ಆಕಾಶವಾಣಿಯ ಕುರಿತು ಅಕ್ಕನೊಂದಿಗೊಂದು ಸಂವಾದ...





ಇವತ್ತಿನ ಜಿ.ವಿ.ಜಯಶ್ರೀ ಅವರ ಕಿಕ್ಕಿಂಗ್ ಕಾಲಮ್ಮಿನಲ್ಲಿ ಅಕ್ಕ! ಹೌದು ಆಕಾಶವಾಣಿಯ ಬಗ್ಗೆ ಎಂದಿನಂತೆ ತುಂಬಾ ಕಳಕಳಿಯಿಂದ ಆಸ್ಥೆಯಿಂದ ಮಾತಾಡಿದಾಳೆ ಅಕ್ಕ. ಜಿ.ವಿ. ಮೇಡಂನೋರೆ ತುಂಬಾನೆ ಥ್ಯಾಂಕ್ಸು. ಒಳ್ಳೆಯ ಅನ್ವರ್ಥ ಬಿರುದು ಕೊಟ್ಟಿದ್ದೀರಿ - ಬಾನುಲಿಯ ಮಧುರ ಕಂಠದ ಒಡತಿ ಬಿ.ಕೆ. ಸುಮತಿ! ಅಕ್ಕ ಖುಷ್ ಹುವಾ..ಇದು ಆದಿಲೋಕ, ಕನ್ನಡ ಬ್ಲಾಗಲೋಕದಲ್ಲಿ ನನ್ನದೇ ಒಂದು ಲೋಕ. ಇಲ್ಲಿ ನಾನು ಬರೆದಿರುವುದನ್ನು ಮಾತ್ರ ಪ್ರಕಟಿಸುತ್ತೇನೆ ಎಂದು ಶಪಥಗೈದಿದ್ದೆ. ಆದರೆ ನನ್ನ ಖುಷಿಯನ್ನು ಮತ್ತು ಒಂದು ಉತ್ತಮ ವಿಚಾರವನ್ನು ಕೂಡ ನನ್ನ ಬ್ಲಾಗಿನಲ್ಲಿ ಹಂಚಿಕೊಳ್ಳಬಹುದಲ್ಲವೇ? ಅದೂ ಕೂಡ ಆದಿಲೋಕದ ಭಾಗವೇ ಅಲ್ಲವೇ ಅನ್ನಿಸಿತು..ಹಾಗಾಗಿ ಇಲ್ಲಿ ಅಕ್ಕನ ಮಾತು, ಜಿ.ವಿ.ಯವರ ಲೇಖನಿಯಲ್ಲಿ..
ಜೊತೆಗೆ ನಾನು ಬಹು ದಿನಗಳಿಂದ ಚರ್ಚಿಸಬೇಕು ಎಂದುಕೊಂಡಿದ್ದ ಆಕಾಶವಾಣಿಯ ಬಗೆಗೆ ಅಕ್ಕನದು ಅತ್ಯಂತ authentic ಮತ್ತು passionate ಆದ ಧ್ವನಿ. ಅದು ಆಕಾಶವಾಣಿಯ ಧ್ವನಿ. ನನ್ನ ಚರ್ಚೆಯನ್ನು ಆಕಾಶವಾಣಿಯ ಒಡಲಾಳದ ಈ ಧ್ವನಿಯಲ್ಲಿ peg ಮಾಡುತ್ತಿದ್ದೇನೆ ಅಷ್ಟೇ.


ಓವರ್ ಟು ಜಿ.ವಿ.ಜಯಶ್ರೀ ಮೇಡಂ...

ಅಪರೂಪಕ್ಕೆ ಆಕಾಶವಾಣಿಯ ಉದ್ಘೋಷಕಿ ಬಿ.ಕೆ. ಸುಮತಿ ಜೊತೆಯಲ್ಲಿ ಮಾತಾಡುವ ಗಳಿಗೆ ಕೂಡಿ ಬಂತು. ಆಕೆ ಆಕಾಶವಾಣಿಯಲ್ಲಿರುವ ಸ್ವೀಟ್ ವಾಯ್ಸ್ ಆರ್ಜೆಗಳಲ್ಲಿ ಒಬ್ಬರು. ಅಪರೂಪಕ್ಕೊಮ್ಮೆ ಮೆಸೇಜ್ ಮಾಡುವ ಪರಿಪಾಟ ಇಟ್ಟು ಕೊಂಡಿದ್ದಾರೆ :-). ಒಟ್ಟಾರೆ ಬಾನುಲಿಯ ಮಧುರಕ೦ಠದ ಒಡತಿ. ಜಾಸ್ತಿ ಹೊಗಳ್ತಾ ಇದ್ದೀನಿ ಎಂದು ತಿಳಿ ಬೇಡಿ. ನನಗೆ ಮುಂಚಿನಿಂದಲೂ ಸುಮತಿಯ ಬಗ್ಗೆ ಇಷ್ಟ ಆಗುವ ಗುಣವೊಂದಿದೆ. ಅದು ನಿಷ್ಠೆ. ನಿಜ ಯಾಕೆ ಅಂದ್ರೆ ನನಗೆ ಪರಿಚಯ ಆದ ದಿನದಿಂದಲೂ ಆಕೆ ಹೇಳುವ ಮಾತು ಒಂದೇ ಮ್ಯಾಡಂ ನಮ್ಮ ಆಕಾಶವಾಣಿ ಬೆಂಗಳೂರು ಕೇಂದ್ರಕ್ಕೆ ಅದರದೇ ಆದ ಸಾಧನೆ ಇದೆ , ಇತಿಹಾಸವಿದೆ. ಆದರೆ ಅದು ಇತ್ತೀಚೆಗೆ ಬೇರೆ ಎಫೆಮ್ ವಾಹಿನಿಗಳ ಅಬ್ಬರಕ್ಕೆ ಮಸುಕಾಗ್ತಾ ಇದೆ. ಅಂದ್ರೆ ಅದರತ್ತ ಶ್ರೋತೃಗಳ ಗಮನ ಕಡಿಮೆ ಆಗ್ತಾ ಇದೆ. ಇದು ತುಂಬಾ ಬೇಸರದ ಸಂಗತಿ ಇದು ಆಕೆಯ ಮನದ ಮಾತು. 

ಮೊನ್ನೆ  ಇದ್ದಕ್ಕಿದ್ದ ಹಾಗೆ ಸುಮತಿ ಫೋನ್ ಬಂತು. ನಿಜ ಹೇಳ ಬೇಕೂಂತ ಅಂದ್ರೆ ನಾನು ಅದನ್ನು ನಿರೀಕ್ಷಿಸಿರಲಿಲ್ಲ. ಆದರೂ ಆಕೆಯೊಂದಿಗೆ  ನಾನು ನಡೆಸಿದ ಸಂಭಾಷಣೆಯನ್ನು ಇಲ್ಲಿ ಯಥಾವತ್ ಬರೆಯುತ್ತಿದ್ದೇನೆ. ಒಟ್ಟಾರೆ ಆಕೆಯ ಹಾಗೂ  ಆಕಾಶವಾಣಿ ಬಳಗದ ಕಳಕಳಿಯು ಆಕೆಯ ಮೂಲಕ ವ್ಯಕ್ತವಾಗಿದೆ ದಯಮಾಡಿ   ಓದಿ...ಸಂಬಂಧಿತರು ಇದರ ಬಗ್ಗೆ ಗಮನ ಹರಿಸಿದರೆ ರೇಡಿಯೋ ಕೇಂದ್ರಗಳ ಪಿತಾಮಹ ಆಕಾಶವಾಣಿಯ ಆರ್ಜೆಗಳ ಈ ಅಳಲಿಗೊಂದು ಉತ್ತರ ದೊರಕಬಹುದು, ದೊರಕಲಿ ಎನ್ನುವ  ಪ್ರಾಂಜಲ ಆಶಯ ಅವಧಿ,ಮೀಡಿಯ ಮೈಂಡ್ ಹಾಗೂ ನನ್ನದಾಗಿದೆ...




ಸಾಮಾನ್ಯವಾಗಿ ನಾನು ಕಂಡಂತೆ ನಮ್ಮ ಹಿರಿಯರು  ಮಾತ್ರವಲ್ಲ ನಾವು ಸಹ  ಪ್ರೀತಿಯಿಂದ ಕೇಳುತ್ತಿದ್ದ ಕೇಂದ್ರ ಆಕಾಶವಾಣಿ ಬೆಂಗಳೂರು. ಈಗಿನ ಎಫೆಮ್ಗಳು ಯಾವುದನ್ನು ಹೊಸದು ಎಂದು ಜನರಿಗೆ ಹೇಳ್ತಾ ಇದೆಯೋ ಅ ಕೆಲಸವು ಆಕಾಶವಾಣಿಯು ಈಗಾಗಲೇ ಬೇಕಾದಷ್ಟು ಸರ್ತಿ ಮಾಡಿದೆ, ಅದಕ್ಕಿಂತಲೂ ಅದು ಈ ವಾಹಿನಿಯ ಅತಿ ಹಳೆಯ ಕಾನ್ಸೆಪ್ಟ್.
ಆದರೆ ಅತ್ಯಂತ ಖೇದಕರ ಸಂಗತಿ ಅಂದ್ರೆ  ಇದು ಮೀಡಿಯಂ ವೇವ್ ನಲ್ಲಿಯೆ ಈಗಲೂ ಪ್ರಸಾರ ಆಗುವುದು. ಪರಿಣಾಮ ಕೇಳುಗ ಬಂಧುಗಳಿಗೆ ಶೀಘ್ರವಾಗಿ  ತಲುಪುತ್ತಿಲ್ಲ. ಇತ್ತೀಚೆಗೆ ಈ ಕೇಂದ್ರವು ಸುವರ್ಣ ಮಹೋತ್ಸವವನ್ನು ಆಚರಿಸಿತು.  ಕೇವಲ ಸಿನಿ ಗೀತೆಗಳು ಮಾತ್ರವಲ್ಲ ಭಕ್ತಿ ಗೀತೆ, ಭಾವಗೀತೆ, ವಾರ್ತೆಗಳು ( ಕನ್ನಡ, ಹಿಂದಿ, ಇಂಗ್ಲೀಷ್, ಸಂಸ್ಕೃತ...)ಪ್ರಸಾರ ಆಗುತ್ತದೆ.
ಕ್ರಿಯೇಟಿವಿಟಿಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೂವಿನ ಬಗ್ಗೆ ಅರ್ಧಗಂಟೆ ರೂಪಕ ಮಾಡಿ ಕೇಳುಗರ ಕೈಲಿ ಇಟ್ಟಿದ್ದೇವೆ  . ಅಂದ್ರೆ ವಿಷಯ ಇಂತಹುದೇ ಆಗಿರ ಬೇಕು ಎನ್ನುವ ಅಗತ್ಯವಿಲ್ಲ ಕೊಟ್ಟ ವಿಷಯದಲ್ಲಿ  ಸುಂದರ ಮಾಲೆ ಕಟ್ಟುವ ಬುದ್ಧಿಮತ್ತೆ ಈ ಗ್ರೂಪಿಗಿದೆ.
ಹೆಮ್ಮೆಯಿಂದ ಹೇಳುವ ಸಂಗತಿಗಳೆಂದರೆ  ಈ ಕೇಂದ್ರದಲ್ಲಿ ದ.ರಾ . ಬೇಂದ್ರೆ, ಕುವೆಂಪು,ಧ್ವನಿ ಮುದ್ರಣ ಇದೆ. . ಅಷ್ಟೆ ಅಲ್ಲದೆ  ಶಿವರಾಮ ಕಾರಂತರ ಮಾಲಿಕೆ, ಬೇಂದ್ರೆಯವರು ಕಾವ್ಯವಾಚನ ಮಾಡಿರುವ  ಮುದ್ರಿತ ಮಾಲಿಕೆಯು ಸಹ ಈ ಕೇಂದ್ರದಲ್ಲಿದೆ. ಅಡಿಗರ ಭೂಮಿಗೀತ ಬಂದಿದ್ದೆ ಆಕಾಶವಾಣಿಯಿಂದ. ಮುಖ್ಯವಾಗಿ ಆಕಾಶವಾಣಿಯು ಇಂತಹ ಅನೇಕ ಕಾನ್ಸೆಪ್ಟ್ ಗಳನ್ನು ನೀಡಿ ಕವಿಗಳ, ಲೇಖಕ , ನಾಟಕಕಾರರ ಕೈಲಿ  ಬರಿಸುವ ಪರಿಪಾಟ ಇಲ್ಲಿತ್ತು.
ಗೀತಾರಾಧನ,ಚಿಂತನ,ರೇಡಿಯೋ ಡಾಕ್ಟರ್,ಕನ್ನಡ ಭಾರತಿ, ಯುವವಾಣಿ,ಕೃಷಿರಂಗ, ಬಾಲವಿಹಾರ ...! ಹೀಗೆ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದೆ. ವಿಷಾದ ಅಂದ್ರೆ ಈ ಮೀಡಿಯಂ  ವೇವ್  ನಲ್ಲಿಯೇ ಆಕಾಶವಾಣಿಯ ಉದ್ಘೋಷಕರು  ಕಾರ್ಯಕ್ರಮ ನಡೆಸಿ  ಕೊಡುವುದು . ಆದರೆ ಅವರ ಈ ಪ್ರತಿಭೆ ಕೇಳುಗರ ಮನಕ್ಕೆ ತಲುಪುತ್ತಿಲ್ಲ, ಕಾರಣ ಮೀಡಿಯಂ ವೇವ್!
ಒಂದರ್ಥದಲ್ಲಿ ಅಪರೂಪದ ಆರ್ಜೆಗಳ ಪ್ರತಿಭೆಯು  ಈ ರೀತಿ ಕಳೆಗುಂದುತ್ತಿದೆ. ಇದನ್ನು ಸರಿ ಮಾಡುವ ಶಕ್ತಿ ಇರುವುದು ಕೇಂದ್ರ ಸರ್ಕಾರಕ್ಕೆ. ಎಫೆಮ್ ಜೊತೆ ನಮ್ಮ ಕಾರ್ಯಕ್ರಮಗಳನ್ನು ಮಿಳಿತ ಮಾಡಿದರೆ ಆಗ  ನಮ್ಮ ಶ್ರಮಕ್ಕೊಂದು ಬೆಲೆ ಸಿಗುತ್ತದೆ. ಇದರ ಬಗ್ಗೆ ಸಂಬಂಧಿತರ ಬಳಿ ನಾವು ಕೇಳಿಕೊಳ್ಳುತ್ತಲೇ ಬಂದಿದ್ದೇವೆ, ಆದರೆ ಅವರು ಇದರತ್ತ ಅಷ್ಟೇನೂ ಗಮನ ಹರಿಸಿಲ್ಲ.
ಇನ್ನೊಂದು ಅತಿ ಮುಖ್ಯ ಸಂಗತಿ ಅಂದ್ರೆ ಈಗೇನು ಉತ್ತಮ ಆರ್ಜೆಗಳು ಎನ್ನುವ ಹೆಸರು ಪಡೆದಿದ್ದಾರೋ ಅವರು ಒಮ್ಮೆ ಈ ಮೀಡಿಯಂ ವೇವ್ ನ ಬೆಂಗಳೂರು ಆಕಾಶವಾಣಿ ಯತ್ತ  ಕಿವಿ ಇಟ್ಟರೆ ಕಲಿಯುವ ಸಂಗತಿಗಳು ಸಾಕಷ್ಟಿವೆ. ಇದು ಅಹಂಕಾರದ ಮಾತಲ್ಲ, ಅನುಭವದಿಂದ ಹೇಳುತ್ತಿರುವ ಮಾತು ! ಕನ್ನಡ ಕಾಮನ ಬಿಲ್ಲು  ನಲ್ಲಿ ನಮಗೆ ಸಿಗುವ ಅವಕಾಶ ಅತಿ ವಿರಳ, ಆದ್ರೆ ಅತ್ಯಂತ ಹೆಚ್ಚು ಕಾರ್ಯಕ್ರಮ ಕೊಡುವ ಮೀಡಿಯಂ ವೇವ್ ವಿಷಯದಲ್ಲಿ ಸಂಬಂಧಿತರು ಗಮನ ಹರಿಸಿದರೆ ನಿಜಕ್ಕೂ ಈಗ ಅನೇಕ ಸಂಗತಿಗಳನ್ನು ಮಿಸ್ ಮಾಡಿ ಕೊಳ್ಳುತ್ತಿರುವ ಕೇಳುಗರು ಅದನ್ನು ಈ ಮೂಲಕ ಪಡೆಯ ಬಹುದು.... 
ಇದು ಸುಮತಿ ಸೇರಿದಂದೆ ಆಕೆಯ ಸಹೋದ್ಯೋಗಿಗಳ ಮನದ ಮಾತು. ಅವರ ಆಶಯ ನೆರವೇರಲಿ ಇದು ನಮ್ಮ ಮನದ ಮಾತು.... over and out. 
ಏನನ್ನಿಸಿತು? ಇಲ್ಲಿ ಕಾಣುತ್ತಿರುವುದು marketing ನ ಥಳುಕು ಬಳುಕಿನಲ್ಲಿ ಪ್ರಭೆ ಕಳೆದುಕೊಂಡಿರುವ ಆಕಾಶವಾಣಿ. ಅಲ್ಲಿನ ಉತ್ಕೃಷ್ಟ ಪ್ರತಿಭೆಗಳ creative suffocation! 

ಅಕ್ಕ ಮೇಲೆ ಹೇಳಿರುವ ಆಕಾಶವಾಣಿಯ ಹಿರಿಮೆಗಳ ಹಿನ್ನೆಲೆಯಲ್ಲಿಯೇ ನಮ್ಮ ಸರಕಾರೀ ಒಡೆತನದ ವಾಹಿನಿಗಳಿಗೆ ಬೆಲೆ. ಆದರೆ ಅಲ್ಲಿನ ವ್ಯವಸ್ಥೆ ಆಶಾದಾಯಕವಾಗಿವೆಯೇ? ಇಲ್ಲಿ ಎರಡು ವ್ಯವಸ್ಥೆಗಳಿವೆ. ಒಂದು ಎಫ್ಫೆಮ್ ವಾಹಿನಿಗಳು ಮತ್ತೊಂದು ಮೀಡಿಯಂ ವೇವ್! ಅಕ್ಕ ಮಾತಾಡಿರುವ ನಿನ್ನೆಯ ಆಕಾಶವಾಣಿ, ಆ ಪರಂಪರೆಯಿರುವುದು ಇದೇ ಮೀಡಿಯಂ ವೇವ್ ಬ್ಯಾಂಡ್ನಲ್ಲಿ. ಅದೇ ನಿಜವಾದ ಆಕಾಶವಾಣಿ. ನಿಜ ಹೇಳಿ ಎಷ್ಟು ಜನ ಮೀಡಿಯಂ ವೇವ್ ಅನ್ನು ಕೇಳುತ್ತಿದ್ದೀರಿ? ನನ್ನ ಮ್ಯುಸಿಕ್ ಸಿಸ್ಟಂನಲ್ಲಿ ಮೀಡಿಯಂ ವೇವ್ ಹಾಕಿದರೆ ಘಶ್ ಎಂಬ ಶಬ್ದ ಬಿಟ್ಟರೆ ಬೇರೇನೂ ಬರುವುದಿಲ್ಲ! ಇಂದಿನ ಎಷ್ಟೋ ರೇಡಿಯೋ ಸೆಟ್ಗಳಲ್ಲಿ ಎಫ್ಫೆಮ್ ಬ್ಯಾಂಡ್ ಮಾತ್ರ ಇರುತ್ತದೆ! ಜನರ ನಡುವೆಯೂ ಆಕಾಶವಾಣಿಯಲ್ಲೂ ಈ ಮೀಡಿಯಂ ವೇವ್ ನೆಡೆಗಿರುವುದು ಅಕ್ಷರಶಃ ಮಲತಾಯಿ ಧೋರಣೆ! ಯಾವುದೇ ಕಲಾವಿದನಿಗೆ ಪ್ರೇಕ್ಷಕ ಮುಖ್ಯ. ಹಾಗಾಗಿ ಮೀಡಿಯಂ ವೇವ್ ನಲ್ಲಿ ದುಡಿಯುತ್ತಿರುವ ಅಕ್ಕನಂತಹ ಅದ್ಭುತ ಪ್ರತಿಭೆಗಳಿಗೆ ಕಾರಕೂನಿಕೆ ಮಾಡಿದ ಹಾಗನಿಸುತ್ತದೆ. they are suppressed and deppressed! ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಮೀಡಿಯಂ ವೇವ್ ಏಕೆ ಹೀಗಾಗಿ ಹೋಯಿತು?

ಇವತ್ತಿನ ಈ ಅವಸ್ಥೆಗೆ ಮುಖ್ಯ ಕಾರಣ - commercialisation of the radio broadcast! ಇವತ್ತು ರೇಡಿಯೋ ವಾಹಿನಿಗಳು ಒಂದು business enterprise! ಈವತ್ತು ಈ ಎಲ್ಲ ವಾಹಿನಿಗಳು ವಾಣಿಜ್ಯ ಉದ್ದಿಮೆಗಳಾಗಿದ್ದು ಲಾಭ ಗಳಿಕೆಯೊಂದೇ ಅವುಗಳ ಮೂಲ ಉದ್ದೇಶವಾಗಿರುವುದು ಸ್ಪಷ್ಟ.  ನಿಮಗೆ ಅಚ್ಚರಿಯಾಗಬಹುದು ನಮ್ಮ ಸರಕಾರೀ ವಾಹಿನಿಗಳು ಕೂಡ ಇದಕ್ಕೆ ಹೊರತಾಗಿಲ್ಲ! ಅದಕ್ಕೆ ಒಂದು ಹಿನ್ನೆಲೆಯಿದೆ. 

ಮೊದಲಿಗೆ ಈ ಆಕಾಶವಾಣಿ ಮತ್ತು ದೂರದರ್ಶನಗಳು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಡಿ ಬರುತ್ತಿದ್ದವು. ಆಗ ಅಸಲಿಗೆ ಪ್ರಸಾರವೆನ್ನುವುದು ಒಂದು ವಾಣಿಜ್ಯ ಕಾರ್ಯಕ್ರಮ ಎಂತಲೇ ಪರಿಗಣಿಸಲಾಗುತ್ತಿರಲಿಲ್ಲ. ಸರ್ಕಾರ ತನ್ನ ಎಲ್ಲ ವಾಹಿನಿಗಳಿಗೂ ಅವುಗಳ ಕಾರ್ಯಕ್ರಮಗಳ ನಿರ್ಮಾಣಕ್ಕೂ ಗ್ರಾಂಟ್ಸ್ ನೀಡುತ್ತಿದ್ದವು. ಹಾಗಾಗಿ ವಾಹಿನಿಗಳು ಜಾಹೀರಾತುದಾರರು, ಆಡ್ ರೆವಿನ್ಯೂ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಕಾರ್ಯಕ್ರಮಗಳಲ್ಲಿ ಲಾವಣ್ಯವಿತ್ತು, ಪ್ರಯೋಗಗಳು ನಡೆಯುತ್ತಿದ್ದವು. It was considered to be social duty. ಅಲ್ಲೊಂದು ಮೋಟೋ ಇತ್ತು. ಹಳ್ಳಗಳ ಕಟ್ಟಕಡೆಯ ಮನುಷ್ಯನಿಗೂ ತಲುಪುವ, ಆತನನ್ನು ರಂಜಿಸುವ ಆ ಮೂಲಕವೇ ಆತನನ್ನು educate ಮಾಡುವ ಗುರಿಯಿತ್ತು. ಪ್ರಸಾರ ಸಾಗುತ್ತಿದ್ದ ಹಾದಿಯದು. ಆದರೆ ಬರಬರುತ್ತ ೮೦ರ ದಶಕದ ಉತ್ತರಾರ್ಧದಲ್ಲಿ ದೂರದರ್ಶನ ನಿಧಾನವಾಗಿ ನಗರ ಕೇಂದ್ರಿತವಾಗುತ್ತಾ ಹೋಯಿತು. commercialisation ನುಸುಳಲಾರಂಭಿಸಿತು. 

ಇದು ಒಂದು ಕಡೆಗಾದರೆ, ೯೦ರ ದಶಕದ ಪ್ರಾರಂಭದಲ್ಲಿ ಈ ದೂರದರ್ಶನ ಮತ್ತು ಆಕಾಶವಾಣಿಗಳ ಮೂಲ ವ್ಯವಸ್ಥೆಯಲ್ಲಿಯೇ ಆಮೂಲಾಗ್ರ ಬದಲಾವಣೆ ಬಂದಿತು. ನಮ್ಮ ದೂರದರ್ಶನ ಆಕಾಶವಾಣಿಗಳು ಸರ್ಕಾರದ ಒಡೆತನ ಮತ್ತು ಸುಪರ್ದಿಯಲ್ಲಿರುವುದರಿಂದ ಅವುಗಳಿಗೆ ಸ್ವಾತಂತ್ರ್ಯವಿಲ್ಲ. ಅವುಗಳನ್ನು ಸತತ ಸರ್ಕಾರಗಳು ತಮ್ಮ propaganda ಗೆ ಬಳಸಿಕೊಳ್ಳುತ್ತಿವೆ, ಹಾಗಾಗಿ ಈ ಸಂಸ್ಥೆಗಳನ್ನು ಒಂದು ಸ್ವತಂತ್ರ ಸಂಸ್ಥೆಯಡಿ ತಂದು ಸರ್ಕಾರಗಳ ಕಪಿಮುಷ್ಟ್ಹಿಯಿಂದ ಈ ಸಂಸ್ಥೆಗಳನ್ನು ಬಿಡಿಸಬೇಕೆಂಬ ಕೂಗು ತಾರಾಸ್ಥಾಯಿಯನ್ನು ಮುಟ್ಟಿತ್ತು. ಇದು ವಾಸ್ತವದಲ್ಲಿ ಕಾಂಗ್ರೆಸ್ ವಿರುದ್ಧ anti congress camp ಮಾಡಿದ ಆರೋಪವಾಗಿತ್ತು. ಇದೇ anti-congress planck ನ ಮೇಲೆ ೯೦ರ ದಶಕದ ಆರಂಭದಲ್ಲಿ ಅಧಿಕಾರ ಹಿಡಿದ, ವಿ.ಪಿ.ಸಿಂಗರ ಸರ್ಕಾರ ಪ್ರಸಾರಭಾರತಿ ಬಿಲ್ಲನ್ನು ತರುವ ಮೂಲಕ ದೂರದರ್ಶನ ಮತ್ತು ಆಕಾಶವಾಣಿಗಳನ್ನು ಪ್ರಸಾರಭಾರತಿ ಎಂಬ autonomous ಸಂಸ್ಥೆಯಡಿ ತಂದರು. ಇದರ ಉದ್ದೇಶ ಒಳ್ಳೆಯದೇ ಇತ್ತು. ಆದರೆ...

ಇದಾದ ಒಂದೆರಡು ವರ್ಷಗಳಲ್ಲಿಯೇ ಭಾರತದ collective social psyche ನಲ್ಲಿಯೇ ಅತ್ಯಂತ ವೇಗವಾಗಿ ಕಂಡು ಕೇಳರಿಯದ ಬದಲಾವಣೆಯಾಗಿ ಹೋಯಿತು. ಭಾರತ ತನ್ನ ದಿಡ್ಡಿ ಬಾಗಿಲುಗಳನ್ನು ತೆರೆದು ಕೂತಿತು. liberalisation changed both the geographical and psychic landscapes of this nation. ಅದೇ ಸಂಧರ್ಭದಲ್ಲಿ ಸರ್ಕಾರ ಈ ಸಂಸ್ಥೆಗಳನ್ನು ಬಿಟ್ಟು ಕೈತೊಳೆದು ಕೊಂಡುಬಿಟ್ಟಿತು. ಅಷ್ಟರಲ್ಲಿ ಬಂದೆರಗಿದ್ದು ಎಫ್ಎಂ ಕಂಪಾನಾಂಕಗಳು. 

1991ರ ಲಿಬರಲೈಸೇಷನ್ನ ನಂತರ ಖಾಸಗೀ ಟಿವಿ ಛಾನೆಲ್ಗಳು ಹಾವಳಿಯಿಟ್ಟ ಮೇಲಂತೂ ರೇಡಿಯೋವನ್ನು ಕೇಳುವವರೇ ಇಲ್ಲದಂತಾಗಿತ್ತು. ಆದರೆ 2000 ದಿಂದೀಚೆಗೆ ಸರ್ಕಾರ ಖಾಸಗೀ ಎಫ್ಎಂ ಛಾನೆಲ್ಗಳಿಗೆ ಅವಕಾಶ ನೀಡತೊಡಗಿದ ಮೇಲೆ ಮತ್ತೆ ರೇಡಿಯೋದ ಕಲರವ ಶುರುವಾಯಿತು ನೋಡಿ. 2000ನಲ್ಲಿ ಭಾರತದ ಐಟಿ ಉದ್ಯಮ ಉಚ್ಛ್ರಾಯದಲ್ಲಿತ್ತು. ಭಾರತ ಪ್ರಕಾಶಿಸುತ್ತಿತ್ತು. ಈ ಐಟಿ ಉದ್ಯಮ ನಮ್ಮ ನಗರಗಳ ಲ್ಯಾಂಡ್ಸ್ಕೇಪ್ಗಳನ್ನು ಗುರುತೇ ಸಿಗಲಾರದಂತೆ ಬದಲಿಸಿಬಿಟ್ಟಿತು. ಭಾರತ ತನ್ನ ಫೋಕಸ್ ಅನ್ನು ಹಳ್ಳಿಗಳಿಂದ ನಗರಗಳಿಗೆ ಬದಲಿಸಿಕೊಂಡಿತ್ತು. ಇದೆಲ್ಲವೂ ಕೂಡಿ ಒಂದು ನವ ವರ್ಗವನ್ನೇ ಹುಟ್ಟುಹಾಕಿತು. ಇದೇ ಕಾಲಘಟ್ಟದಲ್ಲಿ ಭಾರತದಲ್ಲಿ ಒಂದು ಮ್ಯೂಸಿಕ್ ರೆವಲ್ಯೂಷನ್ ಕೂಡ ನಡೆದಿತ್ತು. ಎಲ್ಲವೂ ಕೂಡಿ ಬಂದಿತ್ತು. ಎಫ್ಎಂ ಪ್ರಕಂಪನಗಳನ್ನು ಸೃಷ್ಟಿಸತೊಡಗಿತು. ಹೀಗೆ ನಗರ ಕೇಂದ್ರಿತ ಕೇಳುಗರಿಗೆಂದೇ ಪ್ರಾರಂಭಗೊಂಡದ್ದು ಎಫ್ಎಂ ವಾಹಿನಿಗಳು. ನಗರಗಳ ಗಿಜಿಗುಡುವಿಕೆ, ಟ್ರಾಫಿಕ್ ಜಾಮ್ಗಳು ಕೂಡ ಈ ವಾಹಿನಿಗಳ ಯಶಸ್ಸಿಗೆ ಸಾಕಷ್ಟು ಕಾಣ್ಕೆ ಸಲ್ಲಿಸಿವೆ. ಇಂದು ಬೆಂಗಳೂರೊಂದರಲ್ಲೇ 10 ಎಫ್ಎಂ ವಾಹಿನಿಗಳಿವೆ. ಆಪ್ ಸುನ್ ರಹೀ ಹೈ ವಿವಿಧಭಾರತಿ.., ಆಕಾಶವಾಣಿ ವಾಣಿಜ್ಯ ಪ್ರಸಾರ ಕೇಂದ್ರ...ಈ ಇಂಪಾದ ಧ್ವನಿಗಳ ಕಾಲ ಮುಗಿದಿದೆ. ಈ ಧ್ವನಿಗಳನ್ನು ಖಾಸಗಿ ವಾಹಿನಿಗಳ ಆರ್ಜೆಗಳ ವಟಗುಟ್ಟುವಿಕೆ replace ಮಾಡಿಬಿಟ್ಟಿತು. 

ಮೊನ್ನೆ ಒಂದು ತಿಂಗಳ ಹಿಂದೆ ಇಡಿಯ ಆಕಾಶವಾಣಿ ನೌಕರರ ವರ್ಗ ಸತತ ಎರಡು ದಿನಗಳ ಕಾಲ ಧರಣಿ ಕೂತಿದ್ದರು. ಆಕಾಶವಾಣಿ ಮೂಕವಾಗಿತ್ತು! ಇದು ಐತಿಹಾಸಿಕವೇ ಸರಿ. ಆಕಾಶವಾಣಿಯನ್ನು ವಾರ್ತಾ ಮತ್ತು ಪ್ರಸಾರ ಇಲಾಖೆಗೆ ವರ್ಗಾಯಿಸಿ ಎಂಬುದು ಬೇಡಿಕೆ. ಆದರೆ ಸರ್ಕಾರ ಇತ್ತ ತಿರುಗಿ ಕೂಡ ನೋಡಲಿಲ್ಲ. ಸರ್ಕಾರಕ್ಕೆ ಇವತ್ತು ಆಕಾಶವಾಣಿ ಒಂದು ಹೊರೆ! ಅವರಿಗೆ ನೀವು ಬೇಡವಾಗಿದ್ದೀರಿ. ಇನ್ನು ಜನ. ಇದು ಸಾರ್ವಜನಿಕರ ಗಮನಕ್ಕೆ ಕೂಡ ಬಾರದೆ ಹೋಯಿತೇ? ಎರಡು ದಿನ ಆಕಾಶವಾಣಿ ಮೂಕವಾಗಿದ್ದನ್ನು ಗುರುತಿಸಿದವರೆಷ್ಟು ಜನ? ಅಲ್ಲಿಗೆ ಜನರಲ್ಲಿ ಆಕಾಶವಾಣಿಗಿರುವ ಪ್ರಸ್ತುತ ಸ್ಥಾನಮಾನವೇನು? 

ಅಕ್ಕ ಎಫ್.ಎಂ. ಕಾರ್ಯಕ್ರಮಗಳೊಂದಿಗೆ ನಮ್ಮ ಕಾರ್ಯಕ್ರಮಗಳನ್ನು ಮಿಳಿತಗೊಳಿಸಿದರೆ ನಮ್ಮ ಶ್ರಮಕ್ಕೆ ಒಂದು ಬೆಲೆ ಸಿಗುತ್ತದೆ ಎಂಬ ನಿನ್ನ ಮಾತಿನಲ್ಲಿ ನನಗೆ ಕಾಣಿಸುವುದು ಪ್ರೇಕ್ಷಕರಿಲ್ಲದ ರಂಗದ ಮೇಲಿನ ನಟನೊಬ್ಬನ ಹತಾಶೆ, ಮತ್ತು ಅಲ್ಲೆಲ್ಲೋ ಪ್ರೇಕ್ಷಕರನ್ನು ಪಡೆಯಬಹುದೆಂಬ ಉತ್ಸಾಹ. ಆದರೆ ಇವತ್ತು ಎಫ್.ಎಂ. ಕನ್ನಡ ಕಾಮನಬಿಲ್ಲಿನಲ್ಲಾದರೂ ಉತ್ತಮ ವಾತಾವರಣವಿದೆಯೇ? 

ಈಗ್ಗೆ ಕೆಲವು ವರ್ಷಗಳಿಂದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ತನ್ನ ಎಫ್ಎಂ ವಾಹಿನಿಗಳ ಕಾರ್ಯಕ್ರಮ ನಿರ್ಮಾಣಕ್ಕೆ ಪೂರ್ಣ ಪ್ರಮಾಣದ ಗ್ರಾಂಟ್ಸ್ ಅನ್ನು ಕೊಡುತ್ತಿಲ್ಲ. ಬದಲಿಗೆ ಅರ್ಧದಷ್ಟನ್ನು ಮಾತ್ರ ನೀಡುತ್ತಿದೆ. ಮಿಕ್ಕರ್ಧವನ್ನು ಈ ವಾಹಿನಿಗಳು, ಕಾರ್ಯಕ್ರಮಗಳ ನಿರ್ಮಾಪಕರು ಜಾಹೀರಾತುದಾರರನ್ನು ಹಿಡಿದು ಸಂಪಾದಿಸಿಕೊಡಬೇಕಿದೆ. ಸರಕಾರೀ ವಾಹಿನಿಗಳನ್ನು ಯಾರೂ ಕೇಳುವುದಿಲ್ಲ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಆಳವಾಗಿ ಬೇರೂರಿರುವುದರಿಂದ ಯಾವುಧೇ ಖಾಸಗೀ ಕಂಪೆನಿಗಳು ಈ ವಾಹಿನಿಗಳಿಗೆ ಜಾಹೀರಾತು ನೀಡುವುದಿಲ್ಲ. ಈಗ ಈ ವಾಹಿನಿಗಳಲ್ಲಿರುವ ಪ್ರತಿಭಾವಂತರಿಗೆ ಇರುವ ಆಯ್ಕೆಗಳು ಎರಡು. ಒಂದು ಖಾಸಗೀ ವಾಹಿನಿಗಳೊಂದಿಗೆ ಸ್ಪರ್ಧಿಸಿ ಗೆಲ್ಲಬೇಕು. ಅದಕ್ಕಾಗಿ ಅವರ ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕು. ಇದನ್ನು ಮಾಡಲಿಚ್ಛಿಸದವರು ಸುಮ್ಮನಿರಬೇಕು. ಹಾಗಾಗಿ ಬರಬರುತ್ತಾ ಸರಕಾರೀ ಒಡೆತನದ ಎಫ್ಎಂ ವಾಹಿನಿಗಳಲ್ಲೂ ಕೂಡ ಪ್ರಯೋಗಗಳು, ಫೀಚರ್ ಕಾರ್ಯಕ್ರಮಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಅಲ್ಲೂ ಮಾತು-ಹಾಡು ಮನೆ ಕಟ್ಟತೊಡಗಿದೆ.

ಇದೆಲ್ಲದರ ನಡುವೆ ಎಲ್ಲಿಯ ಮೀಡಿಯಂ ವೇವ್ ಅಕ್ಕ? ಜಾಗತೀಕರಣದ ಸುಳಿಯಲ್ಲಿ ಕೇಳುಗರಿಗೆ ಹೆಚ್ಚಿನ  choice ಗಳನ್ನು ನೀಡುತ್ತೇವೆ ಎಂದು ಅವರಿಗೆ mediocrity ಯನ್ನು ಉಣಬಡಿಸಿ, ಅವರನ್ನು choiceless ಆಗಿ ಮಾಡಿರುವ ದುರಂತವಿದು. ಇದು ಆಕಾಶವಾಣಿಯೊಂದೇ ಅಲ್ಲ...ಎಲ್ಲ ರಂಗಗಳಲ್ಲೂ ಇದನ್ನು ನಾವು face ಮಾಡುತ್ತಿದ್ದೇವೆ. ಇದು ಈ ಕಾಲಘಟ್ಟದ ತಲೆಮಾರಿನ ಬಹುದೊಡ್ಡ ತಲ್ಲಣ. 

ಮೂರ್ತಿಗಳಿಗೆ 80!

ಮೂರ್ತಿಗಳಿಗೆ 80! ಹೌದು ಡಾ. ಯು. ಆರ್. ಅನಂತಮೂರ್ತಿಯವರಿಗೆ ಇವತ್ತಿಗೆ 80 ವಸಂತಗಳು. ಇನ್ನೂ ಸಾಕಷ್ಟು ದಿನ ಅವರು ನಮ್ಮೊಡನಿದ್ದು ನಮ್ಮನ್ನು ಮುನ್ನಡೆಸಲಿ ಎಂಬ ಹಾರೈಕೆ ನನ್ನದು.

ಒಬ್ಬ ಬರಹಗಾರ, ಚಿಂತಕನಿಂದ ನಾವು ನಿರೀಕ್ಷಿಸುವುದೇನು? ಒಳ್ಳೆಯ ಸಾಹಿತ್ಯ, ವಿದ್ಯುತ್ ಪೂರ್ಣ ಲೇಖನಗಳು,..ಇದನ್ನು ಬಹಳಷ್ಟು ಜನ ಮಾಡುತ್ತಲೂ ಇದ್ದಾರೆ. ಆದರೆ ಇವೆಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ಸಮಾಜದ ಸ್ಥಿತ್ಯಂತರಗಳು, ನಮ್ಮಲ್ಲಿ ಮೂಡುವ ತಲ್ಲಣಗಳಿಗೆ ಒಬ್ಬ ಚಿಂತಕ-ಬರಹಗಾರ ಧ್ವನಿಯಾಗಬೇಕು. ಆತ ರೆಡಿಮೇಡ್ ಉತ್ತರಗಳನ್ನು ಕೊಡದಿದ್ದರೂ ಪರವಾಗಿಲ್ಲ, ಕೊಡಕೂಡದು ಕೂಡ. ಆದರೆ ಆತ ನಮ್ಮ ತಲ್ಲಣಗಳಿಗೆ ಧ್ವಿನಿಯಾಗಬೇಕು, ಆ ವಿಷಯದಲ್ಲಿ ಹೊಸ ಹೊಳಹುಗಳನ್ನು ಕೊಡಬಲ್ಲವನಾಗಿರಬೇಕು. ನಮ್ಮ ಉತ್ತರಗಳನ್ನು ನಾವು ಕಂಡುಕೊಳ್ಳುವ ಅನ್ವೇಷಣೆಯ ಹಾದಿಯಲ್ಲಿ ಮಿಂಚಿನ ಹುಳುವಿನಂತಿರಬೇಕು! ಒಬ್ಬ ಬರಹಗಾರ ಸಮಾಜದೊಂದಿಗೆ ಒಂದು ನಿರಂತರ ಸಂವಾದದಲ್ಲಿ ತೊಡಗಿರಬೇಕು.

ಈ ಹಿನ್ನೆಲೆಯಲ್ಲಿ ನೋಡಿದಾಗ ಅನಂತಮೂರ್ತಿಗಳು ನಮ್ಮನಡುವಿರುವ ಅತ್ಯಂತ ಮುಖ್ಯ ಚಿಂತಕರೆನಿಸುತ್ತಾರೆ. ಒಂದು ಕಡೆ ಮಾರುಕಟ್ಟೆ, ಮತ್ತೊಂದು ಕಡೆ ಮಾರುಕಟ್ಟೆ ಪ್ರೇರಿತ ಆಡಳಿತವೇ ಇಲ್ಲದ ಆಳ್ವಿಕೆಗಳು, ಹೆಣಗಾಡುತ್ತಿರುವ ಬಡವರು, ಕೋಮುವಾದ, ಭಯೋತ್ಪಾದನೆ, ಹಿಂಸೆ, ಸ್ಟೇಟ್ ಟೆರರಿಸಂ, ಕನ್ನಡದ ಸಂಸ್ಕೃತಿಯ ಮೇಲೆ ಇಂಗ್ಲೀಷಿನ ದಬ್ಬಾಳಿಕೆ, ಯಶಸ್ಸಿನ ಅಪವ್ಯಾಖ್ಯಾನಗಳು, ಅದರಿಂದ ಸಮಾಜದಲ್ಲಿನ ಏರುಪೇರುಗಳು, ಎಸ್.ಇ.ಜೆಡ್.ಗಳು, ಭೂತಾಯಿಯ ಮೇಲೆ ಅವಿರತ ಅತ್ಯಾಚಾರ..ಈ ಎಲ್ಲವೂ ನಮ್ಮಲ್ಲಿನ ಇಂದಿನ ತಲ್ಲಣಗಳು. ನಮ್ಮಲ್ಲಿನ ತಲ್ಲಣಗಳನ್ನು ಮಗುವಿನ ಮನಸ್ಸನ್ನರಿತ ಅಮ್ಮನಂತೆ ಮೂರ್ತಿಗಳು ತಮ್ಮ ವಿಶಿಷ್ಟ ಹೊಳಹುಗಳೊಂದಿಗೆ ಧ್ವನಿಯಾಗುತ್ತಾರೆ. ಸಮಾಜದೊಂದಿಗೆ ಅವರ ಸಂವಾದ-ಜಗಳ ನಿರಂತರ. ಆ ಸಂವಾದದಲ್ಲೂ ಒಂದು ವಿಶಿಷ್ಟತೆಯಿದೆ. ಇಂದಿನ ದಿನಮಾನಸದಲ್ಲಿ ನಮ್ಮ public discourse ತೀರಾ polarised ಆಗಿಬಿಟ್ಟಿದೆ. ಪ್ರತಿಯೊಬ್ಬರೂ ತುದಿಗಳಿಗೆ ಹೋಗಿ ತಮ್ಮ ನಿಲುವನ್ನು ಸಮರ್ಥಿಸಲು ಅಸಲನ್ನು ಉತ್ಪ್ರೇಕ್ಷಿಸಿ extreme ಆದ ಹೇಳಿಕೆಗಳನ್ನು ನೀಡುತ್ತಾರೆ. ನಮ್ಮ ಮಾಧ್ಯಮ, ಮುಖ್ಯವಾಗಿ ವಿದ್ಯುನ್ಮಾನ ಮಾಧ್ಯಮಕ್ಕೆ ಬೇಕಿರುವುದು ಇದೇ - ಡ್ರಾಮಾ - ಹಾಗಾಗಿ ಇದನ್ನು ಮತ್ತಷ್ಟು ಉತ್ಪ್ರೇಕ್ಷಿಸುತ್ತವೆ. ಚರ್ಚೆ ಹೋಗಿ polemics ಆಗಿಬಿಡುತ್ತಿದೆ. ಇದಕ್ಕೆ ಅರುಂಧತಿ ರಾಯ್ ಉತ್ತಮ ಉದಾಹರಣೆಯಾಗಬಲ್ಲಳು. ಇವತ್ತು ನಮಗೆ ಬೇಕಿರುವುದು a sane voice, espousing the golden mean. ಮೂರ್ತಿಗಳು ಆ ಗೋಲ್ಡನ್ ಮೀನ್! ಅವರಲ್ಲಿ thesis ಮತ್ತು anti-thesis ನ ಒಂದು synthesis ಇದೆ. ಅದು ಅಮಾರ್ತ್ಯ ಸೇನ್ ಅವರ argumentative indian ಪರಂಪರೆಯದು. ಅವರಲ್ಲಿ ಗಾಂಧೀ, ಲೋಹಿಯಾ ಮಿಳಿತಗೊಂಡಿದ್ದಾರೆ.  ಗಾಂಧಿಯನ್ನು ಇಂದಿಗೆ relevant ಆಗುವಂತೆ interpret ಮಾಡುವರಲ್ಲಿ ಪ್ರಮುಖರು. ಇಂದಿಗೆ ಬೇಕಿರುವುದು ಗಾಂಧೀ ನೆಹರೂ ಅಲ್ಲ.

ಮೂರ್ತಿಗಳು ಕೊಂಚ enigmatic ಕೂಡ. ಕೆಲವರು ಅವರನ್ನು ದ್ವಂದ್ವ ಮೂರ್ತಿ ಅಂತಾರೆ. ಆದರೆ ಅದು ದ್ವಂದ್ವವಲ್ಲ, ನಮ್ಮಲ್ಲಿನ paradox ಗಳು ಅಷ್ಟೆ. ಇನ್ನು ಅವರ ಕೆಲವು ಇಷ್ಟದ ವಿಷಯಗಳಿವೆ. ಅವುಗಳ ಬಗ್ಗೆ ತುಂಬಾನೇ passionate ಆಗಿ ಮಾತಾಡ್ತಾರೆ ಅವರು. ಅವುಗಳನ್ನೂ ಸಿಕ್ಕ ಪ್ರತಿ ವೇದಿಕೆಯಿಂದಲೂ ಹೇಳ್ತಾರೆ. ಅದು repitative ಅಂತ ಕೆಲವೊಮ್ಮೆ ಅನ್ನಿಸಿದರೂ, ಆ ವಿಚಾರಗಳ ತೂಕದ ದೃಷ್ಟಿಯಿಂದ ನೋಡಿದರೆ, ಅವುಗಳ ಬಗ್ಗೆ ಎಷ್ಟು ಮಾತಾಡಿದರೂ ಸಾಲದು ಎಂಬುದು ನಮಗೆ ಅರಿವಾಗುತ್ತದೆ. ಜಾಗತೀಕರಣದ ಹೆಸರಲ್ಲಿ ನಡೆಯುತ್ತಿರುವ ದಬ್ಬಾಳಿಕೆಗಳು, ಅನಾಚಾರಗಳು, ನಮ್ಮತನಗಳ, ಸಂಸ್ಕೃತಿಯ, ಜೀವನದ ಅಪವ್ಯಾಖ್ಯಾನಗಳು, ಅದರಿಂದ ಸಮಾಜದಲ್ಲಿ ಸೃಷ್ಟಿಯಾಗುತ್ತಿರುವ ಕಂದಕಗಳು, ಇದನ್ನು ಎದುರಿಸಲು ಒಂದರಿಂದ ಹತ್ತನೇ ತರಗತಿಯವರೆಗೆ ಸಮಾನ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು, ಅದು ಕನ್ನಡ ಮಾಧ್ಯಮದಲ್ಲಿರಬೇಕು ಅಂತಾರೆ.

ಇನ್ನು ಅವರ ರಾಜಕೀಯ. ಸಮಾಜದೊಂದಿಗೆ ಸಂವಾದದಲ್ಲಿ ನಿರತನಾದವ ರಾಜಕೀಯವನ್ನು ಹೊಲಸೆಂದು ದೂರವಿಡಲಾರ. ನಾಡಿನ ರಾಜಕಾರಣದೊಂದಿಗೂ ಅವರ ಸಂವಾದ ನಿರಂತರ. ಅವರ ರಾಜಕಾರಣದ unwavering ಬಿಂದು ಕೋಮುವಾದಕ್ಕೆ ಬಿಡುವಿಲ್ಲದ ರಾಜಿಯಿಲ್ಲದ ವಿರೋಧ. ಅದಕ್ಕೆ ಅಲ್ಲೆಲ್ಲೋ ಹೋಗಿ ಕಾಂಗ್ರೆಸ್ ಜೆಡಿಎಸ್ ಒಂದಾಗಬೇಕು ಅಂತಾರೆ, ಯಾರ್ರೀ ಅನಂತಮೂರ್ತಿ ಅಂತ ಕೇಳಿದ ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡು ಅವರನ್ನು ಬೆಂಬಲಿಸುತ್ತಾರೆ. ಇದನ್ನು ಅನೇಕರು ಅವರ ರಾಜಕೀಯ ಮಹತ್ವಾಕಾಂಕ್ಷೆ ಅಂತ ಟೀಕಿಸುವುದುಂಟು. ಅವರು ರಾಜ್ಯ ಸಭಾ ಚುನಾವಣೆಯಲ್ಲಿ ನಿಂತದ್ದನ್ನು ಎತ್ತಿ ತೋರಿಸುತ್ತಾರೆ. ಈ ವಿಷಯದಲ್ಲಿ ಮಾತ್ರ ನಾನು ಅವರ ಪರವೇ. ಅಲ್ರೀ ಹೆಂಡದ ದೊರೆ ವಿಜಯ ಮಲ್ಯ, ಗಣಿ ಧಣಿ ಅನಿಲ್ ಲಾಡ್ ರಾಜ್ಯಸಭೆಯಲ್ಲಿ ಕೂರ್ತಾರೆ, ನೀವ್ಯಾರೂ ಮಾತಾಡೋದಿಲ್ಲ. ಅಸಲಿಗೆ ರಾಜ್ಯಸಭೆ a house of elders and thinkers. ಅಲ್ಲಿ ಕೂರಬೇಕಾದ್ದೆ ಮೂರ್ತಿಗಳಂತಹ ಚಿಂತಕರಲ್ಲವೇ? ಇನ್ನು ಮೂರ್ತಿಗಳನ್ನೂ ಸಂಪೂರ್ಣ ಒಪ್ಪಲಾಗುವುದಿಲ್ಲ. ತುಂಬಾನೆ ಎಡವಟ್ಟುಗಳನ್ನು ಮಾಡ್ತಾರೆ ಸ್ವಾಮಿ. ಇದೆಲ್ಲದರ ಹೊರತಾಗಿಯೂ ಮೂರ್ತಿಗಳು ಮೂರ್ತಿಗಳೇ!


ಮೊನ್ನೆ ಮಲ್ಲೇಶ್ವರಂನಲ್ಲಿ ಮಂತ್ರಿ ಮಾಲ್ ಬಂದ ಮೇಲೆ ಸಂಪಿಗೆ ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆಯಾಗ್ತಿದೆ ಅಂತ placard ಹಿಡಿದು ಧರಣಿ ಕೂತಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಗಣಿಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಅರ್ಜಿ ಹಾಕ್ತಾರೆ. ಅನಂತಮೂರ್ತಿಗಳೆಂದರೆ ಅದು. ಈ ವಯಸ್ಸಿನಲ್ಲಿಯೂ ಮೂರ್ತಿಗಳು ವ್ಯವಸ್ಥೆಯ ಬಗೆಗೆ ನಂಬಿಕೆ ಕಳೆದುಕೊಂಡಿಲ್ಲ, ಸಿನಿಕತನ ಇಲ್ಲ. ಅವರ ಸಂವಾದ ನಿರಂತರ. ಇದನ್ನೇ ಅವರ ಇತ್ತೀಚಿನ ಸದ್ಯ ಮತ್ತು ಶಾಶ್ವತ ಪುಸ್ತಕದ ಸಂಕಲನವನ್ನು ಮಾಡಿದ ಇಸ್ಮಾಯಿಲ್ ಅವರು ಅನಂತಮೂರ್ತಿಗಳದು ನೈತಿಕ ಚರಕ ಅಂತ ಕರೆದಿದಾರೆ. ಹೌದು ಅವರದು ನೈತಿಕ  ಚರಕವೇ ಸರಿ. ಅವರು ಇನ್ನೂ ಸಕಷ್ಟು ಕಾಲ ಈ ಚರಕದಿಂದ ನೂಲನ್ನು ತೆಗೆಯುತ್ತಲೇ ಇರಲಿ ಎಂಬುದು ನನ್ನ ಹಾರೈಕೆ. ನಮ್ಮ ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ  ಮೂರ್ತಿಗಳಂತಹ ಧ್ವನಿಗಳು ಅತ್ಯಗತ್ಯ. 


ಇನ್ನು ಅವರ ಜೀವನ್ಮುಖತೆ contagious. ಇವತ್ತಿಗೂ ಕಿರಿಯ ಲೇಖಕರ ಬರವಣಿಗೆಯನ್ನು ಆಸ್ಥೆಯಿಂದ ಓದಿ, ಮೆಚ್ಚುವ ತಿದ್ದುವ ಸಹೃದಯತೆಯನ್ನು ಇರಿಸಿಕೊಂಡವರು. ಟೀಕೆ ಟಿಪ್ಪಣಿಗಳಿಗೆ ಸದಾ ತೆರೆದಿರುವವರು. ಈಗಷ್ಟೇ ಕಣ್ಣು ಬಿಡುತ್ತಿರುವ ನಮ್ಮ ತಲೆಮಾರಿನವರಿಗೂ ಅವರೊಂದಿಗೆ ಒಂದು ಸಂವಾದ ಸಾಧ್ಯ. ಇದೆ ಅವರನ್ನು ಇನ್ನು ಹಸುರಾಗಿರಿಸಿದೆ. ವಯಸ್ಸಾಗುವುದರೊಂದಿಗೆ ಕೆಲವು ಅರೋಗ್ಯ ಸಂಬಂಧಿ ಸಮಸ್ಯೆಗಳಿಂದ ನರಳುತ್ತಿದ್ದರೂ ಅವರ ಕಿರುನಗೆ ಇಂದಿಗೂ ಮಾಸಿಲ್ಲ. ಅವರ ಮನಸ್ಸಿಗೆ ವಯಸ್ಸಾಗಿಲ್ಲ. ಮೊನ್ನೆ ಫೋನು ಮಾಡಿದಾಗ ಅವರ ಶಿಷ್ಯನೊಬ್ಬನ ಮದುವೆಯ ಸಂಭ್ರಮ್ದಲ್ಲಿದ್ದರು.

ಅವರ ಹುಟ್ಟುಹಬ್ಬ ಇವತ್ತು. ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು, ಇಸ್ತ್ರಿ ಮಾಡಿದ ಅಂಗಿ ತೊಟ್ಟು ಅದನ್ನು ನಾನೂ ಮಾಡದಂತೆ in-shirt ಮಾಡಿಕೊಂಡು, ಎಂದಿನ ತುಂಟ ಕಿರುನಗೆಯೊಂದಿಗೆ ಇಂದು ಸಂಜೆ ಮಂಗಳೂರಿನ ಕಾರ್ಯಕ್ರಮದಲ್ಲಿ ಹಾಜರ್ ಸಾಹೇಬ್ರು! ಹ್ಯಾಪಿ ಬರ್ತಡೇ ಸರ್! ಆರೋಗ್ಯ ಹುಷಾರು... ಇದೇ ಸಲುಗೆಯಲ್ಲಿ ಮತ್ತೊಂದು ಪ್ರೀತಿಪೂರ್ವಕ ಆಗ್ರಹ. ತಮ್ಮ ಲೇಖನಿಯಿಂದ ಈ ವರ್ಷ ಮತ್ತಷ್ಟು ಕಥೆಗಳು ಮೂಡಿಬರಲಿ.

ಇನ್ನು ವೈಯಕ್ತಿಕವಾಗಿ ಹೇಳುವುದಾದರೆ ನನ್ನ ಅತಿಮೆಚ್ಚಿನ ಕನ್ನಡದ ಲೇಖಕರು ಮೂರ್ತಿಗಳು ಮತ್ತು ತೇಜಸ್ವಿಯವರು. ವೈಚಾರಿಕವಾಗಿ ನನ್ನನ್ನು ಬಹುಮಟ್ಟಿಗೆ ಇಂಪ್ರೆಸ್ ಮಾಡಿದ, ನನ್ನ ಆಲೋಚನಾ ಕ್ರಮವನ್ನು ರೂಪಿಸಿ ಬೆಳೆಸಿದಿವರು ಬಹುಮಟ್ಟಿಗೆ ಮೂರ್ತಿಗಳೇ. ನನ್ನ ಮಟ್ಟಿಗೆ ಅವರು ಪ್ರಾತಃಸ್ಮರಣೀಯರು.

Proudly powered by Blogger
Theme: Esquire by Matthew Buchanan.
Converted by LiteThemes.com.