ತಿರಂಗಾ ರಾಜಕಾರಣ - ಅಪ್ರಬುದ್ಧತೆಯ ಪರಾಕಾಷ್ಟೆ


ಭಾರತ ಗಣರಾಜ್ಯದ ಷಷ್ಟಿಪೂರ್ತಿಯಲ್ಲಿ ಎಲ್ಲೋ ಅರವತ್ತಕ್ಕೆ ಅರಳೋ ಮರಳೋ ಎಂಬ ಅನುಮಾನಗಳು ಮೂಡುವಂತಾದದ್ದು ನಮ್ಮ ದೇಶದ ಇಂದಿನ ದುರಂತವೇ ಸರಿ. ಗಣರಾಜ್ಯೋತ್ಸವದಂತಹ ರಾಷ್ಟ್ರ ಹಬ್ಬದ ಸಂದರ್ಭದಲ್ಲಿ ಮೆರೆದಾಡಿದ್ದು ಶುದ್ಧ ತಿರಂಗಾ ರಾಜಕಾರಣ. ಅದೂ ಎರಡೂ ಕಡೆಯವರು ರಾಷ್ಟ್ರದ ಜನತೆಗೆ ತೋರಿಸಿದ್ದು ತಿರಂಗಾವನ್ನು ರಾಜಕಾರಣದ ವಸ್ತುವಾಗಿಸಿಕೊಳ್ಳಬಲ್ಲ ತಮ್ಮ ಕೀಳು ಅಭಿರುಚಿಯನ್ನು ಮತ್ತು ಭಾರತದ ರಾಜಕಾರಣದ ಇಂದಿನ ಅಪ್ರಬುದ್ಧತೆಯನ್ನು.

ಬಿಜೆಪಿಗರಿಗೆ ಇದೇನೂ ಹೊಸದಲ್ಲ. ಎಲ್ಲವೂ ಒಂದು ಸಿದ್ಧಸೂತ್ರದಂತೆ ನಡೆದುಹೋಗುತ್ತವೆ ಬಿಜೆಪಿಯ ಇಂತಹ ಕಾರ್ಯಕ್ರಮಗಳು. ಬಿಜೆಪಿಯ ಯುವ ಮೋರ್ಚಾ ಏಕತಾ ಯಾತ್ರಾ ಎಂಬ ಹೆಸರಿನಲ್ಲೊಂದು ಯಾತ್ರೆ ಕೈಗೊಳ್ಳುತ್ತದೆ. ಐದು ರಾಜ್ಯಗಳ ಮುಖಾಂತರ ಹಾಯ್ದು ಜನವರಿ 26ರಂದು ಕಾಶ್ಮೀರವನ್ನು ತಲುಪಿ ಶ್ರೀನಗರದ ಲಾಲ್ಚೌಕದಲ್ಲಿ ತಿರಂಗಾ ಹಾರಿಸುವುದು ಯಾತ್ರೆಯ ನೀಲಿ ನಕ್ಷೆ. ಕಾಶ್ಮೀರದ ಪ್ರಕ್ಷುಬ್ಧತೆ ಮತ್ತು ಭಧ್ರತಾ ಸೂಕ್ಷ್ಮತೆಯ ದೃಷ್ಟಿಯಿಂದ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಯಾತ್ರೆಗೆ ಅನುಮತಿ ನಿರಾಕರಿಸುತ್ತದೆ. ಕೇಂದ್ರ ಸರ್ಕಾರವೂ  ಅದರ ಬೆನ್ನಿಗೆ ನಿಲ್ಲುತ್ತದೆ. ಅನುಮತಿ ನಿರಾಕರಣೆ ಮತ್ತು 144 ಸೆಕ್ಷನ್ನ ಹೊರತಾಗಿಯೂ ನಾವು ಲಾಲ್ಚೌಕದಲ್ಲಿ ತಿರಂಗವನ್ನು ಹಾರಿಸಿಯೇ ತೀರುತ್ತೇವೆ ಎಂದು ಬಿಜೆಪಿಗರು ಶಪಥಗೈಯುತ್ತಾರೆ. ದೇಶದೆಲ್ಲೆಡೆಯಿಂದ ಶ್ರೀನಗರದೆಡೆ ಹರಿದು ಬರುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಮಾರ್ಗಮಧ್ಯೆಯೇ ತಡೆಯಲಾಗುತ್ತದೆ. ಕರ್ನಾಟಕದಿಂದ ಹೊರಟ ಕಾರ್ಯಕರ್ತರ ಪಡೆಯನ್ನು ಮಹಾರಾಷ್ಟ್ರದ ಅಹ್ಮದ್ನಗರದ ಬಳಿ ತಡೆದು ಹಿಂದಿರುಗಿಸಿದ್ದಾರೆ. ಇನ್ನು ಜನವರಿ 24ರಂದು ಶ್ರೀನಗರದ ವಿಮಾನ ನಿಲ್ಡಾಣದಲ್ಲಿ ಬಂದಿಳಿದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ಅನಂತ ಕುಮಾರ್ ಅವರನ್ನು ನಗರ ಪ್ರವೇಶಿಸಿದಂತೆ ತಡೆದು ಬಂಧಿಸಲಾಗಿದೆ. ಅವರನ್ನು ಆ ಕೂಡಲೇ ಪಂಜಾಬಕ್ಕೆ ಕಳಿಸಿಕೊಡಲಾಗಿದೆ. ನಾನು ಲೋಕಸಬೆಯ ವಿರೋಧ ಪಕ್ಷದ ನಾಯಕಿ. ನನ್ನನ್ನೇ ಬಂಧಿಸುತ್ತಾರ? ಇದು ಎಮರ್ಜೆನ್ಸಿಗಿಂತಲೂ ಘೋರ ಎಂದು ಮೇಡಂ ಸುಷ್ಮಾ ಅವರು ಅವಲೊತ್ತುಕೊಳ್ಳುತ್ತಾರೆ. ಅಷ್ಟಕ್ಕೇ ಬಿಡದ ಬಿಜೆಪಿಗರು ಜನವರಿ 25ರಂದು ಪಂಜಾಬ ಗಡಿಯ ಮುಖಾಂತರ ಕಾಶ್ಮೀರದೊಳಕ್ಕೆ ಪ್ರವೇಶಿಸಲು ಹೊರಡುತ್ತಾರೆ ತಮ್ಮ ರಥವೇರಿ. ಕಾಶ್ಮೀರದ ಗಡಿಯಲ್ಲಿ ಇವರನ್ನು ಜಮ್ಮು ಮತ್ತು ಕಾಶ್ಮೀರದ ಪೋಲೀಸರು ತಡೆದು ಪುನಃ ಬಂಧಿಸಿದರು. ಅಲ್ಲೇ ಹತ್ತಿರದಲ್ಲಿನ ಖಥುವಾದಲ್ಲಿ ಬಿಜೆಪಿ ತಿರಂಗಾ ಹಾರಿಸಿ ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗದು ಎಂಬಂತೆ ಮೀಸೆ ತಿರುವಿದೆ. ಇನ್ನು ಲಾಲಚೌಕದಲ್ಲಿ ತಿರಂಗಾ ಹಾರಿಸಲು ಅನುಮತಿಸದಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಅದ್ವಾನಿ ಹೇಳಿದ್ದಾರೆ. ಒಟ್ಟಿನಲ್ಲಿ ಜನವರಿ 26ರಂದು ಕಾಶ್ಮೀರದ ಕೊಳ್ಳ ಶಾಂತವಾಗಿತ್ತು. ಬಿಜೆಪಿ ಇನ್ನೂ ತನ್ನ ಅರಚಾಟ ನಿಲ್ಲಿಸಿಲ್ಲ. ಕಾಶ್ಮೀರ ಭಾರತದ ಭಾಗವಲ್ಲವೆ? ಅಲ್ಲಿ ತಿರಂಗಾ ಹಾರಿಸುವುದನ್ನು ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಡ್ಡಿಪಡಿಸುತ್ತಿರುವುದು ದುರದೃಷ್ಟಕರ ಎಂದು ಅಬ್ಬರಿಸಿ ಬೊಬ್ಬಿರಿಯುತ್ತಾರೆ ಬಿಜೆಪಿಗರು. ಬಿಜೆಪಿ ನಿರೀಕ್ಷಿಸಿದಷ್ಟು ಯೂಫೋರಿಯಾ ರಾಷ್ಟ್ರಾದ್ಯಂತ ನಿಮರ್ಾಣವಾಯಿತಾ? ಆಯಿತಾದರೂ ಬಿಜೆಪಿಯ ನಿರೀಕ್ಷೆಯ ಮಟ್ಟದಲ್ಲಿ ಅಲ್ಲ.

ಕೆಲವು ಕಹಿ ಸತ್ಯಗಳನ್ನು ನಾವು ಗುರುತಿಸದೆ, ಒಂದು ಭ್ರಮಾಲೋಕದಲ್ಲಿ ಇದನ್ನು ನಿಷ್ಠುರವಾಗಿ ಪರಾಮರ್ಶಿಸಲಾಗದು. 1947ರ ಸ್ವಾತಂತ್ರ್ಯಾ ನಂತರ ಕಾಶ್ಮೀರದ ಅನೆಕ್ಸೇಷನ್ನ ಸಂದರ್ಭದಲ್ಲಿ ನಡೆದ ಕೊಡು ಕೊಳ್ಳುವಿಕೆಯ ಭಾಗವಾಗಿ ಕೆಲವು ವಿಶೇಷ ಸವಲತ್ತುಗಳನ್ನು ನೀಡಲು ಒಪ್ಪಿತು ನೆಹ್ರೂ ಸರ್ಕಾರ. ಅದೇ ಆರ್ಟಿಕಲ್ 370. ಇದರನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ಅದರದೇ ಸಂವಿಧಾನವಿದೆ. ಲೋಕಸಭೆಯ ಅಧಿಕಾರವೂ ಕೂಡ ಇಲ್ಲಿ ಮೊಟಕು. ಆದರೂ ಕಾಶ್ಮೀರದಲ್ಲಿ ಪ್ರತ್ಯೇಕತೆಯ ಕೂಗು ಅತ್ಯಂತ ಪ್ರಬಲವಾಗಿರುವುದು ಎಲ್ಲರೂ ಬಲ್ಲ ವಿಚಾರವೇ. ಗಡಿಯ ಆಚೆ ಬದಿಯಿಂದ ಉತ್ತೇಜಿತರಾಗಿರುವ ಪ್ರತ್ಯೇಕತಾವಾದಿಗಳದು ಒಕ್ಕರಲ ಕೂಗು "ಆಜಾದಿ". 80ರ ದಶಕದ ಕಡೆಯ ವರ್ಷಗಳಲ್ಲಿ ಈ ಪ್ರತ್ಯೇಕತಾವಾದಿಗಳ ಧ್ವನಿ ಉತ್ತುಂಗಕ್ಕೇರುದುದೇ ಅಲ್ಲದೆ, ಅ ಧ್ವನಿಗೆ ಕಾಶ್ಮೀರ ಕೊಳ್ಳದ ಜನರ ಮನ್ನಣೆ ಮತ್ತು ಕೋರಸ್ ದೊರಕಿತು. ಕಾಶ್ಮೀರ ಕೊಳ್ಳ ಪ್ರಕ್ಷುಬ್ಧತೆಗೆ ದೂಡಲ್ಪಟ್ಟಿತು. ಕಾಶ್ಮೀರ ಪಂಡಿತರನ್ನು ಒಂದು ಎಥ್ನಿಕ್ ಕ್ಲೆಂಸಿಂಗ್ಗೆ ಒಳಪಡಿಸಲಾಯಿತು. ಪಂಡತರು ದೇಶಾದ್ಯಂತ ಚೆದುರಿ ಹೋದರು. ಹಿಂಸೆ ತಾಂಡವವಾಡಿತು. ಗಡಿಯಾಚೆಗಿನ ಬೆಂಬಲದಿಂದ ಅಕ್ಷರಶಃ ಒಂದು ಇನ್ಸರ್ಜೆನ್ಸಿ  ಶುರುವಿಟ್ಟುಕೊಂಡರು ಪ್ರತ್ಯೇಕತಾವಾದಿಗಳು. ಒಂದಿಡೀ ತಲೆಮಾರು ಉರಿದು ಹೋಯಿತು. ಕಾಶ್ಮೀರ ಅಕ್ಷರಶಃ ಭರತೀಯ ಸೈನ್ಯದಳಗಳ ಕೋಟೆಯಾಗಿ ಹೋಯಿತು. ವಾಜಪೇಯಿ ಸರ್ಕಾರ ಇದೇ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ಚಾಲೂ ಮಾಡಿತ್ತು. ಈ ಮಧ್ಯೆ ಕೆಲ ವರ್ಷಗಳ ಕಾಲ ಕೊಳ್ಳದಲ್ಲಿ ಶಾಂತಿ ನೆಲೆಸಿಯೂ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕಾಶ್ಮೀರ ಕೊಳ್ಳ ಮತ್ತೆ ಪ್ರಕ್ಷುಬ್ಧತೆಗೆ ದುಡಲ್ಪಟ್ಟಿದೆ. ಇದಕ್ಕೆ ಕಾರಣಗಳು ಹಲವು. ಈ ಬಾರಿ ಕಾಶ್ಮೀರದ ಶಾಂತಿ ಚೆದುರಲು ಫ್ಲಾಶ್ಪಾಯಿಂಟ್ ಆದದ್ದೇ ಅಮರನಾಥ ಯಾತ್ರೆ ಮತ್ತು ಅಂದಿನ ರಾಜ್ಯಪಾಲರಿಂದ ಪ್ರಚೋದಿತ ಹಿಂದೂ assertiveness ಮತ್ತು ಬಲಪಂಥೀಯ ಸಂಘಟನೆಗಳ ಅಬ್ಬರಗಳು. ನಂತರ ಸೋಫಿಯಾ ಎನ್ಕೌಂಟರ್, ನಂತರ ಕಲ್ಲು ತೂರಾಟ ಚಳುವಳಿ, ಕಳೆದ ಎರಡು ತಿಂಗಳುಗಳಿಂದ ಸಂಪೂರ್ಣ ಬಂದ್. ಒಂದೇ ಎರಡೇ ಕೊಳ್ಳ ಮತ್ತೆ ಪ್ರಕ್ಷುಬ್ಧ! ಒಟ್ಟಾರೆ ಎಂದಿಗೂ ಕೂಡ ಕಾಶ್ಮೀರ ಮನಸಾರೆ ಸಂಪೂರ್ಣವಾಗಿ ಭಾರತ ಗಣರಾಜ್ಯದ ಭಾಗವಾಗಿಯೇ ಇಲ್ಲ. ಇದನ್ನು ನಾವು ಒಪ್ಪಲೇ ಬೇಕಾಗುತ್ತದೆ.

ಈ ಎಲ್ಲ ಪ್ರಕ್ಷುಬ್ಧತೆ ಮತ್ತು ಪ್ರತ್ಯೇಕತಾವಾದವನ್ನು ಎದುರಿಸಬೇಕಿದೆ ಉಮರ್ ಅಬ್ದುಲ್ಲಾನ ಸರ್ಕಾರ. ಇದರಲ್ಲಿ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆಯೆಂಬುದು ಪ್ರಶ್ನಾರ್ಹವೇ ಸರಿ. ಇಷ್ಟರ ನಡುವೆ ಶುರುವಿಟ್ಟುಕೊಂಡಿದೆ ಬಿಜೆಪಿ ತಿರಂಗಾ ಯಾತ್ರೆಯನ್ನು. ಈ ಘೋಷಣೆಗೆ ಪ್ರತಿಕ್ರಿಯೆಯಾಗಿ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ತಾನೊಂದು ಪ್ರತಿ ಯಾತ್ರೆಯನ್ನು ಘೋಷಿಸಿತು. ಇವರಿಬ್ಬರೂ ಎದುರಾದರೆ ಭಧ್ರತಾ ಸಮಸ್ಯೆ ತಲೆದೋರುವುದು ಖಚಿತ. ಇದು ಬೆಜಿಪಿಗೂ ಹೊಸತಲ್ಲ, ಕಾಶ್ಮೀರಕ್ಕೂ ಹೊಸತಲ್ಲ. 1992ರಲ್ಲಿ ಇದೇ ಲಾಲಚೌಕದಲ್ಲಿ ತಿರಂಗಾ ಹಾರಿಸುವ ಚಳುವಳಿ ಕೈಗೊಂಡಿತು ಬಿಜೆಪಿ. ಆಗ ಇದರ ನೇತೃತ್ವ ವಹಿಸಿದವರು ಮುರಳಿ ಮನೋಹರ ಜೋಷಿ. ಅವತ್ತೂ ಹೀಗೆಯೇ ದೊಡ್ಡ ಗಲಾಟೆ ನಡೆಯಿತಾದರೂ ಕಡೆಗೆ ಅವರನ್ನು ಲಾಲಚೌಕಕ್ಕೆ ಏರ್ಲಿಫ್ಟ್ ಮಾಡಿ ಅವರ ಕೈಲಿ ತಿರಂಗಾ ಹಾರಿಸಲಾಯಿತು. ಕನ್ಯಾಕುಮಾರಿಯಿಂದ ಇದಕ್ಕಾಗಿ ಯಾತ್ರೆ ಮಾಡಿದ್ದವರು, ಲಾಲಚೌಕದಲ್ಲಿ ಇದ್ದದ್ದು ಕೇವಲ 11 ನಿಮಿಷ. ಅಷ್ಟರಲ್ಲಿ ಎರಡು ಬಾಂಬ್ ದಾಳಿ ನಡೆದಿತ್ತು. ಕೂಡಲೇ ಅವರನ್ನು ಸುರಕ್ಷಿತವಾಗಿ ತೆರಳಿಸಲಾಯಿತಾದರೂ, ಆ ದಿನ 3 ಭಧ್ರತಾ ಸಿಬ್ಬಂದಿಯೂ ಸೇರಿದಂತೆ 20 ಮಂದಿ ಸಾವನ್ನಪ್ಪಿದರು. ಹಾಗಾಗಿ ಈ ಬಾರಿ ಎರಡೂ ಎರಡೂ ಯಾತ್ರೆಗಳಿಗೂ ಅನುಮತಿ ನಿರಾಕರಿಸಿತು ಸರ್ಕಾರ. ಅರರೆ ಅವರು ಹಾರಿಸುತ್ತಿರುವುದು ತಿರಂಗಾ. ಅದರಲ್ಲಿ ತಪ್ಪೇನು? ಕಾಶ್ಮೀರವೇನು ಭಾರತದ ಭಾಗವಲ್ಲವೆ? ಅಸಲಿಗೆ ಬಿಜಪಿಗೂ ಗೊತ್ತು ನಮ್ಮ ರಾಷ್ಟ್ರದ ಅನೇಕರಲ್ಲಿ ಈ ಪ್ರಶ್ನೆ ಮೂಡುತ್ತದೆ ಎಂದು, ಸಕರ್ಾರ ಬಿಜೆಪಿಯ ಈ ಅಜೆಂಡಾಕ್ಕೆ ವಿರೋಧಿಸುತ್ತದೆಂದು. ಪ್ರಶ್ನೆ ಮೂಡಿದೆ, ವಿರೋಧವೂ ವ್ಯಕ್ತವಾಗಿದೆ. ಬಿಜೆಪಿಗೆ ಬೇಕಾಗಿದ್ದೂ ಇದೆ. ಈಗ ದೇಶಕ್ಕೆ ಬೆಂಕಿ ಬಿದ್ದಿದೆ ಕಾಶ್ಮೀರ ನಮ್ಮದಲ್ಲವೆ, ಅಲ್ಲಿ ತಿರಂಗಾ ಹಾರಿಸುವವರಿಲ್ಲ. ಕಾಂಗ್ರೆಸ್ ಪ್ರತ್ಯೇಕತಾವಾದಿಗಳಿಗೆ ಹೆದರಿ ಕೂತಿದೆ. ಇದು ವೋಟ್ಬ್ಯಾಂಕ್ ರಾಜಕಾರಣ....ಇಂಥ ಅಪ್ರಬುದ್ಧ ರಾಜಕಾರಣದಿಂದ ದೇಶಕ್ಕೆ ನಿಜ ಬೆಂಕಿ ಬಿದ್ದಿದೆ.

ಬಿಜೆಪಿ nationalism ಅನ್ನು ತನ್ನ ಅಜೆಂಡಾ ಎಂದು ಸಾರುವ ಪಕ್ಷ. ಆದರೆ ಅದು ಸಾರುವುದು nationalism ಮಾತ್ರ ಅಲ್ಲ, ಅದ್ವಾನಿಯವರು ಅದಕ್ಕೊಂದು prefix ಅನ್ನು ಜೋಡಿಸಿದ್ದಾರೆ ಅದು cultural nationalism! ಏನದು cultural nationalism? ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದೇ ರಾಷ್ಟ್ರ ಭಕ್ತಿ. ಸರಿ ಹಾಗಾದರೆ ಯಾವುದು ಭಾರತೀಯ ಸಂಸ್ಕೃತಿ? ಅಸಲು ಸಮಸ್ಯೆ ಉದ್ಭವವಾಗುವುದೇ ಇಲ್ಲಿ. ಬಿಜೆಪಿಯ ಹಿಂದುತ್ವದ ನೆಲೆಗಟ್ಟಿನಲ್ಲಿ ಅವರು ಹಿಂದೂ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ ಎಂದು ಅರ್ಥೈಸುತ್ತಾರೆ. ಹಾಗಾದರೆ ಈ ದೇಶದ 36 ಕೋಟಿ ಮುಸಲ್ಮಾನರೇನು ಮಾಡಬೇಕು? ಇತರೆ ಅಲ್ಪಸಂಖ್ಯಾತರು? ಅಲೆಮಾರಿಗಳು? ಈ ದೇಶದ ಟ್ರೈಬಲ್ಗಳೇನು ಹಿಂದೂಗಳೇ? ಅವರದಾವ ಸಂಸ್ಕೃತಿ? ತಿಕ್ಕಾಟ ಶುರುವಾಗುವುದೇ ಇಲ್ಲಿ.

ಇನ್ನು ಬಿಜೆಪಿಯ ತಿರಂಗಾ ಯಾತ್ರೆಗಳಲ್ಲಿನ ಸೂಕ್ಷ್ಮ ರಾಜಕೀಯವನ್ನು ಗಮನಿಸಿ. ಇದು ಲಾಲಚೌಕಕ್ಕೆ ಸೀಮಿತವಲ್ಲ. ನಮ್ಮ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲೂ ನಡೆದದ್ದು ಇದೇ ಅಲ್ಲವೇ? ಅತಿ ಹೆಚ್ಚು ಮುಸ್ಲಿಮರ ದಟ್ಟಣೆಯಿರುವ ಪ್ರದೇಶಕ್ಕೆ ಹೋಗಿ ಅವರ ಪ್ರಾರ್ಥನಾ ಸ್ಥಳಗಳ ಮೇಲೋ, ಇಲ್ಲವೇ ಅವರ ಚೌಕಗಳಲ್ಲೋ ಹೋಗಿ ಇವರು ಹಿಂದುತ್ವವನ್ನು ಪ್ರತಿಷ್ಠಾಪಿಸಬೇಕು. ಅವರ ಮುಂದೆ ಎದೆ ಸೆಟೆಸಿ ನಿಲ್ಲಬೇಕು. ನೀವು ನಮ್ಮ ದೇಶದಲ್ಲಿ ಸೆಕೆಂಡ್ ಕ್ಲಾಸ್ ಎಂದು ಹೇಳಬೇಕು. ಒಂದು machismo fantasy. ಇವರು ಅಲ್ಲಿ ಹೋಗಿ ಭಗವಾಧ್ವಜವನ್ನು ಹಾರಿಸಿದರಾದರೂ ಅದನ್ನು ತಡೆದುಕೊಳ್ಳಬಹುದು. ಆದರೆ ಇವರು ತಿರಂಗಾವನ್ನು ಹಿಡಿದು ಹೋಗುತ್ತಾರೆ. ಇಲ್ಲಿ ಎರಡು ಸೂಕ್ಷ್ಮಗಳಿವೆ. ಒಂದು ಮುಸ್ಲಿಂ ಸಮೂಹ ಹೆಚ್ಚಗೆ ಇರುವ ಜಾಗದಲ್ಲಿ ಇವರು ತಿರಂಗಾ ಹಾರಿಸಿ ಸಾಧನಾ ಸಮಾವೇಶ ಮಾಡಿದರೆ, ಅದು ಮುಸ್ಲಿಮರೇನೋ ಶತೃ ರಾಷ್ಟ್ರದವರು, ಅವರ ನೆಲದಲ್ಲಿ ನಾವು ನಮ್ಮ ರಾಷ್ಟ್ರಧ್ವಜವನ್ನು ಹಾರಿಸಿ ಬಂದೆವು ಅನ್ನುವ ಭಾವ ಅಲ್ಲಿದೆ. ಸಹಜವಾಗಿಯೇ ಮುಸ್ಲಿಮರು ಇಂತಹ ಅವಮಾನಗಳಿಂದ ಕುದ್ದು ಹೋಗುತ್ತಾರೆ. ಇದನ್ನು ವಿರೋಧಿಸುತ್ತಾರೆ. ನೋಡಿದಿರಾ ಅವರ ಏರಿಯಾದಲ್ಲಿ ತಿರಂಗಾ ಹಾರಿಸಲೂ ಬಿಡೋದಿಲ್ಲ ಈ ತುರುಕರು. ಇವರು ಯಾವತ್ತಿದ್ದರೂ ಪಾಕಿಸ್ತಾನದವರೇ ಕಣ್ರೀ ಅಂತ ಹೇಳಿಕೊಂಡು ತಿರುಗುತ್ತಾರೆ ನಮ್ಮ ಬಿಜೆಪಿಗರು. ಇನ್ನು ಆರ್.ಎಸ್.ಎಸ್. ಬಿಜೆಪಿಗರ ಕೈಯಲ್ಲಿ ತಿರಂಗ ಒಂದು metaphor ಕೂಡ. ಅವರ cultural nationalism ಸಿದ್ಧಾಂತದ ಹಿನ್ನೆಲೆಯಲ್ಲಿ ಭಾರತ ರಾಷ್ಟ್ರ ಮತ್ತು ಅವರ ಕನಸಿನ ಹಿಂದೂ ರಾಷ್ಟ್ರವನ್ನು ಅವರು ಇಲ್ಲಿ ಏಕ ಮಾಡುತ್ತಿರುತ್ತಾರೆ. ಅದು ಇಂಥ ಸಂದರ್ಭಗಳಲ್ಲಿ ಭಗವಾಧ್ವಜಕ್ಕಿಂತಲೂ ಬೇರೆಯೇನೂ ಅಲ್ಲ. ಅದು ಹಿಂದೂ ಸಂಸ್ಕೃತಿಯೇ ಈ ರಾಷ್ಟ್ರದ ಮುಖ್ಯವಾಹಿನಿ, ಅದರ ಹೊರತಾದವರು ನೀವು. ಅದಕ್ಕಾಗಿಯೇ ನಿಮ್ಮನ್ನು ಗೆಲ್ಲಲು ಬರುತ್ತಿದ್ದೇವೆ ತಿರಂಗಾ ಹಾರಿಸುತ್ತೇವೆ ನಿಮ್ಮ ಏರಿಯಾದಲ್ಲಿ ಎಂಬುದನ್ನು ಧ್ವನಿಸುತ್ತದೆ. ಇದು ಭಾರತ ಗಣರಾಜ್ಯದ ಮೂಲ ಪರಿಕಲ್ಪನೆಗೆ ವಿರುದ್ಧವಾದುದು. ಮುಸ್ಲಿಮರಷ್ಟೇ ಅಲ್ಲ ಈ ನಾಡಿನ ಎಲ್ಲ ಪ್ರಜ್ಞಾವಂತರೂ ಇದನ್ನು ವಿರೋಧಿಸಬೇಕಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗುತ್ತದೆ.

ಇನ್ನೊಂದು ಮಾತು. ಕಾಶ್ಮೀರ ಪ್ರತ್ಯೇಕತಾವಾದಕ್ಕೆ ಸರ್ಕಾರ ಸೋತಿದೆ. ನಾವಲ್ಲಿ ರಾಷ್ಟ್ರದ ಸ್ವಾಮ್ಯತೆಯನ್ನು ಪುನಃ ಪ್ರತಿಷ್ಠಾಪಿಸುತ್ತೇವೆ ಎಂದು ಬೊಬ್ಬಿರಿಯುವ ಬಿಜೆಪಿಗರು ದೇಶದ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಇವರು ಹೇಳುವುದು ಅಸಲಿಗೆ ಅಲ್ಲಿ ಗಣರಾಜ್ಯೋತ್ಸವದಂದು ಕೂಡ ಯಾರೂ ತಿರಂಗಾ ಹಾರಿಸುವುದೇ ಇಲ್ಲವೇನೋ ಎಂಬಂತಿದೆ. ಪ್ರತಿ ರಾಜ್ಯದಲ್ಲೂ ನಡೆಯುವಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲೂ ಕೂಡ ನಿನ್ನೆ ರಾಜಧಾನಿ ಶ್ರೀನಗರದ ಭಕ್ಷಿ ಸ್ಟೇಡಿಯಂನಲ್ಲಿ ಸರಕಾರೀ ಧ್ವಜಾರೋಹಣ ಮತ್ತು ವಂದನೆ ನಡೆಯಿತು. ರಾಜ್ಯಪಾಲರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದಲ್ಲದೆ ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರದ ವತಿಯಿಂದ ಉಸ್ತುವಾರಿ ಮಂತ್ರಿ ಇಲ್ಲ ಜಿಲ್ಲಾ ಕಲೆಕ್ಟರ್ ಧ್ವಜಾರೋಹಣವನ್ನು ನೆರವೇರಿಸುತ್ತಾರೆ. ನಿನ್ನೆಯೂ ನೆರವೇರಿಸಿದ್ದಾರೆ. ಕಳೆದ 61 ವರ್ಷಗಳಿಂದ ಇದು ನಡೆದುಕೊಂಡೇ ಬಂದಿದೆ. ಭಾರತ ಸರ್ಕಾರ ತನ್ಮೂಲಕ ಕಾಶ್ಮೀರ ಕೊಳ್ಳದ ಮೇಲೆ ತನ್ನ ಏಕಸ್ವಾಮ್ಯವನ್ನು ಸಾರಿದೆ. ಅದಕ್ಕೆ ಕೊಳ್ಳದಲ್ಲಿ ಯಾವುದೇ ವಿರೋಧವೂ ವ್ಯಕ್ತವಾಗಿಲ್ಲ. ವಿರೋಧ ವ್ಯಕ್ತವಾದದ್ದು ಬಿಜೆಪಿಯ ಯಾತ್ರೆಗೆ ಮಾತ್ರ.

ಅಸಲಿಗೆ ಬಿಜೆಪಿ ಇದನ್ನು ಯಾಕಾದರೂ ಕೈಗೆತ್ತಿಕೊಂಡಿತು? ಅದು ಶುದ್ಧ ರಾಜಕೀಯ. ಇಂದಿನ ಯುಪಿಎ ಸರ್ಕಾರ ಒಳಗಿಂದಲೇ ಶಿಥಿಲಗೊಳ್ಳುತ್ತಿರುವುದು ವಾಸ್ತವ. ರಾಜಕೀಯ ಅಸ್ಥಿರತೆ -  ಅತ್ತ ತೃಣಮೂಲ ಕಾಂಗ್ರೆಸ್ ಇತ್ತ ಡಿಎಂಕೆ ಇಬ್ಬರ ಜೊತೆಗೂ ಕಾಂಗ್ರೆಸ್ನ ಸಂಬಂಧಗಳು ಹಳಸಿರುವುದು, ಬೆಲೆಯೇರಿಕೆ, ಭ್ರಷ್ಟಾಚಾರ - 2ಜಿ, ಆದರ್ಶ್, ಸಿಡಬ್ಲ್ಯೂಜಿ....ಮನಮೋಹನರೇ ವಿವಾದಗಳ ಕೇಂದ್ರ ಬಿಂದುವಾಗಿರುವುದು, ಅವಕಾಶ ಸಿಕ್ಕರೆ ಜೆಪಿಸಿ ಇಲ್ಲ ಪಿಎಸಿ ಮುಖಾಂತರವೇ 2ಜಿ ಹಗರಣದಲ್ಲಿ ಮನಮೋಹನರನ್ನೇ ಹಣಿಯುವ ವಿರೋಧ ಪಕ್ಷಗಳ ತಂತ್ರ ಫಲಕಾರಿಯಾದರೆ ಪ್ರಧಾನಿಗಳ ರಾಜೀನಾಮೆಯ ಸಂದರ್ಭ ಬಂದರೂ ಬರಬಹುದು. ಇವೆಲ್ಲವೂ ಸೂಚಿಸುತ್ತಿರುವುದು ಲೋಕಸಭೆಗೆ ಮಧ್ಯಂತರ ಚುನಾವಣೆಯೆಡೆಗೆ. ಇತ್ತೀಚೆಗೆ ಅದ್ವಾನಿಯವರಿಂದ ಹಿಡಿದು ಯಡಿಯೂರಪ್ಪನವರವರೆಗೂ ಇದೇ ಮಾತು. ಚುನಾವಣೆಗೆ ಒಂದು ಇಶ್ಯೂ ಬೇಕಲ್ಲ, ಅದೂ ಮಧ್ಯಂತರ ಚುನಾವಣೆಯನ್ನು ಈ ದೇಶದ ಜನರ ಮೇಲೆ ಹೇರಿದಾಗ.

ಇತ್ತೀಚಿನ ಬಿಜೆಪಿಯ ಕಾರ್ಯಕ್ರಮಗಳನ್ನು ಗಮನಿಸಿದರೆ ಚುನಾವಣೆಗೆ ಇಶ್ಯೂಗಳನ್ನು ಹೊಸೆಯುತ್ತಿರುವುದು ದೃಗ್ಗೋಚರವಾಗುತ್ತದೆ. ಒಂದು ಕಡೆ ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಕಪ್ಪು ಹಣವನ್ನು ಪಡೆಯುವ ಬಗ್ಗೆ ಅದ್ವಾನಿ ಪದೇ ಪದೇ ಮಾತನಾಡುತ್ತಿದ್ದಾರೆ. ಸರ್ಕಾರದ ಅನಾಸಕ್ತಿಯನ್ನು ಟೀಕಿಸುತ್ತಿದ್ದಾರೆ. ಇನ್ನು ಯುಪಿಎ ಹಗರಣಗಳಿಗೇನು ಕೊರತೆಯೇ? 2ಜಿ, ಆದರ್ಶ್, ಸಿಡಬ್ಲ್ಯೂಜಿ,..ಮನಮೋಹನರನ್ನೇ ಈ ಬಲೆಯಲ್ಲಿ ಹೊಸೆದುಬಿಡುವ ಪ್ರಯತ್ನವೂ ನಡೆದಿದೆ. ಸದ್ಯ ಜನ ಕೂಡ ಈ ಭ್ರಷ್ಟಾಚಾರದಿಂದ ಜಿಗುಪ್ಸೆಗೊಂಡಿದ್ದಾರೆ. ಆದರೆ ಇದರಲ್ಲಿ ಬಿಜೆಪಿಗೆ ಒಂದು ಸಮಸ್ಯೆಯಿದೆ. ಕಾಂಗ್ರೆಸ್ನ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಮಾತನಾಡುತ್ತಿದ್ದಂತೆಯೇ ಕಾಂಗ್ರೆಸ್ ಎನ್ಡಿಎ ಕಾಲದ ಹಗರಣಗಳ ಫೈಲ್ ತೆರೆಯುತ್ತದೆ, ಯಡಿಯೂರಪ್ಪನವರನ್ನು ಹಿಡಿದು ಹೀಯಾಳಿಸುತ್ತದೆ.

ಹಾಗಾಗಿ ಬಿಜೆಪಿಗೆ ಮತ್ತೊಂದು ಇಶ್ಯೂ ಬೇಕಿದೆ ಈಗ. ಹಳೆ ಗಂಡನ ಪಾದವೇ ಗತಿ ಎಂಬಂತೆ ತನ್ನ ಮೂಲ ಪ್ರಚೋದನಾತ್ಮಕ ರಾಜಕಾರಣಕ್ಕೆ ಮರಳಿದೆ. ಬಿಜೆಪಿಗೆ ಕಾಶ್ಮೀರ ಮೊದಲಿಂದಲೂ ಒಂದು ಉತ್ತಮ ಅಸ್ತ್ರ. ಆರ್ಟಿಕಲ್ 370 ಕಿತ್ತೊಗೆಯಬೇಕು ಎಂಬುದು ಅದರ ಮೂಲ ಅಜೆಂಡಾಗಳಲ್ಲಿ ಒಂದು. ಈಗಲೂ ಅದಕ್ಕೆ ಕಾಶ್ಮೀರದಲ್ಲಿ ಏನಾದರೂ ಅದಕ್ಕೆ ಚಿಂತೆಯಿಲ್ಲ. ಆದರೆ ಕಾಶ್ಮೀರದಲ್ಲಿ ತಿರಂಗಾ ಹಾರಿಸಲು ಕಾಂಗ್ರೆಸ್ ಸರ್ಕಾರ ಬಿಡಲಿಲ್ಲ ಎಂಬುದು ದೇಶದ ಇತರೆಡೆಗಳಲ್ಲಿ ಅನೇಕ ಹುಬ್ಬುಗಳನ್ನು ಮೇಲೇರಿಸುತ್ತದೆ. ಬಿಜೆಪಿಗೆ ಬೇಕಿರುವುದೂ ಅದೇ. ಇದೂ ಸಹ ಶುದ್ಧ ವೋಟ್ ಬ್ಯಾಂಕ್ ರಾಜಕಾರಣವೇ. ಬಿಜೆಪಿ ಇಂತಹ ಪ್ರಚೋದನಾತ್ಮಕ ರಾಜಕಾರಣವನ್ನು ಬಿಟ್ಟು ಎಂದಿಗೆ ಪ್ರಬುದ್ಧತೆಗೆ ಹೊರಳುತ್ತದೋ?

ವಿವಿಯಲ್ಲಿ ರಿಯಲ್ ಎಸ್ಟೇಟ್ ದಂಧೆ - ಸೆಂಟ್ರಲ್ ಕಾಲೇಜು ಮೈದಾನ ಇನ್ನು public parking lot!!


ಅತ್ತ ಅಸಲಿಗೆ ಇಲ್ಲದೇ ಇರುವ ಕ್ಷೇತ್ರದ ಮತದಾರರನ್ನು ತಣಿಸುವಂತೆ ಒಂದರ ಮೇಲೊಂದರಂತೆ ಪಾಪ್ಯುಲಿಸ್ಟ್ ಆದ ಯೋಜನೆಗಳನ್ನು ಘೋಷಿಸುತ್ತಾ, ಯಡಿಯೂರಪ್ಪ, ಉಮೇಶ ಕತ್ತಿ ಅವರ ಪ್ರತಿನಿಧಿಯಂತೆ ಕಾರ್ಯ ನಿರ್ವಹಿಸುತ್ತಾ ಶುದ್ಧ ರಾಜಕಾರಣಿಯಂತೆ ವರ್ತಿಸುತ್ತಿರುವ ಪ್ರಭುದೇವ ಮತ್ತೊಂದು ಮಜಲಿನಲ್ಲೂ ತಮ್ಮ ನಾಯಕರನ್ನು ಹಿಂಬಾಲಿಸುತ್ತಿದ್ದಾರೆ. ಅವರು ವಿವಿಯ ಭೂಮಿಗೆ ಕೈಹಚ್ಚಿ ಕೂತಿದ್ದಾರೆ.

ಇತ್ತೀಚೆಗೆ ಅವರು ಬೆಂಗಳೂರು ವಿವಿಗೆ development and revenue generation model ಒಂದನ್ನು ಅನಾವರಣಗೊಳಿಸಿದ್ದಾರೆ. ಇದರ ಭಾಗವಾಗಿ ಜ್ಞಾನ ಭಾರತಿ ಕ್ಯಾಂಪಸ್ಸಿನಲ್ಲಿ ಒಂದು ಬೃಹತ್ bio-park,  ಲಾಲ್ ಬಾಗ್ ಮಾದರಿಯಲ್ಲಿ 4 ಸಣ್ಣ botanical garden ಗಳು, ವೃಷಭಾವತಿ ವ್ಯಾಲಿಯಲ್ಲಿ ಒಂದು ಕೊಳಚೆ ಶುದ್ಧೀಕರಣ ಘಟಕ, ಮ್ಯೂಸಿಯಂ ಮತ್ತು ಒಂದು ಅಂತರಾಷ್ಟ್ರೀಯ ವಿದ್ಯಾರ್ಥಿ ನಿಲಯ ತಲೆ ಎತ್ತಲಿದೆ. ಇದಲ್ಲದೆ ಇದೇ ಪ್ರಪೋಸಲ್ಲಿನಲ್ಲಿ ಅಡಗಿರುವ ಮತ್ತೊಂದು ಆಘಾತಕಾರಿ ವಿಷಯವಿಲ್ಲಿದೆ ನೋಡಿ - ಗಾಂಧೀನಗರದಲ್ಲಿರುವ ಸೆಂಟ್ರಲ್ ಕಾಲೇಜು ಕ್ಯಾಂಪಸ್ಸಿನ ಹಿಂದಿರುವ ಅತ್ಯಂತ ಪ್ರಸಿದ್ಧ ಸೆಂಟ್ರಲ್ ಕಾಲೇಜು ಕ್ರೀಡಾಂಗಣವನ್ನು public parking lot ಮಾಡುವ ಪ್ರಪೋಸಲ್ಲು!

ಈ ಎಲ್ಲ ಯೋಜನೆಗಳಿಗೂ ವಿವಿ ಒಂದು ರೂಪಾಯಿ ಕೂಡ ಖರ್ಚು ಮಾಡುವುದಿಲ್ಲ. ವಿವಿ ಇದನ್ನು ಬಿಡಿಎ ಅವರೊಡಗೂಡಿ BOOT - Build, Own, Operate and Transfer ನ ಆಧಾರದ ಮೇಲೆ ಕೈಗೆತ್ತಿಕೊಳ್ಳಲು ಇಚ್ಛಿಸಿದೆ. ಅಂದರೆ ಈಗ ಬಿಡಿಎ ಈ ಎಲ್ಲದಕ್ಕೂ ಹಣ ಹೂಡುತ್ತದೆ. ನಿರ್ಮಿಸುತ್ತದೆ. ಅವರು ಹೂಡಿದ ಹಣ ಹಿಂತಿರುಗುವವರೆಗೆ ಅಂದರೆ ಒಂದು ಒಪ್ಪಂದದಂತೆ ಕೆಲವು ವರ್ಷಗಳ ಕಾಲ ಅದನ್ನು ಬಿಡಿಎ ನಿರ್ವಹಿಸುತ್ತದೆ. ನಂತರ ಅದನ್ನು ವಿವಿಗೆ ಹಸ್ತಾಂತರಿಸುತ್ತದೆ. ಇದೇನೂ ಹೊಸ ಮಾದರಿಯಲ್ಲ. ನೈಸ್ ರಸ್ತೆ ನಿರ್ಮಾಣಗೊಳ್ಳುತ್ತಿರುವುದೇ ಈ ಮಾದರಿಯಲ್ಲಿ. ಇದರ ಗೋಜಲುಗಳು ಅಪಾರ. ಕಡೆಗೆ ಇದರ ಪಯಣ ಭೂಮಿಯ ಪರಭಾರೆಯೇ ಆಗಿರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದರ ಕುರಿತಾಗಿ ಒಂದು ಡ್ರಾಫ್ಟ್ ಒಪ್ಪಂದದವನ್ನು ಈಗಾಗಲೇ ಸಿಂಡಿಕೇಟ್ ಒಪ್ಪಿದ್ದು ಅದನ್ನು ಬಿಡಿಎಗೆ ಕಳಿಸಿಕೊಡಲಾಗಿದೆ.

ಸೆಂಟ್ರಲ್ ಕಾಲೇಜು ಕ್ರೀಂಡಾಂಗಣದಲ್ಲಿ ಅಸಲಿಗೆ ಇವರು ಮಾಡಬೇಕೆಂದಿರುವುದಾದರೂ ಏನು? ಬಹುಮಹಡಿ ಸಮುಚ್ಛಯ. ನೆಲಮಾಳಿಗೆಯಲ್ಲಿ ವಾಹನ ನಿಲುಗಡೆ ನಿಲ್ಡಾಣ, ಅದರ ಮೇಲೊಂದು ಅಂತರಾಷ್ಟ್ರೀಯ ಮಟ್ಟದ ಕನ್ವೆಂಷನ್ ಸೆಂಟರ್ ಇಲ್ಲ ಒಂದು ಒಳಾಂಗಣ ಕ್ರೀಡಾಂಗಣ. ಉಪಕುಲಪತಿ ಪ್ರಭುದೇವ ಅವರು ಒಮ್ಮೊಮ್ಮೆ ಒಂದೊಂದು ಮಾತಾಡುತ್ತಾರೆ. ಒಮ್ಮೆ ಒಳಾಂಗಣ ಕ್ರೀಡಾಂಗಣ ಅಂತಾರೆ, ಮಗದೊಮ್ಮೆ ಇಲ್ಲೊಂದು ಕಾಂಪ್ಲೆಕ್ಸ್ ಕಟ್ಟಿಬಿಡೋಣ ಅಂತಾರೆ. ಇಲ್ಲಿ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಬೇಕೆಂಬ ಪ್ರಪೋಸಲ್ಲು ತುಂಬಾ ಹಳೆಯದು. ಸುಮಾರು ಎರಡು ವರ್ಷಗಳಿಂದ ಅದು ಧೂಳು ಹಿಡಿಯುತ್ತಿದೆ. ಅದಕ್ಕೆ ತೀವ್ರ ವಿರೋಧವೂ ಇದೆ. ಈಗ ಈ ಜಾಗವನ್ನು ಏನಾರೂ ಮಾಡಿಯೇ ತಿರಬೇಕೆಂಬ ಉತ್ಕಟ ವಾಂಛೆಯಿಂದ ಹೊರಟಿರುವುದು, ಈ ವಿಷಯವನ್ನು ಎತ್ತುತ್ತಿರುವುದು ನಿರ್ವಿವಾದವಾಗಿ ಉಪಕುಲಪತಿಗಳಾದ ಪ್ರಭುದೇವ ಅವರೇ. ಅಸಲಿಗೆ ವಿವಿಯಲ್ಲಿ ಇಲ್ಲಿ ಏನು ಮಾಡಬೇಕೆಂಬುದು ಸ್ಪಷ್ಟವಿಲ್ಲ. ಸ್ಪಷ್ಟವಿರುವುದು ಈ ಜಾಗವನ್ನು ಬಳಸಿಕೊಳ್ಳಬೇಕು ಎಂಬುದೊಂದೇ ಆಗಿದೆ.

ಇನ್ನು ಇದಕ್ಕೆ ಪ್ರಭುದೇವ ಅವರು ನೀಡುವ ಸಮರ್ಥನೆಯಿದೆಯಲ್ಲ, ಅದು ನಮ್ಮ ಇಂದಿನ ವ್ಯವಸ್ಥೆಯ ಕಾಲಘಟ್ಟದ ಪ್ರತೀಕವೋ, ವ್ಯಂಗವೋ, ದೌರ್ಭಾಗ್ಯವೋ? ತಿಳಿಯದು. ಈ ಸೆಂಟ್ರಲ್ ಕಾಲೇಜು ಗ್ರೌಂಡ್ಸ್ ಅನ್ನು ನಾವು ಸರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಇದನ್ನು ನಾವು ಹೊರಗಿನವರಿಗೆ ಬಾಡಿಗೆಗೆ ನೀಡಿದರೆ ದಿನವೊಂದಕ್ಕೆ ಬರುವುದು ಬರಿಯ 5 ಸಾವಿರ, ಇನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಿದರೆ ಬರಿಯ 1 ಸಾವಿರ. its under utilised. ಹಾಗಾಗಿ ಈ ಜಾಗವನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಂಡು ಅದರಿಂದ ಅತಿ ಹೆಚ್ಚು returns ಅನ್ನು ಪಡೆಯಲಾಗುವುದು!!! ಆಯಕಟ್ಟಿನ ಸ್ಥಳದಲ್ಲಿ 12 ಎಕರೆ ವಿಸ್ತೀರ್ಣದ ಭೂಮಿ `ಪಾಳು' ಬೀಳುತ್ತಿದೆ. ಇದು ಎಂತಹ dead capital. ಇದನ್ನು ಹೇಗೆಲ್ಲಾ encash ಮಾಡಿಕೊಳ್ಳಬಹುದು? ಇದು ನಮ್ಮ ಪ್ರತಿಷ್ಠಿತ ವಿಶ್ವವಿದ್ಯಾಲಯದ ಕುಲಪತಿಗಳು ಯೋಚಿಸುವ ವಿಧಾನ.  ಈ ವಾದಸರಣಿಯಲ್ಲಿನ ಕೆಲವು ಸೂಕ್ಷ್ಮಗಳನ್ನಿಲ್ಲಿ ಗಮನಿಸಿ. ಹುಡಗರ ಮನೋ-ದೈಹಿಕ ವಿಕಸನಕ್ಕೆಂದು ತೆಗೆದಿರಿಸಲಾಗಿರುವ ಕ್ರೀಡಾಂಗಣ ಇವರ ಕಣ್ಣಿಗೆ a dead capital under utilised which needs to be commercially exploited for revenue generation. ಇದು ನಮ್ಮ ಇಂದಿನ ವಿವಿಗಳ ಬೌದ್ಧಿಕತೆ. ನಮ್ಮ ವಿಶ್ವವಿದ್ಯಾಲಯಗಳು ಎತ್ತ ನಡೆದಿವೆ? ಜಾಗತೀಕರಣದ ಸುಳಿಗೆ ಸಿಕ್ಕ ಇವು ಅಂಗಡಿಗಳಾಗಿ ತಯಾರಾಗುತ್ತಿವೆಯಾ? ಇಲ್ಲ ನಮ್ಮ ವಿವಿಗಳೂ ಕೂಡ carporate ಸಂಸ್ಥೆಗಳೋ?

ಹೋಗಲಿ ಇವರಿಗೆ ಸೆಂಟ್ರಲ್ ಕಾಲೇಜು ಕ್ರೀಡಾಂಗಣದ ಸಾಂಸ್ಕೃತಿಕ ಮಹತ್ವದ ಅರಿವಾದರೂ ಇದೆಯೇ? ಇದು ಸುಮಾರು 150 ವರ್ಷಗಳ ಹಳೆಯ ಕ್ರೀಡಾಂಗಣ. ಕರ್ನಾಟಕ ಕ್ರಿಕೆಟ್ನ ತವರು ಮನೆ. ಅಸಲಿಗೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಜನಿಸಿದ್ದೇ ಇಲ್ಲಿ. 1972ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ನಿರ್ಮಾಣವಾಗುವವರೆಗೂ ಬೆಂಗಳೂರಿನ ಏಕೈಕ ಕ್ರಿಕೆಟ್ ಸ್ಟೇಡಿಯಂ ಸೆಂಟ್ರಲ್ ಕಾಲೇಜ್ ಗ್ರೌಂಡ್ಸ್! ಇಲ್ಲಿ ಅನೇಕಾನೇಕ ಅಂತರಾಷ್ಟ್ರೀಯ ಟೆಸ್ಟ್ ಮತ್ತು ಫಸ್ಟ್ ಕ್ಲಾಸ್ ಕ್ರಿಕೆಟ್ನ ಪಂದ್ಯಗಳಾಗಿವೆ. ಪ್ರಸನ್ನ, ವಿಶ್ವನಾಥ್, ಚಂದ್ರಶೇಖರ್ ಸೇರಿದಂತೆ ಹಲವಾರು ದೈತ್ಯ ಪ್ರತಿಬೆಗಳು ರೂಪುಗೊಂಡಿರುವುದೇ ಇಲ್ಲ. ಇದು ಅವರೆಲ್ಲರ ತವರು ಮನೆ. ಈ ಕ್ರೀಡಾಂಗಣ ಸ್ವಾತಂತ್ರ್ಯ ಚಳುವಳಿಗೆ ಸಾಕ್ಷಿಯಾಗಿದೆ. ಅಸಂಖ್ಯ ಸಮಾವೇಶಗಳಾಗಿವೆ ಇಲ್ಲಿ. ಹಳೆ ಬೆಂಗಳೂರಿನ ಹೆಗ್ಗುರತು ಇದು.

ಇನ್ನು ಬೆಂಗಳೂರಿನ ಇಂದಿನ ಕಾಂಕ್ರೀಟು ಕಗ್ಗಾಡಿನ ನಡುವೆ ಉಳಿದಿರುವ 12 ಎಕರೆಗಳ ಸ್ವಚ್ಛಂದ ಲಂಗ್ ಸ್ಪೇಸ್ ಇದು. ಅತ್ತ ರೇಸ್ ಕೋರ್ಸ್ನಲ್ಲಿ ಬಹುಮಹಡಿ ಸಮುಚ್ಛಯ, ಇತ್ತ ಜೈಲನ್ನು ನುಂಗುವ ಎಲ್ಲ ಪ್ರಯತ್ನಗಳು ಇತ್ತ ಅಳಿದುಳಿದಿರುವ ಸೆಂಟ್ರಲ್ ಕಾಲೇಜು ಕ್ರೀಡಾಂಗಣವನ್ನು ಕಬಳಿಸಿಬಿಡುವ ಹುನ್ನಾರ. ಇನ್ನು ವಿವಿ ದೃಷ್ಟಿಯಿಂದ ನೋಡಿದರೆ ಕೂಡ ಇದು ಸಮ್ಮತವಲ್ಲ. ಸೆಂಟ್ರಲ್ ಕಾಲೇಜು ಕ್ರೀಡಾಂಗಣ ವಿವಿ ಆಸ್ತಿ. ಅದನ್ನು ಬಿಡಿಎಗೆ ನೀಡುವುದು ನಂತರ ನಿಧಾನವಾಗಿ ಅದು ಸರ್ಕಾರದ ಕೈವಶವಾಗುವ ಎಲ್ಲ ಅಪಾಯಗಳಿವೆ. ಮತ್ತು ಸದ್ಯ ಕೂಡ ಅದು ವಿವಿ ಕ್ಯಾಂಪಸ್ಸಿನ ಅವಿಭಾಜ್ಯ ಭಾಗ. ಅಂತ ಜಾಗೆಯನ್ನು ಸಾರ್ವಜನಿಕರ ವಾಹನ ನಿಲುಗಡೆಗೆ ತೆರೆಯುವುದು ಸರ್ವಥಾ ಅಸಮರ್ಥನೀಯ. ಹೀಗೆ ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ ಕೂಡ ಇದು ಖಂಡನೀಯ.

ಇನ್ನು ವಿವಿಯ ಆರ್ಥಿಕ ಸಬಲೀಕರಣಕ್ಕೆ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸ ಹೊರಟಿರುವುದನ್ನು ಹೇಗೆ ಪರಿಭಾವಿಸಬೇಕು? ಹಿಂದೊಮ್ಮೆ ಬಾಂಬೆ ವಿವಿಯನ್ನು ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲು ಹೊರಟಿದ್ದರು ಇಂಥದೇ ಜನ. ಅವ್ರು ಹೇಳಿದ್ದೂ ಇದನ್ನೇ ವಿವಿಯ ಆರ್ಥಿಕ ಸಬಲೀಕರಣ. ಅದು ಸರ್ಕಾರದ ಕರ್ತವ್ಯ. ವಿವಿಗಳು ಹಣ ಮಾಡುವ ಸಂಸ್ಥೆಗಳಲ್ಲ. ಆದಾಯ ವರಮಾನ ಇತ್ಯಾದಿ ಅರ್ಥಶಾಸ್ತ್ರದ ಪದಗಳಿಗೆ ಇಲ್ಲಿ ಅರ್ಥವಿಲ್ಲ. ಅಷ್ಟಕ್ಕೂ ಬೆಂಗಳೂರು ವಿವಿ ಮೊದಲಿನಿಂದಲೂ ಶ್ರೀಮಂತ ವಿವಿಯೆಂದೆ ಜನಜನಿತ. ಮಿಕ್ಕ ವಿವಿಗಳಲ್ಲಿ ೧೦೦-೨೦೦ ಕಾಲೇಜುಗಳಿದ್ದರೆ ಬೆಂಗಳೂರು ವಿವಿಯಡಿ ೭೦೦ ಕಾಲೇಜುಗಳಿವೆ. ಅದರ ಅಗಾಧತೆಯ ಕಾರಣವಾಗಿ ಅದರ ವರಮಾನವೂ ಹೆಚ್ಚೇ. ಬೆಂಗಳೂರು ವಿವಿ ಮೊದಲಿನಿಂದಲೂ ಆರ್ಥಿಕವಾಗಿ ಸಧೃಢವಾಗಿಯೇ ಇದೆ. ಅಲ್ಲಿರುವುದು ಕೊರತೆಯಲ್ಲ. ಬದಲಿಗೆ financial mismanagement. ತಿಮ್ಮಪ್ಪನವರ ಅವಧಿಯಲ್ಲಿ excess ಇದ್ದ ಹಣಕಾಸು ಈ 4 ವರ್ಷಗಳಲ್ಲಿ 12 ಕೋಟಿಗಳ ಡೆಫಿಸಿಟ್ ಆದುದಾದ್ರೂ ಹೇಗೆ? ವಿವಿಯಲ್ಲಿ ದುಡ್ಡಿಲ್ಲ ಎಂದು ಹಿಯಿಲೆಬ್ಬಿಸಿ revenue generation ಗೆ ಇಳಿದಿರುವ ಪ್ರಭುದೇವ ಅವರಿಗೆ ಅವರ ಹುಚ್ಚು populist scheme ಗಳನ್ನು ಅಮಲು ಮಾಡಲು ದುಡ್ಡಿದೆ. ಅಥವಾ ಸೆಂಟ್ರಲ್ ಕಾಲೇಜ್ ಮೈದಾನವನ್ನು ಅಡ ಇತ್ತು ಇದಕ್ಕೆ ದುಡ್ಡು ಹೊಂದಿಸುತ್ತಿದ್ದಾರೆಯೇ?

ವಿವಿ ಆಡಳಿತದ ಈ ನಡೆಗೆ ಒಳಗಿಂದಲೇ ಸಾಕಷ್ಟು ವಿರೋಧವಿದೆ. ಇನ್ನು ಈ ಕುರಿತು ವಾಟಾಳ್ ನಾಗರಾಜ್ ಹೋರಾಟ ಕೈಗೆತ್ತಿಕೊಂಡಿದ್ದಾರೆ. ನಾಡಿನ ಪ್ರಜ್ಞಾವಂತರೆಲ್ಲರೂ ಇತ್ತ ಗಮನ ಹರಿಸಬೇಕಾದ ಅಗತ್ಯವಿದೆ. ಆದರೆ ಮಿಸ್ಟರ್ ಪ್ರಭುದೇವ ಅವರು ಯಾರ ಮಾತನ್ನೂ ಕೇಳುವ ಮನಸ್ಥಿತಿಯಲ್ಲಿಲ್ಲ. ಇದೇ ತಿಂಗಳ 27 ರಂದು ಸಿಂಡಿಕೇಟ್ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ಎಲ್ಲ ಸಾಧ್ಯತೆಗಳಿವೆ. ಇವತ್ತಿನ ಬೆಂಗಳೂರು ವಿವಿ ಸಿಂಡಿಕೇಟ್ ತುಂಬಾ ತುಂಬಿರುವುದು ಸರ್ಕಾರ ನೇಮಿಸಿರುವ ಹೌದಪ್ಪಗಳು. ಪ್ರಭುದೇವ ಈ ಬಣದ ಸರ್ವೋಚ್ಚ ನಾಯಕರು. ಹಾಗಾಗಿ ಇದು ಸಿಂಡಿಕೇಟ್ನ ಅನುಮೋದನೆ ಪಡೆದುಬಿಡುವ ಅಪಾಯವಿದೆ. ಆಗ ಹೋರಾಟ ಅನಿವಾರ್ಯ. ಇದನ್ನು ವಿರೋಧಿಸುವದಷ್ಟೇ ಅಲ್ಲ ತಡೆಯುವುದೂ ಮುಖ್ಯ. ಅದಕ್ಕೆ ಧರಣಿ ಹೋರಾಟಗಳು ಅನಿವಾರ್ಯವಾದರೆ ಅದಕ್ಕೂ ನಾವು ಸಿದ್ಧರಿರಬೇಕಗುತ್ತದೆ.

ಉಪಕುಲಪತಿಗಳ ಸಾಧನಾ ಸಮಾವೇಶ?!


ನಮ್ಮ ವಿಶ್ವವಿದ್ಯಾಲಯಗಳು ಎತ್ತ ನಡೆದಿವೆ? ರಾಜಕೀಯದ ಅಡ್ಡೆ - ಪಡಸಾಲೆಯಾಗಿ ಹೋದವೇ ನಮ್ಮ ವಿವಿಗಳು? ಈಗ ಅಲ್ಲಿರುವುದು ಶುದ್ಧ ಚಮಚಗಳು. ಒಂದು ಕಾಲಕ್ಕೆ ನರಸಿಂಹಯ್ಯನಂತಹವರು ಉಪಕುಳಪತಿಗಳಾಗಿದ್ದಾಗ ಮಂತ್ರಿ ಮಹೋದಯರು ಬಾಗಿಲಲ್ಲಿ ಕಾಯ್ತಾ ಇದ್ರು. ಇಂದು ವಿಸಿ ಗಳು ಸರ್ಕಾರದ ಚಮಚಗಳಾಗಿದ್ದಾರೆ. ಇವತ್ತು ವಿವಿಗಳ ಸ್ವಾಯತ್ತತೆಗೆ ಬೆಲೆಯೇ ಇಲ್ಲ. ದುರ್ದೈವವೆಂದರೆ ಅದನ್ನು ಸ್ವ ಇಚ್ಛೆ ಯಿಂದ ಬಳಿ ಕೊಡುತ್ತಿರುವವರು ನಮ್ಮ ಉಪಕುಳಪತಿಗಳೇ. ಇವು ಇವತ್ತು ಶುದ್ಧ ಪಂಚಾಯಿತಿ ಮಟ್ಟದ ರಾಜಕೀಯದನ್ಗಳಗಳಾಗಿ ಹೋಗುತ್ತಿವೆ.  ಬೆಂಗಳೂರು ವಿವಿಯ ಸದ್ಯದ ಬೆಳವಣಿಗೆಗಳು ಮತ್ತು ಉಪಕುಲಪತಿ ಡಾ.ಎನ್.ಪ್ರಭುದೇವ ಅವರ ಯೋಜನೆ-ಯೋಚನೆಗಳನ್ನು ಗಮನಿಸಿದವರಿಗಾರಿಗಾದರೂ ಈ ಸಂಶಯ ಮೂಡದಿರದು.

ಪ್ರಭುದೇವ ವಿವಿಯಲ್ಲಿ ಮಾಡಿದ್ದು ಈಗ ಮಾಡುತ್ತಿರುವುದು ಶುದ್ಧ ರಾಜಕೀಯ! ಪ್ರಭುದೇವ ಜಾತಿಯಿಂದ ಲಿಂಗಾಯತರು. ಒಂದು ವಿವಿಯ ಉಪಕುಲಪತಿಗಳನ್ನು ಜಾತಿಯಿಂದ ಗುರುತಿಸುವುದು ತಪ್ಪು , ಆದರೆ ಇಲ್ಲಿನ ಅನೇಕ ಸಮಸ್ಯೆಗಳಿಗೆ ಕಾರಣವೇ ಜಾತೀಕರಣಗೊಂಡ ರಾಜಕೀಯ ಮತ್ತು ಕುತ್ಸಿತ ಮನಸ್ಸುಗಳು. ಹಾಗಾಗಿ ಈ ಮಾತು. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಮೇಲೆ ಸಾಧ್ಯವಾದಷ್ಟೂ ಸಂಸ್ಥೆಗಳಿಗೆ ಲಿಂಗ ಕಟ್ಟುತ್ತಿರುವುದು ಹೊಸದೇನೂ ಅಲ್ಲ. ಅದರ ಭಾಗವಾಗಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿದ್ದ, ತಮ್ಮ ಆಪ್ತವಲಯದ ಡಾ.ಎನ್ ಪ್ರಭುದೇವ ಅವರನ್ನು ಬೆಂಗಳೂರು ವಿವಿಯ ಉಪಕುಲಪತಿಯಾಗಿ ನೇಮಿಸಿದರು. ಅಸಲಿಗೆ ಅವತ್ತಿಗೆ ಇವರ ಹೆಸರು ಕೇಳಿಬರುತ್ತಿದ್ದದ್ದು ರಾಜೀವ ಗಾಂಧಿ ಆರೋಗ್ಯ ವವಿ ಉಪಕುಲಪತಿಗಿರಿಗೆ. ಆದರೆ ಅಲ್ಲಿನ ಸ್ಕ್ರೀನಿಂಗ್ ಕಮಿಟಿ ಇವರ ಹೆಸರನ್ನು ಸೂಚಿಸಲೇ ಇಲ್ಲ. ಪ್ರಭುದೇವರಿಗೆ ಅದೊಂದು ಕಾನ್ಸೋಲೇಷನ್ ಪ್ರೈಜ್. ಅಸಲಿಗೆ ಪ್ರಭುದೇಔ ಒಬ್ಬ ಅಕಾಡಮೀಷಿಯನ್ ಅಲ್ಲವೇ ಅಲ್ಲ. ಅವರೊಬ್ಬ ಹೃದಯ ಶಾಸ್ತ್ರಜ್ಞ ವೈದ್ಯ. ಬೆಂಗಳೂರು ವಿವಿಯಂತಹ ಮುಖ್ಯ ವಾಹಿನಿ ಅಕಾಡಮಿಕ್ ವಿವಿಗೆ ಉಪಕುಲಪತಿಗಳಾಗಿ ಹೋದರು ಪ್ರಭುದೇವ.

ಬಂದ ಕೂಡಲೇ ಅವರು ಕೆಲವೊಂದು ಉತ್ತಮ ಸುಧಾರಣೆಗಳನ್ನು ತಂದರು. ಮುಖ್ಯವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಪ್ರವೇಶವನ್ನು ಒಂದು ಚೌಕಟ್ಟಿಗೆ ತಂದರು. ನಂತರ ಇವರು ಕೈಹಾಕಿದ್ದು ಪರೀಕ್ಷಾ ವಿಭಾಗಕ್ಕೆ. ಅಲ್ಲಿನ ಅನೇಕ ತಿಮಿಂಗಲಗಳಿಗೆ ತಿನ್ನಲು ಆಹಾರ ಸಿಗದಂತೆ ಮಾಡಿ ಹಾಕಿದರು. ಮೂಗು ಮುರಿದವರೆಲ್ಲರೂ ಪರವಾಗಿಲ್ಲವೇ ಈವಯ್ಯ ಏನೋ ಮಾಡ್ತಿದಾನೆ ಎಂಬಂತೆ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಆದರೆ ಇದೆಲ್ಲವೂ ಪ್ರಭುದೇವ ಅವರ ತಲೆಗೆ ಹೋಗಿತ್ತು. ತಲೆ ನಿಲ್ಲದಾಯಿತು. ಬರಬರುತ್ತಾ ಅವರೊಬ್ಬ ಡಿಕ್ಟೇಟರ್ ಅನ್ನಿಸಿಕೊಳ್ಳತೊಡಗಿದರು. ಅವರ ಸುತ್ತಲೂ ಹೊಗಳುಭಟ್ಟರು ಮತ್ತು ಹೌದಪ್ಪಗಳನ್ನು ಸಾಕಿಕೊಂಡರು ಶರಣ ಮಠ ಸ್ಥಾಪನೆಯೂ ಪ್ರಭುದೇವರ ಪೀಠ ಆರೋಹನೆಯೂ ಸಾಂಗೋಪಾಂಗವಾಗಿ ನೆರವೇರಿತು. ಅವರದು ಅಕ್ಷರಶಃ ಹಿತ್ತಾಳೆ ಕಿವಿ. ಹಾಗಾಗಿ ಪ್ರಭುದೇವರಲ್ಲದ ಅಭಿಪ್ರಾಯ ಹೊಂದಿದ ಪ್ರತಿಯೊಬ್ಬರನ್ನೂ ಮೂಲೆಗುಂಪು ಮಾಡುತ್ತಾ ಬಂದರು. ಇವತ್ತು ವಿವಿಯ ಒಂದು ವರ್ಗ ಪ್ರಭುದೇವರನ್ನು ಉಪಕುಲಪತಿಗಳಾಗಿ ತಿರಸ್ಕರಿಸಿದೆ. ಅದು ಅವರ ಹೊರತಾಗಿ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದೆ

ಇದು ಒಂದು ಹಂತ. ಮತ್ತೊಂದು ಕಡೆ ಇವರು ಬೆಂಗಳೂರು ವಿವಿಯಲ್ಲಿ ಇಂದಿಗೂ ಇರುವುದು ಯಡಿಯುರಪ್ಪನವರ ಪ್ರತಿನಿಧಿಯಂತೆಯೇ. ಸರ್ಕಾರದ ಅಡಿಯಾಳು ಅಂದರೆ ಅದು ಅತಿಶಯೋಕ್ತಿಯೇನೂ ಆಗಲಾರದು. ಬರುತ್ತಿದ್ದಂತೆಯೇ ಅಂದಿಗೆ ಉನ್ನತ ಶಿಕ್ಷಣ ಸಚಿವರಾಗಿದ್ದ ಅರವಿಂದ ಲಿಂಬಾವಳಿಯವರನ್ನು ಎದುರು ಹಾಕಿಕೊಂಡರು. ಅವರ ಆದೇಶಗಳನ್ನು ಧಿಕ್ಕರಿಸುತ್ತಾ ಬಂದರು. ಆಗ ತಾನು ಪ್ರೋ-ಆಕ್ಟೀವ್ ವೈಸ್ ಛಾನ್ಸಲರ್ ಎಂಬಂತೆ ಪೋಸು ಕೊಟ್ಟರು. ಲಿಂಬಾವಳಿ ಮತ್ತು ಪ್ರಭುದೇವರ ನಡುವೆ ಬಹುದಿನಗಳವರೆಗೆ ಈ ಹಗ್ಗ ಜಗ್ಗಾಟ ನಡೆದಿತ್ತು. ಇವರ ಬಾಲ ಕತ್ತರಿಸಲು ಲಿಂಬಾವಳಿ ಒಂದು ಏಟು ಕೊಟ್ಟರೆ ಪ್ರಭುದೇವ ಅದನ್ನು ಎದುರಿಸಿ ಎದುರೇಟು ಕೊಡುವುದು. ಹೀಗೆ ನಡೆದಿತ್ತು ಇವರ ಚದುರಂಗ. ಇದರ ಭಾಗವಾಗಿಯೇ ಎಂ.ಜಿ.ಕೃಷ್ಣನ್ ಮತ್ತು ತಳವಾರ್ ಅವರನ್ನು ರಿಜಿಸ್ಟ್ರಾರ್ಗಳಾಗಿ ನೇಮಿಸುವಂತೆ ಮಾಡಿದರು ಲಿಂಬಾವಳಿ. ಕೂಡಲೇ ಕೆರಳಿ ನಿಂತ ಪ್ರಭುದೇವ ಅವರು ಛಾಜ್ ತೆಗೆದುಕೊಳ್ಳಲು ಬಂದರೆ ಕೊಠಡಿಗಳಿಗೆ ಬೀಗ ಜಡಿದು ಒಬ್ಬ ಉಪಕುಲಪತಿಗೆ ತಕ್ಕದಲ್ಲದ ರೀತಿಯಲ್ಲಿ ವರ್ತಿಸಿದ್ದರು. ಅವರನ್ನು ಈ ಕೂಡಲೇ ಬದಲಾಯಿಸುವಂತೆ ಯಡಿಯೂರಪ್ಪನವರಿಗೆ ಗಂಟು ಬಿದ್ದರು. ಅದಾಗಲಿಲ್ಲ. ಸರಿ ರಿಜಿಸ್ಟ್ರಾರ್ಗಳಾಗಿ ಬಂದ ತಳವಾರ್ ಮತ್ತು ಎಂ.ಜಿ.ಕೃಷ್ಣನ್ ಅವರ ಜೊತೆ ಶುರುವಾಯಿತು ಇವರ ಶೀತಲ ಸಮರ. ಅವರಿಗೆ ನಯಾಪೈಸೆ ಬೆಲೆ ಕೊಡಲಿಲ್ಲ. ಅವರನ್ನು ತಂದಿದ್ದದ್ದೂ ಅದಕ್ಕೆ, ಅವರು ಉಪಕುಲಪತಿಗಳಿಗೆ ಎದುರಾಗಿ ಮತ್ತೊಂದು ಪವರ್ ಸೆಂಟರ್ ಅನ್ನು ಹುಟ್ಟುಹಾಕಿದರು. ಇವರಿಬ್ಬರ ಬೀದಿ ಜಗಳಗಳು ರಸ್ತೆ ತಲುಪಿದವು. ರಾಜಭವನ ಮುಟ್ಟಿದವು. ರಿಜಿಸ್ಟ್ರಾರ್ಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿತವಾಯಿತು. ಸರಿ ರಿಜಿಸ್ಟ್ರಾರ್ಗಳು ಬದಲಾದರು. ಇವರಿಗೆ ಬೇಕಾದವರನ್ನೇ ರಿಜಿಸ್ಟ್ರಾರ್ಗಳನ್ನಾಗಿ ಮಾಡಲಾಯಿತು. ನಾನು ಗೆದ್ದೆ ಎಂಬ ಅಹಂಬಾವ ಮೊಳಕೆಯೊಡೆಯಿತು. ಅಷ್ಟರಲ್ಲಿ ರಾಜಕೀಯ ಏಳುಬೀಳಿನ ನಡುವೆ ಲೀಂಬಾವಳಿ ಮಂತ್ರಿ ಸ್ಥಾನ ಕಳೆದುಕೊಂಡರು. ವಿ.ಎಸ್.ಆಚಾರ್ಯ ಉನ್ನತ ಶಿಕ್ಷಣ ಮಂತ್ರಿಯದರು. ಉಪಕುಲಪತಿ ಮತ್ತು ಉನ್ನತ ಶಿಕ್ಷಣ ಸಚಿವಾಲಯದ ನಡುವಿನ ಸಂಬಂಧಗಳು ಅತ್ಯಂತ ಸೌಹಾರ್ದಯುತವಾಗಿದೆ! ಹಾಗಾದರೆ ಏನಿದು ಲಿಂಬಾವಳಿಯವರು ಯಡಿಯೂರಪ್ಪನವರ ವಿರುದ್ಧದ ಬಣಗಾರರೆಂಬ ಕಾರಣಕ್ಕೋ ವಿರೋಧ? ಇದು ಜಿಗುಪ್ಸೆ ಹುಟ್ಟಿಸುತ್ತದೆ ನಿಜ. ಆದರೆ ಇದು ನೈಜ.

ಇನ್ನು ಇತ್ತೀಚೆಗೆ ಡಾ.ಎ.ಎನ್.ಪ್ರಭುದೇವ ಅವರ ಮಗನಿಗೆ ಯಡಿಯೂರಪ್ಪನವರ ಅತ್ಯಾಪ್ತ ಕ್ರಷಿ ಸಚಿವ ಉಮೇಶ ಕತ್ತಿಯವರ ಮಗಳನ್ನು ಮದುವೆ ಮಾಡಿಕೊಂಡು ಅವರು ಬೀಗರಾಗಿದ್ದಾರೆ. ಇದರ ನಂತರವಂತೂ ಪ್ರಭುದೇವ ಅವರ ತಲೆ ತಿರುಗಿದೆ. ಅವರೂ ಒಬ್ಬ ರಾಜಕಾರಣಿಯಂತೆ ಫೋಸು ಕೊಡಲು ಪ್ರಾರಂಭಿಸಿಬಿಟ್ಟಿದ್ದಾರೆ. ಇತ್ತೀಚೆಗೆ ಉಪಕುಲಪತಿಗಳ ಯೋಜನೆಗಳು ಮತ್ತು ಯೋಚನೆಗಳು ಇದನ್ನೇ ಪ್ರತಿಬಿಂಬಿಸುತ್ತಿವೆ. ಅವರು ಇತ್ತೀಚೆಗೆ ಕೈಗೆತ್ತಿಕೊಂಡಿರುವ ಯೋಜನೆಗಳನ್ನೇ ಗಮನಿಸಿ. ಪ್ರತಿಭಾವಂತ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿವಿ ವತಿಯಿಂದ ತಿಂಗಳಿಗೆ 500/- ಸ್ಕಾಲರ್ಷಿಪ್. ಏನು ಇದರ ಹಿಂದಿರುವ ಉದ್ದೇಶ - ಪರಿಸಿಷ್ಠ ಜಾತಿ ಮತ್ತು ಪಂಗಡಗಳಿಗೆ ಈ ರೀತಿಯ ಸ್ಕಾಲರ್ಷಿಪ್ ಅನ್ನು ಸರ್ಕಾರವೇ ಕೊಡಮಾಡುತ್ತಿದೆ. ನಾನು ವಿವಿಯ ವತಿಯಿಂದ ಇದನ್ನು ಹಿಂದುಳಿದ ವರ್ಗಗಳಿಗೂ ವಿಸ್ತರಿಸುತ್ತದ್ದೇನೆ. ಇನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆ. ವಿವಿಯ ಕ್ಯಾಂಪಸ್ಸಿನಲ್ಲಿರುವ ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳಿಗೆ ರೂ2ಕ್ಕೆ ಮಧಾಹ್ನ ಬಿಸಿಯೂಟ ಯೋಜನೆ! ಯಾವ ಹುಡುಗರೂ ಸಹ ಊಟಕ್ಕಾಗಿ ವಿವಿಗೆ ಬರುವುದಿಲ್ಲ. ಇದರ ಬದಲಿಗೆ ವಿವಿಯ ಹಾಸ್ಟೆಲ್ಗಳಲ್ಲಿ ನೆಟ್ಟಗೆ ಒಳ್ಳೆಯ ಊಟ ಹಾಕಲಿ ಸಾಕು.

ಮೊನ್ನೆ ಜ್ಞಾನ ಭಾರತಿಯಲ್ಲಿ ನಡೆದ ಸಭೆಯಲ್ಲಿ ಸಭಾಂಗಣದ ದ್ವಾರದಿಂದ ವೇದಿಕೆಯವರೆಗೆ ಶುದ್ಧ ರಾಜಕಾರಣಿಯಂತೆ ಸಭೆಗೆ ನಮಸ್ಕರಿಸುತ್ತಾ ಎಲ್ಲರ ಚಪ್ಪಾಳೆ ಗಿಟ್ಟಿಸುತ್ತಾ ನಡೆದು ಬಂದು ವೇದಿಕೆಯೇರಿ ಮಾಡಿದ ಭಾಷಣ ಇದೇ! ಪ್ರಭುಧೇವರವರ ರಾಜಕೀಯ ಸಾಂಗತ್ಯ ಸ್ನೇಹಗಳು ಅವರನ್ನು ಒಳಗಿಂದಲೇ ರಾಜಕೀಯಕ್ಕೆ ಅಣಿಗೊಳಿಸುತ್ತಿರಬಹುದೇ? ಅವರು ಯಡಿಯೂರಪ್ಪನವರ ಸಾಧನಾ ಸಮಾವೇಶದ ಮತ್ತೊಂದು ಪ್ರಾಪಗಾಂಡಾ ಮಾದರಿಯೇ? ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೀಗನ್ನಿಸದೇ ಇರದು. ಒಂದು ವಿವಿಯ ಉಪಕುಲಪತಿಗೆ ಪಾಪ್ಯುಲಿಸ್ಟ್ ಆಗಬೇಕಾದ ಅವಶ್ಯಕತೆಯಿಲ್ಲ. ಏಕೆಂದರೆ ರಾಜಕಾರಣಿಯಂತೆ ಅವರಿಗೆ ಒಂದು ಕ್ಷೇತ್ರವನ್ನು ಕಲ್ಟೀವೇಟ್ ಮಾಡಿಕೊಂಡು ಅಲ್ಲಿನ ಜನರ ಒಪ್ಪಿಗೆ ಪಡೆಯಬೇಕಾದ ಅಗತ್ಯವಿಲ್ಲ. ಅಸಲಿಗೆ ಇಲ್ಲಿ ಕ್ಷೇತ್ರವೂ ಇಲ್ಲ ಚುನಾವಣೆಯೂ ಇಲ್ಲ. ಆದರೂ  ಪ್ರಭುದೇವ ಅವರು ಪಾಪ್ಯುಲಿಸ್ಟ್ ಆಗುವುದರತ್ತಲೇ ತಮ್ಮ ನೋಟ ಬೀರಿದ್ದಾರೆ. ಓಬಿಸಿ ಹುಡುಗರಿಗೆ ಸ್ಕಾಲರ್ಷಿಪ್ ಮಧ್ಯಾಹ್ನ 2ರೂ.ಗೆ ಊಟದಂತಹ ಪ್ಯಾಪುಲಿಸ್ಟ್ ಯೋಜನೆಗಳನ್ನು ವಿರೋಧಿಸುವುದೂ ಸಹ ಕಷ್ಟ. ಹಾಗೆ ಮಾಡಿದ ಕೂಡಲೇ ನಿಮ್ಮನ್ನು ವಿದ್ಯಾರ್ಥಿಗಳು ವಿರೋಧಿಯಾಗಿಯೋ ಓಬಿಸಿ ವಿರೋಧಿಯಾಗಿಯೋ ಚಿತ್ರಿಸಿಬಿಡುತ್ತಾರೆ. ಹಾಗಾಗಿ ಈ ಯೋಜನೆಗಳ ಕುರಿತು ವಿವಿಯ ಆಂತರ್ಯದಲ್ಲಿ ಸಾಕಷ್ಟು ವಿರೋಧ ಬೇಗುದಿಯಿದ್ದರೂ ಅದು ವ್ಯಕ್ತಗೊಳ್ಳುತ್ತಿಲ್ಲ. ಅವರ ಬಾಯನ್ನು ಕಟ್ಟಿಹಾಕಿದಂತಾಗಿದೆ.

ವಿವಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಒಂದೇ ಎರಡೇ? ಹಾಸ್ಟೆಲ್ ಸರಿ ಇಲ್ಲ, ನೆಟ್ಟಗೆ ಶೌಚಾಲಯಗಳಿಲ್ಲ. ಲ್ಯಾಬ್ಗಳಿಲ್ಲ. ಜ್ಞಾನಭಾರತಿ ಕ್ಯಾಂಪಸ್ಸಿನೊಳಗೆ ರಸ್ತೆಗಳು ನೆಟ್ಟಗಿಲ್ಲ. ಉಪಕುಲಪತಿಗಳಾಗಿ ಪ್ರಭುದೇವ ಅವರು ಇತ್ತ ಗಮನ ಹರಿಸಿದರೆ ಉತ್ತಮ. ಅದು ಬಿಟ್ಟು ಹೀಗೆ ಯಡಿಯೂರಪ್ಪನವರನ್ನು ಅನುಸರಿಸುವಿದಿದೆಯಲ್ಲ ಇದು ಸರ್ವಥಾ ಖಂಡನೀಯ.

ಪಭುದೇವ ಅವರ ಮುಂದಿನ ಯೋಜನೆಯೇನಿರಬಹುದು? ಮಹಿಳಾ ವಿದ್ಯಾರ್ಥಿಗಳಿಗೆ ಸೈಕಲ್? ಇಲ್ಲ ಸೀರೆ? ಏ ಇಲ್ಲ ಚೂಡೀದಾರ್? ಸೀರೆ ಯಾರು ಉಡುತ್ತಾರೆ ಈಗಿನ ಹುಡುಗೀರು? ಹಾಗಾದರೆ ಜೀನ್ಸ್ ? ಅದು ನಮ್ಮ ಸಂಸ್ಕೃತಿಯ ವಿರೋಧಿ...ಇವರು ಮುಂದಿನ ಭಾಗ್ಯಲಕ್ಷ್ಮಿಯರೋ? ಪ್ರಭುದೇವ ಅವರು ಬೆಂಗಳೂರು ವಿವಿಯ ಉಪಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡು ಸದ್ಯದಲ್ಲಿಯೇ ಎರಡು ವರ್ಷಗಳಾಗುತ್ತಿದೆ. ಸಾಧನಾ ಸಮಾವೇಶ ಸರ್? ಎಲ್ಲಿ ಮಾಡ್ತೀರ ಸರ್ ಆ ಕಾರ್ಯಕ್ರಮವನ್ನ? ಸೆಂಟ್ರಲ್ ಕಾಲೇಜ್ ಮೈದಾನವನ್ನೂ ಬಿಡಿಎಗೆ ಪರಭಾರೆ ಮಾಡ್ತಿದಿರೆ? ಜಾಗ ಎಲ್ಲಿ ಸರ್? 

ತಾನೇ ಕಟ್ಟಿದ ಸಾಮ್ರಾಜ್ಯದ ಅವಶೇಷಗಳ ನಡುವೆ ಬೆತ್ತಲಾಗಿ ನಿಂತ ರೆಡ್ಡಿಗಾರು!

ಇಷ್ಟೂ ದಿನ ರೆಡ್ಡಿಗಳು ತಮ್ಮದೇನೂ ತಪ್ಪಿಲ್ಲ, ಎಲ್ಲವೂ ರಾಜಕೀಯ ಷಡ್ಯಂತ್ರ ಎಲ್ಲಿ ಏನಾದರೂ ಇದ್ದರೆ ತೊರಿಸಿ ಎಂಬಂತೆಯೇ ಮಾತಾಡುತ್ತಿದ್ದರು. ಬಿಡಿ ಈಗಲೂ ಅವರು ಅದನ್ನೇ ಮಾತಾಡುತ್ತಿರುವುದು. ರೆಡ್ಡಿಗಾರು ತೋರಿಸಿಕೊಳ್ಳದೆ ಇರಬಹುದು. ಜಟ್ಟಿ ಜಾರಿಬಿದ್ದರೂ ಮೀಸೆ ಮಣ್ಣಾಗದು ಎಂಬಂತಿದೆ ಅವರ ವರ್ತನೆ. ಆದರೆ ವಾಸ್ತವಕ್ಕೆ ರೆಡ್ಡಿಗಾರ ಪಾದದ ಕೆಳಗಿನ ಭೂಮಿ ಸಣ್ಣಗೆ ಅದುರಿದೆ. ಅದು ಬೆಟ್ಟ, ಗಡಿ, ಗುಡಿ ಯಾವುದನ್ನೂ ನೋಡದೆ ಎಲ್ಲವನ್ನೂ ಅಲುಗಾಡಿಸಿದರಲ್ಲ, ಆ ಭೂಕಂಪನದ after tremors! ಸುಪ್ರೀಂ ಕೋರ್ಟ್ನಲ್ಲಿ ಟಪಾಲ್ ಗಣೇಶ್ ಸಲ್ಲಿಸಿದ್ದ ಲೀವ್ ಪಿಟೀಷನ್ನ ಆಧಾರದ ಮೇಲೆ ಸುಪ್ರೀಂ ಕೋರ್ಟ್ನ ಅಂಗ ಸಂಸ್ಥೆಯಾದ ಕೇಂದ್ರ ಉನ್ನತಾಧಿಕಾರ ಸಮಿತಿ ಓಬಳಾಪುರಂ ಮತ್ತಿತರ ಒಟ್ಟು 6 ಗಣಿ ಕಂಪೆನಿಗಳ ಬಗ್ಗೆ ತನಿಖೆ ನಡೆಸಿ, ಒಟ್ಟಾರೆ ರೆಡ್ಡಿಗಳನ್ನು ದೋಷಿಗಳೆಂದು ಹೇಳಿದುದೇ ಅಲ್ಲದೆ, ಓಬಳಾಪುರಂ ಮೈನಿಂಗ್ ಕಾರ್ಪೋರೇಶನ್ ನ ಮೈನಿಂಗ್ ಲೀಸುಗಳನ್ನು ರದ್ದುಗೊಳಿಸಬೇಕಾಗಿಯೂ, ಅಕ್ರಮವಾಗಿ ಈವರೆಗೂ ಈ ಕಂಪೆನಿ ನಡೆಸಿರುವ ಗಣಿಗಾರಿಕೆಗೆ ಅಷ್ಟು ಅದಿರಿನ ಮಾರುಕಟ್ಟೆ ಬೆಲೆಯಂತೆ ದಂಡ ವಸೂಲಿ ಮಾಡುವಂತೆಯೂ ಶಿಫ್ಫಾರಸ್ಸು ಮಾಡಿದೆ. ಒಂದು ಕಣ್ಣಂದಾಜಿನಂತೆ ಈ ದಂಡ ಎಷ್ಟಿರಬಹುದು? 4,400 ಕೋಟಿಗಳು!  ಇಷ್ಟು ದಿನ ಎಲ್ಲವೂ ಗೋಜಲು ಗೋಜಲು. ಅದೇನು ಗಣಿ ಸಾಮ್ರಾಜ್ಯವೋ, ಅದೇನು ರೈಸಿಂಗ್ ಕಾಂಟ್ರಾಕ್ಟೋ? ಅಲ್ಲ ರೆಡ್ಡಿಗಳದು ಒಂದಿಂಚೂ ಮೈನಿಂಗ್ ಇಲ್ಲವಂತೆ ಕರ್ನಾಟಕದಲ್ಲಿ, ಮತ್ಯಾಕ್ರೀ ಇವರೆಲ್ಲಾ ಈ ರೀತಿ ಅರಚಾಡ್ತಾರೆ, ಅನ್ನುವ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಉನ್ನತಾಧಿಕಾರ ಸಮಿತಿ ಉತ್ತರ ನೀಡಿದೆ. ಅದರ ಒಂದು ವಿಸ್ತೃತ ನೋಟ ಈ ಲೇಖನ.

ಒಬ್ಬ ಸಾಧಾರಣ ಪೋಲೀಸ್ ಪೇದೆ ಜಿ. ಚೆಂಗಾರೆಡ್ಡಿಯ ಮಕ್ಕಳಾದ ರೆಡ್ಡಿ ಸಹೋದರರು ಹೇಗೆ ಕೇವಲ 10 ವರ್ಷಗಳ ಹಿಂದೆ ಬಳ್ಳಾರಿಯ ಬೀದಿಗಳಲ್ಲಿ ಲೂನಾಗಳಲ್ಲಿ ಓಡಾಡುತ್ತಿದ್ದರು, ಹೇಗೆ ಈವತ್ತು ಹೆಲಿಕಾಪ್ಟರ್ಗಳಲ್ಲೇ ಹಾರಾಡುತ್ತಾರೆ, ಹೇಗೆ ಎನ್ನೋಬಲ್ ಚಿಟ್ಸ್ ಎಂಬ ಗೋಲ್ಮಾಲ್ ಕಂಪೆನಿಯ ಮೂಲಕ ರೆಡ್ಡಿ 200 ಕೋಟಿಗಳಿಗೆ ಕೈ ಎತ್ತಿದ್ದರು, ಹೇಗೆ ಆ 200 ಕೋಟಿಗಳನ್ನು ಗಣಿಯ ಧೂಳಿನಲ್ಲಿ ತಂದು ಸುರಿದದ್ದು, ಕುಬೇರರಾದದ್ದು, 1999ರ ಸೋನಿಯಾ ಮತ್ತು ಸುಷ್ಮಾ ಮೇಡಂನವರ ಚುನಾವಣೆ, ಅದು ರೆಡ್ಡಿ ರಾಮುಲು ಜೋಡಿಗೆ ರಾಜಕೀಯವಾಗಿ ತಿರುವು ನೀಡಿದ್ದು, ಬಿಜೆಪಿ ಸರ್ಕಾರ ಸ್ಥಾಪನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ಅದನ್ನೇ ಹಿಡಿದು ಯಡಿಯೂರಪ್ಪನವರನ್ನು ಪಪ್ಪೆಟ್ ರೀತಿ ಆಡಿಸುತ್ತಿರುವುದು ಎಲ್ಲವೂ ಎಲ್ಲರೂ ಬಲ್ಲ ವಿಚಾರವೇ.

ಬಳ್ಳಾರಿಯಲ್ಲಿ ಒಟ್ಟು 99 ಮೈನಿಂಗ್ ಲೀಸ್ಗಳಿದ್ದು ಅವೆಲ್ಲವೂ ಅಷ್ಟೊತ್ತಿಗೆ ಬಿಕರಿಸಲ್ಪಟ್ಟಿದ್ದವು. ಅಲ್ಲಿ ಸ್ಪೇಸ್ ಇರಲೇ ಇಲ್ಲ. ಆಗ ರೆಡ್ಡಿಗಾರು ಕೈಯಿಟ್ಟದ್ದು ಪಕ್ಕದ ಆಂಧ್ರದ ಹಳ್ಳಿಗಳಿಗೆ. ಬಳ್ಳಾರಿಯ ಗಡಿಗುಂಟ ಇರುವ ಓಬಳಾಪುರಂ ರೆಡ್ಡಿಯ ಕಾರ್ಯಸ್ಥಾನವಾಯಿತು. ಓಬಳಾಪುರಂ ಮೈನಿಂಗ್ ಕಂಪೆನಿಯನ್ನು ಸ್ಥಾಪಿಸಿದ್ದು ಅಸಲಿಗೆ ಜನಾರ್ಧನ ರೆಡ್ಡಿ ಅಲ್ಲ. ಕುಂಟುತ್ತಾ ಸಾಗಿದ್ದ ಈ ಕಂಪೆನಿಗೆ 2002ರಲ್ಲಿ ಡೈರೆಕ್ಟರ್ ಆಗಿ ಎಂಟ್ರಿ ಪಡೆದ ಜನಾರ್ಧನ ರೆಡ್ಡಿ, ಕೆಲವೇ ತಿಂಗಳುಗಳಲ್ಲಿ ಅದರ ಮಾಲೀಕರಾದರು. ಈ ಲೈಸೆನ್ಸ್ನಡಿ ಒಟ್ಟು 25.98 ಹೆಕ್ಟೇರುಗಳು. ಇದಲ್ಲದೆ ಮತ್ತೊಂದಿಷ್ಟು ಮೈನಿಂಗ್ ಲೀಸ್ಗಳನ್ನು ಅವರು ಪಡೆದಿದ್ದಾರೆ. ಒಟ್ಟು 4 -


  • ಓಬಳಾಪುರಂ ಮೈನಿಂಗ್ ಕಂಪೆನಿ ಪ್ರೈವೇಟ್ ಲಿಮಿಟೆಡ್ - 25.98 ಹೆಕ್ಟೇರುಗಳು - 1997 - ೨೦೧೭
ಓಬಳಾಪುರಂ ಮೈನಿಂಗ್ ಕಂಪೆನಿ ಪ್ರೈವೇಟ್ ಲಿಮಿಟೆಡ್ - 39.50 ಹೆಕ್ಟೇರುಗಳು - 2006 - ೨೦೨೬

ಓಬಳಾಪುರಂ ಮೈನಿಂಗ್ ಕಂಪೆನಿ ಪ್ರೈವೇಟ್ ಲಿಮಿಟೆಡ್ - 68.52 ಹೆಕ್ಟೇರುಗಳು - 2007 - ೨೦೨೭

ಅನಂತಪುರ್ ಮೈನಿಂಗ್ ಕಾಪರ್ೋರೇಷನ್ - 6.50 ಹೆಕ್ಟೇರುಗಳು - 2013

ಇನ್ನು ತನಿಖೆಗೊಳಪಟ್ಟ ಮತ್ತೆರಡು ಕಂಪೆನಿಗಳು
ಬಳ್ಳಾರಿ ಐರನ್ ಓರ್ ಪ್ರೈವೇಟ್ ಲಿಮಿಟೆಡ್ - 27.12 ಹೆಕ್ಟೇರುಗಳು - 2018
ವೈ.ಎಂ. & ಸನ್ಸ್ - 20.24 ಹೆಕ್ಟೇರುಗಳು 2019


ಸುಪ್ರೀಂ ಕೋರ್ಟ್ನಲ್ಲಿ ಟಪಾಲ್ ಗಣೇಶ್ ಸಲ್ಲಿಸಿದ್ದ ಲೀವ್ ಪಿಟೀಷನ್ನ ಆಧಾರದ ಮೇಲೆ, ಓಬಳಾಪುರಂ ಮೈನಿಂಗ್ ಕಂಪೆನಿಯ ಅಕ್ರಮಗಳ ತನಿಖೆಗೆ ಅಂತಲೇ ಒಂದು ಕೇಂದ್ರ ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಿತು ಸುಪ್ರೀಂ ಕೋರ್ಟ್. ನವೆಂಬರ್ 19, 2009ರಂದು ಈ ಸಮಿತಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತು. ಈ ವರದಿ ಒಬಳಾಪುರಂ ಹಳ್ಳಿಯಲ್ಲಿನ ಎಲ್ಲಾ ಮೈನಿಂಗ್ ಲೀಸ್ಗಳ ಸವರ್ೆ ನಡೆಸಿತ್ತು. ರೆಡ್ಡಿಯವರ ಒಬಳಾಪುರಂ ಮೈನಿಂಗ್ ಕಂಪೆನಿ ತನ್ನ ಡಿಫೆನ್ಸಿಗೆ ನೀಡುವ ಮ್ಯಾಪುಗಳು 1896 ಸೇರಿದ್ದವಾಗಿದ್ದು, ಅದರ ಮತ್ತು ಇತ್ತೀಚಿನ ಮ್ಯಾಪುಗಳಲ್ಲಿನ ಗಡಿಗಳು ಒಂದಕ್ಕೊಂದು ತಾಳೆಯೇ ಆಗುವುದಿಲ್ಲ. ಇದಲ್ಲದೆ ಸಮರಕ್ಷಿತ ಅರಣ್ಯ ಪ್ರದೇಶದ ಒತ್ತುವರಿಯ ಗುಮಾನಿಗಳೂ ಇವೆ. ಅದಲ್ಲದೆ ಆಂಧ್ರದ ಸರ್ಕಾರದ ಕ್ರಮಗಳು ಸಂದೇಹಾಸ್ಪದವಾಗಿವೆಯೆಂದೂ ಷರಾ ಬರೆಯಿತು. ಇದರ ಆಧಾರದ ಮೇಲೆ ಕೇಂದ್ರ ಪರಿಸರ ಇಲಾಖೆ ಎಲ್ಲಾ ಆರೂ ಮೈನಿಂಗ್ ಲೀಸುಗಳನ್ನೂ ರದ್ದು ಪಡಿಸಿತ್ತು. ಆದರೆ ಇದೆಲ್ಲವನ್ನೂ ಅಲ್ಲಗಳೆದ ವೈ.ಎಸ್.ಆರ್. ಸರ್ಕಾರ ಮೈನಿಂಗ್ಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ವರದಿಯ ಮುಂದುವರೆದ ಭಾಗದಂತೆಯೇ ಸುಪ್ರೀಂ ಕೋರ್ಟ್ ಕೇಂದ್ರ ಸರ್ವೇ ಇಲಾಖೆಗೆ ಆರೂ ಮೈನಿಂಗ್ ಲೀಸುಗಳ ಮತ್ತು ವಿವಾದಿತ ಕರ್ನಾಟಕ ಆಂಧ್ರ ಗಡಿಯ ಸರ್ವೇ ಕೈಗೊಂಡು ವರದಿ ನೀಡುವಂತೆ ಆದೇಶಿಸಿತ್ತು.

ತೀರಾ ಇತ್ತೀಚೆಗೆ ಈ ಸರ್ವೇ ತಂಡ ತನ್ನ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಆಶ್ಚರ್ಯ, ಈ ತಂಡ ಅದೆಲ್ಲಿ ಸರ್ವೇ ನಡೆಸಿತೋ? ಅದೇನು ಹಕೀಕತ್ ಮಾಡಿತೋ? ಆ ದೇವರೇ ಬಲ್ಲ! ಸರ್ವೇ ಇಲಾಖೆಯ ವರದಿಯನ್ನು ಓದಿದವರಿಗಾರಿಗಾದರೂ ಹೀಗನ್ನಿಸದೇ ಇರದು. ಈ ವರದಿಯಲ್ಲಿ ಜನಾರ್ಧನ ರೆಡ್ಡಿ ಮತ್ತು ಅವರ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿಯನ್ನು ಖಡಾಖಂಡಿತವಾಗಿ ನಿರ್ದೋಷಿಯೆಂದು ಘೋಷಿಸಲಾಗಿದೆ. ಕೇಂದ್ರ ಉನ್ನತಾಧಿಕಾರ ಸಮಿತಿ ಮತ್ತು ಸರ್ವೇ ಇಲಾಖೆ ಒಂದೇ ಜಾಗದ ಸರ್ವೇ ನಡೆಸಿದ್ದು ಅಲ್ಲವೇ? ಹಾಗಾದರೆ 2009ರ ನವೆಂಬರ್ 19 ರಂದು ಕೇಂದ್ರ ಉನ್ನತಾಧಿಕಾರ ಸಮಿತಿ ಒತ್ತುವರಿ ನಡೆದಿರುವ ಬಗ್ಗೆ ಮಾತನಾಡಿದರೆ, ಸರ್ವೇ ಇಲಾಖೆ ರೆಡ್ಡಿಯಷ್ಟು ಲಾ ಅಬೈಡಿಂಗ್ ಸಿಟಿಜನ್ ಮತ್ತೊಬ್ಬರಿಲ್ಲ ಎನ್ನುತ್ತದೆ. ಇದರಲ್ಲಿ ಯಾವುದಾದರೂ ಒಂದು ವರದಿ ಮಾತ್ರ ವಾಸ್ತವಾಂಶಕ್ಕೆ ಹತ್ತಿರವಿರುವ ಸಾಧ್ಯತೆಯಿದೆ. ಅದು ಯಾವುದು?

ಈ ಗೊಂದಲವಿತ್ತು ಇಷ್ಟು ದಿನ. ಈಗ ಕೇಂದ್ರ ಉನ್ನತಾಧಿಕಾರ ಸಮಿತಿಯು ತನ್ನ ಸಂಪೂರ್ಣ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಈ ವರದಿಯನ್ನು ಒಮ್ಮೆ ಕಣ್ಣಾಡಿಸಿದರೆ ಇಷ್ಟು ದಿನ ಕರ್ನಾಟಕದ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್, ಆಂಧ್ರದ ಟಿಡಿಪಿ, ಪತ್ರಕರ್ತರು, ಲೋಕಾಯುಕ್ತರು ಮಾಡಿದ ಪ್ರತಿ ಆರೋಪವೂ ನಿಜ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಅವೆಲ್ಲಕ್ಕೂ ಪೂರಕ ದಾಖಲೆಗಳನ್ನೊದಗಿಸುತ್ತಾ ಕ್ರಮಕ್ಕೆ ಶಿಫಾರಸ್ಸು ಮಾಡುತ್ತದೆ ಕೇಂದ್ರ ಉನ್ನತಾಧಿಕಾರ ಸಮಿತಿ. ಈ ಕುರಿತು ಇನ್ನೂ ಸುಪ್ರೀಂ ಕೋರ್ಟ್  ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ.


- ತಮ್ಮ ಗಣಿಗಳ ಬೌಂಡರಿಗಳನ್ನು ದಾಟಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಗಣಿಗಾರಿಕೆ. 

- ಈ ಕುರಿತು ಸಿಇಸಿ - ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಲೈಸೆನ್ಸ್ ನೀಡುವಾಗ ಅರಣ್ಯ ಇಲಾಖೆಯು ಮೈನಿಂಗ್ ಪ್ರಾಂತ್ಯದ ಸುತ್ತಲೂ ಪ್ರತಿ 20 ಮೀಟರ್ಗೊಂದರಂತೆ ಪಿಲ್ಲರ್ಗಳನ್ನು ಹಾಕತಕ್ಕದ್ದು. ಇದನ್ನೇ ಬೌಂಡರಿ ಎಂದು ಪರಿಗಣಿಸಲ್ಪಡಬೇಕು ಎಂದು ತಿಳಿಸಿದೆ. ಆದರೆ ಈ ಆರೂ ಮೈನಿಂಗ್ ಲೀಸ್ಗಳಲ್ಲಿ ಅಸಲಿಗೆ ಯಾವುದೇ ಪಿಲ್ಲರ್ಗಳೇ ಇಲ್ಲ! ಇಲ್ಲಿ ಎಲ್ಲವೂ ಸಮತಟ್ಟಾಗಿ ಹೋಗಿದೆ. ಹಾಗಾಗಿ ಈ ಆರೂ ಲೈಸೆನ್ಸ್ಗಳನ್ನೂ ಈ ಕೂಡಲೇ ರದ್ದು ಪಡಿಸಬೇಕು. ಇನ್ನು ಬಳ್ಳಾರಿ ಸಂರಕ್ಷಿತ ಅರಣ್ಯ ಪ್ರದೇಶದ ಮ್ಯಾಪಿನಲ್ಲಿರುವ ಅಂತರ್ರಾಜ್ಯ ಗಡಿ ರೇಖೆಗಳಿಗನುಗುಣವಾಗಿ ಓಎಂಸಿಯ ಗಡಿಗಳನ್ನು ಗುರುತಿಸಲಾಗುವುದಿಲ್ಲ. ಮ್ಯಾಪಿಗೂ ವಸ್ತುಸ್ಥಿತಿಗೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಇನ್ನು ಓಎಂಸಿಯ 39.5 ಮತ್ತು 68.5 ಹೆಕ್ಟೇರುಗಳ ಮೈನಿಂಗ್ ಲೀಸ್ಗಳ ಲೀಸ್ ಅಗ್ರೀಮೆಂಟಿನಲ್ಲಿರುವ ನಕ್ಷೆಗೂ ಅರಣ್ಯ ಇಲಾಖೆ ಅನುಮೋದಿಸಿರುವ ನಕ್ಷೆಗೂ ಬಹು ವ್ಯತ್ಯಾಸಗಳಿದ್ದು, ಈ ಲೀಸ್ಗಳನ್ನು ಈ ಕೂಡಲೇ ರದ್ದುಗೊಳಿಸಬೇಕು. (ಬಳ್ಳಾರಿ ಐರನ್ ಓರ್ ಕಂಪೆನಿಯೊಂದಿಗೆ ಓಎಂಸಿ ಮಾಡಿಕೊಂಡಿರುವ ಗಡಿ ಒಪ್ಪಂದವನ್ನು ಇದಕ್ಕೆ ಪುರಾವೆಯಾಗೊದಗಿಸುವ ಸಿಇಸಿ ಇದರಲ್ಲಿ ಓಎಂಸಿ ಅತ್ಯಂತ ಸ್ಪಷ್ಟವಾಗಿ ಸಂರಕ್ಷಿತ ಅರಣ್ಯ ಪ್ರಧೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವುದನ್ನು ಗುರುತಿಸುತ್ತದೆ. ಇದನ್ನು ಈ ಹಿಂದೆ ಅನಮತಪುರದ ಡಿಎಫ್ಓ ಕಲ್ಲೋಲ ಬಿಸ್ವಾಸ್ ಸ್ಪಷ್ಟವಾಗಿ ಗುರುತಿಸಿದ್ದರಾದರೂ ಅದನ್ನು ಮುಂದುವರೆಸಲಾಗಿರಲಿಲ್ಲ.)


- ಗಣಿಗಾರಿಕೆಯ ಪರವಾನಗಿಯಲ್ಲೇ ಅಕ್ರಮಗಳು 


- ಈ ಕುರಿತು ಸಿಇಸಿ - 25.98 ಹೆಕ್ಟೇರುಗಳ ಲೀಸ್ ಮುಗಿದದ್ದು 2004ರಲ್ಲಿ. ಆದರೆ ಇದನ್ನು ಆಂಧ್ರ ಸರ್ಕಾರ 2017ರವರೆಗೂ ವಿಸ್ತರಿಸುವಂತೆ ನೀಡಿರುವ ಆದೇಶ ಅಕ್ರಮವಾಗಿದ್ದು. ಈ ಕೂಡಲೇ ಇದನ್ನು ತೆರವುಗೊಳಿಸಬೇಕು. ಇದಲ್ಲದೆ ಸುಮಾರು 17 ವರ್ಷಗಳ ನಂತರ ಪರವಾನಗಿಯನ್ನು ನವೀಕರಿಸಲಾಗಿದ್ದು ಇದು ಅಕ್ಷಮ್ಯ. ಹಾಗಾಗಿ ಈ ಕೂಡಲೇ ಈ ಪರವಾನಗಿಯನ್ನು ರದ್ದುಪಡಿಸಬೇಕು. ಜೊತೆಗೆ 2004ರಿಂದೀಚೆಗೆ ಓಎಂಸಿ ನಡೆಸಿರುವ ಗಣಿಗಾರಿಕೆ ಆಗ ಅಕ್ರಮದ್ದಾಗುತ್ತದೆ. ಹಾಗಾಗಿ ಈ ಅವಧಿಯಲ್ಲಿ ಅದು ಉತ್ಖನಿಸಿರಬಹುದಾದ ಖನಿಜವನ್ನು ಸರಿಗಟ್ಟುವ ನಾರ್ಮಟಿವ್ ಮಾರ್ಕೆಟ್ ವ್ಯಾಲ್ಯೂ ಅನ್ನು ಅದರಿಂದ ದಂಡವಾಗಿ ವಸೂಲು ಮಾಡಬೇಕು. (ಈ ಕಂಪೆನಿ ರಾಮಮೋಹನ ರೆಡ್ಡಿಯದು. ಆತನ ತಂದೆಯಿಂದ ಪಡೆದುಕೊಂಡ ಈ ಕಂಪೆನಿಗೆ 1984ರಲ್ಲಿ ಹಲವಾರು ವಿವಾದಗಳ ನಂತರ ಮತ್ತೆ 20 ವರ್ಷಗಳ ಅವಧಿಗೆ ಮೈನಿಂಗ್ ಲೈಸೆನ್ಸ್ ಅನ್ನು ನವೀಕರಿಸಲಾಯಿತು. ಅಂದರೆ 2004ಕ್ಕೆ ಇದು ಮುಗಿಯಬೇಕಿತ್ತು. ಆದರೆ ಸರ್ಕಾರದ  ವ್ಯವಸ್ಥೆಯಲ್ಲಿ ಈ ಮೈನಿಂಗ್ ಲೈಸೆನ್ಸ್ ಜಾರಿಗೆ ಬರುವಷ್ಟರಲ್ಲಿ 1997! ಕಾಯೆದಯ ಪ್ರಕಾರ 20 ವರ್ಷ ಈ ನವೀಕರಣದ ಅವಧಿ. ಹಾಗಾಗಿ 2004ಕ್ಕೆ ಈ ಅವಧಿ ಮುಗಿಯುತ್ತದೆ ಎಂಬುದು ಸಿಇಸಿ ವಾದ. ಆದರೆ 1997ರಲ್ಲಿ ಜಾರಿಗೆ ಬಂದುದನ್ನು ನೆಪವಾಗಿಟ್ಟುಕೊಂಡು, ರೆಡ್ಡಿಗಾರಿ ಗಳಸ್ಯ ಕಂಠಸ್ಯ ವೈ.ಎಸ್.ಆರ್. ಅವರು 1997ರಿಂದ 20 ವರ್ಷಗಳ ಕಾಲ ಲೈಸೆನ್ಸ್ ಅನ್ನು ನವೀಕರಿಸಿ ಆದೇಶ ಹೊರಡಿಸಿದ್ದಾರೆ. ಹಾಗಾಗಿ 2017. ಈಗ ಸಿಇಸಿ ಈ ಆದೇಶವೇ ಕಾನೂನು ಬಾಹಿರ ಎಂದಿದೆ. ಇನ್ನು 2004ಕ್ಕೆ ಮುಗಿಯುತ್ತದೆ ಈ ಗಣಿ ಪರವಾನಗಿ. ಹಾಗಾಗಿ ಮುಂದೆ ನಡೆಸಿದ ಗಣಿಗಾರಿಕೆ ಅಕ್ರಮ, ಹಾಗಾಗಿ ಅದನ್ನು ಸರಿಗಟ್ಟುವ ದಂಡ. ಒಂದು ಅಂದಾಜು ಈ ಮೊತ್ತವನ್ನು 4,400 ಕೋಟಿಗಳೆಂದು ತೋರಿಸುತ್ತದೆ!)

- ಅಕ್ರಮ ಗಣಿಗಾರಿಕೆ. 


- ಈ ಕುರಿತು ಸಿಇಸಿ - ಆಂಧ್ರ ಸರ್ಕಾರದ ಗಣಿ ಇಲಾಖೆ ತಳಮಟ್ಟದಲ್ಲಿ ಯಾವುದೇ ಕ್ರಾಸ್ ಚೆಕಿಂಗ್ ಮೆಖಾನಿಸಂಗಳನ್ನು ಅಳವಡಿಸದೆ, ಪರವಾನಗಿದಾರರ ಹೇಳಿಕೆಗಳನ್ನೇ ನಂಬಿಕೊಂಡು ಅದಿರು ಸಾಗಾಣಿಕೆಗೆ ಪರ್ಮಿಟ್ಟುಗಳನ್ನು ನೀಡಿರುವುದರಿಂದ ಅಕ್ರಮ ಗಣಿಗಾರಿಕೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಓಬಳಾಪುರಂ ಮೈನಿಂಗ್ ಕಂಪೆನಿಯ 68.5 ಹೆಕ್ಟೇರ್ ಲೀಸ್ನಲ್ಲಿ ಕಂಪೆನಿಯು ಅಕ್ರಮವಾಗಿ 5 ಕಚ್ಚಾ ರಸ್ತೆಗಳನ್ನು ನಿರ್ಮಿಸಿದೆ. ಇದು ಅರಣ್ಯ ಕಾಯ್ದೆ 1980 ಮತ್ತು ಲೀಸ್ ಅಗ್ರೀಮೆಂಟಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದಲ್ಲದೆ 68.5 ಹೆಕ್ಟೇರ್ ಮತ್ತು 6.5 ಹೆಕ್ಟೇರ್ ಓಎಂಸಿ ಲೀಸಿನಲ್ಲಿ ಉತ್ಖನನ ಮಾಡಿರುವಂತೆ ತೋರಿಸಲ್ಪಟ್ಟ ಖನಿಜ ಈ ಲೀಸುಗಳಲ್ಲಿನ ಪಿಟ್ಸ್ಗಿಂತಲೂ ಅಗಾಧ ಪ್ರಮಾಣದ್ದಾಗಿದೆ.

ಸಿಇಸಿಯ ಈ ನೋಟ್ನಲ್ಲಿ ರೆಡ್ಡಿಯ ಕರಾಳ ಗಣಿ ಸಾಮ್ರಾಜ್ಯದ ಸಕಲೆಂಟು ವಿವರಗಳೂ ಅಡಗಿವೆ. ಬಳ್ಳಾರಿ ಅನಂತಪುರಗಳಲ್ಲಿದೆ ಗಣಿ ಧಣಿ ಜನಾರ್ಧನ ರೆಡ್ಡಿಯ ಸಾಮ್ರಾಜ್ಯ. ಇಲ್ಲಿ ಕಾನೂನು ಕಟ್ಟಳೆ ಎಲ್ಲವೂ ರೆಡ್ಡಿಯೇ. ಆಂಧ್ರದಲ್ಲಿ ಓಬಳಾಪುರಂ ಮೈನಿಂಗ್ ಕಂಪೆನಿಯ ಮೂಲಕ ತನ್ನ ಹೆಸರಿನಲ್ಲಿ ಮೈನಿಂಗ್ ನಡೆಸುವ ರೆಡ್ಡಿ, ಅಲ್ಲಿ ಅಕ್ರಮವಾಗಿ ಹೆಕ್ಟೇರುಗಟ್ಟಲೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಅಲ್ಲಿ ಗಣಿಗಾರಿಕೆ ನಡೆಸುತ್ತಾರೆ. ರೆಡ್ಡಿಯ ಸಾಮ್ರಾಜ್ಯಕ್ಕೆ ಅದೊಂದು ಫ್ರಂಟ್ ಅಷ್ಟೆ. ಆತನಿಗೆ ದೊರಕಿರುವ ಲೀಸ್ನಲ್ಲಿ ಮಾತ್ರ ಗಣಿಗಾರಿಕೆ ಮಾಡಿಕೊಂಡಿದ್ದರೆ ರೆಡ್ಡಿಯ ಕ್ಷಿಪ್ರ ಬೆಳವಣಿಗೆ ಈ ಮಟ್ಟಕ್ಕೆ ಸಾಧ್ಯವಾಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ಆತನ ಹೆಸರಿನಲ್ಲಿ ಏನೇನೂ ಇಲ್ಲವಾದರೂ ಬಳ್ಳಾರಿಯ ಗಣಿ ಸಾಮ್ರಾಜ್ಯ ಬಹುಮಟ್ಟಿಗೆ ರೆಡಿಯ ಹಿಡಿತದಲ್ಲಿದೆ. ಇಲ್ಲಿನ ಅನೇಕ ಗಣಿಗಳನ್ನು ರೈಸಿಂಗ್ ಕಾಂಟ್ರಾಕ್ಟ್ನ ಹೆಸರಿನಲ್ಲಿ ನಿಯಂತ್ರಿಸುವುದು ಜನಾರ್ಧನ ರೆಡ್ಡಿ ಅಂಡ್ ಫ್ಯಾಮಿಲಿ. ಆದರೆ ಎಲ್ಲವೂ ಬೇನಾಮಿ. ಇನ್ನು ಇದಲ್ಲದೆ ಬಹುತೇಕ ಗಣಿಗಳಿಂದ ರೆಡ್ಡಿಗೆ ಇಷ್ಟು ಎಂದು ಹಫ್ತಾ ಸಲ್ಲಿತವಾಗುತ್ತದೆ ಎಂಬ ಮಾತೂ ಇದೆ. ಇದು ಉತ್ಖನಿತ ಅದಿರಿನಲ್ಲಿ ಶೇ.40 ಎಂಬುದು ಬಳ್ಳಾರಿಯಲ್ಲಿ ಒಂದು ಜನಜನಿತ ಫಾಮರ್ುಲಾ. ಅದೂ ರೆಡ್ಡಿಗಾರು ಇದನ್ನು ಕ್ಯಾಷ್ ಅಲ್ಲಿ ಸ್ವೀಕರಿಸುವುದಿಲ್ಲ, ಇನ್ ಕೈಂಡ್ ಅದಿರು ಕೊಡಬೇಕು. ಬಳ್ಳಾರಿಯಲ್ಲಿ ರೆಡ್ಡಿಗಾರದು ಒಂದು ಪಯರ್ಾಯ ವ್ಯವಸ್ಥೆಯೇ ಇದೆ - ಅದು ಟ್ರಾನ್ಸ್ಪೋರ್ಟ್ ಮಾಫಿಯಾ. ಇವರು ಅದಿರು ಸಾಗಿಸುವುದೇ ರೆಡ್ಡಿಗಳ ಲಾರಿಗಳಲ್ಲಿ. ಲೋಕಾಯುಕ್ತರ ವರದಿ ಇದನ್ನು ಬಿಡಿಸಿ ಬಿಡಿಸಿ ಹೇಳಿದೆ. ಹೀಗೆ ರೈಸಿಂಗ್ ಕಾಂಟ್ರಾಕ್ಟ್ ಇಲ್ಲವೇ ಹಫ್ತಾ ರೀತಿ ವಸೂಲಾದ ಅದಿರನ್ನು ರೆಡ್ಡಿಗಳು ಕರ್ನಾಟಕದಲ್ಲಿ ಲೆಕ್ಕಕ್ಕೇ ತೊರಿಸುವುದಿಲ್ಲ. ಅವರು ಇದನ್ನು ನೇರ ಆಂಧ್ರಕ್ಕೆ ಸಾಗಿಸುತ್ತಾರೆ. ಅದಕ್ಕೆ ಕರ್ನಾಟಕ ಆಂಧ್ರದ ಗಡಿಗುಂಟ ಇವರದೇ ಪ್ರೈವೇಟು ರಸ್ತೆಗಳು! ಅಲ್ಲಿಂದ ಈ ಅದಿರನ್ನು ಓಬಳಾಪುರಂನಲ್ಲಿ ತೆಗೆದದ್ದು ಎಂದು ಲೆಕ್ಕ ತೋರಿಸಿ ವಿಧೇಶಗಳಿಗೆ ರಫ್ತು ಮಾಡುತ್ತಾರೆ. ಹಾಗಾಗಿ 6 ಮೀಟರ್ ಆಳದ ಪಿಟ್ಗಳಿಂದ ಲಕ್ಷೊಪಲಕ್ಷ ಟನ್ ಅದಿರು ಹೊರಬರುತ್ತದೆ. ಅದಕ್ಕಾಗಿಯೇ ರೆಡ್ಡಿಗಳು ಕರ್ನಾಟಕದಲ್ಲಿ ಯಾವ ತನಿಖೆಗೆ ಬೇಕಾದರೂ ಸಿದ್ಧ, ಅದಿರು ರಫ್ತು ನಿಷೇಧಕ್ಕೂ ಬದ್ಧ.

ಇನ್ನು ಇದಲ್ಲದೆ ರೆಡ್ಡಿಗಳು ತಮ್ಮ ಅಕ್ರಮ ಗಣಿಗಾರಿಕೆಗಾಗಿ ರಾಜ್ಯದ ಫಲವತ್ತಾದ ಭೂಮಿಯನ್ನೇ ಆಂಧ್ರ ಕರ್ನಾಟಕದ  ಗಡಿಗಂಟಿಕೊಂಡಂತಿರುವ ತಮ್ಮ ಗಣಿ ಲೀಸ್ ಏರಿಯಾಗಳೊಂದಿಗೆ ಸೇರಿಸಿಬಿಟ್ಟಿದ್ದಾರೆ, ರಾಜ್ಯದ ಗಡಿಯನ್ನೇ ರೆಡ್ಡಿಗಳು ಬದಲಿಸಿಬಿಟ್ಟಿದ್ದಾರೆ, ಎಂದು ತೀವ್ರತರ ಆರೋಪಗಳಿವೆ. ಅಂದಿಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರಾಗಿದ್ದ ವಿ.ಎಸ್.ಉಗ್ರಪ್ಪನವರು ಸತ್ಯಶೋಧನಾ ಸಮಿತಿಯೊಂದನ್ನು ಮುನ್ನಡೆಸಿ, ವರದಿ ನೀಡಿದ್ದರು. ಅದರಲ್ಲಿ ರೆಡ್ಡಿಗಳು ಗಡಿಯಲ್ಲಿನ ಬಾಂದಾ ಕಲ್ಲುಗಳು ಮತ್ತು ಟ್ರೈಜಂಕ್ಷನ್ ಪಾಯಿಂಟ್ ಅನ್ನು ಹೊಡೆದು ಹಾಕಿದ್ದಾರೆಂದೂ ಇದರಿಂದ 32 ಕಿಮಿ. ಉದ್ದ ಮತ್ತು ಅರ್ಧ ಕಿಮಿ. ಅಗಲದ ಕರ್ನಾಟಕದ ಖನಿಜ ಸಂಪದ್ಭರಿತ ಭೂಮಿ ಆಂಧ್ರದ ಪಾಲಾಗಿದೆ ಎಂದು ವರದಿ ನೀಡಿತು. ಇದು ಇತರ ಆರೋಪಗಳಂತೆ ಅಲ್ಲ. ಕರ್ನಾಟಕದ ಸರ್ಕಾರದಲ್ಲಿ ಮಂತ್ರಿಯಾದವ ಕರ್ನಾಟಕದ  ಸಂಪದ್ಭರಿತ ಭೂಮಿಯನ್ನು ಆಂಧ್ರಕ್ಕೆ ಸೇರಿಸಿಬಿಟ್ಟಿದ್ದಾನೆಂದರೆ ಅರ್ಥವೇನು? ಸಿಇಸಿ ವರದಿ ಈ ಕುರಿತು ಏನನ್ನೂ ಸ್ಪಷ್ಟವಾಗಿ ಹೇಳುವುದಿಲ್ಲವಾದರೂ ಅದು ಕರ್ನಾಟಕ -ಆಂಧ್ರ-ಕೇಂದ್ರ ಸರ್ಕಾರಗಳ ವ್ಯಾಪ್ತಿಯಲ್ಲಿರುವ ಇನ್ನೂ ಬಗೆಹರಿಯದ ವಿವಾದ. ಆದರೆ ಮತ್ತೊಂದೆಡೆ ಓಬಳಾಪುರಂ ಮೈನಿಂಗ್ ಕಂಪೆನಿಯ ಮಾಜಿ ಮ್ಯಾನೇಜರ್ ಆಂಜನೇಯ ರೆಡ್ಡಿ ಎಂಬುವವರು, ಸಿಬಿಐ ತನಿಖೆ ನಡೆದಾಗ ಹೆದರಿ ಬೆವರುತ್ತಿದ್ದಾಗ ತಲೆಮರೆಸಿಕೊಂಡವರು, ಈಗ ಬೆಂಗಳೂರಿನ ಅಜ್ಞಾತ ಸ್ಥಳವೊಂದರಲ್ಲಿ ಕೂತು, ಅಪ್ರೂವರ್ ರೀತಿ ತಮ್ಮ ಪೌರುಷದ ಕತೆಗಳ ಪಾರಾಯಣ ಮಾಡುತ್ತಿದ್ದಾರೆ. ಹೇಗೆ ರೆಡ್ಡಿಗಳ  ಅಣತಿಯ ಮೆಲೆ ಅವರೇ ನಿಂತು ಆಂಧ್ರ - ಕರ್ನಾಟಕ ಗಡಿಯ ಬಾಂದಾ ಕಲ್ಲುಗಳು ಮತ್ತು ಟ್ರೈಜಂಕ್ಷನ್ ಪಾಯಿಂಟ್ ಅನ್ನು ನಾಶಪಡಿಸುದುದಾಗಿ ಹೇಳಿಕೊಂಡಿದ್ದಾರೆ. ಉಗ್ರಪ್ಪನವರ ಸತ್ಯ ಶೋಧನಾ ಸಮಿತಿಯ ವರದಿ ಹೇಳುವುದೂ ಇದನ್ನೇ.

ಈಗ್ಗೆ ಒಂದು ವರ್ಷದ ಹಿಂದೆ ಆಂಧ್ರ ಸರ್ಕಾರ ಈ 6 ಗಣಿ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿತ್ತು. ಕೂಡಲೇ ಬೆದರಿ ಹೋದ ರೆಡ್ಡಿ ಆಂಧ್ರ ಹೈಕೋರ್ಟ್ಗೆ ತಾಂತ್ರಿಕ ಆಕ್ಷೇಪಣಾ ಅರ್ಜಿಯೊಂದನ್ನು ಸಲ್ಲಿಸಿ ಸಿಬಿಐ ತನಿಖೆಗೆ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರ ಸುದೀರ್ಘ ವಿಚಾರಣೆ ನಡೆಸಿದ ಆಂಧ್ರ ಹೈಕೋರ್ಟ್ ಮೊನ್ನೆ ತನ್ನ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಕೂಡಲೇ ಎಚ್ಚೆತ್ತ ಸಿಬಿಐ ಈಗ್ಗೆ ಎರಡು ದಿನಗಳಿಂದ ಬಳ್ಳಾರಿ ಆಂಧ್ರದ ಗಣಿಗಾರಿಕಾ ಪ್ರದೇಶದಲ್ಲಿ ವಿಸತೃತ ಸಂಚಾರ ನಡೆಸಿ ಕೂಲಂಕುಷ ತನಿಖೆ ನಡೆಸುತ್ತಿದೆ. the noose is tightening.

ಇನ್ನು ರೆಡ್ಡಿಗಳ ರಾಜಕೀಯದ ಉದ್ದೇಶ ಅವರ ಸಾಮ್ರಾಜ್ಯ ಸಂರಕ್ಷಣೆ ಮತ್ತು ಅದಕ್ಕಾಗಿ ಅಧಿಕಾರ. ಆದರೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಅದರಲ್ಲೂ ಸಹ ರೆಡ್ಡಿಗಳು ಸೋತಿದ್ದಾರೆ. ರೆಡ್ಡಿಗಳ ಉಚ್ಛ್ರಾಯವಿದ್ದದ್ದು ಆಂಧ್ರದಲ್ಲಿ ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದು, ಇಲ್ಲಿ ಆಪರೇಷನ್ ಕಮಲದ ದಿಸೆಯಿಂದ ಯಡಿಯೂರಪ್ಪ ಅಧಿಕಾರ ಹಿಡಿದ ಹೊಸತರಲ್ಲಿ. ಆದರೆ ಇವತ್ತು ಎಲ್ಲವೂ ಬದಲಾಗಿ ಹೋಗಿದೆ. ಯಡಿಯೂರಪ್ಪನವರೊಂದಿಗೆ ಅವರ ಸಂಬಂಧ ಹೇಗಿದೆಯೆಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಹಾಗಂತ ಅವರನ್ನುರುಳಿಸಿ ಪರ್ಯಾಯ ವ್ಯವಸ್ಥೆಗೆ ಚಾಲನೆ ನಿಡುವ ಅವರ ಎಲ್ಲ ಪ್ರಯತ್ನಗಳೂ ಮಣ್ಣುಗೂಡಿ ತಣ್ಣಗಾಗಿರುವುದು ಅವರ ಕುಗ್ಗಿದ ರಾಜಕೀಯ ಬಲದ ವಿಶ್ಲೇಷಣೆಯೆ ಸರಿ. ಇನ್ನು ಮೊನ್ನೆಯ ಬಳ್ಳಾರಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ತಿಣುಕಾಡಿರುವುದೂ ಕೂಡ, ಅವರ ಕೋಟೆಯಲ್ಲಿ ಬಿರುಕುಗಳು ಮೂಡಿರುವ ಸ್ಪಷ್ಟ ಚಿತ್ರಣ ನೀಡುತ್ತದೆ. ಇನ್ನು ರೆಡ್ಡಿಗಳ ಕಾಂಗ್ರೆಸ್ ಸಂಬಂಧ ಹಳಸಿ ಶಾನೆ ಕಾಲವಾಯಿತು ಬಿಡಿ. ವೈ.ಎಸ್.ಆರ್ ಮರಣ ಅವರಿಗೆ ವಜ್ರಾಘಾತವೇ ಸರಿ. ಅದಾದ ಮೇಲೆ ರೆಡ್ಡಿಗಳು ಮೊದಲಿನಂತಾಗಲೇ ಇಲ್ಲ. ಇದರಿಂದ ಹೊರಬರಲು ಅವರ ಸಾಮ್ರಾಜ್ಯದ ಪಾಳೇಪಟ್ಟುಗಳನ್ನು ಉಳಿಸಿಕೊಳ್ಳಲು ವೈ.ಎಸ್.ಆರ್. ಅವರ ಸುಪುತ್ರ ಜಗನ್ಮೋಹನ ರೆಡ್ಡಿಯವರನ್ನು ಆಂಧ್ರದ ಮುಖ್ಯಮಂತ್ರಿ ಮಾಡಲು ಹೆಣಗಾಡಿದ, ಅದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ನೊಂದಿಗೆ ಸಂಘರ್ಷಕ್ಕಿಳಿದ ರೆಡ್ಡಿಗಳೊಂದಿಗೆ ಜಗನ್ಮೋಹನ ರೆಡ್ಡಿಯು ಹೊರದಬ್ಬಲ್ಪಟ್ಟು ಈಗ ಆತನೇ ಅಸ್ತಿತ್ವದ ಹುಡುಕಾಟದಲ್ಲಿದ್ದಾನೆ. ಇನ್ನು ಜಗನ್ಮೋಹನ ರೆಡ್ಡಿಯನ್ನು ಹಣಿಯಲು ಉತ್ಸುಕವಾಗಿ ಮುನ್ನುಗ್ಗುತ್ತಿರುವ ಕಾಂಗ್ರೆಸ್ಗೀಗ ಅತ್ಯಮತ ಸುಲಭದ ಟಾರ್ಗೆಟ್ ಗಾಲಿ ಜನಾರ್ಧನ ರೆಡ್ಡಿ ಮತ್ತು ಆತನ ಸಾಮ್ರಾಜ್ಯ! ಇನ್ನು ಕರ್ನಾಟಕದಲ್ಲಿ ಬಿಜೆಪಿಯ ಉಸಿರುಗಟ್ಟುವ ವಾತಾವರಣದಿಂದ ಹೊರಬಂದು ಜೆಡಿಯು ಅಥವಾ ಎನ್ಸಿಪಿಯನ್ನು ಕಟ್ಟಿ, ಬಿಜೆಪಿಯೊಂದಿಗೆ ಮ್ಯತ್ರಿ ಮಾಡಿಕೊಂಡು ಸ್ವಂತ ರಾಜಕೀಯ ಅಸ್ತಿತ್ವವನ್ನು ರುಪಿಸಿಕೊಲ್ಳುವ ಹವಣಿಕೆಯಲ್ಲಿ ರೆಡ್ಡಿಗಳು ಇದ್ದಾರಾದರೂ ಈ ಪಕ್ಷಗಳು ರೆಡ್ಡಿಗಳಿಗೆ ಬಾಗಿಲು ತೆಗೆಯುವ ಸುದ್ದಿಗಳೇನೂ ಇಲ್ಲ. ರೆಡ್ಡಿ ಇಂದು ಅಕ್ಷರಶಃ ದಿಕ್ಕೆಟ್ಟಿದ್ದಾರೆ.

ಎಷ್ಟೇ ಆದರೂ ಅಕ್ರಮದ ತಳಹದಿಯ ಮೇಲೆ ನಿರ್ಮಿಸಲ್ಪಟ್ಟ ಸಾಮ್ರಾಜ್ಯ ಒಂದಲ್ಲ ಒಂದು ದಿನ ಧರೆಗುರುಳಲೇ ಬೇಕು. ಕೇವಲ ಹತ್ತು ವರ್ಷಗಳಲ್ಲಿ ಇಂಥದೊಂದು ಸಾಮ್ರಾಜ್ಯವನ್ನು ನಿರ್ಮಿಸಿ ಅದರ ಚಕ್ರಾಧಿಪತ್ಯವನ್ನು ಸಾಧಿಸಿದ್ದ ರೆಡ್ಡಿ, ಇಷ್ಟೂ ದಿನ ಜನ ಮತ್ತು ವ್ಯವಸ್ಥೆಯನ್ನು ಕಣ್ಣುತಪ್ಪಿಸಿ ದಿಕ್ಕೆಡಿಸಿದ ರೆಡ್ಡಿ ಇಂದು ಬಯಲಿನಲ್ಲಿ ನಿಂತಿದ್ದಾರೆ. ಸಿಇಸಿ ವರದಿ ಅವರ ಈವರೆಗಿನ ಎಲ್ಲವನ್ನೂ ಬಯಲುಗೊಳಿಸಿ ಅವರನ್ನು ಜನ ಮತ್ತು ವ್ಯವಸ್ಥೆಯ ಮುಂದೆ ನಗ್ನವಾಗಿಸಿದೆ. hope it becomes the last nail. ಅವರು ನಿರ್ಮಿಸಿದ ಸೌಧಗಳೆಲ್ಲವೂ ಉರುಳಿಬಿದ್ದಿವೆ. ಸುತ್ತಲೂ ಅವಶೇಷಗಳೇ. ಆ ಅವಶೇಷಗಳಡಿ ತಾವೂ ಹೂತು ಹೋಗಬಾರದೆಂಬುದೇ ಸದ್ಯ ರೆಡ್ಡಿಗಾರಿ ಪೋರಾಟಮು. ಅದರಲ್ಲಿ ಅವರದೋ ಯಶಸ್ಸು? ವ್ಯವಸ್ಥೆಯದೋ?

2011ರ ಹೊಸ್ತಿಲ ಮೇಲೆ ನಿಂತು ಬೆನ್ನು ನೋಡಿಕೊಂಡಾಗ

2011ರ ಮತ್ತು ಈ ದಶಕದ ಮೊದಲ ಸೂರ್ಯೋದಯ ಆಗಿದೆ. 2010 ಆಗಲೇ ಮಗುಚಿ ಬಿದ್ದಿದೆ. 2011 ರೆಕ್ಕೆಯಗಲಿಸಿದೆ. ಈ 2010ರಲ್ಲಿ ಲೋಕ, ರಾಷ್ಟ್ರ, ರಾಜ್ಯಗಳಲ್ಲಿ ಏನೇನಾಯಿತೆಂದು ನಿಯತಕಾಲಿಕೆಗಳು ವಿಶೇಷ ಸಂಚಿಕೆಗಳನ್ನು ತರುತ್ತಿದ್ದರೆ, ಟಿವಿ ಛಾನೆಲ್ಲುಗಳು ವಿಶೇಷ ಅವಲೋಕನ ಕಾರ್ಯಕ್ರಮಗಳನ್ನು ಮಾಡುತ್ತಿವೆ. 2010 ನನಗೇನಾಗಿತ್ತು? ಅನ್ನುವ ಪ್ರಶ್ನೆಯನ್ನು ನಿನ್ನೆ ರಾತ್ರಿ ಕೇಳಿಕೊಂಡೆ, 2010ರ ಕಡೆಯ ಕ್ಷಣಗಳಲ್ಲಿ. ಏನು ವಿಶೇಷ? ಅಂಥದ್ದೇನೂ ಅನ್ನಿಸಲಿಲ್ಲ, ಕೆಲವುದರ ಹೊರತಾಗಿ. ಎಲ್ಲ ವರ್ಷಗಳಂತೆಯೇ ಇದೂ ಒಂದು ವರ್ಷ. 365 ದಿನ..ಆದರೆ ಅದರಲ್ಲಿ ಕೆಲವು signpost ಗಳು ಕಾಣುತ್ತಿವೆ ನನಗೆ. ಅವುಗಳನ್ನು ನಿಮ್ಮಗಳೊಂದಿಗಲ್ಲದೆ ಮತ್ಯಾರ ಜೊತೆ ಹಂಚಿಕೊಳ್ಳಲಿ..

ಮೊದಲಿಗೆ ನನ್ನ ಕೆಲಸಗಳು. ಎಂದಿನಂತೆ ಈ ವರ್ಷವೂ ತಲೆಯಲ್ಲಿ ನೂರೆಂಟು ತಿಕ್ಕಲು ಯೋಜನೆಗಳು. ಅವುಗಳಲ್ಲಿ ಕೆಲವು ಇನ್ನು ದಶಕ ಕಳೆದ ಮೇಲೆ ಮಾಡುವಂಥವು, ಇನ್ನು ಕೆಲವು ಶುದ್ಧಾನುಶುದ್ಧ ತಿಕ್ಕಲುಗಳು, ಇನ್ನು ಕೆಲವು ಪ್ರಯೋಗಯೋಗ್ಯವೇ ಅಲ್ಲ. ಇಂಥ ನೂರೆಂಟು ಹೊಳಹುಗಳಲ್ಲಿ ತಲೆಮಾಸಿದ ಎರಡು ಮೂರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇನ್ನೂ ಅದ್ಭುತವಾಗಿ ಜಾರಿ ಮಾಡಬಹುದಾಗಿದ್ದ ಯೋಜನೆಗಳನ್ನು ನನ್ನ ಉಡಾಫೆ ಹಾಳುಗೆಡವಿತು ಎಂದು ಈಗನ್ನಿಸುತ್ತಿದೆ. ಇನ್ನೂ ಶ್ರದ್ಧೆಯಿಟ್ಟು ಕೆಲಸ ಮಾಡಬೇಕು, ಎಂಬ ಎಂದಿನ ನ್ಯೂ ಇಯರ್ ರೆಸಲ್ಯೂಷನ್ನೊಂದಿಗೆ ಒಂದು ಮೆಲುಕು.

ಮೊದಲಿಗೆ ಬರವಣಿಗೆ:
ಇನ್ನು ಈ ಭಾನುವಾರ ಎಂಬ ವಾರಪತ್ರಿಕೆಗೆ ನಾನು ಪ್ರತೀ ವಾರ ಅಂಕಣ ಬರೆಯುತ್ತಿರುವುದು ತಮ್ಮೆಲ್ಲರಿಗೂ ತಿಳಿದಿರುವುದೇ. ಮೊದಮೊದಲು ಆ ವಾರದ ವಿದ್ಯಮಾನಗಳ ಬಗ್ಗೆ ಅಂಕಣ ಬರೆಯುತ್ತಾ ಅತೀ ವರ್ತಮಾನದಲ್ಲಿ ಕಳೆದು ಹೋಗಿದ್ದ ನನ್ನ ಬರವಣಿಗೆಗೆ ಈ ವರ್ಷ ಒಂದು ತಿರುವು ಸಿಕ್ಕಿತು.

ಬಿಬಿಎಂಪಿ ಎಲೆಕ್ಷನ್ಗಳು ಬರುತ್ತಿದ್ದಂತೆಯೇ ದೇವೇಗೌಡರು ಪಂಚೆ ಎತ್ತಿಕಟ್ಟಿ ನೈಸ್ ವಿರುದ್ಧ ಒಂದು ಜನಾಂದೋಲನವನ್ನು ರೂಪಿಸಿದರು. ನೈಸ್ ರಸ್ತೆಯ ವಿವಾದವನ್ನು 3 ತಿಂಗಳ ಕಾಲ ಜೀವಂತವಾಗಿಟ್ಟು ಅದಕ್ಕೆ ಅಖಂಡ ನ್ಯೂಸ್ ವ್ಯಾಲ್ಯೂವನ್ನು ದೊರಕಿಸಿಕೊಟ್ಟರು. ಬಿಬಿಎಂಪಿ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಪಂಚೆ ಇಳಿಸಿ ಗೌಡರು ಪದ್ಮನಾಭನಗರ ಸೇರಿಬಿಟ್ಟರು ಬಿಡಿ. ಅದಿರಲಿ. ಆಗಲೇ ನಾನು ಕೈಗೆತ್ತಿಕೊಂಡದ್ದು ನೈಸ್ ವಿವಾದದ ಅಧ್ಯಯನ. ದಲಿತ ಸಂಘರ್ಷ ಸಮಿತಿಯವರು ಮಾಹಿತಿ ಹಕ್ಕಿನಡಿ ಪಡೆದ ಸುಮಾರು 3-4 ಸಾವಿರ ಪುಟಗಳಷ್ಟು ತತ್ಸಂಬಂಧೀ ಸರಕಾರೀ ದಾಖಲೆಗಳ ಅಧ್ಯಯನ. it was a great eye opener. ಇಡಿಯ ಯೋಜನೆಯ ಪ್ರತಿ ಹೆಜ್ಜೆಯೂ ಮೋಸವೇ! 5 ಸಾವಿರ ಎಕರೆಯಷ್ಟು ರಸ್ತೆಗೆ ಖೇಣಿ ಸಾಹೇಬರು ಇವತ್ತು 29 ಸಾವಿರ ಎಕರೆ ಭೂಮಿ ಪಡೆದಿದ್ದಾರೆ! ಇನ್ನೂ ಪಡೆಯುತ್ತಲೇ ಇದ್ದಾರೆ!! ಎಲ್ಲವೂ ಬಡ ರೈತರ ಜಮೀನುಗಳು, ಅಲ್ಲಿ ಖೇಣಿ ಸಾಹೇಬ ಕಟ್ಟುತ್ತಿರುವುದು ರೆಸಾರ್ಟು ಮತ್ತು ಫಿಲ್ಮ್ ಸಿಟಿ!

ಈ ಕುರಿತು ಒಂದು ಸಮಗ್ರ ಅಧ್ಯಯನ ನಡೆಸಿ ಸತತ 21 ವಾರಗಳ ಕಾಲ ನೈಸ್ ಯೋಜನೆಯ ಶ್ರೀಕಾರದಿಂದಲೂ ನಡೆದ ಪ್ರತಿ ತಪ್ಪು ಹೆಜ್ಜೆ, ಹಗರಣವನ್ನು ದಾಖಲೆ ಸಮೇತ ವಿಶ್ಲೇಷಿಸಿ ಬರೆದೆ. ಇದರಲ್ಲಿ ಯಾವುದೇ bias ಅನ್ನು ಬರಗೊಡಕೂಡದೆಂಬ ಎಚ್ಚರ ವಹಿಸಿದೆ. ದಲಿತ ಸಂಘರ್ಷ ಸಮಿತಿಯವರು ಸಂಗ್ರಹಿಸಿರುವ ದಾಖಲೆಗಳನ್ನು ವಿಶ್ಲೇಷಿಸಿ ಅದಕ್ಕೊಂದು ನಿರೂಪಣೆಯನ್ನು ಕೊಟ್ಟಿದ್ದಷ್ಟೇ ನಾನು ಮಾಡಿದ್ದು. ಆದರೆ 21 ವಾರಗಳ ನಂತರ ನನ್ನ ಕೆಲಸದ ಬಗ್ಗೆ ಒಂದು ಹೆಮ್ಮೆ ಮೂಡಿತ್ತು. ಈ ಸರಣಿ ಲೇಖನಕ್ಕೆ ಬಂದ ಪ್ರತಿಕ್ರಿಯೆ ಅತ್ಯಮೋಘ. ಇಷ್ಟನ್ನು ಮಾತ್ರ ಎದೆತಟ್ಟಿ ಹೇಳಬಲ್ಲೆ, ನೈಸ್ ಬಗ್ಗೆ ಸಾಕಷ್ಟು ಜನ ಸಾಕಷ್ಟು ಬರೆದಿದ್ದಾರೆ. ಆದರೆ ಇಡಿಯ ಚಿತ್ರಣವನ್ನು ಕಟ್ಟಿಕೊಡುವ, ದಾಖಲೆಗಳೊಂದಿಗೆ ಚರ್ಚೆಗಿಳಿಯುವ ಕೃತಿ ನನ್ನದೇ! ಈ ಸರಣಿ ಲೇಖನಗಳ ಸಂಗ್ರಹವನ್ನು ಒಂದು ಸಣ್ಣ ಪುಸ್ತಕವಾಗಿ ಹೊರತರಬೇಕೆನ್ನುವ ಆಸೆ ಇನ್ನೂ ಜೀವಂತ. ಒಟ್ಟಾರೆ ಒಂದು ಸಾಮಾಜಿಕ-ರಾಜಕೀಯ-ಭ್ರಷ್ಟಾಚಾರದ ಇಶ್ಯೂ ಬಗ್ಗೆ ಅತ್ಯಂತ ಸವಿಸ್ತಾರವಾಗಿ ಮತ್ತೂ ಮುಖ್ಯವಾಗಿ ಜನಪರವಾಗಿ ಬರೆದ ಖುಷಿಯಿದೆ.


ಇನ್ನು ತೀರ ಇತ್ತೀಚೆಗೆ ಯಡಿಯೂರಪ್ಪನವರ ಪುತ್ರರತ್ನರು ಜಿ ಕ್ಯಾಟಗರಿ ನಿವೇಶನ ಪಡೆದು ಸಿಕ್ಕುಬಿದ್ದಾಗ ಜಿ ಕ್ಯಾಟಗರಿ ಬಿಡಿಎ ನಿವೇಶನ ಹಂಚಿಕೆಯ ವಿಷಯ ಚರ್ಚೆಗೆ ಬಂತು. ಆಗ ಈ ಜಿ ಕ್ಯಾಟಗರಿ ನಿವೇಶನಗಳ ಮೂಲಕ್ಕೆ ಪಾತಾಳಗರಡಿ ಹಾಕಿ ಕೂತೆ. 1994ರಲ್ಲಿ ಜಿ ಕ್ಯಾಟಗರಿ ನಿವೇಶನ ಹಂಚಿಕೆಯನ್ನು ವೀರಪ್ಪ ಮೊಯಿಲಿ ಸರ್ಕಾರ ಶುರು ಮಾಡಿದಾಗಿನಿಂದಲೂ ಇವತ್ತಿನವರೆಗೆ ಯಾವ ಯಾವ ಮುಖ್ಯಮಂತ್ರಿಗಳು ಯಾರ್ಯಾರಿಗೆ ಜಿ ಕ್ಯಾಟಗರಿ ನಿವೇಶನ ಹಂಚಿದ್ದಾರೆ ಎಂದು ಸಂಪೂರ್ಣ ಮಾಹಿತಿ ತೆಗೆದು, 6 ವಾರಗಳ ಕಾಲ ಒಂದು ಲೇಖನ ಸರಣಿಯನ್ನು ಮಾಡಿದೆ. ಇದಕ್ಕೂ ಬಂದ ಪ್ರತಿಕ್ರಿಯೆ ಅಮೋಘ. 

ಇನ್ನು ಈ ಎರಡೂ ಲೇಖನ ಸರಣಿಗಳಿಂದ ನಾನು ತನಿಖಾ ಪತ್ರಿಕೋದ್ಯಮದ ಮೊದಲ ಮೆಟ್ಟಿಲುಗಳನ್ನು ನಾನು ಹತ್ತಿಳಿದೆ. ಇನ್ನು ಸರ್ಕಾರಿ  ದಾಖಲೆಗಳನ್ನು ವಿಶ್ಲೇಷಿಸುವ ಅದಕ್ಕೊಂದು ಕಥನಾತ್ಮಕ ನಿರೂಪಣೆಯನ್ನು ಕೊಡುವ ಇತ್ತೀಚೆಗೆ ಡಾಟಾ ಜರ್ನಲಿಸಂ ಎಂದು ಕರೆಯಲ್ಪಡುವ ಹೊಸ ಪಟ್ಟೊಂದನ್ನು ಕೂಡ ಅರಿತೆ. ಇನ್ನು ಈ ಎರಡೂ ಲೇಖನ ಸರಣಿಗಳನ್ನು ನನ್ನ ಹಿಂದೆ ನಿಂತು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಬರೆಸಿದ ನನ್ನ ಸಂಪಾದಕರಾದ ಶ್ರೀ ಮಹದೇವ ಪ್ರಕಾಶರವರಿಗೆ ನನ್ನ ಕೃತಜ್ಞತೆಗಳು. 


ಮಿಕ್ಕ ಕೆಲವು ಹುಚ್ಚು ಯೋಜನೆಗಳು:
ಗದುಗಿನಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಲ್ಲಿಗೇ ಹೋಗಿ 5 ದಿನಗಳ ಕಾಲ ಉಳಿದು ಪ್ರತಿ ನಿಮಿಷದಂತೆ ನೆಟ್ ಲೋಕದಲ್ಲಿ ವರದಿ ಮಾಡುವ ಸಾಹಸ ಮಾಡಿದೆ. ಈ ಸಾಹಸದಲ್ಲಿ ನನ್ನ ಇನ್ನೂ ಮೂವರು ಸ್ನೇಹಿತರು, ಅವಧಿ ಬ್ಲಾಗು, ನಮ್ಮ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗವೂ ಜೊತೆ ನಿಂತಿತ್ತು. ಇದು ಸಾಹಸವೇ ಸರಿ. ಒಂದು live reporting ನ  ನನ್ನ ಮೊದಲ ಅನುಭವವೂ ಹೌದು. ಈ ಬ್ಲಾಗಿನ ಹೆಸರು ನುಡಿನಮನ. ಇನ್ನು ಸಮ್ಮೇಳನಕ್ಕೆ 15 ದಿನಗಳ ಹಿಂದೆಯೇ ಬ್ಲಾಗನ್ನು ಶುರು ಮಾಡಿ ಅದರಲ್ಲಿ ಪ್ರತಿ ದಿನ ಕನ್ನಡ, ಸಾಹಿತ್ಯ, ಸಮ್ಮೇಳನಗಳ ಕುರಿತು ಒಂದು ಆರೋಗ್ಯಪೂರ್ಣ ಚರ್ಚೆಯನ್ನೂ ನಡೆಸಿದ್ದೆ. ಇದರಲ್ಲಿ ಚಂಪಾ, ಬರಗೂರರಿಂದ ಹಿಡಿದು ವಸುಧೇಂಧ್ರ, ವಸ್ತಾರೆಯವರವರೆಗೂ ಎಲ್ಲರೂ ಪಾಲ್ಗೊಂಡಿದ್ದರು. ಇದೇ ಕೆಲಸದ ನಡುವೆ ನನಗೆ ನಮ್ಮ ನಾಡಿನ ಲೇಖಕರನೇಕರ ಪರಿಚಯವೂ ಆಯಿತು. ನನ್ನ ಮೆಚ್ಚುಗೆಯ ಲೇಖಕರೊಂದಿಗೆ ಒಂದು ಸಂವಾದ ಸಾಧ್ಯವಾಯಿತು. ಆದರೆ ಈ ಚರ್ಚೆಗೆ  ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆಗಳು ಬರದಿದ್ದದ್ದು ನನಗೆ ನಿರಾಸೆಯನ್ನೂ ಉಂಟು ಮಾಡಿತು. ಆದರೆ ಸಮ್ಮೇಳನವನ್ನು 5 ದಿನಗಳ ಕಾಲ ಅಲ್ಲಿಂದ ಲೈವ್ ಕವರ್ ಮಾಡಿದ ಅನುಭವ ಅಪೂರ್ವ. ಇದಕ್ಕೆ ಸಿಕ್ಕ ಪ್ರತಿಕ್ರಿಯೆಯೂ ಅಪೂರ್ವ. ಇದು ನಾನು ನೋಡಿದ ಮೊದಲ ಸಾಹಿತ್ಯ ಸಮ್ಮೇಳನವೂ ಆಗಿದ್ದು, ಅದೇ ಒಂದು ವಿಶಿಷ್ಟ ಅನುಭವ ನೀಡಿತು. ಕಡೆಗೆ ಎಲ್ಲರೂ ಇದೊಂದು ಹುಚ್ಚು ಸಾಹಸ ಎಂದರು ಬಿಡಿ. ನನ್ನ ಮತ್ತು ಸ್ನೇಹಿತರ ಜೇಬಿಗೆ 8 ಸಾವಿರದ ದೊಡ್ಡ ಕಿಂಡಿ! ಇರಲಿ ಬಿಡಿ ಇದು ಈ ವರ್ಷದ ನನ್ನ ಕನ್ನಡ ಸೇವೆ. ತೃಪ್ತಿಯಿದೆ.

ಇನ್ನು ಈ ವರ್ಷದ ಮಧ್ಯದಲ್ಲಿ 125 ವರ್ಷಗಳ ಇತಿಹಾಸವಿರುವ ಆಂಧ್ರದ ಸುರಭಿ ನಾಟಕ ತಂಡ ಬೆಂಗಳೂರಿನ ರಂಗಶಂಕರದಲ್ಲಿ 3 ದಿನಗಳ ಕ್ಯಾಂಪು ಹೂಡಿತ್ತು. ಆಗ ಈ ವಿಶಿಷ್ಠ ರಂಗತಂಡದ ಕುರಿತು ಒಂದು ಸಾಕ್ಷ್ಯಚಿತ್ರ ಮಾಡಲು ಶುರು ಮಾಡಿದೆವು. 3 ದಿನಗಳ ಕಾಲ ಸುರಭಿ ತಂಡದೊಂದಿಗೇ ಉಳಿದು ಒಡನಾಡಿ ಶೂಟ್ ಮಾಡಿದೆವು. ಆ ನಂತರ ಕೂಡ ಇದಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದು, ಈ ಸಾಕ್ಷ್ಯಚಿತ್ರವು ಪೋಸ್ಟ್ ಪ್ರೊಡಕ್ಷನ್ನ ಕೊನೆಯ ಹಂತಗಳಲ್ಲಿದೆ. ಇನ್ನು ಸಾಕ್ಷ್ಯಚಿತ್ರವನ್ನು ಪಕ್ಕಕ್ಕಿಟ್ಟರೂ 3 ದಿನಗಳ ಕಾಲ ಸುರಭಿ ತಂಡದೊಂದಿಗೆ ಒಡನಾಡಿದ್ದು, ಅವರ ಮಾಯಾಜಾಲ ನಾಟಕಗಳನ್ನು ನೋಡಿದ್ದೇ ಒಂದು ವಿಶೇಷ ಅನುಭವ.

ಇವಿಷ್ಟೇ ನಾನು ಈ ವರ್ಷ ಹೇಳಿಕೊಳ್ಳಬಹುದಾದ ನಾನು ಮಾಡಿದ ಕೆಲಸಗಳು. ಇನ್ನೂ ಅನೇಕ ಪ್ರಾಜೆಕ್ಟುಗಳು ತಲೆಯಲ್ಲಿಯೇ ಇವೆ. ಯಾವುದೆದ್ದು ಬಂದು ಯಾವಾಗ ಎಲ್ಲಿ ಅವತರಿಸುತ್ತದೋ ಬಲ್ಲವರಾರು?

ಅಮ್ಮನನ್ನು ಕೊಟ್ಟ ವರ್ಷ: 
ಇನ್ನೇನು ಈ ವರ್ಷದ ವಿಶೇಷ? on a personal note, 2010 was very special to me. ನನ್ನ ಬರವಣಿಗೆ ನೋಡಿ ಮೆಚ್ಚಿ ಹೀಗೆ ಇಂಟರ್ನೆಟ್ಟಿನಲ್ಲಿ ಪರಿಚಯವಾದವರಿವತ್ತು ನನ್ನ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದಾರೆ. ಆಕೆ ಇವತ್ತು ಆತ್ಮೀಯತೆಯಲ್ಲಿ ಅಕ್ಕ, ಪ್ರೀತಿ ಹೆಚ್ಚಾದರೆ ಅಮ್ಮ! ನಾವು ನಿತ್ಯ ಜೀವನದಲ್ಲಿ ನೂರೆಂಟು ಜನರನ್ನು ಭೇಟಿಯಾಗುತ್ತಲೇ ಇರುತ್ತೇವೆ. ಒಬ್ಬೊಬ್ಬರದು ಒಂದೊಂದು ರೀತಿಯ ಸಂಬಂಧ, ಕೆಲವು ಲೆಕ್ಕಾಚಾರದ ಸಂಬಂಧಗಳಾದರೆ, ಕೆಲವು ಸ್ನೇಹ, ಇನ್ನೂ ಕೆಲವು ವೃತ್ತಿಪರ ಅನಿವಾರ್ಯ. ಎಂಥೆಂತಹ ಸಂಬಂದಗಳೋ ಕಳಚಿ ಬೀಳುತ್ತಿರುವುದನ್ನು ನಾವಿವತ್ತು ನೋಡುತ್ತಿದ್ದೇವೆ. ಅಂಥದರಲ್ಲಿ ಒಂದು ಶುದ್ಧ ಅಂತಃಕರಣದ ಅಕಾರಣ ಪ್ರೀತಿಯ ಸೆಲೆ ನನಗೆ ಸಿಕ್ಕಿದ ವರ್ಷವಿದು. ಅಸಲಿಗೆ ನಿರೀಕ್ಷೆಗಳೇ ಇಲ್ಲದ ಸ್ವಚ್ಛ ಬಿಳಿ ಹಾಳೆ. ನಾನೊಬ್ಬ ಪರಮ introvert. ಅಂಥ ನನ್ನ ಅಂತರಂಗ ಬಿಚ್ಚಿಕೊಳ್ಳುವುದು ಈ ಅಕ್ಕನ ಬಳಿ ಮಾತ್ರ. ನನಗೆ ಅಕ್ಕನನ್ನು ಪದಗಳಲ್ಲಿ ಕಟ್ಟಿಕೊಡಲು ಬರುತ್ತಿಲ್ಲ, ಪದಗಳು ಸೋಲುತ್ತಿವೆ. ಆದರೆ ಒಂದೊಂತೂ ಗೊತ್ತು. ಒಬ್ಬ ಅಮ್ಮನನ್ನು ಪಡೆಯುವುದು ಅಷ್ಟು ಸುಲಭವಲ್ಲ. ನಾನು ತುಂಬಾ ಅದೃಷ್ಟಶಾಲಿ. ನನಗೆ ಈ ವರ್ಷ ಒಬ್ಬ ಅಮ್ಮ ಸಿಕ್ಕಳು. ಇನ್ನು ಅಕ್ಕನಿಗೂ ಈ ವರ್ಷ ಕಡಿಮೆ ವರ್ಷವೇನಲ್ಲ. ಬಹುದಿನಗಳಿಂದ ಆಕೆ ಹೋರಾಡುತ್ತಾ ಬಂದ ಎರಡು ಯುದ್ಧಗಳನ್ನು ಅವುಗಳ logical culmination ಗೆ ತೆಗೆದುಕೊಂಡು ಹೋಗಿ ಎರಡೂ ಯುದ್ಧಗಳನ್ನು ಗೆದ್ದು, ಹೊಸ ಜೀವನವೊಂದನ್ನು ರೂಪಿಸಿಕೊಂಡಿರುವ ಧೀರೆ. ಅಕ್ಕನೊಂದಿಗೆ ನಾನು ನನ್ನ ಬೆನ್ನ ಹಿಂದೆ ಅಕ್ಕ. ಈ ಸಂಬಂಧದ ಬೆಲೆ ನನಗೆ ಗೊತ್ತು. ಹಾಗಾಗಿ ಉಳಿಸಿಕೊಂಡು ಹೋಗುವುದೂ ಗೊತ್ತು. ಅಮ್ಮನನ್ನು ಕೊಟ್ಟ 2010ಕ್ಕೆ ಚಿರಋಣಿ!

2011: 
ಇನ್ನು 2011 ಹೇಗಿರುತ್ತೆ? ಕಾಲಗರ್ಭದಲ್ಲಿ ಏನೇನಿದೆಯೋ ಬಲ್ಲವರಾರು? ಆದರೆ ನಮ್ಮದೂ ಅಂತ ಒಂದು ಸಣ್ಣ ಸಿದ್ಧತೆ, ನಿರೀಕ್ಷೆ, ತಯಾರಿಯಿರುತ್ತವಲ್ಲಾ...ಅದನ್ನೂ ನಿಮ್ಮೊಡನೆ ಹಂಚಿಕೊಳ್ಳುವಾಸೆ...

ಸದ್ಯದಲ್ಲಿ ನನ್ನ ಎಂಎಸ್ಸಿ ಎಲೆಲಕ್ಟ್ರಾನಿಕ್ ಮೀಡಿಯಾ ಸ್ನಾತಕೋತ್ತರ ಪದವಿ ಅಭ್ಯಾಸದ ಕಡೆಯ ಸೆಮಿಸ್ಟರಿನಲ್ಲಿದ್ದು, ನಾವು 15 ನಿಮಿಷಗಳ ಒಂದು ಡಾಕ್ಯುಮೆಂಟರಿ ಮಾಡಬೇಕಿರುತ್ತೆ. ನಾನು ಮತ್ತು ನನ್ನ ಸ್ನೇಹಿತರ ಗ್ಯಾಂಗು ಸೇರಿ ಮಾಡ ಹೊರಟಿರುವುದು 8 ಡಾಕ್ಯುಮೆಂಟರಿಗಳು! ಅವುಗಳಿಗೆ ಆಗಲೇ ಪ್ರೀಪ್ರೊಡಕ್ಷನ್, ಸಕ್ರಿಪ್ಟಿಂಗ್ ಕೆಲಸಗಳು ಶುರುವಾಗಿವೆ. ಅದರಲ್ಲಿ ನಾನು ನಿದರ್ೇಶಿಸಲಿರುವ ಡಾಕ್ಯುಮೆಂಟರಿಗಳು 2. ಅವು ಯಾವುವು? ಸಸ್ಪೆನ್ಸ್! 2011ರ ಮೊದಲಾರ್ಧ ಇದರಲ್ಲೇ ಕಳೆದುಹೋಗುತ್ತದೆ.

ಇನ್ನು ಜೂನ್ ವೇಳೆಗೆ ನನ್ನ ಪದವಿ ಅಭ್ಯಾಸ ಮುಗಿಯುತ್ತದೆ. ಅಲ್ಲಿಗೆ ನನ್ನ ಕಾಲೇಜು ಜೀವನವೂ...! ಇನ್ನೂ ತುಂಬಾ ಓದುವುದಿದೆ, ಓದ್ತೀನಿ, ಆದರೆ ಕಾಲೇಜಿಗೆ ಹೋಗಲ್ಲ. ಅಲ್ಲಿಗೆ ಶಿಕ್ಷಣ ಮುಗಿದು ಕೆಲಸದ ಬೇಟೆ! ನನ್ನ field of passion - broadcast journalism. ರಾಷ್ಟ್ರೀಯ ಇಂಗ್ಲೀಷ್ ಮಾಧ್ಯಮದಲ್ಲಿ ಕೆಲಸ ಮಾಡಬೇಕೆಂಬುದು ಮನದಿಂಗಿತ. ಸಾಧ್ಯವಾಗದಿದ್ದರೆ ಕನ್ನಡ ವಾಹಿನಿಗಳು. ಒಟ್ಟಿನಲ್ಲಿ ನನ್ನ ಕ್ಷೇತ್ರ broadcast journalism. ಶಿಕ್ಷಣ ಮುಗಿಸಿ ಕೆಲಸದ ಬೇಟೆಯಲ್ಲಿ ಸೆಣಸಾಡಿ ಫೀಲ್ಡಿಗಿಳಿಯುವುದಿದೆಯಲ್ಲಾ...2011 ನನ್ನ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು!! ನಿಮ್ಮೆಲ್ಲರ ಹಾರೈಕೆ ನನ್ನೊಂದಿಗಿರಲಿ.

ನಿಮ್ಮೆಲ್ಲರಿಗೂ 2011 ಸುಖ, ಸಮೃದ್ಧಿಗಳನ್ನಷ್ಟೇ ತರದೆ ನಿಮ್ಮಿಂದ ಗರಿಷ್ಠ ಕೆಲಸವನ್ನು ತೆಗೆಸಲಿ ಎಂದು ಹಾರೈಸುತ್ತೇನೆ.

Proudly powered by Blogger
Theme: Esquire by Matthew Buchanan.
Converted by LiteThemes.com.