Archive for March 2010
ನೈಸ್ ಪುರಾಣ - 4 - ಫ್ರೇಮ್ ವರ್ಕ್ ಅಗ್ರೀಮೆಂಟ್ ಎಂಬ ನೇಣುಗಂಬ!
ಯಾಕೋ ರಾಮನೆಂದರೆ ಭಯವಾಗ್ತದೆ........?!!
ರಾಮನೆಂದರೆ ಯಾಕೋ ಭಯ ಅಂದಾಗ ನನ್ನ ಮನಸ್ಸಿನಲ್ಲಿದದ್ದು ಇದೇ! ನಮ್ಮ ಇಂದಿನ ಅನೇಕ ದುರಂತಗಳಿಗೂ ಕಾರಣ ಇದೇ. ಪುರಾಣದ ಶ್ರೀರಾಮಚಂದ್ರನನ್ನು ಇತಿಹಾಸ ಪುರುಷನನ್ನಾಗಿಸಿಬಿಡುವ ಹುನ್ನಾರ. ಹೌದು ಭಾರತದಲ್ಲಿ ಇಂದು ಅತ್ಯಂತ ಶಕ್ತ ಪೊಲಿಟಿಕಲ್ ಫೋರ್ಸ್ ಯಾರು ಗೊತ್ತಾ? ಅನುಮಾನವೇ ಬೇಡ - ಆತ ಶ್ರೀರಾಮ! ಹೌದು ಇಂದು ಶ್ರೀರಾಮನನ್ನು ಹಿಂದುತ್ವವಾದಿಗಳು ಗುತ್ತಿಗೆ ಪಡೆದುಕೊಂಡುಬಿಟ್ಟದ್ದಾರೆ. ಶ್ರೀರಾಮನನ್ನು ಇತಿಹಾಸ ಪುರುಷನನ್ನಾಗಿ ಮಾಡಿ, ಆತನನ್ನು ತಮ್ಮ ಧರ್ಮದ ಅಫೀಮಿನೊಳಕ್ಕೆ ಬೆರೆಸಿ ಇವರು ಮಾಡಿದ ದುರಂತ ಒಂದೇ, ಎರಡೇ?
ಎಲ್ಲವೂ ಶ್ರೀರಾಮನ ಹೆಸರಿನಲ್ಲಿ! ಇವತ್ತಿಗೂ ರಾಮಜನ್ಮಭೂಮಿ ಅಯೋಧ್ಯೆ ಭಾರತದ ರಾಜಕಾರಣದಲ್ಲಿ ಅಗ್ಗಿಷ್ಟಿಕೆಯಿದ್ದಂತೆ. ಇನ್ನು ರಾಮನ ಹೆಸರಿನಲ್ಲಿ ತಮಿಳುನಾಡಿನಲ್ಲಿ ಸೇತು ಸಮುದ್ರಂಗೆ ಅಡ್ಡಗಾಲು. ಒಂದೇ ಎರಡೇ ಎಷ್ಟು ಸಮಸ್ಯೆಗಳು. ಈ ದೇಶದಲ್ಲಿ ರಾಮನಾಮಕ್ಕೆ ಮೆತ್ತಿಕೊಂಡಿರುವಷ್ಟು ರಕ್ತ ಇನ್ನಾವುದೇ ಹೆಸರಿಗಿಲ್ಲ. `ಜೈ ಶ್ರೀರಾಮ್' ಎನ್ನುವುದು ಇಂದು ವಾರ್ ಕ್ರೈ ಆಗಿ ಕೇಳುತ್ತದೆ. ಶ್ರೀರಾಮ ಸೇನೆಯನ್ನು ನೆನೆಸಿಕೊಂಡೂ ಭಯವಾಗದೇ ಇರುವುದುಂಟೇ? ಶ್ರೀರಾಮ ಇಂದು ಒಂದು ಸಂಕುಚಿತ ಸಿದ್ಧಾಂತ, ಅಸಹಿಷ್ಣುತೆಗೆ ಪ್ರತೀಕನಾಗಿದ್ದಾನೆ. ರಾಮನೆಂದರೆ ಈತನೇನಾ? ಈತನಷ್ಟೆ ಅಲ್ಲ. ಅನಂತಮೂರ್ತಿಗಳು ಹೇಳಿದ ಹಾಗೆ ನೆನಪು. ಹಿಂದುತ್ವವಾದಿಗಳ ಈ ಶ್ರೀರಾಮನಿಗೂ, ನಮ್ಮ ಮನೆಗಳ ಹಿರಿಯರು ಮಾತಿಗೊಮ್ಮೆ ನೆನಪಿಸಿಕೊಳ್ಳುವ ರಾಮಪ್ಪನಿಗೂ ಯಾವುದೇ ಸಂಬಂಧವಿಲ್ಲ, ಇವರಿಬ್ಬರೂ ಬೇರೆ ಬೇರೆ ಎಂದು. ನಿಜ ನಮ್ಮಲ್ಲಿ ಇಬ್ಬರು ರಾಮರಿದ್ದಾರೆ. ಒಬ್ಬ ರಾಮ ಅಯೋಧ್ಯೆಯಲ್ಲಿ ಇಂತಿಂತಹ ತಾರೀಖಿನಂದು ಹುಟ್ಟಿದ ಇತಿಹಾಸ ಪುರುಷ. ಜೈ ಶ್ರೀರಾಮ್ ಎಂಬ ವಾರ್ ಕ್ರೈಗೆ ಸ್ಫೂರ್ತಿಧಾತ. ಈತನ ಹೆಸರಿಗೇ ರಕ್ತ ಮೆತ್ತಿಕೊಂಡಿರುವುದು.
ನಮ್ಮಲ್ಲೇ ಇನ್ನೊಬ್ಬ ರಾಮನಿದ್ದಾನೆ. ನಮ್ಮ ಅಜ್ಜಿಯರು ಒಂದು ಮೂಲೆಯಲ್ಲಿ ಕೂತು ಜಪಿಸುವ, ರಾಮಕೋಟಿ ಬರೆಸಿಕೊಳ್ಳುವ ರಾಮ. ಈ ರಾಮಪ್ಪನನ್ನು ನಾವು ಮನುಷ್ಯನಾಗಿದ್ದು ತನ್ನ ಕತೃತ್ವ ಶಕ್ತಿಯಿಂದ ದೈವತ್ವಕ್ಕೇರಿದವನಾಗಿ ನೋಡುತ್ತೇವೆ. ಈತನೊಂದಿಗೆ ನಮ್ಮದೊಂದು ನಿರಂತರ ಸಂವಾದ ಜಾರಿಯಲ್ಲಿರುತ್ತದೆ. ಅಲ್ಲ ಸೀತೆಯನ್ನು ಅಷ್ಟು ಬಾಧಿಸಿದ ರಾಮ ಸ್ತ್ರೀದ್ವೇಷಿಯಾ? ವಾಲಿಯನ್ನು ಮರದ ಮರೆಯಲ್ಲಿ ಹೊಡೆದದ್ದು ಸರಿಯಾ? ಹೀಗೆ ಆತನೊಂದಿಗೆ ನಮಗೊಂದು ಸಾಮೀಪ್ಯವಿದೆ. ಆದರೆ ಆಯೋಧ್ಯೆಯ ಆ ರಾಮನೊಂದಿಗೆ ಇಂತಹುದೊಂದು ಸಾಮೀಪ್ಯವಾಗಲೀ, ಭಕ್ತಿಯಾಗಲೀ ಹುಟ್ಟುವುದೇ ಇಲ್ಲ. ಆತನೇನಿದ್ದರೂ ಬೀದಿ ದೊಂಬಿಯ ವಾರ್ ಕ್ರೈ ಅಷ್ಟೆ! ಈತನೇ ಬೇರೆ ಆತನೇ ಬೇರೆ. ರಾಮಜನ್ಮಭೂಮಿಯ ಗದ್ದಲ ತಾರಕಕ್ಕೇರಿದಾಗ, ಯಾರೋ ಅಂದಿನ ಕೇರಳದ ಮುಖ್ಯಮಂತ್ರಿ ನಯನಾರ್ ಅವರನ್ನು ಈ ಕುರಿತು ಪ್ರಶ್ನಿಸಿದಾಗ 'ಅರೆರೆ ರಾಮ ಹುಟ್ಟಿದ್ದು ಕೇರಳದಲ್ಲಿ ಅಂತ ತಿಳಿದಿದ್ದೆ......' ಎಂದು ಮಾರುತ್ತರ ಕೊಟ್ಟಿದ್ದರು. ಯಾರ್ಯಾರು ರಾಮ ಹುಟ್ಟಿದ್ದು ತಮ್ಮೂರಿನಲ್ಲಿ ಎಂದು ಭಾವಿಸುತ್ತಾರೋ ಅವರು ರಾಮನನ್ನು ನಿಜವಾಗಿಯೂ ಪಡೆದವರು ಎಂದು ಅನಂತಮೂರ್ತಿಗಳು ಈ ಮೇಲಿನ ಹೇಳಿಕೆಯನ್ನು ವ್ಯಾಖ್ಯಾನಿಸುತ್ತಾರೆ.
ಈ ನಮ್ಮ ರಾಮದ್ವಯರ ಕುರಿತಾಗಿ ಇನ್ನೊಂದು ಅದ್ಭುತ ಉಪಮೆ ಇದೆ. ಅದು ಗಾಂಧೀಜಿಯ ಹತ್ಯೆಯ ಸನ್ನಿವೇಶ. ಇಂಥದೇ ಅಫೀಮನ್ನು ನೆತ್ತಿಗೇರಿಸಕೊಂಡಿದ್ದ ಘೋಡ್ಸೆ ಗಾಂಧೀಜಿ ಪ್ರಾರ್ಥನಾ ಸಭೆಗೆ ಬರುತ್ತಿದ್ದಾಗ ಗುಂಡಿಟ್ಟು ಕೊಲ್ಲುತ್ತಾನೆ. ಗಾಂಧಿಯ ಬಾಯಿಂದ ಹೊರಬಿದ್ದ ಒಂದೇ ಮಾತು `ಹೇ ರಾಮ್'. ಅದು ಗಾಂಧಿಯ ರಾಮನ ನೆನಹೇ, ಇಲ್ಲ ಇವರನ್ನು ಕ್ಷಮಿಸು ಎಂಬ ಮೊರೆಯೇ? ಇಲ್ಲಿದ್ದಾರೆ ನೋಡಿ ರಾಮದ್ವಯರು. (ಗೊತ್ತು ಗೊತ್ತು ಗಾಂಧಿ ಹೇ ರಾಮ್ ಅಂದಿಲ್ಲ, ಅಂತೀರಿ ಅದು ಡಿಬೆಟಬಲ್, ಅದಕ್ಕೇ ನಾನದನ್ನು ಒಂದು ಉಪಮೆ ಅಂದದ್ದು.) ನಮ್ಮ ಇಂದಿನ ಅನೇಕ ಸಮಸ್ಯೆಗಳಿಂದ ಹೊರಬರಲು ಯಾವುದೇ ಅಂಜಿಕೆಗಳನ್ನು ತೋರ್ಪಡಿಸದೇ ಗಾಂಧಿಯ, ರಾಮಕೋಟಿ ಬರೆಸಿಕೊಳ್ಳುವ ಆ ರಾಮನನ್ನು ನಾವು reclaim ಮಾಡಿಕೊಳ್ಳಬೇಕಿದೆ. ಶ್ರೀರಾಮಚಂದ್ರ ಈ ಬೀದಿಯ ಕೋಲೆ ಬಸವರ ಸ್ವತ್ತಲ್ಲ, ನಾವು ರಾಮನನ್ನು ಇವರಿಗೆ ಗುತ್ತಿಗೆ ನೀಡಿಲ್ಲ. ನೀಡ ಕೂಡದು ಕೂಡ.
ಯಾಕೋ ರಾಮನವಮಿ ಅಂದಾಗ ಇದೆಲ್ಲಾ ಆಲೋಚನೆಗಳು ನನ್ನ ಮಸ್ತಿಷ್ಕದಲ್ಲಿ.....
ಹಿಡನ್ ಅಜೆಂಡಾ - ಖುಲ್ಲಂಖುಲ್ಲಾ!
ಬಿಜೆಪಿಯದು ಹಿಡನ್ ಅಜೆಂಡಾ ಹಿಡನ್ ಅಜೆಂಡಾ ಅಂತ ಬಾಯಿ ಬಡಕೊಂಡಿದ್ದೇ ಬಂತು, ಬಿಜೆಪಿ ಯಾವುದನ್ನೂ ಹಿಡನ್ ಆಗಿರಸದೇ ಎಲ್ಲವನ್ನೂ ಖುಲ್ಲಂಖುಲ್ಲಾ ಆಗಿ ಮಾಡಿ ಮುಗಿಸಿದೆ. ಮೊನ್ನೆ ಶುಕ್ರವಾರ ಒಂದೇ ದಿನ ತೀವ್ರ ವಿರೋಧದ ನಡುವೆಯೂ ಅತ್ಯಂತ ವಿವಾದಾತ್ಮಕವಾದ ಗೋ ಹತ್ಯಾ ನಿಷೇಧ ಕಾನೂನನ್ನೂ ಮತ್ತು ಸಂಸ್ಕೃತ ವಿವಿ ಬಿಲ್ಲನ್ನೂ ಅಂಜದೆ ವಿಧಾನಸಭೆಯಲ್ಲಿ ಪಾಸು ಮಾಡಿಬಿಟ್ಟಿದೆ.
ಗೋ ಹತ್ಯೆ ಅನ್ನುವಂತಹುದ್ದು ನಮ್ಮ ದೇಶದಲ್ಲಿ ಬಾಬರ್, ಅಕ್ಬರ್, ಔರಂಗಜೇಬ್ ಕಾಲದಿಂದಲೂ ಮೊದಲಾಗಿ ಇವತ್ತಿನವರೆಗೂ ಪ್ರಚಲಿತದಲ್ಲಿರುವ ಅತ್ಯಂತ ಸೂಕ್ಷ್ಮ ವಿವಾದಾತ್ಮಕ ವಿಷಯ. ಗೋ ಹತ್ಯೆ ಅಂದ ಕೂಡಲೇ ಹಿಂದೂ ಮುಸ್ಲಿಮರ ಬಣಗಳು ಕಣ್ಣ ಮುಂದೆ ಸುಳಿದಾಡುತ್ತವೆ. ಗೋವನ್ನು ಹಿಂದೂಗಳು ದೈವವೆಂದು ಪೂಜಿಸುತ್ತಾರೆ. ಮುಸ್ಲಿಮರು ಅದರ ಭಕ್ಷಕರು. ಬಿಜೆಪಿಗೆ ಇದಕ್ಕಿಂತಲೂ ಸುವರ್ಣಾವಕಾಶ ಇನ್ನೊಂದುಂಟೆ? ಆರ್ಎಸ್ಎಸ್ ಮೊದಲಿನಿಂದಲೂ ಸಂಪೂರ್ಣ ಗೋ ಹತ್ಯಾ ನಿಷೇಧಕ್ಕೆ ಆಗ್ರಹಿಸುತ್ತಲೇ ಇದೆ. ಹಿಂದೂ ಸಮಾಜದ ಅನೇಕ ಸ್ವಾಮಿಗಳು ಕೂಡ ಧ್ವನಿಗೂಡಿಸುತ್ತಲೇ ಬಂದಿದ್ದಾರೆ. ಬಿಜೆಪಿ ದೇಶದ ಹಿಂದೂ ಜನಮಾನಸಕ್ಕೆ ಇದೊಂದು ಎಮೋಟಿವ್ ಇಶ್ಯೂ ಆಗುವಂತೆ ಇದನ್ನು ಸದಾ ಜೀವಂತವಾಗಿಟ್ಟಿದೆ. ಸದ್ಯ ಕರ್ನಾಟಕ ಸರ್ಕಾರ ಗೋ ಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತಂದಿದೆ. ಇದರ ಪ್ರಕಾರ, `ಗೋವನ್ನು' ಕೊಲ್ಲುವುದು, ಆ ಉದ್ದೇಶದಿಂದ ಸಾಗಿಸುವುದು, ಗೋ ಮಾಂಸವನ್ನು ಇಟ್ಟುಕೊಳ್ಳುವುದು, ಇದರಲ್ಲಿ ಯಾವುದೇ ಅಪರಾಧಕ್ಕೆ(?) 7 ವರ್ಷಗಳ ತನಕ ಶಿಕ್ಷೆಯಾಗಬಹುದು!
ಇದರಲ್ಲಿ ಹಲವಾರು ಅಪಾಯಗಳಿವೆ. ಮೊದಲನೆಯದು ಗೋ ಹತ್ಯಾ ನಿಷೇಧದಿಂದ ತೊಂದರೆಗೀಡಾಗುವವರು ಬರಿಯ ಮುಸ್ಲಿಮರಲ್ಲ! ಅದು ಶುದ್ಧಾನುಶುದ್ಧ ತಪ್ಪು ಕಲ್ಪನೆ. ಈ ಕಾನೂನು ಗುರಿಯಾಗಿಸಿಕೊಳ್ಳುವುದು ದಲಿತರನ್ನ ಕೂಡ! ನಮ್ಮ ಹಿಂದೂಗಳಲ್ಲೇ ಅನೇಕ ಜಾತಿಗಳವರು ದನ, ಎಮ್ಮೆ, ಮಾಂಸವನ್ನು ತಿನ್ನುವುದುಂಟು. ಗೋ ಹತ್ಯಾ ನಿಷೇಧ ಅವರನ್ನು ಟಾರ್ಗೆಟ್ ಮಾಡುತ್ತದೆ. ಇದರ ಬಗ್ಗೆ ಸ್ವಲ್ಪ ರಿಸರ್ಚ್ ಮಾಡಿದಾಗ ನನಗೆ ತಿಳಿದ ವಿಷಯವೆಂದರೆ ಕೋಳಿ, ಮೇಕೆ, ಕುರಿ ಮತ್ತಿತರ ಮಾಂಸಗಳು ಅತ್ಯಂತ ದುಬಾರಿಯಾಗಿದ್ದು, ದನದ ಮಾಂಸ ಅಗ್ಗ! ನಮ್ಮ ಬಡವರ ಕೈಗೆಟುಕುವುದು ಅದೇ! ಈ ಕಾನೂನಿನಲ್ಲಿ ಮತ್ತೊಂದು ಆಘಾತಕಾರಿಯಾದ ಕ್ಲಾಸ್ ಇದೆ. ಇದು ನಮ್ಮ ಕರಾವಳಿಯನ್ನು ಹೊತ್ತಿ ಉರಿಸುವುದರಲ್ಲಿ ಅನುಮಾನವಿಲ್ಲ. ಹೀಗೆ ಈ ಕಾನೂನನ್ನು ಉಲ್ಲಂಘಿಸಿದವರನ್ನು ಪೋಲೀಸರೇ ಬಂದು ಹಿಡಿಯಬೇಕೆಂದೇನೂ ಇಲ್ಲ! ಯಾವುದೇ ಸ್ವಯಂ ಸೇವಾ ಸಂಘ ಸಂಸ್ಥೆಗಳು ಇದನ್ನು ಕೈಗೆತ್ತಿಕೊಳ್ಳಬಹುದು! ಇನ್ನು ಭಜರಂಗ ದಳ, ಶ್ರೀ ರಾಮ ಶೇನೆಗೆಲ್ಲಾ ಲೈಸೆನ್ಸ್ ಸಿಕ್ಕ ಹಾಗೇ. ಕರಾವಳಿಯ ಪರಿಸ್ಥಿತಿಯನ್ನು ನೆನೆಸಿಕೊಂಡರೆ ದಿಗಿಲಾಗುತ್ತದೆ.
ಈ ಕಾನೂನು impractical ಕೂಡ. ಹರಿ ಹರಿ ಗೋವು ನಾನು, ಕಾಮಧೇನು...ನೀನಾರಿಗಾದೆಯೋ ಎಲೆ ಮಾನವ? ಅನ್ನುವ ಗೋವನ್ನು ಕೊಲ್ಲುವುದೇ? ಶಾಂತಂ ಪಾಪಂ ಎನ್ನುವ ಸರ್ಕಾರ ಪ್ರಾಕ್ಟಿಕಲ್ ಆಗಿ ಕೂಡ ಯೋಚಿಸಬೇಕು. ರೈತ ಆಗಲೇ ಬಸವಳಿದಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಮುದಿ ಗೊಡ್ಡು ದನಗಳು ಮತ್ತು ಗಂಡು ಕರುಗಳನ್ನು ಸಾಕುವ ಸ್ಥೈರ್ಯ ಆತನಿಗಿದಿಯೇ? ನಾವು ಆತನಿಂದ ಅದನ್ನು ನಿರೀಕ್ಷಿಸುವುದು ಸಹ ತಪ್ಪಲ್ಲವೇ? ಅದಕ್ಕೆ ಸರ್ಕಾರ ಪರಿಹಾರ ಸೂಚಿಸಿದೆ, ಗೋಶಾಲೆಗೆ ತಂದು ಬಿಟ್ಟರೆ ಸರ್ಕಾರವೇ ಅವುಗಳನ್ನು ನೋಡಿಕೊಳ್ಳುತ್ತದಂತೆ. ಹಾಗಾದರೆ ಇನ್ನೇನು ಸಮಸ್ಯೆಯಿಲ್ಲ ಅಂತೀರಾ? ಒಂದೇ ಸಮಸ್ಯೆ - ಅದರ ಆಲನೆ-ಪಾಲನೆಗೆ ರೈತ ಸರ್ಕಾರಕ್ಕೆ ದುಡ್ಡು ಕಟ್ಟಬೇಕಂತೆ! ಇದು ನಮ್ಮ ಸರ್ಕಾರದ ಪರಿಹಾರ ಸೂತ್ರ. ಇನ್ನು ಭಾರತದಲ್ಲಿ ಗೋ ಹತ್ಯೆಯೇ ನಡೆದಿಲ್ಲವೇನೋ ಎಂದು ಅನೇಕರು ಸೋಗು ಹಾಕುತ್ತಿದ್ದಾರೆ. ಆದರೆ ಅವರಿಗೆ ತಿಳಿದಿರಲಿ, ಆರ್ಯರು ಗೋ ಭಕ್ಷಕರಾಗಿದ್ದರು, ಈಗಲೂ ಕೆಲವು ಯಜ್ಞ ಯಾಗಾದಿಗಳಲ್ಲಿ ಗೋ ಪ್ರಸಾದವುಂಟು ಅದೂ ಬ್ರಾಹ್ಮಣರಲ್ಲಿ! ಮತ್ತೊಂದು ಮಾತು ಭಾರತ ಇಡಿಯ ವಿಶ್ವಕ್ಕೇ ಎರಡನೇ ಅತಿ ದೊಡ್ಡ ಬೀಫ್ ಪ್ರಡ್ಯೂಸರ್! ಅದೊಂದು ದೊಡ್ಡ ಇಂಡಸ್ಟ್ರಿ.
ಮೊನ್ನೆ ಲಂಕೇಶ್ 75' ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ ಮಾತನಾಡುತ್ತಿದ್ದರು. ಒಬ್ಬ ದಲಿತ ತಾನು ಬ್ರಾಹ್ಮಣನಾಗಬೇಕೆಂದು ಸರ್ಕಾರಕ್ಕೆ ಅರ್ಜಿ ಹಾಕಿಕೊಂಡರೆ, ಅದು ಏನೆಂದು ಉತ್ತರಿಸುತ್ತದೆ ಅಂತ ಒಂದು ಪ್ರಶ್ನೆ ಎಸೆದರು. ಇದ್ದವರೆಲ್ಲಾ ತಲೆ ಕೆರೆದುಕೊಳ್ಳುವಷ್ಟರಲ್ಲಿ ಅವರೇ ಉತ್ತರ ಕೂಡ ಕೊಟ್ಟರು. ಇದು ತನ್ನ ವ್ಯಾಪ್ತಿಗೆ ಬರದ ವಿಷಯ ಅಂತ ಸರ್ಕಾರ ಜಾರಿಕೊಳ್ಳುತ್ತದೆ. ಹಾಗಾದರೆ ದೇವನೂರರದು ಮತ್ತೊಂದು ಪ್ರಶ್ನೆ - ತನ್ನ ವ್ಯಾಪ್ತಿಗೆ ಬರದ ಇಂತಹ ವಿಷಯಗಳ ಕುರಿತು ಸರ್ಕಾರಗಳು ಯಾಕೆ ಕಾನೂನುಗಳನ್ನು ಮಾಡುತ್ತವೆ? ಜಾತಿಯಾಯಿತು ಈಗ ಊಟದ ತಟ್ಟೆಗೂ ಕೈ ಹಾಕಿ ಕೂತಿದೆ ಸರ್ಕಾರ! ಬಹುಶಃ ಗೋ ಹತ್ಯಾ ನಿಷೇಧಕ್ಕೆ ಇದು ತಕ್ಕ ಉತ್ತರವಾದೀತು. the best government is that which governs the least. ಯಡಿಯೂರಪ್ಪನವರೂ ಸೇರಿದಂತೆ ನಮ್ಮ ದೇಶವನ್ನಾಳುತ್ತಿರುವವರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.
ಇನ್ನು ಸಂಸ್ಕೃತ ವೇದ ವಿವಿ ಕಥೆ. ವಿವಿಗಳ ಬಗ್ಗೆ ನಮ್ಮ ರಾಜಕೀಯ ನಾಯಕರು ಮತ್ತು ಸರ್ಕಾರಗಳ ಧೋರಣೆಯಿದೆಯಲ್ಲ, ಅದೂ ಸರ್ವಥಾ ಖಂಡನೀಯವಾದುದು. ನಮ್ಮ ರಾಜಕೀಯ ನೇತಾರರಿಗೆ ದೇವಸ್ಥಾನ ದರ್ಗಾಗಳನ್ನೂ ಅವುಗಳ ಪಾಡಿಗೆ ಅವುಗಳನ್ನು ಬಿಡುವ ಮನಸ್ಸಿಲ್ಲ, ಅವುಗಳನ್ನೂ ತಮ್ಮ ಪ್ಲೇಗ್ರೌಂಡುಗಳಾಗಿ ಮಾಡಿಕೊಂಡಿರುವಾಗ ಇನ್ನು ವಿವಿಗಳಂತಹ ಬೃಹತ್ ಪ್ರತಿಷ್ಠಿತ ಸಂಸ್ಥೆಗಳನ್ನು ಬಿಡುವ ಮಾತೆಲ್ಲಿಯದು? ಇಂದು ನಮ್ಮ ವಿವಿಗಳು ಈ ಹೊಲಸು ರಾಜಕೀಯದ ಅಡ್ಡೆಗಳಾಗಿ ಬಿಟ್ಟಿವೆ. ಇನ್ನು ಸತತ ಸರ್ಕಾರಗಳಿಗೆ ವಿವಿಗಳೆಂದರೆ ಬೆಲೆಯೇ ಇಲ್ಲ. ಒಂದು ವರ್ಷದ ಹಿಂದೆ ಯಡ್ಯೂರಪ್ಪನವರು ಆಪರೇಷನ್ ಕಮಲಿಗರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕಾಗಿ ಬಂದಾಗ ಅಂದಿನ ತೋಟಗಾರಿಕಾ ಸಚಿವರಾಗಿದ್ದ ಗುಲ್ಬರ್ಗಾದ ಎಸ್.ಕೆ.ಬೆಳ್ಳುಬ್ಬಿಯವರ ರಾಜೀನಾಮೆ ಪಡೆದುಕೊಂಡರು. ಆಗ ಅಲ್ಲಿನ ಜನ ಕೊಂಚ ಬೇಸರದಲ್ಲೇ ಉದ್ವಿಗ್ನರಾಗಿದ್ದರು. ಅವರನ್ನು ತಣಿಸಲು ಆ ಊರಿಗೆ ಏನೋ ಒಂದು ಭಕ್ಷೀಸು ಕೊಡುವುದು ಅನಿವಾರ್ಯವಿತ್ತು. ಕೂಡಲೇ ಯಡ್ಯೂರಪ್ಪನವರು ಘೋಷಿಸಿಬಿಟ್ಟರು, ಅವರು ತೋಟಗಾರಿಕಾ ಸಚಿವರಲ್ಲವೇ ಆಗಿದ್ದಿದ್ದು, ಸರಿ ನಿಮ್ಮೂರಿಗೆ ಒಂದು ತೋಟಗಾರಿಕಾ ವಿವಿಯನ್ನು ಮಂಜೂರು ಮಾಡಲಾಗಿದೆ! ಇದು ವಿವಿಗಳಿಗೆ ನಮ್ಮ ಸರ್ಕಾರಗಳು ನೀಡುವ ಬೆಲೆ ಮತ್ತು ಗಾಂಭೀರ್ಯ! ಸಂಸ್ಕೃತ ವಿವಿಯದೂ ಇದೇ ಗೋಳು. ಅಸಲಿಗೆ ಇರುವ ವಿವಿಗಳ ಸಂಸ್ಕೃತ ವಿಭಾಗಗಳಲ್ಲಿ ಹುಡುಗರಿಲ್ಲದೆ ನೊಣ ಹೊಡೆಯುತ್ತಿರಬೇಕಾದರೆ ಸಂಸ್ಕೃತಕ್ಕೆಂದೇ ಹೊಸದೊಂದು ವಿವಿ! ಇದರಲ್ಲೂ ಕೂಡ ಬ್ರಾಹ್ಮಣಶಾಹಿಯನ್ನು ಮೆಚ್ಚಿಸುವ ಚೀಪ್ ರಾಜಕೀಯವೇ ಇಣುಕುತ್ತಿದೆ. ಕನ್ನಡ ನಾಡಿನ ದುರ್ದೈವ..ಎಡಬಿಡಂಗಿ ಸರ್ಕಾರ, ಕಿಮ್ಮತ್ತಿಲ್ಲದ ವಿರೋಧ ಪಕ್ಷಗಳು ಎರಡನ್ನೂ ನೋಡಬೇಕಿದೆ.
ನೈಸ್ ಪುರಾಣ - 3 - ಹಗರಣದ ಬೀಜಾಂಕುರವಾಗಿದ್ದೇ ಗೌಡಪ್ಪನ ಕಾಲದಲ್ಲಿ!
ಹೌದು, ಹೈ ಲೆವೆಲ್ ಕಮಿಟಿಯ ಮೊದಲ ಸಭೆಯಲ್ಲಿಯೇ ಅಶೋಕ್ ಖೇಣಿಯ ವರಾತ ಶುರುವಾಗುತ್ತದೆ. ತಮ್ಮ ಕಂಪೆನಿಗಳ ಒಕ್ಕೂಟ ಇಡಿಯ ಪ್ರಾಜೆಕ್ಟಿನ ಕಮರ್ಷಿಯಲ್ ಮತ್ತು ಫೀಸಿಬಲಿಟಿ ಸರ್ವೇ ಕೈಗೊಂಡಿದ್ದು, ಈಗಿರುವಂತೆ ಮಾಡುವುದಾದರೆ ಕಂಪೆನಿಗಳಿಗೆ ಏನೂ ಗಿಟ್ಟುವುದಿಲ್ಲ, ಇದು ಆರ್ಥಿಕವಾಗಿ ಮಾಡಲೋಗ್ಯವಲ್ಲ ಎಂದು ಶರಾ ಬರೀತಾರೆ. ನಂತರ ಅದಕ್ಕೆ ಪರಿಹಾರವನ್ನೂ ಅವರೇ ಸೂಚಿಸುತ್ತಾರೆ. ಇಡಿಯ ಪ್ರಾಜೆಕ್ಟನ್ನು ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಗೆ ಸೀಮಿತಗೊಳಿಸುವ ಬದಲಿಗೆ ಇದನ್ನು ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲು ಅನುಮತಿ ಕೊಡಬೇಕೆಂದೂ, ವಿನಂತಿಸಿಕೊಳ್ಳುತ್ತಾರೆ. ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿನ ಭೂಮಿಯನ್ನು ಕಮರ್ಷಿಯಲ್ ಆಗಿ ಬಳಸಿಕೊಂಡು, ಒಂದು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸುವುದೆಂದೂ, ಇದರ ಭಾಗವಾಗಿ ಬೆಂಗಳೂರ ಮೇಲಿನ ಒತ್ತಡ ಕಡಿತಗೊಳಿಸಲು ಅರ್ಬನ್ ಟೌನ್ಷಿಪ್ಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಅಗ್ರೋಬೇಸ್ಡ್ ಕೈಗಾರಿಕೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ರೆಸಾರ್ಟ್ಗಳನ್ನು ಕಟ್ಟಬಹುದೆಂದು ಕನಸು ಬಿತ್ತಿದರು, ಖೇಣಿ! ಇದಲ್ಲದೆ ಎಕ್ಸ್ಪ್ರೆಸ್ ವೇ ಮತ್ತು ಎನ್ಎಚ್ 7ರ ನಡುವೆ ಎನ್ಎಚ್ 4ರ ಮೂಲಕ ಒಂದು ಲಿಂಕ್ ರಸ್ತೆ ಮತ್ತು ಬೆಂಗಳೂರಿನ ಒಳ ಭಾಗಗಳಿಗೂ ರಸ್ತೆಯ ವಿಸ್ತಾರದ ಕುರಿತು ಮಾತನಾಡಿದರು. ಈ ಟೌನ್ಷಿಪ್ಗಳಿಗೆ ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆಯನ್ನೂ ಕಂಪೆನಿಯೇ ಮಾಡಿಕೋಳ್ಳುವುದಾಗಿಯೂ ಖೇಣಿ ಹೇಳುತ್ತಾರೆ. ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇ ಎಂಬ ಹೆಸರನ್ನು ಬದಲಿಸಿ ಬೆಂಗಳೂರು - ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ ಎಂದು ಮರುನಾಮಕರಣಗೊಳಿಸಿ, ನಂದಿಯನ್ನು ಪ್ರಾಜೆಕ್ಟಿನ ಲಾಂಛನವಾಗಿ ಬಳಸಬೇಕೆಂದು ಖೇಣಿ ಒತ್ತಾಯಿಸುತ್ತಾರೆ. ಸರ್ಕಾರ ಮತ್ತು ಕಂಪೆನಿ ನಡುವಿನ ಎಂಒಯುನ ವ್ಯಾಪ್ತಿಯನ್ನು ವಿಸ್ತರಿಸಿ ಮತ್ತೊಂದು ಎಂಒಯುವನ್ನು ಮಾಡಿಕೊಳ್ಳಬೇಕೆಂದೂ ಹೇಳುತ್ತಾರೆ.
ಆಶ್ಚರ್ಯ! ಖೇಣಿ ಹತ್ತಿಸಿದ ಅಮಲಿನಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದಂತೆ ಕಂಡು ಬಂದ ಇಡೀ ಸಭೆ ಯಾವುದೇ ಪ್ರಶ್ನೆಗಳಿಲ್ಲದೆ ಖೇಣಿ ಹೇಳಿದ ಎಲ್ಲವನ್ನೂ ಮರುಮಾತಿಲ್ಲದೆ ಒಪ್ಪಿಕೊಂಡು ಅಸ್ತು ಎಂದಿತು. ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಜೆ. ವಾಸುದೇವನ್ ಇಡಿಯ ಪ್ರಪೋಸಲ್ಲಿಗೆ ಒಪ್ಪಿಗೆ ಸೂಚಿಸುತ್ತಾರೆ. ಈ ಹೈ ಲೆವೆಲ್ ಕಮಿಟಿಯ ಸಭೆಯ ಮಿನಟ್ಸ್ ಅನ್ನು ತೆಗೆದು ನೋಡಿದವರಿಗೆ ತುಂಬಾ ಸ್ಪಷ್ಟವಾಗಿ ಅರ್ಥವಾಗುವ ಮೊದಲ ವಿಷಯವೆಂದರೆ, ಈ ಸಭೆಯ ಎಲ್ಲ ನಿರ್ಣಯಗಳೂ ಪೂರ್ವ ನಿರ್ಧಾರಿತ. ಸಭೆ ಒಂದು ಸ್ಟೇಜ್ ಶೋ ಅಷ್ಟೆ, ಎಂಬುದು.
ಇಡೀ ಬಿಎಂಐಸಿಪಿಯನ್ನು ನಾವು ಇಂದು ಹಗರಣವೆನ್ನುವುದೇ ಆದರೆ ಅದರ ಬೀಜಾಂಕುರವಾಗಿದ್ದೇ ಇಲ್ಲಿ. ರೈತ ನಾಯಕನೆಂದು ಕೊಚ್ಚಿಕೊಳ್ಳುವ ದೇವೇಗೌಡರು ಆತನಲ್ಲಿ ರಸ್ತೆ ಕಟ್ಟಲು ಹಣವಿಲ್ಲವೆಂದು 20 ಸಾವಿರ ಎಕರೆ ರೈತರ ಭೂಮಿಯನ್ನು ಆತನಿಗೆ ಕಮರ್ಷಿಯಲ್ ಆಗಿ ಬಳಸಿಕೊಳ್ಳಲು ಅನುಮತಿ ನೀಡುತ್ತಾರೆ! ಗೌಡರು ಖೇಣಿಯನ್ನು ಈಗ ಬರಿಗೈ ಫಕೀರ ಎಂದು ಅಣಕಿಸುವುದುಂಟು, ಆದರೆ ತಿಳಿದಿರಬೇಕು ಖೇಣಿ ಅಂದೂ ಸಹ ಬರಿಗೈ ಫಕೀರರೇ. ಅಂತಹ ಬರಿಗೈ ಫಕೀರರು ಈ ಬೃಹತ್ ಪ್ರಾಜೆಕ್ಟನ್ನು ಮಾಡಲು ಅನುವು ಮಾಡಿಕೊಟ್ಟದ್ದು ತಾವೇ ಸ್ವಾಮಿ! ಖೇಣಿ ಸರ್ಕಾರಕ್ಕೆ ಕೊಟ್ಟ ಪ್ರಪೋಸಲ್ಲು ಬಹಳ ಸರಳ - ಕ್ರಾಸ್ ಸಬ್ಸಿಡಿ! ಏನು ಹಾಗಂದರೆ? ಖೇಣಿ ಸಾಹೇಬರು ಐಡ್ಯಾ ಮಾಡ್ಯಾರ, ಸರಳ ಸ್ವಾಮಿ, ಪ್ರತಿಪಾದಿತ ರಸ್ತೆಯ ಇಕ್ಕೆಲಗಳ ಭೂಮಿಯನ್ನು ಕೊಳ್ಳುವ ಕಂಪೆನಿ ಅದನ್ನು ಕಮರ್ಶಿಯಲಿ (ರಿಯಲ್ ಎಸ್ಟೇಟ್) ಎಕ್ಸ್ಪ್ಲಾಯಿಟ್ ಮಾಡುತ್ತದೆ. ಟೌನ್ಷಿಪ್ಗಳನ್ನು ಕಟ್ಟುತ್ತದೆ, ಪ್ರವಾಸೋದ್ಯಮ ರೆಸಾರ್ಟ್ಗಳನ್ನು ಕಟ್ಟತ್ತದೆ. ಅದರಿಂದ ಬರುವ ಅಪಾರ ಹಣವನ್ನು ವ್ಯಯಿಸಿ ರಸ್ತೆ ನಿರ್ಮಾಣ ಮಾಡುತ್ತದೆ. ಹೀಗೆ ನಿರ್ಮಿಸಿದ ರಸ್ತೆ ಮೇಲೆ ಜನ ಓಡಾಡೋದಿಕ್ಕೆ ಟೋಲ್ ಅನ್ನು ಕೂಡ ಸಂಗ್ರಹಿಸುತ್ತದೆ. ಅದೂ 30 ವರ್ಷಗಳ ಕಾಲ! ಇಂತಹುದೊಂದು ಯೋಜನೆಗೆ ಗೌಡರೇ ಒಪ್ಪಿದ್ದರಲ್ಲ? ಇದನ್ನು ಗೌಡರು ಸಮರ್ಥಿಸಿಕೊಳ್ಳದೇ ಬಿಡುವುದಿಲ್ಲ. ಆಗ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟತ್ತು, ಉದಾರೀಕರಣ ಆಗಷ್ಟೆ ಜಾರಿಗೆ ಬರುತ್ತಿತ್ತು, ಆದ್ದರಿಂದ ಹೂಡಿಕೆಗೆ ಹಣ ಸಂಗ್ರಹಿಸುವುದು ಅಷ್ಟು ಸುಲಭವಿರಲಿಲ್ಲ. ಮೇಲಾಗಿ ಈ ಪ್ರಾಜೆಕ್ಟ್ನ ಫೀಸಬಿಲಿಟಿ ಸರ್ವೇ ನಡೆಸಿದ್ದ ಎಡಿಬಿ ಸಂಸ್ಥೆಯು ಸರ್ಕಾರ ಕ್ಯಾಪಿಟಲ್ನ ಶೇ.20ರಷ್ಟನ್ನು ಸಬ್ಸಿಡಿ ರೂಪದಲ್ಲಿ ಕೊಡದ ಹೊರತು ಈ ಪ್ರಾಜೆಕ್ಟ್ ಆರ್ಥಿಕವಾಗಿ ಯೋಗ್ಯವಲ್ಲ ಎಂದಿದ್ದನ್ನು ನೆನಪಿಸುತ್ತಾರೆ. ಇರಲಿ.
ಆಗಸ್ಟ್ 26, 1995ರಂದು ಕಂಪೆನಿಗಳು ಈ ಮೇಲ್ಕಂಡಂತೆ ನಿರ್ಧಾರಿತವಾಗಿದ್ದ ರೂಪುರೇಷೆಗಳಂತೆ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಇದರಲ್ಲಿ ಕಂಪೆನಿ ಸ್ಪಷ್ಟವಾಗಿ ಬೆಂಗಳೂರು - ಮೈಸುರು ಹೆದ್ದಾರಿಗೆ 5119.37 ಎಕರೆಗಳು ಮತ್ತು ಏಳು ಟೌನ್ಷಿಪ್ಗಳಿಗೆ 20, 092 ಎಕರೆಗಳು ಬೇಕಾಗುತ್ತದೆಂದೂ ಗುರುತಿಸುತ್ತದೆ. ಬೆಂಗಳೂರು - ಮೈಸೂರು ಹೆದ್ದಾರಿಗಾಗಿ ಅಂದಾಜು 1568 ಮಿಲಯನ್ ರೂ.ಗಳು ಖರ್ಚಾಗಬಹುದೆಂದು ತಿಳಿಸಲಾಗಿದೆ. ಈ ವರದಿ ಬೆಂಗಳೂರು ಮೈಸೂರಿನ ನಡುವೆ ಏಳು ಟೌನ್ಷಿಪ್ಗಳ ಸ್ಥಾಪನೆಯನ್ನು ಪ್ರತಿಪಾದಿಸುತ್ತದೆ. ಅದರಂತೆ ಬಿಡದಿ ಬಳಿ ಕಾರ್ಪರೇಟ್ ಸೆಂಟರ್ (1) ಮತ್ತು ಕಮರ್ಷಿಯಲ್ ಸೆಂಟರ್ (2), ರಾಮನಗರದ ಬಳಿ ಹೆರಿಟೇಜ್ ಸೆಂಟರ್ (3), ಫಾರ್ಮಿಂಗ್ ಅಂಡ್ ಮಾರ್ಕೆಟಿಂಗ್ ಸೆಂಟರ್(4) ಮತ್ತು ಇಂಡಸ್ಟರಿಯಲ್ ಸೆಂಟರ್ (5), ಮಂಡ್ಯ ಮತ್ತು ಶ್ರೀರಂಗಪಟ್ಟಣದ ನಡುವೆ ಅಗ್ರೀಕಲ್ಚರಲ್ ಸೆಂಟರ್(6), ಮತ್ತು ಶ್ರೀರಂಗಪಟ್ಟಣದ ಬಳಿ ಇಕೋ-ಟೂರಿಸಂ ಸೆಂಟರ್(7) ಎಂಬ ಏಳು ಟೌನ್ಷಿಪ್ಗಳನ್ನು ಕಂಪೆನಿ ಪ್ರತಿಪಾದಿಸುತ್ತದೆ. ಸೆಪ್ಟೆಂಬರ್ 13, 1995ರಮದು ಮತ್ತೆ ಸಭೆ ಸೇರುವ ಹೈ ಲೆವೆಲ್ ಕಮಿಟಿಯು ಕಂಪೆನಿ ಸಲ್ಲಿಸಿದ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಅಂಗೀಕರಿಸಿ, ಕಂಪೆನಿಯಿಂದ ಹಲವಾರು ಸ್ಪಷ್ಟನೆಗಳನ್ನು ಬಯಸುತ್ತದೆ. ಖೇಣಿಯವರು ಕೊಡುವ ವಿವರಣೆಗಳನ್ನು ದಾಖಲಿಸಿ ಸಭೆ ಮುಕ್ತಾಯವಾಗುತ್ತದೆ.
ಅಕ್ಟೋಬರ್ 12,1995ರಂದು ಈ ಹೈ ಲೆವೆಲ್ ಕಮಿಟಿಯು ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸುತ್ತದೆ. ಖೇಣಿ ಕೊಟ್ಟ ರಿಪೋರ್ಟ್ಗೂ ಹೈ ಲೆವೆಲ್ ಕಮಿಟಿಯ ರಿಪೋರ್ಟ್ಗೂ ಅಂತಹ ಫರಕ್ಕೇನೂ ಇಲ್ಲ. ವ್ಯವಸ್ಥೆ ಖೇಣಿ ಸಾಹೇಬರೊಂದಿಗೆ ಅಷ್ಟು ಅನ್ಯೋನ್ಯವಾಗಿತ್ತು ಅಂತಾತು! ಈ ಹೈ ಲೆವೆಲ್ ಕಮಿಟಿಯ ರಿಪೋರ್ಟ್ರಿನಲ್ಲಿ ದಾಖಲಾಗಿರುವ ಕೆಲವು ಟರ್ಮ್ಸ್ ಅಂಡ್ ಕಂಡೀಷನ್ಸ್ ಮುಂದೆ ಹಗರಣವನ್ನು ಅರ್ಥ ಮಾಡಿಕೊಳ್ಳಲು ಇರುವ ಏಕೈಕ ರೆಫೆರೆನ್ಸ್ ಪಾಯಿಂಟ್. ಇದಕ್ಕೆ ನಂತರ ಬರೋಣ. ಹೈ ಲೆವೆಲ್ ಕಮಿಟಿಯ ಶಿಫಾರಸುಗಳ ಪರಾಮರ್ಶೆಗೆ ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಒಂದು ಸಬೆ ನಡೆಯುತ್ತದೆ. ಎಲ್ಲ ವಿಷಯಗಳ ಕೂಲಂಕುಷ ಚಿಂತನೆಯ ನಂತರ ಸರ್ಕಾರ ಒಂದು ಆದೇಶ ಹೊರಡಿಸುತ್ತದೆ. ಈ ಆದೇಶ ಟೌನ್ಷಿಪ್ಗಳನ್ನು 7ರ ಬದಲು 5ಕ್ಕೆ ಮಿತಿಗೊಳಿಸುತ್ತದೆ ಎಂಬುದನ್ನು ಬಿಟ್ಟರೆ ಬೇರೇನನ್ನೂ ಮಾಡುವುದಿಲ್ಲ. ರಾಮನಗರದ ಬಳಿಯ ಹೆರಿಟೇಜ್ ಸೆಂಟರ್(3) ಮತ್ತು ಮಂಡ್ಯ ಶ್ರೀರಂಗಪಟ್ಟಣದ ನಡುವಿನ ಅಗ್ರೀಕಲ್ಚರ್ ಸೆಂಟರ್ (6)ಗೆ ಸರ್ಕಾರ ಅನುಮತಿ ನಿರಾಕರಿಸುತ್ತದೆ. ಇವೆರಡರ ಹೊರತಾಗಿಯೂ ಕೂಡ ಪ್ರಾಜೆಕ್ಟ್ ಲಾಭದಾಯಕವಾಗಿರಲಿದೆ ಎಂಬುದು ಸರ್ಕಾರದ ವಾದ. ಇದರಂತೆ ರಸ್ತೆಗೆ 5119 ಎಕರೆ ಮತ್ತು ಐದು ಟೌನ್ಷಿಪ್ಗಳಿಗೆ 13, 194 ಎಕರೆ ಭೂಮಿ ಅಗತ್ಯವೆಂದು ಗುರುತಿಸುತ್ತದೆ. ಇದರಂತೆ ಸರ್ಕಾರದ ಲೋಕೋಪಯೋಗಿ ಇಲಾಖೆಯು ಕಂಪೆನಿಗಳ ಕನ್ಸಾರ್ಶಿಯಂನೊಂದಿಗೆ ಸೂಕ್ತ ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳಬೇಕೆಂದು ಸೂಚಿಸುತ್ತದೆ.
ಇಲ್ಲಿ ಮತ್ತೊಂದು ಸಣ್ಣ ಸ್ಕ್ಯಾಮಿದೆ. ಇಂತಹ ಯಾವುದೇ ಪ್ರಾಜೆಕ್ಟಿಗೆ ಆರ್ಥಿಕ ಇಲಾಖೆಯ ಅನುಮೋದನೆ ಬೇಕು. ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅನ್ನು ಪರಿಶೀಲಿಸಿದ ಆರ್ಥಿಕ ಇಲಾಖೆ ಎರಡು ಆಯ್ಕೆಗಳನ್ನು ನೀಡುತ್ತದೆ. ಒಂದು - ಟೌನ್ಷಿಪ್ 1+2+4 = 6227 ಎಕೆರೆಗಳು, ಎರಡು - ಟೌನ್ಷಿಪ್ 1+2+4+5 = 8909 ಎಕೆರೆಗಳು. ಅಲ್ಲಿಗೆ ಗರಿಷ್ಠ 4 ಟೌನ್ಷಿಪ್ಗಳಿಗೆ ಮಾತ್ರ ಆರ್ಥಿಕ ಇಲಾಖೆ ಅಸ್ತು ಅಂದಿತ್ತು. ಆದರೆ ಸರ್ಕಾರದ ಆದೇಶದಲ್ಲಿ 5 ಟೌನ್ಷಿಪ್ಗಳಿಗೆ ಅನುಮತಿ ನೀಡಲಾಗಿದೆ. ಅದು ಟೌನ್ಷಿಪ್ ನಂ.7 ಶ್ರೀರಂಗಪಟ್ಟಣದ ಬಳಿ ಇಕೋ ಟೂರಿಸಂಗಾಗಿ ರೆಸಾರ್ಟ್. ಇದಕ್ಕೆ ಆರ್ಥಿಕ ಇಲಾಖೆ ತನ್ನ ಒಪ್ಪಿಗೆ ಸೂಚಿಸಿಲ್ಲ, ಆದರೆ ಇದಕ್ಕಾಗಿ 4285 ಎಕರೆಗಳನ್ನು ತೆಗೆದಿರಿಸಲಾಗಿದೆ! ಆರ್ಥಿಕ ಇಲಾಖೆಯ ಅನುಮೋದನೆಯೇ ಇಲ್ಲದೆ 4285 ಎಕರೆಗಳು ಖೇಣಿ ಕೈ ಸೇರುತ್ತವೆ, ದೇವೇಗೌಡರ ಹಯಾಮಿನಲ್ಲಿ!
ನಂತರ ಗೌಡರದ್ದೋ ದೇಶದ್ದೋ ಯಾರ ಅದೃಷ್ಟವೋ ತಿಳಿಯದು, ಅತ್ಯಂತ ಸಿನಿಮೀಯ ರೀತಿಯಲ್ಲಿ ಕೇವಲ 16 ಸಂಸದರನ್ನು ಬೆನ್ನಿಗೆ ಕಟ್ಟಕೊಂಡು ದೇವೇಗೌಡರು ದೆಹಲಿಗೆ ಹಾರುತ್ತಾರೆ, ಈ ದೇಶದ ಪ್ರಧಾನಿಯಾಗುತ್ತಾರೆ. ಅಲ್ಲಿಗೆ ಈ ನೈಸ್ ಪುರಾಣದಲ್ಲಿ ದೇವೇಗೌಡರ ಪಾತ್ರದ ಮೊದಲ ಅಂಕ ಮುಕ್ತಾಯವಾಗುತ್ತದೆ. ಇಲ್ಲಿ ನಮ್ಮ ನಾಡಿನಲ್ಲಿ ಬಹು ತರ್ಜನ ಭರ್ಜನದ ಬಳಿಕ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗುತ್ತಾರೆ. ನೈಸ್ ಪುರಾಣದಲ್ಲಿ ಒಂದು ಅಂಕಕ್ಕೆ ತೆರೆ ಬಿದ್ದು, ಮತ್ತೊಂದು ಅಂಕದ ತೆರೆಯೇಳುತ್ತದೆ.
ನೈಸ್ ಪುರಾಣ - 2

ಭಾರತದ ಹಾಕಿ - ತಿಪ್ಪೆಗೆ ಹಾಕಿ!!!!!?

ನೈಸ್ ಪುರಾಣ - 1



