ಸಂಬಂಧಿತ ಎಲ್ಲ ವ್ಯಕ್ತಿಗಳ ಅಭಿಪ್ರಾಯ ಕೇಳಿ ಹೈಕೋರ್ಟ್ ತೀರ್ಪು ನೀಡುತ್ತದೆ. ಅದರನ್ವಯವೇ ನಡೆದುಕೊಳ್ಳತಕ್ಕದ್ದು. ದಯಾಮರಣವನ್ನು ಕಾನೂನಿನಂತೆ ಮಾನ್ಯ ಮಾಡಲು ಇರುವ ವಿರೋಧಕ್ಕೆ ಇರುವ ಮತ್ತೊಂದು ಪ್ರಮುಖ ಕಾರಣ ಇದರ ದುರ್ಬಳಕೆಯ ಭಯ. ರೋಗಿಯ ಆಸ್ತಿಗೋ, ಹಣವ್ಯಯವನ್ನು ನಿವಾರಿಸುವ ದುರದ್ದೇಶದಿಂದಲೋ ಇದನ್ನು ಪ್ರಯೋಗಿಸಬಹುದು ಎಂದು. ಈಗ ಪ್ರತಿ ಪ್ರಕರಣವೂ ನ್ಯಾಯಾಲಯದ ವಿಮರ್ಶೆಗೊಳಪಡುವುದರಿಂದ ಇದನ್ನೂ ತಪ್ಪಿಸಬಹುದಾಗಿದೆ. ಇದು ಒಂದು ನೂತನ ವ್ಯವಸ್ಥೆ. ಶುರುವಿನಲ್ಲಿ ದೋಷಪೂರಿತವಾಗಿರುವುದೂ ದಿಟ. ಕಾಲದೊಂದಿಗೆ ಸಂಸ್ಥೀಕರಣಗೊಂಡ ಹಾಗೇ ಅದೂ ಪಕ್ವಗೊಳ್ಳುತ್ತದೆ.

ಈ ತೀರ್ಪು ಇದುವರೆಗೂ ಸದ್ದಿಲ್ಲದೆ ಅನಿರ್ಭಂಧಿತವಾಗಿ ಪಾಲಿಸಲಾಗುತ್ತಿದ್ದ ಒಂದು ಪ್ರಕ್ರಿಯೆಯನ್ನು ಕಟ್ಟುನಿಟ್ಟಿನ ನಿಬಂಧನೆಗಳಿಗೊಳಪಡಿಸಿ  ಅದನ್ನು ಮಾನ್ಯ ಮಾಡಿದೆ. ಹುಸಿ ಭಾವುಕತೆಗಳನ್ನು ತೊಡೆದು ವಾಸ್ತವಿಕ ನೆಲೆಗಟ್ಟಿನಲ್ಲಿ ನಿಂತು ಇದನ್ನು ವಿಶ್ಲೇಷಿಸಿದಾಗ ಈ ಕ್ರಮ ಒಂದು ಸ್ವಾಗತಾರ್ಹ ದಾಪುಗಾಲು ಎಂದೇ ಎನಿಸುತ್ತದೆ. ನಾನು ಅತ್ಯಂತ ಪ್ರಜ್ಞಾಪೂರ್ವಕವಾಗಿಯೇ ಭಾವುಕತೆಯನ್ನು ಹುಸಿ ಎಂದು ಕರೆದಿದ್ದೇನೆ. ನಮ್ಮಲ್ಲಿ ಒಂದು ಸಾವು ಎಷ್ಟು ಭಾವುಕವೋ ಅಷ್ಟೇ ನಿರ್ಭಾವುಕ ವಾಸ್ತವವಾದಿಯೂ ಹೌದು. ಉಚ್ಛ ನ್ಯಾಯಾಲಯ ಇಂದು ಹಾಕಿಕೊಟ್ಟಿರುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅಮಲು ಮಾಡಿದರೆ ನಮ್ಮಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಎಷ್ಟೋ ಕೊಲೆ, ಸುಲಿಗೆಗಳನ್ನು ತಡೆಯಬಹುದು. ಇಂದಿನ ನಮ್ಮ ವೈದ್ಯಕೀಯ ಕ್ಷೇತ್ರ ಸೇವಾ ನಿರತ ಮಾತ್ರವಲ್ಲ. ಅದೊಂದು ಬೃಹತ್ ಉದ್ಯಮ. ರೋಗಿಗಳಲ್ಲೂ ವರ್ಗಬೇಧ ಮತ್ತು ಅದರಂತೆ ಬೇಧ ಎರಡೂ ಸಾಮಾನ್ಯ. ಇಂದು ಒಬ್ಬ ಶ್ರೀಮಂತನೊಬ್ಬ ಸಾವಿನ ದವಡೆಗೆ ಸಿಕ್ಕು ಖಾಸಗೀ ಆಸ್ಪತ್ರೆಗೆ ಸೇರಿದರೆ ಜೀವದ ಯಾವುದೇ ಆಸೆಗಳಿಲ್ಲದ್ದಾಗ್ಯೂ ಮನುಷ್ಯ ಪ್ರಯತ್ನದ ಸೋಗಿನಲ್ಲಿ ಆತನ ದೇಹವನ್ನು ಯಂತ್ರಪ್ರತ್ಯಯಗೊಳಿಸಿ ಜೀವದ ಭ್ರಮೆ ಹುಟ್ಟಿಸಿ ಅಂತಿಮ ಕ್ಷಣವನ್ನು ಆದಷ್ಟೂ ಮುಂದೂಡುವುದು ಸುಲಿಗೆಯ ಮಾತಾಯಿತು. ಇನ್ನು ಅತ್ಯಂತ ಅಮಾನವೀಯವೆಂದರೆ ಬಡ ಮತ್ತು ಮಧ್ಯಮ ವರ್ಗದ ಪಾಡು. ಇನ್ನು ನಾವು ಮಾಡುವುದೇನೂ ಇಲ್ಲ, ಮನೆಯಲ್ಲಿಯೇ ಪ್ರಾಣ ಹೋಗಲಿ ಎಂದು ಕಳಿಸಿಕೊಡುವಾಗ ಬಹುಬಾರಿ ಅಲ್ಲಿರುವುದು ಕಾಂಚಾಣದ ಲೆಕ್ಕಾಚಾರ. ಅದನ್ನು ಒಪ್ಪಿ ಮನೆಗೆ ಕರೆದುಕೊಂಡು ಹೋಗಿ ನೆಂಟರಿಷ್ಠರನ್ನೆಲ್ಲಾ ಕರೆದು ರೋಗಿಯ ಸುತ್ತಲೂ ಕೂತು ಆತನನ್ನು ಕಳಿಸಿಕೊಡುವುದರಲ್ಲಿರುವುದು ಬಡತನದ ಅಸಹಾಯಕತೆ ಇಲ್ಲ ಮತ್ತೆ ಕಾಂಚಾಣದ ಲೆಕ್ಕಾಚಾರ. ದುಬಾರಿ life support system ಗಳ ಸ್ವಿಚ್ ಅನ್ನು ಆರಿಸುವಾಗಲೂ ಮನದಲ್ಲಿ ನಡೆಯುವುದು ಇದೇ ಅಸಹಾಯಕತೆಯ ಲೆಕ್ಕಾಚಾರಗಳು ಇಲ್ಲ ಒಂದು ನಿರ್ಭಾವುಕ ಸ್ವಾರ್ಥ. ಎಷ್ಟೋ ಬಾರಿ ಅಸಲು ರೋಗಿಯ ಸ್ಥಿತಿ ಸಂಪೂರ್ಣ ನಿರಾಶದಾಯಕವಾಗಿರದ ಸಾಧ್ಯತೆಗಳೂ ಇಲ್ಲದಿಲ್ಲ. 

ಇಂಥ ಕೊಲೆಗಳನ್ನು ಈ ನೂತನ ವ್ಯವಸ್ಥೆ ತಕ್ಕ ಮಟ್ಟಿಗೆ ತಡೆಯುತ್ತದೆ. ಈ ಸಂಪದ್ಭರಿತ ದೇಶದಲ್ಲಿ ಯಾವುದೇ ವ್ಯಕ್ತಿ ಚಿಕಿತ್ಸೆಗೆ ಹಣವಿಲ್ಲದ ಏಕೈಕ ಕಾರಣಕ್ಕೆ ಸಾಯಬಾರದು. ಅದಕ್ಕೆ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಗಟ್ಟಿಗೊಳ್ಳಬೇಕು. ನಿಯೋಲಿಬೆರಲ್ ಪಾಠ ಹೇಳುವ ಇದೇ ಅಮೆರಿಕಾ ಮತ್ತು ಯೂರೋಪಿಯನ್ ದೇಶಗಳಲ್ಲಿ ಸಾಮಾಜಿಕ ಭರವಸೆ ಯೋಜನೆಗಳಡಿ ಆರೋಗ್ಯ ಶ್ರೀಸಾಮಾನ್ಯನಿಗೂ ತಲುಪಿದೆ. ಅದನ್ನು ನಾವೂ ಮಾಡಬೇಕಿದೆ. ಅದು ದೀರ್ಘಕಾಲಿಕ ಪರಿಹಾರ. ಹೀಗೆ ಪರೋಕ್ಷ ದಯಾಮರಣಕ್ಕೆ ಬರುವ ಎಷ್ಟೋ ಪ್ರಕರಣಗಳಲ್ಲಿ ಆರ್ಥಿಕ ಮುಗುಟ್ಟು ಪ್ರಮುಖ ಕಾರಣವಾಗಿರುತ್ತದೆ. ಆರ್ಥಿಕ  ಮುಗುಟ್ಟಿನ ಏಕೈಕ ಕಾರಣದಿಂದ ಯಾವುದೇ ವ್ಯಕ್ತಿ ಸಾಯಬಾರದು. ತಮ್ಮನ್ನು ತಾವು ನೋಡಿಕೊಳ್ಳಲಾಗದ ಅಶಕ್ತರಿಗೆ ಸರ್ಕಾರವೇ ತಂದೆ. ಸರ್ಕಾರ ಇವರ ಆರೈಕೆಯನ್ನು ಕೈಗೆತ್ತಿಕೊಳ್ಳಬೇಕು. ನ್ಯಾಯಾಲಯಗಳೂ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಆಗ ಮಾತ್ರವೇ ಈ ವ್ಯವಸ್ಥೆ ಸಾರ್ಥಕವಾಗುತ್ತದೆ.

ಮತ್ತೊಂದು ಸ್ತರದಲ್ಲಿ ಇದು ಪ್ರಕೃತಿಯ ಎದುರು ಮಾನವನ ಮತ್ತು ಆತನ ನಾಗರೀಕತೆಯ ಕುಬ್ಜತೆಯನ್ನು ವಿನಮ್ರವಾಗಿ ಒಪ್ಪಿರುವ ತೀರ್ಪು. ಜೀವ ಶವದ ನಡುವಿನ ಹೋಯ್ದಾಟದ ಕ್ಷಣವನ್ನು ಸ್ಥಂಭೀಭೂತಗೊಳಿಸಿ, ಜೀವಕ್ಕೆ ಯಂತ್ರಪ್ರತ್ಯಯವನ್ನು ಹುಡುಕುವ, ಸಾವೆಂಬ ಪ್ರಕೃತಿಯನ್ನು ಗೆಲ್ಲುವ ಆಧುನಿಕ ವೈದ್ಯಕೀಯ ಶಾಸ್ತ್ರದ ಗರ್ವ, ಭ್ರಮೆಗಳ ಅರ್ಥ ಹೀನತೆಯನ್ನು ಗ್ರಹಿಸಿರುವ ತೀರ್ಪು. ನಮ್ಮ ಇಂದಿನ ಆಧುನಿಕ ವೈದ್ಯಕೀಯ ಶಾಸ್ತ್ರ ಜೀವನದ ಭ್ರಮೆಯನ್ನು ಲಂಬಿಸುತ್ತಿದೆಯೇ ಹೊರತು ಜೀವನದ ಗುಣಮಟ್ಟವನ್ನಲ್ಲ. ಅರುಣಾ ಶಾನುಭಾಗರ ವಿಷಯದಲ್ಲಾಗಿರುವುದೂ ಇದೇ ಅಲ್ಲವೆ?

ದಿನದ ಓದು - ಪಿಂಕಿ ಅಭಿಮತ ಮತ್ತು ಕೊವೂರ್ ಉಯಿಲು




ಅರುಣಾ ಶಾನುಭಾಗ್ ಪರ ಸುಪ್ರೀಂ ಕೋರ್ಟ್ನಲ್ಲಿ ದಯಾಮರನಕ್ಕಾಗಿ ಅರ್ಜಿ ಸಲ್ಲಿಸಿದ, ಅರುಣಳ ಕಥೆಯನ್ನು ಮೊದಲ ಬಾರಿಗೆ ಜಗತ್ತಿಗೆ ಹೇಳಿದ ಲೇಖಕಿ ಪಿಂಕಿ ವಿರಾನಿ ತೀರ್ಪಿನ ಬಗ್ಗೆ ಔಟ್ಲುಕ್ನಲ್ಲಿ ಬರೆದಿರುವ ಲೇಖನ. ಈ ಲೇಖನದಲ್ಲಿ ಪಿಂಕಿ ಕೆಇಎಮ್ ಆಸ್ಪತ್ರೆಯ ಹಲವಾರು ದೋಷಗಳನ್ನು ಅರುಣಳ ಬದುಕಿನ ದುರಂತವನ್ನೂ ಆ ದುರಂತವನ್ನು ಬಳಸಿಕೊಳ್ಳುತ್ತಿರುವ ವ್ಯವಸ್ಥೆಯ ಕ್ರೌರ್ಯವನ್ನೂ ಬೊಟ್ಟು ಮಾಡಿ ತೋರಿಸಿದ್ದಾರೆ. ಇದು ಅರುಣಳ ಇಂದಿನ ಬದುಕಿನ ನಿಜ ಕಥೆ....
You Are Herewith Sentenced To Life
Let Aruna die? No, with her alive, there’s more power, media attention. Hence, the politics of mercy in medicine.




ಈ ಕೆಳಗಿನದು ಪ್ರಖ್ಯಾತ ಮನೋವಿಜ್ಞಾನಿ ಮತ್ತು ನಾಸ್ತಿಕವಾದಿ ಡಾ. ಅಬ್ರಹಂ ಕೊವೂರ್ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದಾಗ ತಾವು ಕಡೆಯ ದಿನಗಳಲ್ಲಿ ಹಾಸಿಗೆ ಹಿಡಿದು ವೆಜಿಟೆಟಿವ್ ಅವಸ್ಥೆಗೆ ಸೇರಿಬಿಟ್ಟರೆ ಅನಾವಸರವಾಗಿ ವೈದ್ಯಕೀಯದ ಕ್ರೌರ್ಯವನ್ನು ತಮ್ಮ ಮೇಲೆ ಪ್ರಯೋಗಿಸದೆ ಒಂದಷ್ಟು ನಿದ್ರೆ ಮಾತ್ರೆ ಕೊಟ್ಟುಬಿಡಿ ಎಂದು ಅವರು ಪ್ರಾಣ ಬಿಡುವ ಕೆಲ ದಿನಗಳ ಹಿಂದೆ ಬರೆದಿಟ್ಟ ಉಯಿಲು. ವೈದ್ಯಕೀಯದ ಕ್ರೌರ್ಯದ ಬಗೆಗೆ ಉದಾಹರಣೆ ಸಮೇತ ಅವರು ವಾದಕ್ಕಿಳಿಯುತ್ತಾರೆ. ಪರೋಕ್ಷ ದಯಾಮರಣದ ಪರ ಒಂದು ಭಾವನಾತ್ಮಕ ಆದರೆ ನೈಜ ವಾದ. ನೆನಪಿರಲಿ ಇದು ರೋಗಿಯೊಬ್ಬ ಪರೋಕ್ಷ ದಯಾಮರನಕ್ಕೆ ಕೋರಿ ಬರೆದಿಟ್ಟ ಉಯಿಲು..

OF EUTHANASIA 


Euthanaisa is the mercifull act of painlessly terminating the life of an organism suffering from an incurable disease or wound. Though there is no objection in practicing euthanasia on animals, it is prohibited in the case of men. This is due to the fallacious Judaic, Christian and Islamic beliefs that, unlike animals, man alone was created by hands of clay, and life was blown into it through his nostrils by God. Thus, according to them, God alone has the right to take life from man. In countries dominated by the influences of these religions, doctors are not allowed to practice euthanasia even with the written permission of the suffering patient.

In Sri Lanka and India where majority of people believe in rebirth, euthanasia should be considered a meritorious act that should be encouraged. It is more sensible for those who believe in rebirth to prohibit the present practice of doctors prolonging the life by medication of a person suffering from an incurable disease than prohibiting euthanasia, because by medication the doctors are only delaying the sick men’s chance of discarding their deceased bodies to be reborn in younger and healthier bodies.

Once I witnessed the cruel act of a doctor administering oxygen to a cancer patient struggling between life and death. Probably his religious upbringing did not make him realize the cruelty of his act of making the dying person suffer a few more hours. How sensible it would have been if, instead of administering oxygen, he had given the patient an overdose of sleeping drug.

On another occasion a doctor of very low intelligence was triumphantly boasting about the success he and his alcoholic doctor son achieved in reviving a lady who was in deep coma as a result of cancer in her lungs, by giving her glucose drip. Although I told him I would not like such a cruel act done even to my pet dog, the foolish doctor obsessed by his religious delusions, continued to boast about how he and his drunkard son succeeded in keeping the sick lady conscious until her death.

The cancer specialist who was told that his patient was in a state of coma, was happy to know that she was not able to feel any pain during the last hours of her life. He said that nature was doing what he himself would have done if law permitted. He was thoroughly annoyed at the uncalled for interference of the two misguided quacks in making his patient suffer for a few more days.

My 80-year old body has cancer in its bladder, and as a result of it I am suffering from frequent haematuria.  In view of my old age doctors have ruled out surgery and radiotherapy. They are treating me by chemotherapy and blood transfusion in an attempt to keep me alive for a few more weeks or months, and not years. They have succeeded a good deal in this respect, and I am thankful to them. I am able to attend my normal work, although at a lesser scale.

Before long when I am bedridden and become useless to my fellow beings and myself, I will not allow my good doctors to prolong my life and suffering any more. Unfortunately, my doctors are prevented from an antediluvian law from terminating my suffering by putting me to sleep permanently, even if I request to do so.
My rational mind will not permit me to eat the so called holy ash given by the juggler sai baba, or drink my urine every morning as curative medicines for cancer at the advice of gullible sai baba devptees and Sri Morarji Desai!

My only hope of escaping the forthcoming agony is in some of my sincere friends who foolishly believe in rebirth even though there is no evidence for it. I appeal to them to compassionately help me put an end to my suffering by getting me a liberal supply of sleeping tablets, when I am completely bedridden.

It being a meritorious karma they need not hesitate to violate an outmoded law. In addition to helping me to get rid of my cancerous body to be reborn into a healthy young body, they themselves will be adding one more merit to their credit. Even Mahatma Gandhi did not hesitate to break the laws for doing good for his fellow men. 
(taken from the book Gods, Demons and Spirits - Dr. Abraham Kovoor, pg 107.)

ದಿನದ ಓದು - ಉದಯ ಇಟಗಿ ಅವರ ಲಿಬಿಯಾ ಕಥನ

ಉದಯ ಇಟಗಿ ನಮ್ಮ ಯಲಬುರ್ಗದ ಮುಧೋಳದವರು. ವೃತ್ತಿಯಿಂದ ಇಂಗ್ಲೀಶ್ ಪ್ರಾಧ್ಯಾಪಕರಾಗಿರುವ ಇವರು ಕಳೆದ ಮೂರೂವರೆ ವರ್ಷಗಳಿಂದ ಲಿಬಿಯಾದ ಸೇಭಾ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದಾರೆ. ಇತ್ತ ಇವರು ಮಧ್ಯಂತರ ರಜೆಯ ಮೇಲೆ ಊರಿಗೆ ಬಂದರೆ ಅತ್ತ ಲಿಬಿಯಾದಲ್ಲಿ ದಂಗೆ ಪ್ರಾರಂಭವಾಗಿದೆ. ಟ್ಯುನೀಸಿಯ, ಈಜಿಪ್ಟ್ ನ ನಾಗರೀಕ ದಂಗೆಗಳಿಗೂ ಲಿಬಿಯಾದ ದಂಗೆಗೂ ಸಾಕಷ್ಟು ವ್ಯತ್ಯಾಸವಿದೆ. ಅಸಲು ಲಿಬಿಯಾದಲ್ಲಿ ದಂಗೆಗೆ ಕಾರಣವಾದರೂ ಏನು? ಇದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಲಿಬಿಯಾದ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಲು ಅಮೆರಿಕ ನಡೆಸುತ್ತಿರುವ ಹುನ್ನಾರವಿದು ಎಂಬ ಕೂಗುಗಳೂ ಇವೆ. ಇದಕ್ಕೆ ಸರಿಯಾಗಿ NATO ಎದ್ದು ಕೂತಿದೆ. ಲಿಬಿಯಾ ಮತ್ತೊಂದು ಅಫಾಘಾನಿಸ್ತನ ಇರಾಕ್ ಆಗಲಿದೆಯಾ? ಕಳೆದ ಮೂರೂವರೆ ವರ್ಷಗಳಿಂದ ಲಿಬಿಯಾದಲ್ಲಿ ನೆಲೆಸಿದ್ದ ಉದಯ್ ಇಟಗಿ ಬರೆದಿರುವ ಅಪರೂಪದ ವಿಶಿಷ್ಠ ಅನುಭವ ಮತ್ತು ಒಳನೋಟಗಳನ್ನೊಳಗೊಂಡ ಅಪರೂಪದ ಲೇಖನ, ಅವರ ಬಿಸಿಲಹನಿ ಬ್ಲಾಗಿನಲ್ಲಿ....

ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ

ತಮಿಳುನಾಡು ರಾಜಕೀಯದಲ್ಲಿ ಉದ್ಭವಿಸಬಹುದಿದ್ದ ಮಹತ್ತರ ಐತಿಹಾಸಿಕ ಕ್ಷಣ ಮಣ್ಣುಪಾಲು!


ಕಳೆದೊಂದು ವಾರದಿಂದ ಚೆನ್ನೈ ರಾಜಕೀಯ ಚಟುವಟಿಕೆಯಿಂದ ಗಿಜಿಗುಡುತ್ತಿದೆ. ದೆಹಲಿ ಚೆನ್ನೈ ನಡುವಿನ ಸಂಪರ್ಕ ಮಾರ್ಗಗಳು ಜಾಂ ಆಗುವಷ್ಟರ ಮಟ್ಟಿಗೆ ರಿಂಗಣಿಸುತ್ತಲೇ ಇದೆ. ಸದ್ಯ ತಲೆದೋರಿದ್ದ ರಾಜಕೀಯ ಬಿಕ್ಕಟ್ಟೊಂದು ಬಗೆಹರಿದ ಹಾಗೆ ತೋರುತ್ತಿದೆ. ಕಾಂಗ್ರೆಸ್ ಡಿಎಂಕೆ ನಡುವೆ ಮೂಡಿದ್ದ ಬಿರುಕಿಗೆ ಮತ್ತೆ ಪ್ರಣಬ್ ಮುಖರ್ಜೀ ತೇಪೆ ಹಾಕಿದ್ದಾರೆ. ಗುಲಾಂನಭಿ ಆಜಾದ್ ಮತ್ತು ಕರುಣಾ ಕುಟುಂಬ ಕೈಕೈ ಹಿಡಿದು ಪೋಸು ಕೊಟ್ಟಿದೆ. ಆದರೆ ಒಳಗೆ ಎಲ್ಲವೂ ಸರಿಯಿದೆಯೇ? ಅಸಲು ಬಿರುಕು ಮೂಡಿದ್ದಾದರೂ ಏಕೆ? ತೇಪೆ ಹಾಕಿದ್ದಾರಲ್ಲ ಈಗ ಅದರ ಶರತ್ತುಗಳೇನು?

ಈ ರಾಜಕೀಯ ಪ್ರಹಸನದಲ್ಲಿ ಪುನಃಪುನಃ ಪ್ರದರ್ಶನಗೊಂಡದ್ದು ಕರುಣಾನಿಧಿಯ ಗತಿಕೆಟ್ಟ ಜನವಿರೋಧಿ ಭ್ರಷ್ಟ ಕುಟುಂಬ ರಾಜಕಾರಣ ಮತ್ತದನ್ನು ಸಾಧಿಸಲು ಆತನ ಕುಟಿಲ ಬ್ಲಾಕ್ಮೇಲ್ ತಂತ್ರ ಮತ್ತು ಇದಕ್ಕೆ ತಲೆಬಾಗಿದ ಮಾನಗೆಟ್ಟ ಕಾಂಗ್ರೆಸ್. ಕಳೆದ ಎರಡು ಅವಧಿಗಳಿಂದಲೂ ಕರುಣಾನಿಧಿ ತಮಿಳುನಾಡಿನ ಗದ್ದುಗೆ ಹಿಡಿದು ಕೂತಿದ್ದು ಈಗ 87 ವರ್ಷ. ಆತ ಗಾಲಿಖುರ್ಚಿ ಬಿಟ್ಟೆದ್ದು ವರ್ಷಗಳೇ ಉರುಳಿವೆ. ಆತ ಇವತ್ತು ಒಬ್ಬ ಉತ್ಸವ ಮೂರ್ತಿ ಅಷ್ಟೆ. ಆದರೆ ತಮಿಳರ ಹೃದಯ ಸಿಂಹಾಸನದಲ್ಲಿ ಆತನಿಗಿನ್ನೂ ಸ್ಥಾನವಿದೆ. ಹಾಗಾಗಿಯೇ ಈ ಚುನಾವಣೆ ಅತ್ತ ಡಿಎಂಕೆ, ಇತ್ತ ಕರುಣಾನಿಧಿ ಮತ್ತಾತನ ಕುಟುಂಬಕ್ಕೂ ಅತಿ ಮುಖ್ಯ. ಈ ಚುನಾವಣೆಯಲ್ಲಿ ಗೆದ್ದು ಮಗ ಸ್ಟಾಲಿನ್ನನ್ನು ಮುಖ್ಯಮಂತ್ರಿ ಗದ್ದಿಯಲ್ಲಿ ಕೂರಿಸುವುದು, ದೊಡ್ಡ ಮಗ ಅಳಗಿರಿಗೊಂದು ದಾರಿ ಮಾಡಿಕೊಡುವುದಲ್ಲದೆ ಮುದ್ದಿನ ಮಗಳು ಕನಿಮೊಳಿಗೂ ಒಂದು ದಾರಿ ಮಾಡಿಕೊಡಬೇಕಿದೆ. ಇದೆಲ್ಲವೂ ಕರುಣಾನಿಧಿ ಇದ್ದಾಗಲೇ ಆಗಬೇಕು. ಆಮೇಲಿನದೇನೋ ಹೆಂಗೋ ಬಲ್ಲವರಾರು? ಅದಕ್ಕಾಗಿಯೇ ಕರುಣಾನಿಧಿ ತನ್ನ ಕುಟುಂಬದ ರಾಜಕೀಯ ಅಸ್ತಿತ್ವಕ್ಕಾಗಿ ಅಂತಿಮ ಯುದ್ಧಕ್ಕೆ ಅಣಿಯಾಗಿರುವುದು. ಕಾಂಗ್ರೆಸ್ ಜೊತೆ ಕಾಲು ಕೆರೆದುಕೊಂಡು ಹೋಗಿ ಹುಸಿಮುನಿಸು ತೋರಿಸಿ ತನ್ನ ಕುಟುಂಬದ ಭಧ್ರತೆಯನ್ನು ಮತ್ತಷ್ಟು ಭಧ್ರ ಮಾಡಿಕೊಂಡಿರುವುದು. ಹೌದು ಈ ಪ್ರಹಸನದ ಮೂಲವಿದ್ದದ್ದು ಬರುವ ಚುನಾವಣೆಯ ಸೀಟು ಹಂಚಿಕೆಯಲ್ಲಲ್ಲ, ಕಾಂಗ್ರೆಸ್ಗೆ 63 ಬೇಕಂತೆ, ಡಿಎಂಕೆ 60 ಕೊಡಲು ಸಿದ್ಧವಿದೆಯಂತೆ. ಅದೇ ಮುನಿಸು. ಕೇವಲ 3 ಸೀಟಿಗಾಗಿ ಯಾರೂ ಒಂದು ಮೈತ್ರಿಯನ್ನು ಕಳೆದುಕೊಳ್ಳುವುದಿಲ್ಲ. ಅದೂ ಸದ್ಯದ ಪರಿಸ್ಥಿತಿಯಲ್ಲಿ ಕರುಣಾನಿಧಿ!

ಅತ್ತ ಡಿಎಂಕೆಯ ದಲಿತ ನಾಯಕ, ಕರುಣಾನಿಧಿಯ ಮುದ್ದಿನ ಮಗಳು ಕನಿಮೊಳಿಯ ಆಪ್ತಸ್ನೇಹಿತ ಎಂಬ ಕಾರಣಕ್ಕೇ ಆ ಮಟ್ಟಕ್ಕೇರಿದ ಅಂದಿಮುತ್ತು ರಾಜಾ, ಇನ್ನಿಲ್ಲದ ರಾಡಿಯಲ್ಲಿ ಸಿಲುಕಿ 2ಜಿ ತರಂಗಗುಚ್ಛ ವಿತರಣಾ ಹಗರಣದಲ್ಲಿ ಸಿಲುಕಿ ಕಂಡಕಂಡವರೆಲ್ಲರನ್ನೂ ಸಿಲುಕಿಸಿ ತಿಹಾರ್ ಜೈಲಿನಲ್ಲಿ ಕೈಕೈ ಹಿಸುಕುತ್ತಾ ಕೂತ್ತಿದ್ದಾನೆ. ಇದೇ ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆಗೆ ಇದೇ ದೊಡ್ಡ ತಲೆನೋವು. ಈ ಚುನಾವಣೆಯ ಮುಖ್ಯ ವಿಷಯವೇ ಅದಾಗಲಿರುವುದು ದಿಟ. ಅದಕ್ಕುತ್ತರವಾಗಿ ಕರುಣಾನಿಧಿ ಒಂದು ಪ್ರಜ್ಞಾವಾದವನ್ನು ಹೂಡಿದ್ದಾರೆ. ಅಸಲು ರಾಜಾ ಒಂದು ಕಾರ್ಟೆಲ್ನಿಂದ ಆಳಲ್ಪಟ್ಟಿದ್ದ ಟೆಲಿಕಾಂ ರಂಗಕ್ಕೆ ಹೊಸ ಕಂಪೆನಿಗಳನ್ನು ತಂದು ರಿಯಾಯಿತಿ ದರದಲ್ಲಿ ತರಂಗಗುಚ್ಛವನ್ನು ನೀಡಿದ್ದರಿಂದಲೇ ಸಾಮಾನ್ಯ ಜನರಿಗೂ ಈಗ ಮೊಬೈಲ್ಗಳು ಎಟುಕುವಂತಿದೆ. ಶ್ರೀಶಾಮಾನ್ಯನಿಗಾಗಿ ಹೋರಾಡಿದ ರಾಜಾನನ್ನು ಈಗ ಜೈಲಿನಲ್ಲಿರಿಸಲಾಗಿದೆ ಎಂದು ಊರತುಂಬಾ ಡಂಗೂರ ಸಾರಲು ನಿಂತಿದ್ದಾರೆ. ಆದರೆ ಇದನ್ನು ಮೀರಿ ಡಿಬಿ ರಿಯಾಲಿಟಿ ಕಂಪೆನಿಯವರು ಕರುಣಾ ಕುಟುಂಬಕ್ಕೆ ಸಲ್ಲಿಸಿರುವ ಕಪ್ಪ ಕಲೈಗ್ನರ್ ಟಿವಿಗೆ ಬಂದು ಬಿದ್ದ 214 ಕೋಟಿಗಳ ಸುಳಿವನ್ನೂ ಸಿಬಿಐ ಹಿಡಿದುಬಿಟ್ಟಿದೆ. ರಾಡಿಯಾ ಟೇಪ್ಗಳ ತುಂಬಾ ಇರುವುದು ಕನಿಮೊಳಿ! 2ಜಿ ತರಂಗಗುಚ್ಛ ಹಗರಣದಲ್ಲಿ ಕನಿಮೊಳಿಯ ವಿರುದ್ಧ ಒಂದು ಬಲವಾದ ಕೇಸ್ ಬಿಲ್ಡಪ್ ಆಗುತ್ತಾ ಹೋಗುತ್ತಿರುವುದು ಸತ್ಯ. ಇಷ್ಟರಲ್ಲೇ ಸಿಬಿಐ ಕನಿಮೊಳಿಯನ್ನು ವಿಚಾರಣೆಗೊಳಪಡಿಸಲಿದೆ ಮತ್ತು ಅವಶ್ಯ ಬಿದ್ದರೆ ಬಂಧಿಸಲಿದೆ ಎಂಬ ಸುದ್ದಿಗಳು ದಟ್ಟವಾಗಿ ಹಬ್ಬಿದೆ. ಅದೂ ಆಗಿಬಿಟ್ಟರೆ ಕರುಣಾನಿಧಿ ಮತ್ತೆ ಮೇಲೇಳಲಾರರು. ಅದು ಆತನಿಗೂ ಗೊತ್ತು.

ಇದೇ ಹತಾಶೆಯಲ್ಲಿ ಆತ ಕಾಂಗ್ರೆಸ್ ಅನ್ನು ಮಣಿಸಲು ಹೊರಟು ನಿಂತ. ಕಾಂಗ್ರೆಸ್ ಮುಂದೆ ಆತ ಇಟ್ಟ ಬೇಡಿಕೆಗಳು ಎರಡೇ. ಮೊದಲನೆಯದು ಸಿಬಿಐ ಕನಿಮೊಳಿಯನ್ನು ವಿಚಾರಣೆಗೊಳಪಡಿಸಬಾರದು. ಕಾಂಗ್ರೆಸ್ ಆಕೆಯನ್ನು ರಕ್ಷಿಸಬೇಕು. ಯಾವುದೇ ತನಿಖೆಗಳು ತನ್ನ ಕುಟುಂಬದವರೆಗೂ ಬರಕೂಡದು. ಎರಡು ತಿಹಾರ್ ಜೈಲಿನಲ್ಲಿರುವ ಅಂದಿಮುತ್ತು ರಾಜಾನನ್ನು ಚುನಾವಣೆಯಷ್ಟರಲ್ಲಿ ಬಿಡುಗಡೆ ಮಾಡಬೇಕು. ಆತ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಬೇಕು. ಇಂಥವೇನೂ ಕಾಂಗ್ರೆಸ್ಗೆ ಹೊಸತಲ್ಲ. ಅದು ಇಂಥ ವಿಚಾರಗಳಲ್ಲಿ ಅನುಭವಸ್ಥವೇ ಹೌದು. ಆದರೆ ಸದ್ಯದ ಪರಿಸ್ಥಿತಿಗಳು ಬೇರೆಯಿದೆ. 2ಜಿ ತರಂಗಗುಚ್ಛ ಹಗರಣದ ಸಿಬಿಐ ತನಿಖೆ ಸುಪ್ರೀಂ ಕೋರ್ಟ್ನ ನಿರ್ದೇಶನದನ್ವಯ ನಡೆಯುತ್ತಿರುವುದರಿಂದ ಅದರ ನಿಯಂತ್ರಣವೂ ತಕ್ಕಮಟ್ಟಿಗೆ ಕಾಂಗ್ರೆಸ್ ಕೈತಪ್ಪಿದೆ. ಮತ್ತು ರಾಜಕೀಯವಾಗಿ ಡಿಎಂಕೆ ಮತ್ತು 2ಜಿ ತರಂಗಗುಚ್ಛ ಹಗರಣವು ಕಾಂಗ್ರೆಸ್ಗೆ ಮೊಣಭಾರವೂ ಹೌದು. ಇದನ್ನು ಕಳಚಿಕೊಳ್ಳಲೂ ಇದು ಉತ್ತಮ ಸಂದರ್ಭ. ಕಾಂಗ್ರೆಸ್ ಡಿಎಂಕೆಯನ್ನು ಕೈಬಿಡುತ್ತದೆಂದೇ ಎಲ್ಲರೂ ಎಣಿಸಿದ್ದರು. ಇವತ್ತಿನ ರಾಜಕೀಯ ಪರಿಸ್ಥಿತಿ ಎಣಿಕೆಗಳೂ ಹಾಗೇ ಕೂಡಿ ಬಂದಿದ್ದವು.

ಕಳೆದೊಂದೆರಡು ತಿಂಗಳ ಹಿಂದೆ ತಮಿಳುನಾಡಿಗೆ ಭೇಟಿ ನೀಡಿದ ರಾಹುಲ ಗಾಂಧಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಅನ್ನು ಪುನರುತ್ಥಾನಗೊಳಿಸುವಲ್ಲಿ ರಣೋತ್ಶಾಹ ಪ್ರದರ್ಶಿಸಿದ್ದರು. ಅದಕ್ಕೆ ತಕ್ಕಂತೆ ಕಾಂಗ್ರೆಸ್ ತನ್ನ ಸಂಘಟನೆಯನ್ನು ಬಲಪಡಿಸಿಕೊಳ್ಳುವೆಡೆ ದಾಪುಗಾಲು ಹಾಕಿತ್ತು. ಕಳೆದ 5 ದಶಕಗಳಿಂದ ದ್ರಾವಿಡ ರಾಜಕಾರಣಕ್ಕೆ ಸಿಕ್ಕು ಬೈಪೋಲಾರ್ ಆಗಿಬಿಟ್ಟಿರುವ ತಮಿಳುನಾಡು ರಾಜಕಾರಣವನ್ನು ಇದರಿಂದ ವಿಮುಕ್ತಿಗೊಳಿಸಿ ಅದಕ್ಕೆ ಮೂರನೇ ಆಯಾಮವನ್ನು ಸೇರಿಸುವ ನಿಚ್ಛಳ ಅವಕಾಶವಿದೆ. ಈ ನಿಟ್ಟಿನೆಡೆ ವಿಜಯಕಾಂತ್ ಅವರ ಡಿಎಂಡಿಕೆ, ಪಿಎಂಕೆಗಳು ಸೆಣಸಿ ಸೋತಿವೆ. ಹೀಗಾಗಿ ಈ ಎಲ್ಲ ಪಕ್ಷಗಳೂ ಕಾಂಗ್ರೆಸ್ ನೇತೃತ್ವದಲ್ಲಿ ಒಗ್ಗೂಡಿದರೆ ಈ ರಾಜಕೀಯ ಲೆಕ್ಕಾಚಾರ ಸಾಧ್ಯ ಎಂಬುದು ಸದ್ಯ ಇದ್ದ ವಾದ. ಕಾಮರಾಜರ  ನಂತರ ತಮಿಳುನಾಡು ಕಾಂಗ್ರೆಸ್ನಲ್ಲಿ ಅಂಥ ಮತ್ತೊಬ್ಬ ನಾಯಕನಿಲ್ಲ. ಆದರೆ ಚಿದಂಬರಂ ತನ್ನ ರಾಜಕೀಯ ಮಹತ್ವಾಕಾಂಕ್ಷೆಯಲ್ಲಿ ತನ್ನನ್ನು ಆ ಸ್ಥಾದಲ್ಲಿ ನೋಡಿಕೊಳ್ಳುವುದು ದಿಟ. ಈ ಎಲ್ಲವೂ ಸೇರಿ ಕಾಂಗ್ರೆಸ್ ಡಿಎಂಕೆಯನ್ನು ಡಂಪ್ ಮಾಡಿ ಏಕಾಂಗಿ ಹೋರಾಟಕ್ಕಿಳಿಯುತ್ತದೆ ಎಂದೇ ಎಲ್ಲರ ಎಣಿಕೆಯಾಗಿತ್ತು. ಇದರಿಂದ 2ಜಿ ತರಂಗಗುಚ್ಛ ಹಗರಣಕ್ಕೆ ಡಿಎಂಕೆ ಮತ್ತು ರಾಜಾ ಹರಕೆಯ ಕುರಿಗಳಾಗಿ ಕಾಂಗ್ರೆಸ್ ಆ ಕಳಂಕದಿಂದ ಹೊರಬರುವ ಸಾಧ್ಯತೆಯೂ ಇತ್ತು. ಆದರೆ ಕಡೆಯ ಕ್ಷಣದ ಲೆಕ್ಕಾಚಾರಗಳು ಈ ಎಲ್ಲವನ್ನೂ ತಲೆಕೆಳಗು ಮಾಡಿಬಿಟ್ಟವು.

ಇತ್ತ 18 ಸಂಸದ ಬಲ ಹೊಂದಿರುವ ಡಿಎಂಕೆ ಯುಪಿಎಯಿಂದ ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಿದ್ದಂತೆಯೇ ಅಲ್ಲಿ ಕೇಂದ್ರ ಸರ್ಕಾರ ಡೋಲಾಯಮಾನ ಸ್ಥಿತಿಗೆ ಬೀಳುತ್ತದೆ. ಹಾಗಂತ ಅದು ಉರುಳುವುದೇನೂ ಇಲ್ಲ. ಮತ್ತೊಂದು ರಾಜಕೀಯ  ಮೈತ್ರಿಯತ್ತ ಕಾಂಗ್ರೆಸ್ ಕೈಚಾಚಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿರುವುದು ಉತ್ತರ ಪ್ರದೇಶದಲ್ಲಿ ಮಾತ್ರ. ಮುಲಾಯಂರ ಸಮಾಜವಾದಿ ಪಕ್ಷ ಮತ್ತು ಅಧಿಕಾರಸ್ಥ ಮಾಯಾವತಿಯ ಬಹುಜನ ಸಮಾಜ ಪಕ್ಷ ಎರಡೂ ಕೂಡ ಕಾಂಗ್ರೆಸ್ಗೆ ಬೆಂಬಲ ನೀಡಲು ನಾ ಮುಂದು ತಾ ಮುಂದು ಎಂದು ತುದಿಗಾಲ ಮೇಲೆ ನಿಂತಿವೆ. ಡಿಎಂಕೆ ಹೊರನಡೆದಲ್ಲಿ ಇವರೀರ್ವರ ನಡುವೆ ಒಬ್ಬರ ಮೈತ್ರಿ ಕಾಂಗ್ರೆಸ್ಗೆ ಅನಿವಾರ್ಯ. ಸಮಾಜವಾದಿ ಪಕ್ಷ ತನ್ನ ಬೆಂಬಲವನ್ನು ಘೋಷಿಸಿಯೂ ಬಿಟ್ಟಿತು. ಆದರೆ ಉತ್ತರಪ್ರದೇಶ ರಾಹುಲ ಗಾಂಧಿಯ ಪ್ರಯೋಗಾಲಯ. ಅಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿ ಅಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕೆಂಬುದು ರಾಹುಲ ಗಾಂಧಿಯ ಮುಂದಿರುವ ಸದ್ಯದ ಏಕ ನಿಯಮ ಅಜೆಂಡಾ. ಈ ಅನಿವಾರ್ಯ ಒಲ್ಲದ ಮೈತ್ರಿ ಈ ಕಾಂಗ್ರೆಸ್ ರಣತಂತ್ರವನ್ನು ಹಾಳುಗೆಡವುತ್ತದೆ. ಕಳೆದ 4 ವರ್ಷಗಳ ರಾಹುಲರ ಕೆಲಸವನ್ನು ಮಣ್ಣುಪಾಲು ಮಾಡುತ್ತದೆ. ಕಾಂಗ್ರೆಸ್ನಲ್ಲಿ ಯುವರಾಜರಿಗೇ ಆದ್ಯತೆ. ಈ ಆದ್ಯತೆಯನ್ನು ಕಾಪಾಡಲು ಮತ್ತು ಮನಮೋಹರಿಗೂ ಒಲ್ಲದ ಸಮಾಜವಾದಿ ಪಕ್ಷದ ಮೈತ್ರಿಯನ್ನು ತಪ್ಪಿಸಲು ಕಡೆಯ ಕ್ಷಣದಲ್ಲಿ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿ ಪ್ರಣವ ಮುಖರ್ಜೀ  ಡಿಎಂಕೆಯೊಂದಿಗಿನ ಮೈತ್ರಿಯನ್ನು ಕಾಪಾಡಿಕೊಂಡಿದ್ದಾರೆ. ಕರುಣಾನಿಧಿ ಹಾಕಿದ ಅಸಂಬದ್ಧ ಮತ್ತು ಜನವಿರೋಧಿ ನಿಬಂಧನೆಗಳಿಗೊಪ್ಪಿ ಮಾನಗೆಟ್ಟ ಕಾಂಗ್ರೆಸ್ ಮಂಡಿಯೂರಿದೆ.

ತಮಿಳುನಾಡು ರಾಜಕೀಯದಲ್ಲಿ ಉದ್ಭವಿಸಬಹುದಿದ್ದ ಮಹತ್ತರ ಐತಿಹಾಸಿಕ ಕ್ಷಣವೊಂದನ್ನು ಹರಿವಾಣದಲ್ಲಿಟ್ಟು ಕೊಟ್ಟರೂ ಅದನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕಡೆಯ ನಗು ನಕ್ಕವರು ಅದೇ ಕರುಣಾನಿಧಿ.

ದಿನದ ಓದು - ideological enemy?


ಇದು ಪಾಕಿಸ್ತಾನದ ಪ್ರಮುಖ ದೈನಿಕ ದಿ ಡಾನ್ ಪತ್ರಿಕೆಯಲ್ಲಿ ಬಂದ ಸಂಪಾದಕೀಯ. 



CERTAIN Pakistani circles argue strongly that India is Pakistan’s ideological enemy and Pakistan should therefore minimise cultural and economic linkages with India. Clearly, there is mutual enmity, but is it ideological?

ದಿನದ ಓದು - Kalidasa in Kolar


BYLANES
The bard's classic play resonates in a different context and in a different culture

ಕಾಳಿದಾಸನ ಶಾಕುಂತಲ ನಮ್ಮೂರಲ್ಲೂ ಇದೆ ಸ್ವಾಮಿ. ಅದೂ ಶಾಕುಂತಲಕ್ಕೂ ಮೊದಲಿರಬಹುದು. ಅಸಲು ಕಾಳಿದಾಸ ಶಾಕುಂತಲವನ್ನು ಬರೆಯಲು ನಮ್ಮೂರಿನ ಜಾನಪದ ಕೂಡ ಪ್ರೇರಣೆಯಾಗಿರಬಹ್ದುದು!! ಸುಗತ ಅವರ ಅದ್ಭುತ ಲೇಖನ - ಕೋಲಾರದಲ್ಲಿ ಕಾಳಿದಾಸ. 

ದಿನದ ಓದು - Corporate socialism's 2G orgy


Corporate socialism's 2G orgy

P.SAINATH

The Union budget writes off Rs.240 crore in corporate income tax every single day on average — the same amount leaves India each day in illicit fund flows to foreign banks. 




ಇದು ನಮ್ಮ ಇಂದಿನ ನೈಜ ಎಕನಾಮಿಕ್ಸ್, ಮನಮೋಹನಾಮಿಕ್ಸ್. ಈ ಹಿಂದೆ ಸಾಯಿನಾಥ್ ಹೇಳಿದ್ದರು. its the professor who mislead all his students. ದೇಶದ ಬಡಬಗ್ಗರಿಗೆ ಕೊಡಮಾಡುತ್ತಿರುವ ಆಹಾರ ಧಾನ್ಯ ಮತ್ತು ನಮ್ಮ ರೈತರಿಗೆ ನೀಡಲಾಗುತ್ತಿರುವ ರಸಗೊಬ್ಬರ ಸಬ್ಸಿಡಿಗಳನ್ನು 2G spectrum  ಹಗರಣದ ಜೊತೆ ತಳಕು ಹಾಕುವ ಮನಮೋಹನರಿಗೆ ಈ ಸಬ್ಸಿಡಿ ಕಾಣುತ್ತಿಲ್ಲವೇ? ಕೇಳಿ ನೋಡಿ ಇದನ್ನು ಅವರು ಸಬ್ಸಿಡಿಗಳಿಗೆ ಹೋಲಿಸುವುದಿಲ್ಲ. it is an incentive to the industry you know!! 

ದಿನದ ಓದು - Cat on a Hot Tin Roof

Our life and future is tied in with the decisions of the environment ministry. SHOMA CHAUDHURY on why we should be interested in the high-voltage story of Jairam Ramesh 

ಕೇಂದ್ರ ಪರಿಸರ ಇಲಾಖೆಯ ನಿಜ ಸತ್ವವನ್ನು ಸಾರಿದವರು ನಮ್ಮ ಕನ್ನಡಿಗರೇ ಆದ ಜಯರಾಂ ರಮೇಶ್. ಇವತ್ತು ಪರ್ಯಾವರಣ ಭವನ `ಅಭಿವೃದ್ಧಿ' ಯಾ ಪ್ರಗತಿ ಎಂಬ ಇಂದಿನ ಬಹುಮುಖ್ಯ ಸಂವಾದದ ಕೇಂದ್ರ ವೇದಿಕೆಯಾಗಿದೆ. growth for the sake of growth is the philosophy of cancer cells. ಅಂತಾನೆ ಎಡ್ವರ್ಡ್ ಎಬ್ಬೆ. ಇವತ್ತಿನ ನಮ್ಮ gung -ho growth ನ ಹುಚ್ಚು  ಅಮಲಿನ sermon ನಲ್ಲಿ ಇಂಥದೊಂದು ವಿವೇಕವನ್ನು ತುಂಬಲೆತ್ನಿಸುವುದಿದೆಯಲ್ಲ, ಅದು ಸಾಗರದ ವಿರುದ್ಧ ಈಜುವ ಸಾಹಸ. ಅಂಥದೊಂದು ಸಾಹಸದಲ್ಲಿ ನಮ್ಮ ಜಯರಾಂ ರಮೇಶ್ ನಿರತ. ಬೃಹತ್ ಕೈಗಾರಿಕೆಗಳನ್ನು ಮತ್ತು ರಾಷ್ಟ್ರದ ನೈಸರ್ಗಿಕ ಸಂಪತ್ತಿನ ದೋಚುವಿಕೆಗೊಂದು check dam ನಿರ್ಮಿಸಿ ಅತ್ತ ಅವರನ್ನು ಎದುರು ಹಾಕಿಕೊಳ್ಳುತ್ತಿದ್ದರೆ ಇತ್ತ ಅವರು ಒಂದು ಪ್ರಾಜೆಕ್ಟಿಗೆ ಗ್ರೀನ್ ಸಿಗ್ನಲ್ ಕೊಟ್ಟರೂ ನಮ್ಮ ಹೋರಾಟಗಾರರು ಹುಯಿಲೆಬ್ಬಿಸುತ್ತಾರೆ. ಆದರೆ ಯಾವುದೂ ಬ್ಲಾಕ್ & ವೈಟ್ ಅಲ್ಲ. ಪ್ರತಿಯೊಂದರಲ್ಲೂ ಒಂದು ಕೊಡು ಕೊಳ್ಳುವಿಕೆಯ balancing act ನಡೆದಿರುತ್ತದೆ. ರಮೇಶ್ ಮಾಡುತ್ತಿರುವುದೂ ಅದನ್ನೇ. ಈವರೆಗೂ ೩ ಬಾರಿ ಅವರು ಕೆಲಸ ಕಳೆದುಕೊಳ್ಳುತ್ತಿದ್ದರು. ಇದು ನಾಲ್ಕನೆಯ ಪರೀಕ್ಷೆ. ಈ ಹಿನ್ನೆಲೆಯಲ್ಲಿ ಜಯರಾಂ ರಮೇಶ್ ಅವರ ಮತ್ತು ವಿಸ್ತಾರವಾಗಿ ಅಭಿವೃದ್ಧಿ ಯಾ ಪ್ರಗತಿಯ ಕುರಿತು ನಡೆಯುತ್ತಿರುವ ಸಂವಾದದ ಮೇಲೊಂದು ಕ್ಷಕಿರಣ. 

ಫೋರ್ಜರಿ ಉಪಕುಲಪತಿ - ಸಂಕಷ್ಟದಲ್ಲಿ ಕುಲಪತಿ


ಸಮಯ ಸಿಕ್ಕಾಗೆಲ್ಲಾ ಯಡಿಯೂರಪ್ಪ ಮತ್ತವರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದು ಸರ್ಕಾರದ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನು ಪದೇ ಪದೇ ಎತ್ತಿ ತೋರಿಸುವ ಮಾನ್ಯ ರಾಜ್ಯಪಾಲರ ತಟ್ಟೆಯಲ್ಲೂ ಹುಳ ಹುಪ್ಪಟೆಗಳು ಬಿದ್ದಿವೆ. ರಾಜ್ಯಪಾಲರು ಕಾಂಗ್ರೆಸ್ನ ಏಜೆಂಟರು ಎನ್ನುವ ರಾಜಕೀಯ ಆರೋಪವನ್ನು ಪಕ್ಕಕ್ಕಿಟ್ಟೇ ರಾಜ್ಯಪಾಲರನ್ನು ವಿಮರ್ಶಿಸೋಣ. ಯಡಿಯೂರಪ್ಪ ಮತ್ತವರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ Holier than thou ಭಾವನೆಯಲ್ಲಿ ನೈತಿಕ ಉನ್ನತ ಪೀಠವನ್ನಾಕ್ರಮಿಸಿಕೊಂಡು ಮಾತನಾಡುವ ರಾಜ್ಯಪಾಲರ ನಡೆ ನುಡಿಗಳು ಅದನ್ನು ಪುಷ್ಠೀಕರಿಸಬೇಕಾಗುತ್ತದೆ. ಆದರೆ ದುರದೃಷ್ಟವಶಾತ್ ಅವರ ರಾಜ್ಯಪಾಲರ ಅರ್ಹತೆಯಲ್ಲಿ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳೂ ಆಗಿರುವ ಭಾರಧ್ವಾಜ್ ಅವರು ಈ ವಿಷಯವಾಗಿ ಕೆಲವು ಎಡವಟ್ಟುಗಳನ್ನೂ ಅವರ ನೈತಿಕತೆಯನ್ನು ಪ್ರಶ್ನಾರ್ಹಗೊಳಿಸುವ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿರುವುದು ದಿಟ. 

ಮೊದಲಿಗೆ ಮೈಸೂರು ವಿಶ್ವವಿದ್ಯಾಲಯ. ಈ ಹಿಂದೆ ಮೈಸೂರು ವಿವಿಯ ಉಪಕುಲಪತಿಗಳಾಗಿದ್ದ ದೇಜಗೌ ಅವರ ಕುಲಪುತ್ರ ಶಶಿಧರ ಪ್ರಸಾದ್ ಅವರು ವಿವಿಯಲ್ಲಿ ನಡೆಸಿದರೆನ್ನಲಾದ ಅಪಾರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನೂತನ ನೇಮಕಗಳಲ್ಲಿ ರೂಸ್ಟರ್ ಪದ್ಧತಿಯನ್ನು ಗಾಳಿಗೆ ತೂರಿ ಪರಿಶಿಷ್ಠ ಜಾತಿ ವರ್ಗಗಲ ಸ್ಥಾನಗಳಲ್ಲಿ ತಮ್ಮ ಕುಲಭಾಂಧವರನ್ನು ಕೂರಿಸಿ ಇಡಿಯ ಪ್ರಕ್ರಿಯೆಯನ್ನು ಭ್ರಷ್ಟಗೊಳಿಸಿಬಿಟ್ಟಿದ್ದರಲ್ಲದೆ, ಇನ್ನೂ ಅನೇಕ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರದ ಆರೋಪಗಳು ಅವರ ಮೇಲಿದ್ದವು. ಈ ಕುರಿತು ತನಿಖೆ ನಡೆಸಲು ರಚಿತವಾದ ರಂಗವಿಠಲಾಚಾರ್ ಅವರ ಏಕಸದಸ್ಯ ನ್ಯಾಯಾಂಗ ಆಯೋಗ ವರದಿ ನೀಡಿದ್ದು ಮೇಲ್ಕಂಡ ಬಹುತೇಕ ಆರೋಪಗಳನ್ನು ನಿಜವೆಂದೂ, ಶಶಿಧರ ಪ್ರಸಾದ್ ಅವರ ವಿರುದ್ಧ ವಿವಿ ಕ್ರಮಿನಲ್ ಕೇಸ್ ಹೂಡಬೇಕೆಂದೂ ಹೇಳಿತ್ತು. ಆದರೆ ದೇಜಗೌ ಅವರ ಎಸ್ಸೆಂಕೆ-ಸಾಯಿಬಾಬಾ ಲಾಬಿಯಿಂದ ಪ್ರಭಾವಿತರಾಗಿ ನ್ಯಾಯದಾನದ ಈ ಪ್ರಕ್ರಿಯೆಯಲ್ಲಿ ಮೂಗು ತೂರಿಸಿದ ಭಾರಧ್ವಾಜ್ ಶಶಿಧರ ಪ್ರಸಾದ್ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗದಂತೆ ನೋಡಿಕೊಂಡರು. ಮೈಸೂರು ವಿವಿಗೆ ಹೋದಾಗೊಮ್ಮೆ ಉಪಕುಲಪತಿ ವಿ.ಜಿ.ತಳವಾರ್ ಅವರನ್ನು ಒಬ್ಬ ಚಪರಾಸಿಯಂತೆ ಬಾಗಿಲಲ್ಲಿ ನಿಲ್ಲಿಸಿಕೊಂಡು ಬೈದಾಡಿದರು. ಅಲ್ಲಿಗೆ ರಾಜ್ಯಪಾಲರ ನೈತಿಕತೆ, ಪ್ರಾಮಾಣಿಕತೆಗಳ ಸೋಗುಗಳೆಲ್ಲವೂ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತಾಯಿತು.

ವಿಶ್ವವಿದ್ಯಾಲಯಗಳ ವಿಚಾರದಲ್ಲಿ ರಾಜ್ಯಪಾಲ ಭಾರಧ್ವಾಜ್ ಮತ್ತೆ ಅಂಥದೊಂದು ಸಂಧಿಗ್ಧಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಈ ಬಾರಿಯದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ. ಹೋದ ಬಾರಿ ಮಾಜಿ ಉಪಕುಲಪತಿಗಳಾದರೆ ಈ ಬಾರಿ ಹಾಲಿ ಉಪಕುಲಪತಿಗಳ ರಗಳೆ. ಈ ಹಿಂದೆ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಕೆ. ಎಚ್. ಹಿಂಚಾ ಅವರ ಅವಧಿ ಕಳೆದ ಜುಲೈ ಮೊದಲ ವಾರಕ್ಕೆ ಮುಗಿದ ಕಾರಣ ರಾಜ್ಯಪಾಲರು ಪ್ರೊ. ಎಸ್. ರಾಮೇಗೌಡ ಅವರ ನೇತೃತ್ವದಲ್ಲಿ ಒಂದು ಸರ್ಚ್ ಕಮಿಟಿಯನ್ನು ನೇಮಿಸಿದರು. ಇವರು ಈ ಹಿಂದೆ ಎಐಸಿಟಿಇನ ಅಧ್ಯಕ್ಷರಾಗಿದ್ದವರು. ಈ ಸರ್ಚ ಕಮಿಟಿಗೆ ಬಂದ ಹಲವಾರು ಅರ್ಜಿಗಳಲ್ಲಿ ಅವರು ವ್ಯಕ್ತಿಯ ಅನುಭವ, ಅರ್ಹತೆ, ಚಾರಿತ್ರ್ಯ ಮುಂತಾದವುಗಳನ್ನು ಪರಿಗಣನೆಗೆ ತೆಗೆದುಕೊಂಡು. ಮೂರು ಹೆಸರುಗಳನ್ನು ಅಕಾರಾದಿಯಾದಿಯಾಗಿ ರಾಜ್ಯಪಾಲರಿಗೆ ಕೊಟ್ಟರು. ಈ ಮೂವರಲ್ಲಿ ರಾಜ್ಯಪಾಲ ಹನ್ಸರಾಜ್ ಭಾರಧ್ವಾಜ್ ಅವರು ಪ್ರೊ. ಎಚ್. ಮಹೇಶಪ್ಪ ಅವರನ್ನು ಆಯ್ಕೆ ಮಾಡಿ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಿಸಿದರು. ಇಲ್ಲಿಯವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಪಾಪ ಯಾರೋ ಅತೃಪ್ತರು ಇಲ್ಲ ಮಹೇಶಪ್ಪನವರ ಒಳ ಹೊರಗನ್ನು ಬಲ್ಲವರು ಅವರ ಅಕಾಡೆಮಿಕ್ ದಾಖಲೆಗಳನ್ನು ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ ಒಂದು ಅರ್ಜಿ ಸಲ್ಲಿಸಿದರು. ಆಗ ಒಂದೊಂದಾಗಿ ಹೊರಬಂದಿತು ನೋಡಿ, ಮಹೇಶಪ್ಪನವರ ನಿಜಬಣ್ಣಗಳು.

ರಾಜ್ಯಪಾಲರ ಕಛೇರಿ ಮತ್ತು ತನ್ಮೂಲಕ ಸರ್ಚ ಕಮಿಟಿಗೆ ಇವರು ಸಲ್ಲಿಸಿದ್ದ ಇವರ ಬಯೋಡಾಟಾವಿನಲ್ಲಿ ಇವರು ತಮ್ಮ ಮೈಸೂರು ವಿವಿಯಡಿಯಲ್ಲಿ ಬರುವ ದಾವಣಗೆರೆಯ ಬಿಡಿಟಿ ಕಾಲೇಜಿನಲ್ಲಿ ಮೊದಲ ಶ್ರೇಣಿಯಲ್ಲಿ ತಮ್ಮ ಬಿಇ ಪದವಿಯನ್ನು ಪೂರೈಸಿದ್ದಾರೆಂದು ಬರೆದುಕೊಂಡಿದ್ದಾರೆ. ಆದರೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ದಾಖಲೆಗಳ ಪ್ರಕಾರ ಇವರು ಬಿಇ ಪದವಿ ಪಡೆದಿರುವುದು ದ್ವಿತೀಯ ಶ್ರೇಣಿಯಲ್ಲಿ. ಅಷ್ಟೇ ಅಲ್ಲದೆ ಇವರು ಮೊದಲನೆ ಪ್ರಯತ್ನದಲ್ಲಿಯೇ ತಮ್ಮ ಪದವಿಯನ್ನು ಪೂರ್ಣಗೊಳಿಸದೆ 4 ವರ್ಷದ ಬಿಇ ಪದವಿಯನ್ನು 5 ವರ್ಷ ಓದಿದ್ದಾರೆ! ಆ ನಂತರ ಇವರು ಇದುವರೆಗೂ ತಮ್ಮ ಪದವಿಯ certificate ಅನ್ನು ಪಡೆಯಲು ಮೈಸೂರು ವಿವಿಯಲ್ಲಿ ಅರ್ಜಿಯನ್ನೇ ಸಲ್ಲಿಸಿಲ್ಲ! ಅಂದರೆ ಇವರ ಬಳಿ ಇವತ್ತಿಗೂ ಇವರ ಡಿಗ್ರಿ certificate ಇಲ್ಲ! ಇದಕ್ಕೆ ಸನ್ಮಾನ್ಯ ಮಹೇಶಪ್ಪನವರ ಡಿಫೆನ್ಸ್ - ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕನಾಗಲಿಕ್ಕೆ ಬಿಇ ಪ್ರಥಮ ದರ್ಜೆಯಲ್ಲಿಯೇ ಪಾಸಾಗಬೇಕೆಂಬ ನಿಯಮ ಇರುವುದು ನಿಜ. ಆದರೆ ಉಪಕುಲಪತಿಗಳ ನೇಮಕಕ್ಕೆ ಈ ನಿಯಮ ವರ್ತಿಸುವುದಿಲ್ಲ! 

 ಸ್ವಾಮಿ ಒಬ್ಬ ಸಾಮಾನ್ಯ ಶಿಕ್ಷಕನಾಗಲಿಕ್ಕೇ ಈ ಅರ್ಹತೆಯನ್ನು ನಿಗದಿಗೊಳಿಸುವುದಾದರೆ ಒಬ್ಬ ಉಪಕುಲಪತಿಯಾಗಲಿಕ್ಕೆ ಈ ಮಾತ್ರದ ಅರ್ಹತೆ ಬೇಡವೇ? ಶಿಕ್ಷಕರಿಗೂ ಹೆಚ್ಚಿನ ಅರ್ಹತೆ ಬೇಡ, ಕನಿಷ್ಠ ಸಮಾನ ಅರ್ಹತೆಯಾದರೂ ಬೇಡವೇ? ಬುದ್ಧಿಗೇಡಿ ಮಹೇಶಪ್ಪನವರು ಈ ತಮ್ಮ ಸಮರ್ಥನೆಯಲ್ಲಿ ತಮ್ಮ ಉಪಕುಲಪತಿಗಳ ಆಯ್ಕೆಯನ್ನಷ್ಟೇ ಅಲ್ಲದೆ ತಮ್ಮ ಇಡಿಯ ವೃತ್ತಿ ಜೀವನವನ್ನೇ ಪಣಕ್ಕಿಡುತ್ತಿದ್ದಾರೆ. ಮಹೇಶಪ್ಪ ಕಳೆದ 27 ವರ್ಷಗಳಿಂದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶಿಕ್ಷಕರೂ, ವಿಭಾಗದ ಮುಖ್ಯಸ್ಥರೂ, ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗಾದರೆ ಇದ್ಯಾವುದಕ್ಕೂ ಮಹೇಶಪ್ಪನವರಿಗೆ ಕಾನೂನಿನಡಿ ಅರ್ಹತೆಯಿಲ್ಲ. ಹಾಗಾದರೆ ಅವರ ಇಡಿಯ ವೃತ್ತಿ ಜೀವನದುದ್ದಕ್ಕೂ ಅವರು ಸುಳ್ಳು ದಾಖಲೆಗಳನ್ನೇ ನೀಡುತ್ತಾ ಬಂದಿದ್ದಾರಾ? ಈ ಕುರಿತು ಈ ಕೂಡಲೇ ತನಿಖೆಯಾಗಬೇಕು. ಅದೊಮ್ಮೆ ನಿಜವಾದರೆ ಅವರ ಇಡಿಯ ವೃತ್ತಿ ಜೀವನವೇ ಪ್ರಶ್ನಾರ್ಹವಾಗುತ್ತದೆ. ಈ ಹಿಂದೆ ಇಂತಹುದೇ ಒಂದು ಪ್ರಕರಣದಲ್ಲಿ ಕರ್ನಾಟಕ ಆಡಳಿತ ಆಯೋಗವು ಸುಳ್ಳು ಮಾಹಿತಿ ಮತ್ತು ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ ವ್ಯಕ್ತಿಯನ್ನು ಆ ಕೂಡಲೇ ಸೇವೆಯಿಂದ ವಜಾಗೊಳಿಸಿದ್ದಲ್ಲದೆ, ಅದುವರೆಗೂ ಆತ ಪಡೆದುಕೊಂಡಿದ್ದ ಭತ್ಯೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ತೀರ್ಪೊಂದನ್ನು ನೀಡಿದ ನೆನಪು. ಮಹೇಶಪ್ಪನವರಿಗೂ ಅದೇ ಸಿದ್ಧಾಂತ ಅನ್ವಯವಾಗಬೇಕಲ್ಲವೆ?

ಇಷ್ಟೇ ಅಲ್ಲ ಮಹೇಶಪ್ಪನವರು ತಮ್ಮ ಸಂಶೋಧನೆಯ ಬಗ್ಗೆಯೂ ಸುಳ್ಳು ಮಾಹಿತಿ ಮತ್ತು ದಾಖಲೆಗಳನ್ನು ನೀಡಿದ್ದಾರೆ. ರಾಜಭವನಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಅವರು ಪ್ರತಿಷ್ಠಿತ ಡಿಆರ್ಡಿಒದ ಅಂಗ ಸಂಸ್ಥೆಯಾದ ಏರೋನಾಟಿಕ್ಸ್ ರಿಸರ್ಚ್  ಅಂಡ್ ಡೆವೆಲಪ್ಮೆಂಟ್ ಬೋರ್ಡ್ನಲಿ 8 ಸಂಶೋಧನಾ ಯೋಜನೆಗಳನ್ನು ಕೈಗೊಂಡಿದ್ದಾರೆ. ಈ ಮಾಹಿತಿಯೂ ಸುಳ್ಳು ಎಂಬ ಬಲವಾದ ಆರೋಪಗಳ ಹಿನ್ನೆಲೆಯಲ್ಲಿ ಈ ಕುರಿತು ಸೂಕ್ತ ಮಾಹಿತಿ ನೀಡುವಂತೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಯವರು ಏರೋನಾಟಿಕ್ಸ್ ರಿಸರ್ಚ್ರ ಅಂಡ್ ಡೆವೆಲಪ್ಮೆಂಟ್ ಬೋರ್ಡ್ನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ಅವರು ಮಹೇಶಪ್ಪನವರು ಹೇಳಿಕೊಂಡ 8 ಸಂಶೋಧನೆಗಳಲ್ಲಿ ಒಂದು ಮಾತ್ರ ವಿಟಯುಗೆ ಸಂಬಂಧ ಪಟ್ಟಿದ್ದಾಗಿದ್ದು ಇನ್ನು ಮಿಕ್ಕ 7 ಸಂಶೋಧನೆಗಳು ಇತರೆ ರಾಜ್ಯಗಳಿಗೆ ಸಂಬಂಧಪಟ್ಟಿದ್ದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ತಾನಿದವರೆಗೂ 4 ವಿದ್ಯಾರ್ಥಿಗಳ ಪಿಎಚ್ಡಿಗೆ ಗೈಡ್ ಮಾಡಿದ್ದೇನೆಂದು ಹೇಳಿಕೊಂಡಿದ್ದಾರೆ. ಆದರೆ ವಿಟಿಯುನ ಯಾವ ವಿದ್ಯಾರ್ಥಿಗಳಿಗೂ ಇವರು ಗೈಡ್ ಆಗಿಲ್ಲ. ಇನ್ನು ಇತರೆ ವಿವಿಗಳ ವಿದ್ಯಾರ್ಥಿಗಳಿಗೆ ಗೈಡ್ ಆಗಬೇಕೆಂದರೆ ವಿವಿಯಿಂದ ಪಡೆಯಬೇಕಾದ ಅನುಮತಿಯನ್ನೂ ಇವರು ಪಡದೇ ಇಲ್ಲ ಇದುವರೆಗೂ. ಅಲ್ಲಿಗೆ ಅದೂ ಸುಳ್ಳು. ಹೀಗೆ ಮಹೇಶಪ್ಪನವರ ಅಕಾಡೆಮಿಕ್ ದಾಖಲೆಗಳೆಲ್ಲವೂ ಉತ್ಪ್ರೇಕ್ಷಿತ ಸುಳ್ಳಿನ ಕಂತೆಗಳು. ಈತನ ನಿಜ ಅಕಾಡೆಮಿಕ್ ರೆಕಾರ್ಡ್ ಅನ್ನು ಗಣನೆಗೆ ತೆಗೆದುಕೊಂಡರೆ ಯಾವುದೇ ರೀತಿಯಲ್ಲೂ ಈತ ಉಪಕುಲಪತಿಯಾಗಲಿಕ್ಕೆ ಅನರ್ಹ ಮತ್ತು ಅಯೋಗ್ಯ. ಇಂತಹ ಒಬ್ಬ ಬೋಗಸ್ ಆಸಾಮಿಯನ್ನು ನಮ್ಮ ರಾಜ್ಯಪಾಲರು ವಿಟಿಯುದಂತಹ ಪ್ರತಿಷ್ಠಿತ ವಿವಿಗೆ ಉಪಕುಲಪತಿಗಳಾಗಿ ನೇಮಿಸಿದ್ದಾರೆ.

ಮಹೇಶಪ್ಪನವರ ಹೆಸರನ್ನು ಸೂಚಿಸಿದ ಸರ್ಚ ಕಮಿಟಿಯವರನ್ನು ಈ ಕುರಿತು ಪ್ರಶ್ನಿಸಲಾಗಿ ಅವರು ನಮಗೆ ರಾಜ್ಯಪಾಲರ ಕಛೇರಿಯಿಂದ ಬಂದ ಬಯೋಡಾಟಾಗಳನ್ನೇ ನಾವು ನಮ್ಮ ಆಯ್ಕೆಗೆ ಮೂಲವಾಗಿಟ್ಟುಕೊಂಡೆವು. ಅದರ ಆಧಾರದ ಮೇಲೆಯೇ ನಾವು ಮೂವರ ಹೆಸರನ್ನು ಅಕಾರಾದಿಯಾಗಿ ರಾಜ್ಯಪಾಲರಿಗೆ ಸುಚಿಸಿದೆವು ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ. ಹಾಗಾದರೆ ರಾಜ್ಯಪಾಲರ ಕಛೇರಿಯು ಬಂದ ಅರ್ಜಿಗಳ ಸತ್ಯಾಸತ್ಯತೆಗಳನ್ನು ಪರಾಂಬರಿಸದೆ ಸರ್ಚ್ರ್ ಕಮಿಟಿಗೆ ಗುಜರಾಯಿಸಿಬಿಟ್ಟಿತೆ? ಹೌದು ಇಲ್ಲಿ ನಡೆದಿರುವ ಅಚಾತುರ್ಯವೇ ಅದು. ಹೋಗಲಿ ನಂತರ ಅಕಾರಾದಿಯಾಗಿ ಮೂರು ಹೆಸರುಗಳು ಸೂಚಿಸಲ್ಪಟ್ಟವಲ್ಲ, ಆಗ ಆ ಮೂರು ಹೆಸರುಗಳಲ್ಲಿ ಮಹೇಶಪ್ಪನವರನ್ನೇ ರಾಜ್ಯಪಾಲರು ಏಕೆ ಆರಿಸಿದರು? ಆಗಲಾದರೂ ಅವರ ಹಿನ್ನೆಲೆಯನ್ನು ಕೂಲಂಕುಷವಾಗಿ ವಿಚಾರಿಸಬಹುದಿತ್ತಲ್ಲವೇ? ಇಲ್ಲಿ ಮಹೇಶಪ್ಪನವರು ತಮ್ಮ ನೇಮಕಕ್ಕೆ ರಾಜ್ಯಪಾಲರ ಬಳಿ ಲಾಬಿ ನಡೆಸಿದ್ದರೆ? ಅಂತಹುದೊಂದು ಲಾಬಿಗೆ ಭಾರಧ್ವಾಜ್ ಮಣಿದರೆ?

ಈಗ ರಾಜ್ಯಪಾಲ ಹನ್ಸರಾಜ್ ಭಾರಧ್ವಾಜ್ ಅವರಿಗೆ ಅತ್ತ ದರಿ ಇತ್ತ ಪುಲಿ ಎಂಬಂತಹ ಸ್ಥಿತಿ. ಅತ್ತ ಮಹೇಶಪ್ಪನವರ ತಪ್ಪುಗಳು ದಾಖಲೆ ಸಮೇತ ಸಾಬೀತಾಗುತ್ತಿದೆ, ಈಗ ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಉಪಕುಲಪತಿಗಳ ಹುದ್ದೆಯಿಂದ ವಜಾಗೊಳಿಸಿದರೆ ಅವರ ನೇಮಕವೇ ತಪ್ಪು ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ. ಒಂದು ಗೌರವಾನ್ವಿತ ವಿವಿಗೆ ಇಂತಹ ಒಬ್ಬ ಫ್ರಾಡ್ ಅನ್ನು ಉಪಕುಲಪತಿಗಳಾಗಿ ನೇಮಿಸಿದ ಆರೋಪವನ್ನು ಹೊರಬೇಕಾಗುತ್ತದೆ. ಇಲ್ಲ ಈ ಆರೋಪಗಳೆಲ್ಲವೂ ಸುಳ್ಳು ಎಂದೋ ಅಥವಾ ವಾಸ್ತವಾಂಶವನ್ನು ನೋಡಿದರೂ ನೋಡದೆ ಇದ್ದು ಪರೋಕ್ಷವಾಗಿ ಅವರನ್ನು ಸಮರ್ಥಿಸಿದರೆ ಅದು ಅವರ ನೈತಿಕ ಭಾಷಣಗಳಿಗೆ ತೀರದ ಕಳಂಕ. ರಾಜ್ಯಪಾಲರ ಮುಂದಿನ ನಡೆಯಾದರೂ ಯಾವುದು? ಇದು ಸದ್ಯ ಅಕಾಡೆಮಿಕ್ ವಲಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪ್ರಶ್ನೆ. ರಾಜ್ಯಪಾಲರು ಆಗಿರುವ ಪ್ರಮಾದವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಮಹೇಶಪ್ಪನವರನ್ನು ಉಪಕುಲಪತಿಗಳ ಹುದ್ದೆಯಿಂದ ವಜಾಗೊಳಿಸಿ ನೂತನ ಸಮರ್ಥ ಉಪಕುಲಪತಿಗಳನ್ನು ನೇಮಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮರ್ಯಾದೆಯನ್ನು ಪುನಃ ದಕ್ಕಿಸಿಕೊಡಬೇಕೆಂಬುದು ಪ್ರಜ್ಞಾವಂತರೆಲ್ಲರ ಆಗ್ರಹ.

ದಿನದ ಓದು - Was there a renaissance really in India?

ಇಂದಿನ ನಮ್ಮ ಆಧುನಿಕ ಸಮಾಜದ ಸ್ಥಿತಿ - ನರೇಂದ್ರ ಶರ್ಮ ಎಂಬ ಯಾವನೋ ಮುಠ್ಠಾಳ ಶಕ್ತಿ ದೇವತೆ ಬಾಯ್ತೆರೆಯುತ್ತೆ ಐದು ಎಣ್ಣೆಗಳಿಂದ ದೀಪ ಹಚ್ಚಿಡಿ ಅಂದರೆ ಇಡೀ ಕರ್ನಾಟಕದ ಲೇಡಿ ಗಾಡ್ಸ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ನಮ್ಮದು ಆಧುನಿಕ ಸಮಾಜವಾ? ಆಗಬೇಕೆಂಬ ಆಸೆಯಿರಬಹುದು ಆದರೆ ಅಲ್ಲ ಎಂಬುದು ವಾಸ್ತವ. ಇಲ್ಲಿ ರಾಕೆಟ್ ಸೈನ್ಸ್ ಬೆಳೆಯುತ್ತಿರುವಷ್ಟೇ ವೇಗದಲ್ಲಿ ಶಿಕ್ಷಣವೂ ಅಷ್ಟೇ ವೇಗದಲ್ಲಿ ಅಂಧಶ್ರದ್ಧೆಯೂ ಬೆಳೆಯುತ್ತಿದೆ. ಅಸಲು ಈ paradox ಗೆ ಕಾರಣವಾದರೂ ಏನು? ಕೆ.ಎನ್. ಪಣಿಕ್ಕರ್ ಅವರು ಇದೆಲ್ಲದರ ಮೂಲವನ್ನು ನಮ್ಮ ರೆನೈಸಾನ್ಸ್ ಎಂದು ಕರೆಸಿಕೊಳ್ಳುವ ಸಮಾಜ ಪರಿವರ್ತನಾ ಚಳುವಳಿಯ ಅಪಕ್ವತೆ ಮತ್ತು ಅಪೂರ್ಣತೆಗಳಲ್ಲಿ ಹುಡುಕುತ್ತಾರೆ. 

ಅಸಲು ಭಾರತೀಯ ಆಧುನಿಕ ಮನೋಧರ್ಮ ಎಂಬುದು ರೂಪಿತವೇ ಆಗಿಲ್ಲ. ಇವತ್ತು ಆಧುನಿಕ ಎಂದು ಕರೆಸಿಕೊಳ್ಳುವುದು ವಸಾಹತು ಮತ್ತು ಪರಂಪರೆಯ ಪಳೆಯುಳಿಕೆಗಳು ಮಾತ್ರ. ಅವರು ರಾಜಾ ಋಆಮಾಮೋಹನ ರಾಯ್ ಅವರಾದಿಯಾಗಿ ಪೆರಿಯಾರ್ವರೆಗೂ ಈ ಸಾಮಾಜಿಕ ಪರಿವರ್ತನಾ ಚಳುವಳಿಯನ್ನು ಅತ್ಯಂತ ಸಮರ್ಥವಾಗಿ ವಿಶ್ಲೇಷಿಸುತ್ತಾ ಕೆಲವು ಅದ್ಭುತ ಹೊಳಹುಗಳನ್ನು ನೀಡುತ್ತಾರೆ. ಈ ಎಲ್ಲರೂ ಸಮಾಜ ಪರಿವರ್ತನೆಗಾಗಿ ಹೋರಾಡಿದವರೆ ಆದರೆ ಇವರೆಲ್ಲರೂ ಪರಂಪರೆ ವೇದಾಂತಗಳ ಚೌಕಟ್ಟುಗಳೊಳಗೆ ಮರುವ್ಯಾಖ್ಯಾನಕ್ಕಾಗಿ ಬಡಿದಾಡಿದವರು. ಅಸಲು ಇವರು ಅದನ್ನು ತಿರಸ್ಕರಿಸಲೇ ಇಲ್ಲ. ಹಾಗಂತ ಅದನ್ನು ಒಪ್ಪಲೂ ಇಲ್ಲ, ಅವರ ನವ ವಸಾಹತು ಶಿಕ್ಷಣದ ಅಮಲಿನಲ್ಲಿ ನಮ್ಮ ಪರಂಪರೆಯನ್ನು ಮರುವ್ಯಾಖ್ಯಾನಿಸಿ ಎಡಬಿಡಂಗಿಗಳಾದರು. ಅಸಲು ಯೂರೋಪ್ನಲ್ಲಾದಂತೆ ನಮ್ಮಲ್ಲಿ ನಿಜಕ್ಕೂ ರಿನೈಸಾನ್ಸ್ ಆಯಿತೇ? ಎನ್ನುವ ಮಹತ್ತರ ಪ್ರಶ್ನೆಯನ್ನೆತ್ತುತ್ತಾರೆ. ಚಿಂತನೆಗೆ ಹಚ್ಚುವ ಒಂದು ಅತ್ಯುತ್ತಮ ಲೇಖನ. ದಯವಿಟ್ಟು ಓದಿ. 


K.N. PANIKKAR, former Vice-Chancellor of the Sri Sankara University of Sanskrit, Kalady, Kerala.

Although the renaissance brought about a qualitative change in perspectives and practices, its impact was limited to a very small section of society. Yet, it did generate a cultural and intellectual break without which the later movements would not have been possible. In this sense, the regeneration of the 19th century was a precursor to modernity in India. Notwithstanding this positive contribution, the renaissance promoted by the colonial intelligentsia was not powerful enough to overcome the cultural backwardness of society. Many of the ills of contemporary Indian society can be traced to the unfinished agenda of the renaissance.


ದಿನದ ಓದು - The Un-Victim - the Arundhati Roy interview


The Un-Victim


Amitava Kumar interviews Arundhati Roy, GUERNICA, February 2011

In the wake of sedition threats by the Indian government, Arundhati Roy describes the stupidest question she gets asked, the cuss-word that made her respect the power of language, and the limits of preaching nonviolence.
ROY's rare insights into her writing both fiction and political non-fiction and the ways and means of resistence. a good one do read...

ಆದಿಲೋಕಕ್ಕೆ ಮತ್ತೆ ಹಸಿರು ತೋರಣ..

ಕಳೆದೊಂದೂವರೆ ವರ್ಷದಿಂದ ನನ್ನ ಬ್ಲಾಗು ಆದಿಲೋಕವನ್ನು ಪೊರೆಯುತ್ತಾ ಬಂದಿದ್ದೀರಿ. ನನ್ನಷ್ಟು irregular blogger ಇನ್ನೊಬ್ಬನಿಲ್ಲ ಅಂದುಕೊಳ್ಳುತ್ತೇನೆ. ಇದ್ದಕ್ಕಿದ್ದ ಹಾಗೆ ನಿಮ್ಮೆಲ್ಲರ ಜೊತೆ ಮಾತಿಗಿಳಿಯುವ ಹುಕಿ ಬಂದುಬಿಡುತ್ತದೆ. ಆಗ ಕೊಂಚ ಶಿಸ್ತು ತಂದುಕೊಂಡು ನಿಮಗೆಲ್ಲಾ ಹೀಗೆ ಒಂದು ಪತ್ರ ಬರೆದು ನನ್ನ ಬ್ಲಾಗನ್ನು 3 ಬಾರಿ ರೀಲಾಂಚ್ ಮಾಡಿದೀನಿ. ಮತ್ತೆ ನಾಯಿ ಬಾಲ ಡೊಂಕು ಅನ್ನುವ ರೀತಿಯಲ್ಲಿ ನಾಪತ್ತೆಯಾಗಿದ್ದೀನಿ. ಕ್ಷಮಿಸಿ ಕ್ಷಮಿಸಿ ಮತ್ತು ಕ್ಷಮಿಸಿ. ಈ ಬಾರಿ ಮೊದಲು ನೆಟ್ಟಗೆ ಕೊಂಚ ದಿನ ಶಿಸ್ತಿನಿಂದ ಬ್ಲಾಗನ್ನು ನಡೆಸಿ ಆ ನಂತರ ನಿಮಗೆ ಪತ್ರ ಬರೆಯಬೇಕೆಂದು ತೀರ್ಮಾನಿಸಿದೆ. ಕಳೆದೆರಡು ತಿಂಗಳಿಂದ ಆ ಶಿಸ್ತನ್ನು ನನ್ನಲ್ಲಿ ಕಂಡು ನನಗೆ ಆಶ್ಚರ್ಯವೂ ಸಂತೋಷವೂ ಆಗಿದೆ. ನೀವೂ ಗಮನಿಸಿದ್ದರೆ ಇನ್ನೂ ಸಂತೋಷ. ಈಗ ಮತ್ತೆ ನಿಮಗೆ ಪತ್ರ ಬರೆಯುತ್ತಿದ್ದೇನೆ. ಈವತ್ತಿನಿಂದ ಆದಿಲೋಕ ಮತ್ತೆ ಗರಿಗೆದರಿ ನಿಂತಿದೆ. 


ಈ ಬಾರಿ ಒಂದಷ್ಟು ನೂತನ ಅಂಕಣಗಳನ್ನು ರೂಪಿಸಿದ್ದೇನೆ. ಬರೆಯುವದಕ್ಕಿಂತಲೂ ಓದುವುದೇ ಚೆನ್ನ. ನಾನೋದಿದ ಉತ್ತಮ ಲೇಖನಗಳನ್ನು ದಿನದ ಓದು ಅನ್ನುವ ಅಂಕಣದಲ್ಲಿ ಕಟ್ಟಿಕೊಡುತ್ತೇನೆ. ಏನಿರದಿದ್ದರೂ ಒಂದಷ್ಟು ಒಳ್ಳೆಯ ಓದಾದರೂ ಕಟ್ಟಿಕೊಡುವ ಭರವಸೆ. ಇದು ನನ್ನ ಸೋಂಬೇರಿತನವನ್ನು ಮುಚ್ಚಲೂ ಸಹಕಾರಿ. ಹ್ಹ..ಹ್ಹ..ಪುಸ್ತಕಗಳ ಬಗ್ಗೆ ಚರ್ಚಿಸಲು ಪುಸ್ತಕದ ಹುಳು, ಜೊತೆಗೆ ಸಿನೆಮಾ-ಸಂಗೀತ-ರಂಗ. ಇನ್ನು ನನ್ನ ಮೆಚ್ಚಿನ ಪ್ರಚಲಿತ-ರಾಜಕೀಯ-ಒಳನೋಟಗಳು. ಬನ್ನಿ ಒಂದು ಕಪ್ ಕಾಫಿ ಜೊತೆಗೆ ಒಂದು ಆಪ್ತ ಸಂವಾದ, ಬಿಸಿ ಬಿಸಿ ಚರ್ಚೆ, ಆರೋಗ್ಯಪೂರ್ಣ ಜಗಳ, ಒಂದು ದಿವ್ಯ ಹರಟೆ ಎಲ್ಲವೂ ಹಿಡಿದುನಾನು ಕಾಯುತ್ತಿರುತ್ತೇನೆ. ಬರ್ತೀರಲ್ಲ...

ಇದು ಎಷ್ಟನೆಯ ಪತ್ರವೋ ಇವನದು ಅಂತ ಬಯ್ಯುವ ಮೊದಲು ಇನ್ನೊಂದೆರಡು ತಿಂಗಳು ನೋಡಿ ಸ್ವಾಮಿ..


ಸ್ವಾತಂತ್ರಕ್ಕೆ ಹಪಹಪಿಸುವ ಒಬ್ಬ ನಾಯಕ ವೇಷ ಮರೆಸಿ ದೇಶಾಂತರ ಹೊರಟ!


   Quest for Freedom, Story of an escape   – Surjit Singh Barnala 
ರಾಜಾಜಿನಗರದ ಬಾಷ್ಯಂ ವೃತ್ತದಲ್ಲಿರುವ ನನ್ನ ನೆಚ್ಚಿನ ಹಳೇ ಪುಸ್ತಕಗಳ ಅಂಗಡಿಯಲ್ಲಿ ಹುಡುಕುತ್ತಿದ್ದಾಗ ಸಿಕ್ಕ ಪುಸ್ತಕ ಇದು. Quest for Freedom, Story of an escape – Surjit Singh Barnala . ಪುಸ್ತಕದ ಹೆಸರು ಮತ್ತು ಬರಹಗಾರರ ಹೆಸರು ರಿಂಗಣಿಸಿತು. ಕೊಂಡು ತಂದಿಟ್ಟೆ. ಓದಿದ್ದು ಮಾತ್ರ ತೀರಾ ಇತ್ತೀಚೆಗೆ. ಸುರ್ಜಿತ್ ಸಿಂಗ್ ಬರ್ನಾಲ ಸದ್ಯ ತಮಿಳುನಾಡಿನ ರಾಜ್ಯಪಾಲರು, ಪಂಜಾಬದ ಮಾಜಿ ಮುಖ್ಯಮಂತ್ರಿಗಳು ಅಕಾಲಿದಳದ ಅತಿ ಹಿರಿಯ ರಾಜಕಾರಣಿಗಳು. ಇವರು ತಮ್ಮ ಅನುಭವವೊಂದನ್ನು ದಾಖಲಿಸುತ್ತಾ ಹೋಗುತ್ತಾರೆ. ಅದೇ Quest for Freedom, Story of an escape.

80ರ ದಶಕದಲ್ಲಿ ಪಂಜಾಬ ಸಿಖ್ ಉಗ್ರವಾದದಿಂದ ನರಳುತ್ತಿದ್ದ ಕಾಲದಲ್ಲಿ ಬರ್ನಾಲ ಸಾಬ್ ತಮ್ಮ ರಾಜಕೀಯ ಕೆರಿಯರ್ನ ಉಚ್ಛ್ರಾಯದಲ್ಲಿದ್ದರು. 1984ರ ಆಪರೇಷನ್ ಬ್ಲೂ ಸ್ಟಾರ್ನ ನಂತರ ಅಕಾಲಿದಳದ ಸೌಮ್ಯವಾದಿ ಬಣ ಸಂತ ಲೋಂಗೋವಾಲ್ ನೇತೃತ್ವದ ಶಿರೋಮಣಿ ಅಕಾಲಿದಳ (ಲೋಂಗೋವಾಲ್) ಅಧ್ಯಕ್ಷರಾಗಿದ್ದರು. ಲೋಂಗೋವಾಲ್ ಅವರು ದೆಹಲಿಯೊಂದಿಗೆ ಸಂಘರ್ಷಕ್ಕಿಳಿಯದೆ ಶಾಂತಿ ಮಾತುಕತೆಗೆ ಮುಂದಾದರು. ರಾಜೀವ್ ಗಾಂಧಿ ಮತ್ತು ಲೋಂಗೋವಾಲ್ ನಡುವೆ ಶಾಂತಿ ಮಾತುಕತೆಗಳು ಫಲಕಾರಿಯಾದುದಲ್ಲದೆ ಲೋಂಗೋವಾಲ್ ಅಕಾರ್ಡ್ ಎಂಬ ಒಂದು ಒಪ್ಪಂದವೂ ಆಯಿತು. ಇದು ಪಂಜಾಬದಲ್ಲಿ ನೆಲೆಸಿದ್ದ ಒಂದು stalemateಗೆ ಇತಿಶ್ರೀ ಹಾಡಿತ್ತು. ಇದು ಪಂಜಾಬದ ಉಗ್ರಗಾಮಿ ಕಟ್ಟರ್ ಸಿಖ್ಖರಿಗೆ ಇಷ್ಟವೇ ಆಗಲಿಲ್ಲ. ಆ ಒಪ್ಪಂದ ಜಾರಿಯಾಗುವಷ್ಟರಲ್ಲಿ ಉಗ್ರಗಾಮಿಗಳು ಲೋಂಗೋವಾಲ್ ಅವರನ್ನು ಹೊಡೆದುರುಳಿಸಿದ್ದರು. ಪಕ್ಷ ಅಧಿಕಾರಕ್ಕೆ ಬಂದಿತ್ತು, ಲೋಂಗೋವಾಲ್ ಅವರ ಅನುಪಸ್ಥಿತಿಯಲ್ಲಿ ಅನಾಯಾಸವಾಗಿ ಸುರ್ಜೀತ್  ಸಿಂಗ್ ಬರ್ನಾಲ 1985ರಲ್ಲಿ ಪಂಜಾಬದ ಮುಖ್ಯಮಂತ್ರಿಯಾದರು. 1987ರವರೆಗೂ ಇವರ ಸರಕಾರವಿತ್ತು. ನಂತರ ಪಂಜಾಬದಲ್ಲಿ ಟೆರರಿಸಂಗೆ ಅಂಕುಶವಿಲ್ಲದೆ ಆಗಿದೆಯೆಂಬ ಕಾರಣ ಮುಂದೊಡ್ಡಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ಕೇಂದ್ರದ ಜೊತೆ ಅಧಿಕಾರಕ್ಕಾಗಿ ಇವರು ರಾಜಿಯಾಗಿದ್ದಾರೆ, ಇವರು ಸಿಖ್ ಪಂಥದ ದ್ರೋಹಿಗಳು ಎಂಬುದು ಸಿಖ್ ಉಗ್ರಗಾಮಿಗಳ ಆರೋಪವಾಗಿತ್ತು. ಎಲ್ಲ ಸಿಖ್ ಉಗ್ರಗಾಮಿ ಸಂಘಟನೆಗಳ ಹಿಟ್ ಲಿಸ್ಟ್ನಲ್ಲಿದ್ದ ಮೊದಲ ಹೆಸರೇ ಸುರ್ಜೀತ್ ಸಿಂಗ್ ಬರ್ನಾಲ! ನಾಲ್ಕಾರು ಬಾರಿ ಅವರ ಮೇಲೆ ಹತ್ಯಾ ಯತ್ನಗಳೂ ನಡೆದಿದ್ದವಾದರೂ ಕೊಂಚದರಲ್ಲೇ ಅವೆಲ್ಲವನ್ನೂ ಜಯಿಸಿ ಉಳಿದಿದ್ದರು ಬರ್ನಾಲ. ಹಾಗಾಗಿ ಬರ್ನಾಲ ಅವರಿಗೆ ದಿನದ 24 ಘಂಟೆಯೂ ಜೆಡ್ ಸೆಕ್ಯೂರಿಟಿಯನ್ನು ನೀಡಲಾಗಿತ್ತು. ಇದು ಅವರು ಮುಖ್ಯಮಂತ್ರಿಯಾಗಿ ಇಳಿದು ಹತ್ತಿರತ್ತಿರ ದಶಕವಾದರೂ ಮುಂದುವರೆದಿತ್ತು. ಅವರಿಗೆ ಆ ಮಟ್ಟದ ಥ್ರೆಟ್ ಇತ್ತು. ಇದು ಈ ಪುಸ್ತಕದೊಳಗೆ ಹೋಗುವ ಮುನ್ನ ಇದು ಒಂದು ಸಣ್ಣ background info.

ನಮಗೆ ರಾಜಕಾರಣಿಗಳು ಅಂದ ಕೂಡಲೇ ದೇವೇಗೌಡರು, ಯಡಿಯೂರಪ್ಪ, ಲಲ್ಲೂ ಪ್ರಸಾದ್ ಯಾದವ್ರಂಥ 24 ಗಂಟೆಗಳ ರಾಜಕಾರಣಿಗಳ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ಯಾವುದೇ ಸೂಕ್ಷ್ಮ ಸಂವೇದನೆಗಳನ್ನು ನಾವು ಇವರಿಗೆ ಆರೋಪಿಸುವ ತಪ್ಪು ಮಾಡಲು ಹೋಗುವುದಿಲ್ಲ. ರಾಜಕಾರಣಿಗಳ ಚಿತ್ರ ಕೂಡ ನಮ್ಮಲ್ಲಿ ಒಂದು stereotype ಆಗಿಬಿಟ್ಟಿದೆ. ಇದರ ಹೊರತಾಗಿ ಅವರನ್ನು ನಾವು ಚಿತ್ರಿಸಿಕೊಳ್ಳುವುದೇ ಇಲ್ಲ. ಆದರೆ ಬನರ್ಾಲಾ ಸಾಬ್ ಅವರು ಇದಾವುದೇ ಅಚ್ಚಿಗೆ ಹೊಂದುವುದೇ ಇಲ್ಲ. 1987ರಲ್ಲಿ ಮುಖ್ಯಮಂತ್ರಿ ಗದ್ದುಗೆಯಿಂದ ಇಳಿದ ಮೇಲೆ ಅವರು ರಾಜಕೀಯವಾಗಿ ಸಕ್ರಿಯವಾಗೇ ಇದ್ದರು, ಬರಬರುತ್ತಾ ನೇಪಥ್ಯಕ್ಕೆ ಸರಿಯುತ್ತಿದ್ದ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ಮಾಡಲಾಯಿತು. ಅದು 1990. ಆದರೆ 1991ರಲ್ಲಿ ಕರುಣಾನಿಧಿ ಸರ್ಕಾರವನ್ನು ಕಿತ್ತೊಗೆಯಲು ಅವರು ಒಪ್ಪಿಗೆ ಸೂಚಿಸಿದಿದ್ದರಿಂದ ಅವರನ್ನು ಬಿಹಾರದ ರಾಜ್ಯಪಾಲರಾಗಿ ವರ್ಗ ಮಾಡಲಾಯಿತು. ಇದನ್ನು ಪ್ರತಿಭಟಿಸಿ ಅವರು ರಾಜೀನಾಮೆಯಿತ್ತು ಪಂಜಾಬಕ್ಕೆ ಮರಳಿದರು. ಅಷ್ಟರಲ್ಲಿ ಅಕಾಲಿದಳವನ್ನು ಸುಖ್ಬೀರ್ ಸಿಂಗ್ ಬಾದಳ್ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು.

ಬರ್ನಾಲ ತಮ್ಮ ನಿವೃತ್ತ ಜೀವನವನ್ನು ಕಳೆಯಲಾರಂಭಿಸಿದರು. ಆದರೆ ಅವರಿಗೆ ಅವರು ಬಯಸಿದ ಸ್ವಾತಂತ್ರ್ಯವಿರಲಿಲ್ಲ. ಸದಾಕಾಲ ಅವರ ಹಿಂದೆ ಹತ್ತಾರು ಶಸ್ತ್ರಸಜ್ಜಿತ ರಕ್ಷಣಾ ಪಡೆ. ಸ್ವಂತ ಊರಿಗೆ ಹೋದರೂ ಜನರೊಂದಿಗೆ ಬೆರೆಯುವಂತಿಲ್ಲ. ನಿಧಾನವಾಗಿ ಬರಬರುತ್ತಾ ಬರ್ನಾಲ ಅವರಿಗೆ ಪಂಜರದೊಳಗಿನ ಗಿಳಿಯ ಅನುಭವವಾಯಿತು. He craved for freedom, the one that he missed most from his life. ಅವರ ಸೆಕ್ಯೂರಿಟಿಯನ್ನು ಕಡಿತಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಆದರೆ ಅವರು ಇನ್ನೂ ಉಗ್ರಗಾಮಿಗಳ ಹಿಟ್ಲಿಸ್ಟ್ನಲ್ಲಿದ್ದುದರಿಂದ ಇದನ್ನು ಬರಿಸಲೇಬೇಕೆಂದು ಸರ್ಕಾರ ಕಡ್ಡಿ ತುಂಡು ಮಾಡಿತು. ಶುರುವಾಯಿತು ಅವರ Quest for Freedom. ಅದು 1994. ಏನೋ ನಿರ್ಧರಿಸಿದವರಂತೆ ರಾತ್ರಿ ಎಲ್ಲರೂ ಮಲಗಿದ ಮೇಲೆ ಟಾಯ್ಲೆಟ್ಗೆ ಹೋದವರೇ ಅವರ trademark ಬಿಳಿ ರೇಷ್ಮೇ ನೂಲಿನಂಥ ಗಡ್ಡಕ್ಕೆ ಕಪ್ಪು ಡೈ ಮಾಡಿಕೊಂಡರು. ತಮ್ಮ ಗಡ್ಡವನ್ನು ಮಡಚಿ ಕೆನ್ನೆಯ ಕೆಳಗೆ ಥತಾ ಎಂಬ ವಸ್ತ್ರದೊಂದಿಗೆ ಕಟ್ಟಿಕೊಂಡರು. ತಮ್ಮ ಟರ್ಬನ್ ಅನ್ನು ಟ್ರಕ್ ಡ್ರೈವರ್ಗಳು ಕಟ್ಟುವಂತೆ ಒಂದು ಬದಿಯಲ್ಲಿ ವಸ್ತ್ರ ಇಳಿಬಿಡುವಂತೆ ಕಟ್ಟಿದರು. ಅವರಿಗೇ ಆಶ್ಚರ್ಯ ಅವರನ್ನು ಅವರೇ ಗುರುತು ಹಿಡಿಯದಾದರು. ತಾನು ವಾರದೊಪ್ಪತ್ತು ಹೊರಗೆ ಹೋಗುತ್ತಿರುವುದಾಗಿಯೂ, ಗಾಬರಿ ಬೀಳುವ ಅವಶ್ಯಕತೆಯಿಲ್ಲ. ಹುಡುಕಿಸುವ ಪ್ರಯತ್ನವನ್ನೂ ಮಾಡಬೇಡಿ. ಹೊರಜಗತ್ತಿಗೆ ತಾನು ಸ್ನೇಹಿತನೊಬ್ಬನನ್ನು ನೋಡಲು ವಾರದೊಪ್ಪತ್ತು ಅರ್ಜೆನ್ಟೀನಗೆ ಹೋಗಿರುವುದಾಗಿ ಹೇಳು ಎಂದು ಹೆಂಡತಿಗೊಂದು ಪತ್ರ ಬರೆದಿಟ್ಟು, ಮನೆಯ ಹಿಂಬಾಗಿಲಿನಿಂದ ಹೊರನಡೆದುಬಿಟ್ಟರು. ಸೆಕ್ಯೂರಿಟಯವರು ಗಾಢ ನಿದ್ರೆಯಲ್ಲಿದ್ದರು. ಆಗ ಅವರಿಗೆ 69 ವರ್ಷ ವಯಸ್ಸು!

ಇಡೀ ಪುಸ್ತಕ ಅವರ ವಾರದೊಪ್ಪತ್ತಿನ ಈ ಸ್ವಾತಂತ್ರ್ಯದ ಅನುಭವ ಕಥಾನಕ. ಪುಸ್ತಕ ಮತ್ತು ಅದು ಹುಟ್ಟಿದ ಈ ಸಂದರ್ಭದಲ್ಲೇ ಒಂದು ಹಕ್ಕಿಯ ಮನಸ್ಸಿದೆ, ಕಾವ್ಯವಿದೆ. ಮನೆಯಿಂದ ಹೊರಬಿದ್ದ ಬರ್ನಾಲ ಅವರ ಅನುಭವ ಕಥಾನಕದ ನಡುವೆ ಅವರ ಸ್ಮೃತಿ ಪಟಲದಿಂದ ಅವರ ಇಡೀ ಜೀವನದ ಹೈಲೈಟ್ಗಳನ್ನು ನಮಗೆ ಕಟ್ಟಿಕೊಡುತ್ತಾರೆ. ಇತ್ತೀಚೆಗೆ ನಾನು ಓದಿದ ಅತ್ಯುತ್ತಮ ಪುಸ್ತಕಗಳಲ್ಲಿ ಇದೂ ಒಂದು. ಬರ್ನಾಲ  ಅವರ ಭಾಷೆ ಸರಳ. ಇಲ್ಲಿ ಭಾಷೆಗಿಂತಲೂ ಅವರ ಅನುಭವಾಮೃತವೇ ಮುಖ್ಯ. ಮನೆಯಿಂದ ಹೊರಬಿದ್ದ ಬರ್ನಾಲ ಅವರು ಟ್ರಕ್ ಡ್ರೈವರ್ ಒಬ್ಬನೊಡಗೂಡಿ ಇಂಡೋರ್ ಕಡೆ ಪ್ರಯಾಣ ಬೆಳೆಸುತ್ತಾರೆ. ಆ ಟ್ರಕ್ ಡ್ರೈವರ್ ಅವರ ಹೆಸರು ಕೇಳಿದಾಗಲೇ ಅವರಿಗೆ ಅದೊಂದಿದೆ ಎನ್ನುವುದು ಹೊಳೆಯುವುದು! ಸಮಯಕ್ಕೊಂದು ಸುಳ್ಳು - ಕರ್ತಾರ್ ಸಿಂಗ್! ಅವರಿಗೆ ಒಬ್ಬ ಸಾಮಾನ್ಯನಂತೆ ದೇಶ ಸುತ್ತಬೇಕಿತ್ತು. ರಸ್ತೆಯ ಮೇಲಿನ ಜನರೊಂದಿಗೆ ಪುನಃ ಸಂಪರ್ಕ ಸಾಧಿಸಬೇಕಿತ್ತು. ಇದೇ ಕೋವಿನಲ್ಲಿ ಅವರ ಪ್ರಯಾಣದುದ್ದಕ್ಕೂ ಅವರು ಪುನಃ ಅನುಭವಿಸುವ ಸಣ್ಣ ಸಣ್ಣ ಸಂತೋಷಗಳನ್ನು ಒಂದು ಮಗುವಿನಂತೆ ಸಂಭ್ರಮಿಸಿ ದಾಖಲಿಸುತ್ತಾ ಹೋಗುತ್ತಾರೆ. ಉದಾ: ರಸ್ತೆ ಬದಿಯ ಢಾಭಾದಲ್ಲಿ ತಿಂದ ಬಗ್ಗೆ `Roadside dhabas serve better food than most five-star hotels and at one-fiftieth the price. The service is normally superlative' ಎಂದು ಬರೆಯುತ್ತಾರೆ. ಇಂಡೋರ್ ಇಂದ ಅಜಂತ ಎಲ್ಲೋರಾ, ಅಲ್ಲಿಂದ ಲಕ್ನೌ. ಹಫೀಜ್ ಎಂಬಾತನ ಟ್ರಕ್ನ ಟಾಪ್ ಮೇಲೆ ಕೂತು ಹೋಗುತ್ತಾರೆ ಲಕ್ನೌಗೆ. ಈ ಅನುಭವವನ್ನು ಅವರು `It was like being on the first floor of a moving house' ಎಂದು ಬಣ್ಣಿಸುತ್ತಾರೆ. ಅವರ ಈ ಅನುಭವ ಕಥಾನಕದ ನಡುವೆಯೇ ತಲೆ ಹಾಕುವುದು ಅವರ ಅಟೋಬಯೋಗ್ರಫಿ. ಅವರ ಬಾಲ್ಯ, ಅವರ ರಾಜಕಾರಣದ ಮೊದಲ ದಿನಗಳು, ಎಮರ್ಜೆನ್ಸಿಯ ದಿನಗಳು, ಸೆರೆಮನೆಯಲ್ಲಿ ಅವರು ಚಿತ್ರಕಲೆಗೆ ಒಗ್ಗಿಕೊಂಡದ್ದು, 77ರಲ್ಲಿ ಮುರಾರ್ಜಿ  ದೇಸಾಯಿಯವರ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ಆಪರೇಷನ್ ಬ್ಲೂ ಸ್ಟಾರ್, ಅವರನ್ನು ಸಿಖ್ ಪಂಥದಿಂದ ಹೊರಹಾಕಿದ್ದು, ಪಂಜಾಬದ ಮುಖ್ಯಮಂತ್ರಿಯಾದದ್ದು, ಚಂದ್ರಶೇಖರ ಸರ್ಕಾರ ಪತನವಾದಾಗ ಎಲ್ಲ ಪಕ್ಷಗಳೂ ಕೂಡಿದ ನ್ಯಾಷನಲ್ ಸರ್ಕಾರವೊಂದರ ರಚನೆಯ ಕಸರತ್ತು, ಪ್ರಧಾನಿ ಪಟ್ಟಕ್ಕೆ ಸರ್ವಸಮ್ಮತವಾದ ಅಭ್ಯರ್ಥಿಯಾಗಿ ಇವರ ಹೆಸರು ಚಾಲನೆಗೆ ಬಂದದ್ದು ಎಲ್ಲವನ್ನೂ ದಾಖಲಿಸುತ್ತಾ ಹೋಗುತ್ತಾರೆ.

ಸ್ವಾತಂತ್ರಕ್ಕೆ ಹಪಹಪಿಸುವ ಒಬ್ಬ ನಾಯಕ ವೇಷ ಮರೆಸಿ ದೇಶಾಂತರ ಹೊರಡುವುದು ನಮ್ಮ ಇವತ್ತಿನ ಕಾಲಮಾನದಲ್ಲಿ ಕಾವ್ಯ! ನಮ್ಮ ನಡುವೆ ಇಂತಹ ಸೂಕ್ಷ್ಮ ಸಂವೇದನೆಯುಳ್ಳ ರಾಜಕಾರಣಿಗಳೂ ಇದ್ದಾರೆ ಎಂಬುದೇ ಹಲವರಿಗೆ ಆಶ್ಚರ್ಯವಾಗಬಹುದು. ಪುಸ್ತಕದಲ್ಲೇನಿದೆ ಎನ್ನುವುದನ್ನು ನಾನು ನಿಮಗೆ ಹೇಳಬಹುದೇ ವಿನಃ ಆ ಅನುಭವವನ್ನು ನಿಮ್ಮದಾಗಿಸಲಾಗುವುದಿಲ್ಲ. ಸಾಧ್ಯವಾದರೆ ಈ ಪುಸ್ತವನ್ನು ಓದಿ. i strongly recommend it. it is a very good read.

Proudly powered by Blogger
Theme: Esquire by Matthew Buchanan.
Converted by LiteThemes.com.